‘ಹಾಯಾಗಿದೆ.. ಎದೆಯೊಳಗೆ..’ ಎಂಬ ಹಾಡಿನ ಮೂಲಕವೇ ಯುವಜನರ ಎದೆಯೊಳಗೆ ನಾಟಿರುವ ‘ಟಾಮ್ ಅಂಡ್ ಜೆರ್ರಿ’ ಚಿತ್ರವು ಬಿಡುಗಡೆ ಹತ್ತಿರವಾಗುತ್ತಿರುವಂತೆಯೇ ಹಾಡು ಮತ್ತು ಅದರ ಸಂಗೀತ ನಿರ್ದೇಶಕ ಇಬ್ಬರನ್ನೂ ಬಿಟ್ಟು ಮಾಧ್ಯಮಗಳ ಮುಂದೆ ಬಂದಿತ್ತು..
ಅದೂ ಟ್ರೈಲರ್ ನ ಜೊತೆಯಾಗಿ. ಆದರೆ ಟ್ರೈಲರ್ ನಲ್ಲಿಯೂ ಹಾಡಿನ ಸದ್ದೇ ಇಲ್ಲ.. ಏನಿದು ನಿಮ್ಮ ಟ್ರಂಪ್ ಕಾರ್ಡ್ ಬಿಟ್ಟು ಬಂದಿರುವಂತಿದೆ ಎಂಬುದಕ್ಕೆ ನಿರ್ದೇಶಕ ರಾಘವ್ ವಿನಯ್ ಕೊಟ್ಟ ಉತ್ತರವೇ ಬೇರೆಯಾಗಿತ್ತು. ಆ ಹಾಡೇ ಹಿಡೀ ಸಿನಿಮಾ ಎಂದುಕೊಂಡು ಬಿಡುತ್ತಾರೆ. ಹಾಡನ್ನು ಮೀರಿದ ಹೊಸತನ ಸಾಕಷ್ಟಿದೆ. ಹಾಗಾಗಿ ಟ್ರೈಲರ್ ನಲ್ಲಿ ತರಲಿಲ್ಲ ಎಂದರು.
ಹಾಯಾಗಿದೆ ಖ್ಯಾತಿಯ ಸಂಗೀತ ನಿರ್ದೇಶಕ ಮ್ಯಾಥ್ಯು ಮನು ಸಹ ಹಾಜರಿರಲಿಲ್ಲ. ಚಿತ್ರತಂಡ ಬೇರೇನೋ ಚಿಂತನೆಯಲ್ಲಿದೆ ಎಂಬಂತೆ ಉತ್ತರ ಕೊಡುತ್ತಾ ಹೋದರು ನಿರ್ದೇಶಕರು. ಅಂದ ಹಾಗೆ ಇದೇ 12ರಂದು ಚಿತ್ರವು ಪ್ರೇಕ್ಷಕರ ಮುಂದೆ ಬರಲಿದೆ.
ರಾಜ್ ಶೇರಿಗಾರ್ ಚಿತ್ರದ ನಿರ್ಮಾಪಕ. ಈ ಚಿತ್ರ ಯುವ ಜನರಿಗೊಂದು ಸಂದೇಶ ನೀಡುತ್ತದೆ. ಹಾಗಾಗಿ ಬಜೆಟ್ ಎಷ್ಟು ಮತ್ತು ಅದು ವಾಪಸ್ ಬರುವುದೇ ಎಂಬ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು.
ನಿರ್ಮಾಪಕರ ಸ್ನೇಹಿತರಾದ ವೆಂಕಟೇಶಗೌಡ ಅವರು ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿಕೊಟ್ಟರು. ಆ ಟ್ರೈಲರ್ ಗೆ ಸಂಗೀತ ಕೂಡ ವಿಠಲ್ ಎಂಬುವರಿಂದ ಮಾಡಿಸಲಾಗಿತ್ತು.
ಚಿತ್ರದಲ್ಲಿ ಎರಡು ಪಾತ್ರಗಳದೇ ಪಾರುಪತ್ಯ. ಅವು ನಿಜ ಜೀವನವನ್ನು ಸಾಂಕೇತಿಸುತ್ತವೆ ಕೂಡ. ಹಾಗಾಗಿ ಆ ಪಾತ್ರಗಳ ವರ್ತನೆಯು ಪ್ರಧಾನ ಅಂಶವಾಗಿ ಮೂಡಿ ಬರುತ್ತದೆ ಎಂಬ ವಿವರ ಕೊಟ್ಟರು ನಿರ್ದೇಶಕರು.
ಚಿತ್ರದಲ್ಲಿ ಮೈತ್ರೇಯ ಸಂಪತ್ ವಿಶಿಷ್ಟವಾಗಿ ಕಾಣಿಸಿಕೊಂಡು ಮಾಯವಾಗುತ್ತಾರೆ. ಆದರೆ ಇಡೀ ಚಿತ್ರ ಅವರ ಮೇಲೆ ಕ್ಯಾರಿ ಆಗುತ್ತದೆ ಎಂದರು.
ಮುಖ್ಯ ಪಾತ್ರದಲ್ಲಿರುವ ನಿಶ್ಚಿತ್ ಹಾಗೂ ಚೈತ್ರಾ ಪಾತ್ರ ಮಾಡುವಾಗ ಎದುರಾದ ಸವಾಲುಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಸಂಕೇತ್ ಹಾಗೂ ಇತರರು ಹಾಜರಿದ್ದರು.