ಬೆಂಗಳೂರಿನಲ್ಲಿ ಸಿನಿಮೋತ್ಸವದ ವೈಭವ ಮರುಕಳಿಸಿದೆ. ಮಾರ್ಚ್ 23ನೇ ಗುರುವಾರದಿಂದ ಒಂದು ವಾರಗಳ ಸಿನಿ ಪ್ರೇಮಿಗಳಿಗೆ ರಸದೌತಣ ದೊರೆಯಲಿದೆ.
14 ನೇ ಬೆಂಗಳೂರು ಅಂತಾರಾಷ್ಟ್ರೀಯ ಈ ಚಲನ ಚಿತ್ರೋತ್ಸವದಲ್ಲಿ ಜಗತ್ತಿನ ಜನಪ್ರಿಯ ಚಿತ್ರಗಳು ಪ್ರದರ್ಶನಗೊಳ್ಳಲಿರುವ ಹಿನ್ನೆಲೆಯಲ್ಲಿ ಸಿನಿಮಾಸಕ್ತರಲ್ಲಿ ಸಂಭ್ರಮ ಮೇರೆ ಮೀರಿದೆ.
ಮಾರ್ಚ್ 23ರ ಸಂಜೆ 4.30 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಸಿನಿಮೋತ್ಸವ ಉದ್ಘಾಟನೆಯಾಗಲಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಬುಧವಾರ ಈ ಮಾಹಿತಿ ನೀಡಿದರು.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ರಮ್ಯಾ ಕೃಷ್ಣ ಅವರೂ ಸಹ ಇದೇ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ದೀಪ ಕನ್ನಿಕೆಯಾಗಿ ಹರ್ಷಿಕಾ ಪೂಣಚ್ಚ ಇರಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭ ಉದ್ಘಾಟಿಸುತ್ತಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ರಾಜಕೀಯ ನಾಯಕರ ದೊಡ್ಡ ಪಟ್ಟಿಯೇ ಇದೆ.
ಹಿರಿಯ ಚಿತ್ರಕಥೆ ರಚನಾಕಾರ ವಿ.ವಿಜಯಪ್ರಸಾದ್, ಬಾಲಿವುಡ್ ನಿರ್ದೇಶಕ ಗೋವಿಂದ ನಿಹಾಲಾನಿ, ಕನ್ನಡದ ಕಲಾವಿದರಾದ ಅಭಿಷೇಕ್ ಅಂಬರೀಷ್, ಸಪ್ತಮಿಗೌಡ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಅವರ ಉಪಸ್ಥಿತಿ ಈ ಸಂದರ್ಭದಲ್ಲಿ ಇರಲಿದೆ.
‘ಕಾಂತಾರ’ ಉದ್ಘಾಟನಾ ಚಿತ್ರವಾಗಿದ್ದು, ರಾತ್ರಿ 8 ಗಂಟೆಗೆ ಚಾಮರಾಜಪೇಟೆಯ ಕಲಾವಿದರ ಸಂಘದ ಡಾ.ರಾಜ್ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 24ರ ಶುಕ್ರವಾರದಿಂದ ಬೆಂಗಳೂರಿನ ಒರಾಯನ್ ಮಾಲ್, ಕಲಾವಿದರ ಸಂಘ ಹಾಗೂ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಸಿನಿಮಾ ಹಬ್ಬ ನಡೆಯುತ್ತಿದೆ ಎಂದು ಅಶೋಕ್ ಕಶ್ಯಪ್ ವಿವರ ನೀಡಿದರು.
ಈ ಬಾರಿ ಹೆಚ್ಚು ಕನ್ನಡದ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಜಾಗತಿಕ ಮಟ್ಟ, ಏಷ್ಯನ್ ಹಾಗೂ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗಗಳಿಗೆ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಗಳು ಈ ಬಾರಿ ಚಿತ್ರೋತ್ಸವದಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು ಕಲಾತ್ಮಕ ನಿರ್ದೇಶಕ ಎಚ್.ಎನ್.ನರಹರಿರಾವ್.
ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಗೌರವ ಕಾರ್ಯದರ್ಶಿ ಸುಂದರ್ ರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೀಮಂತರಾಜು ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.