ಹ್ಯಾಟ್ರಿಕ್ ಹೀರೋ ಸಾಲಿಗ್ರಾಮ ರಾಮೇಗೌಡ್ರು ಮಹೇಶ (8.10.1966)… ಕಳೆದ ವಿಧಾನಸಭಾ ಚುನಾವಣೆಯಿಂದಲೂ ನಿರಂತರವಾಗಿ ಸುದ್ದಿಯಲ್ಲಿ ಇರುವಂತೆ ಸನ್ನಿವೇಶಗಳು ಸೃಷ್ಟಿಯಾಗಿವೆ ಅಥವಾ ಸ್ವಯಂ ಸೃಷ್ಟಿಸಿಕೊಂಡಿದ್ದಾರೆ.
ಈಗ ಅದು ಸ್ಫೋಟಿಸಿ ತನಿಖೆಗೆ ತಲೆಕೊಡುವ ಹಂತಕ್ಕೆ ಬಂದು ತಲುಪಿದೆ. ರೋಹಿಣಿ ಸಿಂಧೂರಿಯವರು ಎತ್ತಿರುವ ಪ್ರಶ್ನೆಗಳು ಕಳೆದ ಹತ್ತು ವರ್ಷಗಳ ಹಿಂದೆ ಇವರು ಏನಾಗಿದ್ದರು ? ಈಗ ಏನಾಗಿದ್ದಾರೆ ಯಾವ ಇಂಡಸ್ಟ್ರಿಗಳನ್ನು ರೂಪಿಸಿ ಎಷ್ಟು ಉದ್ಯೋಗಗಳನ್ನು ನೀಡಿದ್ದಾರೆ? ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯುತ್ತಿದ್ದ ಮಹೇಶ್ ಮಿರ್ಲೆ- ಸಾಲಿಗ್ರಾಮದ ಓರ್ವ ಮೇಸ್ಟ್ರುಮಗ, ಎರಡು ಎಕರೆ ತರಿ ಜಮೀನ್ದಾರರು, ಮತ್ತೆ ಅವರು ಇಷ್ಟೆಲ್ಲ ಆಸ್ತಿವಂತರು ಹೇಗಾದರು ? ಮೈಸೂರು ಜಿಲ್ಲೆಯ ಜನ ಹೇಳುವಂತೆ ರಿಯಲ್ ಎಸ್ಟೇಟ್ ವ್ಯಾಪಾರ. ನೇರ ಮಾರ್ಗದಲ್ಲಿ ರಿಯಲ್ ಆಗಿ ರಿಯಲ್ ಎಸ್ಟೇಟ್ ಮಾಡಿದ್ರೆ ಹತ್ತು ವರ್ಷಗಳಲ್ಲಿ ನೂರಾರು ಕೋಟಿ ಸಂಪಾದಿಸಿ ಶ್ರೀಮಂತರಾಗಲು ಸಾಧ್ಯವೇ? ಎಂಬುದು ಅದೇ ಜನರ ಪ್ರಶ್ನೆ.
ಕಳೆದ ವಿಧಾನಸಭಾ ಚುನಾವಣೆಗೆ ಒದಗಿಸಿರುವ ಮಾಹಿತಿಯಲ್ಲಿ ಅವರ ಮತ್ತು ಕುಟುಂಬದ ಆಸ್ತಿ ,ಹಣ ,ಒಡವೆ, ಕಾರುಗಳು,ಬಂಗ್ಲೇ ,ಸಾರಾ ಅಸೋಸಿಯೇಟ್ಸ್ ಹೆಸರಿನ ಹಣಕಾಸು,ಕೊಡಗಿನ ಎಸ್ಟೇಟ್ ಮುಂತಾಗಿ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಗಳ ವಿವರ ಸಿಗುತ್ತದೆ. ಆದರೆ ಈಗ ಪ್ರಸ್ತಾಪದಲ್ಲಿರುವ ಒತ್ತುವರಿ ಜಾಗಗಳು, ಎಕರೆಗಟ್ಟಲೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮೈಸೂರಿನ ಸಾ ರಾ ಚೌಲ್ಟ್ರೀ, ಮಾಜಿ ಪ್ರವಾಸೋದ್ಯಮ ಸಚಿವರ ರೆಸಾರ್ಟ್ ನಿರ್ಮಾಣದ ಯೋಜನೆ, ನೂರಾರು ಎಕರೆಯಲ್ಲಿ ನಡೆಯುವ ರಿಯಲ್ ಎಸ್ಟೇಟ್ ವ್ಯವಹಾರಗಳ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ.
ಮಹೇಶ್ ಮತ್ತು ಸಿಂಧೂರಿಯವರ ಮುಖಾಮುಖಿ ಆಗಿದ್ದು ಅವರು ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ, ವಿಧಾನಸಭೆಯ ಸಮಿತಿಯೊಂದರ ಅಧ್ಯಕ್ಷರು (ಕಾಗದ ಪತ್ರಗಳ ಸಮಿತಿ ಇರಬೇಕು) ಹಾಸನಾಂಬ ದರ್ಶನಕ್ಕೆ ಬಂದಾಗ ಜಿಲ್ಲಾಧಿಕಾರಿಗಳು ಪ್ರೋಟೋಕಾಲ್ ಮರ್ಯಾದೆ ಕೊಡಲಿಲ್ಲ ಎಂಬುದು ಮೊದಲ ಆರೋಪ, ಸಮಯಕ್ಕೆ ಸರಿಯಾಗಿ ಅವರು ಬರಲಿಲ್ಲ ನಾನು ಎರಡು ಗಂಟೆ ಕಾದು ನನ್ನ ಕೆಲಸಕ್ಕೆ ತೆರಳಿದೆ ಎಂಬುದು ಆಗಿನ ಸಿಂಧೂರಿಯವರ ಸಮಜಾಯಿಶಿ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗ ಜೆಡಿಎಸ್ ಮತ್ತು ಬಿಜೆಪಿ ತಲಾ ನಲ್ವತ್ತು ಸ್ಥಾನ ಪಡೆದದ್ದರಿಂದ ಮತ ಗಳಿಕೆಯ ಆಧಾರದ ಮೇಲೆ ಜೆಡಿಎಸ್ ಗೆ ವಿರೋಧಪಕ್ಷದ ಸ್ಥಾನ ದೊರೆತು ನಂತರ ಕೆಜೆಪಿ ಬಿಜೆಪಿಯ ವಿಲೀನದಿಂದ ಅದು ಯಡಿಯೂರಪ್ಪನವರ ಪಾಲಾಯಿತು. ಆಗ ಜೆಡಿಎಸ್ ಗೆ ದೊರೆತ ವಿಧಾನಸಭೆಯ ಲೆಕ್ಕ ಪತ್ರ ಸಮಿತಿಗೆ ಸಾರಾ ಮಹೇಶ್ ಅಧ್ಯಕ್ಷರು. ವಿಧಾನ ಮಂಡಲದಲ್ಲಿ ಪ್ರಶ್ನೋತ್ತರ ಮುಗಿದ ಮೇಲೆ ಮಂತ್ರಿಗಳು ಎದ್ದು ನಿಂತು ‘ನನ್ನ ಮುಂದಿರುವ ಕಾಗದ ಪತ್ರಗಳನ್ನು ಸಭೆಯ ಮುಂದಿಡುತ್ತೇನೆ’ ಎನ್ನುತ್ತಾರೆ. ಒಮ್ಮೊಮ್ಮೆ ಕೆಲವು ಮಂತ್ರಿಗಳ ಮುಂದೆ ಯಾವ ಕಾಗದ ಪತ್ರಗಳು ಇರುವುದಿಲ್ಲ. ಆದರೂ ಅದು ನಡವಳಿಕೆ, ಸಂಪ್ರದಾಯ ಮುಗಿಸುತ್ತಾರೆ. ಆ ಸಮಿತಿಗೆ ಇವರು ಅಧ್ಯಕ್ಷರು. ಯಾವ ಇಲಾಖೆಯ ಅಧಿಕಾರಿಗಳು ವರದಿ ತಯಾರಿಸಿ ಆಡಿಟ್ ಮಾಡಿಸಿ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲವೋ ಅಂತಹವರನ್ನು ಕರೆದು ಪ್ರಶ್ನಿಸಿ ಸಮಯಕ್ಕೆ ಸರಿಯಾಗಿ ನೀಡುವಂತೆ ಸೂಚಿಸುವುದಷ್ಟೇ ಈ ಸಮಿತಿಯ ಕೆಲಸ,ಅದು ಸಮರ್ಪಕವಾಗಿದೆಯಾ ಎಂದು ಪರಿಶೀಲಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೆ( public account comity) ಓರ್ವ ಅಧಿಕಾರಿ ಒಂದು ಕಚೇರಿ, ಒಂದು ಫೋನ್ ಇದ್ರೆ ಈ ಕೆಲಸವನ್ನು ಮಾಡಬಹುದೆಂದು ಸಚಿವಾಲಯದ ಅಧಿಕಾರಿಗಳೇ ಹೇಳುತ್ತಾರೆ.
ರೋಹಿಣಿ ಸಿಂಧೂರಿಯವರ ಮೇಲೆ ಒಂದು ಹಕ್ಕುಚ್ಯುತಿ ಪ್ರಕರಣವೂ ಪೆಂಡಿಂಗ್ ಇರಬಹುದು.ಹಕ್ಕುಚ್ಯುತಿ ಸಮಿತಿಗೆ ಬಸವರಾಜ ಪಾಟೀಲ್ ಯತ್ನಾಳ್ ಅಧ್ಯಕ್ಷರು, ಸಿಂಧೂರಿಯವರು ಉತ್ತಮ ಅಧಿಕಾರಿ ಬಿಡ್ರೀ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ.
ನೇರವಾಗಿ ಮಾತನಾಡುವ ಯತ್ನಾಳ್ ಸುಮ್ಮನೆ ಬಿಟ್ಟಾರೆಯೇ ಇದು ಯೋಚಿಸಬೇಕಾದ ವಿಚಾರ. ಮರ್ಯಾದೆ ಸಿಗದಿದ್ದರೆ ಮಹೇಶಣ್ಣ ಕೆರಳುತ್ತಾರೆಂಬುದು ಸಚಿವಾಲಯದ ಷರಾ !
ಹಳೆಯ ಎಡತೊರೆಯ ನೂರಾ ಅರವತ್ತು ಗ್ರಾಮಗಳ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಾಲಿಗ್ರಾಮದ ಮಹೇಶ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸಲ ಕಡಿಮೆ ಅಂತರ ( 1800 ಅಂದಾಜು)ದಲ್ಲಿ ಗೆದ್ದರೂ ಕುಮಾರಸ್ವಾಮಿಯವರಿಂದ ಮಂತ್ರಿ ಆಗುವ ಯೋಗವು ಸಿಕ್ಕಿತು. ದೇವೇಗೌಡರ ಇಡೀ ಕುಟುಂಬದಲ್ಲಿ ಸಧ್ಯಕ್ಕೆ ಕುಮಾರಸ್ವಾಮಿಯವರೊಬ್ಬರೇ ಇವರಿಗೆ ಆಸರೆ,ಮುಂದೇನೋ ಗೊತ್ತಿಲ್ಲ. ಇವರು ಶಾಸಕರಾಗುವ ಮುನ್ನ ಬಿಜೆಪಿಯಲ್ಲಿ ಗುರುತಿಸಿಕೊಂಡು ಕಣಕ್ಕೆ ಇಳಿದ ಪರಿಣಾಮ ಅಡಗೂರು ವಿಶ್ವನಾಥ್ ಸೋತು ಸಿದ್ದರಾಮಯ್ಯನವರ ಶಿಷ್ಯ ಮಂಚನಹಳ್ಳಿ ಮಹದೇವ್ ಜೆಡಿಎಸ್ ಶಾಸಕರಾಗಿದ್ದರು.ಆಗ ಯಡಿಯೂರಪ್ಪನವರ ಆಶೀರ್ವಾದ ಮಹೇಶಗಿತ್ತು. ರಾಮದಾಸ,ಮಹೇಶ ಮುಂತಾದ ಒಂದು ಯುವ ಪಡೆ ಮೂಡಾ ಅಧ್ಯಕ್ಷರಾಗಿದ್ದ
ಬಂಗಾರಪ್ಪನವರ ಶಿಷ್ಯ ಗೋವಿಂದರಾಜು ಅವರ ಸುತ್ತ ಗಿರಕಿ ಹೊಡೆಯುತ್ತಿದ್ದ ಸಮಯದಲ್ಲಿ ಇವರೆಲ್ಲಾ ಪ್ರವರ್ಧಮಾನಗೊಂಡರೆಂಬುದು ಬಲ್ಲ ಮೂಲಗಳ ಮಾಹಿತಿ.
ಮಂಚನಹಳ್ಳಿ ಮಹಾದೇವ ಹಠಾತ್ ನಿಧನ ಹಾಗೂ ಸಿದ್ದರಾಮಯ್ಯ ಜೆಡಿಎಸ್ ನಿರ್ಗಮನದ ನಂತರ 2008ರಲ್ಲಿ ಮಹೇಶ್ ಜೆಡಿಎಸ್ ಶಾಸಕರಾದರು. ಅಲ್ಲಿಂದ ಲೆಕ್ಕ ಕೇಳುತ್ತಿದ್ದಾರೆ. ಶಾಸಕರು ವ್ಯಾಪಾರ ಮಾಡಬಾರದೆಂದು ಸಂವಿಧಾನದಲ್ಲಿ ಹೇಳಿಲ್ಲ ಆದರೆ ಜನಪ್ರತಿನಿಧಿಯಾದವನಿಗೆ ಬದ್ದತೆ ಇರಬೇಕು, ಅವನು ಜನಗಳಿಗೆ ಉತ್ತರದಾಯಿತ್ವ ಆಗಿರಲೇಬೇಕು. ಅಡಗೂರು ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರುವಲ್ಲಿ ತನ್ನ ಪಾತ್ರ ದೊಡ್ಡದು ಎಂದು ಮಹೇಶ್ ಹೇಳಿಕೊಂಡಿದ್ದರು. ಆದರೆ ಅದಕ್ಕೂ ಮುನ್ನ ದೇವೇಗೌಡರು ಮೈಸೂರು ಜಿಲ್ಲೆಯ ಶಾಸಕರ ಸಭೆ ನಡೆಸಿ ಪ್ರಮಾಣ ಮಾಡಿಸಿಕೊಂಡಿದ್ದರು. ಹುಣಸೂರು – ಕೆ ಆರ್ ನಗರ ಒಂದಕ್ಕೊಂದು ಅಂಟಿಕೊಂಡ ಊರುಗಳಾದರೂ ಕೆಆರ್ ನಗರದಲ್ಲಿ ಒಕ್ಕಲಿಗರು-ಕುರುಬರು ಹಿಂದುಳಿದ ವರ್ಗಗಳು ಸಮಾನವಾಗಿದ್ದರು.
ದೇವರಾಜ ಅರಸರ ಹುಣಸೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳದೇ ಮೇಲುಗೈ, ಸ್ವಾಭಾವಿಕವಾಗಿ ಸಿದ್ದರಾಮಯ್ಯನವರ ಪ್ರಭಾವ ಇಲ್ಲಿದೆ. ಜೆಡಿಎಸ್ ಅಧ್ಯಕ್ಷರಾಗಿ ಹುಣಸೂರಿನಲ್ಲಿ ಸುಮಾರು ಎಂಟು ಸಾವಿರ ಮತಗಳ ಅಂತರದಲ್ಲಿ ಗೆದ್ದರೂ ವಿಶ್ವನಾಥ್ ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಲಿಲ್ಲ. ಗೌಡರ ಕುಟುಂಬದ ವಿರೋಧದ ನಡುವೆಯೂ ಸಾರಾ ಮಂತ್ರಿಯಾದರು. ವಿಶ್ವನಾಥ್ ಆಪರೇಶನ್ ಕಮಲಕ್ಕೆ ಒಳಗಾದ ಮೇಲಿನ ಜಟಾಪಟಿ, ಆಣೆ ಪ್ರಮಾಣ ಗಳನ್ನು ಕಂಡು ರಾಜ್ಯದ ಜನತೆ ಅಸಹ್ಯಪಟ್ಟುಕೊಂಡಿದೆ.
ಹಳ್ಳಿ ಹಕ್ಕಿ ವಿಶ್ವನಾಥ್ ಅವರ ‘ಬಾಂಬೆ ಡೇಸ್’ ಪುಸ್ತಕವೂ ಬಿಡುಗಡೆಗೆ ಸಿದ್ಧವಾಗಿದೆ.
ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿ ಅನುಭವ ಹೊಂದಿರುವ ಮಹೇಶ್ ಅವರಿಂದ ಈಗ ಲೆಕ್ಕಪತ್ರ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಸಾಲಿಗ್ರಾಮದವರು ತುಂಬಾ ಸ್ಟ್ರಾಂಗ್ ಆಗಿರುತ್ತಾರೆ ಎಂಬುದು ಇಲ್ಲಿನ ನಂಬಿಕೆ. ಉದಾಹರಣೆಗೆ ಪಾರ್ವತಮ್ಮ ರಾಜ್ ಕುಮಾರ್, ಭವಾನಿ ರೇವಣ್ಣ, ಪುಟ್ಟಸ್ವಾಮಿಗೌಡರ ಸೊಸೆ ಅನುಪಮ ಮಹೇಶ್, ಸಾ ರಾ ಗೋವಿಂದು ಮುಂತಾದವರು. ಸಾ ರಾ ಮಹೇಶ್ ಎಷ್ಟು ಸ್ಟ್ರಾಂಗ್ ಎಂಬ ಪರೀಕ್ಷೆ ಶುರುವಾಗಿದೆ…
-ವೈ ಜಿ ಅಶೋಕ್ ಕುಮಾರ್.