ಹೀಗೊಂದು ಚರ್ಚೆಗೆ ಕಾರಣವಾಗಿದ್ದು ಮಂಗಳವಾರ ಮುಂಜಾನೆ ಚಿತ್ರದ ಮುಹೂರ್ತದ ಸಂದರ್ಭದಲ್ಲಿ. ಆ ಚಿತ್ರದ ಹೆಸರು ‘ನೀ ಸಿಗೋವರೆಗೂ’ ಹೆಸರು ಕೇಳಿದ ತಕ್ಷಣ ಇದೊಂದು ಪ್ರೇಮಕಥೆ ಎಂದು ಯಾರಿಗಾದರೂ ಅನಿಸುತ್ತದೆ.
ಅಂದ ಹಾಗೆ ಈ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರದು.. ಇನ್ನೂ ಅಚ್ಚರಿಯ ವಿಷಯವೆಂದರೆ ಇದು ಅವರ 124ನೇ ಚಿತ್ರ. ಪ್ರತಿಷ್ಠಿತ ಹೊಟೇಲ್ ನಲ್ಲಿ ಬೆಳಗಿನ ಜಾವ ನಡೆದ ಮುಹೂರ್ತಕ್ಕೆ ಬಂದಿದ್ದು ‘ದಿ ವಿಲನ್’ ಖ್ಯಾತಿಯ ಕಿಚ್ಚ ಸುದೀಪ್.
ನನಗೆ ಚಿರ ಯುವಕ ಶಿವಣ್ಣ ಅವರ ಚಿತ್ರವನ್ನು ನಿರ್ದೇಶಿಸುವ ಆಸೆ.. ಏಕೆಂದರೆ 124ನೇ ಚಿತ್ರಕ್ಕೆ ನಾವು ಅಪ್ಪನ ಪಾತ್ರಕ್ಕೆ ರೆಡಿಯಾಗಿರುತ್ತೇವೆಯೋ.. ಏನೋ.. ಆದರೆ ಶಿವಣ್ಣ ಈಗಲೂ ಪ್ರೇಮಿಯ ಪಾತ್ರ ಮಾಡುತ್ತಿದ್ದಾರೆ ಅಂದರೆ ಅವರ ಉತ್ಸಾಹ ಹೇಗಿರಬಹುದು.. ಆ ತಾಜಾತನ ಕಾಪಾಡಿಕೊಳ್ಳುವುದು ಎಲ್ಲರಿಗೂ ಸಾಧ್ಯವಾಗದು.. ಹಾಗಾಗಿ ನನ್ನೊಳಗೆ ಮೊಳೆದ ಆಸೆ ನಾನು ಅವರ ಚಿತ್ರ ನಿರ್ದೇಶನ ಮಾಡಬೇಕು.. ಸುದೀಪ್ ಹೇಳುತ್ತಲೇ ಹೋದರು. ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ ಬಳಿಕ ಅವರು ಮಾತನಾಡುತ್ತಾ ಹೋದರು.
ಇದೇ ಸಂದರ್ಭದಲ್ಲಿ ಗೀತಾ ಶಿವರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಮ್ ಧುಲಿಪುಡಿ ಈ ಚಿತ್ರದ ನಿರ್ದೇಶಕ. ಎಮೋಷನಲ್ ಲವ್ ಸ್ಟೋರಿ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿರುವುದೇ ವಿಶೇಷ. ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ, ವಾರಣಾಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಶಿವಣ್ಣ ಎದುರು ಮೆರ್ಹಿನ್ ಫಿರ್ಜಾದ ಎಂಬ ನವನಟಿ ಇದ್ದಾರೆ. ನಾಜರ್, ಸಂಪತ್ ಕುಮಾರ್, ಮಂಗ್ಲಿ ಹಾಗೂ ಇತರರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರವನ್ನು ನರಾಲ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ನಿರ್ಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕಾರಿ ನಿರ್ಮಾಪಕ ಕುಡಿಪುಡಿ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ , ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಕಲಾ ನಿರ್ದೇಶಕ ರವಿ ಸಂತೆಹಕ್ಲು ಚಿತ್ರದ ಕುರಿತು ಮಾತನಾಡಿದರು.
ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.