ಚಿತ್ರದ ಹೆಸರು ಲಗಾಮ್.. ಹಾಗಾಗಿ ಯಾರಿಗೆ ಲಗಾಮ್ ಹಾಕಬಹುದು ಎಂಬುದು ಪ್ರಶ್ನೆ. ಬಹಳ ಸಮಯದ ಬಳಿಕ ಉಪೇಂದ್ರ ಮತ್ತು ನಿರ್ದೇಶಕ ಮಾದೇಶ್ ಜೊತೆಯಾಗಿದ್ದಾರೆ. ಇಬ್ಬರೂ ಕೂಡ ಏನೋ ಕಮಾಲ್ ಮಾಡಲು ಹೊರಟಿದ್ದಾರೆ ಎಂಬುದು ನಿರೀಕ್ಷೆ.
ಈ ಹಿನ್ನೆಲೆಯಲ್ಲಿ ಹೆಬ್ಬಾಳ ಸಮೀಪದ ಶೂಟಿಂಗ್ ಮನೆಯಲ್ಲಿಯೇ ನಡೆಯುತ್ತಿದ್ದ ಸಾಹಸ ದೃಶ್ಯ ಚಿತ್ರೀಕರಣ ಸ್ಥಳಕ್ಕೆ ಸಿನಿಮಾ ಪತ್ರಕರ್ತರ ತಂಡ ಹೋದಾಗ ತುಂತುರು ಮಳೆಯಲ್ಲಿಯೂ ಉಪ್ಪಿ ಫೈಟ್ ಧ್ಯಾನದಲ್ಲಿದ್ದರು. ಸಾಹಸ ನಿರ್ದೇಶಕ ರವಿವರ್ಮ ಎಲ್ಲವನ್ನು ನಿಭಾಯಿಸುತ್ತಿದ್ದರು.
ಮಧ್ಯಾಹ್ನದ ಊಟದ ಬಳಿಕ ಚಿತ್ರತಂಡ ಮಾತಿಗೆ ಸಿಕ್ಕಿತು. ಮುಖ್ಯ ಪಾತ್ರಧಾರಿ ಉಪೇಂದ್ರ, ನಟಿ ಹರಿಪ್ರಿಯ, ರವಿವರ್ಮ ಹಾಗೂ ಇನ್ನಿತರರು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಇದು ಒಂದು ರೀತಿಯಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಬಿಂಬಿಸುವ ಚಿತ್ರ. ವ್ಯವಸ್ಥೆ ಲೋಪಗಳನ್ನು ಹೇಳುತ್ತಾ ಅದನ್ನು ಸರಿಪಡಿದುವ ಕಾರ್ಯ ನಡೆಯುತ್ತದೆ ಎಂದರು ಉಪೇಂದ್ರ. ಇದು ಲಗಾಮ್ ಹಾಗಾಗಿ ಲಗಾನ್ ಎಂದು ಧ್ವನಿಸಿದರೆ ಅದು ಅಚ್ಚರಿಯೂ ಅಲ್ಲ. ಕಥೆ ಹೇಳುವುದು ಸಾಧ್ಯವಿಲ್ಲದಿದ್ದರೂ ಚಿತ್ರದ ಆಶಯಗಳು ಉತ್ತಮವಾಗಿವೆ ಎಂದು ಹೇಳುತ್ತಾ ಹೋದರು ಉಪ್ಪಿ. ಅದಕ್ಕೆ ನಿರ್ದೇಶಕ ಮಾದೇಶ್ ಧ್ವನಿಗೂಡಿಸಿದರು. ಈ ವೇಳೆ ಆ ಇಬ್ಬರಿಂದ ಕಥೆಯನ್ನು ಹೇಳಿಸಬೇಕು ಎಂಬ ಪತ್ರಕರ್ತರ ಪ್ರಯತ್ನ ಕೈಗೂಡಲಿಲ್ಲ.
ಹರಿಪ್ರಿಯ ಅವರಿಗೆ ಪತ್ರಕರ್ತೆಯ ಪಾತ್ರ. ಅವರು ತನಿಖೆ ಮಾಡುವ ಆಶಯಗಳನ್ನು ಹೊಂದಿರುತ್ತಾರೆ. ತನಿಖಾ ಪತ್ರಿಕೋದ್ಯಮ ಹೇಗಿರುತ್ತೆ ಅಂತಾ ನಾನು ಕಲಿತಾ ಇದ್ದೀನಿ ಎಂದರು ಹರಿಪ್ರಿಯ.
ಛಾಯಾಗ್ರಾಹಕ ರಾಜೇಶ್ ಕಟ್ಟ ಚಿತ್ರದ ತಾಂತ್ರಿಕ ಕೌಶಲ್ಯಗಳ ಬಗ್ಗೆ ಮಾತನಾಡಿದರು. ಕಾರ್ಯನಿರ್ವಾಹಕ ನಿರ್ಮಾಪಕ ಕೇಶವ್ ಮಾತ್ರ ಈ ಸಂದರ್ಭದಲ್ಲಿ ಹಾಜರಿದ್ದರು. ಅಂದ ಹಾಗೆ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸುರೇಶ್ ಗೋಸಾಮಿ ಕಥೆ ಬರೆದಿದ್ದು, ಈ ಚಿತ್ರವು ಹಲವು ಭಾಷೆಗಳಿಗೆ ಹೋಗುತ್ತದೆ ಎಂಬ ವಿಶ್ವಾಸ ತಂಡದ್ದು..