Snehapriya.com

June 8, 2025

ಓಟಿಟಿಗೆ ಮೊದಲ ಭ್ರಮೆ..!

Social Share :

ಇನ್ನೇನು ಚಿತ್ರಮಂದಿರಗಳು ತೆರೆದುಕೊಳ್ಳಲಿವೆ ಎಂಬ ಸನ್ನಿವೇಶದಲ್ಲಿ ಅದರ ಗೊಡವೆಯೇ ಬೇಡ ಹೊಸತನಕ್ಕೆ ತೆರೆದುಕೊಳ್ಳುವ ಆಲೋಚನೆಯಲ್ಲಿ ಚಿತ್ರವೊಂದು ಎದ್ದು ನಿಂತಿದೆ. ಸಂಪೂರ್ಣ ಹೊಸಬರಿಂದ ಕೂಡಿದ್ದರೂ ವ್ಯಾಪಾರದ ವಿಷಯದಲ್ಲಿ ತಲೆ ಕೆಡಿಸಿಕೊಳ್ಳದೆ ಕನ್ನಡ ಚಿತ್ರರಂಗಕ್ಕೊಂದು ಹೊಸದಾದ ಮಾರ್ಗ ತೋರಿಸಿ ಕೊಡಲು ಹೊರಟಿರುವ ಆ ಚಿತ್ರದ ಹೆಸರೇ ಭ್ರಮೆ.

ಅಂದ ಹಾಗೆ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವ ದಂದು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ತಂಡದ ಉತ್ಸಾಹದಲ್ಲಿಯೂ ಹೊಸತನ ಕಂಡುಕೊಂಡಿದೆ. ಮೊದಲಿಗೆ ಈ ಚಿತ್ರ ಓಟಿಟಿ ಫಾರ್ಮೆಟ್ ನಲ್ಲಿ ಬಿಡುಗಡೆ ಕಾಣುತ್ತಿದೆ.

ಅದಕ್ಕಿಂತಲೂ ಹೆಗ್ಗಳಿಕೆ ವಿಷಯವೆಂದರೆ ಚಿತ್ರದ ಟಿಕೆಟ್ ಮಾರಾಟದಲ್ಲಿ ಹೊಸ ವಿಕ್ರಮ ಸಾಧಿಸಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟ ಮಾಡಿದೆ. ಅದಿಷ್ಟೇ ಆಗಿದ್ದರೆ ಏನು ಮಹತ್ವ ಇರದಿರಬಹುದು. ಆದರೆ ಚಿತ್ರತಂಡ ಟಿಕೆಟ್ ಕೊಂಡವರಿಗೆ ಬಹುಮಾನ ಕೊಡುವ ಹೊಸ ರೂಢಿಯನ್ನು ಆರಂಭಿಸಿ ಪ್ರತಿ ಹತ್ತು ಸಾವಿರ ಟಿಕೆಟ್ ಗೆ ಒಮ್ಮೆ ಟಿಕೆಟ್ ಕೊಂಡವರಿಗೆ ಬಹುಮಾನ ಕೊಟ್ಟಿದೆ. ಅದರಂತೆ ಮೊದಲು ಮೊಬೈಲ್ ಟ್ಯಾಬ್ ಹಾಗೂ ಎರಡನೇ ಬಾರಿಗೆ ಹೊಂಡಾ ಆಕ್ಟಿವಾ ಸ್ಕೂಟರ್ ಬಹುಮಾನವಾಗಿ ಕೊಟ್ಟಿದೆ.

ಕಳೆದ ಶುಕ್ರವಾರ ಭ್ರಮೆ ಆಡಿಯೋ ಬಿಡುಗಡೆ ಬೆಂಗಳೂರಿನ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆದ ವೇಳೆಯಲ್ಲೇ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ಸಹ ನಡೆಯಿತು. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಚರಣರಾಜ್ ಈ ಚಿತ್ರವನ್ನು ನಿರೂಪಿಸಿದ್ದಾರೆ.
ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಅಂಜನಾಗೌಡ ಹಾಗೂ ಇಶಾನಾ ನಾಯಕಿಯರ ಪಾತ್ರದಲ್ಲಿದ್ದಾರೆ. ಇದೊಂದು ಹಾರರ್ ಕಾಮಿಡಿ ಕಥೆಯ ಮೇಲೆ ನಡೆಯುವ ಸಬ್ಜೆಕ್ಟ್ ಆಗಿದ್ದು, ಚಿತ್ರಕ್ಕೆ ಚರಣರಾಜ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್ ಆಗಿದ್ದು, ಚಿತ್ರದ ಬಹುತೇಕ ಕಥೆ ನಡೆಯುವುದೇ ಆಸ್ಪತ್ರೆಯ ಅಂಗಳದಲ್ಲಿ. ನವೆಂಬರ್ ಒಂದರಂದು ನಮ್ಮ ಫ್ಲಿಕ್ಸ್ ಓಟಿಟಿ ವ್ಯವಸ್ಥೆಯ ಮೂಲಕ ಭ್ರಮೆ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಂಗೀತ ನೀಡಿದವರು ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್. ನಿರ್ದೇಶಕನಾದವನಿಗೆ ಸಿನಿಮಾ ಮಾರ್ಕೆಟಿಂಗ್ ತಂತ್ರ ಕೂಡ ತಿಳಿದಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದು ಚರಣ್ ರಾಜ್ ಅವರನ್ನು ನೋಡಿದಾಗ ತಿಳಿಯಿತು ಎಂದರು ನಾಗೇಂದ್ರಪ್ರಸಾದ್. ಎರಡೇ ವಾರದಲ್ಲಿ 10 ಸಾವಿರ ಟಿಕೆಟ್ ಮಾರಾಟ ಮಾಡಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು. ನಿರ್ದೇಶಕ ಚರಣರಾಜ್ ಚಿತ್ರದ ವಿವರಗಳನ್ನು ನೀಡುವಾಗ ಚಿತ್ರದ ಬಿಡುಗಡೆಯ ಆಶಯವನ್ನು ಹೇಳಿದರು. ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರವಿದು, ನನ್ನ ಈ ಪ್ರಯತ್ನವನ್ನು ನಂಬಿ ಬಂಡವಾಳ ಹಾಕಿದ ಎಲ್ಲಾ ನಿರ್ಮಾಪಕರಿಗೂ ಧನ್ಯವಾದ ಅರ್ಪಿಸುತ್ತೇನೆ. 14 ದಿನಗಳಲ್ಲಿ ಹತ್ತು ಸಾವಿರ ಟಿಕೆಟ್ ಸೇಲ್ ಮಾಡಿದ್ದೇವೆ. ಇದರಲ್ಲಿ ವಿಜೇತರೊಬ್ಬರಿಗೆ ಬೈಕ್ ಇದೆ. ಮುಂದಿನ ಡ್ರಾದಲ್ಲಿ ಬುಲೆಟ್ ಮತ್ತು ಕಾರ್ ಕೂಡ ಇರುತ್ತದೆ ಎಂಬ ಮಾಹಿತಿಯೂ ಬಂತು ಅವರಿಂದ.

ನಾಯಕ ನಟ ನವೀನ್, ನಾಯಕಿ ಇಶಾನಾ ಮತ್ತು ಅಂಜನಾಗೌಡ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು. ಮಜಾಟಾಕೀಸ್ ಪವನ್ ಈ ಚಿತ್ರದಲ್ಲಿ ಹಾಸ್ಪಿಟಲ್ ಅಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿದ್ದ ಭಾ.ಮ ಹರೀಶ್, ಭಾ.ಮ ಗಿರೀಶ್, ನೆಟ್‍ಫ್ಲಿಕ್ಸನ ವಿಜಯಕುಮಾರ್ ಕೂಡ ಚಿತ್ರದ ಬಗ್ಗೆ ಹಾಗೂ ತಂಡದ ಕುರಿತಂತೆ ಮಾತನಾಡಿದರು. ಮೊದಲ ಡ್ರಾ ವಿಜೇತರನ್ನು ಸಂಗೀತ ನಿರ್ದೇಶಕ ವಿ. ನಾಗೇಂದ್ರಪ್ರಸಾದ್ ಆಯ್ಕೆಮಾಡಿದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *