Snehapriya.com

June 8, 2025

ನೊಂದ ಕಲಾವಿದರಿಗೆ ತಲಾ 5 ಸಾವಿರ ಯಶ್ ಸಹಾಯ ಹಸ್ತ

Social Share :

ಸಂಕಷ್ಟದಲ್ಲಿರುವ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಕನ್ನಡದ ಮುಂಚೂಣಿಯ ನಟ ರಾಕಿಂಗ್ ಸ್ಟಾರ್ ಯಶ್ ಸಹಾಯಹಸ್ತ ಚಾಚಿದ್ದಾರೆ.

ಚಿತ್ರರಂಗದ ನೊಂದಿರುವವರಿಗೆ ಮೂರು ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಹಾಕಲು ಯಶ್ ಮನಸ್ಸು ಮಾಡಿದ್ದಾರೆ.

ಕೊರೊನಾ ಮಹಾಮಾರಿ ಮನರಂಜನಾ ಕ್ಷೇತ್ರದ ಮೇಲೆ ಕೊಟ್ಟ ಹೊಡೆತದಿಂದ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಅತಿಯಾದ ಕಷ್ಟಗಳನ್ನು ಅನುಭವಿಸಬೇಕಾಯಿತು. ಸಿನಿಮಾ ಜನರ ಕಷ್ಟಕ್ಕೆ ಅಲ್ಲಲ್ಲಿ ಕೆಲವರು ಸ್ಪಂದಿಸಿದರೂ ಅದು ಆನೆ ಹೊಟ್ಟೆಗೆ ಬಿದ್ದ ಅರೆಕಾಸಿನ ಮಜ್ಜಿಗೆಯಾಯಿತು.

ಈ ಮಧ್ಯೆ ಸರ್ಕಾರ ಘೋಷಣೆ ಮಾಡಿರುವ ಅರೆ ಕಾಸು ಎಷ್ಟು ಕಲಾವಿದರಿಗೆ ತಲುಪುವುದೆಂಬುದು ಯಾರಿಗೂ ತಿಳಿದಿಲ್ಲ..

ಆದರೆ ಯಶ್ ಚಿತ್ರರಂಗದ ಎಲ್ಲಾ ಸಂಘಟನೆಗಳ ಸಂಪರ್ಕ ಪಡೆದು ಸಂಕಷ್ಟದಲ್ಲಿರುವ ಜನರ ಅಧಿಕೃತ ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡೆಯುತ್ತಿರುವುದಾಗಿ ತಿಳಿಸಿ, ಈ ಪ್ರಕ್ರಿಯೆ ಮುಗಿದ ತಕ್ಷಣವೇ ಹಣ ವರ್ಗಾವಣೆ ಮಾಡುವುದಾಗಿ ತಮ್ಮ ಟ್ವಿಟರ್ ‌ಖಾತೆ ಮೂಲಕ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಕಣ್ಣಿಗೆ ಕಾಣದ ವೈರಸ್ ಮನುಷ್ಯರ ಬದುಕನ್ನು ಬುಡಮೇಲು ಮಾಡಿದೆ. ಕಳೆದ ವರ್ಷದಿಂದ ಕೆಲಸವಿಲ್ಲದೆ ಸಿನಿಮಾ ಮಂದಿಯ ಬದುಕು ಬೀದಿಗೆ ಬಿದ್ದಂತಾಗಿದೆ. ಇಂತಹ ಸಮಯದಲ್ಲಿ ನಾವು ಅವರ ಜೊತೆಗೆ ನಿಲ್ಲಬೇಕಾಗಿದೆ. ಹಾಗಾಗಿ ನನ್ನ ಸ್ವಂತ ಸಂಪಾದನೆಯಿಂದ ಅವರಿಗೆ ಹಣ ನೀಡುತ್ತಿರುವೆ ಎಂದು ಯಶ್ ತಿಳಿಸಿದ್ದಾರೆ.

ಯಶ್ ಅವರ ಈ ನಿಲುವಿಗೆ ಚಿತ್ರರಂಗದ ಮಂದಿ ಕೊಂಡಾಡಿದ್ದಾರೆ. ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ನೀನೊಬ್ಬ ಚಿತ್ರರಂಗದ ಯಜಮಾನ ಮತ್ತು ಚಕ್ರವರ್ತಿ ಎಂದು ಕೊಂಡಾಡಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *