ಬೆಂಗಳೂರು ಗಲಭೆ ಬಗ್ಗೆ ಜೂಲಿ ಲಕ್ಷ್ಮಿ ಗಲಿಬಿಲಿ..
ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜಿ.ಹಳ್ಳಿಯಲ್ಲಿ ಗಲಭೆ ದೊಂಬಿ ನಡೆದು ಶಾಸಕರ ಮನೆಗೇ ಬೆಂಕಿ ಹಾಕಲಾಯಿತು. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಘಟನೆ ನಡೆದು ಎರಡು ದಿನಗಳಾದರೂ ಜನರ ಮನಸ್ಸಿನಿಂದ ಮರೆಯಾಗಿಲ್ಲ.. ಮಾಧ್ಯಮಗಳಂತೂ ಅದನ್ನು ಇನ್ನೂ ಹಸಿ ಹಸಿಯಾಗಿಯೇ ತೋರಿಸುತ್ತಿವೆ.
ಇಂತಹ ಸಂದರ್ಭದಲ್ಲಿ ಮದ್ರಾಸ್ ನಲ್ಲಿ ವಾಸವಿರುವ ಜೂಲಿ ಲಕ್ಷ್ಮಿ ಎಂದೇ ಖ್ಯಾತರಾಗಿರುವ ಹಿರಿಯ ನಟಿ ಲಕ್ಷ್ಮಿ ಗಾಬರಿಗೊಂಡರು. ದುಷ್ಕರ್ಮಿಗಳು ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಂಚಿದರು ಎಂಬ ಸುದ್ದಿಯೇ ಅವರ ಗಾಬರಿಗೆ ಕಾರಣ. ತಕ್ಷಣವೇ ಹಿರಿಯ ನಟಿ ಉಮಾಶ್ರೀ ಅವರಿಗೆ ಫೋನಾಯಿಸಿ ಏನದು ಶ್ರೀನಿವಾಸಮೂರ್ತಿ ಮತ್ತು ಅವರ ಮಗನಿಗೆ ಏನೋ ತೊಂದರೆಯಾಗಿದೆಯಂತೆ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಉಮಾಶ್ರೀ ಅವರು.. ಆ ಅಣ್ಣನಿಗೆ ಏನೂ ಆಗಿಲ್ಲ.. ತೊಂದರೆ ಎದುರಾಗಿರುವುದು ಅಖಂಡ ಶ್ರೀನಿವಾಸಮೂರ್ತಿ ಎಂಬ ಕಾಂಗ್ರೆಸ್ ಎಂ.ಎಲ್.ಎಗೆ ಎಂದು ವಿವರಿಸಿದರಂತೆ..
ಇಲ್ಲಿ ಲಕ್ಷ್ಮಿ ಅವರು ಅಂದುಕೊಂಡಿದ್ದು ಏನೆಂದರೆ ಕನ್ನಡದ ಹಿರಿಯ ನಟ ಭೋಜರಾಜ ಖ್ಯಾತಿಯ ಜೆ.ಕೆ.ಶ್ರೀನಿವಾಸಮೂರ್ತಿ ಅವರಿಗೆ ತೊಂದರೆಯಾಯಿತೆಂದು ಭಾವಿಸಿ ತಕ್ಷಣವೇ ಉಮಾಶ್ರೀ ಅವರಿಗೆ ಮತ್ತು ಸ್ವತಃ ಶ್ರೀನಿವಾಸಮೂರ್ತಿ ಅವರಿಗೆ ಫೋನಾಯಿಸಿ ಗಾಬರಿ ವ್ಯಕ್ತಪಡಿಸಿದ್ದಾರೆ. ಅಯ್ಯೋ ನನಗೇನೂ ಆಗಿಲ್ಲ ಎಂದು ಶ್ರೀನಿವಾಸಮೂರ್ತಿ ಉತ್ತರ ಕೊಟ್ಟಿದ್ದಾರೆ.
ಆ ಬಳಿಕ ಲಕ್ಷ್ಮಿ ಸಮಾಧಾನದ ಉಸಿರು ಹೊರ ಹಾಕಿದ್ದಾರೆ.