Snehapriya.com

June 8, 2025

ಸಿನಿಮಾ-ಗಾಸಿಪ್

ಹಾಡಿಗೆ ಅನಿವಾರ್ಯ ಗಂಧರ್ವ ಗಾಯಕ

Social Share :

ಭಾಷೆ ಯಾವುದೇ ಇರಲಿ ಅದಕ್ಕೊಬ್ಬ ಅದಕ್ಕೊಬ್ಬ ಅನಿವಾರ್ಯ ಗಾಯಕ ಯಾರಾದರು ಇದ್ದರೆ ಅದು ಎಸ್.ಬಿ.ಬಾಲಸುಬ್ರಮಣ್ಯಂ ಮಾತ್ರ. ಸುಮಾರು ಆರು ದಶಕಗಳ ಸುದೀರ್ಘ ಅವಧಿಯಲ್ಲಿ ಭಾರತೀಯ ಚಿತ್ರರಂಗವನ್ನು ಆಳಿದ ಗಾನ ಗಂಧರ್ವ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿ 40 ಸಾವಿರ ಮೇಲ್ಪಟ್ಟು ಹಾಡುಗಳನ್ನು ಹಾಡಿದ ಗಾನ ಯೋಗಿ.

ಸೂಪರ್‍ಸಾರ್‍ಗಳಾದ ರಜನಿಕಾಂತ್, ಕಮಲ್‍ಹಾಸನ್, ವಿಷ್ಣುವರ್ಧನ್, ಅಂಬರೀಷ್, ಚಿರಂಜೀವಿ, ಶಂಕರ್‍ನಾಗ್, ಅನಂತನಾಗ್, ವೆಂಕಟೇಶ್, ನಾಗಾರ್ಜುನ, ಅರ್ಜುನ್ ಸರ್ಜಾ ಹೀಗೆ ಮೂರ್ನಾಲ್ಕು ತಲೆ ಮಾರುಗಳ ನಾಯಕ ನಟರಿಗೆ ಅನಿವಾರ್ಯ ಗಾಯಕರಾಗಿ ಮೇರೆದವರು ಎಸ್.ಪಿ.ಬಿ.

ಒಬ್ಬ ನಾಯಕ ನಟ ಜನರಿಗೆ ಹೆಚ್ಚು ಆಪ್ತವಾಗುವುದು ತನ್ನ ಚಿತ್ರಗಳ ಹಾಡಿನಿಂದಲೇ. ಅಚ್ಚರಿಯ ವಿಷಯವೆಂದರೆ ಎಸ್‍ಪಿಬಿ ಯಾರಿಗಾದರೂ ಹಾಡಿದರೆ ಆ ಕಲಾವಿದನ ಧ್ವನಿಯನ್ನೇ ಅನುಕರಿಸುತ್ತಾರೆ. ಹಾಗಾಗಿ ಅದು ಎಸ್‍ಪಿ ಹಾಡು ಎಂಬುದಕ್ಕಿಂತ ಆಯಾ ನಟನ ಹಾಡು ಅನಿಸುತ್ತದೆ. ಕನ್ನಡದ ವಿಷ್ಣುವರ್ಧನ್, ಅಂಬರೀಷ್, ಅನಂತ್‍ನಾಗ್ ಅವರ ಹಾಡುಗಳನ್ನು ಆಯಾ ನಟರೇ ಹಾಡಿದಂತೆ ಭಾಸವಾಗುತ್ತದೆ. ಏಕೆಂದರೆ ಎಸ್.ಪಿ.ಬಿ. ಅದ್ಭುತ ಡಬ್ಬಿಂಗ್ ಕಲಾವಿದರೂ ಹೌದು. …

Social Share :

ಹಾಡು ನಿಲ್ಲಿಸಿದ ಗಾನ ಲೋಕದ ಮಾಣಿಕ್ಯ

Social Share :

ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಂದು ಹಾಡಿ ಕನ್ನಡಿಗರ ಹೃನ್ಮನಗಳಲ್ಲಿ ಹಾಗೂ ಅಸಂಖ್ಯಾತ ಭಾರತೀಯರ ಮನಗಳನ್ನು ಗಾಯನದ ಮೂಲಕ ಆವರಿಸಿಕೊಂಡಿದ್ದ ಭಾರತೀಯ ಗಾಯನ ರತ್ನ ಹಾಡುವುದನ್ನು ನಿಲ್ಲಿಸಿತು.

ಸಿಂಗರ್ ಆಫ್ ಪ್ಲೇಬ್ಯಾಕ್ ಎಸ್‍ಪಿಬಿ ಎಂಬ ಅನ್ವರ್ಥನಾಮವನ್ನೇ ಹೆಸರು ಮತ್ತು ಗಾಯನವನ್ನೇ ಉಸಿರಾಗಿಸಿಕೊಂಡ ಚಿತ್ರರಂಗದ ತಾರಾ ನಕ್ಷತ್ರದ ಕೊಂಡಿ ಕಳಚಿ ಬಿದ್ದಿತು. ಆ ಮೂಲಕ ಅಸಂಖ್ಯಾತ ಭಾರತೀಯರನ್ನು ದುಃಖದ ಕಡಲಲ್ಲಿ ಮುಳುಗಿಸಿತು.
ಅದು 1964ರ ಸಂದರ್ಭ. ಮದ್ರಾಸ್ ಮೂಲದ ಸಾಂಸ್ಕøತಿಕ ಸಂಘವೊಂದು ರಾಜ್ಯ ಮಟ್ಟದ ಗಾಯನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅಲ್ಲಿ ತೀರ್ಪುಗಾರರಾಗಿದ್ದವರು ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ಗಾಯಕ ಘಂಟಸಾಲ. ಆ ವೇದಿಕೆಯಲ್ಲಿ ಹಾಡಿ ಎಲ್ಲರನ್ನೂ ಸಮ್ಮೋಹನಗೊಳಿಸಿದ ಯುವಕ ಗಮನ ಸೆಳೆದ. ಆ ಯುವಕ ಮುಂದೆ ಎಂದಿಗೂ ಹಾಡುವುದನ್ನು ನಿಲ್ಲಿಸಲೇ ಇಲ್ಲ. ಆ ಗಾನಪ್ರತಿಭೆ ಇಡೀ ಭಾರತೀಯ ಚಿತ್ರರಂಗದ ಅನಿವಾರ್ಯ ಧ್ವನಿಯಾಗಿತ್ತು. ಅದು ಗಂಧರ್ವ ಲೋಕದ ಧ್ವನಿ. ಆ ಧ್ವನಿಯೇ ಸಿಂಗರ್ ಆಫ್ ಪ್ಲೇಬ್ಯಾಕ್ ಎಸ್‍ಪಿಬಿ.
ಎಸ್.ಪಿ.ಬಾಲಸುಬ್ರವ್ಮಣ್ಯಂ ದಕ್ಷಿಣ ಭಾರತದ ಅನಿವಾರ್ಯ ಗಾಯಕ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ನಾಯಕರಿಗೂ ಹಾಡಿದ ಸ್ಟಾರ್ ಮೇಕರ್. ಅಲ್ಲದೆ ರಜನಿಕಾಂತ್, ಕಮಲ್‍ಹಾಸನ್, ವಿಷ್ಣುವರ್ಧನ್, ಜಮಿನಿ ಗಣೇಶನ್ ಮೊದಲಾದವರಿಗೆ ಡಬ್ಬಿಂಗ್ ಮಾಡಿ ಧ್ವನಿಯಾಗಿದ್ದ ಅಪರೂಪದ ಪ್ರತಿಭೆ.

ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಮಣ್ಯಂ (ಎಸ್‍ಪಿಬಿ) 1946ರ ಜೂನ್ 4ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊಂಟೆಮ್ಮಪೇಟ ಎಂಬಲ್ಲಿ ಹರಿಕಥಾ ವಿದ್ವಾಂಸರಾಗಿದ್ದ ಎಸ್.ಪಿ.ಸಾಂಬಮೂರ್ತಿ ಹಾಗೂ ಶಕುಂತಲಮ್ಮ ಅವರ ಪುತ್ರನಾಗಿ ಜನನ. ಈ ದಂಪತಿಗಳಿಗೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರು. ಪುತ್ರಿಯರ ಪೈಕಿ ಎಸ್.ಪಿ.ಶೈಲಜಾ ಪ್ರಖ್ಯಾತ ಗಾಯಕಿ.

ಎಸ್‍ಪಿಬಿ ಬಾಲ್ಯದಲ್ಲಿಯೇ ಸಂಗೀತ ಕಲಿತರು. ಜೊತೆಗೆ ಎಂಜಿಯರಿಂಗ್ ಓದಲು ಅನಂತಪುರದ ಜೆಎನ್‍ಟಿಯು ಕಾಲೇಜು ಸೇರಿ ಅಧ್ಯಯನ ಮಾಡಿದರು. ಆದರೆ ಅದರಲ್ಲಿ ಅವರಿ ಯಶಸ್ವಿಯಾಗಲಿಲ್ಲ. 1966ರ ಡಿಸೆಂಬರ್ 15ರಂದು ತೆಲುಗಿನ `ಮರ್ಯಾದೆ ರಾಮಣ್ಣ’ ಎಂಬ ಚಿತ್ರಕ್ಕೆ ಮೊದಲು ಹಿನ್ನೆಲೆ ಗಾಯಕರಾಗಿ ಹಾಡಿದರು. ಬಳಿಕ ಅವರ ಎರಡನೇ ಚಿತ್ರ ಕನ್ನಡದ ನಕ್ಕರೇ ಅದೇ ಸ್ವರ್ಗ ಆಗಿತ್ತು. ಆ ಚಿತ್ರದ ನಾಯಕ ನಟರಾಗಿದ್ದವರು ಹಾಸ್ಯ ಚಕ್ರವರ್ತಿ ನರಸಿಂಹರಾಜು. `ಕನಸಿದೋ ನನಸಿದೋ..’ ಎಂಬ ಹಾಡು ಪಿ.ಸುಶೀಲ ಅವರೊಂದಿಗೆ ಡುಯೇಟ್ ಹಾಡಾಗಿತ್ತು. ಗುರುರಾಜಲು ನಾಯ್ಡು ಅವರ ಮೇಲೆ ಚಿತ್ರಿತವಾಗಿತ್ತು.

ಅವರು ಹಾಡಿದ ಮೊದಲ ತಮಿಳು ಚಿತ್ರ ಹೊಟೇಲ್ ರಂಭ. `ಅತ್ತ ನೋಡು ಇಪ್ಪಡಿ ಎತ್ತತ್ತನೇ ನಾಲಾಚು..’ ಎಂಬ ಡುಯೆಟ್ ಹಾಡನ್ನು ಎಲ್.ಆರ್.ಈಶ್ವರಿ ಅವರ ಜೊತೆ ಹಾಡಿದ್ದರು. ಎಂಎಸ್.ವಿಶ್ವನಾಥನ್ ಆ ಚಿತ್ರದ ಸಂಗೀತ ನಿರ್ದೇಶಕ. ಆದರೆ ಆ ಚಿತ್ರ ಬಿಡುಗಡೆ ಕಾಣಲಿಲ್ಲ. ಮುಂದೆ 1969ರಲ್ಲಿ ಜಮಿನಿ ಗಣೇಶನ್ ಅವರ ಶಾಂತಿ ನಿಲಯಂ ಚಿತ್ರಕ್ಕೆ ಪಿ.ಸುಶೀಲ ಅವರೊಂದಿಗೆ ಡುಯೆಟ್ ಹಾಡು ಹಾಡಿದರು. ಹಾಗೇಯೇ ಎಂ.ಜಿ.ರಾಮಚಂದ್ರನ್ ಅವರ ಅಡಿಮೈ ಪೆಣ್ ಚಿತ್ರದಲ್ಲಿ `ಆಯಿರಂ ನಿಲವೇವಾ..’ ಎಂಬ ಹಾಡನ್ನು ಹಾಡಿದರು. ನಂತರ ಎಸ್.ಜಾನಕಿ ಅವರೊಂದಿಗೆ ಹಾಡಿದ್ದು ಕಣಿಪೆಣ್ ಎಂಬ ಚಿತ್ರದಲ್ಲಿ. ಕದಳಪಳು ಎಂಬ ಚಿತ್ರದಲ್ಲಿ ಹಾಡುವ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಎಸ್‍ಪಿಬಿ ಪ್ರವೇಶ ಪಡೆದರು.
ಅಂತಾರಾಷ್ಟ್ರೀಯ ಕೀರ್ತಿ : 1980ರಲ್ಲಿ ತೆರೆಕಂಡ ಆ ಒಂದು ಚಿತ್ರ ಎಸ್‍ಪಿಬಿ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿಬಿಟ್ಟಿತು. ಸಂಪೂರ್ಣ ಕರ್ನಾಟಕ ಸಂಗೀತ ಆಧಾರದಲ್ಲಿ ಹಾಡಿದ ಗಾಯನವದು. ಕೆ.ವಿಶ್ವನಾಥ್ ನಿರ್ದೇಶನ ಮಾಡಿದ `ಶಂಕರಾಭರಣಂ’ ಎಂಬ ಚಿತ್ರ ಭಾರತೀಯರ ಹೃನ್ಮನಗಳಲ್ಲಿ ಸಂಗೀತದ ಅಲೆಯನ್ನೇ ಎಬ್ಬಿಸಿತು. ಕೆ.ವಿ.ಮಹಾದೇವನ್ ಆ ಚಿತ್ರದ ಸಂಗೀತ ನಿರ್ದೇಶಕ.
ಹಿಂದಿ ಚಿತ್ರರಂಗಕ್ಕೆ ಪ್ರವೇಶ : 1981ರಲ್ಲಿ ಕಮಲ್‍ಹಾಸನ್ ಅವರ `ಏಕ್ ದ್ವಜೇ ಕೇಲಿಯೇ..’ ಎಂಬ ಚಿತ್ರಕ್ಕೆ ಹಾಡುವ ಮೂಲಕ ಬಾಲಿವುಡ್ ಪ್ರವೇಶ ಪಡೆದರು ಎಸ್‍ಪಿಬಿ. ಈ ಚಿತ್ರಕ್ಕೆ ಅತ್ಯುತ್ತಮ ಗಾಯಕ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಚಿತ್ರಕ್ಕೆ ಸಂಗೀತ ನೀಡಿದವರು ಇಳೆಯರಾಜ.

ಸಂಗೀತ ಮಾಂತ್ರಿಕ ಇಳೆಯರಾಜ ಅವರ ಜೊತೆಗೂಡಿ ಅತಿ ಹೆಚ್ಚು ಚಿತ್ರಗಳಲ್ಲಿ ಎಸ್‍ಪಿಬಿ ಹಾಡಿದರು. ಎಸ್.ಜಾನಕಿ ಅವರೊಂದಿಗೆ ಡುಯೆಟ್ ಹಾಡುಗಳಿಗೆ ಧ್ವನಿಯಾಗಿದ್ದೂ ಕೂಡ ದಾಖಲೆಯೇ. ಇಳೆಯರಾಜ ಹಾಗೂ ಎಸ್‍ಪಿಬಿ ಜೊತೆ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅದು 1983ರಲ್ಲಿ ಸಾಗರ ಸಂಗಂ ಚಿತ್ರಕ್ಕೆ ಇಬ್ಬರೂ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. 1986ರಲ್ಲಿ ಸ್ವಾತಿಮುತ್ಯುಂ ಚಿತ್ರಕ್ಕೆ ಮತ್ತೆ 1988ರಲ್ಲಿ ರುದ್ರವಿಲ್ಲಾ ಎಂಬ ಚಿತ್ರಗಳಿಗೆ ಇಬ್ಬರೂ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸಲ್ಮಾನ್‍ಖಾನ್‍ಗೆ ಹಾಡು : 1989ರಲ್ಲಿ ಸಲ್ಮಾನ್‍ಖಾನ್ ಮೊದಲ ಚಿತ್ರ `ಮೇನೆ ಫ್ಯಾರ್‍ಕಿಯಾ’ ಚಿತ್ರದಲ್ಲಿ ಹಾಡುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದರು. ಈ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಕೂಡ ಸಿಕ್ಕಿತು. ಮುಂದೆ `ಹಮ್ ಆಪ್ ಕಿಯೇ ಕೌನ್’ ಚಿತ್ರದ ಮೂಲಕ ಮತ್ತೆ ಗಮನ ಸೆಳೆದರು. ಆ ಚಿತ್ರದಲ್ಲಿ ಗಾನಕೋಗಿಲೆ ಲತಾಮಂಗೇಶ್ಕರ್ ಅವರ ಜೊತೆ ಹಾಡುವ ಅವಕಾಶ ಸಿಕ್ಕಿತು ಎಸ್‍ಪಿಬಿ ಅವರಿಗೆ.. `ದಿದ್ದಿ ತೇರಾ ದೇವರ್ ದಿವಾನ..’ ಎಂಬ ಹಾಡು ಅತ್ಯಂತ ಜನಪ್ರಿಯವಾಯಿತು ಕೂಡ. 90ರ ದಶಕದಲ್ಲಿ ಸಲ್ಮಾನ್‍ಖಾನ್ ಅವರ ಎಲ್ಲಾ ಹಾಡುಗಳನ್ನು ಎಸ್‍ಪಿಬಿ ಹಾಡುತ್ತಿದ್ದರು. ಅದು 70-80ರ ದಶಕದಲ್ಲಿ ರಾಜೇಶ್ ಖನ್ನಾ ಹಾಗೂ ಕಿಶೋರ್‍ಕುಮಾರ್‍ಗೆ ಹೋಲಿಕೆಯಾಗಿತ್ತು.

90ರ ದಶಕದಲ್ಲಿ ಎಸ್‍ಪಿಬಿ ಚಿತ್ರಸಂಗೀತ ಲೋಕವನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟರು. ಸಂಗೀತ ನಿರ್ದೇಶಕರಾದ ವಿದ್ಯಾಸಾಗರ್, ಎಂ.ಎಂ.ಕೀರವಾಣಿ, ಎಸ್.ಎ.ರಾಜ್‍ಕುಮಾರ್, ದೇವಾ ಹಾಗೂ ಎ.ಆರ್.ರೆಹಮಾನ್ ಅವರಿಗೆ ಅನಿವಾರ್ಯ ಗಾಯಕರಾಗಿದ್ದರು. ಇಳೆಯರಾಜ ಅವರಿಗಂತೂ ಎಸ್‍ಪಿಬಿಯೇ ಎಲ್ಲಾ ಆಗಿತ್ತು.
ಕನ್ನಡದಲ್ಲಿ ಪ್ರೇಮಲೋಕ ಚಿತ್ರದ ಮೂಲಕ ಹಂಸಲೇಖ ಹಾಗೂ ಎಸ್‍ಪಿಬಿ ಜೋಡಿ ಕಮಾಲ್ ಮಾಡಿತ್ತು. 1995ರಲ್ಲಿ ಹಿಂದುಸ್ತಾನಿ ಸಂಗೀತವನ್ನು ಆಧರಿಸಿದ `ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ಶ್ರೇಷ್ಠ ಗಾಯಕ ರಾಷ್ಟ್ರ ಪ್ರಶಸ್ತಿ ಎಸ್‍ಪಿಬಿ ಅವರಿಗೆ ದಕ್ಕಿತು. ಇಳೆಯರಾಜ ಅವರಂತೆ ಹಂಸಲೇಖ ಅವರಿಗೂ ಎಸ್‍ಪಿಬಿ ಅನಿವಾರ್ಯ ಗಾಯಕರಾಗಿದ್ದರು.

ಅದೇಕೋ ಬಹಳ ಸಮಯ ಎಸ್‍ಪಿಬಿ ಹಿಂದಿ ಚಿತ್ರಗಳಿಗೆ ಹಾಡಲಿಲ್ಲ. ಸುಮಾರು 15 ವರ್ಷಗಳ ಬಳಿಕ ಕೆಲವು ವರ್ಷಗಳ ಹಿಂದೆ ಶಾರುಕ್‍ಖಾನ್ ಅವರ ಚೆನ್ನೈ ಎಕ್ಸ್‍ಪ್ರೆಸ್ ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಡಿದ್ದರು. 2020ರಲ್ಲಿ ಇಳೆಯರಾಜ ಸಂಗೀತ ನಿರ್ದೇಶನದಲ್ಲಿ `ಭರತಭೂಮಿ’ ಸಂಚಿಕೆಗೆ ಹಾಡಿದರು. ಅದು ಕೊರೊನಾ ವಾರಿಯರ್‍ಗೆ ಅರ್ಪಣೆ ಮಾಡಲಾಗಿದ್ದ ಹಾಡು.

Social Share :

ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಥೀಮ್ ಪೋಸ್ಟರ್ ಆರ್ ಜಿ ವಿ ಬಿಡುಗಡೆ

Social Share :

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ, ಆರ್ ಚಂದ್ರು ನಿರ್ದೇಶನದ, ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ.. ಈ ಸಡಗರಕ್ಕೆ ಕಬ್ಜ ಚಿತ್ರತಂಡ ಥೀಮ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡುತ್ತಿದೆ. ಥೀಮ್ ಪೋಸ್ಟರ್ ಅನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸೆಪ್ಟೆಂಬರ್ 17ರ ಸಂಜೆ 5 ಕ್ಕೆ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರು, ಹೈದರಾಬಾದ್ ಹಾಗೂ ಇತರೆಡೆ ನಿರ್ಮಿಸಲಾಗಿದ್ದ, ಅದ್ದೂರಿ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.


ಉಪೇಂದ್ರ ಈ ಚಿತ್ರಕ್ಕಾಗಿ ನಾಲ್ಕು ಘಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಹಾಗೆ ಸಜ್ಜಾಗಿ ಸುಂದರಾಂಗನಾಗಿ ಕಾಣಿಸಿಕೊಂಡಿದ್ದಾರೆ. ಇದು ಆರ್.ಚಂದ್ರು ಕನಸಿನ ಸಿನಿಮಾ .. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದ್ದೂರಿತನಕ್ಕೆ ಯಾವುದೇ ಕೊರತೆ ಇಲ್ಲ. ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಕಬ್ಜ ಮೂಡಿಬರುತ್ತಿದೆ ಎಂವ ವಿವರಣೆ ಆರ್ ಚಂದ್ರು ಅವರದು. ಎಂ.ಟಿ.ಬಿ ನಾಗರಾಜ್ ಅರ್ಪಿಸುವ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಹಾಗೂ ಇತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Social Share :

ಡಿ ಡಿ ಪಿಕ್ಚರ್ಸ್ ಕೃಷ್ಣಪ್ಪ ಕನಸಿನ ಪಾನ್ ಇಂಡಿಯಾ ಸಿನಿಮಾಗಳು..

Social Share :

ಸಿನಿಮಾ ಒಂದು ಕನಸು.. ಎಂಬುದು ನಿಜವಾದ ನಂಬಿಕೆ.. ಸಿನಿಮಾ ನಿರ್ಮಾಣ ಕ್ರಿಯಾಶೀಲತೆಗೆ ಮೆರಗು ನೀಡುವ ಹಾದಿ.. ಕೆಲವೊಮ್ಮೆ ಅದು ಫ್ಯಾಷನ್ ಮತ್ತು ಕೆಲವೊಮ್ಮೆ ಅದು ಉಸಿರು.

ಆದರೆ ಸಿನಿಮಾ ನಿರ್ಮಾಣ ಎಂಬುದು ಹೂವಿನ ಹಾಸಿಗೆ ಅಲ್ಲವೇ ಅಲ್ಲ.. ಅದಕ್ಕೆ ಗುಂಡಿಗೆ; ಅನೇಕ ಬಾರಿ ಡಬ್ಬಲ್ ಗುಂಡಿಗೆ ಬೇಕಾಗುತ್ತದೆ.. ಆ ರೀತಿಯಲ್ಲಿ ಎದೆಗಾರಿಕೆ ಮೆರೆಸಲು ಸ್ಯಾಂಡಲ್ ವುಡ್ ಗೆ ಗಂಡುಗಲಿಯಂತೆ ಬಂದವರು ಶಿವಮೊಗ್ಗ ಜಿಲ್ಲೆ ಸೊರಬ ಮೂಲದ ಎಂ.ವಿ.ಕೃಷ್ಣಪ್ಪ ಅವರು. ಈಗಾಗಲೇ ಒಂದು ಚಿತ್ರ ಮಾಡಿ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ಈ ಕೊರೊನಾ ಹೆಮ್ಮಾರಿಯಿಂದ ಪಾರಾಗುವ ದಿನಗಳಿಗಾಗಿ ಕಾಯುತ್ತಿದ್ದಾರೆ.

ನಿಜ ಜೀವನದಲ್ಲಿ ಉದ್ಯಮಿಯಾಗಿರುವ ಕೃಷ್ಣಪ್ಪ ಅವರಿಗೆ ಸಿನಿಮಾ ಎಂಬುದು ಫ್ಯಾಷನ್. ಹಾಗಾಗಿ ಅದು ಹೆಚ್ಚು ಹೆಚ್ಚು ರೋಚಕವಾಗಿರಬೇಕು ಎಂಬುದು ಆಕಾಂಕ್ಷೆ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಹಾಕಿಕೊಂಡು ಪಾನ್ ಇಂಡಿಯಾ ಸಿನಿಮಾ ಮಾಡುವ ಮಹದಾಸೆ. ಜೊತೆಗೆ ಆ ಚಿತ್ರಗಳು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕು ಎಂಬುದು ಬಯಕೆ. ಕ್ವಾಲಿಟಿ ಸಿನಿಮಾ ಮಾಡುವ ಆಸಕ್ತಿಯಲ್ಲಿ ಈಗಾಗಲೇ ಹಲವು ಸ್ಟಾರ್ ನಟರ ಕಾಲ್ ಶೀಟ್ ಪಡೆದು ಚಿತ್ರ ನಿರ್ಮಿಸುವ ದಿನಗಳಿಗಾಗಿ ಕಾಯುತ್ತಿದ್ದಾರೆ ಕೃಷ್ಣಪ್ಪ.
ಡಾ.ರಾಜ್ ಕುಮಾರ್, ಬಂಗಾರಪ್ಪ ಹಾಗೂ ಇತರ ದಿಗ್ಗಜರನ್ನು ಆದರ್ಶವಾಗಿ ಇರಿಸಿಕೊಂಡಿರುವ ಅವರು ಕನ್ನಡದ ಚಿತ್ರಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು. ಅದಕ್ಕೆ ನನ್ನ ದೊಂದು ಅಳಿಲು ಸೇವೆ ಇರಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದವರು.

ಹಾಗಾಗಿ ಈ ಕೋವಿಡ್ ಮುಗಿಯುವ ದಿನಗಳಿಗಾಗಿ ಕಾಯುತ್ತಿದ್ದಾರೆ. ಎಲ್ಲಾ ಮುಗಿದು ಕಾಲ ಸರಿ ಹೋದ ಬಳಿಕ ದೊಡ್ಡ ದೊಡ್ಡ ಯೋಜನೆಗಳನ್ನು ಪ್ರಕಟಿಸುವ ಹಂಬಲ ಅವರದು. ಡಿ ಡಿ ಪಿಕ್ಚರ್ಸ್ ಎಂಬ ಸಂಸ್ಥೆಯ ಮೂಲಕ ಗುಣಮಟ್ಟದ ಚಿತ್ರಗಳು ಮೂಡಿ ಬರುತ್ತವೆ. ಅವು ಮುಖ್ಯವಾಗಿ ಪಾನ್ ಇಂಡಿಯಾ ಸಿನಿಮಾ ಆಗಿರುತ್ತವೆ. ಏಕೆಂದರೆ ಆ ಚಿತ್ರಗಳು ಹಲವಾರು ಭಾಷೆಗಳಲ್ಲಿಯೂ ನಿರ್ಮಾಣವಾಗುತ್ತವೆ. ಇಲ್ಲವೆ ಕನ್ನಡದಲ್ಲಿ ನಿರ್ಮಾಣವಾಗಿ ಇತರ ಭಾಷೆಗಳಿಗೆ ಡಬ್ ಆಗುತ್ತವೆ. ಕನ್ನಡ ಉದ್ಯಮಕ್ಕೆ ಪಾನ್ ಇಂಡಿಯಾ ಮೆರುಗು ಕೊಡುವ ಅನೇಕ ಚಿತ್ರಗಳಲ್ಲಿ ತಮ್ಮ ಚಿತ್ರಗಳು ಸೇರಬೇಕು ಎಂಬುದು ಅವರ ನಿಲುವು.

ಕೃಷ್ಣಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮುಟ್ಟುಗುಪ್ಪೆ ಗ್ರಾಮದವರು. ಚಿಕ್ಕ ವಯಸ್ಸಿನಲ್ಲಿಯೇ ನಾಟಕದ ಗೀಳು ಹತ್ತಿಸಿಕೊಂಡವರು. ಹಲವಾರು ನಾಟಕಗಳಲ್ಲಿ ಅಭಿನಯಿಸಿ ಬಣ್ಣದ ಬದುಕಿನ ಒಡನಾಟವಿದ್ದರೂ ವ್ಯಾಪಾರ ಸಂಬಂಧ ವಿದೇಶಗಳಲ್ಲಿ ನೆಲೆಸಬೇಕಾದ ಅನಿವಾರ್ಯತೆಯಲ್ಲಿ ಈಜಿಪ್ಟ್, ದುಬೈ ಹಾಗೂ ಇನ್ನಿತರ ದೇಶಗಳನ್ನು ಸುತ್ತಿಕೊಂಡು ಬಂದವರು. ಆದರೆ ಬಣ್ಣದ ಒಡನಾಟ ಹೋಗಲಿಲ್ಲ.. ಇದೇ ಕಾರಣದಿಂದ ಈಗ ಸಿನಿಮಾ ಬದುಕಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ದೊಡ್ಡ ಸ್ಟಾರ್ ನಟರ ಚಿತ್ರ ಮಾಡಬೇಕೆಂಬ ತವಕದಲ್ಲಿ ಕಾಯುತ್ತಿದ್ದರೂ ಡೇಟ್ಸ್ ಹೊಂದಾಣಿಕೆ ಆಗಲಿಲ್ಲ.. ಇದೇ ಪ್ರಯತ್ನದಲ್ಲಿಯೇ ಕೆಲವು ಸ್ಟಾರ್ ಗಳ ಕಾಲ್ ಶೀಟ್ ಪಡೆದೂ ಇನ್ನೇನು ಸಿನಿಮಾ ಆರಂಭಿಸಬೇಕು ಎಂದುಕೊಂಡಾಗ ಕೋವಿಡ್ ನ ಕಾಟ ಎದುರಾಯಿತು. ಇದರ ನಡುವೆಯೇ ಹೊಸಬರನ್ನು ಹಾಕಿಕೊಂಡು ನಿರ್ಮಿಸಿದ ‘ಅಭಿರಾಮಿ’ ಎಂಬ ಚಿತ್ರದಲ್ಲಿ ಕೃಷ್ಣಪ್ಪ ಸ್ವತಃ ಅಭಿನಯಿಸಿದ್ದಾರೆ. ಜೊತೆಗೆ ಇವರ ಇಬ್ಬರು ಗಂಡು ಮಕ್ಕಳು (ದೃಶ್ಯ ಹಾಗೂ ದೃವ) ಈ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನೆಲೆಸುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೃಷ್ಣಪ್ಪ ಮಾಡಿಕೊಂಡಿದ್ದಾರೆ. ಇದು ತಾಯಿ ಭೂಮಿ. ಮೊದಲು ಕನ್ನಡ ಚಿತ್ರಗಳನ್ನು ಮಾಡಿ ಮುಂದೆ ಬಾಲಿವುಡ್ ಪ್ರವೇಶಿಸುವ ಆಸೆ. ಹಾಗಾಗಿ ಪಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂಬುದು ಕನಸ್ಸಲ್ಲ.. ಅದು ಧೃಡ ನಿರ್ಧಾರ. ಚಿತ್ರವೂ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕು ಎಂಬುದು ಚಿತ್ರದ ಮೇಲಿರುವ ಪ್ರೀತಿ ಮತ್ತು ಫ್ಯಾಷನ್ ನ ಕಾರಣದಿಂದಾಗಿ. ಮುಂದೆ ಕನ್ನಡದ ಸ್ಟಾರ್ ಗಳ ಸಹಕಾರದಿಂದ ಖಂಡಿತಾ ನನ್ನ ಚಿತ್ರಗಳು ಯಶಸ್ಸು ಸಾಧಿಸುತ್ತವೆ.. ಅದು ಸಾಧ್ಯವಾದರೆ ನಿರ್ದೇಶನ ಮಾಡುವ ಹಂಬಲವೂ ಇದೆ ಎಂದು ಹೇಳುತ್ತಲೇ ಹೋದರು.. ಮತ್ತು ಅದೇ ಆತ್ಮವಿಶ್ವಾಸದಲ್ಲಿ ಮಾತನಾಡುತ್ತಾ ಹೋದರು ಕೃಷ್ಣಪ್ಪ.

 

Social Share :

ನಟಿಯರಷ್ಟೇ ಅಲ್ಲ ನಟರಿಗೂ ಸ್ಟಾರ್ ಪಟ್ಟದ ಅದೃಷ್ಟ ಖುಲಾಯಿಸುತ್ತದೆ ಹೇಗೆ!

Social Share :

ಕೆಲವು ನಟಿಯರು ರಾತ್ರೋ ರಾತ್ರಿ ಕೋಟಿ ಕೋಟಿ ಸಂಪಾದಿಸಿ ಶ್ರೀಮಂತಿಕೆ ವೈಭವ ಗಳನ್ನು ಪಡೆಯುವುದು ಹೇಗೆ ಎಂಬುದರ ಬಿಸಿ ಬಿಸಿ ಚರ್ಚೆ ಈಗ ನಡೆಯುತ್ತಿದೆ. ಆದರೆ ಇಂತಹ ವಿಷಯ ಮಾತನಾಡಲು ಈಗಲೂ ಹೆಚ್ಚಿನವರಿಗೆ ಅಂಜಿಕೆ ಅಥವಾ ಮುಜುಗರವಾಗುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡುವುದು ತರವಲ್ಲ. ಎಂಬ ಸೌಜನ್ಯದ ನಡೆಗೆ ಅವರೆಲ್ಲರೂ ಈಗಲೂ ಬದ್ಧ.

ಆದ್ದರಿಂದ ಇಲ್ಲಿ ಹೆಣ್ಣು ಮಕ್ಕಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ಗಂಡಸರ ಪೈಕಿ ಒಂದೆರಡು ಸಿನಿಮಾ ಮಾಡಿ ತಾರಾ ಪಟ್ಟ ಏರಿಸಿಕೊಂಡು ಅನೇಕರು ಸ್ಟಾರ್ ಗಿರಿಯ ಜೊತೆಗೆ ಕೋಟಿ ಕೋಟಿ ಹೇಗೆ ಮಾಡಿಕೊಂಡರೆಂಬುದರ ಕುರಿತು ನಿದರ್ಶನ ಬೇಕಾದರೆ ನೀಡಬಹುದು. ಹೌದು ಒಂದು ಅಥವಾ ಎರಡು ಸಿನಿಮಾ ಮಾಡಿದವರು ಮೂರನೇ ಸಿನಿಮಾ ಆಗುವಷ್ಟರಲ್ಲಿ ಬೆಂಜ್, ಬಿಎಂಡಬ್ಲ್ಯು, ಆಡಿಯಂಥಹ ನ ಕಾರಿನಲ್ಲಿ ಹೇಗೆ ಓಡಾಡುತ್ತಾರೆ.

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಏನು ಬೇಕಾದರೂ ಆಗುತ್ತದೆ. ಒಬ್ಬ ಹೊಸಬನನ್ನು ಹಾಕಿಕೊಂಡು ಚಿತ್ರ ಮಾಡಿದ ಎದೆಗಾರಿಕೆಗೆ ಹೆಚ್ಚಿನ ನಿರ್ಮಾಪಕರು ಬೀದಿ ಪಾಲಾಗುತ್ತಾರೆ.. ಇಲ್ಲವೇ ಸಾಲದ ಹೊರೆಯಲ್ಲಿ ನರಳಾಡುತ್ತಾರೆ. ಆದರೆ ಮುಂದಿನ ಚಿತ್ರಕ್ಕೆ ಹೋದ ನಟ ಹೇಗೆ ಸಂಭಾವನೆ ಏರಿಸಿಕೊಳ್ಳುತ್ತಾ ಶ್ರೀಮಂತನಾಗುತ್ತಾನೆ ಎಂಬುದಕ್ಕೆ ಆರ್ಥಿಕತೆ ನಿರ್ವಹಣೆ ಮಾಡುವ ಆತನ ಚಮತ್ಕಾರಿಕೆ ಇಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ಬಲ್ಲವರೇ ಬಲ್ಲರು.
ಹೌದು ಸ್ಟಾರ್ ಗಿರಿ ಹೇಗೆ ಹುಟ್ಟುತ್ತದೆ ಮತ್ತು ಸ್ಟಾರ್ ವ್ಯಾಲ್ಯೂಗೆಂದು ಕೋಟಿ ಕೋಟಿ ಹೇಗೆ ಸಾಧ್ಯತೆ ಪಡೆಯುತ್ತದೆ ಎಂಬುದೆಲ್ಲವೂ ಚಮತ್ಕಾರಿಕ ವಿಷಯವೇ.

ಒಂದು ಚಿತ್ರ ಬಿಡುಗಡೆಯಾದ ಬಳಿಕ ಆ ಚಿತ್ರ ಸಾಧಾರಣ ಸಾಧನೆ ಮಾಡಿದರೂ ಮಾಧ್ಯಮಗಳಿಂದ ಚೆನ್ನಾಗಿ ಹಣ ಮಾಡಿತು ಎಂದು ಬಿಂಬಿಸಿಕೊಳ್ಳುವುದು ಮೊದಲ ವರಸೆ. ಎರಡನೇ ಚಿತ್ರ ಬೋಣಿಯಾಗದಿದ್ದರೂ ಒಂದಷ್ಟು ಅಭಿಮಾನಿಗಳನ್ನು ಚಿತ್ರ ಮಂದಿರದ ಬಳಿ ಕಲೆ ಹಾಕಿ ಮೂರು ದಿನಕ್ಕೆ ಎಷ್ಟೋ ಕೋಟಿ ಗಳಿಕೆ ಮಾಡಿತೆಂದು ಪತ್ರಿಕೆಗಳಲ್ಲಿ ಬರೆಸಿಕೊಳ್ಳುವುದು.. ಒಂದು ಚಿತ್ರ ಮೂರು ದಿನಗಳಲ್ಲಿ ಹತ್ತು ಕೋಟಿ ಗಳಿಕೆ ಮಾಡಿತೆಂದು ವಿಜೃಂಭಿಸುವುದು.. ಅದು ಅಥವಾ ಅದರಲ್ಲಿ ಅರ್ಧ ಭಾಗ ನಾಯಕ ನಟನ ಸಂಭಾವನೆ. ಹೀಗೆ ಹೆಚ್ಚುವ ಸಭಾವನೆ ನಾಲ್ಕನೇ ಚಿತ್ರ ಕ್ಕೆ ದುಪ್ಪಟ್ಟು ಆಗುತ್ತದೆ.. ಆದರೆ ಕೋಟಿ ಕೋಟಿ ಗಳಿಕೆ ಮಾಡಿದ ಚಿತ್ರದ ನಿರ್ಮಾಪಕ ಮಾತ್ರ ಯಾವ ರೀತಿಯಲ್ಲಿಯೂ ಸುಧಾರಿಸಿರುವುದಿಲ್ಲ.. ಕೆಲವು ಸ್ಟಾರ್ ಗಳನ್ನು ಹೊರತುಪಡಿಸಿದರೆ; ಅನೇಕರು ತಮ್ಮ ಪರವಾಗಿ ಬರೆಯುವ ದೊಡ್ಡ ಪಡೆಯನ್ನೇ ಜೊತೆಯಲ್ಲಿ ಇಟ್ಟು ಕೊಂಡಿರುತ್ತಾರೆ. ಇಂತಹವರಿಂದಲೇ ಒಬ್ಬ ಹೊಸ ನಟ ಸ್ಟಾರ್ ಆಗುತ್ತಾನೆ.. ಕ್ರಿಯಾಶೀಲತೆ ಗೊತ್ತಿಲ್ಲದಿದ್ದರೂ ಇನ್ನೊಬ್ಬ ಸ್ಟಾರ್ ನಿರ್ದೇಶಕ ಆಗುತ್ತಾನೆ.

Social Share :

ಸರ್ಕಾರಿ ಶಾಲೆಗಳ ಮಹತ್ವ ಸಾರುವ ಮಕ್ಕಳ ಚಿತ್ರ

Social Share :

ಎಷ್ಟೋ ಕಡೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಶೋಚನೀಯ ಸ್ಥಿತಿ ಬಂದೊದಗುತ್ತದೆ. ಕೆಲವೊಮ್ಮೆ ಏನೂ ಕಾರಣವಿಲ್ಲದೆ ಕೆಲವರ ಸ್ವಾರ್ಥಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿರುತ್ತದೆ. ಅದು ಏಕೆ ಎಂತು ಎಂದು ಪ್ರಶ್ನೆ ಮಾಡದಷ್ಟು ಮುಗ್ಧರಾಗಿರುತ್ತಾರೆ ಜನರು. ಆದರೆ ಇಲ್ಲಿ ವಿದ್ಯಾರ್ಥಿಗಳು ಶಾಲೆಯನ್ನು ಉಳಿಸಿಕೊಳ್ಳುವ ಸಾಹಸ ಮಾಡುತ್ತಾರೆ.

ಇಂತಹ ಕಥಾ ಹಂದರವಿರುವ ಮಕ್ಕಳ ಚಿತ್ರ ಈಚೆಗೆ ಮುಹೂರ್ತ ಆಚರಿಸಿಕೊಂಡಿತು. ಅಂದ ಹಾಗೆ ಹೊಸಬರ ಈ ಮಕ್ಕಳ ಚಿತ್ರದ ಹೆಸರು ‘ನಮ್ಮ ಪ್ರೀತಿಯ ಶಾಲೆ’ ಇದು 30 ವರ್ಷಗಳ ಹಿಂದೆ ಬಂದಿದ್ದ ‘ದಂಗೆ ಎದ್ದ ಮಕ್ಕಳು’ ಚಿತ್ರವನ್ನು ನೆನಪಿಗೆ ತರುತ್ತದೆ.

ಚಿತ್ರದ ಮಹೂರ್ತ ಸಮಾರಂಭವು ಬೆಂಗಳೂರಿನ ಮಿನಿ ಇಸ್ಕಾನ್ ಆವರಣ, ಶ್ರೀ ಲಕ್ಷೀ ನರಸಿಂಹ ದೇವಸ್ಥಾನ ಆವರಣದಲ್ಲಿ ಸರಳವಾಗಿ ಜರುಗಿತು. ಮಾ.ಜಿವಿತ್‌ಭೂಷಣ್ (ಸೆಲ್ವಂ ಪುತ್ರ) ಮತ್ತು ಮಾಸ್ಟರ್ ಮಹಾನಿಧಿ ನಟಿಸುತ್ತಿರುವ ಮೊದಲ ದೃಶ್ಯವನ್ನು ಸೆರೆಹಿಡಿಯಲಾಯಿತು. ನಂತರ ಹೊರಾಂಗಣದಲ್ಲಿ ಚಿತ್ರೀಕರಣ ನಡೆಯಿತು. ತಾರಾಗಣದಲ್ಲಿ ಅಚ್ಯುತಕುಮಾರ್, ದತ್ತಣ್ಣ, ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಹಾಗೂ ಇತರರು ನಟಿಸುತ್ತಿದ್ದಾರೆ. (ಸಿಎಂ ಪಾತ್ರವನ್ನು ಸ್ಟಾರ್ ನಟ ಅಭಿನಯಿಸುವ ಸಾಧ್ಯತೆ ಇದೆ)

ಈ ಚಿತ್ರದ ಕಥೆ ಸರಳ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆಯೆಂದು ಶಾಲೆಯನ್ನು ಮುಚ್ಚಲಾಗುತ್ತದೆ. ಪೋಷಕರು ಈ ಬಗ್ಗೆ ಪಂಚಾಯತಿ ಅಧ್ಯಕ್ಷರನ್ನು ಕೇಳಿದಾಗ, ಸಿಎಂ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿದೆ ಎಂಬ ಉತ್ತರ ಬರುತ್ತದೆ. ಬಳಿಕ ಏನಿದ್ದರೂ ನೀವು ಅವರನ್ನೇ ಸಂಪರ್ಕಿಸಬೇಕೆಂಬ ಉತ್ತರ ಬರುತ್ತದೆ. ಇದನ್ನು ಕೇಳಿಸಿಕೊಂಡ ಇಬ್ಬರು ಮಕ್ಕಳು ಯಾರಿಗೂ ಹೇಳದೆ ಶಾಲೆಯನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ಪ್ರಯತ್ನ ಮಾಡಲು ಬೆಂಗಳೂರಿಗೆ ಬರುತ್ತಾರೆ. ಅವರಿಬ್ಬರೂ ಮಹಾನಗರದಲ್ಲಿ ಏನೆಲ್ಲಾ ತೊಂದರೆ ಎದುರಿಸುತ್ತಾರೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಏನೇನು ಕಷ್ಟಗಳನ್ನು ಅನುಭವಿಸುತ್ತಾರೆ. ಕೊನೆಗೂ ಅವರ ಶ್ರಮ ಸಾರ್ಥಕವಾಗುತ್ತದೆಯೇ.. ಶಾಲೆ ಪುನ: ತೆರೆಯುವುದೇ.. ಎಂಬುದು ಕಥಾ ಸಾರಾಂಶ.

ಚಿತ್ರದ ರಚನೆ,ಛಾಯಾಗ್ರಹಣ, ನಿರ್ದೇಶನ ಮಾಡುತ್ತಿರುವ ಸೆಲ್ವಂ ನಿರ್ಮಾಣದಲ್ಲಿ ಪಾಲುದಾರರು. ಇವರೊಂದಿಗೆ ಹೈದರಬಾದ್‌ನ ವೈ.ಆರ್.ವೇಮಿರೆಡ್ಡಿ ಶ್ರೀ ಯೋಗ ಲಕ್ಷೀ ನರಸಿಂಹ ಸ್ವಾಮಿ ಕಂಬೈನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಎರಡು ಹಾಡುಗಳಿಗೆ ಪಳನಿ.ಡಿ.ಸೇನಾಪತಿ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆ ಶಿವತೇಜಸ್, ನೃತ್ಯ ಹರಿಕೃಷ್ಣ-ಶ್ರೀಶೈಲಂ, ನಿರ್ಮಾಣ ನಿರ್ವಹಣೆ ಹನುಮಂತು ಅವರದಾಗಿದೆ. ಕೋಲಾರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Social Share :

ಕಬ್ಜ ಮಾತಾಡುತ್ತಿದೆ..

Social Share :

ಯಾವುದೇ ಇರಲಿ ಒಂದು ಸಿನಿಮಾ ಮಾತನಾಡಬೇಕೇ ಹೊರತು.. ಸಿನಿಮಾದೊಳಗಿನ ನಾವು ಮಾತಾಡಬಾರದು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಈ ಮಾತಿನಲ್ಲಿ ಚಿತ್ರರಂಗದ ಹಲವು ಆಯಾಮಗಳ ಅನುಭವ ಎದ್ದು ಕಾಣುತಿತ್ತು. ಮಾತಿನಲ್ಲಿ ಸತ್ಯವಿತ್ತು. ಅವರ ಮಾತಿಗೆ ‘ಓಂ’ ಚಿತ್ರ ತಳುಕು ಹಾಕಿಕೊಂಡಿದ್ದು ಆಕಸ್ಮಿಕ.. ಹೆಚ್ಚು ಪ್ರಚಾರ ಮಾಡಲಿಲ್ಲ.. ಬಿಡುಗಡೆಗೆ ಮುನ್ನ ಅಬ್ಬರಿಸಲಿಲ್ಲ; ಆದರೆ ಬಿಡುಯಾದಾಗಲಿಂದಲೂ ಅದು ಭಾರತೀಯ ಮಟ್ಟದಲ್ಲಿ ಹೆಸರು ಮಾಡಿತು. ಆದರೆ ‘ಕಬ್ಜ’ ಹಾಗಲ್ಲ; ಬಿಡುಗಡೆಗೆ ಮುಂಚೆಯೇ ಹೆಚ್ಚು ಸೌಂಡ್ ಮಾಡುತ್ತಿದೆ. ಅದಕ್ಕೆ ನಿರ್ದೇಶಕ ಆರ್.ಚಂದ್ರು ಅವರ ಚಿತ್ರದ ಬಗೆಗಿನ ಅದಮ್ಯ ಉತ್ಸಾಹ ಕಾರಣ. ಚಿತ್ರದ ಪ್ರತಿ ಸೊಬಗನ್ನು ಆಯಾ ಸಂದರ್ಭಕ್ಕೆ ಉಣಬಡಿಸುತ್ತಾ.. ಅದು ಪಾನ್ ಇಂಡಿಯಾ ಸಿನಿಮಾ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಈಗ ಅದೇ ಸಿನಿಮಾ ವೆಬ್ ಸೈಟ್ ಮೂಲಕ ಇಡೀ ಮಾಧ್ಯಮ ಲೋಕಕ್ಕೆ ಕುಳಿತಲ್ಲೇ ಸುದ್ದಿಗಳನ್ನು ಮತ್ತು ಚಿತ್ರಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪೂರೈಸಲು ಚಿತ್ರತಂಡ ಅತ್ಯಾಧುನಿಕ ಉಪಕರಣಗಳನ್ನು ಸಜ್ಜುಗೊಳಿಸಿದೆ. ಅದುವೆ ಕಬ್ಜ ಚಿತ್ರ ದ ವೆಬ್ ಸೈಟ್.
ಇದರ ಬಿಡುಗಡೆಗೆ ಸಾಕ್ಷಿಯಾಗಿದ್ದವರು ಸೆಂಚುರಿಸ್ಟಾರ್ ಡಾ.ಶಿವರಾಜ್ ಕುಮಾರ್, ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ರಾಜಕಾರಣಿ ಎಂಟಿಬಿ ನಾಗರಾಜ್ ಹಾಗೂ ಇತರರು.

ಇಡೀ ದೇಶ ಕೋವಿಡ್ ಸುಳಿಗೆ ಸಿಲುಕಿದ ಬಳಿಕ ಸಿನಿಮಾ ರಂಗದ ಎಲ್ಲಾ ಚಟುವಟಿಕೆಗಳೂ ಸ್ಥಬ್ದಗೊಂಡಿದ್ದವು. ಹಾಗಾಗಿ ದೊಡ್ಡ ಸ್ಟಾರ್ ಹೊಟೇಲ್ ನಲ್ಲಿ ನಡೆದ ‘ಕಬ್ಜ’ ಸಿನಿಮಾದ ಕಾರ್ಯಕ್ರಮ ಸಿನಿಮಾ ಚಟುವಟಿಕೆಗಳ ಅದ್ದೂರಿ ಆಗಮನದ ಮುನ್ಸೂಚಕ.
ನಿಜ ಹೇಳಬೇಕೆಂದರೆ ಶಿವಣ್ಣ ಒಂದು ರೀತಿಯ ಲಹರಿಯಲ್ಲಿದ್ದರು. ಪಕ್ಕದಲ್ಲಿ ಉಪ್ಪಿ ಇದ್ದರು. ಕಬ್ಜ ಅಂಡರ್ ವಲ್ಡ್ ಸಿನಿಮಾ ಅಂದ ಮೇಲೆ ಅವರು ಹಿಂದಿನ ನೆನಪುಗಳಿಗೆ ಜಾರಿದರು. ಓಂ ಇಡೀ ಭಾರತೀಯ ಚಿತ್ರರಂಗವನ್ನು ಗಮನ ಸೆಳೆದ ಬಗ್ಗೆ ವಿವರಿಸಿದರು. ಈ ವೇಳೆ ಅವರು ಚಿತ್ರ ಮಾತಾಡಬೇಕು ನಾವು ಮಾತನಾಡಬಾರದು ಎಂದರು.

ರಿಯಲ್ ಸ್ಟಾರ್ ಉಪೇಂದ್ರ ಅವರೂ ಓಂ ನಿರ್ಮಾಣದ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್, ಅವರ ಸಹೋದರ ವರದಪ್ಪನವರು ಚಿತ್ರದ ಆಶಯಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎಂಬುದನ್ನು ವಿವರಿಸಿದರು. ಇಡೀ ಭಾರತೀಯ ಚಿತ್ರರಂಗ ಓಂ ಚಿತ್ರವನ್ನು ಗುರುತಿಸಿತು. ಓಂ ಗೆಲುವಿಗೆ ಯಾರು ಏನೇ ಹೇಳಲಿ ಶಿವಣ್ಣ ಕಾರಣಕರ್ತರು ಎಂದರು ಉಪ್ಪಿ. ಇದಕ್ಕೆ ಮುಂಚೆ ಓಂ ಗೆಲುವಿಗೆ ಉಪ್ಪಿ ಶ್ರಮವೇ ಕಾರಣವೆಂದು ಶಿವರಾಜ್ ಕುಮಾರ್ ಹೊಗಳಿದ್ದರು.
ಅರ್.ಚಂದ್ರು ಬಹಳವೇ ಶ್ರಮ ಜೀವಿ. ಬಹಳ ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡುತ್ತಿದ್ದಾರೆ. ಅವರೊಳಗೊಂದು ಫ್ಯಾಷನ್ ಇರುತ್ತೆ. ಕೌಟುಂಬಿಕ ಮೌಲ್ಯ ಗಳಿಗೆ ಬೆಲೆ ಕೊಡುತ್ತಾರೆ. ನಾನು ಕೂಡ ಅವರ ಜೊತೆ ಮೈಲಾರಿ ಎಂಬ ಸಿನಿಮಾ ಮಾಡಿದ್ದೆ.. ಅದರ ಯಶಸ್ಸು ಏನೆಂಬುದು ಎಲಗರಿಗೂ ತಿಳಿದಿದೆ ಎಂದರು ಶಿವಣ್ಷ.

ನಿಜ ಹೇಳಬೇಕೆಂದರೆ ಶಿವಣ್ಣ ಮಾತಿನ ಲಹರಿಯಲ್ಲಿದ್ದರು. ಉಪ್ಪಿ ಅವರ ಬಗ್ಗೆ ಮಾತನಾಡುವಾಗ ಅವರು ಯಾವುದೋ ಜನ್ಮದಲ್ಲಿ ಅಣ್ಣ ತಮ್ಮ ಆಗಿರಬಹುದು ಎಂದರು. ಅಥವಾ ಗಂಡ ಹೆಂಡತಿ ಆಗಿರಬಹುದು ಎಂದಾಗ ಎಲ್ಲರೊಳಗೂ ನಗು. ನಿರೂಪಣೆ ಮಾಡುತ್ತಿದ್ದ ಅನು ಶ್ರೀ ಕೇಳಿಯೇ ಬಿಟ್ಟರು. ಅಲ್ಲಾ ಶಿವಣ್ಣ ನೀವು ಪಬ್ಲಿಕ್ ಪಂಕ್ಷನ್ ನಲ್ಲಿ ಹೀಗೆ ಹೇಳ್ತಿದ್ದೀರಾ.. ಶಿವಣ್ಣ ನಕ್ಕು ಹೇಳಿದರು ಮನಸಿಗೆ ಅನಿಸಿದನ್ನು ಹೇಳೋಕೆ ಭಯ ಏಕೆ..

Social Share :

ಸೋನು ಸೈಲೆಂಟ್ ಗ್ಲಾಮರ್

Social Share :

ಕಿರುಗೂರು ಗಯ್ಯಾಳಿಗಳು ಚಿತ್ರದಲ್ಲಿ ಹಳ್ಳಿಯನ್ನೇ ಹಿಡಿದು ಮುಕ್ಕುವಂತೆ ಗಲಾಟೆ ಮಾಡುವ ಹೆಣ್ಣು ಪಾತ್ರಗಳ ನಡುವೆ ಮಾತನ್ನೇ ಆಡದ ಸೈಲೆಂಟ್ ಪಾತ್ರವೊಂದಿದೆ. ಅದು ಕಣ್ಣುಗಳಲ್ಲೇ ಭಾವನೆಗಳನ್ನು ಹೊರ ಸೂಸುವ ಪಾತ್ರ. ಮೌನದಲ್ಲೇ ಕೊಲ್ಲುವುದು ಅಂತಾರಲ್ಲ.. ಆ ರೀತಿಯ ಪಾತ್ರ. ಚಿತ್ರಕ್ಕೊಂದು ತಿರುವು ಕೊಡುವುದು ಅದೇ ಪಾತ್ರ.

ನಾಗಿ ಹೆಸರಿನ ಆ ಪಾತ್ರದಲ್ಲಿ ಸಮರ್ಥ ಅಭಿನಯ ನೀಡಿದ್ದವರು ಸೋನುಗೌಡ. ಇಲ್ಲಿಯವರೆಗೂ ಅದೇ ರೀತಿಯ ಪಾತ್ರಗಳನ್ನೇ ಹೆಚ್ಚಾಗಿ ಮಾಡಿರುವ ಸೋನುಗೌಡ ನಿಜವಾದ ಕಲಾವಿದೆ. ಅಭಿನಯ ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡುವ ಪಾತ್ರಗಳ ಆಯ್ಕೆಯಲ್ಲೇ ಒಲವು ತೋರುವ ಅವರಿಗೆ ಥಿಯೇಟರ್ ನತ್ತಲೇ ಹೆಚ್ಚು ಒಲವು.

ಮೇಕಪ್ ರಾಮಕೃಷ್ಣ ಅವರ ಪುತ್ರಿಯಾಗಿರುವ ಅವರಿಗೆ ಚಿತ್ರರಂಗದ ಒಲವು ಚಿಕ್ಕ ವಯಸ್ಸಿನಿಂದಲೇ ಇದ್ದರೂ ಓದು ಮುಗಿಯುವವರೆಗೆ ಇತ್ತ ಸುಳಿಯಲಿಲ್ಲ. ಬಳಿಕ ಮಾಡಿದ ಪಾತ್ರಗಳೆಲ್ಲವೂ ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರಗಳೇ.

ಕಳೆದ ವರ್ಷ ತೆರೆಕಂಡ ಆರ್.ಚಂದ್ರು ನಿರ್ದೇಶನದ ‘ಐ ಲವ್ ಯು’ ಚಿತ್ರದಲ್ಲಿ ಮೌನದಲ್ಲಿ ಗಂಡನಿಗೆ ಅದಮ್ಯ ಪ್ರೀತಿ ಮೊಗೆದುಕೊಡುವ ಪತ್ನಿಯ ಪಾತ್ರದಲ್ಲಿ ಸೋನು ಅಭಿನಯ ಅನನ್ಯ. ನಾಯಕ ನಟಿಯ ಗ್ಲಾಮರ್ ಪಾತ್ರಕ್ಕಿಂತಲೂ ಈ ಸೈಲೆಂಟ್ ಪಾತ್ರವೇ ಪ್ರೇಕ್ಷಕರನಸ್ಸಿನಲ್ಲಿ ಹೆಚ್ಚು ಉಳಿಯುತ್ತದೆ.

ನನಗೆ ಅಭಿನಯ ಸಾಮರ್ಥ್ಯಕ್ಕೆ ಅನುಗುಣವಾದ ಪಾತ್ರಗಳು ಸಿಕ್ಕರೆ ಹೆಚ್ಚು ಖುಷಿಯಾಗುತ್ತದೆ. ಆದರೆ ಗ್ಲಾಮರ್ ಪಾತ್ರಗಳನ್ನು ಒಲ್ಲೆ ಎನ್ನಲಾರೆ. ಏಕೆಂದರೆ ಕಲಾವಿದೆಗೆ ಎಲ್ಲವೂ ಬೇಕು. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಚಿತ್ರರಂಗದ ಚಟುವಟಿಕೆ ನಿಧಾನಗತಿಯಲ್ಲಿದೆ. ಮುಂದೆ ಬರುವ ಅವಕಾಶಗಳನ್ನು ನಾನು ನಿರೀಕ್ಷೆ ಮಾಡುತ್ತಿರುವೆ ಎಂದು ನಕ್ಕರು ಸೋನುಗೌಡ.

Social Share :

ರಾಗಿಣಿ ಸಮಾಜಮುಖಿ ಕೆಲಸಗಳು

Social Share :

ಗ್ಲಾಮರ್ ಬೆಡಗಿ ಎಂದೇ ಕರೆಸಿಕೊಳ್ಳುವ ಕನ್ನಡದ ಹೆಸರಾಂತ ನಟಿ ರಾಗಿಣಿ ದ್ವಿವೇದಿ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾ, ತಾವು ಎಂದಿಗೂ ಸುಮ್ಮನೆ ಕೂರುವುದಿಲ್ಲ.. ಎಂಬ ಸಂದೇವವನ್ನು ಸಮಾಜಕ್ಕೆ ರವಾನಿಸಿದವರು. ಇದೀಗ ಅವರು ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇಡೀ ದೇಶ ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ಲಾಕ್ ಡೌನ್ ಗೆ ಒಳಗಾಗಿತ್ತು.. ಆ ಸಂದರ್ಭದಲ್ಲಿ ಕೂಡ ಅನೇಕ ಸಂಘ ಸಂಸ್ಥೆಗಳ ಜೊತೆ ಸೇರಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪೊಲೀಸ್ ಇಲಾಖೆ ಸಹ ತಮ್ಮ ಕಾರ್ಯಕ್ರಮಗಳಿಗೆ ರಾಗಿಣಿ ಅವರನ್ನು ಆಹ್ವಾನಿಸಿತ್ತು. ಕಲಾವಿದರಿಗೆ ಆಹಾರ ಕಿಟ್ ನೀಡುವಾಗಲೂ ರಾಗಿಣಿ ಇರುತ್ತಿದ್ದರು.

ಸದ್ಯ ರಾಗಿಣಿ ಅವರು ತಮ್ಮ ಸಾಮಾಜಿಕ ಕಾರ್ಯದ ನಡೆಯನ್ನು ಮತ್ತಷ್ಟು ವಿಸ್ತರಿಸಿ ಕೊಂಡಿದ್ದಾರೆ. ಅವರೀಗ ‘ಆರ್ ಡಿ ವೆಲ್ ಫೇರ್’ (ರಾಗಿಣಿ ದ್ವಿವೇದಿ ಕಲ್ಯಾಣ)ಎಂಬ ಸಂಸ್ಥೆ ಆರಂಭಿಸಿದ್ದಾರೆ. ಅದರ ಮೂಲಕ ಅಬಲೆಯರಾದ ಹೆಣ್ಣು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಗಂಡ ಅಥವಾ ಹೊರಗಿನವರಿಂದ ಕಿರುಕುಳ ಅನುಭವಿಸಿದ ಹೆಣ್ಣು ಮಕ್ಕಳಿಗೆ ಕಾನೂನು ರೀತಿಯ ಸಿಗುವ ಸಹಾಯವನ್ನು ಅವರು ಒದಗಿಸುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಹಾಗೂ ಮಹಿಳಾ ಆಯೋಗ ಅವರಿಗೆ ಸಹಕರಿಸುತ್ತಿದೆ.

ಈಚೆಗಷ್ಟೇ ಗಂಡನಿಂದ ಹಾಗೂ ಅವರ ಮನೆಯವರಿಂದ ಕಿರುಕುಳ ಅನುಭವಿಸಿದ ನಂದಿತಾ ಪಾಟಕ್ ಎಂಬುವರಿಗೆ ನೆರವು ನೀಡಿ ಪೊಲೀಸರಿಗೆ ದೂರು ದಾಖಲಿಸಿ ಬಳಿಕ ಮಹಿಳಾ ಆಯೋಗದ ಅಧ್ಯಕ್ಷರ ಬಳಿ ಕರೆದೊಯ್ದು ಸಹ ದೂರು ನೀಡಿದ್ದಾರೆ. ಇದರ ತನಿಖೆ ಮುಂದುವರೆದಿದೆ.
ತಮ್ಮದೇ ಚಿತ್ರ ‘ರಾಗಿಣಿ ಐಪಿಎಸ್’ ನಲ್ಲಿ ಜನರಿಗೆ ನೆರವಾಗುವಂತೆ ನಿಜ ಜೀವನದಲ್ಲಿಯೂ ಸಮಾಜಮುಖಿಯಾಗಿರುವ ರಾಗಿಣಿ ಅವರನ್ನೊಮ್ಮೆ ಅಭಿನಂದಿಸೋಣ.

Social Share :

ದ್ವಾರಕೀಶ್ @78 ಏಳು ಬೀಳು ಬದುಕಿನ ದೊಡ್ಡ ನಿದರ್ಶನ

Social Share :

ಒಬ್ಬ ಮನುಷ್ಯನ ಬದುಕಿನಲ್ಲಿ ಏಳು ಬೀಳು ಹೇಗೆ ಬರುತ್ತದೆ.. ಏಳಿಗೆ ಬಂದಾಗ ಹೇಗೆ ಮೆರೆಯುತ್ತಾನೆ ಮತ್ತು ಬೀಳು ಬಂದಾಗ ಹೇಗೆ ಅಜ್ಞಾತವಾಸ ಅನುಭವಿಸುತ್ತಾನೆ ಎಂಬುದಕ್ಕೆ ಕರ್ನಾಟಕದ ಕುಳ್ಳ ಎಂದೇ ಹೆಸರಾಗಿರುವ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರ ಬದುಕಿಗಿಂತ ಬೇರೊಂದು ನಿದರ್ಶನ ಬೇಕಾಗಿಯೇ ಇಲ್ಲ.

ಒಬ್ಬ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿದ್ದರೆ ಅಥವಾ ಅತಿ ಆಸ್ತಿವಂತನಾದರೆ ಅಂತಹವರ ಬದುಕು ಏಳು ಬೀಳು ಇದ್ದರೂ ಕಾಣುವುದಿಲ್ಲ.. ಆದರೆ ಒಬ್ಬ ಸಾಹಸಿಯ ಬದುಕು ಆಕಾಶಕ್ಕೂ ಏರುತ್ತದೆ.. ಪಾತಾಳವನ್ನೂ ಕಾಣುತ್ತದೆ. ಈ ಎರಡನ್ನು ಕಂಡು ಬದುಕಿದ ದ್ವಾರಕೀಶ್ ಅವರಿಗೆ ಈಗ 78 ವರ್ಷವಾಗಿದೆ. ಅವರಿಗೆ ಮುಪ್ಪುಬಂದಿಲ್ಲ.. ಆದರೆ ವೈಯಕ್ತಿಕ ಕಾರಣಗಳಿಂದ ಕೊಂಚ ಮೆತ್ತಗಾಗಿದ್ದಾರೆ ಅಷ್ಟೇ.

ಕನ್ನಡದ ಅದ್ವಿತೀಯ ನಿರ್ದೇಶಕ ದಿವಂಗತ ಹುಣಸೂರು ಕೃಷ್ಣಮೂರ್ತಿ ಅವರ ತಂಗಿಯ ಮಗನಾಗಿ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದ ದ್ವಾರಕೀಶ್ 1969ರಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ‘ಮೇಯರ್ ಮುತ್ತಣ್ಣ’ ಮೂಲಕ ಸ್ವತಂತ್ರ ನಿರ್ಮಾಪಕರಾದ ದ್ವಾರಕೀಶ್, ಆನಂತರ ಕನ್ನಡ ಚಿತ್ರರಂಗದಲ್ಲಿ ಮಾಡಿದ ಕೆಲಸಗಳೆಲ್ಲವೂ ಇತಿಹಾಸ.

ಸುಮಾರು 70ರ ದಶಕದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಹೊಸ ರೀತಿಯ ಬಣ್ಣ ಆಕಾರಗಳನ್ನು ನೀಡಿದರು. ವಿದೇಶದಲ್ಲಿ ಮೊದಲು ಚಿತ್ರೀಕರಣ ನಡೆಸಿದ ಚಿತ್ರವೂ ಅವರದೇ. ಈ ಕಾಲಘಟ್ಟದಲ್ಲಿಯೂ ಚಿತ್ರ ಮಾಡುವುದರಲ್ಲಿ ಅಷ್ಟೇ ಶಕ್ತಿ ಉಳಿಸಿಕೊಂಡು ಚಿತ್ರ ಮಾಡುತ್ತಿದ್ದಾರೆ.. ಆದರೆ ಈಚಿನ ಮೂರು ಚಿತ್ರಗಳು ಗೆಲ್ಲದೆ ಕೊಟ್ಟ ಶಾಕ್ ನಿಂದಾಗಿ ಇರುವ ಮನೆಯನ್ನೂ ಕಳೆದುಕೊಂಡು ಮತ್ತೆ ಅಜ್ಞಾತಾ ಅನುಭವಿಸುವ ಹಾದಿಯಲ್ಲಿದ್ದಾರೆ.

ಅದು 80ರ ದಶಕ. ಮೇಲಿಂದ ಮೇಲೆ ಚಿತ್ರಗಳನ್ನು ಮಾಡುತ್ತಿದ್ದ ದ್ವಾರಕೀಶ್, ಇಡೀ ಭಾರತೀಯ ಚಿತ್ರರಂಗಕ್ಕೆ ಬೇಕಾದವರಾಗಿದ್ದರು. ಅವರ ಮದ್ರಾಸ್ ನ ಟಿ ನಗರದಲ್ಲಿದ್ದ ಮನೆ ಅತ್ಯಂತ ವಿಶಾಲವಾದ ದೊಡ್ಡ ಬಂಗಲೆ. ಮನೆಯ ಮುಂದೆ ಕಾರುಗಳು ನಿಲ್ಲುವುದಕ್ಕೆ ಎಕರೆಗಟ್ಟಲೆ ಜಾಗ, ರಜನಿಕಾಂತ್, ಶ್ರೀದೇವಿ, ವಿಷ್ಣುವರ್ಧನ್, ಜಯಚಿತ್ರ, ಜಯಸುಧಾ, ಡಿಸ್ಕೋ ಶಾಂತಿ, ವಿಜಯಾನಂದ್ ಅಷ್ಟೇ ಏಕೆ ಅಮಿತಾಬ್ ಬಚ್ಚನ್ ಕೂಡ ಬರುತ್ತಿದ್ದರು. ಅದು ಸದಾ ಕಾಲವೂ ಚಟುವಟಿಕೆಯ ಬೀಡಾಗಿತ್ತು. ಒಂದೊಮ್ಮೆ 1985ರ ಬಳಿಕ ನೀ ತಂದ ಕಾಣಿಕೆ, ಆಫ್ರಿಕಾದಲ್ಲಿ ಶೀಲ ಇನ್ನಿತರ ಚಿತ್ರಗಳು ನೆಲಕಚ್ಚಿ ಇಂಡಿಯಾದಲ್ಲಿ ಸಾಲ ಮಾಡಿಕೊಂಡರು ದ್ವಾರಕೀಶ್. ಆನಂತರ ಅವರು 18 ವರ್ಷಗಳ ಕಾಲ ಅಜ್ಞಾತವಾಸದಲ್ಲಿಯೇ ಇದ್ದರು.

ಇದಕ್ಕೂ ಮುಂಚೆ ಸದಾಶಿವನಗರದ ದೊಡ್ಡ ಮನೆ, ಎನ್.ಆರ್.ಕಾಲೋನಿಯ ಬಂಗಲೆ ಎಲ್ಲವೂ ಕಳೆದು ಹೋಗಿದ್ದವು. ದ್ವಾರಕೀಶ್ ಮತ್ತು ವಿಷ್ಣು ಬೇರೆಯಾಗಿ ಮತ್ತೆ ಒಂದಾದ ಬಳಿಕ ರಾಯರು ಬಂದರು ಮಾವನ ಮನೆಗೆ ಹಾಗೂ ಇತರ ಒಂದೆರಡು ಚಿತ್ರಗಳು ಕೈ ಹಿಡಿದವು. ಅದರಿಂದ ಸುಮಾರಾಗಿ ಸುಧಾರಿಸಿಕೊಂಡರು. ಬಳಿಕ ಮಾಡಿದ ಆಪ್ತಮಿತ್ರ ಸೂಪರ್ ಡೂಪರ್ ಹಿಟ್. ಎಚ್.ಎಸ್.ಆರ್.ಲೇಔಟ್ ನಲ್ಲಿ ದೊಡ್ಡ ಸೈಟ್ ನಲ್ಲಿ ಮನೆ ಕಟ್ಟಿಕೊಂಡರು. ಸುಮಾರು 20 ವರ್ಷ ಆ ಮನೆಯಲ್ಲಿ ಕಳೆದರು. ಈಗ ಆ ಮನೆ ಪ್ರಖ್ಯಾತ ನಟರೊಬ್ಬರ ಪಾಲಾಗಿದೆ. ದ್ವಾರಕೀಶ್ ಮತ್ತೆ ಅಜ್ಞಾತ ದತ್ತ.

ಅವರೇ ಪದೇ ಪದೇ ಹೇಳುವುದೇನೆಂದರೆ ‘ಮದವೇರಿದ ಮನದ ಅವಸಾನಕ್ಕಾಗಿ ಕಾಲವೆಂಬುದು ಕಾದು ಕುಳಿತಿರುತ್ತದೆ..:. ಕೋವಿಡ್ ಸಂದರ್ಭದಲ್ಲಿ ಈ ಮಾತು ಎಲ್ಲರಿಗೂ ಅನ್ವಯಿಸುತ್ತದೆ.

Social Share :