ಒಂದು ವಾರಗಳ ಕಾಲ ಜಾಗತಿಕ ಸಿನಿಮಾ ಪ್ರದರ್ಶನದ ಮೂಲಕ ಸಿನಿಮಾ ಪ್ರೇಮಿಗಳಿಗೆ ಮನೋಲ್ಲಾಸ ನೀಡುವ ಸಿನಿಮಾ ಹಬ್ಬಕ್ಕೆ ಗುರುವಾರ ಅದ್ದೂರಿ ಚಾಲನೆ ನೀಡಲಾಯಿತು.
ವಿಧಾನಸೌಧದ ಮುಂಭಾಗದ ಕಣ್ಮನ ಸೆಳೆಯುವ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದರು.
ಡಿಜಿಟಲೀಕರಣದ ಬಳಿಕ ಸಿನಿಮಾ ನಿರ್ಮಾಣದ ಆಶಯ ಮತ್ತು ಸ್ವರೂಪ ಎರಡೂ ಬದಲಾಗಿದೆ. ಸಿನಿಮಾ ವೇಗದ ಗತಿಯನ್ನು ಹೆಚ್ಚಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಅಂತಾರಾಷ್ಟ್ರೀಯ ತಂತ್ರಜ್ಞಾನ ಒಳಗೊಂಡ ಫಿಲಂಸಿಟಿ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.
ಕೆ.ಜಿ.ಎಫ್ ಹಾಗೂ ಕಾಂತಾರ ಚಿತ್ರಗಳು ಜಗತ್ತಿನ ಗಮನ ಸೆಳೆದಿವೆ. ಹಾಗಾಗಿ ವಿಶ್ವದ ಜನರು ಕರ್ನಾಟಕದತ್ತ ನೋಡುವಂತಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಚಿತ್ರ ರಚನಾಕಾರ ವಿ.ವಿಜಯೇಂದ್ರ ಪ್ರಸಾದ್ ಅಭಿಪ್ರಾಯ ಪಟ್ಟರು.
ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರು ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂದರು. ನಾನು ಇಲ್ಲಿ ಹುಟ್ಟಲಿಲ್ಲ; ಆದರೆ ಮಡದಿ ಮತ್ತು ಮಕ್ಕಳು ಕರ್ನಾಟಕದ ನೆಲದಿಂದ ಬಂದವರಾಗಿದ್ದಾರೆ ಎಂದರು.
ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳಿಗೆ ವಿಶೇಷ ಸ್ಥಾನವಿದೆ ಎಂದವರು ಮತ್ತೊಬ್ಬ ಅತಿಥಿ ಬಾಲಿವುಡ್ ನಿರ್ದೇಶಕ ಗೋವಿಂದ ನಿಹಲಾನಿ.
ಅಭಿಷೇಕ್ ಅಂಬರೀಷ್, ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ರಿಜಿಸ್ಟ್ರಾರ್ ಹೀಮಂತರಾಜು, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.