ಅದು ಒಂದು ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮ..! ಅದು ಅತ್ಯಂತ ಅದ್ದೂರಿಯಿಂದ ಕೂಡಿತ್ತು ಎಂಬುದು ವಿಶೇಷ. ಚಿತ್ರದ ಹೆಸರು ‘ಉಸಿರೇ ಉಸಿರೇ’. ಅದು ಸುದೀಪ್ ಅವರ ಹಾಡು ಎಂಬುದು ಅದರ ಟ್ರೇಡ್ ಮಾರ್ಕ್. ಬೆಂಗಳೂರಿನ ಯಶವಂತಪುರದಲ್ಲಿರುವ ವೈಭವದ ತಾರಾ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿದ್ದು ಕಿಚ್ಚ ಸುದೀಪ್ ಅವರೇ.
ಒಂದು ರೀತಿಯಲ್ಲಿ ಅವರ ಬರುವಿಕೆ ಹಿನ್ನೆಲೆಯಲ್ಲಿ ಇಂತಹ ಸಿದ್ದತೆ ಮಾಡಿಕೊಂಡಿರಬಹುದು ಎಂಬ ಅನಿಸಿಕೆಯೂ ಅಲ್ಲಿತ್ತು. ನಿರ್ಮಾಪಕ ಪ್ರದೀಪ್ ಯಾದವ್ ಸೇರಿದಂತೆ ಚಿತ್ರತಂಡದ ಸಾಕಷ್ಟು ಜನರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶೇಷವಾಗಿ ಚಿತ್ರದ ನಿರ್ದೇಶಕ ವಿಜಯ್ ಒಂದು ರೀತಿಯಲ್ಲಿ ಭಾವುಕತೆಯಿಂದಲೇ ಮಾತನಾಡಿದರು. ‘ಇದು ಅಕ್ಷರಗಳಿಗೆ ಅನ್ನದ ರೂಪ ಪಡೆದ ವೇದಿಕೆ’ ಎಂಬುದಾಗಿ ಅವರು ಹೇಳಿದ ಮಾತು ಕಿಚ್ಚ ಸುದೀಪ್ ಅವರನ್ನು ಸೆಳೆದಿತ್ತು. ಆ ಹಿನ್ನೆಲೆಯಲ್ಲಿ ತಮಗೆ ನೀಡಲಾದ ಬೆಳ್ಳಿ ಪೆನ್ ಅನ್ನು ನಿರ್ದೇಶಕರಿಗೆ ಉಡುಗೊರೆಯಾಗಿ ಕೊಟ್ಟರು ಸುದೀಪ್.
ಇದೊಂದು ಪರಿಶುದ್ಧ ಪ್ರೇಮಕಥೆ; ಮುಖ್ಯ ಪಾತ್ರಕ್ಕೆ ರಾಜೀವ್ ಥರದವರು ಸಿಕ್ಕಿದ್ದು ದೊಡ್ಡ ವಿಷಯವಾಗಿದೆ ಎಂದು ಸಹ ಹೇಳಿಕೊಂಡರು ನಿರ್ದೇಶಕರು. ಚಿತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ಆಲಿ ಕೂಡ ಪಾತ್ರ ಮಾಡಿದ್ದಾರೆ. ಅವರನ್ನು ವೇದಿಕೆಗೆ ಕರೆದು ನೀವು ಕನ್ನಡಕ್ಕೆ ಬಂದಿರುವುದು ಸಂತಸ ಎಂದಾಗ, ನಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದು ಬಹಳ ವರ್ಷವಾಯಿತು; 1983ರಲ್ಲಿ ತೆರೆಕಂಡ ರೆಬೆಲ್ ಸ್ಟಾರ್ ಅಂಬರೀಶ್ ಅವರ ‘ಏಕಲವ್ಯ’ ನನ್ನ ಮೊದಲ ಚಿತ್ರವಾಗಿತ್ತು ಎಂಬ ವಿವರ ಕೊಟ್ಟರು ನಟ ಆಲಿ.
ಮುಖ್ಯ ಪಾತ್ರದಲ್ಲಿರುವ ನಟ ರಾಜೀವ್ ನನ್ನ ರೀತಿಯದೇ ಒಂದು ಪಾತ್ರವಿದು. ಬಹಳ ನಿರೀಕ್ಷೆಯಲ್ಲಿ ಸಿಕ್ಕಿದ ತಕ್ಕದಾದ ಪಾತ್ರ ಎಂದು ಹೇಳಿಕೊಂಡರು. ಈ ರೀತಿಯ ಒಂದು ದೊಡ್ಡ ವೇದಿಕೆ ಸಿಗಲು ನನಗೆ 10 ವರ್ಷ ಬೇಕಾಯಿತು ಎಂಬ ಕೊರಗನ್ನೂ ಹೊರ ಹಾಕಿದರು ರಾಜೀವ್.
ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದವರು ತಬಲನಾಣಿ. ಈ ಚಿತ್ರತಂಡ ಬಹಳವೇ ವಿಶೇಷ ಎಂದರು. ವಿತರಕ ನವರಸನ್ ಕೂಡ ತಂಡವನ್ನು ಹೊಗಳಿದರು. ನಟಿ ಶ್ರೀಜಿತ, ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ ಪ್ರೋತ್ಸಾಹವಿರಲಿ ಎಂದರು. ಮಂಜು ಪಾವಗಡ ಮುಖ್ಯ ಅತಿಥಿಯಾಗಿ ಬಂದು ಮಾತನಾಡಿದರು. ಚಿತ್ರತಂಡದ ಸಂಬಂಧಿಗಳು ಅನೇಕ ಹಿರಿಯರು ಪಾಲ್ಗೊಂಡಿದ್ದು ವಿಶೇಷ. ನಿರ್ದೇಶಕ ವಿಜಯ್ ತಮ್ಮ ತಂಡದಲ್ಲಿ ಲಕ್ಷ್ಮಿ ನಾರಾಯಣ ಹಾಗೂ ಇತರ ಬರಹಗಾರರನ್ನು ಒಳಗೊಂಡಿರುವುದು ಚಿತ್ರದ ಹೆಗ್ಗಳಿಕೆ ಯಾಗಿದೆ.