Snehapriya.com

June 8, 2025

ಸಿನಿಮಾ-ಗಾಸಿಪ್

ಕೊರೊನಾ ಜಾಗೃತಿ ಹಾಡು ಮಹೇಂದ್ರ ಮನ್ನೋತ್ ಸಂಕಲ್ಪ

Social Share :

ಉದ್ಯಮಿ ಮಹೇಂದ್ರ ಮನ್ನೋತ್ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಮಹಾಮಾರಿ ಕೊರೊನಾ ಸಂಕಷ್ಟದ ಸಮಯದಲ್ಲಿ ಬಡ ಜನರ ಹಸಿವು ನೀಗಿಸಲು ಶ್ರಮಿಸುತ್ತಿರುವ ಮನ್ನೋತ್, ಮಹಾಮಾರಿ ಓಡಿಸಲು ಅಥವಾ ಜನರು ಧೈರ್ಯದಿಂದ ಬದುಕಲು ಸೂಚಿಸುವ ಗೀತೆಗಳ ಆಲ್ಬಂ ಕೂಡ ಮಾಡಿದ್ದಾರೆ.

ಸೋಮವಾರ ತಮ್ಮ ಕಾರ್ಯಗಳನ್ನು ಮಾಧ್ಯಮಗಳಿಗೆ ಮಹೇಂದ್ರ ಮನ್ನೋತ್ ವಿವರಿಸುವ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಂಡಳಿಯ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್ ಹಾಜರಿದ್ದರು.

‘ಹೆದರದಿರು ಓ ಮನಸ್ಸೇ..’ ಹಾಗೂ ‘ ಆತ್ಮ ನಿರ್ಭರ ಭಾರತ’ ಪರಿಕಲ್ಪನೆಯಲ್ಲಿ ಗೀತೆಗಳನ್ನು ರಚಿಸಿ ಪ್ರಸ್ತುತ ಪಡಿಸಲಾಗಿರುವ ಆಲ್ಬಂ ವಿಶೇಷ ಎನಿಸಿತು.

ಹೆದರದಿರು ಓ ಮನಸೇ ಎಂಬ ಗೀತೆಯನ್ನು ಹರಿಹರನ್ ನಿರ್ದೇಶನ ಮಾಡಿದ್ದಾರೆ. ಎ.ಟಿ. ರವೀಶ್ ಸಂಗೀತಕ್ಕೆ ರೇವಣ್ಣ ನಾಯಕ್ ಸಾಹಿತ್ಯ ಬರೆದಿದ್ದಾರೆ.
ವಿನಾಯಕ್ ಛಾಯಾಗ್ರಹಣ ಗೀತೆಗಿದೆ. ಸಚಿನ್ ಎಸ್ ನಗರ್ತ ಈ ಹಾಡನ್ನು ಹಾಡಿದ್ದಾರೆ.

ಇದೇ ವೇಳೆ ಕಳೆದ ವರ್ಷ ನಿರ್ಮಿಸಿದ ಆತ್ಮ‌ನಿರ್ಭರ ಭಾರತ ಎನ್ನುವ ಗೀತೆಯನ್ನು ಬಿಡುಗಡೆ ಮಾಡಲಾಯಿತು. ಇದು ಗಜೇಂದ್ರ ನಿರ್ದೇಶನದಲ್ಲಿ ಹಾಗೂ ವಿಜಯಕೃಷ್ಣ ಸಂಗೀತದಲ್ಲಿ ಮೂರು ರಾಯರ ಗಂಡ ಸಾಹಿತ್ಯದಲ್ಲಿ ಮೂಡಿ ಬಂದಿದೆ. ತೇಜಸ್ವಿ ಹರಿ ಹಾಡಿದ್ದಾರೆ.
ಕೊರೊನಾ ವಾರಿಯರ್ಸ್ ಗೆ ಗೀತೆ ಅರ್ಪಿಸಲಾಗಿದೆ.

Social Share :

ಶಂಕರ್ ನಾಗ್ ಹಾದಿ ಹಿಡಿದ ಸಂಚಾರಿ ವಿಜಯ್

Social Share :

ಆಕ್ಸಿಡೆಂಟ್ ಚಿತ್ರದ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶಂಕರ್ ನಾಗ್ ಸುಮಾರು ಮೂವತ್ತು ವರ್ಷಗಳ ಕೆಳಗೆ ವೃತ್ತಿ ಬದುಕಿನ ಯಶಸ್ಸಿನಲ್ಲಿ ಏರು ಮುಖವಾಗಿದ್ದಾಗಲೇ ಅದೇ ಆಕ್ಸಿಡೆಂಟ್ ನಲ್ಲಿ ಹೊರಟು ಹೋದರು.

ಸಂಚಾರಿ ವಿಜಯ್ ಕೂಡ ಅದೇ ಹಾದಿ ಹಿಡಿದು ಬಿಟ್ಟರು. ಅವರೂ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದವರು. ಅದೇ ಆಕ್ಸಿಡೆಂಟ್ ನಲ್ಲಿ ಗಾಯಗೊಂಡು ಇಹಲೋಕ ತ್ಯಜಿಸುವ ಹಾದಿಯಲ್ಲಿದ್ದಾರೆ. ಏಕೆಂದರೆ ಈ ದಿನ ಜೂನ್ 14ರ ಸೋಮವಾರ ಸಂಚಾರಿ ವಿಜಯ್ ಬಾರದ ಲೋಕಕ್ಕೆ ಹೊರಟು ಹೋದರೆಂದು ಕನ್ನಡದ ಮುಂಚೂಣಿಯ ಸ್ಟಾರ್ ಗಳು ಸೋಸಿಯಲ್ ಮೀಡಿಯಾದಲ್ಲಿ‌ ಸುದ್ದಿ ಹರಿಯಬಿಟ್ಟರು. ಆದರೆ ಅವರು ಕೋಮದಲ್ಲಿದ್ದಾರೆ ಇನ್ನು ಸಾವು ಘೋಷಣೆ ಮಾಡಿಲ್ಲ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಸದಾ ಹಸನ್ಮುಕಿ ಭಾವದಲ್ಲಿ ಇರುತ್ತಿದ್ದ ಹುಡುಗ ಸಂಚಾರಿ ವಿಜಯ್ ಮೈಸೂರಿನ ರಂಗಾಯಣದ ಪ್ರತಿಭೆ. ಅವರನ್ನು ಶೋಧ ಮಾಡಿ ಚಿತ್ರರಂಗಕ್ಕೆ ಕರೆತಂದಿದ್ದು ಜೋಗಿ ಪ್ರೇಮ್ ಹಾಗೂ ನಿರ್ದೇಶಕ ಎಂ.ಎಸ್.ರಮೇಶ್. ಆ ಚಿತ್ರ ‘ದಾಸವಾಳ’.

ಆ ಚಿತ್ರದಲ್ಲಿ ವಿಕಲ ಚೇತನನ ಪಾತ್ರದಲ್ಲಿ ಮಿಂಚಿದ್ದರು ವಿಜಯ್. ಆ ಬಳಿಕ ಚಿಕ್ಕಪುಟ್ಟ ಪಾತ್ರಗಳು ದಕ್ಕುತ್ತಿದ್ದವಾದರೂ ತಮ್ಮ ಪ್ರತಿಭೆ ತಕ್ಕ ಪಾತ್ರ ಸಿಗಲಿಲ್ಲ ಎಂದು ಕೊರಗುತ್ತಿದ್ದರು. ಇದೇ ವೇಳೆ ಆ ಒಂದು ಚಿತ್ರ ವಿಜಯ್ ಬದುಕನ್ನೇ ಬದಲಿಸಿಬಿಟ್ಟಿತು. ಅದು ‘ನಾನು ಅವನಲ್ಲ ಅವಳು..’. ಲಿಂಗದೇವರು ನಿರ್ದೇಶನದ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ
ಯನ್ನು ಮುಡಿಗೇರಿಸಿಕೊಂಡರು ವಿಜಯ್.

ಆ ಬಳಿಕ ಅನೇಕ ಚಿತ್ರಗಳಲ್ಲಿ ಹೀರೋ ಆದರು. ಆದರೆ ಸ್ಟಾರ್ ಇಮೇಜ್ ಬರಬೇಕೆಂದು ಕಷ್ಟ ಪಡುತ್ತಿದ್ದ ವಿಜಯ್ ಗೆ ಸಿಕ್ಕಿದ್ದು ಅಪ್ರತಿಮ ಕಲಾವಿದ ಎನ್ನುವ ಪಟ್ಟ. ಅದೂ ದೊಡ್ಡದೇ.. ಹಾಗಾಗಿ ಆಕ್ಟ್1978, ಮೇಲೊಬ್ಬ ಮಾಯಾವಿ(ಇನ್ನು ಬಿಡುಗಡೆ ಕಂಡಿಲ್ಲ) ನಾತಿಚರಾಮಿ, ಕೃಷ್ಣತುಳಸಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, 6ನೇ ಮೈಲಿ, ಪಿರಂಗಿಪುರ, ತಲೆ ದಂಡ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದರು ಸಂಚಾರಿ ವಿಜಯ್.

ಇದಕ್ಕೂ ಮುಂಚೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ರಾಮ್ ಗೋಪಾಲ್ ವರ್ಮಾ ಅವರ ಕಿಲ್ಲಿಂಗ್ ವೀರಪ್ಪನ್ ಹಾಗೂ ಪ್ರಜ್ವಲ್ ದೇವರಾಜ್ ಅವರ ಜೊತೆಯಲ್ಲಿ ಜಂಟಲ್ ಮನ್ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಮಹಾಮಾರಿ ಕೊವಿಡ್ ನಿಂದ ಮನರಂಜನಾ ಕ್ಷೇತ್ರಕ್ಕೆ ಕತ್ತಲು ಕವಿಯಿತು. ಇದೇ ವೇಳೆ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಕಷ್ಟಕ್ಕೆ ಸಿಲುಕಿದ ಕಲಾವಿದರು ಮತ್ತಿತರ ಚಿತ್ರರಂಗದ ಮಂದಿ ಹಾಗೂ ಇತರರು ಅಸಹಾಯಕತೆಯಲ್ಲಿ ಬೇಯುವಾಗ ಅವರ ನೆರವಿಗೆ ನಿಂತಿದ್ದರು ಕರುಣಾಮಯಿ ವಿಜಯ್.

ಆದರೆ ವಿಧಿಯ ಆಟವೇ ಬೇರೆ ಇತ್ತು. ವಿಜಯ್ ಕರೆದುಕೊಳ್ಳಲು ಜವರಾಯ ಹೊಂಚು ಹಾಕಿದ್ದ. ರಾತ್ರಿ ಬೈಕ್ ಸ್ಕಿಡ್ ಆಗಿ ವಿಜಯ್ ಲೈಟ್ ಕಂಬದ ಹೊಡೆತದ ನರಕಕ್ಕೆ ಸಿಲುಕಿದರು. ವಿಜಯ್ ಬಾರದ ಲೋಕಕ್ಕೆ ಹೋಗದಿರಲಿ ಎಂದು ಹಿತೈಷಿಗಳು ಪ್ರಾರ್ಥಿಸುತ್ತಿದ್ದಾರೆ. ಹಾಗೇನಾದರೂ ಪವಾಡ ನಡೆದರೆ ಅದು ಎಲ್ಲರ ಖುಷಿ.

-ಸ್ನೇಹಪ್ರಿಯ ನಾಗರಾಜ್

Social Share :

ಕೆ.ಸಿ.ಎನ್ ಚಂದ್ರಶೇಖರ್ ನಿಧನ ಕಳಚಿದ ಚಿತ್ರರಂಗದ ಮತ್ತೊಂದು ಕೊಂಡಿ

Social Share :

ಕೆ.ಸಿ.ಎನ್. ಮೂವಿಸ್ ಕನ್ನಡ ಚಿತ್ರರಂಗಕ್ಕೆ ಘನತೆ ತಂದುಕೊಟ್ಟ ಸಂಸ್ಥೆ. ಆ ಸಂಸ್ಥೆಯನ್ನು ಹುಟ್ಟು ಹಾಕಿದ ಕೆ.ಸಿ.ಎನ್.ಗೌಡ ಅವರ ಪುತ್ರ ಕೆ.ಸಿ.ಎನ್.ಚಂದ್ರಶೇಖರ್ (69)ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಬಬ್ರುವಾಹನ, ಹುಲಿಯ ಹಾಲಿನ ಮೇವು, ಶರಪಂಜರ, ಜಯಸಿಂಹ ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ ಸಂಸ್ಥೆಯ ಹಿರಿಯ ಮಗ ಕೆ.ಸಿ.ಎನ್.ಚಂದ್ರಶೇಖರ್ ವಿತರಕರಾಗಿಯೂ ಹೆಚ್ಚು ಚಿರಪರಿಚಿತ.

ಚಂದ್ರಶೇಖರ್ ಜನಾನುರಾಗಿಯಾಗಿದ್ದರು. ಚಿತ್ರರಂಗದಲ್ಲಿ ಅವರು ಅಜಾತಶತ್ರು. ಹಾಗಾಗಿಯೇ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಲವಾರು ಬಾರಿ ಅಧ್ಯಕ್ಷರಾಗಿದ್ದರು.

ಹಣಕಾಸು ವ್ಯವಹಾರದಲ್ಲಿ ಚಂದ್ರು ಎತ್ತಿದ ಕೈ ಹಾಗಾಗಿ ಇವರಿಂದಲೇ ಹಣ ಪಡೆದು ದೊಡ್ಡ ದೊಡ್ಡ ಚಿತ್ರಗಳು ನಿರ್ಮಾಣಗೊಂಡ ಇತಿಹಾಸ ಚಿತ್ರರಂಗದಲ್ಲಿ ಇದೆ. ಅದೇ ರೀತಿ ಹಣ ಹಿಂದಿರುಗದೇ ಕೋರ್ಟ್ ಮೆಟ್ಟಿಲು ಹತ್ತಿದ ಘಟನೆಗಳು ಬಹಳಷ್ಟಿವೆ. ಮುಖ್ಯವಾಗಿ ಚಂದ್ರಶೇಖರ್ ವಿತರಕರಾಗಿ ಹೆಸರು ಮಾಡಿದ್ದರು.

ನಿರ್ಮಾಪಕ, ವಿತರಕ, ಹಣಕಾಸು ಸಂಸ್ಥೆ ಮುಖ್ಯಸ್ಥ ಹೀಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕೆ.ಸಿ.ಎನ್.ಚಂದ್ರಶೇಖರ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಮುಖ್ಯಸ್ಥ ಸುಧೀಂದ್ರ ವೆಂಕ ಟೇಶ್ ಹಾಗೂ ಇನ್ನು ಅನೇಕರು ಸಂತಾಪ ಸೂಚಿಸಿದ್ದಾರೆ.

Social Share :

ಸುರೇಶ್ಚಂದ್ರ ಜೀವನ ಪ್ರೇಮದ ಅದಮ್ಯ ನಡೆಯ ವ್ಯಕ್ತಿ

Social Share :

ಜೀವನದಲ್ಲಿ ಏನೇ ಅನುಭವ ಪಡೆಯುವುದಿದ್ದರೂ ಅದರಲ್ಲಿ ದಿಟ್ಟತನ ಇರಬೇಕೆಂದು ಪ್ರತಿಪಾದಿಸುತ್ತಿದ್ದ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರಿಗೂ ನನಗೂ ಸಿದ್ಧಾಂತಗಳಲ್ಲದಿದ್ದರೂ ಅನೇಕ ವಿಷಯಗಳಲ್ಲಿ ವೈರುಧ್ಯಗಳಿದ್ದವು. ಹಾಗಾಗಿ ನಾವಿಬ್ಬರು ಎದುರು ಬದುರು ಇದ್ದಾಗ ಜಗಳವಾಡಿಕೊಳ್ಳುತ್ತಿದ್ದೆವು. ಆದರೆ ಎಷ್ಟೋ ವೇಳೆ ಅವರೊಬ್ಬ ಸಂತನಂತೆ ನನಗೆ ಗೋಚರವಾಗಿದ್ದೂ ಉಂಟು..

ಇಂಥಹ ನೆನೆಪು ಏಕೆಂದರೆ ಕಳೆದ 15 ದಿನಗಳಿಂದ ಬೆಂಗಳೂರಿನ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಕೊವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದ ಲಿಂಗೇನಹಳ್ಳಿ ಸುರೇಶ್ಚಂದ್ರ ಇಹಲೋಕ ತ್ಯಜಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ ನನಗಿಂತ ಬಹಳಷ್ಟು ಹಿರಿಯರಾಗಿದ್ದ ಸುರೇಶ್ಚಂದ್ರ ಅವರು ನಾನು ಸಂಜೆವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಅದೇಕೋ ನಮ್ಮಿಬ್ಬರ ನಡುವೆ ವಾದ ವಿವಾದಗಳು ಹೆಚ್ಚು ನಡೆಯುತ್ತಿದ್ದವು.

ಇದಕ್ಕೂ ಮುಂಚೆ ಈ ಸಂಜೆ ಪತ್ರಿಕೆಯಲ್ಲಿ ಅವರು ಕೆಲ ಸಮಯ ಕೆಲಸ ಮಾಡಿದಾಗ ನನ್ನಿಂದ ಸಾಹಸ ಎನ್ನುವಂತಹ ಕೆಲಸ ಮಾಡಿಸಿದ್ದರು. ಯಡವನಹಳ್ಳಿ ದೌರ್ಜನ್ಯದ ಘಟನೆ ವರದಿ ಮಾಡಿದ್ದೂ ಆಗಲೇ. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಸ್ವಕ್ಷೇತ್ರದಲ್ಲಿ ಅಮಾಯಕ ಜನರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿತ್ತು. ಆಗ ಅಲ್ಲಿ ಆ ಸ್ಥಳಕ್ಕೆ ತೆರಳಿ ವರದಿ ಮಾಡುವುದು ಅಷ್ಟು ಸುಲಭವಿರಲಿಲ್ಲ. ನಾನು ಮತ್ತು ನಮ್ಮ ಛಾಯಾಗ್ರಾಹಕರಾಗಿದ್ದ ಗಡೇಕಲ್ ನಾಗರಾಜ್ ಇಬ್ಬರೂ ಮಂಡ್ಯದವರೆಗೂ ಹೋಗಿ ಅಲ್ಲಿಂದ ಆಟೋ ಹಿಡಿದು ಆ ಊರಿಗೆ ಹೋಗಿ ಬಂದು ಚಿತ್ರಗಳ ಸಮೇತ ವರದಿ ಮಾಡಿದ್ದೆವು. ಆ ವರದಿ ಬಂದ ತಕ್ಷಣ ಘಟನೆಗೆ ಸಂಬಂಧಿಸಿದಂತೆ ನ್ಯಾಯ್ಯಾಂಗ ತನಿಖೆಗೆ ಸರ್ಕಾರ ಆದೇಶ ನೀಡಿತ್ತು. ನಾನು ಇಂತಹ ಸಾಹಸ ಮಾಡಲು ಕಾರಣಕರ್ತರಾಗಿದ್ದವರು ಸುರೇಶ್ಚಂದ್ರ. ನಾನು ಸಿನಿಮಾ ಪತ್ರಿಕೋದ್ಯಮದತ್ತ ಆಕರ್ಷಿತರನಾಗಲು ಇವರೇ ಕಾರಣ..

ಈಚೆಗೆ ಒಂದು ವರ್ಷದಿಂದ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಬಹಳವೇ ಅಪ್ಯಾಯಮಾನವಾಗಿ ಮಾತನಾಡುತ್ತಿದ್ದರು. ಅವರ ಮಗ ವಿನಯ್ ಚಂದ್ರ ಸಂಗೀತ ನಿರ್ದೇಶಕ ರಾಗಿ ನನಗೆ ಆಪ್ತ ವಾಗಿರುವುದರಿಂದ ಆ ಬಗ್ಗೆ ಹೆಚ್ಚು ಮಾತು ನಡೆಯುತ್ತಿತ್ತು. ಚೆಲುವಿನ ಚಿತ್ತಾರ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅವರ ಅಬ್ಬರ ನೋಡಿ ಬೆರಗಾಗಿದ್ದೆ. ಚಿಕ್ಕಪೇಟೆ ಸಾಚಗಳು ಚಿತ್ರದಲ್ಲಿ ಕಾಮಿಡಿ ವಿಲನ್.. ಆ ಬಳಿಕ ಇನ್ನು ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸುರೇಶ್ಚಂದ್ರ ತಮ್ಮ ಆರೋಗ್ಯದ ಮಿತಿಯನ್ನು ಅರಿತವರಾಗಿದ್ದರು. ಇಂತಹವರನ್ನು ಕೋವಿಡ್ ಬಲಿ ಪಡೆದಿದ್ದು ಮಾತ್ರ ವಿಪರ್ಯಾಸ.

Social Share :

ಹೊಂಬಾಳೆ ವಿಜಯ್ ಕಿರಗಂದೂರು ಸೇವೆಯಲ್ಲಿ ‘ರಾಜಕುಮಾರ’

Social Share :

ಹೊಂಬಾಳೆ ಫಿಲ್ಸಂ ಇಲ್ಲಿಯವರೆಗೂ ಕೆ.ಜಿ.ಎಫ್ ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳನ್ನೇ ನಿರ್ಮಿಸಿದೆ. ಇದೀಗ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ಸಂಸ್ಥೆ ಗುರುತಿಸಿಕೊಂಡಿದೆ.

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರ ಸೋದರ ಸಂಬಂಧಿ ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಸಂ ಸಂಸ್ಥೆಯ ಮಾಲೀಕರು.

ಈಗ ಇದರ ಪ್ರಸ್ತಾಪ ಏಕೆಂದರೆ ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಚಿತ್ರರಂಗದ ಮಂದಿಗೆ ಮತ್ತು ಇತರ ಸಂಕಷ್ಟದಲ್ಲಿ ಇರುವ ಕಲಾವಿದರು ತಂತ್ರಜ್ಞರಿಗೆ ಸಂಸ್ಥೆ‌ ಆರ್ಥಿಕ ನೆರವು ನೀಡಿದೆ. ಈಗಾಗಲೇ ಸಾಕಷ್ಟು ಜನರ ವೈಯಕ್ತಿಕ ಖಾತೆಗಳಿಗೆ 5 ಸಾವಿರ ರೂಪಾಯಿ ಹಣ ಜಮಾ ಮಾಡಿದೆ.

ವಿಜಯ್ ಕಿರಗಂದೂರು ಕೊರೋನ ಸಂದರ್ಭದಲ್ಲಿ ಯಾವುದೇ ಪ್ರಚಾರವಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿರುವುದು ವಿಶೇಷವೇ.

ಕೊರೊನಾ ಮಹಾಮಾರಿ ವಕ್ಕರಿಸಿದ ತಕ್ಷಣವೇ ಮನರಂಜನಾ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿತು.ಅತ್ಯಂತ ಕಷ್ಟಕರ ಸಂದರ್ಭದಲ್ಲಿ ವಿಜಯ್ ಕಿರಂಗದೂರು ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಉತ್ತಮ ಮೊತ್ತವನ್ನು ಎರಡು ತಿಂಗಳು ವರ್ಗಾಯಿಸಿದ್ದರು ಹಾಗೂ ಕನ್ನಡ ಚಲನಚಿತ್ರ ಕಾರ್ಮಿಕರ‌ ಸಂಕಷ್ಟಕ್ಕೂ ನೆರವಾಗಿದ್ದರು.

ಈ ವರ್ಷ ಮತ್ತೆ ಕೊರೋನದ ಎರಡನೇ ಅಲೆ ಜೋರಾಗಿದೆ. ಲಸಿಕೆ ಬಂದಿದೆಯಾದರೂ, ಹರಡುವಿಕೆಯ ಪ್ರಮಾಣ ಕಳೆದ ಸಲಕ್ಕಿಂತ ಹೆಚ್ಚು.. ಅದೇ ರೀತಿ ಕೊರೋನದೊಂದಿಗೆ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ವಿಜಯ್ ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ.

ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ ಹಾಗೂ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಹಾಗಾಗಿ ಅವರ ಕಾರ್ಯಗಳು ಶ್ಲಾಘನೀಯ ಎನಿಸಿವೆ.

Social Share :

ಹೇ ಕೊರೊನಾ.. ಇದು ಸರಿನಾ.. ಶಿವನಂಜೆಗೌಡರ ಪರಿಸರ ಗೀತೆ

Social Share :

ಮಹಾಮಾರಿ ಕೊರೊನಾ ಬಂದಾಗಿನಿಂದಲೂ ಮನರಂಜನಾ ಕ್ಷೇತ್ರಕ್ಕೆ ಮಹಾ ಮಹಾ ಹೊಡೆತ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಕನ್ನಡದ ಚಿತ್ರ ಸಾಹಿತಿ ಶಿವನಂಜೆಗೌಡ ಅವರು ‘ಹೇ ಕೊರೊನಾ ಇದು‌ ಸರಿನಾ..’ ಎಂಬ ಗೀತೆ ಮತ್ತು ‘ಬರಿದಾಗುತ್ತಿದೆ; ಬಂಜರಾಗುತ್ತಿದೆ’ ಎಂಬ ಪರಿಸರ ಗೀತೆ ಬರೆದಿದ್ದು ಆ ಗೀತೆಗಳು ಅತ್ಯಂತ ಜನಪ್ರಿಯ ವಾಗಿವೆ.

ಇದಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆ ಅವರೂ ಸೇರಿದಂತೆ ಸಿನಿಮಾ ಸ್ಟಾರ್ ನಟರು ಹಾಗೂ ಇತರ ಗಣ್ಯರು ಶಿವನಂಜೆಗೌಡರ ಗೀತೆಗೆ ಮರಳಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ..

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಲವ್ಲಿಸ್ಟಾರ್ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಅಲ್ಲದೆ ಪರಿಸರವಾದಿ ಯಲ್ಲಪ್ಪರೆಡ್ಡಿ ಅವರಂತಹ ಗಣ್ಯರ ಹೊಗಳಿಕೆ ಈ ಪರಿಸರ ಗೀತೆಗೆ ದಕ್ಕಿದೆ.

ಶಿವನಂಜೇಗೌಡರು ಅನೇಕ ಚಲನಚಿತ್ರ ಗೀತೆಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಅಲ್ಲದೆ ಎರಡು ಭಕ್ತಿಗೀತೆಗಳ ಆಲ್ಬಂ ಹೊರತಂದಿದ್ದಾರೆ. ಈಗ ಈ ಪರಿಸರ ಗೀತೆಗೆ ಅವರೇ ರಾಗಸಂಯೋಜನೆ ಮಾಡಿದ್ದಾರೆ.

Social Share :

ನೊಂದ ಕಲಾವಿದರಿಗೆ ತಲಾ 5 ಸಾವಿರ ಯಶ್ ಸಹಾಯ ಹಸ್ತ

Social Share :

ಸಂಕಷ್ಟದಲ್ಲಿರುವ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಕನ್ನಡದ ಮುಂಚೂಣಿಯ ನಟ ರಾಕಿಂಗ್ ಸ್ಟಾರ್ ಯಶ್ ಸಹಾಯಹಸ್ತ ಚಾಚಿದ್ದಾರೆ.

ಚಿತ್ರರಂಗದ ನೊಂದಿರುವವರಿಗೆ ಮೂರು ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಹಾಕಲು ಯಶ್ ಮನಸ್ಸು ಮಾಡಿದ್ದಾರೆ.

ಕೊರೊನಾ ಮಹಾಮಾರಿ ಮನರಂಜನಾ ಕ್ಷೇತ್ರದ ಮೇಲೆ ಕೊಟ್ಟ ಹೊಡೆತದಿಂದ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಅತಿಯಾದ ಕಷ್ಟಗಳನ್ನು ಅನುಭವಿಸಬೇಕಾಯಿತು. ಸಿನಿಮಾ ಜನರ ಕಷ್ಟಕ್ಕೆ ಅಲ್ಲಲ್ಲಿ ಕೆಲವರು ಸ್ಪಂದಿಸಿದರೂ ಅದು ಆನೆ ಹೊಟ್ಟೆಗೆ ಬಿದ್ದ ಅರೆಕಾಸಿನ ಮಜ್ಜಿಗೆಯಾಯಿತು.

ಈ ಮಧ್ಯೆ ಸರ್ಕಾರ ಘೋಷಣೆ ಮಾಡಿರುವ ಅರೆ ಕಾಸು ಎಷ್ಟು ಕಲಾವಿದರಿಗೆ ತಲುಪುವುದೆಂಬುದು ಯಾರಿಗೂ ತಿಳಿದಿಲ್ಲ..

ಆದರೆ ಯಶ್ ಚಿತ್ರರಂಗದ ಎಲ್ಲಾ ಸಂಘಟನೆಗಳ ಸಂಪರ್ಕ ಪಡೆದು ಸಂಕಷ್ಟದಲ್ಲಿರುವ ಜನರ ಅಧಿಕೃತ ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡೆಯುತ್ತಿರುವುದಾಗಿ ತಿಳಿಸಿ, ಈ ಪ್ರಕ್ರಿಯೆ ಮುಗಿದ ತಕ್ಷಣವೇ ಹಣ ವರ್ಗಾವಣೆ ಮಾಡುವುದಾಗಿ ತಮ್ಮ ಟ್ವಿಟರ್ ‌ಖಾತೆ ಮೂಲಕ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಕಣ್ಣಿಗೆ ಕಾಣದ ವೈರಸ್ ಮನುಷ್ಯರ ಬದುಕನ್ನು ಬುಡಮೇಲು ಮಾಡಿದೆ. ಕಳೆದ ವರ್ಷದಿಂದ ಕೆಲಸವಿಲ್ಲದೆ ಸಿನಿಮಾ ಮಂದಿಯ ಬದುಕು ಬೀದಿಗೆ ಬಿದ್ದಂತಾಗಿದೆ. ಇಂತಹ ಸಮಯದಲ್ಲಿ ನಾವು ಅವರ ಜೊತೆಗೆ ನಿಲ್ಲಬೇಕಾಗಿದೆ. ಹಾಗಾಗಿ ನನ್ನ ಸ್ವಂತ ಸಂಪಾದನೆಯಿಂದ ಅವರಿಗೆ ಹಣ ನೀಡುತ್ತಿರುವೆ ಎಂದು ಯಶ್ ತಿಳಿಸಿದ್ದಾರೆ.

ಯಶ್ ಅವರ ಈ ನಿಲುವಿಗೆ ಚಿತ್ರರಂಗದ ಮಂದಿ ಕೊಂಡಾಡಿದ್ದಾರೆ. ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ನೀನೊಬ್ಬ ಚಿತ್ರರಂಗದ ಯಜಮಾನ ಮತ್ತು ಚಕ್ರವರ್ತಿ ಎಂದು ಕೊಂಡಾಡಿದ್ದಾರೆ.

Social Share :

ಚಿರಂಜೀವಿ ಸರ್ಜಾ ರಣಂನ ನೋವು ನಲಿವು

Social Share :

ನಟ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ ಎಂಬುದು ನಿಷ್ಠುರ ಸತ್ಯ. ಆದರೆ ಅವರು ತಮ್ಮ ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ. ನಿಜ ಈಚೆಗೆ ಅವರು ಅಭಿನಯಿಸಿದ ‘ರಣಂ’ ಚಿತ್ರದ ಕಾರ್ಯಕ್ರಮದಲ್ಲಿ ಅದು ವ್ಯಕ್ತವಾಯಿತು.

ಮುಖ್ಯವಾಗಿ ಅಲ್ಲಿ ಎರಡು ರೀತಿಯ ನೋವಿತ್ತು.. ಒಂದು ನಾಯಕ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಹೊರಟು ಹೋಗಿದ್ದಾರೆ ಎಂಬುದು.. ಮತ್ತೊಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಚಿತ್ರರಂಗದಲ್ಲಿ ನಿರ್ಮಾಪಕ ಹೇಗೆ ಅಸಹಾಯಕನಾಗಿ ಇರಬಲ್ಲ ಎಂಬುದನ್ನು ವ್ಯಕ್ತಪಡಿಸಿದ್ದು. ಹೌದು ರಣಂ ಚಿತ್ರದ ಬಿಡುಗಡೆ ಪೂರ್ವ ಭಾವಿಯಾಗಿ ಏರ್ಪಡಿಸಿದ್ದ ಅದ್ದೂರಿ ಸಮಾರಂಭ ನೋವಿಗೂ ಸಾಕ್ಷಿಯಾಯಿತು.

ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡ ಅನೇಕ ಮಾಹಿತಿಗಳನ್ನು ನೀಡಿತಾದರೂ ಚಿರು ಸರ್ಜಾ ಕಣ್ಮರೆ ವಿಷಯವೇ ಪ್ರಧಾನವಾಗಿ ನೋವು ಎದ್ದು ಕಂಡಿತು. ಚಿತ್ರದಲ್ಲಿ ಆ ದಿನಗಳು ಚೇತನ್ ಕೂಡ ಮುಖ್ಯ ಪಾತ್ರದಲ್ಲಿದ್ದು, ನಿಜ ಜೀವನದಲ್ಲಿ ಅನೇಕ ಚಳುವಳಿಗಳಲ್ಲಿ ಭಾಗವಹಿಸುವ ಅವರ ಮನಸ್ಥಿತಿಗೆ ಪೂರಕವಾಗಿಯೇ ಚಿತ್ರದಲ್ಲಿ ಅವರ ಪಾತ್ರವಿದೆ ಎಂಬ ಮಾಹಿತಿಗಳು ಬಂದವು. ಇದೇ ವೇಳೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿದ್ದು ವಿಶೇಷವಾಗಿತ್ತು.

ಚಿರು ಬಗ್ಗೆ ಮೇಘನಾ ನಿರ್ಭಾವುಕವಾಗಿ ಮಾತನಾಡಿದ ವಿಡಿಯೋ ಇತ್ತು. ನನ್ನ ಮಗನಲ್ಲಿ ಚಿರುವನ್ನು ಕಾಣುತ್ತಿದ್ದೇನೆ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು. ಮಾರ್ಚ್ 26 ಕ್ಕೆ ಚಿತ್ರವು ಬಿಡುಗಡೆ ಕಾಣುತ್ತದೆ. ಹಲವು ಕಷ್ಟಗಳನ್ನು ಎದುರಿಸಿ ಕೂಡ ಧೈರ್ಯವಾಗಿ ಇರುವೆ ಎಂದು ಹೇಳಿಕೊಂಡರು ನಿರ್ಮಾಪಕ ಕನಕಪುರ ಶ್ರೀನಿವಾಸ್ ವೇದಿಕೆ ಮೇಲೆ ಹಾಡಿ ಕುಣಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಶುಭ ಹಾರೈಸಿದ ವಿಡಿಯೋ ಪ್ರಸಾರವಾಯಿತು. ಚೇತನ್, ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ಮಾತನಾಡಿದ್ದು ವಿಶೇಷವಾಗಿತ್ತು.

ಚಿರು ಮಾವ ಹಾಗೂ ಹಿರಿಯ ನಟ ಸುಂದರ್ ರಾಜ್ ನನ್ನ ಅಳಿಯ ಈಗಲೂ ಇದ್ದಾನೆ. ಅದು ಮಗನ ರೂಪದಲ್ಲಿ ಎಂದು ಹೇಳಿದ್ದು ಸಹ ಗಮನ ಸೆಳೆಯಿತು..

Social Share :

ಜಾನಿ ವಾಕರ್ ನಲ್ಲಿ ರಾಗಿಣಿ ಹೊಸ ರೂಪ

Social Share :

ಸ್ಯಾಂಡಲ್ ವುಡ್ ನ ಮುಂಚೂಣಿಯ ನಟಿ ರಾಗಿಣಿ ಮತ್ತೆ ಚಿತ್ರಗಳಲ್ಲಿ ಬ್ಯುಜಿಯಾಗಿದ್ದಾರೆ. ಇದೀಗ ಟೈಟಲ್ ಬಿಡುಗಡೆ ಕಂಡಿರುವ ಜಾನಿ ವಾಕರ್ ನಲ್ಲಿ ಪೊಲೀಸ್ ತನಿಖಾ ಅಧಿಕಾರಿಯಾಗಿ ವಿಶೇಷವಾಗಿ ಮಿಂಚಲಿದ್ದಾರೆ. ಈಚೆಗೆ ನಡೆದ ‘ಜಾನಿ ವಾಕರ್’ ಎಂಬ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾಂಭದಲ್ಲಿ ರಾಗಿಣಿ ತಮ್ಮ ಪಾತ್ರದ ಬಗ್ಗೆ ವಿಶೇಷವಾಗಿ ಹೇಳಿಕೊಂಡರು‌. ನಿಜಕ್ಕೂ ಇದು ವಿಶೇಷವಾಗಿದೆ. ಪೊಲೀಸ್ ಅಧಿಕಾರಿಯಾಗಿ ಸಮವಸ್ತ್ರ ತೊಡವುದಿಲ್ಲ. ಆದರೆ ಪೊಲೀಸ್ ಗತ್ತು ಅದೇ ರೀತಿಯಾಗಿ ಇರುತ್ತದೆ. ನನ್ನ ಅನೇಕ ಚಿತ್ರಗಳಿಗಿಂತ ಇದು ಬೇರೆಯೇ ಆಗಿದೆ ಎಂದರು ರಾಗಿಣಿ.

‘ಜಾನಿ ವಾಕರ್’ ಎಂಬುದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಇದನ್ನು ಮಫ್ತಿ ಚಿತ್ರದ ಖ್ಯಾತಿಯ ನಿರ್ದೇಶಕ ನರ್ತನ್ ಶಿಷ್ಯ ವೇದಿಕ್ ಕಾಸ್ ಮೋಸ್ ನಿರ್ದೇಶನ ಮಾಡುತ್ತಿದ್ದಾರೆ. ‘ಇದೊಂದು ದೃಶ್ಯಗಳನ್ನು ಹೊಸೆದು ಕೊಡುವ ಚಿತ್ರ. ಥ್ರಿಲ್ಲರ್ ಎಂಬುದಲ್ಲಿ ಅಚ್ಚರಿ ಇಲ್ಲ’ ಎಂದರು ನಿರ್ದೇಶಕರು. ಚಿತ್ರದ ಟೀಸರ್ ನಲ್ಲಿ ಅನೇಕ ವಿಶೇಷತೆಗಳು ಕಂಡು ಬಂದವು. ರಂಜನ್ ಹಾಸನ್ ಹಾಗೂ ಸುನಿಲ್ ಈ ಚಿತ್ರದ ನಿರ್ಮಾಪಕರು. ಇದು ಎಲ್ಲಾ ಭಾಷೆಯಲ್ಲಿಯೂ ತಯಾರಾಗುವ ಮೂಲಕ ಪಾನ್ ಇಂಡಿಯಾ ಚಿತ್ರವಾಗುತ್ತದೆ ಎಂದರು ನಿರ್ಮಾಪಕ ರಂಜನ್ ಹಾಸನ್.

ಹುಬ್ಬಳ್ಳಿ ಹುಡುಗ ಅಭಯ್ ವೀರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೀನು ಮನಸ್ಸು ಸಂಗೀತ ವಿಶೇಷವಾಗಿದೆ ಎಂಬುದಕ್ಕೆ ಟೀಸರ್ ಸಾಕ್ಷಿಯಾಗಿತ್ತು.

Social Share :

ಪರಿ ಶುದ್ಧ ಕಾಮಿಡಿ ಗೋವಿಂದ ಗೋವಿಂದ

Social Share :

ಹಾಸ್ಯಮಯ ಚಿತ್ರಗಳು ಸದಾ ಪ್ರೇಕ್ಷಕರನ್ನು ಗೆಲ್ಲುತ್ತವೆ. ಅದರಲ್ಲಿಯೂ ಪರಿಶುದ್ಧ ಹಾಸ್ಯ ಮಯ ಚಿತ್ರಗಳು ಮನೆ ಮಂದಿಯನ್ನೆಲ್ಲಾ ಗೆಲ್ಲುತ್ತವೆ. ಆ ಸಾಲಿಗೆ ಸೇರುವ ‘ಗೋವಿಂದ ಗೋವಿಂದ’ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅದಕ್ಕೆ ಮುಂಚೆ ಚಿತ್ರದ ಹಾಡುಗಳ ಝಲಕ್ ಹೇಗಿದೆ ಎಂಬುದನ್ನು ತಿಳಿಸಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಮಧುಗಿರಿ ಕ್ಷೇತ್ರದ ಹಿರಿಯ ರಾಜಕೀಯ ಧುರೀಣ ಕೆ.ಎನ್.ರಾಜಣ್ಣ, ಹಿರಿಯ ನಿರ್ದೇಶಕ ಲಿಂಗದೇವರು ಮೊದಲಾದವರು ಈ ಸಂದರ್ಭದಲ್ಲಿ ಶುಭ ಹಾರೈಸಲು ಬಂದಿದ್ದರು.

ಕಿರುತೆರೆಯಲ್ಲಿ ಹೆಸರಾಗಿರುವ ರವಿಗರಣಿ ಚಿತ್ರದ ನಿರ್ಮಾಪರಲ್ಲಿ ಒಬ್ಬರು. ಅವರ ಜೊತೆ ಕೆಲಸ ಮಾಡಿರುವ ತಿಲಕ್ ಚಿತ್ರದ ನಿರ್ದೇಶಕರು. ಸುಮಂತ್ ಶೈಲೇಂದ್ರ ಹಾಗೂ ಕವಿತಾಗೌಡ ಮುಖ್ಯ ಪಾತ್ರದಲ್ಲಿದ್ದರೆ; ಅವರಿಗೆ ಸಮಾನಾಂತರವಾಗಿ ರೂಪೇಶ್ ಶೆಟ್ಟಿ ಹಾಗೂ ಭಾವನಾ ಜೋಡಿ ಇದೆ. ಇದು ಮನೆ ಮಂದಿಯೆಲ್ಲಾ ಕುಳಿತು ನೋಡುವ ಚಿತ್ರ ಎಂದರು ತಿಲಕ್. ಹಾಡುಗಳಲ್ಲಿ ವೈವಿಧ್ಯತೆ ಇದೆ. ಅದರಲ್ಲಿಯೂ ವೆಂಕಟೇಶ್ವರ ಸುಪ್ರಭಾತದ ರೀತಿಯಲ್ಲಿ ಇರುವ ಹಾಡು ಈಗಾಗಲೇ ಜನ ಮನ ಗೆದ್ದಿದೆ. ಈ ಹಾಡನ್ನು ಬೆಲಂ ಬಾಟಂ ಚಿತ್ರದ ಸಿದ್ದಪ್ಪಾಜಿ ಹಾಡು ಖ್ಯಾತಿಯ ಕಡಬಗೆರೆ ಮುನಿರಾಜು ಹಾಡಿರುವುದು ವಿಶೇಷ ಎಂದರು ರವಿಗರಣಿ. ಒಂದು ಚಿತ್ರ ಮೂರು ದಿನ ಓಡಿದ್ರೆ ಯಶಸ್ವಿ ಯಾಗಲ್ಲ.. ಬದಲಿಗೆ ಅದು ನೂರು ದಿನ ಓಡಬೇಕು ಎಂದರು ಲಿಂಗದೇವರು.

ಅಂದ ಹಾಗೆ ಹಿತನ್ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಪ್ರದೀಪ್ ವರ್ಮ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಈಗ ನಮಗೆ ಸಿಡಿ ಅನ್ನಲು ಭಯವಾಗುತ್ತದೆ. ಹಾಗಾಗಿ ಹಾಡುಗಳ ಜುಕೆ ಬಾಕ್ಸ್ ಎಂದು ಹೇಳುತ್ತಿದ್ದೇವೆ ಎಂದು ಚಟಾಕಿ ಹಾರಿಸಿದರು ರವಿ ಗರಣಿ. ಚಂದ್ರಶೇಖರ್ ಕ್ಯಾಮೆರಾ ಚಿತ್ರಕ್ಕಿದೆ. ನಿರ್ಮಾಪಕ ಶೈಲೇಂದ್ರ ಬಾಬು ಅವರ ಗೈರು ಹಾಜರಿ ಇತ್ತು.

Social Share :