Snehapriya.com

June 8, 2025

ಸಿನಿಮಾ-ಗಾಸಿಪ್

ಅಂದು ಮೊದಲ ಮಳೆಯಂತೆ ಇಂದು ಮಳೆಯಂತೇ.. ಬಾ..

Social Share :

*ಸಂಜು ವೆಡ್ಸ್ ಗೀತಾ-2 ಹಾಡು*

* ಹಾಡುಗಳೇ ಆಹ್ವಾನ ಪತ್ರಿಕೆ *

* ಜನವರಿ 10ಕ್ಕೆ ಚಿತ್ರ ಬಿಡುಗಡೆ *

ಕಣ್ಣೀರು ಬರಿಸುವ ಪ್ರೇಮಕಥೆ ಹಾಗೂ ಸುಮಧುರ ಹಾಡುಗಳಿಗೆ ಹೆಸರಾದ ನಿರ್ದೇಶಕ ನಾಗ್ ಶೇಖರ್ ಅವರ ಹೊಸ ಚಿತ್ರ ‘ಸಂಜು ವೆಡ್ಸ್ ಗೀತಾ-2’ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದ ಹೊಸ ಹಾಡು ‘ಮಳೆಯಂತೇ ಬಾ..’ ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತಿದೆ.

‘ಮೈನಾ’ ಚಿತ್ರದಲ್ಲಿ ‘ಮೊದಲ ಮಳೆಯಂತೆ.. ‘ ಎಂಬ ಸುಮಧುರ ಹಾಗೂ ಸಾರ್ವಕಾಲಿಕ ಹಾಡು ನೀಡಿದ ನಾಗ್ ಶೇಖರ್ ತಂಡ ಈ ಬಾರಿ ‘ಮಳೆಯಂತೆ ಬಾ..’ ಎಂಬ ಹಾಡಿನ ಆಹ್ವಾನ ಕೊಟ್ಟಿದೆ.

ಆದರೆ ನಾಗ್ ಶೇಖರ್ ಅವರ ತಂಡದಲ್ಲಿ ಈ ಬಾರಿ ಸಂಗೀತ ನಿರ್ದೇಶಕರಾಗಿ ಜೆಸ್ಸಿ ಗಿಫ್ಟ್ ಇಲ್ಲ; ಬದಲಿಗೆ ಶ್ರೀಧರ್ ಸಂಭ್ರಮ್ ಇದ್ದಾರೆ. ಎಂದಿನಂತೆ ಮಲೆನಾಡಿನ ಕವಿ ಕವಿರಾಜ್ ಸಾಹಿತ್ಯವಿದೆ.

ಮುದ್ದು ಮುದ್ದಾಗಿ ಕಾಣುವ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸ್ಟೈಲೀಸ್ ಆಗಿ ಕಾಣುವ ಶ್ರೀನಗರ ಕಿಟ್ಟಿ ಈ ಹಾಡಿನ ವೈಶಿಷ್ಟ್ಯ. ಅದ್ದೂರಿ ಶೆಟ್ ಮತ್ತು ಸುಂದರ ತಾಣಗಳು ಹಾಡಿನ ವೈಭವ ಹೆಚ್ಚಿಸಿವೆ.

ಈ ಸುಮಧುರ ಹಾಡನ್ನು ಶ್ರೀಧರ್ ವಿ.ಸಂಭ್ರಮ್ ಸಂಯೋಜಸಿದ್ದು, ನಾಗ್ ಶೇಖರ್ ಅವರ ಛಾಯೆ ಎದ್ದು ಕಾಣುವಂತೆ ವೈವಿಧ್ಯಮಯ ಒಳನೋಟಗಳನ್ನು ಹಾಡು ಒಳಗೊಂಡಿದೆ.

ಈಚೆಗೆ ನಿರ್ಮಾಪಕ ಛಲವಾದಿ ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲಾಯಿತು.

ನಾಗ್ ಶೇಖರ್, ಶ್ರೀ ನಗರ ಕಿಟ್ಟಿ, ಛಲವಾದಿ ಕುಮಾರ್, ಶ್ರೀಧರ್ ಸಂಭ್ರಮ್ ಈ ಸಂದರ್ಭದಲ್ಲಿ ಹಾಜರಿದ್ದು, ಹಾಡು ಹುಟ್ಟಿದ ಕ್ಷಣಗಳನ್ನು ಮೆಲುಕು ಹಾಕಲಾಯಿತು.

ಶಿಡ್ಲಘಟ್ಟ ದಿಂದ ಸ್ವಿಟ್ಜರ್ಲೆಂಡ್‌‌ ವರೆಗೆ ಇರುವ ಈ ಚಿತ್ರದಲ್ಲಿ ರೈತನ ಸಾಹಸ; ಪ್ರೇಮಿಯ ತ್ಯಾಗ ಎದ್ದು ಕಾಣುತ್ತದೆ. ಇದೊಂದು ಅಪೂರ್ವ ಪ್ರೇಮಕಥೆಯಾಗಿದೆ ಎಂಬುದು ನಾಗ್ ಶೇಖರ್ ವಿವರಣೆ.

ಚಿತ್ರದ ಟೀಸರ್ ಅಥವಾ ಟ್ರೈಲರ್ ಹೊರಬರುವುದಿಲ್ಲ; ನಮ್ಮ ಈ ಚಿತ್ರಕ್ಕೆ ಹಾಡುಗಳೇ ಆಹ್ವಾನ ಪತ್ರಿಕೆ ಇದಂತೆ ಎಂಬ ಉತ್ತರ ಕೊಟ್ಟರು ನಿರ್ದೇಶಕರು.

ಈ ಹಾಡು ಹಿಂದಿನ ‘ಗಗನವೇ ಬಾಗಿ.
‘ ಹಾಡಿನಂತೆ ಇರಬೇಕೆಂಬ ಬಯಕೆ ನಮ್ಮದಾಗಿತ್ತು. ಅದಕ್ಕಾಗಿ ಶ್ರೇಯ ಘೋಶಾಲ್ ಅವರ ಕಡೆಯಿಂದ ಹಾಡಿಸುವ ಪ್ರಯತ್ನವಾಯಿತು. ಆದರೆ ಅವರ ಲಭ್ಯತೆ ಇರದ ಕಾರಣ ಸಂಗೀತಾ ರವೀಂದ್ರನಾಥ್ ಎಂಬ ಹೊಸ ಗಾಯಕಿ ಅತ್ಯುತ್ತಮವಾಗಿ ಈ ಹಾಡನ್ನು ಹಾಡಿದಾಗ, ಅವರಿಂದಲೇ ಮತ್ತೆರಡು ಹಾಡು ಹಾಗೂ ವಂದಿತಾ ಅವರಿಂದ ಒಂದು ಹಾಡು ಹಾಡಿಸಲಾಗಿದೆ ಎಂಬ ವಿವರ ಬಂತು.

ಆನಂದ್ ಆಡಿಯೋ ಮೂಲಕ ಹೊರ ಬಂದಿರುವ ಹಾಡನ್ನು ಕಿಚ್ಚಾ ಸುದೀಪ್ ಬಿಡುಗಡೆ ಮಾಡಿದ್ದಾರೆ ಎಂಬ ವಿವರ ನೀಡಿತು ಚಿತ್ರತಂಡ. ಇದೇ ಜನವರಿ 10 ರಂದು ಚಿತ್ರವು ತೆರೆ ಕಾಣುತ್ತಿದ್ದು, ಪ್ರಚಾರದ ಸಿದ್ಧತೆ ತಂಡ ಮಾಡಿಕೊಂಡಿದೆ ಎಂಬ ವಿವರ ಕೂಡ ಬಂತು..

ಶ್ರೀನಗರ ಕಿಟ್ಟಿ ಹಾಗೂ ಶ್ರೀಧರ್ ಸಂಭ್ರಮ್ ಇಬ್ಬರಿಗೂ ಈ ಚಿತ್ರ ಮತ್ತೆ‌ ಭರವಸೆ ಮತ್ತು ವಿಶೇಷ. ‘ಮಳೆಯಂತೆ ಬಾ..’ ಹಾಡಿನ ಸಂಭ್ರಮದಲ್ಲಿ ಮಿಂದೆದ್ದ ಅವರು ಅತ್ಯಂತ ಭರವಸೆಯಲ್ಲಿ ಮಾತನಾಡಿದರು.

ಹಿರಿಯ ಪ್ರಚಾರಕರ್ತ ನಾಗೇಂದ್ರ‌ ಅವರು ಹಿಂದೆ ಸಂಜು ವೆಡ್ಸ್ ಗೀತಾ ಬಂದಾಗಿನ ಕ್ಷಣಗಳನ್ನು ಮೆಲುಕು ಹಾಕಿ ಈ ಚಿತ್ರ ಕೂಡ ಸೂಪರ್ ಹಿಟ್ ಆಗುತ್ತದೆ ಎಂದು ಹಾರೈಸಿದರು.

Social Share :

ಅಲೋಕ್ ಕನಸಿನ ಸಿನಿಮಾ ಹೆಸರು ಕುಡ್ಲ ‌ನಮ್ದು ಊರು

Social Share :

ಕ್ರಿಯಾಶೀಲ ಕೆಲಸಗಳಲ್ಲಿ ಆಸಕ್ತಿ ಉಳ್ಳವರನ್ನು ಸಿನಿಮಾ ಕ್ಷೇತ್ರ ಕೈ ಬೀಸಿ ಕರೆಯುತ್ತದೆ; ಆ ಮೂಲಕ ಹೊಸ ಹೊಸ ಪ್ರಯತ್ನಗಳಿಗೆ ನಾಂದಿ ಹಾಡುತ್ತದೆ..

ಕರಾವಳಿ ಭಾಗದಲ್ಲಿ ನೆಲೆಸಿದವರೂ ಸಿನಿಮಾಸಕ್ತಿಯಲ್ಲಿ ಮಿಂದು ಸ್ಯಾಂಡಲ್ ವುಡ್ ನಲ್ಲಿ ಮಾಡಿರುವ ಮೋಡಿ ಕಣ್ಣ ಮುಂದಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಪ್ರಸಾದ್ (ಅಲೋಕ್) ಎಂಬುವರು ಮಾಡಿರುವ ಪ್ರಯತ್ನವೀಗ ಗಮನ ಸೆಳೆದಿದೆ.

ಚಿತ್ರದ ಹೆಸರು ‘ಕುಡ್ಲ ನಮ್ದು ಊರು’. ದುರ್ಗಾ ಪ್ರಸಾದ್ ಅವರೇ ನಿರ್ಮಾಣ ಮತ್ತು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನಿರ್ಮಾಣ ಆಸಕ್ತಿ ಬೆಳಸಿಕೊಂಡ ದುರ್ಗಾ ಪ್ರಸಾದ್, ಚಿತ್ರವನ್ನು ಮಾಡಿಯೇ ತೀರುವ ಅದಮ್ಯ ಇಚ್ಛೆಯಿಂದ ಮಾಡಿರುವ ಚಿತ್ರಕ್ಕೆ ತಮ್ಮ ಊರಿನ ಹೆಸರನ್ನೇ ಇಟ್ಟಿರುವುದು ವಿಶೇಷ.

ಸ್ಟಾರ್ ನಟರೊಬ್ಬರ ಅಭಿಮಾನ ಕಾರಣದಿಂದ ಮನೆ ಬಿಟ್ಟು ಬೆಂಗಳೂರಿಗೆ ಬಂದು ಇಲ್ಲಿ ಆದ ಎಲ್ಲಾ ರೀತಿಯ ಅನುಭವಗಳ ಜೊತೆ ಮತ್ತೆ ಊರಿಗೆ ವಾಪಸ್ ಬಂದ ದುರ್ಗಾ ಪ್ರಸಾದ್ ಮುಂದೆ ಮಾಡಿದ್ದು ಸಿನಿಮಾ ತಂತ್ರಜ್ಞಾನ ಕಲಿಕೆ.

ಹೊಟ್ಟೆ ಪಾಡಿಗಾಗಿ ಇಂಟಿರಿಯರ್ ಡಿಸೈನಿಂಗ್ ಕೆಲಸ ಮಾಡುತ್ತಾ ಸಿನಿಮಾ ಬಗ್ಗೆ ತಿಳಿದುಕೊಳ್ಳುತ್ತಾ ಮಾಡಿದ ಸಿನಿಮಾ ‘ನಮ್ದು ಊರು ಕುಡ್ಲ’.

ಇದೀಗ ಚಿತ್ರವು ಬಿಡುಗಡೆಯ ಹಂತಕ್ಕೆ ಬಂದಿದ್ದು ಸದ್ಯವೇ ಚಿತ್ರವನ್ನು ಬಿಡುಗಡೆ ಮಾಡುವ ಆಶಯವನ್ನು ಹೊರ ಹಾಕಿತು ಚಿತ್ರತಂಡ. ಅದುವೇ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭದಲ್ಲಿ..

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ.ವಿಶ್ವನಾಥ್ ಈ ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಕೃತಾರ್ಥ ಪ್ರೊಡಕ್ಷನ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ದುರ್ಗಾಪ್ರಸಾದ್‌ (ಅಲೋಕ್‌) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

ಮುಖ್ಯ ಪಾತ್ರದಲ್ಲಿ ದುರ್ಗಾಪ್ರಸಾದ್‌ ನಟಿಸಿದ್ದು, ಇನ್ನುಳಿದಂತೆ ರಮೇಶ್‌, ಪ್ರಕಾಶ್‌ ತುಮ್ಮಿನಾಡು, ಸ್ವರಾಜ್‌ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್‌, ನಿರೀಕ್ಷಾ ಶೆಟ್ಟಿ, ದಿಲೀಪ್‌ ಕಾರ್ಕಳ, ಪ್ರಜ್ವಲ್‌ ಹಾಗೂ ಇತರರು ನಟಿಸಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಈ ಹಾಡುಗಳಿಗೆ ನಿತಿನ್‌ ಶಿವರಾಮ್‌ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್‌ ಆರ್‌. ಶೆಟ್ಟಿ ಛಾಯಾಗ್ರಹಣ, ನಿಶಿತ್‌ ಪೂಜಾರಿ ಸಂಕಲನ, ರಕ್ಷಿತ್‌ ಎಸ್‌. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

Social Share :

20 ನಿರ್ಮಾಪಕರ ಕ್ಯಾಪಿಟಲ್ ಸಿಟಿ ಟ್ರೈಲರ್ ಬಿಡುಗಡೆಗೆ ವೇದಿಕೆ ಕ್ರೌಡ್

Social Share :


ಬೆಂಗಳೂರಿನ ಭೂಗತ ಜಗತ್ತಿನ ಸಂಘರ್ಷದ ಕಥೆಯನ್ನು ಹೊಂದಿರುವ ಈ ಚಿತ್ರ ನಿರ್ಮಾಣವಾಗಿರುವುದು ಕ್ರೌಡ್ ಫಂಡ್ (ಗುಂಪಿನ ಹಣ) ಮೂಲಕ.

ಅದೇ ಕ್ಯಾಪಿಟಲ್ ಸಿಟಿ..!

ನಟನೆ ಹಾಗೂ ಸಿನಿಮಾಸಕ್ತಿಯಲ್ಲಿ ಮಿಂದೆದ್ದ ಜನರು ಆಸಕ್ತಿ ವಹಿಸಿ ‘ತಮ್ಮಿಂದ ಇಷ್ಟು ಹಣ’ ಎಂದು ಹೂಡಿಕೆ ಮಾಡಿದವರ ಸಂಖ್ಯೆ ಸುಮಾರು ಇಪ್ಪತ್ತು.

ಈಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕ್ಕಿಕ್ಕಿರಿದ ಜನಸಂದಣಿ.

ವೇದಿಕೆಯ ಮೇಲೆಯೂ ಅದು ಪ್ರದರ್ಶನವಾಗಿದ್ದು ವಿಶೇಷ. ಸ್ವಾಮೀಜಿಗಳು, ಚಿತ್ರರಂಗದ ಗಣ್ಯರು ನಿರ್ಮಾಪಕರು ಹಾಗೂ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದ ಆ ಕ್ಷಣಗಳು ಅತ್ಯಂತ ಸಂಭ್ರಮದಿಂದ ಕೂಡಿತ್ತು.

ಆರ್ ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ರಾಜೀವ್ ರೆಡ್ಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇನಿಫಿನಿಟಿ ಕ್ರಿಯೇಷನ್ಸ್ ಸಂಸ್ಥೆಯ ಬ್ಯಾನರ್ ನಡಿ ಸುಮಾರು 20 ಮಂದಿ ಈ ಚಿತ್ರದ ನಿರ್ಮಾಪಕರು.

ಅಪ್ಪು ಪಪ್ಪು, ಮಸ್ತ್ ಮಜಾ ಮಾಡಿ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ ಹಿನ್ನೆಲೆ ಆರ್.ಅನಂತರಾಜು ಅವರಿಗಿದೆ.

ರಾಜೀವ್ ರೆಡ್ಡಿ ಈ ಮುಂಚೆ ‘ರಂಭಾ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳನ್ನು ಜಯನಗರ ಎಂಎಲ್ ಎ ಸಿ.ಕೆ.ರಾಮಮೂರ್ತಿ, ಮಾಜಿ ಸಚಿವ ರೇಣುಕಾಚಾರ್ಯ ಅನಾವರಣ ಮಾಡಿದರು. ಶಿವಗಂಗೆಯ ಶ್ರೀಮಲಯ ಶಾಂತಮುನಿ ಸ್ವಾಮಿಗಳು ಹಾಗೂ ಶ್ರೀ ಆದಿತ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಡಿ.ಕೆ.ರಾಮಕೃಷ್ಣ, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ‌

ರಾಜೀವ್ ರೆಡ್ಡಿ ಎದುರು ಪ್ರೇರಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್ ಮೊದಲಾದ ಹಿರಿಯ ಕಲಾವಿದರು ಹಾಗೂ ಚಿತ್ರ‌ದ ಕೆಲವು ನಿರ್ಮಾಪಕರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, 2025 ರ ಜನವರಿ ಅಂತ್ಯಕ್ಕೆ ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ದೇಶಕ ಅನಂತರಾಜು ತಿಳಿಸಿದರು.

ಇದೊಂದು ಪ್ರತೀಕಾರದ ಕಥೆ. ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುವಿರಿ ಎಂಬುದನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂಬುದು ರಾಜೀವ್ ರೆಡ್ಡಿ ವಿವರಣೆ.

ನಟಿ ಪ್ರೇರಣ, ನಿರ್ಮಾಪಕರಾದ ಮಂಜುನಾಥ್,‌ ಕರ್ನಲ್ ರಾಜೇಂದ್ರ, ಶಿವಪ್ಪ ಕುಡ್ಲೂರು, ಆಂಟೋನಿ ರಾಜ್, ಕೃಷ್ಣಮೂರ್ತಿ ಹಾಗೂ ಸಂಗೀತ ನಿರ್ದೇಶಕ ನಾಗ್ ಚಿತ್ರದ ಕುರಿತು ಮಾಹಿತಿ ನೀಡಿದರು.

Social Share :

ಮಲೆನಾಡಿನ ವೈವಿಧ್ಯ ಸಾರುವ ಪಾಠಶಾಲಾ ಟೀಸರ್ ಬಿಡುಗಡೆ

Social Share :

ಈ ಚಿತ್ರ ಮಲೆನಾಡಿನ ಪರಿಸರ ಸೇರಿದಂತೆ ಅಲ್ಲಿನ ಭಾಷಾ ವೈವಿಧ್ಯ; ಜನರ ಮನೋಭಾವ ಸೇರಿದಂತೆ ಅನೇಕ ವಿಷಯಗಳನ್ನು ಕಟ್ಟಿಕೊಡುತ್ತದೆ..

ಹೆಸರು ಪಾಠಶಾಲಾ..!

ಈ ಹಿಂದೆ ‘ಗ್ಯಾಪಲ್ಲೊಂದು ಸಿನಿಮಾ’ ಹಾಗೂ ‘ಓಮಿನಿ’ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಹೆದ್ದೂರ್ ಮಂಜುನಾಥ್ ಶೆಟ್ಟಿ ಇದರ ನಿರ್ದೇಶಕ.

ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಧಾಕರ ಬನ್ನಂಜೆ ಅವರ ಶಿಷ್ಯ ಹಾಗೂ ಸಿಹಿಕಹಿ ಚಂದ್ರು‌ ಅವರ ಗರಡಿಯಲ್ಲಿ ಪಳಗಿರುವ ಮಂಜುನಾಥ್ ಶೆಟ್ಟಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ ಅನುಭವ ಬೆನ್ನಿಗಿದೆ.

‘ಪಾಠಶಾಲಾ’ ಕೇವಲ ಮಕ್ಕಳ ಕಥೆಯಲ್ಲ; ಮಲೆನಾಡು ಪರಿಸರದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ನಡೆಗಳ ಮತ್ತು ವಿದ್ಯಮಾನಗಳ ಸುತ್ತ ನಡೆಯುವ ಕಥೆಯಾಗಿದೆ ಎಂಬ ವಿವರ ಬಂತು ನಿರ್ದೇಶಕರಿಂದ.

ಹಿರಿಯ ನಿರ್ದೇಶಕ ಸುಧಾಕರ ಬನ್ನಂಜೆ ಈ ಚಿತ್ರದಲ್ಲಿ ಶಾಲಾ ಮಾಸ್ತರರ ಪಾತ್ರವನ್ನು ನಿರ್ವಹಿಸಿದ್ದಾರೆ. ಟೀಸರ್ ಬಿಡುಗಡೆಯ ಈ ಸಮಾರಂಭದಲ್ಲಿ ಗುರುವಿಗೆ ಗೌರವ ಸಮರ್ಪಣೆ ಮಾಡಿದರು ಮಂಜುನಾಥ್ ಶೆಟ್ಟಿ.

ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ದಂಪತಿಗಳು ಟೀಸರ್ ಬಿಡುಗಡೆ ಮಾಡಿದ ಸಮಾರಂಭದಲ್ಲಿ
ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಹೆಚ್.ಎಸ್.ರಾಘವೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ,‌ ವಿಜಯ್ ಶೆಟ್ಟಿ, ಕೆರಬೇಟೆ ಖ್ಯಾತಿಯ ಗೌರಿ ಶಂಕರ್, ರವೀಂದ್ರ ಸಿಂಗ್ ಮೊಲಾದವರು ಉಪಸ್ಥಿತರಿದ್ದರು.

ಎಂ.ಎಸ್.ಸ್ಕ್ವೇರ್ ಮೂವೀಸ್ ಬ್ಯಾನರ್ ನಡಿ ಹೆದ್ದೂರು ಮಂಜುನಾಥ್ ಶೆಟ್ಟಿ ಹಾಗೂ ಅವರ ಪತ್ನಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸ್ನೇಹಿತರ ಸಹ ನಿರ್ಮಾಣ ಹಾಗೂ ಬೆಂಬಲ ಚಿತ್ರಕ್ಕಿದೆ.

ತೀರ್ಥಹಳ್ಳಿ ತಾಲ್ಲೂಕಿನ. ಕಮ್ಮರಡಿ ಹಾಗೂ ಸುತ್ತ ಮುತ್ತಲಿನ ಸ್ಥಳಗಳಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಲಾಯಿತು ಎಂಬ ವಿವರ ಕೊಟ್ಟರು ನಿರ್ದೇಶಕರು.

ಹಿರಿಯರಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಹಾಗೂ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

80 ಹಾಗೂ 90 ರ ದಶಕದ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತಲ್ಲಿನ ಕಥಾಹಂದರ ಹೊಂದಿರುವ ಚಿತ್ರ ಮಾರ್ಚ್ ವೇಳೆಗೆ ಬಿಡುಗಡೆ ಕಾಣಲಿದೆ ಎಂಬ ಮಾಹಿತಿ ನೀಡಿದರು ನಿರ್ದೇಶಕರು.

Social Share :

ಎರಡು ಸಮಾನಾಂತರ ಕಥೆಗಳ ಸ್ವೇಚ್ಛಾ ಟ್ರೈಲರ್ ಬಿಡುಗಡೆ..

Social Share :

ಸಾಮಾಜಿಕ ನೆಲೆಯಲ್ಲಿ ಸ್ವೇಚ್ಛಾಚಾರ ಎಂಬುದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪ್ರೀತಿ ಪ್ರೇಮ ಹಾಗೂ ಬಾಂಧವ್ಯದ ವ್ಯತ್ಯಾಸಗಳು ಹೇಗೆಂದು ಸಾರುವ ಚಿತ್ರ ‘ಸ್ವೇಚ್ಛಾ’ ಸದ್ಯವೇ ಬಿಡುಗಡೆ ಕಾಣುತ್ತಿದೆ.

ಎರಡು ವಿಭಿನ್ನ ನೆಲೆಯ ಕಥೆಗಳು ಸಮಾನಾಂತರವಾಗಿ ಪ್ರೇಕ್ಷಕನನ್ನು ರಂಜಿಸುತ್ತವೆ. ಸ್ವೇಚ್ಛಾಚಾರ ಅತಿಯಾದರೆ ಏನು ಎಂಬ ಪರಿಣಾಮಗಳು ಗೋಚರವಾಗುತ್ತವೆ.

ಸುರೇಶ್ ರಾಜು ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ಅಡಿ ಸ್ಟಾರ್ ಮಸ್ತಾನ್ ಹಾಗೂ ಕೆ.ಆರ್. ಮುರಹರಿ ರೆಡ್ಡಿ ನಿರ್ಮಿಸಿದ್ದಾರೆ.

ಈಚೆಗೆ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರದ ವಿವರಗಳು ತೆರೆದುಕೊಂಡವು. ಅನ್ವೀಶ್ ಹಾಗೂ ಪವಿತ್ರಾ ನಾಯಕ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ 90ರ ದಶಕ ಹಾಗೂ ಪ್ರಸ್ತುತ ಸನ್ನಿವೇಶದ ಘಟನಾವಳಿಗಳು ಸ್ವೇಚ್ಛಾಚಾರದ ಅನ್ವೇಷಣೆ ಮಾಡುತ್ತವೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.

ಸ್ವೇಚ್ಛಾ ನವರಸಗಳನ್ನೂ ಒಳಗೊಂಡ ಪ್ರೇಮಕಥೆಯಾಗಿದ್ದು, 90ರ ದಶಕದ ಹಾಗೂ ಈಗಿನ ಕಾಲಘಟ್ಟದ ಕಥೆಗಳನ್ನು ಸಮಾನಾಂತರವಾಗಿ ಹೇಳುತ್ತಾ ಸಾಗುತ್ತದೆ. ಕೂಲಿ ಕೆಲಸ ಮಾಡುವ ಹುಡುಗನೊಬ್ಬನ ಪ್ರೀತಿ ಎಷ್ಟರಮಟ್ಟಿಗೆ ಗಾಢವಾಗಿರುತ್ತದೆ. ಮುಂದೆ ಅದು ಯಾವೆಲ್ಲ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂದು ಒಂದು ಕಥೆಯಲ್ಲಿ ಹೇಳಲು ಪ್ರಯತ್ನಿಸಿದರೆ, ಮತ್ತೊಂದರಲ್ಲಿ ತಾಯಿ ಮಗಳ ಬಾಂಧವ್ಯದ ಕಥೆಯನ್ನು ನಿರೂಪಿಸಲಾಗಿದೆ.

ಕಷ್ಟದಲ್ಲಿ ಆಸರೆಯಾದ ತಾಯಿಗೆ ಮಗಳ ಪ್ರೀತಿಯೇ ಸಿರಿತನವಾದರೆ, ಆ ಪುಟ್ಟ ಮಗಳು ಸ್ವೇಚ್ಛಾ, ತನ್ನ ತಾಯಿಗೋಸ್ಕರ ಏನೇಲ್ಲಾ ಮಾಡುತ್ತಾಳೆ ಎಂಬುದನ್ನು ಮನಕಲಕುವ ಕಥೆಯೊಂದಿಗೆ ಭಾವನಾತ್ಮಕವಾಗಿ ಕಟ್ಟಿ ಕೊಡಲಾಗಿದೆ ಎಂಬ ವಿವರಗಳು ಬಂದವು.

ಚಿತ್ರದ 5 ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಅನುರಾಮ್ ಹಾಗೂ ಚೇತನ್ ನಾಯಕ್ ಗಾಯಕರು.

ಕರ್ನಾಟಕದ ಗಡಿಯ ರಾಯಚೂರು, ಬೂರ್ದಿಪಾಡು, ಶ್ರೀರಂಗಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ನಿರ್ಮಾಪಕರಾದ ಮುರಹರಿ ರೆಡ್ಡಿ ಹಾಗೂ ಸ್ಟಾರ್ ಮಸ್ತಾನ್ ಚಿತ್ರದ ನಿರ್ಮಾಣದ ವಿವರಗಳನ್ನು ನೀಡಿದರು. ಸ್ವೇಚ್ಛಾಚಾರದ ಸಲುವಾಗಿ ಪ್ರತಿಯೊಬ್ಬರ ಹೋರಾಟ ಹೇಗಿರುತ್ತದೆ ಎಂಬುದನ್ನು ಹೇಳುವುದೇ ಕಥೆಯಾಗಿದೆ ಎಂದರು ನಿರ್ದೇಶಕ ಸುರೇಶ್ ರಾಜು.

ಅನ್ವಿಶ್ ಮತ್ತು ಪವಿತ್ರ ನಾಯಕ್ ಚಿತ್ರದ ಪ್ರೇಮ ಕಥೆಯ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಕೆ.ಆರ್. ಮುರಹರಿ ರೆಡ್ಡಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಂದು ಕಥೆಯಲ್ಲಿ ನಟಿ ಸ್ಪಂದನ ಮತ್ತು ಶ್ರೀಲಕ್ಷ್ಮಿ ತಾಯಿ, ಮಗಳಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಅನ್ವೀಶ್ ಅವರಿಗೆ ಇದು‌ ಮೂರನೇ ಚಿತ್ರ. ಈ ಮುಂಚೆ ಅವರು ಆಲ್ವಿನ್ ನಿರ್ದೇಶನದ ‘ಜಲ್ಲಿಕಟ್ಟು’ ಹಾಗೂ ಯತಾರ್ಥ ಚಿತ್ರದಲ್ಲಿ ಅಭಿನಯಿಸಿರುವ ವಿವರಗಳು ಬಂದವು.

Social Share :

ಕೆಡಿ ಶಿವ ಶಿವ ಹಾಡು ಅದ್ದೂರಿ ಪ್ರೇಮ್ ಸಿನಿಮಾ ಪ್ರೇಮದ ವೈಖರಿ

Social Share :

ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಾಡು ಅದ್ದೂರಿ ಎಂಬುದರಲ್ಲಿ ಸಂಶಯವೇ ಇಲ್ಲ; ಆದರೆ ಈ ಹಾಡು ಕನ್ನಡ ಚಿತ್ರರಂಗದ ಶ್ರೀಮಂತಿಕೆಯನ್ನು ಕೊಂಡಾಡುವಷ್ಟು ಶ್ರೀಮಂತವಾಗಿದೆ..

ಅದೇ ಶಿವ ಶಿವ (ಸಿವ ಸಿವ) ಹಾಡು..!

‘ಶಿವನೇ ನಿನ್ನಾಟ ಬಲ್ಲೋರ್ ಯಾರ್ಯಾರೋ..’ ಎಂಬ ಕೈಲಾಸ್ ಖೇರ್ ಮತ್ತು ಪ್ರೇಮ್ (ಕನ್ನಡದಲ್ಲಿ) ಅವರ ಕಂಠ ಸಿರಿಯಲ್ಲಿ ಮೈ ರೋಮಾಂಚನಗೊಳಿಸುವಷ್ಟು ಪರಿಣಾಮಕಾರಿ.

ತಮಿಳು, ತೆಲುಗಿನಲ್ಲಿ ಈ ಹಾಡನ್ನು ಕೈಲಾಸ್ ಖೇರ್ ಅವರ ಜೊತೆ ಕನ್ನಡಿಗ ವಿಜಯ್ ಪ್ರಕಾಶ್ ಹಾಡಿದ್ದು, ಹಿಂದಿ ಹಾಗೂ ಮಲಯಾಳಂ ನಲ್ಲಿ ಸ್ಥಳೀಯ ಗಾಯಕರು ಹಾಡಿದ್ದಾರೆ‌.

ಕೆಡಿ ಚಿತ್ರದ ಕಥೆ 70ರ ದಶಕದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಆ ಸಂದರ್ಭಗಳನ್ನೇ ಮರು ಸೃಷ್ಟಿಸಿರುವುದು ಹಾಡಿನ ಝಲಕ್ ನಲ್ಲೇ ಎದ್ದು ಕಾಣುತ್ತದೆ.

ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಅವರು ಟೌನ್ ಹಾಲ್ ಸೇರಿದಂತೆ ಬೆಂಗಳೂರಿನ ಸಿಟಿ ಮಾರುಕಟ್ಟೆ ಹಾಗೂ ಇತರ ಜಾಗಗಳನ್ನು ಮರುಸೃಷ್ಟಿ ಮಾಡಿ ಸೆಟ್ ಹಾಕಿದ್ದಾರೆ. ಇದರಲ್ಲಿ ಆ ಕಾಲದ ವರಸೆಯಲ್ಲಿ ಮುಖ್ಯ ಪಾತ್ರದಲ್ಲಿರುವ ಧ್ರುವ ಸರ್ಜಾ ಹಾಗೂ ನಟಿ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಧ್ರುವ ಸರ್ಜಾ ಕಾರಿನ ಮೇಲೆ ಹತ್ತಿ ಕುಣಿಯುವ ದೃಶ್ಯಗಳ ವರಸೆ ವೈಭವಗಳ ಚಿತ್ರೀಕರಣ ವಿವರಗಳನ್ನು ಚಿತ್ರತಂಡ ಮಾಧ್ಯಮಗಳ ಮುಂದೆ ತೆರೆದಿಟ್ಟಿತು.

ನಿರ್ದೇಶಕ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ಕೆವಿಎನ್ ನಿರ್ಮಾಣ ಸಂಸ್ಥೆಯ ಸುಪ್ರೀತ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ,ಆನಂದ್ ಆಡಿಯೋ ಶ್ಯಾಮ್, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ, ನೃತ್ಯ ನಿರ್ದೇಶಕ ಮೋಹನ್, ಛಾಯಾಗ್ರಾಹಕ ಡೇವಿಡ್ ವಿಲಿಯಂ ಹೀಗೆ ‘ಶಿವ ಶಿವ’ ಹಾಡು ಬಿಡುಗಡೆಯಲ್ಲಿ ಪಾಲ್ಗೊಂಡ ಎಲ್ಲರೂ ಅದರ ವೈಭವಗಳನ್ನು ಬಣ್ಣಿಸಿದರು.

ಮೊದಲೇ ಹೇಳಿದಂತೆ ಕೆಡಿ ಅಂದರೆ ಕಾಳಿದಾಸ. ಮುಖ್ಯವಾಗಿ ಈ ಚಿತ್ರದ ಹಾಡುಗಳು ನಮ್ಮ ಕಲ್ಪನೆ ಮೀರಿ ಬರಬೇಕು ಎಂಬ ಆಶಯವಿತ್ತು. ಹಾಗಾಗಿ ಇಲ್ಲಿರುವ ಎಲ್ಲರ ಸಹಕಾರದಿಂದ ಅದು ಸಾಧ್ಯವಾಗಿದೆ ಎಂದರು ಪ್ರೇಮ್.

ಹಾಡು ಮತ್ತು ದೃಶ್ಯ ವೈಭವ ನನ್ನ ಕಲ್ಪನೆಯನ್ನು ಮೀರಿ ಬಂದಿರುವುದು ಖುಷಿ ತಂದಿದೆ. ಆನಂದ್ ಆಡಿಯೋ ನಮಗೆ ಹೆಚ್ಚು ಪ್ರೋತ್ಸಾಹ ನೀಡಿದೆ. ದಾಖಲೆ ಬೆಲೆ (17.70 ಕೋಟಿ)ಗೆ ಚಿತ್ರದ ಹಾಡುಗಳು ಮಾರಾಟವಾಗಿವೆ. ಅದಕ್ಕೆ ತಕ್ಕ ಹಾಗೆ ಈ ಚಿತ್ರದ ಸಂಗೀತ ವೈಭವ ಮೋಡಿ ಮಾಡಲಿದೆ ಎಂದರು.

ಈ ಚಿತ್ರದ ಹಾಡಿಗೆ ಖರ್ಚು ಮಾಡಿರುವಷ್ಟು ಹಣದಲ್ಲಿ ಒಂದು ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡಬಹುದಿತ್ತು ಎಂದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಸಂಗೀತದ ಪ್ರತಿಯೊಂದು ಮಜಲುಗಳನ್ನು ಪ್ರೇಮ್ ಅವರೇ ನಿರ್ವಹಿಸುತ್ತಾರೆ. ಇಲ್ಲಿ ನಾನು ನೆಪ ಮಾತ್ರ. ಈ ಚಿತ್ರದ ದೊಡ್ಡ ಬಂಡವಾಳ ಸಂಗೀತ. ಹಾಗಾಗಿ ಹೆಚ್ಚಿನ ಒತ್ತಡ ಜವಾಬ್ದಾರಿ ಇದೆ ಎಂದರು.

ಸಂಗೀತಗಾರರು ಹಾಗೂ ಗಾಯಕರನ್ನು ತಾಳ್ಮೆಯಿಂದ ಕಾಯ್ದು ಕರೆಯಲಾಗಿದೆ. ಜಾಕೀರ್ ಹುಸೇನ್ ಅವರ ಸಹೋದರ ತೌಪಿಕ್ ಖುರೇಶ್ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹೋದರು ಅರ್ಜುನ್ ಜನ್ಯ.

ಈ ಚಿತ್ರದಲ್ಲಿ ನಟಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಈ ಶಿವ ಶಿವ ಹಾಡಿನಲ್ಲಿ ಮಾಡಿರುವ ಸಾಹಸಗಳ ಕುರಿತ ದಾಖಲೆ ನಿಮ್ಮ ಮುಂದೆಯೇ ಇದೆ ಎಂದರು ಧ್ರುವ ಸರ್ಜಾ.

ಓಡುವ ಕಾರಿನ ಮೇಲೆ ನೃತ್ಯ ಮಾಡುವುದು ಕಠಿಣ ಸಾಹಸ. ಆ ಸಂದರ್ಭಗಳು ಥ್ರಿಲ್ಲಿಂಗ್ ಆಗಿದ್ದವು ಎಂದು ವಿವರಿಸಿದರು.

ಮೋಹನ್ ಬಿ.ಕೆರೆ ಚಿತ್ರದ ಸೆಟ್ ಹಾಕಿದ ಸಂದರ್ಭಗಳನ್ನು ವರ್ಣಿಸಿದರು. ನೃತ್ಯ ನಿರ್ದೇಶಕ ಮೋಹನ್, ಆನಂದ್ ಆಡಿಯೋ ಶ್ಯಾಮ್, ಹಾಡಿಗೆ ಸಾಹಿತ್ಯ ಬರೆದ ಮಂಜು, ರೀಷ್ಮಾ ನಾಣಯ್ಯ, ಛಾಯಾಗ್ರಾಹಕ ಡೇವಿಡ್ ವಿಲಿಯಂ, ಕೆವಿಎನ್ ಸಂಸ್ಥೆಯ ಸುಪ್ರೀತ್ ಮಾತನಾಡಿದರು.

Social Share :

ಯುಐ ಚಿತ್ರವಿಮರ್ಶೆ

Social Share :

ರೇಟಿಂಗ್ : 4.5/5

ನಿರ್ಮಾಣ : ಲಹರಿ ಫಿಲಮ್ಸ್, ವೀನಸ್ ಎಂಟರ್ ಪ್ರೈಸಸ್ ಮೂಲಕ ಜಿ.ಮನೋಹರ ನಾಯ್ಡು ಮತ್ತು ಕೆ.ಪಿ.ಶ್ರೀಕಾಂತ್

ನಿರ್ದೇಶನ : ಉಪೇಂದ್ರ

ಉಪ್ಪಿಗಿಂತ ರುಚಿ ಬೇರೆ ಇಲ್ಲ
ಒಪ್ಪಿಕೊಂಡೋರು ದಡ್ಡರಲ್ಲ..

ಜಗತ್ತಿನ ಕೆಲವೇ ಕೆಲವು ಚಿತ್ರ ನಿರ್ದೇಶಕರು ಮಾತ್ರ ತಾವು ಮಾಡುವ ಚಿತ್ರಗಳಿಗೆ ಬ್ರಾಂಡ್ ಆಗುತ್ತಾರೆ; ಎಲ್ಲವೂ ವಿಶೇಷತೆಯ ಅಚ್ಚೊತ್ತಿದ ಹಾಗೆ ಸೃಷ್ಟಿ ಕಾರ್ಯದಲ್ಲಿ ತೊಡಗುವುದು ಸಾಮಾನ್ಯ ವಿಷಯವೇ ಅಲ್ಲ.

ವ್ಯವಸ್ಥೆ ಮತ್ತು ಅಸಮಾನತೆ ವಿರುದ್ಧ ಸರಳ ಧಾಟಿ ಮತ್ತು ಮಿಥ್ ಗಳ ಮೂಲಕ ತಮ್ಮ ಚಿತ್ರಗಳಲ್ಲಿ ಹೇಳುತ್ತಾ ಬಂದ ರಿಯಲ್ ಸ್ಟಾರ್ ಉಪೇಂದ್ರ, ಈಗ ಒಂದು ಹೆಜ್ಜೆ ಮುಂದೆ ಹೋಗಿ ‘ಸತ್ ಪ್ರಜೆ’ಗಳ ವಿವೇಚನಾ ಶಕ್ತಿಯನ್ನೇ ಕೆಣಕಿದ್ದಾರೆ.

ಚಿತ್ರದೊಳಗೊಂದು ಚಿತ್ರ ಅಲ್ಲಿ ಬರುವ ತಿಕ್ಕಲು ನಿರ್ದೇಶಕ (ಜೀನಿಯಸ್). ಮೂಲೆಗೆ ಬಿದ್ದ ಸ್ಕ್ರಿಪ್ಟ್. ಅದು ರೂಪುಗೊಂಡು ಮಜಾ ನೀಡುವ ಪರಿ ಎಲ್ಲವೂ ಉಪ್ಪಿಯ ಮಾಮೂಲಿ ವರಸೆಗಳೇ.

ಆದರೆ ಆ ಕಥೆಯಲ್ಲಿನ ಪದರಗಳು. ಅವು ಬಿಚ್ಚಿಕೊಳ್ಳುವ ರೀತಿ ತಂತ್ರಜ್ಞಾನದ ಮೈ ಸಿರಿ ಎಲ್ಲವೂ ಹೊಸದೊಂದು ರಮ್ಯ ಲೋಕವನ್ನೇ ಅನಾವರಣಗೊಳಿಸುವುದು ನಿಜವಾದರೂ ಅದರೊಳಗಿನ ತತ್ವ ಮತ್ತು ಪ್ರಶ್ನಾರ್ಥಕ ಒಳನೋಟ ಮೆದುಳನ್ನು ವಿಚಲಿತಗೊಳಿಸದೇ ಬಿಡಲಾರದು..

ಹಾಗಾಗಿ ಮೆದುಳು ಇಲ್ಲಿ ಸಾಂಕೇತಿಕ ರೂಪ ಪಡೆದಿದೆ ಮಾತ್ರವಲ್ಲ; (ಈ ಚಿತ್ರವನ್ನು ಹೃದಯದಿಂದ ನೋಡಿದರೆ ಅರ್ಥವೇ ಆಗುವುದಿಲ್ಲ) ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಮೆದುಳು ಬಳಕೆ (ಬುದ್ಧಿಶಕ್ತಿ) ಅನಿವಾರ್ಯ..

ಹಾಗಾಗಿ ಸತ್ಯ ಪಾತ್ರಧಾರಿ ಉಪೇಂದ್ರ ಪದೇ ಪದೇ ಹೇಳುವ ‘ಕಾಂ ಡೌನ್; ಕೂಲ್; ಕಾನ್ಸನ್ ಟ್ರೇಟ್’ ಎಂಬುದನ್ನು ಮೊದಲು ಪ್ರೇಕ್ಷಕ ಅಳವಡಿಸಿಕೊಳ್ಳಬೇಕು. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ. ಆದರೆ ಎದುರಾದ ಸಂದರ್ಭ ಮತ್ತು ಅದರ ಕಾಠಿಣ್ಯತೆ ಅರಿಯುವ ತಾಳ್ಮೆ ಮತ್ತು ವಿವೇಚನೆ ಬಹಳ ಮುಖ್ಯ ಎಂಬ ‘ಸತ್ಯ’ನ ನಡೆಯೂ ಅರ್ಥವಾಗಬೇಕು.

ಸಾಮಾಜಿಕ ಬದುಕಿನಲ್ಲಿ ಬರೀ ವಿಷ ವರ್ತುಲಗಳೇ ತುಂಬಿವೆ. ಎಷ್ಟೋ ವಿಷಯಗಳು ನಮ್ಮನ್ನು ಕತ್ತಲೆನಲ್ಲಿಯೇ ಇಟ್ಟಿವೆ. ಅವುಗಳೆಡೆ ವ್ಯವಧಾನದಿಂದ ಜ್ಞಾನವೆಂಬ ಬೆಳಕನ್ನು ಅರಸಿ ನುಗ್ಗಬೇಕು. ಆಗ ಅತ್ಯಂತ ಕಠಿಣ ದಾರಿಯೂ ಸುಲಭವಾಗಿ ಗೋಚರಿಸುತ್ತದೆ ಎಂಬುದು ಸತ್ಯನ ಪ್ರತಿ ನಡೆಯ ಅರ್ಥ.

ಆದರೆ ಕಲ್ಕಿಯದು ಉಗ್ರಾವತಾರ. ವ್ಯವಸ್ಥೆ ಸಾಮಾನ್ಯರ ಬದುಕನ್ನು ನುಂಗಿದ ಪರಿಯನ್ನು ವಾಸ್ತವದ ನೆರಳಿನೊಂದಿಗೆ ಪರಿಚಯಿಸುವ ಅತ್ಯಾವಸರ. ಏಕೆಂದರೆ ಕಲ್ಕಿ ವಾಸ್ತವ ಪ್ರಜ್ಞೆಯ ಜೊತೆಗೆ ಭವಿಷ್ಯದ ಕೈಗನ್ನಡಿ ನೋಡುಗ.

ಪ್ರಕೃತಿ ಮಾತೆಯ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಆ ಮಾತೆ ಕಲ್ಕಿಯ ಅವ್ವ. ಆಕೆಯ ನಿಷ್ಕ್ರಿಯ ಮೆದುಳನ್ನು ಸರಿಪಡಿಸಲು ಆತ ಮಾಡುವ ಡಬ್ಬಾಳಿಕೆಗಳು ತಿಕ್ಕಲು ವರಸೆಗಳಂತೆ ಕಂಡರೂ ಅದು ಪ್ರಜೆಗಳನ್ನು ಎಚ್ಚರಿಸಲು ಮಾಡುವ ಶಾಕ್ ಟ್ರೀಟ್ ಮೆಂಟ್.

ಆಳುವವರು ವ್ಯವಸ್ಥೆಯನ್ನು ಹೇಗಿಟ್ಟಿದ್ದಾರೆ.. ಜಾತಿ; ಧರ್ಮಗಳನ್ನು ತಲೆಗೇರಿಸಿಕೊಂಡವರ ವಿವೇಚನೆ ಏನಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ‘ಸತ್ ಪ್ರಜೆ’ ಬಳಲುತ್ತಿರುವುದು ಹೇಗೆ..

ಹೌದು ದೇವರು, ಧರ್ಮಗಳ; ಜಾತಿ ಜಾತಿಗಳ ಹೊಡೆದಾಟ ಬಡಿದಾಟ ಸಾಮಾಜಿಕ ನೆಲೆಯಲ್ಲಿ ವಿವೇಚನೆ ಬಳಸಬೇಕಾದ ಸಂದರ್ಭದಲ್ಲಿ ಪ್ರಜೆಯ ಗಮನವೆಲ್ಲಾ ಮನರಂಜನೆಯ (ಸಂಪರ್ಕ ಸಾಧನಗಳ) ಮೇಲಿದೆ ಹಾಗಾಗಿ ಮೊಬೈಲ್ ಮತ್ತು ಟಿವಿಗಳು ಆಹಾರಕ್ಕಿಂತಲೂ ಪಾರುಪಥ್ಯ ಪಡೆದಿವೆ.

ಹೀಗೆ ರಂಜನೆ ಮತ್ತು ವಿಷಯ ಲೋಲುಪ್ತತೆಯಲ್ಲಿ ಮುಳುಗಿರುವ ಇಂತಹ ಜನರನ್ನು ಎಚ್ಚರಿಸಲು ಯಾರಿಂದ ಸಾಧ್ಯ..?

ಅಲ್ಲದೆ ‘ಅರ್ಥ’ವಾಗದ ವ್ಯವಸ್ಥೆಗೆ ಕೈಗನ್ನಡಿ ಹಿಡಿಯುವವರು ಯಾರು..!? ಈ ದೇಶದಲ್ಲಿ ಯಾರಾದರೂ ಸಾಲ ಮಾಡಿ ಕೊಳ್ಳೆ ಹೊಡೆದು ಪರಾರಿಯಾದರೂ ಆತನ ಸಾಲವನ್ನು ಪ್ರಜೆಗಳ ಮೇಲೆ ತೆರಿಗೆ ರೂಪದಲ್ಲಿ ಹಾಕಲಾಗುತ್ತದೆ. ಆದರೆ ಯಾರೂ ಪ್ರಶ್ನಿಸುವುದಿಲ್ಲ. ಏಕೆಂದರೆ ಯಾರಿಗೂ ಅರ್ಥ ವ್ಯವಸ್ಥೆಯ ಅರಿವಿರುವುದಿಲ್ಲ.

ಎಲ್ಲಿಯಾದರೂ ಪೋಲಾಗುತ್ತಿದ್ದರೆ; ರಾಜಕಾರಣಿ ಮಜಾ ಉಡಾಯಿಸುತ್ತಿದ್ದರೆ, ಅದು ನನ್ನದೇ ತೆರಿಗೆಯ ಹಣ ಎಂಬುದು ಪ್ರಜೆಗಳಿಗೆ ಅರ್ಥ ಮಾಡಿಸಲು ಕಟ್ಟಿದ ‘ಕೀಯ’ ವರಸೆ ಇಲ್ಲಿಯೂ ಕಾಣುತ್ತದೆ.

ತಪ್ಪು ವರಸೆಗಳನ್ನು ವಿರೋಧಿಸುವ ಧೋರಣೆಗಳಿಂದ ಉಪೇಂದ್ರ ಹೆಚ್ಚು ಆಪ್ತವಾಗುತ್ತಾರೆ. ಅವರ ಬುದ್ಧಿವಂತಿಕೆ, ಸವಾಲು ಎಲ್ಲದರಲ್ಲಿಯೂ ಪ್ರಜೆಗಳ ನಿರಾಸಕ್ತಿಯ ಮೆರವಣಿಗೆ ಕಾಣುತ್ತದೆ.

ಇದು ಕೇವಲ ಚಿತ್ರವಲ್ಲ; ಎರಡೂವರೆ ಸಾವಿರ ವರ್ಷಗಳ ಹಿಂದೆ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಬಣ್ಣಿಸಿದ ಬುದ್ಧನ ವಿಚಾರ; ಜನರಿಂದಲೇ ಕೊಲ್ಲಲ್ಪಟ್ಟ ಬಸವಣ್ಣ, ಏಸುಕ್ರಿಸ್ತನ ವಿಚಾರಗಳ ಸಮ್ಮಿಲನ. ಭೂತ, ಭವಿಷ್ಯ ಹಾಗೂ ವರ್ತಮಾನದ ಅಣಕ.

ಇಡೀ ಚಿತ್ರವನ್ನು ಸತ್ಯ ಮತ್ತು ಕಲ್ಕಿಯಾಗಿ ಉಪೇಂದ್ರ ಆವರಿಸಿಕೊಂಡಿದ್ದಾರೆ. ಹಾಗಾಗಿ ರವಿಶಂಕರ್ ಹೊರತು ಪಡಿಸಿ ಯಾವ ಪಾತ್ರಗಳು ಎದ್ದು ಕಾಣುವುದಿಲ್ಲ. ಸಾಧು ಕೋಕಿಲ, ರೀಷ್ಮಾ ನಾಣಯ್ಯ, ಅಚ್ಯುತ್ ಕುಮಾರ್, ವಿ.ಮನೋಹರ್ ಹಾಗೂ ದಿವಂಗತ ಗುರು ಪ್ರಸಾದ್ ಮಾತ್ರ ಅಲ್ಲಲ್ಲಿ ಕಾಣುತ್ತಾರೆ.

ಕನ್ನಡ ಚಿತ್ರವೊಂದರ ಶ್ರೀಮಂತ ತಾಂತ್ರಿಕ ಕೌಶಲ್ಯಗಳ ಮೆರವಣಿಗೆ ನೋಡುವ ಸಲುವಾಗಿಯಾಗಿಯಾದರೂ ಚಿತ್ರವನ್ನು ನೋಡಲೇ ಬೇಕು. ಎಚ್.ಸಿ.ವೇಣು ಕ್ಯಾಮೆರಾ ಮತ್ತು‌ ಸಿಜಿ ಮತ್ತು ವಿಎಫ್ ಎಕ್ಸ್ ನ ಸಮರ್ಪಕ ಬಳಕೆ. ಅಜನೀಶ್ ಲೋಕನಾಥ್ ಸಂಗೀತದ ವೈವಿಧ್ಯ ಮತ್ತು ವ್ಯವಧಾನ ಅದ್ದೂರಿತನವನ್ನು ಹೆಚ್ಚಿಸಿವೆ.

ತಮಿಳು ನಿರ್ದೇಶಕ ಎ.ಆರ್.ಮುರಗದಾಸ್ ‘ಏಳಂ ಅರಿವು’ ಮಾಡಿದಾಗ ಜನರಿಗೆ ‘ಅತೀಂದ್ರಿಯ’ ಶಕ್ತಿಯ ಅರಿವೆಯೇ ಆಗದೆ ಅದು ಹೆಚ್ಚು ತಲುಪಲಿಲ್ಲ. ಆದರೆ ‘ಯುಐ’ ನಲ್ಲಿ ಪದರಗಳು ಹೆಚ್ಚಾಗಿದ್ದರೂ ಮೆದುಳು ಸಾಣೆ ಹಿಡಿಯುವ ರೂಪಕಗಳ ಮೂಲಕ ಉಪ್ಪಿ ಗೆಲ್ಲುತ್ತಾರೆ..

ಏಕೆಂದರೆ ಉಪ್ಪಿಗಿಂತ ರುಚಿ ಬೇರೆ ಇಲ್ಲ; ಒಪ್ಪಿಕೊಂಡವರು ದಡ್ಡರೂ ಅಲ್ಲ..

Social Share :

ವಿಶ್ವಮಾನ್ಯ ಪಡೆದ ಉಪ್ಪಿ ಯುಐಗೆ ಪ್ರಪಂಚದಾದ್ಯಂತ 3 ಸಾವಿರ ಸ್ಕ್ರೀನ್

Social Share :

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ‘ಯುಐ’ ಚಿತ್ರ ಪ್ರಪಂಚದ ಮೂರು ಸಾವಿರ ಪರದೆಗಳಲ್ಲಿ ಬಿಡುಗಡೆ ಕಾಣುತ್ತಿದೆ.

ಈಗಾಗಲೇ ದೇಶ ವಿದೇಶಗಳಲ್ಲಿ ಮುಂಗಡ ಟಿಕೆಟ್ ಮಾರಾಟದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ಚಿತ್ರದ ಬಗ್ಗೆ ವಿಶೇಷ ಕುತೂಹಲ ಮೂಡಿ ಅದನ್ನು ನೋಡುವ ತವಕ ಅಭಿಮಾನಿಗಳಲ್ಲಿ ಮೇರೆ ಮೀರಿದೆ. ಹಾಗಾಗಿ ಚಿತ್ರತಂಡ ಖುಷಿಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

ತಾಯಿ ಭುವನೇಶ್ವರಿ, ರಾಜರಾಜೇಶ್ವರಿ ಹಾಗೂ ಚಾಮುಂಡೇಶ್ವರಿ ಆಶೀರ್ವಾದದಿಂದ ಎಲ್ಲವೂ ಚೆನ್ನಾಗಿ ಆಗುತ್ತಿದೆ. ಮೊದಲಿನಿಂದಲೂ ನಮ್ಮ ಮೇಲೆ ತಾಯಿಯ ಆಶೀರ್ವಾದ ಇರುವಂತೆ ಈಗಲೂ ಇರುತ್ತದೆ ಎಂದರು ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು.

ಜನರೇ ಚಿತ್ರವನ್ನು ಹೊತ್ತು ಮೆರೆಸುತ್ತಿದ್ದಾರೆ. ಹಾಗಾಗಿ ಅಭಿಮಾನಿ ದೇವರುಗಳು ಚಿತ್ರವನ್ನು ಗೆಲ್ಲಿಸುವುದರಲ್ಲಿ ಸಂಶಯವೇ ಇಲ್ಲ ಎಂದರು.

ಒಂಭತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಚಿತ್ರ ಡಿಸೆಂಬರ್ 20 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

Social Share :

ಪ್ರೇಮಿಗಳ ದಿನಕ್ಕೆ ನಲಿಯಲು ಅನ್ ಲಾಕ್ ರಾಘವ ಆಗಮನ

Social Share :

* ಫೆಬ್ರವರಿ 7 ಕ್ಕೆ ಬಿಡುಗಡೆ *

ನೈಜ ಪ್ರೇಮ ಕಥೆಗಳು ಯಾವಾಗಲೂ ಸೋಲುವುದಿಲ್ಲ; ಅದೇ ರೀತಿ ರೋಮ್ಯಾಂಟಿಕ್ ಕಥೆಗಳು ಸದಾ ರಮ್ಯಾ ಕಾಲವನ್ನೇ ಸೃಷ್ಟಿಸಿವೆ.

ಇಲ್ಲಿ ಒಂದು ಲವಲವಿಕೆಯ ಪ್ರೇಮ ಕಥೆ ಪ್ರೇಮಿಗಳ ದಿನಕ್ಕೆ ಹತ್ತಿರವಾಗಿ ಪ್ರೇಮಿಗಳನ್ನು ಮೋಡಿ ಮಾಡಲು ಬರುತ್ತಿದೆ.

ಅದೇ ಅನ್ ಲಾಕ್ ರಾಘವ..!

ನವನಟ ಮಿಲಿಂದ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಾಣ ಮಾಡಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಕ.

ಚಿತ್ರದ ಬಿಡುಗಡೆ ಘೋಷಣೆ ಸಲುವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಲ್ಲಿ ಭಾಗವಹಿಸಿತ್ತು.

‘ರಾಮ ರಾಮ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ ಬರೆದಿದ್ದು, ಪ್ರೇಕ್ಷಕನಿಗೆ ಕಚಗುಳಿ ಇಡುವ ನಗು, ಆಹ್ಲಾದ ಪ್ರೇಮೋನ್ಮಾದ ಉಂಟಾಗುವ ನಿರೂಪಣೆ ಇರುತ್ತದೆ ಎಂಬ ವಿವರ ಬಂತು ಚಿತ್ರತಂಡದಿಂದ.

ಚಿತ್ರೀಕರಣ ಆರಂಭವಾದಾಗಿನಿಂದ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ‘ಅನ್ ಲಾಕ್ ರಾಘವ’ 2025 ರ ಆರಂಭಿಕ ಗೆಲುವಿನ ಚಿತ್ರವಾಗುತ್ತದೆ ಎಂಬುದು ಚಿತ್ರತಂಡದ ನಂಬಿಕೆ.

ಅಲ್ಲದೆ ಪ್ರೇಮಿಗಳ ದಿನಕ್ಕೆ ಒಂದು ವಾರ ಮುಂಚೆ ಚಿತ್ರವು ಬಿಡುಗಡೆ ಕಾಣುವುದರಿಂದ ರೋಮಾಂಚನದ ರಸದೌತಣ ಪ್ರೇಮಿಗಳಿಗೆ ಸಿಗಲಿದೆ. ಏಕೆಂದರೆ ಚಿತ್ರಕಥೆಯ ಸಾರ ಆ ರೀತಿ ಇರುತ್ತದೆ ಎಂಬುದು ನಿರ್ದೇಶಕ ದೀಪಕ್ ಮಧುವನಹಳ್ಳಿ ವಿವರಣೆ.

ಮನರಂಜನೆಯ ರಸದೌತಣವಿರುತ್ತದೆ. ಗ್ಲಾಮರ್ ಗೆ ಒತ್ತು ನೀಡಲಾಗಿದೆ ಜೊತೆಗೆ ಈ ಯುವ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದರು.

ಚಿತ್ರದುರ್ಗದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಲವಿತ್ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಗಸು ಎದ್ದು ಕಾಣುತ್ತದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಈಗಾಗಲೇ ಹಾಡುಗಳು ಪ್ರೇಕ್ಷಕರ ಮನ ಗೆದ್ದಿವೆ ಎಂದು ಹೇಳುತ್ತಾ ಹೋದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಒಂದು ಪ್ರೇಮ ಮತ್ತು ಲವ ಲವಿಕೆಯ
ಕಥೆಯ ಭಾಗವಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು ಮುಖ್ಯ ಪಾತ್ರದಲ್ಲಿರುವ ಮಿಲಿಂದ್.

ಸಾಧುಕೋಕಿಲ ಹಾಗೂ ಶೋಭ್ ರಾಜ್, ಅವಿನಾಶ್, ಭೂಮಿ ಶೆಟ್ಟಿ ಮೊದಲಾದವರ ತಾರಾಗಣದ ಈ ಚಿತ್ರದಲ್ಲಿ ತಂತ್ರಜ್ಞರ ಕಾರ್ಯವೈಖರಿ ಅದ್ಭುತ ಎಂದರು.

ಸಂಶೋಧನಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಇದೊಂದು ಸುಂದರ ಕಥಾನಕ ಎಂಬುದು ರೆಚೆಲ್ ಡೇವಿಡ್ ವಿವರಣೆ.

ನಿರ್ಮಾಪಕ ಮಂಜುನಾಥ್ ದಾಸೇಗೌಡ ಅವರಿಗೆ ಇದು ನಾಲ್ಕನೇ ಚಿತ್ರ. ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಖ್ಯವಾಗಿ ತಂತ್ರಜ್ಞರ ಕೆಲಸ ಇಷ್ಟವಾಗಿದೆ ಮತ್ತು ಹೆಚ್ಚು ಭರವಸೆಗಳನ್ನು ಮೂಡಿಸಿದೆ ಎಂದರು ಮಂಜುನಾಥ್ ದಾಸೇಗೌಡ.

Social Share :

ಯುಐ ಟಿಕೆಟ್ ಮಾರಾಟ ದಾಖಲೆ ಉಪ್ಪಿ ಸೃಷ್ಟಿಸಿದ ಹೊಸ ಅಲೆ..

Social Share :

* ಯುಐಗೆ ವಿಶ್ವ ಸಿನಿಮಾ ಮನ್ನಣೆ *

* ಕ್ಷಣ ಕ್ಷಣವೂ ಹೆಚ್ಚಾದ ಕುತೂಹಲ *

* ಶಿವಣ್ಣ, ವಿಜಿ, ಧನಂಜಯ್ ಪ್ರಶಂಸೆ *

ಇದೇ 20 ರಂದು ಬಿಡುಗಡೆ ಕಾಣುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಬಿಡುಗಡೆಗೆ ಇಡೀ ವಿಶ್ವ ಎದುರು ನೋಡುತ್ತಿದೆ.

ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಯುಐ’ ನ ಹೆಸರು ರಾರಾಜಿಸುತ್ತಿದ್ದು, ಇದು ಕನ್ನಡ ಸಿನಿಮಾದ ಅತಿ ದೊಡ್ಡ ಸಾಧನೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ಹೇಗೆಂದರೆ ಐಎಂಡಿಬಿ ನಿರೀಕ್ಷೆಗಳ ಪಟ್ಟಿಯಲ್ಲಿ ‘ಯುಐ’ ಹೆಸರಿದೆ. ಹಾಗಾಗಿ ಚಿತ್ರದ ಬಗ್ಗೆ ವಿಶ್ವ ಮಟ್ಟದಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂಬುದು ಅದರ ವಿವರ.

ಈಚೆಗೆ ಚಿತ್ರದ ಬಿಡುಗಡೆ ಪೂರ್ವ ಇವೆಂಟ್ ನಲ್ಲಿ ಚಿತ್ರರಂಗದ ಗಣ್ಯರು ಉಪೇಂದ್ರ ನಿರ್ದೇಶನ ಮತ್ತು ಕಾರ್ಯ ವೈಖರಿಯನ್ನು ಹಾಡಿ ಹೊಗಳಿದರು.

ಬಿಡುಗಡೆಗೆ ಒಂದು ವಾರ ಮುಂಚೆಯೇ ತೆರೆದುಕೊಂಡ ಟಿಕೆಟ್ ಮಾರಾಟ ಆ ಕ್ಷಣದಿಂದಲೇ ಬುಕ್ ಆಗಿ ಹೊಸ ದಾಖಲೆಯೇ ನಿರ್ಮಾಣವಾಗಿದೆ ಎಂಬ ವಿವರಗಳು ಬಂದವು.

ಯುಐ ಚಿತ್ರ ನೋಡಲು ಬುಕ್ಕಿಂಗ್ ಅವಕಾಶ ತೆರೆದುಕೊಂಡ ತಕ್ಷಣವೇ ದಾಖಲೆ ಪ್ರಮಾಣದ ಟಿಕೆಟ್ ಮಾರಾಟವಾಗಿವೆ ಎಂದು ಕೆವಿಎನ್ ಸಂಸ್ಥೆಯ ಸುಪ್ರೀತ್, ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ವಿವರಗಳನ್ನು ನೀಡಿದರು.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಹೃದಯ ವೈಶಾಲ್ಯವನ್ನು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊಂಡಾಡಿದರು. ಜೊತೆಗೆ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ಯ ಅವರು ಶಿವಣ್ಣ ಹಾಗೂ ಉಪೇಂದ್ರ ಅವರ ಸ್ನೇಹತ್ವವನ್ನು ಹೊಗಳಿದರು.

ನಿರ್ಮಾಪರಾದ ಉದಯ್ ಮೆಹ್ತಾ
ರಮೇಶ್ ರೆಡ್ಡಿ, ಯೋಗಿ, ಕಾರ್ತಿಕ್ ಗೌಡ, ಜಗದೀಶ್, ನಿರ್ದೇಶಕರಾದ
ಡಾ.ಸೂರಿ, ಪವನ್ ಒಡೆಯರ್, ನಟಿಯರಾದ ಮೇದಿನಿ, ನೀತು, ನಿಧಿ ಸುಬ್ಬಯ್ಯ ಹಾಗೂ ನಟ
ಕಾರ್ಕೋಚ್ ಸುಧಿ, ರವಿಶಂಕರ್ ಚಿತ್ರ ಹಾಗೂ ಉಪ್ಪಿ ಶ್ರಮ ಕುರಿತು ಮಾತನಾಡಿದರು.

ಪ್ರಿಯಾಂಕ ಉಪೇಂದ್ರ ಹಾಗೂ
ರೀಶ್ಮಾ ನಾಣಯ್ಯ ಉಪೇಂದ್ರ ಅವರ ಕಾರ್ಯ ಕ್ಷಮತೆಯನ್ನು ಹೊಗಳಿದರು. ಚಿತ್ರವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಲಹರಿ ಸಂಸ್ಥೆ ಹಾಗೂ ವೀನಸ್ ಎಂಟರ್ ಪ್ರೈಸಸ್ ನ ಮನೋಹರ ನಾಯ್ಡು, ಲಹರಿ ವೇಲು ಹಾಗೂ ಕೆ.ಪಿ.ಶ್ರೀಕಾಂತ್ ಉಪ್ಪಿಯ ಶ್ರಮ ಮತ್ತು ಔದಾರ್ಯವನ್ನು ಕೊಂಡಾಡಿದರು.

ಈ ಅದ್ದೂರಿ ಪ್ರಚಾರ ಸಭೆಯಲ್ಲಿ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಸೇರಿದಂತೆ ಚಿತ್ರದಲ್ಲಿ ದುಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು ಉಪೇಂದ್ರ.

ಯುಐ ಎಂದರೆ ಅದು ಉಪ್ಪಿ ಹುಳ. ಚಿತ್ರ ನೋಡಿದ ನಂತರ ಅರ್ಥವಾಗಬಹುದು. ಅಲ್ಲಿಯವರೆಗೆ ಯೂಸ್ ಯುವರ್ ಇಂಟಲಿಜೆನ್ಸ್, ನಾನು ಮತ್ತು ನೀನು, ಯುನಿವರ್ಷಲ್ ಇಂಟಲಿಜೆನ್ಸ್ ಹೀಗೆ ಅನೇಕ ಕಲ್ಪನೆಗಳು ಸಭೆಯಲ್ಲಿಯೂ ಲಾಸ್ಯವಾಡಿದವು.

Social Share :