ಹೊಂಬಾಳೆ ಫಿಲ್ಸಂ ಇಲ್ಲಿಯವರೆಗೂ ಕೆ.ಜಿ.ಎಫ್ ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳನ್ನೇ ನಿರ್ಮಿಸಿದೆ. ಇದೀಗ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ಸಂಸ್ಥೆ ಗುರುತಿಸಿಕೊಂಡಿದೆ.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರ ಸೋದರ ಸಂಬಂಧಿ ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಸಂ ಸಂಸ್ಥೆಯ ಮಾಲೀಕರು.
ಈಗ ಇದರ ಪ್ರಸ್ತಾಪ ಏಕೆಂದರೆ ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಚಿತ್ರರಂಗದ ಮಂದಿಗೆ ಮತ್ತು ಇತರ ಸಂಕಷ್ಟದಲ್ಲಿ ಇರುವ ಕಲಾವಿದರು ತಂತ್ರಜ್ಞರಿಗೆ ಸಂಸ್ಥೆ ಆರ್ಥಿಕ ನೆರವು ನೀಡಿದೆ. ಈಗಾಗಲೇ ಸಾಕಷ್ಟು ಜನರ ವೈಯಕ್ತಿಕ ಖಾತೆಗಳಿಗೆ 5 ಸಾವಿರ ರೂಪಾಯಿ ಹಣ ಜಮಾ ಮಾಡಿದೆ.
ವಿಜಯ್ ಕಿರಗಂದೂರು ಕೊರೋನ ಸಂದರ್ಭದಲ್ಲಿ ಯಾವುದೇ ಪ್ರಚಾರವಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುವುದು ವಿಶೇಷವೇ.
ಕೊರೊನಾ ಮಹಾಮಾರಿ ವಕ್ಕರಿಸಿದ ತಕ್ಷಣವೇ ಮನರಂಜನಾ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿತು.ಅತ್ಯಂತ ಕಷ್ಟಕರ ಸಂದರ್ಭದಲ್ಲಿ ವಿಜಯ್ ಕಿರಂಗದೂರು ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಉತ್ತಮ ಮೊತ್ತವನ್ನು ಎರಡು ತಿಂಗಳು ವರ್ಗಾಯಿಸಿದ್ದರು ಹಾಗೂ ಕನ್ನಡ ಚಲನಚಿತ್ರ ಕಾರ್ಮಿಕರ ಸಂಕಷ್ಟಕ್ಕೂ ನೆರವಾಗಿದ್ದರು.
ಈ ವರ್ಷ ಮತ್ತೆ ಕೊರೋನದ ಎರಡನೇ ಅಲೆ ಜೋರಾಗಿದೆ. ಲಸಿಕೆ ಬಂದಿದೆಯಾದರೂ, ಹರಡುವಿಕೆಯ ಪ್ರಮಾಣ ಕಳೆದ ಸಲಕ್ಕಿಂತ ಹೆಚ್ಚು.. ಅದೇ ರೀತಿ ಕೊರೋನದೊಂದಿಗೆ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ವಿಜಯ್ ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ.
ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ ಹಾಗೂ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಹಾಗಾಗಿ ಅವರ ಕಾರ್ಯಗಳು ಶ್ಲಾಘನೀಯ ಎನಿಸಿವೆ.