ಕೆ.ಸಿ.ಎನ್. ಮೂವಿಸ್ ಕನ್ನಡ ಚಿತ್ರರಂಗಕ್ಕೆ ಘನತೆ ತಂದುಕೊಟ್ಟ ಸಂಸ್ಥೆ. ಆ ಸಂಸ್ಥೆಯನ್ನು ಹುಟ್ಟು ಹಾಕಿದ ಕೆ.ಸಿ.ಎನ್.ಗೌಡ ಅವರ ಪುತ್ರ ಕೆ.ಸಿ.ಎನ್.ಚಂದ್ರಶೇಖರ್ (69)ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಬಬ್ರುವಾಹನ, ಹುಲಿಯ ಹಾಲಿನ ಮೇವು, ಶರಪಂಜರ, ಜಯಸಿಂಹ ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ ಸಂಸ್ಥೆಯ ಹಿರಿಯ ಮಗ ಕೆ.ಸಿ.ಎನ್.ಚಂದ್ರಶೇಖರ್ ವಿತರಕರಾಗಿಯೂ ಹೆಚ್ಚು ಚಿರಪರಿಚಿತ.
ಚಂದ್ರಶೇಖರ್ ಜನಾನುರಾಗಿಯಾಗಿದ್ದರು. ಚಿತ್ರರಂಗದಲ್ಲಿ ಅವರು ಅಜಾತಶತ್ರು. ಹಾಗಾಗಿಯೇ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಲವಾರು ಬಾರಿ ಅಧ್ಯಕ್ಷರಾಗಿದ್ದರು.
ಹಣಕಾಸು ವ್ಯವಹಾರದಲ್ಲಿ ಚಂದ್ರು ಎತ್ತಿದ ಕೈ ಹಾಗಾಗಿ ಇವರಿಂದಲೇ ಹಣ ಪಡೆದು ದೊಡ್ಡ ದೊಡ್ಡ ಚಿತ್ರಗಳು ನಿರ್ಮಾಣಗೊಂಡ ಇತಿಹಾಸ ಚಿತ್ರರಂಗದಲ್ಲಿ ಇದೆ. ಅದೇ ರೀತಿ ಹಣ ಹಿಂದಿರುಗದೇ ಕೋರ್ಟ್ ಮೆಟ್ಟಿಲು ಹತ್ತಿದ ಘಟನೆಗಳು ಬಹಳಷ್ಟಿವೆ. ಮುಖ್ಯವಾಗಿ ಚಂದ್ರಶೇಖರ್ ವಿತರಕರಾಗಿ ಹೆಸರು ಮಾಡಿದ್ದರು.
ನಿರ್ಮಾಪಕ, ವಿತರಕ, ಹಣಕಾಸು ಸಂಸ್ಥೆ ಮುಖ್ಯಸ್ಥ ಹೀಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕೆ.ಸಿ.ಎನ್.ಚಂದ್ರಶೇಖರ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಮುಖ್ಯಸ್ಥ ಸುಧೀಂದ್ರ ವೆಂಕ ಟೇಶ್ ಹಾಗೂ ಇನ್ನು ಅನೇಕರು ಸಂತಾಪ ಸೂಚಿಸಿದ್ದಾರೆ.