ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬೇರೆಯದೇ ಆದ ಇಮೇಜ್ ತಂದುಕೊಟ್ಟು ಯಶಸ್ವಿಯಾದ ಚಿತ್ರ ದೃಶ್ಯ. ಕುಟುಂಬದ ರಕ್ಷಣೆಗೆ ಹೋರಾಡುವ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಬುದ್ಧಿಮತ್ತೆ ಪ್ರದರ್ಶನದ ಆ ಚಿತ್ರವಾಗಿತ್ತು. ಸುಮಾರು ಆರು ವರ್ಷಗಳ ಕೆಳಗೆ ಬಿಡುಗಡೆಗೊಂಡಿದ್ದ ಆ ಚಿತ್ರದ ಮುಂದುವರೆದ ಭಾಗದಂತೆಯೇ ಮೂಡಿ ಬರುತ್ತಿರುವ ಚಿತ್ರ ‘ದೃಶ್ಯ-2’.
ಅಚ್ಚರಿಯ ವಿಷಯವೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಅಲ್ಲಿದ್ದ ತಂಡವೇ ಇಲ್ಲಿ ಮುಂದುವರೆದಿದೆ. ನಿರ್ದೇಶಕ ಪಿ.ವಾಸು, ನಟಿ ನವ್ಯ ನಾಯರ್, ಮಗಳ ಪಾತ್ರ ಮಾಡಿದ್ದ ಆರೋಹಿ, ಉನ್ನತಿ ಹೀಗೆ ಅಲ್ಲಿನ ಕುಟುಂಬ ಕುಟುಂಬವಾಗಿಯೇ ಮುಂದುವರೆದಿದೆ.
ಮುಖ್ಯ ಪಾತ್ರಧಾರಿ ವಿ.ರವಿಚಂದ್ರನ್ ಎಂದಿನಂತೆ ಅತ್ಯಂತ ಲವಲವಿಕೆಯಲ್ಲಿ ಮಾತನಾಡುತ್ತಿದ್ದರು. ಇದು ನನ್ನ ಎರಡನೇ ಕುಟುಂಬ; ಅದೇ ಜರ್ನಿ ಮುಂದುವರೆಯುವಿಕೆಯ ಭಾಗವಾಗಿ
ಶೂಟಿಂಗ್ ಮುಗಿದಿದ್ದೇ ತಿಳಿಯಲಿಲ್ಲ ಇವರೆಲ್ಲರ ಒಡನಾಟ ನನಗೆ ಕುಟುಂಬದ ಭಾವನೆಗಳನ್ನೇ ಕೊಟ್ಟಿತು ಎಂದು ಹೇಳುತ್ತಾ ಹೋದರು. ಜೊತೆಗೆ ನವ್ಯ ನಾಯರ್ ಅವರ ಬಗ್ಗೆ ಚಟಾಕಿಗಳನ್ನು ಹಾರಿಸಿ ನಕ್ಕರು.
ನಿರ್ದೇಶಕ ಪಿ.ವಾಸು ಚಿತ್ರೀಕರಣ ಮುಗಿದಿದ್ದೇ ತಿಳಿಯಲಿಲ್ಲ ಎಂದರು. ಈ ಚಿತ್ರ ಹೇಗೆ ಆರಂಭವಾಯಿತು ಮತ್ತು ಹೇಗೆ ಮುಗಿಯಿತು ಎಂಬುದು ಗೊತ್ತೇ ಆಗಲಿಲ್ಲ. ಮಡಿಕೇರಿ ಮತ್ತು ಬೆಂಗಳೂರು ಎರಡು ಕಡೆ ಶೂಟಿಂಗ್ ನಡೆಯಿತು. ಕನ್ನಡ ಪ್ರೇಕ್ಷಕರಿಗೆ ಏನು ಬೇಕೋ ಅದು ಚಿತ್ರದಲ್ಲಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹಾಡು ಸೇರ್ಪಡೆಗೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಉತ್ತಮವಾಗಿದೆ; ಹೆಚ್ಚು ಭಾವನಾತ್ಮಕ ವಾಗಿ ಶೂಟಿಂಗ್ ಕ್ಷಣಗಳನ್ನು ಅನುಭವಿಸಿದ್ದಾಗಿ ಹೇಳಿಕೊಂಡರು ನಿರ್ದೇಶಕ ಪಿ.ವಾಸು.
ನಮಗೆ ಓಟಿಟಿ ಎಲ್ಲಾ ಬೇಡ.. ಚಿತ್ರಮಂದಿರದಲ್ಲಿ ಕುಟುಂಬ ಒಟ್ಟಿಗೆ ಕುಳಿತು ನೋಡುವ ಕಾಲ ಬಂದಾಗ ಚಿತ್ರ ಬಿಡುಗಡೆ ಕಾಣುತ್ತದೆ ಎಂದರು ಕ್ರೇಜಿಸ್ಟಾರ್. ಇದು ಕುಟುಂಬದ ರಕ್ಷಣೆಗೆ ಸಂಬಂಧಿಸಿದ ಸಿನಿಮಾ ಆದ್ದರಿಂದ ಕುಟುಂಬ ಸಮೇತವಾಗಿ ನೋಡಬೇಕು ಎಂದರು.
ಒಳಗೆ ಪ್ರೀತಿ ತುಂಬಿದ ಕುಟುಂಬ ಮತ್ತು ಕನ್ನಡಿಗರ ಪ್ರೀತಿ ಎರಡೂ ಸಿಗುತ್ತಿದೆ ಎಂದರು ನವ್ಯ ನಾಯರ್. ನಾನು ಪಾತ್ರ ಮಾಡುವಾಗ ಮಗಳಂತೆಯೇ ನನ್ನನ್ನು ನೋಡಿಕೊಂಡಿದ್ದು ಮಾತ್ರ ಮರೆಯಲಾಗದ ಸಂಗತಿ ಎಂದಿದ್ದು ಆರೋಹಿ, ಕಲಾ ನಿರ್ದೇಶಕ ರವಿ ಸಂತೆಹಕ್ಲು ಮಾತನಾಡುವಾಗ ಭಾವುಕರಾಗಿದ್ದರು. ಕೊರೊನಾ ಕಾರಣದಿಂದ ಎದುರಾದ ತೊಂದರೆಗಳ ಬಗ್ಗೆ ವಿವರ ನೀಡಿದರು. ಯತಿರಾಜ್ ಚಿತ್ರಕ್ಕೆ ಹೊಸ ಸೇರ್ಪಡೆ. ಈ ತಂಡದ ಜೊತೆಗೆ ಸೇರಿದ್ದೇ ನನ್ನ ಪುಣ್ಯ ಮತ್ತು ಅದು ಥ್ರಿಲ್ಲಿಂಗ್ ವಿಷಯ ಎಂದರು.
ರವಿ ಅಂಕಲ್ ನನಗೆ ಪ್ರತಿಯೊಂದನ್ನು ಹೇಳಿಕೊಟ್ಟರು ಎಂಬುದು ಬೇಬಿ ಉನ್ನತಿ ಮಾತು.