ಯಾವುದೇ ಇರಲಿ ಒಂದು ಸಿನಿಮಾ ಮಾತನಾಡಬೇಕೇ ಹೊರತು.. ಸಿನಿಮಾದೊಳಗಿನ ನಾವು ಮಾತಾಡಬಾರದು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಈ ಮಾತಿನಲ್ಲಿ ಚಿತ್ರರಂಗದ ಹಲವು ಆಯಾಮಗಳ ಅನುಭವ ಎದ್ದು ಕಾಣುತಿತ್ತು. ಮಾತಿನಲ್ಲಿ ಸತ್ಯವಿತ್ತು. ಅವರ ಮಾತಿಗೆ ‘ಓಂ’ ಚಿತ್ರ ತಳುಕು ಹಾಕಿಕೊಂಡಿದ್ದು ಆಕಸ್ಮಿಕ.. ಹೆಚ್ಚು ಪ್ರಚಾರ ಮಾಡಲಿಲ್ಲ.. ಬಿಡುಗಡೆಗೆ ಮುನ್ನ ಅಬ್ಬರಿಸಲಿಲ್ಲ; ಆದರೆ ಬಿಡುಯಾದಾಗಲಿಂದಲೂ ಅದು ಭಾರತೀಯ ಮಟ್ಟದಲ್ಲಿ ಹೆಸರು ಮಾಡಿತು. ಆದರೆ ‘ಕಬ್ಜ’ ಹಾಗಲ್ಲ; ಬಿಡುಗಡೆಗೆ ಮುಂಚೆಯೇ ಹೆಚ್ಚು ಸೌಂಡ್ ಮಾಡುತ್ತಿದೆ. ಅದಕ್ಕೆ ನಿರ್ದೇಶಕ ಆರ್.ಚಂದ್ರು ಅವರ ಚಿತ್ರದ ಬಗೆಗಿನ ಅದಮ್ಯ ಉತ್ಸಾಹ ಕಾರಣ. ಚಿತ್ರದ ಪ್ರತಿ ಸೊಬಗನ್ನು ಆಯಾ ಸಂದರ್ಭಕ್ಕೆ ಉಣಬಡಿಸುತ್ತಾ.. ಅದು ಪಾನ್ ಇಂಡಿಯಾ ಸಿನಿಮಾ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಈಗ ಅದೇ ಸಿನಿಮಾ ವೆಬ್ ಸೈಟ್ ಮೂಲಕ ಇಡೀ ಮಾಧ್ಯಮ ಲೋಕಕ್ಕೆ ಕುಳಿತಲ್ಲೇ ಸುದ್ದಿಗಳನ್ನು ಮತ್ತು ಚಿತ್ರಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪೂರೈಸಲು ಚಿತ್ರತಂಡ ಅತ್ಯಾಧುನಿಕ ಉಪಕರಣಗಳನ್ನು ಸಜ್ಜುಗೊಳಿಸಿದೆ. ಅದುವೆ ಕಬ್ಜ ಚಿತ್ರ ದ ವೆಬ್ ಸೈಟ್.
ಇದರ ಬಿಡುಗಡೆಗೆ ಸಾಕ್ಷಿಯಾಗಿದ್ದವರು ಸೆಂಚುರಿಸ್ಟಾರ್ ಡಾ.ಶಿವರಾಜ್ ಕುಮಾರ್, ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ರಾಜಕಾರಣಿ ಎಂಟಿಬಿ ನಾಗರಾಜ್ ಹಾಗೂ ಇತರರು.
ಇಡೀ ದೇಶ ಕೋವಿಡ್ ಸುಳಿಗೆ ಸಿಲುಕಿದ ಬಳಿಕ ಸಿನಿಮಾ ರಂಗದ ಎಲ್ಲಾ ಚಟುವಟಿಕೆಗಳೂ ಸ್ಥಬ್ದಗೊಂಡಿದ್ದವು. ಹಾಗಾಗಿ ದೊಡ್ಡ ಸ್ಟಾರ್ ಹೊಟೇಲ್ ನಲ್ಲಿ ನಡೆದ ‘ಕಬ್ಜ’ ಸಿನಿಮಾದ ಕಾರ್ಯಕ್ರಮ ಸಿನಿಮಾ ಚಟುವಟಿಕೆಗಳ ಅದ್ದೂರಿ ಆಗಮನದ ಮುನ್ಸೂಚಕ.
ನಿಜ ಹೇಳಬೇಕೆಂದರೆ ಶಿವಣ್ಣ ಒಂದು ರೀತಿಯ ಲಹರಿಯಲ್ಲಿದ್ದರು. ಪಕ್ಕದಲ್ಲಿ ಉಪ್ಪಿ ಇದ್ದರು. ಕಬ್ಜ ಅಂಡರ್ ವಲ್ಡ್ ಸಿನಿಮಾ ಅಂದ ಮೇಲೆ ಅವರು ಹಿಂದಿನ ನೆನಪುಗಳಿಗೆ ಜಾರಿದರು. ಓಂ ಇಡೀ ಭಾರತೀಯ ಚಿತ್ರರಂಗವನ್ನು ಗಮನ ಸೆಳೆದ ಬಗ್ಗೆ ವಿವರಿಸಿದರು. ಈ ವೇಳೆ ಅವರು ಚಿತ್ರ ಮಾತಾಡಬೇಕು ನಾವು ಮಾತನಾಡಬಾರದು ಎಂದರು.
ರಿಯಲ್ ಸ್ಟಾರ್ ಉಪೇಂದ್ರ ಅವರೂ ಓಂ ನಿರ್ಮಾಣದ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್, ಅವರ ಸಹೋದರ ವರದಪ್ಪನವರು ಚಿತ್ರದ ಆಶಯಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎಂಬುದನ್ನು ವಿವರಿಸಿದರು. ಇಡೀ ಭಾರತೀಯ ಚಿತ್ರರಂಗ ಓಂ ಚಿತ್ರವನ್ನು ಗುರುತಿಸಿತು. ಓಂ ಗೆಲುವಿಗೆ ಯಾರು ಏನೇ ಹೇಳಲಿ ಶಿವಣ್ಣ ಕಾರಣಕರ್ತರು ಎಂದರು ಉಪ್ಪಿ. ಇದಕ್ಕೆ ಮುಂಚೆ ಓಂ ಗೆಲುವಿಗೆ ಉಪ್ಪಿ ಶ್ರಮವೇ ಕಾರಣವೆಂದು ಶಿವರಾಜ್ ಕುಮಾರ್ ಹೊಗಳಿದ್ದರು.
ಅರ್.ಚಂದ್ರು ಬಹಳವೇ ಶ್ರಮ ಜೀವಿ. ಬಹಳ ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡುತ್ತಿದ್ದಾರೆ. ಅವರೊಳಗೊಂದು ಫ್ಯಾಷನ್ ಇರುತ್ತೆ. ಕೌಟುಂಬಿಕ ಮೌಲ್ಯ ಗಳಿಗೆ ಬೆಲೆ ಕೊಡುತ್ತಾರೆ. ನಾನು ಕೂಡ ಅವರ ಜೊತೆ ಮೈಲಾರಿ ಎಂಬ ಸಿನಿಮಾ ಮಾಡಿದ್ದೆ.. ಅದರ ಯಶಸ್ಸು ಏನೆಂಬುದು ಎಲಗರಿಗೂ ತಿಳಿದಿದೆ ಎಂದರು ಶಿವಣ್ಷ.
ನಿಜ ಹೇಳಬೇಕೆಂದರೆ ಶಿವಣ್ಣ ಮಾತಿನ ಲಹರಿಯಲ್ಲಿದ್ದರು. ಉಪ್ಪಿ ಅವರ ಬಗ್ಗೆ ಮಾತನಾಡುವಾಗ ಅವರು ಯಾವುದೋ ಜನ್ಮದಲ್ಲಿ ಅಣ್ಣ ತಮ್ಮ ಆಗಿರಬಹುದು ಎಂದರು. ಅಥವಾ ಗಂಡ ಹೆಂಡತಿ ಆಗಿರಬಹುದು ಎಂದಾಗ ಎಲ್ಲರೊಳಗೂ ನಗು. ನಿರೂಪಣೆ ಮಾಡುತ್ತಿದ್ದ ಅನು ಶ್ರೀ ಕೇಳಿಯೇ ಬಿಟ್ಟರು. ಅಲ್ಲಾ ಶಿವಣ್ಣ ನೀವು ಪಬ್ಲಿಕ್ ಪಂಕ್ಷನ್ ನಲ್ಲಿ ಹೀಗೆ ಹೇಳ್ತಿದ್ದೀರಾ.. ಶಿವಣ್ಣ ನಕ್ಕು ಹೇಳಿದರು ಮನಸಿಗೆ ಅನಿಸಿದನ್ನು ಹೇಳೋಕೆ ಭಯ ಏಕೆ..
Congratulations looking for more films news.