Snehapriya.com

June 6, 2025

ಸಿನಿಮಾ-ಗಾಸಿಪ್

ರಾಜತಂತ್ರ ಟೀಸರ್ ರೆಡಿ ಜನವರಿಗೆ ಚಿತ್ರ ಬಿಡುಗಡೆ

Social Share :

ಕೊರೊನಾ ಮಹಾಮಾರಿಯಿಂದ ಉಂಟಾಗಿದ್ದ ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಮುಹೂರ್ತ ಮುಗಿಸಿಕೊಂಡಿದ್ದ ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ನಟಿಸಿರುವ ರಾಜತಂತ್ರ ಸಿನಿಮಾ ಇದೀಗ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿಕೊಂಡಿದೆ.
ಕಳೆದ ಶನಿವಾರ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾಗಿಯಾಗಿ ಟೀಸರ್ ಬಿಡುಗಡೆ ಮಾಡಿದ್ದರು.

ಅದಕ್ಕೂ ಮೊದಲು ರಾಘವೇಂದ್ರ ರಾಜ್ ಕುಮಾರ್ ಅವರ ಕುಟುಂಬದ ಉಪಸ್ಥಿತಿ ಇತ್ತು. ಇದೇ ಸಂದರ್ಭದಲ್ಲಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಜೆ ಎಂ ಪ್ರಹ್ಲಾದ್ ಮಾತನಾಡಿದರು. ‘ಕಥೆ ಹೇಳಿದ ತಕ್ಷಣ ಇದು ರಾಘಣ್ಣ ಅವರಿಗೆ ಹೊಂದಾಣಿಕೆ ಆಗಲಿದೆ ಎಂದೆನಿಸಿದಾಗ ನೇರವಾಗಿ ಅವರನ್ನು ಭೇಟಿಯಾಗಿ ಕಥೆ ಹೇಳಿದೆ. ಅವರಿಂದ ಒಪ್ಪಿಗೆಯೂ ಸಿಕ್ಕಿತು. ಟೆಂಟ್ ನಲ್ಲಿ ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಿದ್ದೆ. ಆಗ ಅಣ್ಣಾವ್ರ ಸಿನಿಮಾ ನಿರ್ದೇಶನ ಮಾಡುವ ಆಸೆಯು ಚಿಗುರಿತ್ತು ಎಂದರು.
ನಿರ್ಮಾಪಕ ವಿಜಯ ಭಾಸ್ಕರ್ ಖುಷಿಯಾಗಿದ್ದರು. ಅವರು ಮಾತನಾಡುವಾತ ಒಳ್ಳೆಯ ಕಥೆ ಜತೆಗೆ ಆಗಮಿಸುತ್ತಿದ್ದೇವೆ. ನೋಡಿ ಹರಸಿ ಎಂದರು.

ರಾಘಣ್ಣ ಸಹ ಅಷ್ಟೇ ಖುಷಿಯಲ್ಲಿ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಂಡರು.ಈ ಹಿಂದೆ ಇಂತಹ ಪಾತ್ರ ಮಾಡಿರಲಿಲ್ಲ. ಇದು ನನಗೆ ಹೊಸ ಅನುಭವ. ನಾನು ಮಾಡಿದ್ದೇನೆ ಎಂಬುದಕ್ಕಿಂತ ಇವರೆಲ್ಲ ಸೇರಿ ನನ್ನಿಂದ ಮಾಡಿಸಿದ್ದಾರೆ ಎಂಬುದು ಸರಿ ಹೊಂದುತ್ತದೆ ಎಂದರು. ಟೀಸರ್ ಬಿಡುಗಡೆಗೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಅಣ್ಣನ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಇಡೀ ತಂಡ ತುಂಬ ಶ್ರಮ ಹಾಕಿ ಈ ಸಿನಿಮಾ‌ ಮಾಡಿದೆ. ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಈ ಸಿನಿಮಾ ಶುರುವಾಗಿತ್ತು.‌ ಇದೀಗ ಬಿಡುಗಡೆಗೆ ಸಿದ್ದವಾಗಿದೆ ಒಳ್ಳೆಯದಾಗಲಿ ಎಂದರು.

ಇನ್ನು ಚಿತ್ರದ ನಿರ್ದೇಶಕ ಪಿವಿಆರ್ ಸ್ವಾಮಿ ಮಾತನಾಡಿ, ಅಮ್ಮನ ಮನೆ ಸಿನಿಮಾದಲ್ಲಿ ರಾಘಣ್ಣ ಜತೆ‌ ಕೆಲಸ ಮಾಡಿದ್ದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರ ಕಡೆಯಿಂದ ಫೈಟ್ ಸಹ ಮಾಡಿಸಿದ್ದೇವೆ ಎಂದರು ನಿರ್ದೇಶಕರು.

ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ.
ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ. ಶ್ರೀಸುರೇಶ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ‌ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಚಿತ್ರದ ತಾರಾಬಳಗದಲ್ಲಿದ್ದಾರೆ.

Social Share :

ಓ ಮೈ ಲವ್-ಅಕ್ಷಿತ್ ಶಶಿಕುಮಾರ್ ಮತ್ತೊಂದು ಹೊಸ ಚಿತ್ತ

Social Share :

ಹಿರಿಯ ನಾಯಕ ನಟ ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಗೆ ಈಗ ಅವಕಾಶಗಳ ಸುರಿಮಳೆಯಾಗಿದೆ. ಈಚೆಗಷ್ಟೇ ತಮಿಳುನಾಡು ಮೂಲದ ನಿರ್ದೇಶಕರ ಜೊತೆ ಬಹು ಭಾಷಾ ಚಿತ್ರದಲ್ಲಿ ನಟಿಸುತ್ತಿರುವ ಅಕ್ಷಿತ್ ಗೆ ಮತ್ತೊಂದು ಅವಕಾಶ ಹುಡುಕಿಕೊಂಡು ಬಂದಿದೆ.

ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಅವರ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ ಅಕ್ಷಿತ್. ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್ ಹಾಗೂ 18 ಟು 25 ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್‍ಶ್ರೀನು ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ.  ಆ ಚಿತ್ರಕ್ಕೆ ‘ಓ ಮೈ ಲವ್’ ಎಂಬ ಎಂದು ಹೆಸರಿಡಲಾಗಿದೆ. ರೊಮ್ಯಾಂಟಿಕ್ ಜಾನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತಾಗಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನಿರ್ದೇಶಕ ಸ್ಮೈಲ್‍ಶ್ರೀನು ಅವರು ರೆಗ್ಯುಲರ್ ಜಾನರ್ ಬಿಟ್ಟು ಬೇರೆ ರೀತಿಯ ನಿರೂಪಣೆಯನ್ನು ಮಾಡುವ ಪ್ರಯತ್ನದಲ್ಲಿದ್ದಾರೆ.

ಜಿಸಿಬಿ ರಾಮಾಂಜಿನಿ ಅವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ರಚಿಸಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ ಹಾಗೂ ಹಾಸ್ಯದ ಮಿಳಿತವಾಗಿ ಈ ಚಿತ್ರ ಮೂಡಿಬರಲಿದ್ದು ಒಂದು ಪ್ರೇಮಕಥೆಯನ್ನು ಹೀಗೂ ಹೇಳಬಹುದು ಎಂದು ನಿರ್ದೇಶಕ ಶ್ರೀನು ಈ ಚಿತ್ರದ ಮೂಲಕ ತೋರಿಸಿಕೊಡುತ್ತಿದ್ದಾರೆ.

ಬಿಗ್‍ಬಜೆಟ್ ಮೂಲಕ ತಯಾರಾಗಲಿರುವ ಈ ಚಿತ್ರದ ಮೇಕಿಂಗ್, ಸಾಂಗ್, ತಾರಾಗಣ ಎಲ್ಲದರಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ. ಅಲ್ಲದೆ ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.

ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ ಈ ಚಿತ್ರದಲ್ಲಿರುತ್ತಾರೆ. ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ, ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ ಈ ಚಿತ್ರಕ್ಕಿರಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

Social Share :

ನವರಸ ನಾಯಕ@40, ಭಾವುಕರಾದ ಜಗ್ಗೇಶ್

Social Share :

ಚಿತ್ರರಂಗದಲ್ಲಿ ನವರಸ ನಾಯಕ ಎಂದೇ ಖ್ಯಾತರಾಗಿರುವ ಜಗ್ಗೇಶ್ ಅವರ ಬಣ್ಣದ ಬದುಕಿಗೆ ಈಗ ನಲವತ್ತು ವರ್ಷಗಳು.

ಇದೇ ಸಂದರ್ಭವನ್ನು ಖುಷಿಯಾಗಿಸಲು ಮಾಧ್ಯಮಗಳ ಜೊತೆ ತಾವು ಬೆಳೆದು ಬಂದ ದಾರಿಯನ್ನು ನೆನೆಯುವಾಗ ಕಷ್ಟಗಳ ನೆನೆದು ಭಾವುಕರಾದರು ಜಗ್ಗೇಶ್.

ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋಗೆ ಮಾಧ್ಯಮಗಳನ್ನು ಕರೆದು ನಲವತ್ತು ವರ್ಷಗಳಲ್ಲಿ ತಾವು ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು.

ಸಾಧನೆಯ ಹಾದಿಯಲ್ಲಿ ಎದುರಾದ ಸಂಕಷ್ಟಗಳಿಂದ ಪಾರಾದ ಬಗೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಈ ವೇಳೆ ಎಲ್ಲೋ ಬೆಳೆಯಬೇಕಾದವನಿಗೆ ದೇವರು ಈ ಮಟ್ಟಕ್ಕೆ ತಂದ ಎಂದು ಹೇಳುವಾಗ ಗದ್ಗದಿತರಾದರು..

ನಾನು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಬೇಕಾದಷ್ಟು ಸಾಧನೆಗಳನ್ನು ಮಾಡುವ ಅವಕಾಶವನ್ನು ಗುರುರಾಯರು ಕಲ್ಪಿಸಿದರು. ಎಷ್ಟೋ ವೇಳೆ ಪವಾಡಗಳು ನಡೆದಾಗ ಅದಕ್ಕೆ ರಾಯರೇ ಸಾಕ್ಷಿಯಾಗಿ ಇದ್ದರು. ಹಾಗಾಗಿ ಇನ್ನು ಮುಂದೆ ಆಧ್ಯಾತ್ಮ ದ ಕಡೆಗೂ ಮನಸ್ಸು ವಾಲುತ್ತಿದೆ ಎಂದರು.

ಸಾಧನೆ ನಮ್ಮದು ಎಂದು ಹೇಳಿಕೊಳ್ಳಲು ಕಷ್ಟ ಪಡಬೇಕು.. ಯಾರಿಗೂ ತಾನಾಗಿಯೇ ಎಲ್ಲವೂ ಒಲಿದು ಬಿಡುವುದಿಲ್ಲ ಎಂದು ಹೇಳುತ್ತಾ ಹೋದರು ಜಗ್ಗೇಶ್.

1990ರಲ್ಲಿ ಚಿಕ್ಕ ಚಿಕ್ಕ ಅವಕಾಶಗಳನ್ನು ಪಡೆದು ಖುಷಿ ಪಡುತ್ತಿದ್ದವನಿಗೆ; ದ್ವಾರಕೀಶ್ ಅವರು ಕೃಷ್ಣ ನೀ ಕುಣಿದಾಗ ಚಿತ್ರದಲ್ಲಿ ವಿಲನ್ ಶೆಡ್ ಇರುವ ಪಾತ್ರ ನೀಡಿದರು ಮಾತ್ರವಲ್ಲ; ನೀನು ರಜನೀಕಾಂತ್ ಥರಾನೇ ಕಾಣ್ತಿಯಾ ಎಂದು ಹೇಳಿ ಅವರಿಗೆ ಹೋಲಿಸಿದ ಬಟ್ಟೆಯನ್ನು ನೀಡಿದ್ದರು. ಅಂದಿನಿಂದ ಬದುಕು ಬದಲಾಗಿ ಹೋಯ್ತು..

ನಂತರ ಉಪೇಂದ್ರ ನಿರ್ದೇಶನದಲ್ಲಿ ತರ್ಲೆ ನನ್ ಮಗ ಎಂಬ ಚಿತ್ರ ತಯಾರಾದರೂ ಅದು ಬಿಡುಗಡೆ ಕಾಣಲಿಲ್ಲ. ಅದೇ ವೇಳೆ ಮೊಂಡು ಧೈರ್ಯ ಮಾಡಿ ಮಾಡಿದ ಚಿತ್ರ ಭಂಡ ನನ ಗಂಡ ಚಿತ್ರವು ಪವಾಡವನ್ನೇ ಮಾಡಿತು.

ಆನಂತರ ನಾನು ಹಿಂದಿರುಗಿ ನೋಡಲಿಲ್ಲ. ಜಗ್ಗೇಶ್ ಜಮಾನವೊಂದು ಆಗ ಶುರುವಾಗಿತ್ತು. ಇದೇ ಕಾಲಘಟ್ಟದಲ್ಲಿ ಡಿ.ಕೆ.ಶಿವಕುಮಾರ್ ನನ್ನನ್ನು ರಾಜಕೀಯಕ್ಕೆ ಕರೆತಂದರು. ಅಲ್ಲಿಯೂ ಅನೇಕ ತಿರುವುಗಳು ಸಂಭವಿಸಿದವು ಎಂದು ಹೇಳುತ್ತಾ ಹೋದರು ನವರಸ ನಾಯಕ.

ಪರಿಮಳ ಜಗ್ಗೇಶ್ ಸಹ ಈ ಸಂದರ್ಭದಲ್ಲಿ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

Social Share :

ಅದಿತಿ ಪ್ರಭುದೇವ ಮಹಿಳಾ ಸೂಪರ್ ಹೀರೋ

Social Share :

ಇದು ಕೇವಲ ಮಹಿಳಾ ಪ್ರಧಾನ ಚಿತ್ರ ಮಾತ್ರವಲ್ಲ; ಮಹಿಳಾ ಸೂಪರ್ ಹೀರೋ ಆಗಿರುವ ಚಿತ್ರ. ಅತಿ ಮಾನುಷ ಶಕ್ತಿಯನ್ನು ವೈಭವೀಕರಿಸುವ ಈ ಚಿತ್ರಕ್ಕೆ ಹಾರರ್ ಫ್ಯಾಂಟಸಿ ಎಂಬ ಲೇಪನವಿದೆ ಎಂದು ಹೇಳಿಕೊಂಡರು ಚಿತ್ರದ ನಿರ್ದೇಶಕ ಮನೋಜ್.
ರಾತ್ರಿಯ ವೇಳೆಯಲ್ಲಿ ಹೆಚ್ಚು ಕಾಲ ಚಿತ್ರೀಕರಣ ನಡೆಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹೊಳೆದ ಕಥೆಗೆ ಗೆಳೆಯರು ಪ್ರೋತ್ಸಾಹ ನೀಡಿದರು. ಕಥೆಯ ವಿವರಗಳನ್ನು ಚಿತ್ರಮಂದಿರದಲ್ಲಿಯೇ ನೀಡುವೆ ಎಂಬುದು ಉಳಿದ ವಿವರವಾಗಿತ್ತು.

ಇದು ನನಗೆ ಸಿಕ್ಕಿರುವ ಅಪರೂಪದ ಅವಕಾಶವಾಗಿದೆ. ಇದಕ್ಕಾಗಿ ಚಿತ್ರತಂಡಕ್ಕೆ ಧನ್ಯವಾದ ಎಂದವರು ಮುಖ್ಯ ಪಾತ್ರಧಾರಿ ನಟಿ ಅದಿತಿ ಪ್ರಭುದೇವ.
ನನಗೆ ಹೊಸ ರೀತಿಯ ಪಾತ್ರ ಮಾಡಬೇಕು ಎಂಬ ಹಂಬಲವಿತ್ತು. ಇಲ್ಲಿ ಫೀಮೇಲ್ ಸೂಪರ್ ಹೀರೋ ಎಂದಾಗ ಮತ್ತಷ್ಟು ಖುಷಿಯಾಯಿತು.. ಪಾತ್ರದ ಬಗ್ಗೆ ಹೆಚ್ಚು ಹೇಳಲು ನಿರ್ದೇಶಕರು ಬಿಡಲ್ಲ. ಆದರೆ ಇದು ವಿಭಿನ್ನ ಪಾತ್ರ ಎಂದು ಮಾತ್ರ ಹೇಳಬಲ್ಲೆ ಎಂಬುದು ಅದಿತಿ ಸ್ಪಷ್ಟ ನುಡಿ.

ಚಿತ್ರಕ್ಕೆ ಛಾಯಾಗ್ರಹಣ ಮಾಡಿದವರು ಉದಯ ಲೀಲಾ; ಪ್ರತಿ ಫ್ರೇಮ್ ನಲ್ಲಿ ವಿಭಿನ್ನತೆ ಕಾಯ್ದು ಕೊಳ್ಳಲಾಗಿದೆ ಎಂಬ ವಿವರಗಳು ಬಂದವು.
ನಟ ಶಿವಮಂಜು, ಸುನಿಲ್, ಸಮರ್ಥ್ ಹಾಗೂ ಇತರ ಪಾತ್ರಧಾರಿಗಳು ವಿವರಹಳನ್ನು ಕೊಟ್ಟರು. ವಿಜೇತ್ ಚಂದ್ರ ಸಂಕಲನವಿದೆ. ಪೂಜಾ ವಸಂತ್ ಕುಮಾರ್ ನಿರ್ಮಾಪಕಿ. ಅಂದ ಹಾಗೆ ಚಿತ್ರದ ಹೆಸರು ‘ಆನ’. ಅದು ಶೀರ್ಷಿಕೆ ಬಿಡುಗಡೆಯ ಕಾರ್ಯಕ್ರಮವೇ ಆಗಿತ್ತು.

Share This Article on Whatsapp

Social Share :

ದಿಗಂತ್ ಗೆ ಹೊಸ ಥ್ರಿಲ್

Social Share :

ಒಂದು ಉತ್ಸಾಹಿ ತಂಡ ಕನ್ನಡದಲ್ಲಿ ಅದ್ದೂರಿ ಚಿತ್ರ ಮಾಡುವತ್ತ ಹೆಜ್ಜೆ ಇಟ್ಟಿದೆ. ಆ ಚಿತ್ರಕ್ಕೆ ದೂತ್ ಪೇಡಾ ಖ್ಯಾತಿಯ ದಿಗಂತ್ ಮುಖ್ಯ ಪಾತ್ರಧಾರಿ. ಅವರ ಸಮನಾಗಿಯೇ ಚಿತ್ರದಲ್ಲಿ ಮತ್ತೊಬ್ಬರಿದ್ದಾರೆ. ಅವರು ವಶಿಷ್ಟ ಸಿಂಹ. ಹರಿಪ್ರಿಯ ನಾಯಕ ನಟಿ. ಅಂದ ಹಾಗೆ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಸದ್ಯ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ಮೂಹೂರ್ತ ಆಚರಿಸಿಕೊಂಡಿತು ತಂಡ. ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ ನೀಡಿದರು.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಮಾಧ್ಯಮಗಳಿಗೆ ವಿವರಣೆ ನೀಡಿತು ಚಿತ್ರತಂಡ. ಇದು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬಂದಿದ್ದರೂ ಕನ್ನಡದ ಸೊಗಡಿಗೆ ಹೇಳಿ ಮಾಡಿಸಿದ ಚಿತ್ರ. ಹಾಗಾಗಿ ಇಲ್ಲಿ ಪ್ರಯತ್ನ ಮಾಡಲು ನಿರ್ಧಾರ ಮಾಡಲಾಯಿತು ಎಂಬ ವಿವರ ಕೊಟ್ಟರು ನಿರ್ಮಾಪಕ ರಾಜೇಶ್. ಇದು ಇನ್ವಿಜಿಬಲ್ ಗೆಸ್ಟ್ ಎಂಬ ಸ್ಪ್ಯಾನಿಶ್ ಭಾಷೆಯ ಪುಸ್ತಕವನ್ನು ಆಧರಿಸಿದ ಕಥೆ. ಅನಿರೀಕ್ಷಿತವಾಗಿ ನಡೆಯುವ ಕೊಲೆಯೊಂದರ ಸುತ್ತ ಹೆಣೆಯಲಾದ ಕಥೆಯಲ್ಲಿ ಪ್ರತಿ ಪಾತ್ರಗಳು ಅನುಮಾನಗಳನ್ನು ಹುಟ್ಟು ಹಾಕುತ್ತವೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಕಾಡುತ್ತದೆ ಎಂದರು ನಿರ್ದೇಶಕ ಅಶೋಕ ತೇಜ. ತೆಲುಗು ಭಾಷೆಯಲ್ಲಿ ಹಲವು ಚಿತ್ರಗಳನ್ನು ಮಾಡಿರುವೆ. ಕನ್ನಡದಲ್ಲಿ ಇದು ಮೊದಲ ಅನುಭವ ಎಂದರು.

ಅಂದ ಹಾಗೆ ಚಿತ್ರದಲ್ಲಿ ದಿಗಂತ್ ಗೆ ಜೋಡಿಯಾಗಿ ನಟಿಸುತ್ತಿರುವುದು ಹರಿಪ್ರಿಯ. ನನಗೆ ದಿಗಂತ್ ಜೊತೆಗೆ ನಟಿಸಬೇಕು ಎಂಬುದು ಒಂದು ಕೋರಿಕೆಯಾಗಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂತು ಎಂದರು ಹರಿಪ್ರಿಯ. ಚಿತ್ರದ ನಿರ್ದೇಶಕರು ಸ್ವೀಟ್ ಬಾಕ್ಸ್ ಜೊತೆಯಲ್ಲಿ ಬಂದು ಕಥೆ ಹೇಳಿದ್ದು ವಿಶೇಷವಾಗಿತ್ತು. ಇದು ಎವರು ಎಂಬ ತೆಲುಗು ಚಿತ್ರ. ಸ್ಕ್ರಿಪ್ಟ್ ಬಹಳವೇ ಇಷ್ಟವಾಯ್ತು ಎಂದು ಹೇಳಿಕೊಂಡರು ಹರಿಪ್ರಿಯ. ದಿಗಂತ್ ಕೂಡ ಹರಿಪ್ರಿಯ ಅವರ ಜೊತೆ ಮಾಡಬೇಕಿದ್ದ ಹಲವು ಚಿತ್ರಗಳು ತಪ್ಪಿ ಹೋಗಿದ್ದವು. ಮಿಸ್ ಮಾಡ್ತಾ ಕೊನೆಗೆ ಈ ಸಿನಿಮಾ ಕೈ ಹಿಡಿದಿದೆ. ಈ ಚಿತ್ರ ಸುಮಾರು ಭಾಷೆಯಲ್ಲಿ ಬಂದರೂ ಅದರ ಸೊಗಡು ಎವೆರ್ ಗ್ರೀನ್ ಎಂದರು.

ತಮ್ಮ ಶಿಷ್ಯನನ್ನು ಹಾರೈಸಲು ನಿರ್ದೇಶಕ ಯೋಗರಾಜ್ ಭಟ್ ಆಗಮಿಸಿದ್ದರು. ಈಗ ಸಿನೆಮಾ ಶೂಟಿಂಗ್ ಗೆ ಆರೋಗ್ಯಕರ ವಾತಾವರಣ ಇಲ್ಲ.. ಆದರು ಇಂತಹ ಪ್ರಯತ್ನಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಮನಸ್ಸಾರೆ ಚಿತ್ರವನ್ನು ಹಾರೈಸಲು ಬಂದಿರುವೆ ಎಂದರು. ವಶಿಷ್ಟ ಸಿಂಹ ಮತ್ತೊಂದು ಸಮಾನಾಂತರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೂ ಬಂತು. ಅವಿನಾಶ್, ಸ್ವಾತಿ, ಹರೀಶ್, ಮಂಜು ಪಾವಗಡ, ಸುರೇಶ್ ನಾಯರ್ ಹಾಗೂ ಗೌತಮ್ ಇತರ ತಾರಾಗಣದಲ್ಲಿ ಇದ್ದಾರೆ.
ರಾಜೇಶ್ ಅಗರವಾಲ್ ಹಾಗೂ ಡಿ.ಜಯಪ್ರಕಾಶ್ ರಾವ್ ನಿರ್ಮಾಪಕರು. ಯೋಗಿ ಛಾಯಾಗ್ರಹಣ, ಶ್ರೀಚರಣ್ ಸಂಗೀತ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ರಾಜೀವ್ ನಾಯರ್ ಕಲಾ ನಿರ್ದೇಶನ, ಸುಬ್ರಮಣ್ಯ ಸುಕೃತ್ ಸಂಭಾಷಣೆ ಹಾಗೂ ರಿಯಲ್ ಸತೀಶ್ ಸಾಹಸ ಸಂಯೋಜನೆ ಇದೆ ಎಂಬ ಮಾಹಿತಿಗಳು ಬಂದವು.

Share This Article on Whatsapp

Social Share :

ಭಾನು ಭುವಿ ಮರೆಯದ ಅಪ್ರತಿಮ ಸ್ವರ ಮಾಂತ್ರಿಕರು

Social Share :

ಭಾನಲ್ಲೂ ನೀನೇ.. ಭುವಿಯಲ್ಲೂ ನೀನೇ.. ನನ್ನಲ್ಲೂ ನೀನೇ.. ಎಲ್ಲೆಲ್ಲೂ ನೀನೇ.. ಎಂಬ ಬಯಲು ದಾರಿ ಚಿತ್ರದ ಹಾಡು ಕೇಳುಗರ ಹೃದಯವನ್ನೇ ಸ್ಪರ್ಶಿಸುತ್ತಿದ್ದ ಆ ಕಾಲಘಟ್ಟದಲ್ಲಿ ನಿಜವಾಗಿ ಚಿತ್ರ ಸಂಗೀತ ಲೋಕವನ್ನು ಆಳುತ್ತಿದ್ದವರು ರಾಜನ್-ನಾಗೇಂದ್ರ ಜೋಡಿ. ಅದು ಗ್ರಾಮಫೋನ್ ನಿಂದ ಹೊರಬಂದು ರೇಡಿಯೋಗೆ ಹೊಂದಿಕೊಂಡಿರುತ್ತಿದ್ದ ದಿನಗಳು. ಅದೃಷ್ಟದ ವಿಷಯವೇನೆಂದರೆ ಆಗ ರೇಡಿಯೋದಲ್ಲಿ ಉದ್ಘೋಷಕರು ಒಂದು ಹಾಡಿನ ಸಂಪೂರ್ಣ ವಿಷಯ ವನ್ನು ತಿಳಿಸಿಕೊಡುತ್ತಿದ್ದರು. ಹಾಗಾಗಿ .. ಇವರು ರಚಿಸಿದ ಗೀತೆಗೆ ಸಂಗೀತ ನೀಡಿದವರು ಇವರು ಎಂಬುದು ಕೊನೆಯ ಪದವಾಗಿರುತ್ತಿತ್ತು.

ಮೆಚ್ಚಿನ ಗೀತೆಗಳಲ್ಲಿ ಗಂಧದ ಗುಡಿ, ನಾ ನಿನ್ನ ಮರೆಯಲಾರೆ, ಗಿರಿ ಕನ್ಯೆ, ಎರಡು ಕನಸು, ನ್ಯಾಯವೇ ದೇವರು, ಶ್ರೀನಿವಾಸ ಕಲ್ಯಾಣ, ಗುರಿ, ಚಲಿಸುವ ಮೋಡಗಳು, ಭಾಗ್ಯವಂತರು, ಮೇಯರ್ ಮುತ್ತಣ್ಣ. ಆಟೋರಾಜ, ಚೆಂದನದ ಗೊಂಬೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಒಲವು ಮೂಡಿದಾಗ, ಬೆಂಕಿಯ ಬಲೆ. ಸಿಂಗಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ಹೊಂಬಿಸಿಲು, ದೇವರ ಗುಡಿ, ಕಿಲಾಡಿ ಜೋಡಿ, ಕಳ್ಳ ಕುಳ್ಳ, ಒಂದೇ ಗುರಿ, ಜೀವನ ಚಕ್ರ, ಬಿಳಿಗಿರಿಯ ಬನದಲ್ಲಿ, ನಾನಿರುವುದೇ ನಿನಗಾಗಿ, ಪಾವನ ಗಂಗಾ, ಸುಪ್ರಭಾತ. ಪರಸಂಗದ ಗೆಂಡೆತಿಮ್ಮ, ಗಾಳಿ ಮಾತು, ಮಧುರ ಸಂಗಮ, ಮೋಡದ ಮರೆಯಲ್ಲಿ. ಹೀಗೆ ಹೆಚ್ಚಿನ ಪಾಲು ಕಬಳಿಸುತ್ತಿದ್ದ ಆ ಸುಶ್ರಾವ್ಯ ಗೀತೆಗಳಿಗೆ ಸಂಗೀತ ನೀಡಿದವರು ರಾಜನ್ ನಾಗೇಂದ್ರ.

ಕಳೆದ 2000ನೇ ಇಸವಿಯಲ್ಲಿ ನಾಗೇಂದ್ರ ಇಹಲೋಕ ತ್ಯಜಿಸಿದರು. ರಾಜನ್ ಅವರು ಸಂಗೀತ ಪ್ರಿಯರಿಗೆ ಮಾರ್ಗದರ್ಶಕರಾಗಿ ದಿನಗಳನ್ನು ಕಳೆದರು. ಅತ್ಯಂತ ಸರಳ ಸಹೃದಯ ವ್ಯಕ್ತಿತ್ವದ ರಾಜನ್ ಅನೇಕರಿಗೆ ಸ್ಫೂರ್ತಿ ಯಾಗಿದ್ದರು. ಆದರೆ ಅವರೂ ಭಾನುವಾರ ರಾತ್ರಿ ಮೋಡದ ಮರೆಯಲ್ಲಿ ನಕ್ಷತ್ರವಾದರು. ಆಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ನಲಿದಾಡುತ್ತಿದ್ದ ‘ನಾವಾಡುವ ನುಡಿಯೇ ಕನ್ನಡ ನುಡಿ.. ನಾವಿರುವ ತಾಣವೆ ಗಂಧದ ಗುಡಿ,’ ಜೇನಿನ ಹೊಳೆಯೋ ಹಾಲಿನ ಮಳೆಯೋ..’ ‘ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ..’ ‘ಏನೆಂದು ನ ಅ ಹೇಳಲಿ.. ಮಾನವನಾಸೆಗೆ ಕೊನೆಯಲ್ಲಿ..’ ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು..’ ‘ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..’ ‘ಕಲ್ಲಿನ ವೀಣೆಯ‌ ಮೀಟಿದರೇನು ನಾದವು ಹೊಮ್ಮುವುದೇ..’ ‘ನಲಿವಾ ಗುಲಾಬಿ ಹೂವೆ..’, ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ..’ ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..’ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ..’ ‘ ಪ್ರೀತಿ ಪ್ರೇಮ ನನ್ನುಸಿರು..ನ್ಯಾಯ ನೀತಿ ನನ್ನುಸಿರು..’ ‘ಹಳ್ಳಿಯಾದರೇನು ಶಿವ..’ ‘ನಾ.. ಹಾಡಲು ನೀವು ಹಾಡಬೇಕು.. ‘ ‘ತೇರ ಏರಿ ಅಂಬರದಾಗೆ ನೇಸರು ನಗುತಾನೆ..’ ಹೀಗೆ ಅಸಂಖ್ಯಾ ಗೀತೆಗಳು ಕೇಳುಗರನ್ನು ಸಂಮೋಹನಗೊಳಿಸುತ್ತಿದ್ದರೆ ಅಲ್ಲಿ ರಾಜನ್ ನಾಗೇಂದ್ರ ಇರುತ್ತಿದ್ದರು.

ವರನಟ ಡಾ.ರಾಜ್ ಕುಮಾರ್, ವಿಷ್ಣು ವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತನಾಗ್ ಹೀಗೆ ಎಲ್ಲಾ ಸ್ಟಾರ್ ಗಳ ಫೆವರಿಟ್ ಮ್ಯೂಜಿಕ್ ಡೈರೆಕ್ಟರ್ ಆಗಿ ಮೆರೆದರು. ಕನ್ನಡ ಚಿತ್ರರಂಗದ ಗಾನಸುಧೆಯ ಹರಿಸುವ ಸಂಗೀತ ಲೋಕವನ್ನು ಸುಮಾರು ಐದು ದಶಕಗಳನ್ನು ಆಳಿತು ಈ ಜೋಡಿ.  ಒಮ್ಮೆ ಹಿಂದಿ ಭಾಷೆಯ ರಿಯಾಲಿಟಿ ಶೋನಲ್ಲಿ ಸೂಪರ್ ಸ್ಟಾರ್ ಗೋವಿಂದ ಅವರು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ ಎಂದು ಹಾಡಿದ್ದರು. ಭಾರತೀಯ ಮಟ್ಟದಲ್ಲಿ ರಾಜನ್ ನಾಗೇಂದ್ರ ಅವರು ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಅದು ನಿದರ್ಶನವಾಗಿತ್ತು. ನಾಲ್ಕು ಭಾಷೆಗಳಿಗೆ ಸಂಗೀತ ನೀಡಿದ ಹೆಗ್ಗಳಿಕೆ ಈ ಜೋಡಿಗಿದೆ.

ಸಂಗೀತ ಎಂದಿಗೂ ಅಮರ. ಹಾಗಾಗಿ ಕನ್ನಡಿಗರ ಹೃದಯದಲ್ಲಿ ರಾಜನ್ ನಾಗೇಂದ್ರ ಜೋಡಿ ಕೂಡ ಶಾಶ್ವತ ವಾಗಿ ನೆಲೆಸುತ್ತದೆ ಎಂದರೆ ಅದು ಅಚ್ಚರಿ ಅಲ್ಲವೇ ಅಲ್ಲ.

Share This Article on Whatsapp

Social Share :

ರಾಘವೇಂದ್ರ ರಾಜ್ ಕುಮಾರ್ ಕ್ಯಾಪ್ಟನ್ ರಾಜತಂತ್ರ

Social Share :

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಪಾತ್ರಗಳಿಂದ ಹಾಗೂ ಅನುಪಮ ಗಾಯನದಿಂದಲೇ ಜನಪ್ರಿಯವಾಗಿರುವ ರಾಘವೇಂದ್ರ ರಾಜ್‍ಕುಮಾರ್ ಮತ್ತೆ ನಟನೆಯ ಫಾರ್ಮ್ ಗೆ ಮರಳಿದ್ದಾರೆ. ಅಮ್ಮನ ಮನೆ ಹಾಗೂ ಇತರ ಚಿತ್ರಗಳು ಅವರಿಗೆ ಮತ್ತೆ ಜನಪ್ರಿಯತೆ ತಂದುಕೊಟ್ಟಿವೆ. ಇದೀಗ ಅವರು ರಾಜತಂತ್ರದ ಚುಕ್ಕಾಣಿ ಹಿಡಿದಿದ್ದಾರೆ. ಅಪರೂಪದ ಈ ಚಿತ್ರದಲ್ಲಿ ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಈಚೆಗೆ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ಪಾತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಅಮ್ಮನ ಮನೆ ರಾಘಣ್ಣ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಪಿ.ವಿ.ಆರ್.ಸ್ವಾಮಿ ಈಗ ಕ್ಯಾಮೆರಾ ಹಿಡಿಯುವ ಜೊತೆಗೆ ಇದೇ ಮೊದಲಬಾರಿಗೆ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಹಿರಿಯ ಕಲಾವಿದರಾದ ದೊಡ್ಡಣ್ಣ, ಭವ್ಯ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವಥ್, ರಂಜನ್‍ಹಾಸನ್, ಮುನಿರಾಜು, ನೀನಾಸಂ ಅಶ್ವಥ್ ಹೀಗೆ ಹಲವಾರು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರಾಜತಂತ್ರ ಚಿತ್ರದ ಮುಹೂರ್ತ ದೃಶ್ಯಕ್ಕೆ ಹಿರಿಯನಟ ದೊಡ್ಡಣ್ಣ ಕ್ಲಾಪ್ ಮಾಡಿದರೆ, ಸಂಗೀತ ನಿರ್ದೇಶಕ ಹಂಸಲೇಖಾ ಕ್ಯಾಮೆರಾ ಚಾಲನೆ ಮಾಡಿದರು. ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಪಿವಿಆರ್ ಸ್ವಾಮಿ ರಾಜತಂತ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್ ಹರಪನಹಳ್ಳಿ, ಜೆ.ಎಂ.ಪ್ರಹ್ಲಾದ್ ಹಾಗೂ ಪಿ.ಆರ್.ಶ್ರೀಧರ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಮುಹೂರ್ತದ ನಂತರ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ಸ್ವಾಮಿ ಹಿಂದೆ ಅಮ್ಮನ ಮನೆ ಚಿತ್ರಕ್ಕೆ ಡಿಓಪಿ ಆಗಿದ್ರು. ಈಗ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ ಎಂದು ಈ ಕಥೆ ಹೇಳಿದರು. ನಿವೃತ್ತ ಕ್ಯಾಪ್ಟನ್ ಒಬ್ಬರು ಹೊರಗಿನಿಂದ ಬರುವ ಶತೃಗಳಿಂದ ದೇಶವನ್ನು ರಕ್ಷಿಸುತ್ತಿದ್ದರು. ಮುಂದೆ ಅವರು ದೇಶದ ಒಳಗೆ ಬಂದಾಗ ಯಾವ ರೀತಿ ಸಮಾಜ, ದೇಶವನ್ನು ದುಷ್ಟರಿಂದ ರಕ್ಷಿಸುತ್ತಾರೆ ಎಂದು ನನ್ನ ಪಾತ್ರದ ಮೂಲಕ ತೋರಿಸುತ್ತಿದ್ದಾರೆ. ಇದೇ ಮೊದಲಬಾರಿಗೆ ನಾನಿಂಥ ಪಾತ್ರ ಮಾಡುತ್ತಿರುವುದು. ಇಲ್ಲಿ ಕ್ಯಾಪ್ಟನ್ ರಾಜನೂ ಹೌದು, ರಾಮನೂ ಹೌದು, ಸೈನ್ಯದಿಂದ ಹೊರಬಂದ ಮೇಲೂ ತನ್ನ ಕರ್ತವ್ಯ ಮುಗಿದಿಲ್ಲವೆಂದುಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ ಕೂಡ ಹೌದು. ಇಲ್ಲಿ ಕೆಲಸ ಮಾಡುವುದು ತಂತ್ರವೋ ಮಂತ್ರವೋ ಅನ್ನೋದು ಚಿತ್ರ ನೋಡಿದಾಗ ತಿಳಿಯುತ್ತೆ ಎಂದು ಹೇಳಿದರು.

ಹಿರಿಯ ಸಾಹಿತಿ ಜೆ.ಎಂ. ಪ್ರಹ್ಲಾದ್ ಅವರು ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಕಥೆಯ ವಿಶೇಷತೆ ಕುರಿತು ಮಾತನಾಡುತ್ತ ಬೌದ್ಧಿಕ ಶಕ್ತಿಯ ಪ್ರತಿನಿಧಿಯಾಗಿ ರಾಘಣ್ಣ ಅವರು ಕಾಣಿಸಿಕೊಂಡಿದ್ದಾರೆ. ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬ ತನ್ನ ಬುದ್ದಿಶಕ್ತಿಯಿಂದ ಹೇಗೆ ಸಮಾಜದ ದುಷ್ಟಶಕ್ತಿಗಳನ್ನು ಮಟ್ಟ ಹಾಕುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಈಗಿನ ಕಾಲಘಟ್ಟದಲ್ಲೇ ನಡೆಯುವ ಯೂನಿವರ್ಸಲ್ ಕಥೆಯಿದು. ಕ್ಯಾಪ್ಟನ್ ರಾಜಾರಾಮ್ ಪಾತ್ರದಲ್ಲಿ ರಾಘಣ್ಣ ನಟಿಸುತ್ತಿದ್ದಾರೆ ಎಂದು ಹೇಳಿದರು. ನಂತರ ಚಿತ್ರದ ನಿರ್ದೇಶಕ ಪಿವಿಆರ್ ಸ್ವಾಮಿ, ನಾನು ಇಪ್ಪತ್ತು ವರ್ಷಗಳ ಹಿಂದೆ ಪುಟ್ಟ ಹಳ್ಳಿಯಿಂದ ಬಂದೆ. ನನ್ನ ಈ ಪ್ರಯತ್ನದ ಹಿಂದೆ ಹಲವಾರು ಶಕ್ತಿಗಳಿವೆ. ಅಮ್ಮನ ಮನೆ ನಂತರ ರಾಘಣ್ಣ ಅವರ ಜೊತೆ ಎರಡನೇ ಚಿತ್ರವಿದು. ಫೈಟ್ಸ್, ಸಾಂಗ್ಸ್ ಎಲ್ಲಾ ಇರುವ ಕಮರ್ಷಿಯಲ್ ಚಿತ್ರವಿದು. ಇದೇ ಸೋಮವಾರದಿಂದ ಶೂಟಿಂಗ್ ಆರಂಭಿಸಿ ಬೆಂಗಳೂರು, ನೆಲಮಂಗಲ ಸುತ್ತಮುತ್ತ 15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯುತ್ತದೆ ಎಂದು ಹೇಳಿದರು.

ಶ್ರೀಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎನ್.ನಾಗೇಶ್ ಅವರ ಸಂಕಲನ, ವೈಲೆಂಟ್ ವೇಲು-ರಾಮ್‍ದೇವ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

Social Share :

ಲವ್ ಮಾಕ್ ಟೈಲ್ ಮತ್ತೆ ಬಿಡುಗಡೆ

Social Share :

ಇದು ಪ್ರೇಮಿಗಳಿಂದ ಪ್ರೇಮಿಗಳಿಗಾಗಿ ನಿರ್ಮಾಣವಾದ ಚಿತ್ರ. ಅತ್ಯಂತ ಯಶಸ್ಸು ಕಂಡು ಜನಮನ ಗೆದ್ದ ಚಿತ್ರವೂ ಹೌದು. ಹಾಗಾಗಿ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.

ಡಾರ್ಲಿಂಗ್ ಕೃಷ್ಣ ಹಾಗೂ ಅವರ ಗೆಳತಿ ಮಿಲನಾ ನಾಗರಾಜ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿಕೊಟ್ಟಿರುವುದು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು. ಇದೇ 16ರಂದು ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ ಕಾಣುತ್ತಿರುವ ಚಿತ್ರದ ಹೆಸರು ಲವ್ ಮಾಕ್ ಟೈಲ್. ಬಿಡುಗಡೆ ಪೂರ್ವದಲ್ಲಿ ಮಾಧ್ಯಮಗಳಿಗೆ ಒಂದಿಷ್ಟು ವಿವರಗಳನ್ನು ನೀಡಿತು ಚಿತ್ರತಂಡ.

ನಾನು ಮಿಲನಾ ಹಣ ಕೂಡಿಸಿ ಮಾಡಿದ ಚಿತ್ರವಿದು. ಮೊದಲಿಗೆ ಭಯವೂ ಇತ್ತು. ಈಗ ಯಶಸ್ಸಿನ ಜೊತೆಗೆ ಚಿತ್ರವು ತಮಿಳು ಹಾಗೂ ಇತರ ಭಾಷೆಗಳಿಗೆ ಹೋಗ್ತಾ ಇದೆ ಎಂಬುದು ಧೈರ್ಯ ತಂದುಕೊಟ್ಟಿದೆ ಎಂದು ಹೇಳಿದವರು ನಿರ್ಮಾಪಕ ಹಾಗೂ ನಿರ್ದೇಶಕ ಕಮ್ ನಟ ಡಾರ್ಲಿಂಗ್ ಕೃಷ್ಣ.ಚಿತ್ರವು ಅಂತಾರಾಷ್ಟ್ರೀಯ ಮಟ್ಟಿಗೆ ಹೋಗಿದೆ ಜನ ಇಷ್ಟಪಟ್ಟರೆ ಎಲ್ಲಿಗೆ ಬೇಕಾದ ದರೂ ಹೋಗಬಹುದು.. ಇದರ 2ನೇ ಅವತರಣಿಕೆಯೂ ಬರ್ತಾ ಇದೆ ಎಂದರು. ನಾವು ಗೆಟ್ ಟುಗೆದರ್ ನ ಕೂಡ ಮಾಡೋಕೆ ಆಗಿರಲಿಲ್ಲ. ಮತ್ತೆ ಬರ್ತಿರೋದು ಡಬ್ಬಲ್ ಖುಷಿ ಅ.16ಕ್ಕೆ ಮತ್ತೆ ಚಿತ್ರಮಂದಿರದಲ್ಲಿ ಸಿನಿ ಪ್ರಿಯರು ನೋಡಬಹುದು ಎಂದವರು ನಟಿ, ನಿರ್ಮಾಪಕಿ ಮಿಲನಾ ನಾಗರಾಜ್.

ಎಲ್ಲರನ್ನೂ ಬಹಳ ಕಾಲದ ನಂತರ ಮೋಡಿ ಸಂತೋಷ ವಾಗಿದೆ ಎಂದವರು ಜಾಕ್ ಮಂಜು. ಓಟಿಟಿ ಯಲ್ಲಿ ಹೆಚ್ಚಿನ ಪ್ರೇಕ್ಷಕರು ನೋಡಿದ್ದಾರೆ. ಟಿವಿಯಲ್ಲೂ ನೋಡಿದ್ದಾರೆ. ಹಾಗಿದ್ದೂ ಮತ್ತೆ ಆಸಕ್ತಿ ಉಳಿಸಿಕೊಂಡ ಅಪರೂಪದ ಚಿತ್ರವಿದು ಎಂದು ಬಣ್ಣಿಸಿದರು. ಮೊದಲು ಸಂಕಲನಕಾರರಾಗಿದ್ದ ಶ್ರೀ ಕ್ರೇಜಿ ಮೈಂಡ್ ಕ್ಯಾಮೆರಾ ಎರಡನೇ ಭಾಗಕ್ಕೂ ಇದೆ ಎಂದು ಹೇಳಿಕೊಂಡರು.

Social Share :

ಕೋವಿಡ್ ಬಿಡುವಿನ ಬಳಿಕ ಬೆಂಕಿಯಬಲೆ ಪ್ರಥಮ ಶೋ

Social Share :

ಕೋವಿಡ್ ಅಟ್ಟಹಾಸದಿಂದ ಸಿನಿಮಾ ಮಂದಿರಗಳು ಮುಚ್ಚಿ ಹೋದವು.. ಜಗತ್ತಿನ ಮನರಂಜನಾ ಕ್ಷೇತ್ರ ಬಡವಾಯಿತು. ಈ ಸಂದರ್ಭದಲ್ಲಿ ಚಿತ್ರರಂಗ ಅಸಹಾಯಕತೆಯಲ್ಲಿ ನರಳಿತು.

ಲಾಕ್ ಡೌನ್ ನ ಬಳಿಕ ಅದರ ತೆರವು ಹಂತ ಹಂತವಾಗಿದ್ದಾಗ್ಯೂ ಚಿತ್ರಮಂದಿರಗಳ ತೆರವಿಗೆ ಬಹಳವೇ ಸಮಯ ತೆಗೆದುಕೊಂಡಿತು. ಇದೀಗ ಕೇಂದ್ರ ಹೊಸ ಮಾರ್ಗಸೂಚಿಗಳ ಜೊತೆಗೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದ ಮನರಂಜನಾ ಕ್ಷೇತ್ರದಲ್ಲೊಂದು ಹೊಸ ಹುರುಪು ಮೂಡಿದೆ. ನಿಂತು ಹೋದ ಅನೇಕ ಚಿತ್ರಗಳು ಹೊಸ ಬಗೆಯಲ್ಲಿ ಬಿಡುಗಡೆಗೆ ಸಿದ್ದವಾಗಿವೆ.

ಆದರೆ ಮೊದಲೇ ನಿರ್ಮಾಣಗೊಂಡು ಬಿಡುಗಡೆಗೆ ಕಾಯ್ದುಕೊಂಡಿದ್ದ ‘ಬೆಂಕಿಯ ಬಲೆ ಪ್ರೀತಿಯ ಕೊಲೆ’ ಎಂಬ ಚಿತ್ರ ಪ್ರೀಮಿಯರ್ ಶೋ ಮುಗಿಸಿಕೊಂಡಿದೆ. ಆ ಮೂಲಕ ಲಾಕ್ ಡೌನ್ ಬಳಿಕ ಪ್ರೇಕ್ಷಕರಿಗೆ ಪ್ರದರ್ಶನಗೊಂಡ ಪ್ರಥಮ ಚಿತ್ರವಾಗಿದೆ.
80ರ ದಶಕದಲ್ಲಿ ಅನಂತ್ ನಾಗ್ ಹಾಗೂ ಲಕ್ಷ್ಮಿ ಅವರ ಮನೋಜ್ಞ ಅಭಿನಯದಲ್ಲಿ ಹಾಗೂ ದೊರೆ-ಭಗವಾನ್ ಅವರ ನಿರ್ದೇಶನಲ್ಲಿ ಮೂಡಿ ಬಂದಿದ್ದ ಬೆಂಕಿಯ ಬಲೆ ಎಂಬ ಚಿತ್ರ ಮಾನಸದಲ್ಲಿ ಇಂದಿಗೂ ಉಳಿದು ಹೋಗಿದೆ. ಇದೀಗ ಅದೇ ಹೆಸರಿನಲ್ಲಿ ಮೈಸೂರಿನ ಶಿವಾಜಿ ನಿರ್ಮಿಸಿರುವ ಚಿತ್ರದ ಹೆಸರೂ ಬೆಂಕಿಯ ಬಲೆ. ಇದಕ್ಕೆ ಪ್ರೀತಿಯ ಕೊಲೆ ಎಂಬ ಟ್ಯಾಗ್ ಲೈನ್ ಇದೆ. ಶಿವಾಜಿ ಅವರೇ ಇದನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಸಂದೇಶ ಹೊಂದಿರುವ ಬೆಂಕಿಯಬಲೆ ಬೆಂಗಳೂರು ಕಲಾವಿದರ ಸಂಘದ ಭವನದಲ್ಲಿ ಪ್ರದರ್ಶನಗೊಂಡಿತು. ಬೆಂಕಿಯಬಲೆ 5 ಹಾಡುಗಳು ಹಾಗೂ 3 ಸಾಹಸ ದೃಶ್ಯಗಳನ್ನು ಒಳಗೊಂಡ ಸಾಂಸಾರಿಕ ಕಥೆಯನ್ನೊಳಗೊಂಡ ಚಿತ್ರವಾಗಿದೆ ಎಂಬ ವಿವರಣೆ ನಿರ್ದೇಶಕರಿಂದ ಬಂತು. ಆಘಾತ, ಪರ್ಚಂಡಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಶಿವಾಜಿ ಈ ಚಿತ್ರದ ಮೂಲಕ ನಿರ್ದೇಶಕನೂ ಆಗಿದ್ದಾರೆ. ಜೊತೆಗೆ ಪ್ರಮುಖ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು, ಬನ್ನೂರು ಸುತ್ತಮುತ್ತ ನಡೆದಿದೆ. ಗ್ರಾಮೀಣ ಪರಿಸರದಲ್ಲಿ ನಡೆಯುವ ಹಳ್ಳಿ ರಾಜಕೀಯದ ಕಥಾಹಂದರವನ್ನು ಹೊಂದಿದ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶವಿದೆ. ಕ್ಯಾನ್ಸರ್ ತಗುಲಿಕೊಂಡ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ವಿದ್ಯಾವಂತ ಯುವತಿಯಾಗಿ ನಟಿ ಪ್ರೀತಿ ಯಶು ಅಭಿನಯಿಸಿದ್ದಾರೆ. ಉಳಿದಂತೆ ನಿರಂಜನ್ ದೇಶಪ್ರೇಮಿ, ಸುಮ, ಪವಿತ್ರ ಮುಂತಾದ ಕಲಾವಿದರು ಈ ಚಿತ್ರದ ಇತರೆ ಪಾತ್ರಗಳಲ್ಲಿದ್ದಾರೆ.

 

ಶಿವಾಜಿ ಕ್ಯಾನ್ಸರ್ ನಿಂದ ತಾಯಿಯವರನ್ನು ಕಳೆದುಕೊಂಡು ಅನುಭವಿಸಿದ ನೋವನ್ನು ವರ್ಣಿಸಿ; ಚಿತ್ರದಿಂದ ಬರುವ ಹಣವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡುತ್ತಿರುವುದಾಗಿ ಹೇಳಿದರು. ಮುಖ್ಯ ಪಾತ್ರದಲ್ಲಿರುವ ಪ್ರೀತಿ ಯಶುಗೆ ಎಲ್ಲವೂ ವಿಶೇಷ. ಗಂಡು ದಿಕ್ಕಿಲ್ಲದ ಮನೆಯ ಹೆಣ್ಣು ಮಕ್ಕಳನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ, ಆಕೆ ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾಳೆ ಎಂಬುದು ನನ್ನ ಪಾತ್ರ ಎಂದು ಹೇಳಿಕೊಂಡರು. ಮತ್ತೊಬ್ಬ ನಟಿ ಪವಿತ್ರಾ, ನಟ ನಿರಂಜನ್ ಪಾತ್ರಗಳ ಬಗ್ಗೆ ಹೇಳಿಕೊಂಡರು. ಮಂಜುನಾಥ ಮಿರ್ಲೆ, ಶಿವಾಜಿ ಸಹೋದರ ಲೋಕೇಶ್ ಸಹ ಚಿತ್ರದ ಬಗ್ಗೆ ಹೇಳಿಕೊಂಡರು.

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಿವಾಜಿ, ಊರಿನ ಶ್ರೀಮಂತ ವ್ಯಕ್ತಿ ಸುಂದರೇಗೌಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Social Share :

ಓಟಿಟಿಗೆ ಮೊದಲ ಭ್ರಮೆ..!

Social Share :

ಇನ್ನೇನು ಚಿತ್ರಮಂದಿರಗಳು ತೆರೆದುಕೊಳ್ಳಲಿವೆ ಎಂಬ ಸನ್ನಿವೇಶದಲ್ಲಿ ಅದರ ಗೊಡವೆಯೇ ಬೇಡ ಹೊಸತನಕ್ಕೆ ತೆರೆದುಕೊಳ್ಳುವ ಆಲೋಚನೆಯಲ್ಲಿ ಚಿತ್ರವೊಂದು ಎದ್ದು ನಿಂತಿದೆ. ಸಂಪೂರ್ಣ ಹೊಸಬರಿಂದ ಕೂಡಿದ್ದರೂ ವ್ಯಾಪಾರದ ವಿಷಯದಲ್ಲಿ ತಲೆ ಕೆಡಿಸಿಕೊಳ್ಳದೆ ಕನ್ನಡ ಚಿತ್ರರಂಗಕ್ಕೊಂದು ಹೊಸದಾದ ಮಾರ್ಗ ತೋರಿಸಿ ಕೊಡಲು ಹೊರಟಿರುವ ಆ ಚಿತ್ರದ ಹೆಸರೇ ಭ್ರಮೆ.

ಅಂದ ಹಾಗೆ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವ ದಂದು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ತಂಡದ ಉತ್ಸಾಹದಲ್ಲಿಯೂ ಹೊಸತನ ಕಂಡುಕೊಂಡಿದೆ. ಮೊದಲಿಗೆ ಈ ಚಿತ್ರ ಓಟಿಟಿ ಫಾರ್ಮೆಟ್ ನಲ್ಲಿ ಬಿಡುಗಡೆ ಕಾಣುತ್ತಿದೆ.

ಅದಕ್ಕಿಂತಲೂ ಹೆಗ್ಗಳಿಕೆ ವಿಷಯವೆಂದರೆ ಚಿತ್ರದ ಟಿಕೆಟ್ ಮಾರಾಟದಲ್ಲಿ ಹೊಸ ವಿಕ್ರಮ ಸಾಧಿಸಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟ ಮಾಡಿದೆ. ಅದಿಷ್ಟೇ ಆಗಿದ್ದರೆ ಏನು ಮಹತ್ವ ಇರದಿರಬಹುದು. ಆದರೆ ಚಿತ್ರತಂಡ ಟಿಕೆಟ್ ಕೊಂಡವರಿಗೆ ಬಹುಮಾನ ಕೊಡುವ ಹೊಸ ರೂಢಿಯನ್ನು ಆರಂಭಿಸಿ ಪ್ರತಿ ಹತ್ತು ಸಾವಿರ ಟಿಕೆಟ್ ಗೆ ಒಮ್ಮೆ ಟಿಕೆಟ್ ಕೊಂಡವರಿಗೆ ಬಹುಮಾನ ಕೊಟ್ಟಿದೆ. ಅದರಂತೆ ಮೊದಲು ಮೊಬೈಲ್ ಟ್ಯಾಬ್ ಹಾಗೂ ಎರಡನೇ ಬಾರಿಗೆ ಹೊಂಡಾ ಆಕ್ಟಿವಾ ಸ್ಕೂಟರ್ ಬಹುಮಾನವಾಗಿ ಕೊಟ್ಟಿದೆ.

ಕಳೆದ ಶುಕ್ರವಾರ ಭ್ರಮೆ ಆಡಿಯೋ ಬಿಡುಗಡೆ ಬೆಂಗಳೂರಿನ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆದ ವೇಳೆಯಲ್ಲೇ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ಸಹ ನಡೆಯಿತು. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಚರಣರಾಜ್ ಈ ಚಿತ್ರವನ್ನು ನಿರೂಪಿಸಿದ್ದಾರೆ.
ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಅಂಜನಾಗೌಡ ಹಾಗೂ ಇಶಾನಾ ನಾಯಕಿಯರ ಪಾತ್ರದಲ್ಲಿದ್ದಾರೆ. ಇದೊಂದು ಹಾರರ್ ಕಾಮಿಡಿ ಕಥೆಯ ಮೇಲೆ ನಡೆಯುವ ಸಬ್ಜೆಕ್ಟ್ ಆಗಿದ್ದು, ಚಿತ್ರಕ್ಕೆ ಚರಣರಾಜ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್ ಆಗಿದ್ದು, ಚಿತ್ರದ ಬಹುತೇಕ ಕಥೆ ನಡೆಯುವುದೇ ಆಸ್ಪತ್ರೆಯ ಅಂಗಳದಲ್ಲಿ. ನವೆಂಬರ್ ಒಂದರಂದು ನಮ್ಮ ಫ್ಲಿಕ್ಸ್ ಓಟಿಟಿ ವ್ಯವಸ್ಥೆಯ ಮೂಲಕ ಭ್ರಮೆ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಂಗೀತ ನೀಡಿದವರು ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್. ನಿರ್ದೇಶಕನಾದವನಿಗೆ ಸಿನಿಮಾ ಮಾರ್ಕೆಟಿಂಗ್ ತಂತ್ರ ಕೂಡ ತಿಳಿದಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದು ಚರಣ್ ರಾಜ್ ಅವರನ್ನು ನೋಡಿದಾಗ ತಿಳಿಯಿತು ಎಂದರು ನಾಗೇಂದ್ರಪ್ರಸಾದ್. ಎರಡೇ ವಾರದಲ್ಲಿ 10 ಸಾವಿರ ಟಿಕೆಟ್ ಮಾರಾಟ ಮಾಡಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು. ನಿರ್ದೇಶಕ ಚರಣರಾಜ್ ಚಿತ್ರದ ವಿವರಗಳನ್ನು ನೀಡುವಾಗ ಚಿತ್ರದ ಬಿಡುಗಡೆಯ ಆಶಯವನ್ನು ಹೇಳಿದರು. ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರವಿದು, ನನ್ನ ಈ ಪ್ರಯತ್ನವನ್ನು ನಂಬಿ ಬಂಡವಾಳ ಹಾಕಿದ ಎಲ್ಲಾ ನಿರ್ಮಾಪಕರಿಗೂ ಧನ್ಯವಾದ ಅರ್ಪಿಸುತ್ತೇನೆ. 14 ದಿನಗಳಲ್ಲಿ ಹತ್ತು ಸಾವಿರ ಟಿಕೆಟ್ ಸೇಲ್ ಮಾಡಿದ್ದೇವೆ. ಇದರಲ್ಲಿ ವಿಜೇತರೊಬ್ಬರಿಗೆ ಬೈಕ್ ಇದೆ. ಮುಂದಿನ ಡ್ರಾದಲ್ಲಿ ಬುಲೆಟ್ ಮತ್ತು ಕಾರ್ ಕೂಡ ಇರುತ್ತದೆ ಎಂಬ ಮಾಹಿತಿಯೂ ಬಂತು ಅವರಿಂದ.

ನಾಯಕ ನಟ ನವೀನ್, ನಾಯಕಿ ಇಶಾನಾ ಮತ್ತು ಅಂಜನಾಗೌಡ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು. ಮಜಾಟಾಕೀಸ್ ಪವನ್ ಈ ಚಿತ್ರದಲ್ಲಿ ಹಾಸ್ಪಿಟಲ್ ಅಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿದ್ದ ಭಾ.ಮ ಹರೀಶ್, ಭಾ.ಮ ಗಿರೀಶ್, ನೆಟ್‍ಫ್ಲಿಕ್ಸನ ವಿಜಯಕುಮಾರ್ ಕೂಡ ಚಿತ್ರದ ಬಗ್ಗೆ ಹಾಗೂ ತಂಡದ ಕುರಿತಂತೆ ಮಾತನಾಡಿದರು. ಮೊದಲ ಡ್ರಾ ವಿಜೇತರನ್ನು ಸಂಗೀತ ನಿರ್ದೇಶಕ ವಿ. ನಾಗೇಂದ್ರಪ್ರಸಾದ್ ಆಯ್ಕೆಮಾಡಿದರು.

Social Share :