‘ಹೇಳ್ತೀನಿ ಇರು ಗುರು ‘ ದೇವೇಗೌಡರು ಇನ್ನೂ ಉತ್ತರ ಹೇಳಿಲ್ಲ ಮೂವತ್ತು ವರ್ಷಗಳ ಹಿಂದೆ ಕೇಳಿದ ಪ್ರಶ್ನೆಯೇ ಮರೆತು ಹೋಗಿದೆ. ಗೌಡರು ಕೆಲವು ಪ್ರಶ್ನೆಗಳು ಎದ್ದಾಗ, ಉತ್ತರಿಸಲೇಬೇಕಾದ ಸಂದರ್ಭಗಳು ಸೃಷ್ಟಿಯಾದಾಗ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಕುಮಾರಸ್ವಾಮಿಯವರು ಸುಖಾ ಸುಮ್ಮನೆ ಮೈಮೇಲೆ ಎಳೆದುಕೊಳ್ತಾರೆ ಅದೇ ವೆತ್ಯಾಸ!
ಬೆಳ್ಳಂಬೆಳಗ್ಗೆ ವೈ ಎಸ್ ವಿ ದತ್ತ ಅವರೊಂದಿಗೆ ಫೋನ್ ನಲ್ಲಿ ಚರ್ಚಿಸುವಾಗ ಈ ವಿಚಾರಗಳು ಹಾದು ಹೋದವು. ಜೆಡಿಎಸ್ ನಲ್ಲಿ ಒಬ್ಬರು ಅಧ್ಯಕ್ಷರಿದ್ದಾರೆ ಎನ್ನುವುದನ್ನೆ ಮರೆತುಬಿಡುತ್ತಾರೆ. ವಾಚಾಳಿ ವಿಶ್ವನಾಥ್ ಅಧ್ಯಕ್ಷರಾಗಿದ್ದಾಗಲೂ ಈ ಸಮಸ್ಯೆ ಇತ್ತು.
ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರ ಕಾರ್ಯಕ್ರಮದ ವಿವರಗಳು ತಿಳಿಯುತ್ತಿರಲಿಲ್ಲ. ಪಕ್ಷದ ಅಧ್ಯಕ್ಷರು ಯಾವುದಕ್ಕೆ ರಿಯಾಕ್ಷನ್ ಕೊಡಬೇಕು ಎಂಬ ಗೊಂದಲಕ್ಕೊಳಗಾಗುತ್ತಿದ್ದರು. ಆಗಲೂ
ಎಲ್ಲದಕ್ಕೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಉತ್ತರಿಸುತ್ತಿದ್ದರು. ಅಡಗೂರು ಗೊಣಗಿಕೊಂಡು ಸುಮ್ಮನಾಗುತ್ತಿದ್ದರು.
‘ನೀವು ಕಾಂಗ್ರೆಸ್ ನಲ್ಲಿದ್ದಾಗ ಬೆಂಗಳೂರಿನಲ್ಲಿ ಡಿಕೆಶಿಯನ್ನು ರೇಗಿಸಿ ಮೈಸೂರಿಗೆ ಬಂದು ಸಿದ್ದರಾಮಣ್ಣಂಗೆ ಬೈದಂಗಲ್ಲ ಜೆಡಿಎಸ್ ನಲ್ಲಿ’ ಅಂತ ಹಳ್ಳಿ ಹಕ್ಕಿಗೆ ರೇಗಿಸುತ್ತಿದ್ದೆ. ಈಗಿರುವ ಜೆಡಿಎಸ್ ಅಧ್ಯಕ್ಷರು ಸಕಲೇಶಪುರದ ಶಾಸಕರಾದ ಕುಮಾರಸ್ವಾಮಿಯವರ
ನೇಮಕ ಕೇವಲ ನಾಮಕಾವಸ್ಥೆ … ರೇವಣ್ಣನವರು ಹಾಸನದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿದಿನ ಮಾತನಾಡುತ್ತಾರೆ. ಹೊಳೆನರಸಿಪುರದಲ್ಲಿ ಮೀಟಿಂಗ್ ಮುಗಿಸಿ, ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ
ರಾಜ್ಯ ಮಟ್ಟದ ಗೊಂದಲಗಳಿಗೆ ‘ಅದೆಲ್ಲ ದೊಡ್ಡವರು ನೋಡ್ಕೋತಾರೆ ಬಿಡಿ’ ಅಂತಾರೆ. ಮುಖ್ಯವಾಗಿ ಪತ್ರಿಕೆಗಳಲ್ಲಿ ಅಭಿವೃದ್ಧಿ ವಿಷಯಗಳು ಸುದ್ದಿಯಾಗುವಂತೆ ಮಾತಾಡುತ್ತಾರೆ.
ಇದೆಲ್ಲ ಕುಮಾರಸ್ವಾಮಿಯವರಿಗೆ ಗೊತ್ತಿಲ್ಲ ಅಂತ ಅಲ್ಲ. ಎರಡು ಸಲ ಮುಖ್ಯಮಂತ್ರಿಯಾದವರು ‘ನನ್ನ ಬಳಿ ರೆಕಾರ್ಡ್ ಇದೆ, ಸಿಡಿ ಇದೆ’ ಅಂತ ಹೇಳುವುದು ಎಷ್ಟು ಸರಿ ?
‘ ಹುಚ್ಚೇಗೌಡರ ಸೊಸೆ, ಅಂಬರೀಷ್ ಪತ್ನಿ, ಅಭಿಷೇಕನ ಅಮ್ಮ ಎನ್ನುವುದೇ ಮಂಡ್ಯ ಚುನಾವಣೆಯಲ್ಲಿ ನಿಮಗಿರುವ ಕ್ವಾಲಿಕೇಶನ್ ‘ ಅಂತ ಸುಮಲತಾ ಅವರಿಗೆ ಪ್ರೆಸ್ ಕ್ಲಬ್ ಸಂವಾದದಲ್ಲಿ ಪ್ರಶ್ನೆ ಮಾಡಿದ್ದೆ. ಅಂಬರೀಷ್ ನೋಡಲು ಬರುತ್ತಿದ್ದ ಮಂಡ್ಯದವರನ್ನು ಸುಮಲತಾ ನೇರವಾಗಿ ಫೇಸ್ ಮಾಡಿದವರಲ್ಲ. ಅದು ಬಿಟ್ಟರೆ ಜನರಿಗೂ ಪಲ್ನಾಡ್ ಗ್ಯಾಂಗ್ ಗೆ ಸೇರಿದ ಸುಮಕ್ಕನವರಿಗೂ ಯಾವುದೇ ಮುಖಾಮುಖಿ ಇರಲಿಲ್ಲ. ಮಂಡ್ಯ ಎಂಪಿ ಚುನಾವಣೆಗೆ ಪಕ್ಷೇತರವಾಗಿ ನಿಲ್ಲಲು ತೀರ್ಮಾನ ಕೈಗೊಂಡಾಗ ಸಿದ್ದರಾಮಯ್ಯ,ಯಡಿಯೂರಪ್ಪನವರನ್ನು ಭೇಟಿ ಮಾಡಿದರೇ ಹೊರತು ಸುಮಲತಾ ಗೌಡರನ್ನು ಕಾಣಲೇ ಇಲ್ಲ. ಒಂದು ವೇಳೆ ನಿಖಿಲ್ ಅಲ್ಲದೇ ದೇವೇಗೌಡರೇ ಮಂಡ್ಯ ಚುನಾವಣೆಯ ಅಭ್ಯರ್ಥಿಯಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು!
– ವೈ ಜಿ ಅಶೋಕ್ ಕುಮಾರ್.