ಕನ್ನಡದ ಗಂಡುಗಲಿ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮುಖ್ಯ ಪಾತ್ರದಲ್ಲಿರುವ ‘ರಾಣ’ ಚಿತ್ರವು ಇದೇ ವಾರ ಅಂದರೆ ನವೆಂಬರ್ 11 ರಂದು ತೆರೆ ಕಾಣುತ್ತಿದ್ದು, ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಇಡೀ ತಾರಾ ಬಳಗವೇ ಶುಭ ಹಾರೈಸಿದೆ.
ಈಚೆಗೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರದ ಆಶಯಗಳು ಹಾಗೂ ಕೆ.ಮಂಜು ಮತ್ತು ಅವರ ಪುತ್ರ ಶ್ರೇಯಸ್ ಗೆ ಶುಭಾಶಯಗಳ ಮಹಾಪೂರವೇ ಹರಿಯಿತು.
ರಾಜಕೀಯ ಗಣ್ಯರಾದ ರಾಮಲಿಂಗಾರೆಡ್ಡಿ, ಗೋಲ್ಡನ್ ಸ್ಟಾರ್ ಗಣೇಶ್, ಲವ್ಲಿಸ್ಟಾರ್ ಪ್ರೇಮ್, ನೀನಾಸಂ ಸತೀಶ್, ಇಂದ್ರಜಿತ್ ಲಂಕೇಶ್, ತುಪ್ಪದ ಹುಡುಗಿ ರಾಗಿಣಿ, ಚಿತ್ರದ ನಟಿಯರಾದ ರೇಷ್ಮಾ ನಾಣಯ್ಯ, ಸಂಯುಕ್ತಾ ಹೆಗಡೆ, ರಜನಿ ಭಾರದ್ವಾಜ್, ಆನಂದ್ ಆಡಿಯೋ ಶ್ಯಾಮ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಇನ್ನೂ ಅನೇಕ ಗಣ್ಯರು ಹಾಜರಿದ್ದರು.
ರಾಮಲಿಂಗಾರೆಡ್ಡಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕೆ.ಮಂಜು ಔದಾರ್ಯದ ಗುಣಗಳನ್ನು ಕೊಂಡಾಡಿದರು. ಚಿತ್ರದ ನಿರ್ದೇಶಕ ನಂದ ಕಿಶೋರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ ಅನುಭವಿ ತಂತ್ರಜ್ಞರು ಎಂಬ ಹೊಗಳಿಕೆ ಕೂಡ ಬಂತು ಗಣೇಶ್ ಅವರಿಂದ.
ಗಣೇಶ್ ಅವರು ನಮ್ಮ ಚಿತ್ರದ ಕಾಣದಿಂದ ಅವರ ಚಿತ್ರವನ್ನು ಎರಡು ವಾರ ಮುಂದಕ್ಕೆ ಹಾಕಿಕೊಂಡಿದ್ದಾರೆ. ಅವರು ಅಷ್ಟು ಸಹೃದಯಿ ಎಂದು ಇದೇ ಸಂದರ್ಭದಲ್ಲಿ ಕೊಂಡಾಡಿದರು ಕೆ.ಮಂಜು.
ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ನಡೆದಾಗ ಕ್ರೇಜಿಸ್ಟಾರ್ ರವಿಚಂದ್ರನ್, ಧ್ರುವಸರ್ಜಾ, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಇತರ ಗಣ್ಯರು ಆಗಮಿಸಿ ಶುಭ ಕೋರಿದ್ದರು.
ಶ್ರೇಯಸ್ ಈ ಚಿತ್ರದ ಸಲುವಾಗಿ ಬಹಳವೇ ಕಷ್ಟ ಪಟ್ಟಿದ್ದಾರೆ. ಹಾಗಾಗಿ ಕೆ.ಮಂಜು ಮತ್ತು ಅವರ ಪುತ್ರ ಶ್ರೇಯಸ್ ಗೆ ಗೆಲುವಾಗಲಿ ಎಂದು ಈ ಸಂದರ್ಭದಲ್ಲಿಯೂ ಗಣ್ಯರು ಶುಭ ಹಾರೈಸಿದರು.
ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿರುವುದು ಮತ್ತೊಂದು ವಿಶೇಷ. ಚಿತ್ರದ ಹಾಡುಗಳು ಈಗಾಗಲೇ ಜನರ ಮನಸ್ಸು ಗೆದ್ದಿವೆ.