ಎಲ್ಲಿದ್ದರೂ ಕಾಡುವ ಚಿತ್ರಗಳು ಅಪ್ಪು ಅಜರಾಮರಾ
ಮುಗ್ಧ ಮನಸ್ಸು ಸರಳವಾಗಿ ಬೆರೆತು ನೋಡಿದ ಬದುಕು.
ಎಲ್ಲಿ ನೋಡಿದರು ಅದೇ ಪ್ರಜ್ವಲಿಸುವ ನಗೆ.. ಈ ಅಪ್ಪು ಏಕೆ ಅಷ್ಟು ಸುಲಲಿತವಾಗಿ ಎಲ್ಲರ ಜೊತೆ ಬೆರೆತರೋ.. ಅವರ ಆಪ್ತ ನಡೆ ನುಡಿಯನ್ನು ನಾಡು ಕೊಂಡಾಡುತ್ತಿದೆ.. ಯಾರಿಂದಲೂ ಏನನ್ನೂ ಮರೆಯುವುದು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಎಲ್ಲರ ಹೃದಯಗಳಲ್ಲಿ ಪುನೀತ್ ರಾಜ್ಕುಮಾರ್ ಬೆರೆತು ಹೋಗಿದ್ದಾರೆ.
ಅವರ ಪುಣ್ಯತಿಥಿ ನಡೆದ ಸೋಮವಾರದ ದಿನ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣ ಅಭಿಮಾನಿ ದೇವರುಗಳಿಂದ ತುಂಬಿ ಹೋಗಿದೆ. ಕಳೆದ ಒಂದು ವಾರದಿಂದ ಪ್ರವಾಹದ ರೀತಿ ಅಭಿಮಾನಿಗಳ ದಂಡು ಪುನೀತ್ ರಾಜ್ ಸಮಾಧಿ ಸ್ಥಳಕ್ಕೆ ಆಗಮಿಸಿ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದೆ. ಆ ಪ್ರವಾಹ ಸೋಮವಾರ ಊಹೆಗೆ ನಿಲುಕದಷ್ಟಾಗಿತ್ತು.
ಇತ್ತ ಸದಾಶಿವನಗರದ ಮನೆಯಲ್ಲಿ ಪುಣ್ಯ ಸ್ಮರಣೆಯ ಪೂಜಾಕಾರ್ಯ ನೆರವೇರಿದ ಸಂದರ್ಭದಲ್ಲಿ ಗಣ್ಯ ಮಾನ್ಯರು ಆಗಮಿಸಿ ಪುನೀತ್ ರಾಜ್ಕುಮಾರ್ ಅವರ ಸಾಧನೆಗಳನ್ನು ನೆನೆದರು, ಕೊಂಡಾಡಿದರು. ಭಾವುಕರಾದರು, ಅತ್ತರು..
ಎಲ್ಲರೊಳಗೆ ಮೂಡಿದ ಪ್ರಶ್ನೆ ಒಂದೇ ಇಷ್ಟು ಬೇಗ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋಗುವರೆಂದು ಕನಸು ಮನಸಿನಲ್ಲೇ ಎಣಿಸಿರಲಿಲ್ಲ. ಅವರು ಬಿಟ್ಟು ಹೋಗಿದ್ದು ಚಿತ್ರರಂಗ ಮತ್ತು ನಾಡಿಗೆ ಅತಿ ದೊಡ್ಡ ನಷ್ಟ.
ಪುನೀತ್ ರಾಜ್ಕುಮಾರ್ ಅವರ ಸೇವಾಕಾರ್ಯಗಳ ವಿವರ ದೊರೆತ ಬಳಿಕ ಅವರ ಬಗೆಗಿನ ಗೌರವ ಅತಿ ಹೆಚ್ಚಾಗಿದೆ. ನಿಜವಾಗಿ ನಾವು ‘ದೇವತಾ ಮನುಷ್ಯ’ನನ್ನು ಕಳೆದುಕೊಂಡಿದ್ದೇವೆ ಎಂದು ಜನರು ರೋಧಿಸುತ್ತಿದ್ದಾರೆ.
ಅಭಿಮಾನಿ ದೇವರುಗಳ ರೋಧನೆ ನಿಂತೇ ಇಲ್ಲ; ಸಮಾಧಿ ಬಳಿಯೋ ಅಥವಾ ಮನೆ ಬಳಿ ಬಂದು ಕಣ್ಣೀರು ಹಾಕಿ ಹೋಗುತ್ತಿದ್ದಾರೆ. ಕನ್ನಡದ ವಾಹಿನಿಗಳಲ್ಲಿ ಅಪ್ಪು ನೆನಪಿನ ಕಾರ್ಯಕ್ರಮಗಳಲ್ಲಿ ಕಣ್ಣೀರ ಕೋಡಿಯೇ ಹರಿಯುತ್ತಿದೆ.
ಅಪ್ಪು ಸ್ಟಾರ್ ನಟ; ಆದರೆ ಅವರು ಸದಾ ಜನ ಸಾಮಾನ್ಯರ ಜೊತೆ ಬೆರೆಯುತ್ತಿದ್ದರು. ಅದಕ್ಕೆ ಕನ್ನಡದ ಕೋಟ್ಯಾಧಿಪತಿಯಂತಹ ಶೋ ವರವಾಗಿತ್ತು. ಜನ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಿದ್ದ ಅಪ್ಪು ಅವರ ಹೃದಯದಲ್ಲಿ ಮಾತ್ರವಲ್ಲ; ಆ ಕಾರ್ಯಕ್ರಮಗಳನ್ನು ನೋಡುವವರ ಹೃದಯದಲ್ಲಿ ಗಟ್ಟಿಯಾದ ಸ್ಥಾನ ಗಿಟ್ಟಿಸಿಬಿಟ್ಟಿದ್ದರು. ಹಾಗಾಗಿ ಅಪ್ಪು ಎಂದರೆ ಜನ ಸಾಮಾನ್ಯರ ನಟ. ಜನರು ಅವರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದರು. ಮಕ್ಕಳಲ್ಲಿ ಮಗುವಾಗಿ ಬೆರೆಯುತ್ತಿದ್ದ ಅಪ್ಪು ಅಂದರೆ ಮಕ್ಕಳಿಗೆ ಪ್ರಾಣ. ಸದ್ಯ ಅವರು ಇನ್ನು ವಾಪಸ್ ಬರಲಾರರು ಎಂಬುದರ ಅರಿವಿರದ ಮಕ್ಕಳು ಸಮಾಧಿಯ ಬಳಿ ‘ಬೊಂಬೆ ಹೇಳುತೈತೆ..’ ಎಂದು ಮುಗ್ಧವಾಗಿ ಹಾಡುವುದು ಎಂತಹ ಕಲ್ಲೆದೆಯವರ ಹೃದಯವನ್ನು ಕೆದಕುತ್ತಿದೆ.
ಬಾಲ ನಟನಾಗಿ ಹೃದಯ ಗೆದ್ದ ಅಪ್ಪು ಹೇಗೆ ಎಂಬುದು ಈಗ ವ್ಯಕ್ತವಾಗುತ್ತಿದೆ. ಅದು ಮುಗ್ಧವಾಗಿ ಪ್ರತಿಯೊಬ್ಬರನ್ನೂ ಕಾಡುತ್ತಿದೆ..
ಏನು ಮಾಡುವುದು.. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..
ಮತ್ತೆ ಹುಟ್ಟಿ ಬರಲಿ..
-ಸ್ನೇಹಪ್ರಿಯ ನಾಗರಾಜ್