ಮೇಲ್ನೋಟಕ್ಕೆ ಇದು ಮಕ್ಕಳ ಚಿತ್ರದಂತೆ ಕಾಣುತ್ತದೆ. ನಿಜವಾಗಿ ಮಕ್ಕಳ ಸಾಹಸವಿದೆ. ಹೆಸರು ಅವಲಕ್ಕಿ ಪವಲಕ್ಕಿ. ಒಂದು ಕಾಲದಲ್ಲಿ ಅವಲಕ್ಕಿ ಪವಲಕ್ಕಿ ಎಂಬ ಮಕ್ಕಳ ಈ ಆಟ ಎಷ್ಟು ರೋಚಕವೋ ಸಿನಿಮಾದ ವಿಷಯವೂ ಅಷ್ಟೇ ರೋಚಕವಾಗಿದೆ ಎಂಬ ಮಾಹಿತಿ ಕೊಟ್ಟರು ನಿರ್ಮಾಪಕಿ ರಂಜಿತಾ ಸುಬ್ರಹ್ಮಣ್ಯ. ನಾನು ಕನ್ನಡದ ಹೆಮ್ಮೆಯ ಬರಹಗಾರ ತ.ರಾ.ಸು. ಕುಟುಂಬದಿಂದ ಬಂದವಳು. ಒಂದು ಅದ್ಭುತ ಕಥೆಯನ್ನು ಇಟ್ಟುಕೊಂಡು ನಾವೆಲ್ಲಾ ಕೆಲಸ ಮಾಡಿದ್ದೇವೆ.
ನಮ್ಮ ಟೀಮ್ ನಲ್ಲಿ ಇರುವ ಎಲ್ಲರಿಗೂ ಕಿರು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದು ಹೇಳುತ್ತಾ ಹೋದರು. ಇದು ಹೆಚ್ಚು ಕಾಡಿನಲ್ಲಿ ಚಿತ್ರೀಕರಣ ನಡೆದ ಚಿತ್ರ. ಅಲ್ಲಿನ ಅನುಭವಗಳು ರೋಚಕ ಮತ್ತು ಭಯಾನಕವೂ ಆಗಿದೆ. ಒಂದು ಅಡ್ವೆಂಚರ್ ಚಿತ್ರ ತೆಗೆಯುವಾಗ ಇಷ್ಟು ಕಷ್ಟಗಳು ಎದುರಾಗುತ್ತವೆ ಎಂಬ ಅರಿವು ಇರಲಿಲ್ಲ. ನನ್ನ ಪತಿ ಶ್ರೀನಾಥ್ ಅವರ ಸಹಕಾರ ಸ್ವಲ್ಪ ಹೆಚ್ಚಾಗಿಯೇ ಇತ್ತು ಎಂದರು ರಂಜಿತಾ ಸುಬ್ರಹ್ಮಣ್ಯ.
ಹೈದ್ರಾಬಾದ್ ಮೂಲದ ದುರ್ಗಾ ಪ್ರಸಾದ್ ಚಿತ್ರದ ನಿರ್ದೇಶಕ. ಆರು ವಿಭಿನ್ನ ನೆಲೆಯಲ್ಲಿ ಕಥೆ ಸಾಗುತ್ತದೆ. ಫ್ಯಾಂಟಸಿ ವಿಷಯವೂ ಚಿತ್ರದಲ್ಲಿದೆ. ನಾನು ಚಿತ್ರ ನಿರ್ದೇಶನ ಮಾಡುತ್ತಲೇ ಕನ್ನಡ ಭಾಷೆಯನ್ನೂ ಕಲಿತೆ ಎಂದರು. ಮೈಸೂರು ಮೂಲದ ಜುಪಿನ್ ಪೌಲ್ ಸಂಗೀತ ನಿರ್ದೇಶಕ. ಎಂದಿನಂತೆ ಇಲ್ಲಿ ಹೊಸ ಪ್ರಯೋಗಗಳಿಗೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡರು.
ಈ ಚಿತ್ರಕ್ಕೆ ಅರಣ್ಯದ 25 ಸ್ಥಳಗಳಲ್ಲಿ ಮತ್ತು ಬೆಂಗಳೂರಿನ ಒಂದು ಗುಹೆಯಲ್ಲಿ ಚಿತ್ರೀಕರಣ ನಡೆಸಿದ್ದು ವಿಶೇಷವಾಗಿದೆ ಎಂದು ವಿವರಿಸಿದವರು ಸಹ ನಿರ್ಮಾಪಕ ಸಂದೀಪ್ ಅಯ್ಯರ್. ಮೈಸೂರಿನ ಸ್ಲಂಗಳಲ್ಲಿ ಸಹ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವನ್ನೂ ಕೊಟ್ಟರು.
ರಂಗಭೂಮಿ ಕಲಾವಿದ ರಾಘವೇಂದ್ರ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿರಾ ನಾಯರ್ ಮೂಲತಃ ರಂಗಭೂಮಿ ಕಲಾವಿದೆ. ನನಗೆ ಅಜ್ಜಿ ಪಾತ್ರ ಬಹಳ ಖುಷಿ ಕೊಡ್ತು ಎಂದು ಹೇಳಿಕೊಂಡರು.
ರಂಗಭೂಮಿ ಕಲಾವಿದ ನಾಗರಾಜ್, ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಸಿಂಚನಾ, ಮೇಕಪ್ ಕಲಾವಿದ ಉದಯ್ ಮಾತನಾಡಿದರು. ಉತ್ಸಾಹಿ ಯುವಕ ನಿರೀಕ್ಷಿತ್ ಕ್ಯಾಮೆರಾ ಕಲಿಯುವ ಸಲುವಾಗಿ ಛಾಯಾಗ್ರಾಹಕನಾದೆ ಎಂಬ ವಿವರ ಬಂತು ಅವರಿಂದ.