ಈಚೆಗೆ ಟಿವಿ ಚಾನೆಲ್ ಗಳ ಬ್ರೇಕಿಂಗ್ ಗಳನ್ನು ನೋಡುತ್ತಿದ್ದರೆ ಬಹಳವೇ ನಗು ಬರುತ್ತದೆ. ಖಾಸಗಿ ಚಾನೆಲ್ ಗಳಾಗಿರುವ ಇವು, ಬೇರೆ ಖಾಸಗಿಯವರ ಬಂಡವಾಳ ಬಯಲು ಮಾಡಿದಂತೆ ತಮ್ಮಷ್ಟಕ್ಕೆ ತಾವೇ ಭುಜ ತಟ್ಟಿಕೊಳ್ಳುತ್ತಿವೆ.
ಖಾಸಗಿ ಆಸ್ಪತ್ರೆಗೆಗಳು ಈಗ ಚರ್ಚಿತ ಸಂಸ್ಥೆಗಳು.. ಇದರ ಜೊತೆಗೆ ಖಾಸಗಿ ವಿದ್ಯಾ ಸಂಸ್ಥೆಗಳು ಚರ್ಚೆಗೆ ಸಿಕ್ಕಿವೆ. ಇವೆರಡೂ ಜನರ ಶೋಷಣೆಗೆ ಇಳಿದು ಬಹಳಷ್ಟು ವರ್ಷಗಳೇ ಕಳೆದವು. ಖಾಸಗಿ ಆಸ್ಪತ್ರೆಗಳು ಹೇಗೆ ಸುಲಿಗೆ ಮಾಡುತ್ತವೆ ಎಂಬುದು ಜಗಜ್ಜಾಹಿರ.
ಅದೇ ರೀತಿ ಖಾಸಗಿ ವಿದ್ಯಾ ಸಂಸ್ಥೆಗಳು ಎಲ್ ಕೆ ಜಿ ಮಕ್ಕಳ ಪೋಷಕರಿಂದ ಹಿಡಿದು ಎಲ್ಲಿಯವರೆಗೂ ಸಾಧ್ಯವೋ ಅಲ್ಲಿವರೆಗೆ ಸುಲಿಗೆ ಮಾಡುವುದು ಕದ್ದು ಮುಚ್ಚಿ ಅಲ್ಲ; ಬಹಿರಂಗವಾಗಿ. ಆನ್ ಲೈನ್ ಕ್ಲಾಸ್ ಲೆಕ್ಕದಲ್ಲಿ ಸುಮಾರು 75 ಸಾವಿರದಿಂದ ಒಂದೂವರೆ ಲಕ್ಷದವರೆಗೆ ಹಣ ವಸೂಲಿ ಆಗುತ್ತಿದೆ. ಇದು ಮಧ್ಯಮ ವರ್ಗದ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ ಎಂಬುದು ಸದ್ಯದ ವಾಸ್ತವ. ಏಕೆಂದರೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಬದುಕಲ್ಲಿ ಬಿರುಗಾಳಿ ಬೀಸಿದೆ. ಕೆಲಸ ಕಳೆದುಕೊಂಡವರೆಷ್ಟೋ.. ಕೆಲಸವಿಲ್ಲದೆ ಅನಿವಾರ್ಯವಾಗಿ ತರಕಾರಿ ವ್ಯಾಪಾರಕ್ಕೆ ಇಳಿದವರು ಎಷ್ಟೋ ಮಂದಿ. ಆಟೋ ಚಾಲಕನೊಬ್ಬ ಸಂಪೂರ್ಣ ತೃಪ್ತಿಯಿಂದ ಮನೆಗೆ ಹೋಗುವುದಿಲ್ಲ.
ಇಂಥವರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಾರೆ.. ಓದಲಿ ಅದು ಖುಷಿಯ ವಿಚಾರವೇ.. ಆದರೆ ಖಾಸಗಿ ಶಾಲೆಗಳಿಗೆ ಹಣ ಕಟ್ಟಬೇಕಲ್ಲ; ಆಗ ಬಸವಳಿಸುತ್ತಾರೆ.. ಸಾಲ ಸೋಲ ಮಾಡಿ ಹಣ ಕಟ್ಟಿ ಅದನ್ನು ತೀರಿಸಲು ಜೀವನದಲ್ಲಿ ಹೆಣಗುತ್ತಲೇ ಹೋಗುತ್ತಾರೆ. ಇದರ ಅರಿವು ಯಾರಿಗಿದೆ.. ಸುಲಿಗೆ ಮಾಡುವವರಿಗೆ ಯಾವ ಮಾನವೀಯ ಸ್ಪರ್ಶವೂ ಇರುವುದಿಲ್ಲ..ಹಣದ ಥೈಲಿ ಅವರನ್ನು ಬದಲಾವಣೆ ಮಾಡಿಬಿಟ್ಟಿರುತ್ತದೆ.
ಇನ್ನು ಖಾಸಗಿ ಆಸ್ಪತ್ರೆ ಗಳ ಒಳ ಹೊಕ್ಕರೆ ಮುಗಿಯಿತು..ಟೆಸ್ಟ್ ಗಳ ಮಹಾಪೂರ.. ಇಲ್ಲದ ಕಾಯಿಲೆ ಹೊಕ್ಕು ತ್ತದೆ.. ಆಗ ಲಕ್ಷ ಲಕ್ಷ ಹಣ ತಾನಾಗಿಯೇ ಸುಲಿಗೆ ಆಗುತ್ತದೆ. ಈ ಕೋವಿಡ್ ಕಾಲದಲ್ಲಿ ಹಬ್ಬ ಆಚರಿಸುತ್ತಿವೆ ಖಾಸಗಿ ಆಸ್ಪತ್ರೆಗಳು.. ಇವುಗಳ ಸುಲಿಗೆಗೆ ಮಿತಿಯೇ ಇಲ್ಲ ಎಂಬುದು ಸರ್ಕಾರ ನೇಮಿಸಿರುವ ತಂಡ ಜಗಜಾಹಿರ ಮಾಡುತ್ತಿದೆ. ಬಡ ಅಥವಾ ಮಧ್ಯಮ ವರ್ಗದ ಒಬ್ಬ ವ್ಯಕ್ತಿ ಈ ಆಸ್ಪತ್ರೆಯ ಸುಳಿಗೆ ಸಿಲುಕಿದರೆ.. ಆತನ ಬದುಕೇ ಮುಗಿದು ಹೋದಂತೆ.