ಜೀವನದಲ್ಲಿ ಏನೇ ಅನುಭವ ಪಡೆಯುವುದಿದ್ದರೂ ಅದರಲ್ಲಿ ದಿಟ್ಟತನ ಇರಬೇಕೆಂದು ಪ್ರತಿಪಾದಿಸುತ್ತಿದ್ದ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರಿಗೂ ನನಗೂ ಸಿದ್ಧಾಂತಗಳಲ್ಲದಿದ್ದರೂ ಅನೇಕ ವಿಷಯಗಳಲ್ಲಿ ವೈರುಧ್ಯಗಳಿದ್ದವು. ಹಾಗಾಗಿ ನಾವಿಬ್ಬರು ಎದುರು ಬದುರು ಇದ್ದಾಗ ಜಗಳವಾಡಿಕೊಳ್ಳುತ್ತಿದ್ದೆವು. ಆದರೆ ಎಷ್ಟೋ ವೇಳೆ ಅವರೊಬ್ಬ ಸಂತನಂತೆ ನನಗೆ ಗೋಚರವಾಗಿದ್ದೂ ಉಂಟು..
ಇಂಥಹ ನೆನೆಪು ಏಕೆಂದರೆ ಕಳೆದ 15 ದಿನಗಳಿಂದ ಬೆಂಗಳೂರಿನ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಕೊವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದ ಲಿಂಗೇನಹಳ್ಳಿ ಸುರೇಶ್ಚಂದ್ರ ಇಹಲೋಕ ತ್ಯಜಿಸಿದ್ದಾರೆ.
ಪತ್ರಿಕೋದ್ಯಮದಲ್ಲಿ ನನಗಿಂತ ಬಹಳಷ್ಟು ಹಿರಿಯರಾಗಿದ್ದ ಸುರೇಶ್ಚಂದ್ರ ಅವರು ನಾನು ಸಂಜೆವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಅದೇಕೋ ನಮ್ಮಿಬ್ಬರ ನಡುವೆ ವಾದ ವಿವಾದಗಳು ಹೆಚ್ಚು ನಡೆಯುತ್ತಿದ್ದವು.
ಇದಕ್ಕೂ ಮುಂಚೆ ಈ ಸಂಜೆ ಪತ್ರಿಕೆಯಲ್ಲಿ ಅವರು ಕೆಲ ಸಮಯ ಕೆಲಸ ಮಾಡಿದಾಗ ನನ್ನಿಂದ ಸಾಹಸ ಎನ್ನುವಂತಹ ಕೆಲಸ ಮಾಡಿಸಿದ್ದರು. ಯಡವನಹಳ್ಳಿ ದೌರ್ಜನ್ಯದ ಘಟನೆ ವರದಿ ಮಾಡಿದ್ದೂ ಆಗಲೇ. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಸ್ವಕ್ಷೇತ್ರದಲ್ಲಿ ಅಮಾಯಕ ಜನರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿತ್ತು. ಆಗ ಅಲ್ಲಿ ಆ ಸ್ಥಳಕ್ಕೆ ತೆರಳಿ ವರದಿ ಮಾಡುವುದು ಅಷ್ಟು ಸುಲಭವಿರಲಿಲ್ಲ. ನಾನು ಮತ್ತು ನಮ್ಮ ಛಾಯಾಗ್ರಾಹಕರಾಗಿದ್ದ ಗಡೇಕಲ್ ನಾಗರಾಜ್ ಇಬ್ಬರೂ ಮಂಡ್ಯದವರೆಗೂ ಹೋಗಿ ಅಲ್ಲಿಂದ ಆಟೋ ಹಿಡಿದು ಆ ಊರಿಗೆ ಹೋಗಿ ಬಂದು ಚಿತ್ರಗಳ ಸಮೇತ ವರದಿ ಮಾಡಿದ್ದೆವು. ಆ ವರದಿ ಬಂದ ತಕ್ಷಣ ಘಟನೆಗೆ ಸಂಬಂಧಿಸಿದಂತೆ ನ್ಯಾಯ್ಯಾಂಗ ತನಿಖೆಗೆ ಸರ್ಕಾರ ಆದೇಶ ನೀಡಿತ್ತು. ನಾನು ಇಂತಹ ಸಾಹಸ ಮಾಡಲು ಕಾರಣಕರ್ತರಾಗಿದ್ದವರು ಸುರೇಶ್ಚಂದ್ರ. ನಾನು ಸಿನಿಮಾ ಪತ್ರಿಕೋದ್ಯಮದತ್ತ ಆಕರ್ಷಿತರನಾಗಲು ಇವರೇ ಕಾರಣ..
ಈಚೆಗೆ ಒಂದು ವರ್ಷದಿಂದ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಬಹಳವೇ ಅಪ್ಯಾಯಮಾನವಾಗಿ ಮಾತನಾಡುತ್ತಿದ್ದರು. ಅವರ ಮಗ ವಿನಯ್ ಚಂದ್ರ ಸಂಗೀತ ನಿರ್ದೇಶಕ ರಾಗಿ ನನಗೆ ಆಪ್ತ ವಾಗಿರುವುದರಿಂದ ಆ ಬಗ್ಗೆ ಹೆಚ್ಚು ಮಾತು ನಡೆಯುತ್ತಿತ್ತು. ಚೆಲುವಿನ ಚಿತ್ತಾರ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅವರ ಅಬ್ಬರ ನೋಡಿ ಬೆರಗಾಗಿದ್ದೆ. ಚಿಕ್ಕಪೇಟೆ ಸಾಚಗಳು ಚಿತ್ರದಲ್ಲಿ ಕಾಮಿಡಿ ವಿಲನ್.. ಆ ಬಳಿಕ ಇನ್ನು ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸುರೇಶ್ಚಂದ್ರ ತಮ್ಮ ಆರೋಗ್ಯದ ಮಿತಿಯನ್ನು ಅರಿತವರಾಗಿದ್ದರು. ಇಂತಹವರನ್ನು ಕೋವಿಡ್ ಬಲಿ ಪಡೆದಿದ್ದು ಮಾತ್ರ ವಿಪರ್ಯಾಸ.