ಬಿಬಿಎಂಪಿ ಮಾರ್ಷಲ್ ಗಳು ದಂಡ ಹಾಕುವುದು ಹೊಸದೇನೂ ಅಲ್ಲ; ಲಾಕ್ ಡೌನ್ ಸಡಿಲಗೊಂಡ ನಂತರ ದಂಡ ಹಾಕುವ ಪ್ರಕ್ರಿಯೆ ನಿರಂತರವಾಗಿದೆ.
ಏನಪ್ಪಾ ವ್ಯತ್ಯಾಸ ಎಂದರೆ ಆಗ ದಂಡದ ಮೊತ್ತ 200₹ ಇತ್ತು. ಅದನ್ನು ಏಕಾಏಕಿ ಒಂದು ಸಾವಿರಕ್ಕೆ ಏಕೆ ಹೇರಿಕೆ ಮಾಡಿದರೆಂಬುದು ಮಾತ್ರ ನಿಗೂಢವೇನೂ ಅಲ್ಲ.. ಅದರ ಹಿಂದೆ ಒಂದು ಅನುಭವವೂ ಇದೆ.
ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದ ಮಾರ್ಷಲ್ ಗಳನ್ನು ಕಸದ ನಿರ್ವಹಣೆ ನಿಯಂತ್ರಣಕ್ಕೆ ಬಳಸಿಕೊಳ್ಳಲಾಯ್ತು.. ಈ ವೇಳೆ ಕಸ ಎಸೆದವರಿಗೆ ಎಷ್ಟು ಬೇಕೋ ಅಷ್ಟು ದಂಡ ಹಾಕಿ ಪೀಕಿಸಲಾಯ್ತು..(ಇದು ಅತ್ಯುತ್ತಮ ಕೆಲಸವೂ ಆಗಿತ್ತು)
ಮಾಡಿದ ತಪ್ಪಿಗೆ ಮರು ಮಾತನಾಡದೆ ದಂಡವನ್ನೂ ಕಟ್ಟಿದರು ಜನರು.. ಇದನ್ನೇ ಮಾದರಿಯಾಗಿಸಿಕೊಂಡು ಮಾಸ್ಕ್ ಮೇಲೆ ಪ್ರಯೋಗ ಮಾಡಲು ಹೊರಟರು ಎನಿಸುತ್ತದೆ. ಇಲ್ಲಿ ಮುಖ್ಯವಾಗಿ ಮಾರ್ಷಲ್ ಗಳಿಗೆ ಸಂಬಳ ನೀಡುವುದು ಇಂತಹ ದಂಡ ವಸೂಲಿಯ ಹಣದಿಂದಲೇ.
ಅದಕ್ಕೊಂದು ಸರಿಯಾದ ವ್ಯವಸ್ಥೆಯೂ ಇಲ್ಲ.. ಪಾಪ ಮಾರ್ಷಲ್ ಗಳು ಮಾಸ್ಕ್ ಡ್ಯೂಟಿ ಹಾಕಿದ ಮೇಲೆ ಹೈರಾಣಾಗಿ ಹೋಗಿದ್ದಾರೆ. ಅವರಿಗೆ ಪಿಪಿಇ ಕಿಟ್ ನಂತಹ ರಕ್ಷಣಾ ಸಾಮಗ್ರಿ ವ್ಯವಸ್ಥೆ ಇರದಿರುವ ಕಾರಣದಿಂದ ಎಷ್ಟೋ ಮಾರ್ಷಲ್ ಗಳು ಒಳಗೆ ಭಯ ಇಟ್ಟುಕೊಂಡು ಅದನ್ನು ವ್ಯಕ್ತಪಡಿಸಿದ್ದಾರೆ ಕೂಡ. ಸರ್ಕಾರ ಸಾರ್ವಜನಿಕರ ಮೇಲೆಯೇ ಎಲ್ಲಾ ಹೊರೆಯನ್ನು ಹಾಕುವ ಪ್ರಯತ್ನ ಮಾಡುತ್ತದೆ. ಅದಕ್ಕೆ ವಿರೋಧ ಬಂದಿದ್ದೂ ಸಹಜವೇ.. ವ್ಯಾಪಾರ ಸರಿಯಾಗಿ ನಡೆಯೊಲ್ಲ; ಮತ್ತೊಂದು ಕಡೆ ನಿರುದ್ಯೋಗ ಸಮಸ್ಯೆ ತೀವ್ರವಾಗಿರುವಾಗ ಎಲ್ಲಿ ತರುತ್ತಾರೆ ಜನರು ಹಣ ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ಹೀಗೆಲ್ಲಾ ಆಗುವುದು ಸಹಜವೇ.
ಇನ್ನು ಮುಖ್ಯವಾದ ವಿಷಯವೂ ಇದೆ. ಅದೇನೆಂದರೆ ಕೋವಿಡ್ ನಿಯಂತ್ರಣಕ್ಕೆ ಕೇವಲ ಮಾಸ್ಕ್ ಸಾಕೇ ಎಂಬುದು..??
ವೈಜ್ಞಾನಿಕವಾಗಿ ಕೋವಿಡ್ ವಿಶ್ಲೇಷಣೆ ಮಾಡಿದವರು ಉಗುಳಿನ ಕಣಗಳು ಮನುಷ್ಯನ ತೇವಾಂಶ ಇರುವ ಜಾಗದಿಂದ ಪ್ರವೇಶ ಪಡೆಯುತ್ತವೆ. ಅಂದರೆ ಬಾಯಿ, ಮೂಗು ಹಾಗೂ ಕಣ್ಣಿನ ಮೂಲಕವೂ ಪ್ರವೇಶವಾಗುತ್ತದೆ ಎಂದು ಹೇಳಿರುವಾಗ ಮಾಸ್ಕ್ ಮುಕ್ಕಾಲು ಭಾಗ ತಡೆಯುತ್ತದೆ ಅಷ್ಟೇ.
ಮಾರಕ ರೋಗದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರ ವರ್ತನೆ ಬದಲಾಗಿಲ್ಲ ಎಂದರೆ ಅದಕ್ಕೆ ಅವರ ಬದುಕು ಮತ್ತು ಜೀವನ ನಡೆಸುವ ಅನಿವಾರ್ಯತೆಯೇ ಕಾರಣವಾಗಿರುತ್ತದೆ. ಮುಖ್ಯವಾಗಿ ಸರ್ಕಾರ ನಮಗೇನಾದರೂ ಮಾಡುತ್ತದೆ ಎಂಬ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ.. ನಮ್ಮ ಬದುಕಿಗೆ ನಾವೇ ಜವಾಬ್ದಾರರು ಎಂಬ ಪ್ರಜ್ಞೆ ಇದ್ದೇ ಇರುತ್ತದೆ. ಅಕಸ್ಮಾತ್ ಇಲ್ಲದಿದ್ದರೆ ತಿಳುವಳಿಕೆ ಮೂಡಿಸಬೇಕಾಗುತ್ತದೆ.. ಅದನ್ನು ಸಮರ್ಪಕವಾಗಿಯಂತೂ ಮಾಡಿಲ್ಲ.. ಸಾಮಾಜಿಕ ಅಂತರ ಏಕಿರಬೇಕು.. ಮಾಸ್ಕ್ ಏಕೆ ಹಾಕಬೇಕು.. ಸ್ಯಾನಿಟೈಸರ್ ಏಕೆ ಬಳಸಬೇಕು.. ಎಂಬ ವಿಷಯದ ಮೇಲೆ ಯಾರು ಎಷ್ಟು ಕಾರ್ಯಕ್ರಮ ಮಾಡಿದ್ದಾರೆ. ಎಷ್ಟು ಶಿಬಿರಗಳನ್ನು ಆಯೋಜಿಸಿ ಜನರಿಗೆ ತಿಳುವಳಿಕೆ ಮೂಡಿಸಲಾಗಿದೆ ಎಂಬುದನ್ನು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಲಿ.