ಸಂಜು ವೆಡ್ಸ್ ಗೀತಾ-2 ಚಿತ್ರವಿಮರ್ಶೆ
ರೇಟಿಂಗ್ : 3.5/5
ನಿರ್ಮಾಣ : ಛಲವಾದಿ ಕುಮಾರ್
ನಿರ್ದೇಶನ : ನಾಗ್ ಶೇಖರ್
ಮನಮೋಹಕ ಚಿತ್ರಣದಲ್ಲಿ
ಕಾಣದ ಭಾವ ತೀವ್ರತೆ..
ಮನುಷ್ಯನಿಗೆ ಪ್ರೇಮಿಸುವಲ್ಲಿ ಇರುವಷ್ಟು ಮಜಾ ಮತ್ಯಾವುದರಲ್ಲಿಯೂ ಕಾಣುವುದು ಅಪರೂಪ. ಪ್ರೇಮ ಅಜರಾಮರ; ಪ್ರೇಮ ಮಧುರಾಕ್ಷರ. ಅದೂ ಗಟ್ಟಿ ಪ್ರೇಮವಾಗಿದ್ದಾಗ ಮಾತ್ರ.
ಕೆಲವೊಮ್ಮೆ ಪ್ರೇಮದಲ್ಲಿ ಕೃತಕತೆ ಇರುತ್ತದೆ. ಅಂತಹ ಪ್ರೇಮ ಕಿತ್ತು ಹೋಗುತ್ತದೆ. ಇನ್ನು ಕೆಲವೊಮ್ಮೆ ಪ್ರೇಮದ ಕಥೆ ಹೆಣೆಯುವಲ್ಲಿ ಕೃತಕತೆ ಕಾಣುತ್ತದೆ. ಅದು ಮನ ತಟ್ಟುವುದಿಲ್ಲ.
ಕೊನೆಯಲ್ಲಿ ಹೇಳಿರುವುದು ಈ ಚಿತ್ರಕ್ಕೆ ಅನ್ವಯ. ಪ್ರೇಮಕ್ಕೆ ಇರಬಹುದಾದ ಮೌನ ಸಂವೇದನೆ; ಭಾವನಾ ತೀವ್ರತೆ ಇರದೇ ಹೋದಾಗ ಆ ಕಥೆ ಆತ್ಮವಿಲ್ಲದ ದೇಹದಂತೆ..!
ಆದರೆ ಇಲ್ಲಿ ಕಣ್ತುಂಬಿ ಕೊಂಡಷ್ಟೂ ಅಪೂರ್ವ ದೃಶ್ಯಗಳ ಚಿತ್ರಣ.. ಕೇಳಿದಷ್ಟೂ ಇಂಪಾದ ಸಂಗೀತ.. ಎಲ್ಲವೂ ಇದ್ದರೂ ಭಾವಸ್ಪರ್ಶವಿಲ್ಲದ ಕಥೆ ಅದೇ ಕಾರಣಕ್ಕೆ ಸೊರಗುತ್ತದೆ..
ಸುಮಾರು 10 ವರ್ಷಗಳ ಹಿಂದೆ ತೆರೆ ಕಂಡಿದ್ದ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದ ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸಂಗೀತ ಮತ್ತು ಭಾವ ತೀವ್ರತೆಗಳಲ್ಲಿ ಮುಳುಗೇಳುವಂತೆ ಮಾಡಿದ್ದ ಚಿತ್ರ.
ಆದರೆ ಅದರ ಮುಂದುವರಿಕೆ ಅಥವಾ ಮಾದರಿಯ ಭಾಗ 2ರಲ್ಲಿ ಕಾಣುವುದು ಭಾವ ತೀವ್ರತೆಯ ತೀವ್ರ ಕೊರತೆ..!
ಮದುವೆಯಾದ ದಂಪತಿಗಳ ವಿವಾಹ ವಾರ್ಷಿಕೋತ್ಸವ ಕಾರಣದಿಂದ ಆರಂಭವಾಗುವ ಕಥೆ. ಚಿತ್ರದ ಉದ್ದಕ್ಕೂ ಅದನ್ನೇ ಎಳೆದೊಯ್ಯುತ್ತದೆ. ಆಗರ್ಭ ಶ್ರೀಮಂತನ ಮಗಳು ನೇಕಾರ ವೃತ್ತಿಯ ಸಾಧಾರಣ ವ್ಯಕ್ತಿಯನ್ನು ಪ್ರೇಮಿಸುವ ಧಾಟಿಯೇ ನೂರಾರು ಪ್ರಶ್ನೆಗಳನ್ನು ಒಡ್ಡುತ್ತದೆ.
ನೇಯ್ಗೆ ಮಾಡುವ ವ್ಯಕ್ತಿ ಹೃದಯಾಂತರಾಳದಲ್ಲಿ ಮಾನವೀಯ ಅನುಕಂಪ ವ್ಯಕ್ತಪಡಿಸುವುದರಿಂದ ಗೀತಾ ಸಂಜು ನಡುವೆ ಪ್ರೇಮಾಂಕುರವಾಗಿ ನಂತರ ಮದುವೆಯಾಗಿ ಇಬ್ಬರೂ ಅತ್ಯುತ್ತಮ ಬದುಕು ಕಟ್ಟಿಕೊಳ್ಳುವುದು ಸರಿಯೇ..
ಆದರೆ ಸಂಜು ಬೆಳವಣಿಗೆಯ ದಾರಿಯಲ್ಲಿ ಇರಬೇಕಾದ ನೈಜತೆ ಅಥವಾ ಅದ್ಭುತಗಳು ನಿರೂಪಣೆಯಲ್ಲಿ ಕಾಣುವುದಿಲ್ಲ. ಶಿಡ್ಲಘಟ್ಟದ ರೇಷ್ಮೆ ಬೆಳೆ ಜಗತ್ತನ್ನು ಬೆಳಗುವ ಪರಿ ಹೇಗೆ ಎಂಬುದರ ವಿವರಣೆಗೆ ಗಮನವೇ ಹರಿಸದಿರುವುದು ಎದ್ದು ಕಾಣುತ್ತದೆ.
ಸಂಜು ಮತ್ತು ಗೀತಾ ಇಬ್ಬರ ವಸ್ತ್ರ ವಿನ್ಯಾಸ, ಹಿನ್ನೆಲೆಯ ದೃಶ್ಯ, ಸಂಗೀತದ ಕಾರಣದಿಂದ ಶ್ರೀಮಂತಿಕೆಯ ವೈಭವೀಕರಣ ಎದ್ದು ಕಾಣುತ್ತದೆ. ಆದರೆ ಇಲ್ಲಿ ಬೇಕಾಗಿರುವುದು ನೈಜ ಪ್ರೇಮ. ಹೃದಯದ ಬೆಸುಗೆ. ಅದೇ ಕಾಣುವುದಿಲ್ಲ. ಹಾಗಾಗಿ ಪ್ರೇಮಾರಾಹಿತ್ಯ ಸ್ಥಿತಿಯಲ್ಲಿ ಪ್ರೇಕ್ಷಕ ನಿರ್ಭಾವುಕ.
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಇಬ್ಬರು ನುರಿತ ಕಲಾವಿದರು. ಅವರಿಬ್ಬರ ನಟನೆ ಸಹಜವಾಗಿದೆ. ಶಿಡ್ಲಘಟ್ಟ ಪ್ರಾಂತೀಯ ಭಾಷೆಯಲ್ಲಿ ಮಾತನಾಡುವ ತಬಲಾನಾಣಿ ಪಾತ್ರ ಗಮನ ಸೆಳೆಯುತ್ತದೆ. ಸಾಧು ಕೋಕಿಲ ಮತ್ತು ರಂಗಾಯಣ ರಘು ಅವರಿಗೆ ಸಂಭಾಷಣೆಯೇ ಕೊರತೆಯಾಗಿರುವುದು ಅಚ್ಚರಿ.
ಇಷ್ಟಾದರೂ ‘ಮಳೆಯಂತೆ ಬಾ..’, ‘ಸಂಜು ಮತ್ತು ಗೀತಾ ಜೊತೆಗೆ..’ ಹಾಗೂ ಇತರ ಹಾಡುಗಳ ಸೊಗಸು ಹಿಡಿದಿಡುತ್ತದೆ. ಚಿತ್ರ ಮುಗಿದ ಮೇಲೂ ಗುನುಗುವಂತೆ ಮಾಡುತ್ತದೆ.
ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಸತ್ಯ ಹೆಗಡೆ ಕ್ಯಾಮೆರಾ ಸೊಗಸು. ಅದರ ಹಿಂದೆ ಕಲಾ ನಿರ್ದೇಶಕರ (ಅರುಣ್ ಸಾಗರ್) ನೈಪುಣ್ಯ. ಹಾಗೆಯೇ ಮಲೆನಾಡಿನ ಕವಿ ಕವಿರಾಜ್ ಅವರ ಪದಗಳ ಇಂಪು, ಶ್ರೀಧರ್ ಸಂಭ್ರಮ್ ಸಂಗೀತದ ಸಂಭ್ರಮ.
ಲವ್ ಸೆಕ್ಸ್ ದೋಖ ಇರುವ ಕಾಲಘಟ್ಟದಲ್ಲಿ 80ರ ದಶಕದ ಪವಿತ್ರ ಪ್ರೇಮ ಅಥವಾ ಅದಮ್ಯ ತ್ಯಾಗದ ಕಥೆ ಹೇಳಲು ಹೊರಟ ನಿರ್ದೇಶಕರ ಧೈರ್ಯ ಮೆಚ್ಚಲೇ ಬೇಕು.
ನಿರ್ದೇಶಕರು ಕಥೆಯ ಮೇಲೆ ಹಿಡಿತ ಸಾಧಿಸಿದ್ದರೆ ಒಂದು ಭಾವನಾತ್ಮಕ ನಿರೂಪಣೆ ಕಾಣಬಹುದಿತ್ತು ಎಂಬ ಅನಿಸಿಕೆ ಚಿತ್ರ ನೋಡಿ ಮುಗಿಸಿದ ಮೇಲೆ ಅನಿಸಿದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ..