
ರೇಟಿಂಗ್ : 3.5/5
ನಿರ್ಮಾಣ : ಆನಂದ್ ಕುಮಾರ್
ನಿರ್ದೇಶನ : ವಿಜಯ್
ಹಣ ಮಾಡುವ ಮಾದಕ
ವ್ಯಸನದ ಸುತ್ತ..

ಸಾಮಾಜಿಕವಾಗಿ ಡ್ರಗ್ ಮಾಫಿಯಾ ವಿಶಾಲವಾದ ನೆಲೆಯನ್ನು ಕಂಡುಕೊಂಡಿದೆ. ಅದರ ವಿಸ್ತಾರ ಕಬಂಧ ಬಾಹು ಯುವ ಸಮೂಹದ ನೆಮ್ಮದಿಯನ್ನು ಕಬಳಿಸುತ್ತಿದೆ.
ಕೋಟಿ ಕೋಟಿ ವ್ಯವಹಾರದ ಡ್ರಗ್ ಮಾಫಿಯಾ ಈ ಬಗೆಯಲ್ಲಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಪೊಲೀಸ್ ವ್ಯವಸ್ಥೆ ನೆರವಾಗಿದೆ ಎಂಬ ಪ್ರತಿಪಾದನೆ ಬಹಳ ಹಿಂದಿನಿಂದಲೂ ಇದೆ.
ಇದೇ ಡ್ರಗ್ ಮಾಫಿಯಾ ಮತ್ತು ಅದರ ಡಾನ್ ಗಳ ಸುತ್ತ ನಡೆಯುವ ಕದನದಲ್ಲಿ ಪೊಲೀಸ್ (ಇನ್ಸ್ ಪೆಕ್ಟರ್) ಕುಟುಂಬವೊಂದು ಅಮಾಯಕತ್ವ ಪ್ರದರ್ಶಿಸಲು ಹೋಗಿ ಒಳ ಸುಳಿಗೆ ಸಿಲುಕುತ್ತದೆ.
ನಿಷ್ಠಾವಂತ ಪೊಲೀಸ್ ಅಧಿಕಾರಿ ಎಂಬ ಬಿರುದು ಪಡೆದಿರುವ ಶಕ್ತಿ ಪ್ರಸಾದ್ (ಅಚ್ಯುತ್ ಕುಮಾರ್) ಮಗ ಅರ್ಜುನ್ ಒಂದು ಚಿಕ್ಕ ಪ್ರೇಮದ ಹುಡುಕಾಟದಲ್ಲಿ ಡ್ರಗ್ ಮಾಫಿಯಾ ಭೇದಿಸಲು ಯತ್ನಿಸುತ್ತಾನೆ. ಆದರೆ ಅಗಾಧ ಶಕ್ತಿ ಹೊಂದಿರುವ ಪಡೆ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ.
ಡ್ರಗ್ ಮಾಫಿಯಾದ ಖಳರು ಮತ್ತು ಪೊಲೀಸರ ನಡುವೆ ನಡೆಯುವ ಆಟದಲ್ಲಿ ಅರ್ಜುನ್ ಕೂಡ ದಾಳವಾಗುತ್ತಾನೆ. ಕೊನೆಗೆ ಎಲ್ಲವನ್ನು ಹಿಮ್ಮೆಟ್ಟಿಸಿ ವಿಜಯಿಯಾಗುತ್ತಾನೆ.
ಈ ದಾರಿಯಲ್ಲಿ ಪೊಲೀಸ್ ವ್ಯವಸ್ಥೆಯ ಲೋಪವನ್ನು ವಿಚಿತ್ರ ಕಲ್ಪನೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು. ಆದರೆ ಪೊಲೀಸ್ ಶಿಷ್ಟಾಚಾರದ ನೈಜ ಸಂಗತಿಗಳು ಮಾಯವಾಗಿವೆ.
ಮೊದಲರ್ಧ ಪ್ರೀತಿ ಪ್ರೇಮ ಹೊಡೆದಾಟ ಹೀಗೆ ಅತ್ಯಂತ ಲವಲವಿಕೆಯಿಂದ ಸಾಗುವ ಸಿನಿಮಾ ಉತ್ತರಾರ್ಧದಲ್ಲಿ ಹೊಡೆದಾಟ ಮತ್ತು ರಕ್ತಪಾತದ ತಾಣವಾಗಿ ಪರಿವರ್ತಿತವಾಗಿ ದಾರಿ ತಪ್ಪುತ್ತದೆ. ಹಾಗಾಗಿ ಕ್ರೌರ್ಯದ ವೈಪರೀತ್ಯದಲ್ಲಿ ಗೊಂದಲ ಗೋಜಲು ಹೆಚ್ಚಾಗಿದೆ.

ಮುಖ್ಯ ಪಾತ್ರದಲ್ಲಿರುವ ಹೇಮಂತ್ ಕುಮಾರ್ ಮುಖದ ಭಾವಗಳನ್ನು ಸಡಿಲಗೊಳಿಸುವುದಿಲ್ಲ; ಆದರೆ ಅತ್ಯಂತ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡು ಹೊಡೆದಾಟದಲ್ಲಿ ಅಬ್ಬರಿಸಿರುವ ರೀತಿಯಲ್ಲಿ ಕನ್ನಡಕ್ಕೆ ಒಬ್ಬ ಆಕ್ಷನ್ ಹೀರೋ ಸಿಕ್ಕಿದಂತಾಗಿದೆ.
ನಟಿಯರಾದ ಗೋಪಿಕಾ ಸುರೇಶ್, ಅಯೆನಾ ಸಿಕ್ಕ ಅವಕಾಶವನ್ನು ಸದ್ದುಪಯೋಗ ಪಡಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಎಂದಿನ ಸಹಜ ನಟನೆಯಲ್ಲಿ ಮಿಂದೆದ್ದಿದ್ದರೆ, ರಾಘು ಶಿವಮೊಗ್ಗ, ಬಿ.ಎಂ.ಗಿರಿರಾಜ್, ಹೀರೇಮಠ, ಅಂಕಿತಾ ಜಯರಾಮ್, ಮಾನಸಿ ಸುಧೀರ್ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಕಾರ್ತಿಕ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕ.
