ರೇಟಿಂಗ್ 3.5/5
ನಿರ್ಮಾಣ : ಅನುಸೂಯ ಕೋಮಲ್ ಕುಮಾರ್, ಸಹನಾಮೂರ್ತಿ
ನಿರ್ದೇಶನ : ಎನ್.ಆರ್.ಪ್ರದೀಪ್
ಸತ್ಯ ಹೇಳದ ಪುಣ್ಯ ಕೋಟಿ ಕಥೆ
ಚಿತ್ರದ ಮಧ್ಯಾಂತರದ ವೇಳೆಗೆ ದೇವರು ಪ್ರತ್ಯಕ್ಷವಾಗುವ ಅಥವಾ ಪುನರ್ ಸ್ಥಾಪನೆಯಾಗುವ ಒಂದು ದೃಶ್ಯದಲ್ಲಿ ಪ್ರಜ್ವಲಿಸುವ ಬೆಳಕು ಮತ್ತು ‘ಅಳಗಿರಿ ನಂದಿನಿ..’ ಎಂಬ ಚಾಮುಂಡಾಂಬೆ ಕುರಿತ ಹಾಡು ಪ್ರೇಕ್ಷಕನ ಮೈ ರೋಮಾಂಚನಗೊಳಿಸಿ ಬಿಡುತ್ತದೆ.
ಮುಂದೆ ಅದು ಕೃತಕ ಸೃಷ್ಟಿ ಎಂದು ನಾಯಕ ವಿವರಿಸುವಾಗ ವಾಸ್ತವದ ನೆಲೆಯಲ್ಲಿ ಮನುಷ್ಯನನ್ನು ಭ್ರಮೆಗೊಳಿಪಡಿಸುವ ಅದ್ಭುತ ವಿಚಾರಗಳ ಸಾಕಾರವಾಗುತ್ತದೆ..
ಅದು ದೇವರಿದ್ದಾನೆಯೇ ಇಲ್ಲವೇ ಎಂಬುದರ ಹೊಸ ತರ್ಕದ ಮೇಲೆ. ದೇವರ ನೆಲೆ ಬೆಲೆ ಮತ್ತು ಮನುಷ್ಯನ ಸೋಗಲಾಡಿತನಗಳ ಸುತ್ತ ಆವರಿಸುವ ಅದೇ ಬೆಚ್ಚಿ ಬೀಳುವ ವಾಸ್ತವದ ನೆರಳು ಚಿತ್ರಕ್ಕೊಂದು ಮೆರುಗು ನೀಡಿದೆ.
ಸತ್ಯ ಹೇಳದ ಪುಣ್ಯಕೋಟಿ ಸತ್ಯ ಹರಿಶ್ಚಂದ್ರ ಸತ್ಯವನ್ನು ನುಡಿಯುವಂತಾಗುವುದು ನಾಟಕೀಯ ಅವಾಂತರಗಳ ಸೊಗಸಿನಿಂದ.
ಧರಣಿ ಮಂಡಳ ಗ್ರಾಮ ಎಂಬುದು ನಮ್ಮ ಗ್ರಾಮೀಣ ಭಾಗಗಳ ಪಡಿಯಚ್ಚು. ಅಲ್ಲಿ ನಡೆಯುವ ವಿದ್ಯಮಾನಗಳೂ ಅಷ್ಟೇ. ಹಳ್ಳಿಯಲ್ಲಿ ನಡೆಯುವ ಎಲ್ಲಾ ವರಸೆಗಳು ನಗೆಯ ಬುಗ್ಗೆಯಾಗುವುದು ಸತ್ಯನ ಪಂಚ್ ಡೈಲಾಗ್ ನ ಕಾರಣದಿಂದ.
ಆರಂಭದಲ್ಲಿ ಕೃಷ್ಣನ ವೇಷ ಹಾಕಿ ಭಗವದ್ಗೀತೆ ಸಾರಾಂಶ ಹೇಳುವ ಸತ್ಯ(ಕೋಮಲ್) ಆನಂತರ ಅಸತ್ಯದ ವಾರಸುದಾರನಾಗಿ ವಿಜೃಂಭಿಸುವ ಪರಿ ಅನನ್ಯ.
ಏಕೆಂದರೆ ಗ್ರಾಮವಿರಲಿ ಪಟ್ಟಣವಿರಲಿ ರಾಜಕಾರಣಿ ಮತ್ತು ಅವರ ಹಿಂಬಾಲಕರ ನಡೆ ಡಂಬಾಚಾರದಿಂದಲೇ ಕೂಡಿರುತ್ತದೆ. ಸುಳ್ಳು ವಿಜೃಂಭಿಸುತ್ತದೆ. ಸತ್ಯ ಸಮಯವನ್ನು ಎನ್ ಕ್ಯಾಷ್ ಮಾಡಿಕೊಳ್ಳುವುರಿಂದ ಆತನ ಜೇಬು ತುಂಬುತ್ತದೆ.
ಆದರೆ ಸತ್ಯನ ಅಸತ್ಯದಿಂದ ಆಪ್ತರು ಸಾಯುತ್ತಾರೆ. ಗ್ರಾಮದಲ್ಲಿ ಅಲ್ಲೋಲ ಕಲ್ಲೋಲ ಘಟನೆಗಳು ನಡೆಯುತ್ತವೆ.
ಹೀಗಿರುವಾಗ ಸತ್ಯ ಸಂಪೂರ್ಣ ಸತ್ಯವಂತನಾಗೇ ಪರಿವರ್ತನೆ ಹೊಂದಿದಾಗ ಆಗುವ ವೈಪರೀತ್ಯಗಳು ಏನು ಎಂಬುದು ಪ್ರಶ್ನೆಯಾದರೂ ಅದರಿಂದ ಎದುರಾಗುವ ತರ್ಕದಿಂದ ವಾಸ್ತವತೆ ಎದ್ದು ನಿಲ್ಲುತ್ತದೆ.
ಒಂದು ಹಂತದಲ್ಲಿ ಸತ್ಯ ಏಕಾಂಗಿಯಾದಾಗ, ಆತನ ಅನಾಥ ಪ್ರಜ್ಞೆಯೂ ಬಚ್ಚಿಕೊಳ್ಳುತ್ತದೆ. ಆಗ ಅಪ್ಪನ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಅದು ಕೆ.ಡಿ.ನಾಗಪ್ಪ ಅರ್ಥಾತ್ ವಜ್ರಮುನಿ.
ಕೋಮಲ್ ಕುಮಾರ್ ಅನಾಮಾತಾಗಿ ವಿಲನ್ ವಜ್ರಮುನಿ ಅವರನ್ನೇ ಆಹ್ವಾನಿಸಿ ಕೊಳ್ಳುತ್ತಾರೆ. ಜೊತೆಗೆ ಕಲೆಕ್ಷನ್ ಕಾಳಪ್ಪ ಬೇರೆ ಅಂದ ಮೇಲೆ ನಡೆಯಬಾರದ್ದೆಲ್ಲಾ ನಡೆಯುತ್ತದೆ. ಕೆಡುಕುತನಕ್ಕೆ ಬೇಕಾದ ಬೆಲೆಯೂ ದೊರೆಯುತ್ತದೆ.
‘ಎಲ್ಲರೂ ಗುಳೆ ಹೋದರೇ.. ಹಳ್ಳಿಗಳು ಅನಾಥರ ಆಶ್ರಮವೇ..’ ಎಂದು ಪ್ರಶ್ನಿಸುವ ಸತ್ಯನ ವರಸೆ ಸಾಮಾಜಿಕ ನೆಲೆಯಲ್ಲಿ ಇಂದಿನ ಗ್ರಾಮಗಳ ನೈಜ ಸ್ಥಿತಿಯನ್ನು ಬಿಂಬಿಸುವ ಕೈಗನ್ನಡಿಯಂತೆ ಕಾಣುತ್ತದೆ.
‘2900 ವಿಡಿಯೋ ಗಳು ಪ್ರಜ್ವಲಿಸುತ್ತವೆ..’ ಎಂದಾಗ ಕಣ್ಣಿಗೆ ಕಟ್ಟುವ ರಾಜಕೀಯ ಪರಿಸ್ಥಿತಿ ಹೀಗೆ ಚಿತ್ರದಲ್ಲಿ ಬರುವ ಪ್ರತಿ ಮಾತುಗಳು ಪ್ರತಿಮೆಯನ್ನು ಕಣ್ತುಂಬಿಕೊಡುತ್ತವೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಆ ಡೈಲಾಗ್ ಸುತ್ತ ಕೋಮಲ್ ಶ್ರಮ ಇರುತ್ತದೆ ಎಂಬುದನ್ನು ಬಲ್ಲವರು ಮಾತ್ರ ಬಲ್ಲರು.
ಸತ್ಯ ಹರಿಶ್ಚಂದ್ರ ಇಂದಿನ ವಾಸ್ತವ ಪ್ರಪಂಚದ ಕೈಗನ್ನಡಿ ಎಂದುಕೊಂಡರೆ, ಆತನ ಸುತ್ತಲೂ ಇರುವ ಗಡವ ಗುರು, ಮಾರಕ, ಬನಾನ ಜಯರಾಮ್, ಸುಗಂಧರಾಜು, ಸಣ್ಣಕ್ಕಿ, ಪೊಲೀಸ್ ಸಿಡಿಮಿಡಿ ಸಿಂಗ್ ಮತ್ತು ಇತರ ಪಾತ್ರಗಳು ನಮ್ಮ ಸುತ್ತಮತ್ತ ಇರುವವರೇ..
ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಕಂದಾಚಾರಗಳನ್ನು ವಿರೋಧಿಸುವ ಸತ್ಯ ಅಪ್ಪಟ ವಿಚಾರವಾದಿ ಮತ್ತು ವಾಸ್ತವವಾದಿ. ಆತ ನಮ್ಮ ನಡುವಿನ ವಾಸ್ತವದ ನೆಲೆ.
ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಕೋಮಲ್ ಕುಮಾರ್ ಅದನ್ನು ಹೆಗಲ ಮೇಲೆ ಹೊತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಸ್ಯದ ಮ್ಯಾನರಿಸಂ ಜೊತೆಗೆ ಖಡಕ್ ವಿಲನ್ ಆಗಿಯೂ ಅಬ್ಬರ ಮಾಡಿರುವ ಅವರು ಅಪ್ರತಿಮ ನಟ ಎಂಬುದರಲ್ಲಿ ಸಂಶಯವೇ ಇಲ್ಲ.
ಅಕ್ಷರಾ ಪಾತ್ರಕ್ಕೆ ಮತ್ತಷ್ಟು ಅವಕಾಶಗಳು ಬೇಕಿತ್ತು. ನಿಸರ್ಗಾ ಅಪ್ಪಣ್ಣ, ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್, ಮಾನಸಿ ಸುಧೀರ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಕಲೆಕ್ಷನ್ ಕಾಳಪ್ಪ ಜಯಸಿಂಹ ಮುಸುರಿ, ಮಾರಕ ಪಾತ್ರಧಾರಿ ಮಯೂರ್ ಪಟೇಲ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಷ್ ವಿಶೇಷವಾಗಿ ಗಮನ ಸೆಳೆಯುತ್ತಾರೆ.
ರಘು ರಾಮನಕೊಪ್ಪ ,ಮಹಾಂತೇಶ್, ಬೌಬೌ ಜಯರಾಮ್ , ನಿರ್ಮಾಪಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ , ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್ ಪಾತ್ರಗಳು ಗಮನಾರ್ಹ.
ಹಾಲೇಶ್ ಭದ್ರಾವತಿ ಛಾಯಾಗ್ರಹಣ ಹಾಗೂ ಧರ್ಮವಿಶ್ ಸಂಗೀತ ಚಿತ್ರಕ್ಕೆ ಪೂರಕ.
ಸಂಪೂರ್ಣ ಮನರಂಜನೆ ನೀಡುವ ಯಲಾಕುನ್ನಿ ಆಯಾ ಕಾಲಘಟ್ಟಗಳ ನೆಲೆಯಲ್ಲಿ ನಿಂತು ಚಿಂತನೆಗೆ ದೂಡುವ ಚಿತ್ರವಾಗಿಯೂ ನಿಲ್ಲುತ್ತದೆ.