Snehapriya.com

June 8, 2025

ಗೌಡರ ದತ್ತು ಪುತ್ರ ದತ್ತ – ದತ್ತ @ 65

Social Share :

ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರಿಗೂ ನನಗೂ ಸುಮಾರು ಹತ್ತು ವರ್ಷಗಳ ಅಂತರ ಆದರೆ ನಮ್ಮ ಸ್ನೇಹದ ಸಂಪರ್ಕ ನಿರಂತರ. ಇಂದಿರಾಗಾಂಧಿ ತಂದ ಎಮರ್ಜೆನ್ಸಿಯಲ್ಲಿ ಜನಿಸಿದ ಹಲವಾರು ವಿರೋಧ ಪಕ್ಷಗಳ ಹಾಗೂ ವಿಧ್ಯಾರ್ಥಿ ನಾಯಕರುಗಳಲ್ಲಿ ದತ್ತ ಕೂಡ ಒಬ್ಬರು. ಮಾಜಿ ಪ್ರಧಾನಿ ದೇವೇಗೌಡರಿಗೆ ಹಲವಾರು ಮಾನಸ ಪುತ್ರರು ,ಪಿಜಿಆರ್ ಸಿಂಧ್ಯಾ,ಸಿದ್ದರಾಮಯ್ಯ,ಬಿಎಲ್ ಶಂಕರ್, ಉಗ್ರಪ್ಪ ಮುಂತಾದವರು ಆದರೆ ಬದುಕಿನುದ್ದಕ್ಕೂ ಗರುಡುಗಂಬದಂತೆ ನಿಂತವರು ವೈ ಎಸ್ ವಿ ದತ್ತ.
ಕಡೂರಿನ ಯಗಟಿ ಗ್ರಾಮದಿಂದ ಬೆಂಗಳೂರು ನ್ಯಾಷನಲ್ ಕಾಲೇಜು ವಿದ್ಯಾರ್ಥಿಯಾಗಿ ,ಹೆಚ್ ಎನ್ ರ ಪ್ರಭಾವಕ್ಕೊಳಗಾದ ದತ್ತ ಸರಳತೆಯನ್ನು ಮೈ ಗೂಡಿಸಿಕೊಂಡು ಶಾಸಕರಾದರೂ ಆಟೋದಲ್ಲೇ ಪ್ರಯಾಣಿಸುತ್ತಿದ್ದರು. ಜಯಪ್ರಕಾಶನಾರಾಯಣರ ಸಂಗ್ರಾಮದಲ್ಲಿ ಇಂದಿರಾಗಾಂಧಿ ಎಮೆರ್ಜೆನ್ಸಿ ವಿರುದ್ಧದ ಚಳವಳಿ ಒಂದು ಪ್ರಮುಖ ಘಟ್ಟ.

ರಾಜ್ಯದಲ್ಲಿ ಜನತಾ ಪರಿವಾರದ ಪ್ರಮುಖ ನಾಯಕರಾದರೂ ಅವರು ಬದುಕು ಎಣೆದುಕೊಂಡದ್ದು ದೇವೇಗೌಡರ ರಾಜಕೀಯ ಬದುಕಿನ ಜತೆಗೇ,
ಅತ್ತ ಕಡೆ ಶ್ರೀಮಂತರೇ ತುಂಬಿಕೊಂಡಿದ್ದ ರಾಮಕೃಷ್ಣಹೆಗಡೆಯ ನೀಲಿ ಕಣ್ಣಿನ ಹುಡುಗ ಜೀವರಾಜ ಆಳ್ವ ತಂತ್ರಗಾರಿಕೆ ಕಿಂಗ್ ಆಗಿದ್ದರೆ ಇತ್ತ ಕಡೆ ಬಡಕಲು ಗೌಡರ ಮಡಿಲಲ್ಲಿ ಹಣವಿಲ್ಲದ ಅಕ್ಷರ ಕ್ರಾಂತಿಯ ದತ್ತ ಇದ್ದರು. ಮೇಸ್ಟ್ರು ಅನಿಸಿಕೊಂಡರೂ ಶಿಕ್ಷಕ ವೃತ್ತಿ ಮಾಡಿ ಸರ್ಕಾರದ ಸಂಬಳ ತಿಂದವರಲ್ಲ; ಶಾಸಕರಾದರೂ ಭೋಜನ ಕೂಟದಲ್ಲಿ ಮಿಂದವರಲ್ಲ. ಸರಳತೆ, ಸಜ್ಜನಿಕೆ,ಬದ್ಧತೆ,ಪಾರದರ್ಶಕತೆ ಇವು ದತ್ತ ಅವರ ಅಖಂಡ ಕರ್ನಾಟಕದ ಕನಸು, ಅವರೊಬ್ಬ “ಹಣ ಎಣಿಸಲು ಬಾರದ ಲೆಕ್ಕದ ಮೇಸ್ಟ್ರು”.
ಸಾಹಿತ್ಯ, ಸಾಹಿತಿ,ರೈತರು, ಚಳವಳಿ ಮತ್ತು ಜನಸಾಮಾನ್ಯರನ್ನು ರಾಜಕಾರಣದ ಭಾಗವಾಗಿಸಿದ ಕಾರಣವೇ ದೇವೇಗೌಡರ ಗೆಲುವು, ಮುಖ್ಯಮಂತ್ರಿ ಮತ್ತೆ ಪ್ರಧಾನಿ.

ಗೌಡರು ಚೆನ್ನಮ್ಮಾಜಿ ಇಲ್ಲದೆ ಇದ್ದು ಬಿಡಬಲ್ಲರು . ಆದರೆ ನಿದ್ದೆಯಲ್ಲೂ ಕನವರಿಸುವುದು ಅವರ ಮಾನಸ ಪುತ್ರ ದತ್ತನನ್ನು ಮಾತ್ರ ! ಗ್ರಾಮ ಪಂಚಾಯಿತಿಯಿಂದ ಪ್ರಧಾನಿಯವರೆಗೆ ಪತ್ರ ಬರೆಯುವುದರಲ್ಲಿ ಗಿನ್ನಿಸ್ ದಾಖಲೆ ಇರುವುದು ದೇವೇಗೌಡರ ಹೆಸರಿನಲ್ಲಿ!
ಅದರ ಪೆನ್ನು ಮತ್ತು ಶಾಯಿ ವೈ ಎಸ್ ವಿ.

ವಿರೋಧ ಪಕ್ಷದಲ್ಲಿ ಕೆಲಸ ಮಾಡುವ ವೈಖರಿ , ಜನರಿಗೆ ಸ್ಪಂದಿಸುವ ರೀತಿ, ಸರ್ಕಾರದ ಜನವಿರೋಧಿ ನೀತಿಗಳನ್ನು ಬಗ್ಗು ಬಡಿಯುವ ಹೋರಾಟದ ಹಾದಿ, ರಾಜಕೀಯ ಸ್ಥಿತ್ಯಂತರದ ಬಿರುಗಾಳಿ ಬೀಸಿದಾಗಿನ ಸಹನೆಗಳನ್ನು ದತ್ತ ಮೇಸ್ಟ್ರು ಕಲಿತಿದ್ದು ಗೌಡರ ಶಾಲೆಯಲ್ಲಿ. ಗೌಡರು ಹಾಗೂ ಅವರ ಪಕ್ಕದಲ್ಲಿ ದತ್ತ ಸೂತ್ರದಾರ ಇದ್ದಂತೆ. ಬ್ಯಾನರ್ ಕಟ್ಟುವುದರಿಂದ ಬಣ್ಣ ಬಳಿಯುವವರೆಗೆ , ವೇದಿಕೆ ರೂಪಿಸಿ ಲೆಕ್ಕವಿಲ್ಲದಷ್ಟು ನಾಯಕರುಗಳನ್ನು ಸೃಷ್ಟಿಸಿದ ಗೌಡರ ರಾಜಕಾರಣ ಸವೆಸಿದ ಹಾದಿಯಲ್ಲಿ ದತ್ತ ಅವರಿಗೆ ಪ್ರಮುಖ ಪಾಲಿದೆ. ಹೆಗಡೆಯವರ ರೇವಜೀತು,ಬಾಟ್ಲಿಂಗ್ ಹಾಗೂ ಟೆಲಿಫೋನ್ ಟ್ಯಾಪಿಂಗ್ ಹಗರಣಗಳನ್ನು ಬಯಲಿಗೆಳೆಯಲು ಪತ್ರಿಕೆ ಗಳಿಗೆ ಆಹಾರ ಒದಗಿಸುತ್ತಿದ್ದವರು ದತ್ತ.

1995 ರಲ್ಲೇ ಮೇಲ್ಮನೆಗೆ ಬರಬೇಕಾಗಿದ್ದ ದತ್ತ 2004 ರವರೆಗೆ ಕಾಯಬೇಕಿತ್ತು. ಗೌಡರು ಮುಖ್ಯಮಂತ್ರಿ ಆದಾಗ ದತ್ತ ಅವರ ಸೇವೆಯ ಬಗ್ಗೆ ಪ್ರಸ್ತಾಪಿಸಿದಾಗ ‘ ದತ್ತ ನನ್ನ ದತ್ತು, ಅವನ್ನ ವಾರ್ತಾ ಮತ್ತು ಪ್ರಚಾರ ಮಂತ್ರಿ ಮಾಡಬೇಕು ಆದರೆ ಈ ರಾಜಕಾರಣದಲ್ಲಿ ಸಾಧ್ಯವಾಗುತ್ತಿಲ್ಲ’ ಅಂದಿದ್ದರು. ಸತತ ಗೆಲುವಿನ ಕಡೂರು ಕೃಷ್ಣಮೂರ್ತಿಯ ನಂತರ ಆ ಕ್ಷೇತ್ರ ದತ್ತರ ಪಾಲಿಗೆ ಬಂತು. ಅವರು mlc ಆಗಿದ್ದಾಗ ಕಡೂರಿನ ತುಂಬೆಲ್ಲಾ ಓಡಾಡಿ ‘ಜಾತಿ ಬೇಡ ಪ್ರೀತಿ ಬೇಕು’ ಎಂಬ ಸ್ಲೋಗನ್ ಮೊಳಗಿಸಿದ್ದು ಫಲ ನೀಡಿತು.
ಎರಡಂಕಿ ಮೀರದ ಬ್ರಾಹ್ಮಣ ಮತದಾರರಿರುವ ಕಡೂರಿನಲ್ಲಿ ಜಾತಿಯ ಬೆಂಬಲ ಇಲ್ಲದೆ ನಲ್ವತ್ತು ಸಾವಿರಕ್ಕೂಅಧಿಕ ಅಂತರದಿಂದ ಗೆದ್ದು ತೋರಿಸಿದ ಏಕೈಕ ಶಾಸಕ ದತ್ತ.

ದೇವೇಗೌಡರ ಸಂಕಷ್ಟ ಕಾಲದಲ್ಲಿ ಜತೆಗೇ ಹೆಜ್ಜೆ ಹಾಕಿದವರು ಅವರ ಇಷ್ಟಾನಿಷ್ಟಗಳನ್ನು ಪೂರೈಸಿದ ದತ್ತರ ಗೆಳೆಯರೆಲ್ಲ ಮಂತ್ರಿಯಾದರು. ದತ್ತ ಅವರು ಆಡಳಿತ ನಡೆಸುವುದನ್ನು ಕಾಣಬೇಕೆಂಬ ಹಂಬಲ ನನ್ನಂತಹವರಿಗಿದ್ದದು ಸಹಜ.

ಅರವತ್ತೈದರ ಹರೆಯದ ಸೂರ್ಯನಾರಾಯಣ ದತ್ತ ಸದಾ ಸೂರ್ಯನಂತೆ ಪ್ರಜ್ವಲಿಸಲಿ ಎಂದು ಅವರ ಸ್ನೇಹಿತ ಹಾಗೂ ಅಭಿಮಾನಿಯಾಗಿ ಹಾರೈಸುತ್ತೇನೆ.

-ವೈ ಜಿ ಅಶೋಕ್ ಕುಮಾರ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *