ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಪಾತ್ರಗಳಿಂದ ಹಾಗೂ ಅನುಪಮ ಗಾಯನದಿಂದಲೇ ಜನಪ್ರಿಯವಾಗಿರುವ ರಾಘವೇಂದ್ರ ರಾಜ್ಕುಮಾರ್ ಮತ್ತೆ ನಟನೆಯ ಫಾರ್ಮ್ ಗೆ ಮರಳಿದ್ದಾರೆ. ಅಮ್ಮನ ಮನೆ ಹಾಗೂ ಇತರ ಚಿತ್ರಗಳು ಅವರಿಗೆ ಮತ್ತೆ ಜನಪ್ರಿಯತೆ ತಂದುಕೊಟ್ಟಿವೆ. ಇದೀಗ ಅವರು ರಾಜತಂತ್ರದ ಚುಕ್ಕಾಣಿ ಹಿಡಿದಿದ್ದಾರೆ. ಅಪರೂಪದ ಈ ಚಿತ್ರದಲ್ಲಿ ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಈಚೆಗೆ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಅಮ್ಮನ ಮನೆ ರಾಘಣ್ಣ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಪಿ.ವಿ.ಆರ್.ಸ್ವಾಮಿ ಈಗ ಕ್ಯಾಮೆರಾ ಹಿಡಿಯುವ ಜೊತೆಗೆ ಇದೇ ಮೊದಲಬಾರಿಗೆ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಹಿರಿಯ ಕಲಾವಿದರಾದ ದೊಡ್ಡಣ್ಣ, ಭವ್ಯ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವಥ್, ರಂಜನ್ಹಾಸನ್, ಮುನಿರಾಜು, ನೀನಾಸಂ ಅಶ್ವಥ್ ಹೀಗೆ ಹಲವಾರು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರಾಜತಂತ್ರ ಚಿತ್ರದ ಮುಹೂರ್ತ ದೃಶ್ಯಕ್ಕೆ ಹಿರಿಯನಟ ದೊಡ್ಡಣ್ಣ ಕ್ಲಾಪ್ ಮಾಡಿದರೆ, ಸಂಗೀತ ನಿರ್ದೇಶಕ ಹಂಸಲೇಖಾ ಕ್ಯಾಮೆರಾ ಚಾಲನೆ ಮಾಡಿದರು. ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಪಿವಿಆರ್ ಸ್ವಾಮಿ ರಾಜತಂತ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್ ಹರಪನಹಳ್ಳಿ, ಜೆ.ಎಂ.ಪ್ರಹ್ಲಾದ್ ಹಾಗೂ ಪಿ.ಆರ್.ಶ್ರೀಧರ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಮುಹೂರ್ತದ ನಂತರ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಸ್ವಾಮಿ ಹಿಂದೆ ಅಮ್ಮನ ಮನೆ ಚಿತ್ರಕ್ಕೆ ಡಿಓಪಿ ಆಗಿದ್ರು. ಈಗ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ ಎಂದು ಈ ಕಥೆ ಹೇಳಿದರು. ನಿವೃತ್ತ ಕ್ಯಾಪ್ಟನ್ ಒಬ್ಬರು ಹೊರಗಿನಿಂದ ಬರುವ ಶತೃಗಳಿಂದ ದೇಶವನ್ನು ರಕ್ಷಿಸುತ್ತಿದ್ದರು. ಮುಂದೆ ಅವರು ದೇಶದ ಒಳಗೆ ಬಂದಾಗ ಯಾವ ರೀತಿ ಸಮಾಜ, ದೇಶವನ್ನು ದುಷ್ಟರಿಂದ ರಕ್ಷಿಸುತ್ತಾರೆ ಎಂದು ನನ್ನ ಪಾತ್ರದ ಮೂಲಕ ತೋರಿಸುತ್ತಿದ್ದಾರೆ. ಇದೇ ಮೊದಲಬಾರಿಗೆ ನಾನಿಂಥ ಪಾತ್ರ ಮಾಡುತ್ತಿರುವುದು. ಇಲ್ಲಿ ಕ್ಯಾಪ್ಟನ್ ರಾಜನೂ ಹೌದು, ರಾಮನೂ ಹೌದು, ಸೈನ್ಯದಿಂದ ಹೊರಬಂದ ಮೇಲೂ ತನ್ನ ಕರ್ತವ್ಯ ಮುಗಿದಿಲ್ಲವೆಂದುಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ ಕೂಡ ಹೌದು. ಇಲ್ಲಿ ಕೆಲಸ ಮಾಡುವುದು ತಂತ್ರವೋ ಮಂತ್ರವೋ ಅನ್ನೋದು ಚಿತ್ರ ನೋಡಿದಾಗ ತಿಳಿಯುತ್ತೆ ಎಂದು ಹೇಳಿದರು.
ಹಿರಿಯ ಸಾಹಿತಿ ಜೆ.ಎಂ. ಪ್ರಹ್ಲಾದ್ ಅವರು ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಕಥೆಯ ವಿಶೇಷತೆ ಕುರಿತು ಮಾತನಾಡುತ್ತ ಬೌದ್ಧಿಕ ಶಕ್ತಿಯ ಪ್ರತಿನಿಧಿಯಾಗಿ ರಾಘಣ್ಣ ಅವರು ಕಾಣಿಸಿಕೊಂಡಿದ್ದಾರೆ. ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬ ತನ್ನ ಬುದ್ದಿಶಕ್ತಿಯಿಂದ ಹೇಗೆ ಸಮಾಜದ ದುಷ್ಟಶಕ್ತಿಗಳನ್ನು ಮಟ್ಟ ಹಾಕುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಈಗಿನ ಕಾಲಘಟ್ಟದಲ್ಲೇ ನಡೆಯುವ ಯೂನಿವರ್ಸಲ್ ಕಥೆಯಿದು. ಕ್ಯಾಪ್ಟನ್ ರಾಜಾರಾಮ್ ಪಾತ್ರದಲ್ಲಿ ರಾಘಣ್ಣ ನಟಿಸುತ್ತಿದ್ದಾರೆ ಎಂದು ಹೇಳಿದರು. ನಂತರ ಚಿತ್ರದ ನಿರ್ದೇಶಕ ಪಿವಿಆರ್ ಸ್ವಾಮಿ, ನಾನು ಇಪ್ಪತ್ತು ವರ್ಷಗಳ ಹಿಂದೆ ಪುಟ್ಟ ಹಳ್ಳಿಯಿಂದ ಬಂದೆ. ನನ್ನ ಈ ಪ್ರಯತ್ನದ ಹಿಂದೆ ಹಲವಾರು ಶಕ್ತಿಗಳಿವೆ. ಅಮ್ಮನ ಮನೆ ನಂತರ ರಾಘಣ್ಣ ಅವರ ಜೊತೆ ಎರಡನೇ ಚಿತ್ರವಿದು. ಫೈಟ್ಸ್, ಸಾಂಗ್ಸ್ ಎಲ್ಲಾ ಇರುವ ಕಮರ್ಷಿಯಲ್ ಚಿತ್ರವಿದು. ಇದೇ ಸೋಮವಾರದಿಂದ ಶೂಟಿಂಗ್ ಆರಂಭಿಸಿ ಬೆಂಗಳೂರು, ನೆಲಮಂಗಲ ಸುತ್ತಮುತ್ತ 15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯುತ್ತದೆ ಎಂದು ಹೇಳಿದರು.
ಶ್ರೀಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎನ್.ನಾಗೇಶ್ ಅವರ ಸಂಕಲನ, ವೈಲೆಂಟ್ ವೇಲು-ರಾಮ್ದೇವ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.