Snehapriya.com

June 9, 2025

ಸಿನಿಮಾ-ಗಾಸಿಪ್

ಮನುಷ್ಯ ಗುಣಗಳ ಮಿಸ್ಟರ್ ಡಿ ಹುಡುಕಾಟ

Social Share :

ಸಮಾಜದಲ್ಲಿ ಶೋಷಣೆ ನಡೆಯುತ್ತದೆ; ದುಷ್ಟತನ ಮೇರೆ ಮೀರುತ್ತದೆ.‌ ಒಳ್ಳೆಯದರ ಹುಡುಕಾಟ ಮಾಡುವಾಗ ದೇವರ ಸಹಾಯವೂ ಬೇಕಾಗುತ್ತದೆ..

ಒಳ್ಳೆಯದು, ಕೆಟ್ಟದ್ದು, ರಾಕ್ಷಸ, ದೈವ ಹೀಗೆ ಎಲ್ಲವನ್ನು ಒಂದು ಪಾತ್ರ ಹುಡುಕುತ್ತದೆ. ಅದು ಪತ್ತೆದಾರಿಕೆಯೂ ಆಗಿರಬಹುದು.. ಆ ರೀತಿ ಹುಡುಕಾಟದಲ್ಲಿ ತೊಡಗುವ ವ್ಯಕ್ತಿಯೇ ಮಿಸ್ಟರ್ ಡಿ.

ಕೊರೊನಾ ಮಹಾಮಾರಿ ಅಬ್ಬರ ಕಡಿಮೆಯಾಗುತ್ತಿರುವಂತೆಯೇ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಗರಿಗೆದರತೊಡಗಿವೆ. ಅದೇ ರೀತಿ ಅನುಭವಿ ತಂತ್ರಜ್ಞರ ಜೊತೆ ಸೆಟ್ಟೇರಿರುವ ಚಿತ್ರ ಮಿಸ್ಟರ್ ಡಿ.

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ ನವರಾತ್ರಿ ಹಬ್ಬ ನಡೆಯುವ ಸರಿಯಾಗಿ ಐದನೇ ದಿನಕ್ಕೆ ಚಿತ್ರವು ಮುಹೂರ್ತ ಆಚರಿಸಿಕೊಂಡ ಸಂದರ್ಭದಲ್ಲಿ ನಿರ್ಮಾಪಕ ಎಸ್.ಎ.ಗೋವಿಂದ ರಾಜ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಇತರ ಗಣ್ಯರು ಹಾಜರಿದ್ದು ಶುಭ ಕೋರಿದರು.

ಅನೇಕ ದೊಡ್ಡ ದೊಡ್ಡ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಬಿ.ಎ.ಮಧು ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರಸಿದ್ಧ ಛಾಯಾಗ್ರಾಹಕ ಅಣಜಿ ನಾಗರಾಜ್ ಚಿತ್ರತಂಡದ ಜೊತೆಗಿರುವುದು ವಿಶೇಷ.

ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ಶುರುವಾಗಬೇಕಿದೆ. ದಿನ ಚೆನ್ನಾಗಿದೆ ಎಂಬ ಕಾರಣದಿಂದಪೂಜೆಯನ್ನು ನೆರೆವೇರಿಸಲಾಯಿತು ಎಂದರು ನಿರ್ದೇಶಕ ಜೊತೆಗೆ ನಿರ್ಮಾಪಕರಾಗಿರುವ ಸಿ.ಸಿ.ರಮೇಶ್.

ಡಿಟೆಕ್ಟ್, ಡ್ಯಾಡಿ, ಡಾಟರ್ ಇನ್ನು ಅನೇಕ ರೀತಿಯ ಅರ್ಥವನ್ನು ಶೀರ್ಷಿಕೆ ಹೇಳುತ್ತದೆ. ಕತೆಯಲ್ಲಿ ಡಿ ಎನ್ನುವುದು ಒಂದು ಪಾತ್ರವಾಗಿರುತ್ತದೆ. ಒಬ್ಬ ಮನುಷ್ಯನಲ್ಲಿ ಎಲ್ಲಾ ಗುಣಗಳು ಇರುತ್ತದೆ. ಯಾರೂ ಪರಿಪೂರ್ಣರಲ್ಲ. ಕೆಟ್ಟತನ, ಒಳ್ಳೆತನ, ದೈವತ್ವ, ರಾಕ್ಷಸತ್ವ. ಪ್ರತಿಯೊಂದು ಮನುಷ್ಯನ ಗುಣಗಳಲ್ಲಿ ಅಡಗಿರುತ್ತದೆ. ಅದನ್ನು ಡಿ ಪಾತ್ರದ ಮೂಲಕ ಅನಾವರಣ ಮಾಡುವ ಪ್ರಯತ್ನವಾಗಿದೆ ಎಂದರು ರಮೇಶ್.

ಸಮಾಜ ಘಾತಕರನ್ನು ಈ ಸಮಾಜದಲ್ಲಿ ಇಟ್ಟುಕೊಂಡು ಪತ್ತೆದಾರಿಯೊಬ್ಬ ಹೇಗೆ ಎದುರಿಸುತ್ತಾನೆ. ದೇವರನ್ನು ಹಿಂದಿಟ್ಟುಕೊಂಡು ಸತ್ಯವನ್ನು ಹೇಗೆ ಹುಡುಕುತ್ತಾನೆ ಎಂಬುದೇ ಸಿನಿಮಾದ ಒನ್ ಲೈನ್ ಕಥೆ.

ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿ ಪ್ರಸಿದ್ಧಿ ಪಡೆದಿರುವ ಸಿ.ಸಿ.ರಮೇಶ್ ಇಪ್ಪತ್ತು ವರ್ಷದ ಕೆಳಗೆ ನಿರ್ದೇಶನ, ನಟನೆಯ ಕೋರ್ಸ್‌ನ್ನು ಮುಗಿಸಿದ್ದಾರೆ. ಕೆಲಸದ ನಿಮಿತ್ತ ಚಿತ್ರರಂಗಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಏನಾದರೂ ಬಣ್ಣದ ಲೋಕದಲ್ಲಿ ಸಾಧಿಸಬೇಕೆಂಬ ಹಂಬಲದಿಂದ ಸಿನಿಮಾಗೆ ಕತೆ ಬರೆದು ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಮಾಡುತ್ತಿರುವೆ ಎಂದರು.

ಮೂನ್ ಲೈಟ್ ಪ್ರೊಡಕ್ಷನ್ ಹಾಗೂ ವೀರ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಳ್ಳುತ್ತಿರುವ ಚಿತ್ರಕ್ಕೆ ಪ್ರಕಾಶ್ ಚಿಕ್ಕಪಾಳ್ಯ ಕಲಾ ನಿರ್ದೇಶನ ಮಾಡುತ್ತಿದ್ದಾರೆ ಎಂಬ ವಿವರಗಳು ಬಂದವು..

Social Share :

ಸ್ವಯಂ ಕಲ್ಪನೆಯಿಂದ ಆಗುವ ಯಡವಟ್ಟು ಕಪೋ ಕಲ್ಪಿತಂ

Social Share :

ಕೆಲವೊಮ್ಮೆ ಸ್ವಯಂ ಕಲ್ಪನೆಗಳು ವಿಪರೀತದ ಹಾದಿ ತುಳಿದಾಗ ಯಡವಟ್ಟುಗಳಾಗುತ್ತವೆ.. ಅದರಿಂದ ಒಂದು ಸಮೂಹ ದಾರಿ ತಪ್ಪಿದಾಗ ಆಗುವ ಘಟನೆಗಳೇ ಚಿತ್ರವಾಗಿದೆ. ಅದು ‘ಕಪೋ ಕಲ್ಪಿತಂ’ ಮಂಡ್ಯ ಮೂಲದ ಸುಮಿತ್ರಾ ರಮೇಶ್ ಗೌಡ ಇದರ ಮುಖ್ಯ ಪಾತ್ರಧಾರಿ ಮತ್ತು ನಿರ್ದೇಶಕಿ. ಹೊಸಬರಿಂದ ಕೂಡಿದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಹೊಗಳಿಕೆ ಸಿಕ್ಕಿದೆ. ಅದೇ ನಮ್ಮ ಹೆಗ್ಗಳಿಕೆ ಎಂದು ಹೇಳಿಕೊಂಡರು ಸುಮಿತ್ರಾ ರಮೇಶ್ ಗೌಡ.

ನಾನು ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದರ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಮತ್ತಷ್ಟು ಮಸಾಲೆ ಸೇರಿಕೊಂಡಾಗ ಇರಿಸು ಮುರಿಸು ಆಗುವ ಘಟನೆಗಳು ನಡೆಯುತ್ತವೆ. ಅದು ಸಂಶಯಕ್ಕೆ ಕೂಡ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ಇಂಗಾಯ್ತು ಎಂಬಂತೆ ಬಿಂಬಿತವಾಗುತ್ತದೆ.

ಇಲ್ಲಿ ಹಾಗೆ ಹೀಗೆ ಎಂಬುದರ ಜೊತೆಗೆ ಹಾರರ್ ಎಂಬ ವಿಷಯವೂ ಸೇರಿಕೊಂಡಿದೆ. ಯುವಕರ ತಂಡವೊಂದು ನಿರ್ಜನ ಪ್ರದೇಶದ ಮನೆಯೊಂದಕ್ಕೆ ಹೋದಾಗ ಅಲ್ಲಿ ಭೂತದ ಕಲ್ಪನೆ ಹುಟ್ಟಿಕೊಳ್ಳುತ್ತದೆ‌. ಭಯದಿಂದ ವರ್ತಿಸುವ ತಂಡ ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತದೆ ಎಂಬುದು ಚಿತ್ರದ ಸಾರಾಂಶ ಎಂಬ ವಿವರ ಕೊಟ್ಟರು ನಿರ್ದೇಶಕಿ. ಈ ಹಿಂದೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದಲ್ಲದೆ ಸಹಾಯಕ ನಿರ್ದೇಶಕಿಯಾಗಿ ಅನುಭವ ಪಡೆದಿರುವ ಸುಮಿತ್ರಾ ರಮೇಶ್ ಗೌಡ ಮಂಡ್ಯಾ ಜಿಲ್ಲೆ, ಕೆ.ಆರ್.ಪೇಟೆ ಮೂಲದವರು. ಹಿತೈಷಿಗಳ ಸಲಹೆ ಮೇರೆಗೆ ನಿರ್ದೇಶನದ ಕ್ಯಾಪ್ ಹಾಕಲು ಮನಸ್ಸು ಮಾಡಿದರಂತೆ.. ಕಿರುತೆರೆ ನಟ ಮತ್ತು ಇಲ್ಲಿಯವರೆಗೂ ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕ ನಟ. ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಂದೀಪ್‌ಮಲಾನಿ, ನಿರೂಪಕರಾಗಿ ಗೌರೀಶ್‌ಅಕ್ಕಿ. ಉಳಿದಂತೆ ಶಿವರಾಜ್‌ಕರ್ಕೆರ, ರಾಜೇಶ್‌ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ನಟಿಸಿದ್ದಾರೆ. ರಚನೆ, ಚಿತ್ರಕತೆ, ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಪಾಲುದಾರಾಗಿರುವುದು ಮಂಗಳೂರಿನ ಗಣಿದೇವ್‌ ಕಾರ್ಕಳ.

ಛಾಯಾಗ್ರಹಣ-ಸಂಕಲನ ಬಾತುಕುಲಾಲ್ ಅವರದು. ದಕ್ಷಿಣ ಕನ್ನಡ, ಉಡುಪಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಆಶಯಕ್ಕೆ ರಮೇಶ್‌ ಚಿಕ್ಕೆಗೌಡ ನೆರವು ನೀಡಿದ್ದಾರೆ. ಸವ್ಯಾಚಿ ಕ್ರಿಯೇಶನ್ಸ್ ಹೆಸರಿನೊಂದಿಗೆ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಕವಿತಾ ಕನ್ನಿಕಾ ಪೂಜಾರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂಬ ಮಾಹಿತಿಗಳು ಬಂದವು.

Social Share :

ಮಂಡ್ಯದ ನಮ್ ಹುಡುಗ್ರುಗೆ ಹೆಚ್ಚಿದ ಮಾಧುರ್ಯದ ಸೊಬಗು

Social Share :

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಮುಖ್ಯ ಪಾತ್ರದಲ್ಲಿರುವ ‘ನಮ್ ಹುಡುಗ್ರು’ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡು ಹಾಡುವ ಮೂಲಕ ಚಿತ್ರಕ್ಕೆ ಹೊಸ ರೀತಿಯ ಶಕ್ತಿ ನೀಡಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಗೀತೆ ಆಗಲೇ ಚಿತ್ರರಸಿಕರ ಬಾಯಿಯ ಚಾಕೋಲೇಟ್ ಆಗುತ್ತಿದೆ. ಮೆಲೋಡಿ ಗೀತೆಗಳ ಪಟ್ಟಿಯಲ್ಲಿ ಒಂದು ಗಟ್ಟಿಯಾದ ಸ್ಥಾನ ಗುರುತಿಸಿಕೊಂಡಿರುವ ಅಭಿಮಾನ್ ರಾಯ್ ನಮ್ ಹುಡುಗ್ರು ಚಿತ್ರಕ್ಕೆ ಐದು ವಿಭಿನ್ನ ಬಗೆಯ ಹಾಡುಗಳನ್ನು ನೀಡಿದ್ದಾರೆ.

ನಿಜಕ್ಕೂ ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಚಿತ್ರದ ಶೂಟಿಂಗ್ ನಲ್ಲೇ ಅದರ ಅದ್ದೂರಿಯ ವಿವರಗಳು ದಕ್ಕಿವೆ. ಹಾಡುಗಳಂತೂ ಈಗಾಗಲೇ ಎಲ್ಲರ ಗಮನ ಸೆಳೆದಿವೆ. ಇದು ನನ್ನ ಅದೃಷ್ಟವೇ ಸರಿ ಎಂದು ನಗು ಮುಖದಿಂದಲೇ ವಿವರಿಸಿದರು ನಾಯಕ ನಟ ನಿರಂಜನ್.

ಎಸ್.ಮಹೇಂದರ್, ಆರ್.ಚಂದ್ರು ಅವರಂಥಹ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ಎಚ್.ಬಿ.ಸಿದ್ದು ನಿರ್ದೇಶನದ ಚಿತ್ರಕ್ಕೆ ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ ಇನ್ನಿತರ ಚಿತ್ರರಂಗದ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ.

ಹೊಸಬರಿಗೆ ಪ್ರೋತ್ಸಾಹ ಬೇಕು. ಕೆಲವು ವಿಷಯದಲ್ಲಿ ನಮ್ಮಂಥವರು ನೋವನ್ನು ಅನುಭವಿಸಬೇಕು. ಆದರೆ ಚಿತ್ರಕ್ಕೆ ಒಳ್ಳೆಯದಾಗುವುದಾದರೆ ಅವೆಲ್ಲವೂ ಮರೆತು ಹೋಗಬಹುದು ಎಂದು ಮಾರ್ಮಿಕವಾಗಿ ಮಾತನಾಡಿದರು ನಿರ್ದೇಶಕ ಸಿದ್ದು.

ಚಿತ್ರಕ್ಕೆ ಅಶ್ರುಫ್ ನಿರ್ಮಾಪಕರಾದರೂ ಎಲ್ಲವನ್ನು ಹೆಚ್ಚಾಗಿ ನಿಭಾಯಿಸಿದವರು ಕಾರ್ಯಕಾರಿ ನಿರ್ಮಾಪಕ ಮಂಜುನಾಥ್ ಬಾಬು, ಚಿತ್ರ ಇನ್ನೇನು ಚಿತ್ರೀಕರಣ ಮುಗಿಸುವ ಹಾದಿಯಲ್ಲಿ ಈ ಸಂದರ್ಭ ಎರಡು ಹಾಡುಗಳ ಜೊತೆ ಮಾಧ್ಯಮಗಳ ಮುಂದೆ ಬಂದಿತ್ತು.

ರಂಗಾಯಣ ಮತ್ತು ನಾಗ್ತಿಹಳ್ಳಿಯವರ ಟೆಂಟ್ ಸಿನಿಮಾ ಮೂಲಕ ಅಭಿನಯ ತರಬೇತಿ ಪಡೆದಿರುವ ರಾಧ್ಯ ಚಿತ್ರದ ನಾಯಕ ನಟಿ. ಮೈಸೂರು ಮೂಲದ ನನಗೆ ಈ ಚಿತ್ರ ವರವಾಗಿ ಬಂದಿದೆ. ಅಭಿನಯ ಸವಾಲು ಎಂಬುದನ್ನು ಸ್ವೀಕರಿಸಿರುವೆ. ಇದೇ ವೇಳೆ ಹಾಡಿನಲ್ಲಿ ಸುಂದರವಾಗಿ ತೋರಿಸಿರುವುದು ಅದೃಷ್ಟ ಎಂದುಕೊಳ್ಳುವೆ ಎಂದು ಹೇಳುತ್ತಾ ಹೋದರು.

ಅಪ್ಪು ಸರ್ ಕುಣಿದಾಡಿದ್ದು.
ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಸ್ವಲ್ಪ ಭಾವುಕವಾಗಿಯೇ ಮಾತನಾಡಿದರು. ಅಪ್ಪು ಸರ್ ಒಂದು ಹಾಡು ಹಾಡಿದ್ದು ನನ್ನ ಜೀವನದ ಪರಮಗುರಿ ಈಡೇರಿದಂತೆ ಆಯಿತು. ಅವರು ಹಾಡುವಾಗ ನಾನು ಯಾರೆಂಬುದು ಅವರಿಗೆ ತಿಳಿಯಲಿಲ್ಲ.. ಕೊನೆಗೆ ನನ್ನ ಅನೇಕ ಹಾಡುಗಳ ಬಗ್ಗೆ ತಿಳಿಸಿದಾಗ.. ಅವೆಲ್ಲವೂ ನನ್ನ ಫೆವರಿಟ್ ಎನ್ನುತ್ತಾ ಮೈಮರೆತು ಕುಣಿದೇ ತೋರಿದರು. ಆಗ ನಾನೂ ನಿಜಕ್ಕೂ ಭಾವುಕನಾದೆ. ಅವರ ಸರಳತನ ಕಂಡು ದಂಗಾದೆ. ಹೀಗೆ ವಿವರಿಸುತ್ತಾ.. ನಾನು 20 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದು ಹಿಟ್ ಹಾಡುಗಳನ್ನು ಕೊಟ್ಟರೂ ಇನ್ನೂ ಹೊಸಬನಂತೆಯೇ ಇರುವೆ ಎಂಬ ವಿಷಾದವನ್ನೂ ವ್ಯಕ್ತಪಡಿಸಿದರು.

Social Share :

ಅಪ್ಪಟ ದೇಶಿ ಪರಿಮಳ ಆರ್ಗಾನಿಕ್ ಜಾತಸ್ಯ ಆಗರ್ ಬತ್ತಿ

Social Share :

ಇದು ವಿಭಿನ್ನ, ವಿಶೇಷತೆಗಳಿಂದ ಕೂಡಿದ ಆಗರ್ ಬತ್ತಿ. ಸಹಜವಾಗಿ ಹೂವಿನ ಪರಿಮಳ ಹೊಂದಿರುವ ಆಗರ್ ಬತ್ತಿಯ ಹೆಸರು ‘ಜಾತಸ್ಯ’

ಆರ್ಗಾನಿಕ್ ರೀತಿಯಲ್ಲಿ ತಯಾರಾಗುವ ಊದಬತ್ತಿಗೆ ಹಸಿವಿನ ಸರಣಿಯನ್ನು ಮತ್ತು ಹೂವಿನ ಪರಿಮಳವನ್ನು ಸೇರಿಸಲಾಗಿದೆ.

ಇಂದಿನ ದಿನಗಳಲ್ಲಿ ದೇವರ ಪೂಜೆಗೆ ಬಳಸುವ ಆಗರ್ ಬತ್ತಿ ರಾಸಾಯನಿಕಗಳಿಂದ ಕೂಡಿರುತ್ತದೆ; ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸಾಕಷ್ಟು ಜನರಿಗೆ ಗೊತ್ತಿರುವ ವಿಷಯ.

ಈ ಹಿನ್ನೆಲೆಯಲ್ಲಿ ಜಾತಸ್ಯ ವಿಶೇಷವಾಗುತ್ತದೆ. ಏಳು ಪ್ಲೇ ವರ್ ನಲ್ಲಿರುವ ಈ ಆಗರ್ ಬತ್ತಿಯನ್ನು ಈಚೆಗೆ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಬಿಡುಗಡೆ ಮಾಡಿದರು.

ಚಿತ್ರರಂಗದ ಪ್ರಮುಖರಾದ ಭಾ.ಮ.ಹರೀಶ್, ಭಾ.ಮ.ಗಿರೀಶ್, ಐಎಎಸ್ ಅಧಿಕಾರಿ ಡಿ.ಎಸ್.ರಮೇಶ್, ಆಗರ್ ಬತ್ತಿ ತಯಾರಕ ಕಂಪನಿಯ ಮಂಜುನಾಥ್ ಗುಂಡಾಲ್, ಅದರ ಬೆಂಗಳೂರು ವಿತರಕ ಹನುಮೇಶ್ ಪಾಟೀಲ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೊಂದು ಆರ್ಗಾನಿಕ್ ಉತ್ಪನ್ನ, ಮುಖ್ಯವಾಗಿ ಆರೋಗ್ಯ ರಕ್ಷಣೆಯನ್ನು ಇದು ಮಾಡುತ್ತದೆ. ಏಳು ದಿನವೂ ಏಳು ಬಗೆಯಲ್ಲಿ ಇರುವಂತೆ ಬೇರೆ ಬೇರೆ ಪರಿಮಳದ ವಿಶೇಷತೆ ಇದರಲ್ಲಿದೆ ಎಂದರು ಮಂಜುನಾಥ್ ಗುಂಡಾಲ್.

ಏಳು ಪ್ಯಾಕ್ ಗಳು ಏಳು ಸ್ವರಗಳಂತೆ.. ಎಂದವರು ಉತ್ಪನ್ನ ಬಿಡುಗಡೆ ಮಾಡಿದ ಗಾಯಕ ರಾಜೇಶ್ ಕೃಷ್ಣನ್. ಪೂಜೆಯ ಪ್ರಕ್ರಿಯಲ್ಲಿ ಗಂಧ ಸಾತ್ ಕೊಡುತ್ತೆ.. ಇಲ್ಲಿನ ಪರಿಮಳವೂ ವಿಶೇಷವೇ ಎಂದರು.

ದೇಶಿ ಪರಿಮಳ ಪೂಜೆಯ ಮಹತ್ವ ಹೆಚ್ಚಿಸುತ್ತದೆ. ಭಕ್ತಿಯ ಪರಾಕಾಷ್ಠೆಗೂ ಇದು ಸಹಕಾರಿ ಎಂಬ ಅಭಿಪ್ರಾಯ ಗಣ್ಯರಿಂದ ವ್ಯಕ್ತವಾದವು.

Social Share :

ಪ್ರಚಾರದಲ್ಲೂ ಟಾಪು ಸಲಗ ತುದಿಗಾಲ ಮೇಲೆ ಅಭಿಮಾನಿಗಳು

Social Share :

ಕನ್ನಡದ ಸಾಹಸಿ ಕಲಾವಿದ, ಅಭಿಮಾನಿಗಳ ಸೂಪರ್ ಸ್ಟಾರ್ ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನ ಮಾಡಿದರುವ ಸಲಗ ಚಿತ್ರ ಪ್ರಚಾರದಲ್ಲಿಯೂ ಮುಂದಿದೆ..

ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ ಹಾಡುಗಳು ಯುವಜನರ ಬಾಯಿಯ ಚಾಕೋಲೇಟ್ ಆಗಿವೆ. ಅದರಲ್ಲಿಯೂ ‘ಬೇಟೆಗೆಲ್ಲ ಟಾಪು ಸಲಗ’ ಟಾಪ್ ಎನಿಸುವಂತಹ ಪ್ರಚಾರವನ್ನೇ ಕೊಟ್ಟಿದೆ.

ಅಲ್ಲದೆ ಚಿತ್ರದ ಬಿಡುಗಡೆಪೂರ್ವ ಅದ್ದೂರಿ ಸಮಾರಂಭ ವರ್ಣರಂಜಿತ ಮಾತ್ರವಲ್ಲದೆ ಕನ್ನಡದ ಮುಂಚೂಣಿಯ ಸ್ಟಾರ್ ಗಳ ಮನ ಗೆದ್ದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಧನಜಯ್ಯ ಹಾಗೂ ರಾಜಕೀಯ ಗಣ್ಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಾದವರು ಚಿತ್ರವನ್ನು ಹಾಡಿ ಹೊಗಳಿದ್ದಾರೆ.

ಇದಲ್ಲದೆ ಶಿವಣ್ಣ ಮತ್ತು ಪುನೀತ್ ಸಮಾರಂಭದಲ್ಲಿ ಕಾಣಿಸಿಕೊಂಡ ಬಗೆಯೇ ಅದ್ಭುತ.. ಅವರಿಬ್ಬರ ಒಡನಾಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿಯ ಆವೇಗ ಹೆಚ್ಚುವಂತೆ ಮಾಡಿತು. ಅದೇ ವೇದಿಕೆಯಲ್ಲಿ ತಾವು ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳುವುದಾಗಿ ಪುನೀತ್ ರಾಜ್ ಕುಮಾರ್ ಪ್ರಕಟಿಸಿದರು.

ದುನಿಯಾ ವಿಜಯ್ ಅಪ್ರತಿಮ ಕಲಾವಿದ ಮತ್ತು ಅಪರೂಪದ ಸಾಹಸ ಕಲಾವಿದ. ಅವರ ನಿರ್ದೇಶನವೂ ಅಪ್ರತಿಮವಾಗಿರುತ್ತದೆ ಎಂದು ಶಿವಣ್ಷ ಹೊಗಳಿದ್ದು ಚಿತ್ರದ ಪಾಸಿಟಿವ್ ಅಲೆಗಳು ಹೆಚ್ಚಾಗು ಕಾರಣವಾಗಿತ್ತು.

ಅದೊಂದು ಮನಮೋಹಕ ಸಮಾರಂಭ ಕಲಾವಿದರು ಒಬ್ಬರಿಗೊಬ್ಬರು ನಾವಿದ್ದೇವೆ ಎಂದು ಹೇಳಿಕೊಂಡ ಸಮಾರಂಭವಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಚಿತ್ರದ ಯಶಸ್ಸನ್ನು ಕೋರಿದರು.

ಇದೇ ವಾರ ಬಿಡುಗಡೆ ಕಾಣುತ್ತಿರುವ ‘ಸಲಗ’ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಅಪಾರ ಮೆಚ್ಚುಗೆ ಸಿಕ್ಕಿದೆ ಮಾತ್ರವಲ್ಲ; ಚಿತ್ರವು ಪ್ರಚಾರದಲ್ಲಿ ದಿಟ್ಟಹೆಜ್ಜೆ ಇಟ್ಟಿದೆ. ‘ಟಾಪು ಸಲಗ’ದ ಆಶಯ ಅಭಿಮಾನಿಗಳನ್ನು ತಲುಪಿದೆ ಎನ್ನಬಹುದು. ಹಾಗಾಗಿ ಇದೇ ವಾರ ಚಿತ್ರ ಬಿಡುಗಡೆಯಾಗುವುದನ್ನು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ..

Social Share :

ಸಲಗ ಟೈಟಲ್ ಹಾಡಿಗೆ ಯುವಜನತೆ ಫಿದಾ

Social Share :

ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರವು ಇದೇ ಅಕ್ಟೋಬರ್ 14ರಂದು ಬಿಡುಗಡೆ ಕಾಣುವುದು ನಿಶ್ಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಅತೀವ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿ ಪಡೆ ಸದ್ಯ ಬಿಡುಗಡೆ ಕಂಡಿರುವ ಟೈಟಲ್ ಹಾಡಿನೊಂದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿದೆ.

ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ದುನಿಯಾ ವಿಜಯ್ ಅವರ ಕನಸಿನ ಕೂಸು ಎಂದೇ ಹೇಳಲಾಗಿರುವ ಸಲಗ ಬಿಡುಗಡೆಯನ್ನು ಅಭಿಮಾನಿಗಳು ಅತೀವ ಕುತೂಹಲದಿಂದ ಕಾಯುತ್ತಿರುವುದು ಸುಳ್ಳಲ್ಲ.. ಹಾಡುಗಳು ಮತ್ತು ಸಾಹಸ ದೃಶ್ಯಗಳ ಕಲಾತ್ಮಕ ಅನಾವರಣ ಅದಕ್ಕೆ ಕಾರಣ.

ಪ್ರಸ್ತುತ ಬಿಡುಗಡೆ ಕಂಡಿರುವ ‘ಬೇಟೆಗೆಲ್ಲ ಟಾಪು ಸಲಗ..’ ಟೈಟಲ್ ಹಾಡಿಗೆ ಅರ್ಜುನ್, ಏಕಾಂತ್ ಹಾಗೂ ಹೃದಯ್ ಹೆಜ್ಜೆ ಹಾಕಿದ್ದಾರೆ. ದುನಿಯಾ ವಿಜಯ್ ನಿರೂಪಣೆಯಲ್ಲಿ ಖಡಕ್ ಮಾತುಗಳನ್ನು ಹೇಳಿದ್ದಾರೆ.

Social Share :

ಕಾಗೆಮೊಟ್ಟೆ ಮೊದಲ ಗೆಲುವು

Social Share :

ಕೊವಿಡ್ ಮಹಾಮಾರಿ ನಂತರ ಸರ್ಕಾರವು ಪೂರ್ಣ ಚಿತ್ರಮಂದಿರ ತುಂಬಲು ಅನುಮತಿ ನೀಡಿದ ಬಳಿಕ ಬಿಡುಗಡೆಯಾದ ಮೊದಲ ಚಿತ್ರ ಕಾಗೆಮೊಟ್ಟೆ..

ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಟನೆಯ ಚಿತ್ರ
ಕಳೆದ ಶುಕ್ರವಾರ ಬಿಡುಗಡೆ ಕಂಡು ಗೆಲುವಿನ ನಗೆ ಬೀರಿದೆ..

ಗುರುರಾಜ್ ಜಗ್ಗೇಶ್, ಮಾದೇಶ್ ಹಾಗೂ ಹೇಮಂತ್ ಅಭಿನಯದ ಕಾಗೆಮೊಟ್ಟೆ ಚಿತ್ರಕ್ಕೆ ಚಂದ್ರಹಾಸ್ ನಿರ್ದೇಶಕ. ಚಿತ್ರವು ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಪ್ರೇಕ್ಷಕರ ಮನಗೆದ್ದು ಮುನ್ನಡೆಯುತ್ತಿದೆ ಎಂಬುದನ್ನು ಖುಷಿಯಿಂದ ಹೇಳಿಕೊಂಡಿತು ಚಿತ್ರತಂಡ.

ನಾವು ಭಯದಿಂದಲೇ ಬಿಡುಗಡೆ ಮಾಡಿದೆವು. ಆದರೆ ಪ್ರೇಕ್ಷಕರಿಂದ ಒಳ್ಳೇ ಪ್ರತಿಕ್ರಿಯೆ ಬಂದಿದೆ. ಹೊಸಬರ ತಂಡಕ್ಕೆ ಈ ಮಟ್ಟದ ಸಹಕಾರ ಸಿಕ್ಕಿರುವುದು ಖುಷಿಯಾಗಿದೆ. ಚಿತ್ರವು 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಮಂದಿನ ವಾರದಿಂದ ಇನ್ನು 20 ಚಿತ್ರಮಂದಿರಗಳು ಹೆಚ್ಚಾಗುತ್ತಿವೆ, ಉತ್ತರ ಕರ್ನಾಟಕ, ಬಿಸಿ ಸೆಂಟರ್‌ಗಳಲ್ಲಿ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ನಮ್ಮ ಚಿತ್ರದಲ್ಲಿ ನಟಿಸಿದ್ದ ಹಿರಿಯನಟ ಸತ್ಯಜಿತ್ ಅವರು ಈಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ ಎಂಬುದು ನೋವಿನ ಸಂಗತಿ. ಹಾಗಾಗಿ ತ್ರಿವೇಣಿ ಚಿತ್ರಮಂದಿರದ ಮೊದಲ ದಿನದ ಬೆಳಗಿನ ಆಟದ ಸಂಗ್ರಹದ ಹಣ 25 ಸಾವಿರ ರೂ. ಹಣವನ್ನು ಅವರ ಚಿಕಿತ್ಸೆಗಾಗಿ ನೀಡುತ್ತಿದ್ದೇವೆ ಎಂದು ಹೇಳಿ ಮಾನವೀಯತೆ ಮೆರೆಯಿತು ಚಿತ್ರತಂಡ.

ಗುರುರಾಜ್ ಜೋಡಿಯಾಗಿ ತನುಜಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿರುವ ರಿಯಾಲಿಟಿ ನೋಡಿದ ಎಲ್ಲರಿಗೂ ಇಷ್ಟವಾಗಿದೆ ಎಂದರು ಗುರುರಾಜ್ ಜಗ್ಗೇಶ್. ಕೃಷ್ಣ ಎಲ್ಲಿ ಬದುಕು ಆರಂಭಿಸಿದ, ಎಲ್ಲಿ ಫಿನಿಶ್ ಆದ ಎಂಬುದುನ್ನು ನೈಜವಾಗಿ ಮೂಡಿಸಿದ್ದಾರೆ. ನನಗೆ ಆ್ಯಕ್ಷನ್ ಎಷ್ಟು ಸುಲಭವೋ ಹಾಗೆ ರೊಮ್ಯಾನ್ಸ್ ಅಷ್ಟೇ ಕಷ್ಟವಾಗಿತ್ತು ಎಂದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಚಿತ್ರದ ಸಾಹಸ ನಿರ್ದೇಶಕ ಮಾಸ್ ಮಾದ, ನಟ ಮಾದೇಶ್, ಛಾಯಾಗ್ರಾಹಕ ಪಿ.ಎಲ್. ರವಿ, ವಿತರಕ ಆಟೋರಾಜು ಚಿತ್ರದ ಯಶಸ್ಸಿನ ಸಂತಸ ಹಂಚಿಕೊಂಡರು.

Social Share :

ನಾಡಗೀತೆ ಹೊಸ ಅವತರಣಿಕೆಗೆ ಹಂಸ ಪ್ರಯೋಗ

Social Share :

ನಾಡಿನ ಹೆಮ್ಮೆಯ ಧ್ಯೋತಕವಾಗಿ ನಾಡಗೀತೆ ಹಾಡಿಸುವುದು ಸಂಪ್ರದಾಯ. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಕನ್ನಡಿಗರ ಮೈಮನಗಳಲ್ಲಿ ರೋಮಾಂಚನ ತುಂಬುವ ಭಾವನಾತ್ಮಕ ವಿಷಯವೂ ಹೌದು..

ಆದರೆ ನಾಡಗೀತೆಯನ್ನು ಸಭೆ ಸಮಾರಂಭಗಳಲ್ಲಿ ಹಾಡುವಾಗ ಅದರ ಅವಧಿ ಹೆಚ್ಚಾಯಿತು ಎಂಬ ಮಾತುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಸುಮಾರು ಆರೂವರೆಯಿಂದ ಏಳು ನಿಮಿಷವಿದ್ದ ನಾಡಗೀತೆ ಸಂಯೋಜನೆಯನ್ನು ಎರಡು ನಿಮಿಷ ಮೂವತ್ತು ಸೆಕೆಂಡುಗಳಿಗೆ ಇಳಿಸಲಾಗಿತ್ತು. ಈಗ ಕಾರ್ಯಕ್ರಗಳಲ್ಲಿ ಅದೂ ದೀರ್ಘ ವಾಗಬಹುದು. ಅದಕ್ಕಿಂತ ಅವಧಿ ಕಡಿಮೆ ಮಾಡಬಹುದೇ ಎಂಬ ಪ್ರಶ್ನೆಗಳು ಅಲ್ಲಲ್ಲಿ ವ್ಯಕ್ತಗೊಂಡವು.

 

ಇದರ ಹಿನ್ನೆಲೆಯಲ್ಲಿ ಕನ್ನಡದ ಮೇರು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ನಾಡಗೀತೆ ಸಮಯಾವಕಾಶದ ವಿಷಯದಲ್ಲಿ ಮೂರು ರೀತಿಯ ಪ್ರಯೋಗವನ್ನು ಹಮ್ಮಿಕೊಂಡಿದ್ದಾರೆ.

ಅದರಂತೆ ಮೊದಲನೇ ಪ್ರಯೋಗವನ್ನು ಗಾಂಧಿಜಯಂತಿ ದಿನವಾದ ಅಕ್ಟೋಬರ್ ಎರಡರಂದು ಹೊರಬಿಡಲಾಗಿದೆ. ಐದನಿ ಎಂಟಟೈನ್ ಮೆಂಟ್ ಮೂಲಕ ಹೊರಬಂದಿರುವ ನಾಡಗೀತೆಯ ಪ್ರಾಯೋಗಿಕ ತುಣುಕು ಒಂದು ನಿಮಿಷ ನಲವತ್ತು ಸೆಕೆಂಡುಗಳಿವೆ.

ಗೀತೆಯ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಕೆಲವು ಬದಲಾವಣೆ ಮಾಡಲಾಗಿದೆ ಎಂಬುದನ್ನು ವಿಡಿಯೋದಲ್ಲೇ ಹೇಳಲಾಗಿದೆ. ಒಂದು ನಿಮಿಷ ನಲವತ್ತು ಸೆಕೆಂಡುಗಳ ಗೀತೆಗೆ ಮೃತ್ಯುಂಜಯ ದೊಡ್ಡವಾಡ ಅವರ ಧ್ವನಿ ಇದೆ.

Social Share :

ಹೊಸ ತಲೆಮಾರಿನ ಕ್ಯೂಟ್ ಲವ್ ಇದೇ ಎಂಟಕ್ಕೆ ನಿನ್ನ ಸನಿಹಕೆ

Social Share :

ರಾಜ್ಯದ ಚಿತ್ರ ಮಂದಿರಗಳು ನೂರರಷ್ಟು ಪ್ರೇಕ್ಷಕನ ಭರ್ತಿ ಮಾಡುವ ಭರದಲ್ಲಿ
ಬಾ ಪ್ರೇಕ್ಷಕನೆ.. ಬಾ.. ಸನಿಹಕೆ ಬಾ.. ಎಂದು ಕರೆಯುವುದಕ್ಕೆ ಸರಿಯಾಗಿ
ಪ್ರೇಕ್ಷಕನೆಡೆ ಲವಲವಿಕೆಯಿಂದ ಹಾರಿ ಬರುತ್ತಿರುವ ಚಿತ್ರ ‘ನಿನ್ನ ಸನಿಹಕೆ’
ಈ ಚಿತ್ರ ನೋಡಿದ ಪ್ರೇಕ್ಷಕ ನಿಜಕ್ಕೂ ಧನ್ಯ.. ಏಕೆಂದರೆ ಚಿತ್ರದ ಮುಖ್ಯನಾಯಕಿ ಧನ್ಯಾ..

ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟಿಸಿರುವ ಚಿತ್ರ ಬಿಡುಗಡೆಗೆ ಕಾಯ್ದು ವರ್ಷಗಳೇ ಆದವು. ಇಂದಿನ ಪೀಳಿಗೆಯ ಸುಂದರ ಪ್ರೇಮ ಕಥಾನಕ ಹೊಂದಿರುವ ಚಿತ್ರವು ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ.

ಇದೇ ಅಕ್ಟೋಬರ್ 8 ರಂದು ಬಿಡುಗಡೆ ಕಾಣುತ್ತಿರುವ ‘ನಿನ್ನ ಸನಿಹಕೆ’ ಚಿತ್ರವನ್ನು ಕನ್ನಡದ ಉದಯೋನ್ಮುಖ ಯುವನಟ ಸೂರಜ್ ಗೌಡ ನಟಿಸಿ ನಿರ್ದೇಶನ ಮಾಡಿರುವುದು ಇಲ್ಲಿ ವಿಶೇಷ.

ಚಿತ್ರದ ಬಿಡುಗಡೆಯ ಪೂರ್ವದಲ್ಲಿ ಮಾಧ್ಯಮಗಳ ಜೊತೆ ಚಿತ್ರತಂಡ ಮಾತಿಗಿಳಿದ ಕ್ಷಣದಲ್ಲಿ ನಮ್ಮ ಚಿತ್ರ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಹೆಚ್ಚು ಆತ್ಮವಿಶ್ವಾಸ ವ್ಯಕ್ತಪಡಿಸಿತು.

ಮುಖ್ಯವಾಗಿ ನಿರ್ಮಾಪಕರಾದ ಅಕ್ಷಯ್ ಹಾಗೂ ರಂಗನಾಥ್ ನಮ್ಮ ಪ್ರಯತ್ನ ಆತ್ಮವಿಶ್ವಾಸದಿಂದಲೇ ಆಗಿದೆ ಮುಂದೆಯೂ ನಮಗೆ ಯಶಸ್ಸು ಕಾದಿದೆ. ಆದರೆ ಕೊರೊನಾ ಸ್ವಲ್ಪ ನಮ್ಮನ್ನು ಕಾಯಿಸಿತು. ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕೆಂದು ಇಷ್ಟು ದಿನ ಕಾಯ್ದುಕೊಂಡಿದ್ದೆವು ಎಂದು ಹೇಳಿಕೊಂಡರು.

ನಮ್ಮ ಚಿತ್ರ ಬಿಡುಗಡೆಯಾದ ಒಂದು ವಾರಕ್ಕೆ ಇಬ್ಬರು ಸ್ಟಾರ್ ಚಿತ್ರಗಳು ಘೋಷಣೆ ಮಾಡಿಕೊಂಡಿರುವುದು ತಿಳಿದಿದೆ. ನಮ್ಮದು ಹೊಸಬರ ಚಿತ್ರ; ಇದರ ಗೆಲುವು ಸಹ ಬಹಳವೇ ಮುಖ್ಯ. ಹಾಗಾಗಿ ಒಳಿತು ಮತ್ತು ಕೆಡಕುಗಳ ಬಗ್ಗೆ ಅವರೇ ಚಿಂತಿಸಲಿ; ನಮಗೆ ಮುಂದೆ ತೊಡಕು ಎದುರಾಗದಂತೆ ಚಿತ್ರೋದ್ಯಮದ ಗಣ್ಯರು ಸಹಕರಿಸಲಿ ಎಂದು ನಿರ್ಮಾಪಕ ರಂಗನಾಥ್ ಕೋರಿಕೆ ಮುಂದಿಟ್ಟರು.

ಸ್ಟಾರ್ ಚಿತ್ರಗಳ ಬಿಡುಗಡೆ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆ. ಆದರೆ ಹೊಸಬರ ಚಿತ್ರದ ಕಡೆಗೂ ಗಮನ ಕೊಡುವುದು ಮುಖ್ಯ ಎಂದವರು ಸಂಗೀತ ನಿರ್ದೇಶಕ ರಘು ದೀಕ್ಷಿತ್.

ಚಿತ್ರದಲ್ಲಿ ಹಾಡುಗಳು ಹೈಲೈಟ್.. ರಘು ದೀಕ್ಷಿತ್ ಸಂಗೀತ ಯುವ ಪೀಳಿಗೆಯ ನಾಡಿಮಿಡಿತಕ್ಕೆ ಹೊಂದಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದವು.

ಐಶ್ವರ್ಯ, ಸಿದ್ಧಾರ್ಥ್ ಹಾಗೂ ಇನ್ನಿತರ ಹೆಸರಾಂತ ಗಾಯಕರು ಹಾಡಿದ್ದಾರೆ. ಇಲ್ಲಿನ ಎಂಟು ಹಾಡುಗಳಿಗೂ ವಾಸುಕಿ ವೈಭವ್ ಗೀತರಚನೆ ಮಾಡಿದ್ದಾರೆ ಎಂಬ ವಿವರಗಳನ್ನು ಕೊಟ್ಟರು ರಘು ದೀಕ್ಷಿತ್.

ನಮ್ಮೆಲ್ಲರ ಕನಸು ಈ ಚಿತ್ರ. ಹೊಸ ಬಗೆಯ ಆಲೋಚನೆಯಿಂದ ಕೂಡಿದೆ. ಹಾಗಾಗಿ ಬೇರೆ ರೀತಿ ಮೂಡಿ ಬಂದಿದೆ.. ಇದು ಈಗಿನ ಕಾಲದ ಪ್ರೀತಿಯನ್ನು ಅಭಿವ್ಯಕ್ತಿಸುತ್ತದೆ.
ಲೀವಿಂಗ್ ರಿಲೇಶನ್ಸ್ ಮೇಲೆ ಸಿನಿಮಾ ಮೂಡಿಬಂದಿದೆ ಎಂದು ಚಿತ್ರದ ಒಳಗಿನ ವಿವರಗಳನ್ನು ನೀಡಿದವರು ನಿರ್ದೇಶಕ ಮತ್ತು ಮುಖ್ಯ ಪಾತ್ರದಲ್ಲಿ ನಟಿಸಿರುವ ಸೂರಜ್ ಗೌಡ.

ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ನಿರ್ದೇಶಕ ಆಗಬೇಕೆಂಬ ಹಂಬಲ ನನ್ನದು; ಈ ಅವಕಾಶ ನನಗೆ ಮಹತ್ವದಾಗಿದೆ ಎಂದರು.

ಮುಖ್ಯವಾಗಿ ನನಗೆ ನಿರ್ಮಾಪಕರು ಸ್ನೇಹಿತರು. ಈ ಪ್ರಾಜೆಕ್ಟ್ ಒಂದು ಸ್ಟಾರ್ ಗರಿ ಸಿಗುವುದೆಂದು ನಾನು ಆಲೋಚಿಸಿರಲಿಲ್ಲ..ಧನ್ಯಾ ಅವರ ಸೇರ್ಪಡೆಯಿಂದ ಅದು ಸಾಧ್ಯವಾಯಿತು. ರಘು ದೀಕ್ಷಿತ್ ಅವರ ಬೆಂಬಲ ಕೂಡ ಸಿಕ್ಕಿತು; ಹಾಡುಗಳು ಬ್ಯೂಟಿಫುಲ್ ಆಗಿವೆ ಎಂದರು ಸೂರಜ್.

ನಾನು ಅಮೃತಾ ಎನ್ನುವ ಪಾತ್ರ ಡೆಂಟಿಸ್ಟ್ ಪಾತ್ರವನ್ನು ನಿರ್ವಹಿಸಿರುವೆ ಎಂದು ಮಾತಿಗಾರಂಭಿಸಿದರು ಧನ್ಯಾ ರಾಮ್ ಕುಮಾರ್. ಪಾತ್ರವನ್ನು ಮಾಡುತ್ತಾ ಹೋದಂತೆ ಅದು
ನನ್ನ ಪಾತ್ರನೇ ಅನಿಸಿತು ಎಂದು ಹೇಳುತ್ತಾ ಹೋದರು ಧನ್ಯ ರಾಮ್ ಕುಮಾರ್.

ಗಾಯಕರಾದ ಸಿದ್ಧಾರ್ಥ್, ಶೃತಿ ವಿ.ಎಸ್ ಹಾಗೂ ಐಶ್ವರ್ಯ ಕೂಡ ಮಾತನಾಡಿದರು. ಅಕ್ಟೋಬರ್‌ 8 ರಂದು ಪ್ರೇಕ್ಷಕ ಚಿತ್ರದ ಬಗ್ಗೆ ಕೊಂಚ ಜಂಭದಿಂದಲೇ ಮಾತನಾಡಲಿ ಎಂಬುದು ಚಿತ್ರ ತಂಡದ ಆಶಯವಾಗಿತ್ತು.

Social Share :

ಈ ವಾರ ಕಾಗೆ ಮೊಟ್ಟೆ ಬಿಡುಗಡೆ ಗುರು ಜಗ್ಗೇಶ್ ಹೊಸ ಸಂಕಲ್ಪ

Social Share :

‘ಚಿತ್ರವನ್ನು ಇವತ್ತು ನೋಡಿದರೂ ಪ್ರೇಕ್ಷಕನಿಗೆ ಅದು ಫ್ರೆಸ್ ಆಗಿ ಕಾಣುತ್ತದೆ. ಮೆಚ್ಚುಗೆ ಖಂಡಿತಾ ಸಿಗುತ್ತದೆ..’

ಹೀಗೆ ಅತಿಯಾದ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿ ಚಿತ್ರದ ಆಶಯಗಳನ್ನು ಕೊಂಡಾಡಿದವರು ನವರಸ ನಾಯಕ ಜಗ್ಗೇಶ್. ತಮ್ಮ ಪುತ್ರ ಗುರುರಾಜ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ಕಾಗೆ ಮೊಟ್ಟೆ’ ಚಿತ್ರದ ಪ್ರಚಾರ ಸಂದರ್ಭದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.

ನನ್ನ ಪ್ರಕಾರ ಇದು ಕಂಟೆಂಟ್ ಸಿನಿಮಾ. ಇದರ ನಿರ್ದೇಶಕ ಹಾಗೂ ಗುರು ಇಬ್ಬರದು ಯುವ ಪೀಳಿಗೆಯ ಮನಸ್ಸು; ಹಾಗಾಗಿ ಚಿತ್ರ ಹೊಸತನದಿಂದ ಕೂಡಿದೆ. ಒಂದಷ್ಟು ಹಿಂದಿನದು ಎಂದುಕೊಂಡರೂ ಹೊಸದಾಗಿ ಈ ಸಿನಿಮಾ ಕಾಡಿದೆ‌ ಎಂದರು ಜಗ್ಗೇಶ್.

ಈ ದಿನ ನಾನು ಪ್ರಚಾರಕ್ಕೆ ಬಂದಿರುವುದು ಆಕಸ್ಮಿಕ ಘಟನೆ. ಗುರು ಎಂದಿಗೂ ಸ್ವಂತ ಆಲೋಚನೆಯ ಮೇಲೆ ನಿಲ್ಲುವುದು. ಅವನೆಂದೂ ಅಪ್ಪನ ಸಹಾಯ ಕೇಳಿಲ್ಲ ಎಂದು ಹೇಳುತ್ತಾ ಹೋದರು ನವರಸ ನಾಯಕ ಜಗ್ಗೇಶ್.

ಏನೇ ಆಗಲಿ ಕಷ್ಟಪಟ್ಟು ಮಾಡಿರುವ ಈ ಚಿತ್ರ ಗೆಲ್ಲಬೇಕು ಎಂದು ಶುಭ ಹಾರೈಸಿದವರು ಪರಿಮಳ ಜಗ್ಗೇಶ್.

ಇದು ಹೊಸ ಬಗೆಯ ಸಿನಿಮಾ ಎಂದರು ಗೀತರಚನಕಾರ ಡಾ.ನಾಗೇಂದ್ರ ಪ್ರಸಾದ್. ಈ ಚಿತ್ರಕ್ಕೆ ನಾನು ಸಂಭಾಷಣೆ ಬರೆದಿರುವೆ ಮತ್ತು ಇದು ಒಂದು ಆಕ್ಷನ್ ಚಿತ್ರವಾಗಿದೆ. ಹಾಗಾಗಿ ಯಾವಾಗ ನೋಡಿದರೂ ಹೊಸತನ ಕಾಣುತ್ತದೆ. ಹಾಗೆಯೇ ಇದರ ಸಂಭಾಷಣೆಯ ಲಯ ಹೊಸದಾಗಿದೆ. ವಾಸ್ತವದ ನೆಲೆಯಲ್ಲಿರುವ ಈ ಸಿನಿಮಾಗೆ ಉಜ್ವಲ ಭವಿಷ್ಯವಿದೆ ಎಂದರು.

ಶ್ರೀವತ್ಸ ಸಂಗೀತ ನಿರ್ದೇಶಕ.
ಎರಡು ಹಾಡುಗಳಿವೆ. ಅದರಲ್ಲಿ ಒಂದು ಡುಯೆಟ್ ಸಾಂಗ್ ಎಂದರು.

ನಿರ್ದೇಶಕ ಚಂದ್ರ ಹಾಸ್ ಚಿತ್ರ ತಡವಾದರೂ ಫ್ರೆಸ್ ಭಾವನೆಗಳನ್ನು ತುಂಬಿಕೊಡುತ್ತದೆ ಎಂದರು. ಗುರು ಅವರು ತಾವು ಜಗ್ಗೇಶ್ ಸರ್ ಅವರ ಪುತ್ರ ಎಂಬುದನ್ನು ಮರೆತು ಕೆಲಸ ಮಾಡಿದ್ದಾರೆ. ಜಗ್ಗೇಶ್ ಸರ್ ಸಹ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ನಾಲ್ಕು ವರ್ಷಗಳ ಸಿನಿಮಾ ಹಳೆಯದಾಗಿಲ್ಲ.. ಎಂದರು ಗುರುರಾಜ್ ಜಗ್ಗೇಶ್. ಅಪ್ಪ ‌ಅಮ್ಮ ನನಗೇನು ಕೊರತೆ ಮಾಡಿಲ್ಲ; ಇನ್ನು ಮುಂದೆ ಹೆಚ್ಚು ಕ್ರಿಯಾಶೀಲನಾಗಿ ಕೆಲಸ ಮಾಡುವೆ ಎಂದರು.

ಚಿತ್ರವು ಸುಮಾರು 150 ಚಿತ್ತಮಂದಿರಗಳಲ್ಲಿ ಬಿಡುಗಡೆ ಮಾಡುವ ಆಶಯವಿದೆ.‌ ಚಿತ್ರ ಮಂದಿರಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದರು ವಿತರಕ ರಾಜು. ಛಾಯಾಗ್ರಾಹಕ ರವಿ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು.

Social Share :