Snehapriya.com

June 9, 2025

ಸಿನಿಮಾ-ಗಾಸಿಪ್

ಎಲ್ಲಿದ್ದರೂ ಕಾಡುವ ಚಿತ್ರಗಳು ಅಪ್ಪು ಅಜರಾಮರಾ

Social Share :

ಮುಗ್ಧ ಮನಸ್ಸು ಸರಳವಾಗಿ ಬೆರೆತು ನೋಡಿದ ಬದುಕು.

ಎಲ್ಲಿ ನೋಡಿದರು ಅದೇ ಪ್ರಜ್ವಲಿಸುವ ನಗೆ.. ಈ ಅಪ್ಪು ಏಕೆ ಅಷ್ಟು ಸುಲಲಿತವಾಗಿ ಎಲ್ಲರ ಜೊತೆ ಬೆರೆತರೋ.. ಅವರ ಆಪ್ತ ನಡೆ ನುಡಿಯನ್ನು ನಾಡು ಕೊಂಡಾಡುತ್ತಿದೆ.. ಯಾರಿಂದಲೂ ಏನನ್ನೂ ಮರೆಯುವುದು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಎಲ್ಲರ ಹೃದಯಗಳಲ್ಲಿ ಪುನೀತ್ ರಾಜ್‍ಕುಮಾರ್ ಬೆರೆತು ಹೋಗಿದ್ದಾರೆ.

ಅವರ ಪುಣ್ಯತಿಥಿ ನಡೆದ ಸೋಮವಾರದ ದಿನ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣ ಅಭಿಮಾನಿ ದೇವರುಗಳಿಂದ ತುಂಬಿ ಹೋಗಿದೆ. ಕಳೆದ ಒಂದು ವಾರದಿಂದ ಪ್ರವಾಹದ ರೀತಿ ಅಭಿಮಾನಿಗಳ ದಂಡು ಪುನೀತ್ ರಾಜ್ ಸಮಾಧಿ ಸ್ಥಳಕ್ಕೆ ಆಗಮಿಸಿ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದೆ. ಆ ಪ್ರವಾಹ ಸೋಮವಾರ ಊಹೆಗೆ ನಿಲುಕದಷ್ಟಾಗಿತ್ತು.

ಇತ್ತ ಸದಾಶಿವನಗರದ ಮನೆಯಲ್ಲಿ ಪುಣ್ಯ ಸ್ಮರಣೆಯ ಪೂಜಾಕಾರ್ಯ ನೆರವೇರಿದ ಸಂದರ್ಭದಲ್ಲಿ ಗಣ್ಯ ಮಾನ್ಯರು ಆಗಮಿಸಿ ಪುನೀತ್ ರಾಜ್‍ಕುಮಾರ್ ಅವರ ಸಾಧನೆಗಳನ್ನು ನೆನೆದರು, ಕೊಂಡಾಡಿದರು. ಭಾವುಕರಾದರು, ಅತ್ತರು..

ಎಲ್ಲರೊಳಗೆ ಮೂಡಿದ ಪ್ರಶ್ನೆ ಒಂದೇ ಇಷ್ಟು ಬೇಗ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋಗುವರೆಂದು ಕನಸು ಮನಸಿನಲ್ಲೇ ಎಣಿಸಿರಲಿಲ್ಲ. ಅವರು ಬಿಟ್ಟು ಹೋಗಿದ್ದು ಚಿತ್ರರಂಗ ಮತ್ತು ನಾಡಿಗೆ ಅತಿ ದೊಡ್ಡ ನಷ್ಟ.

ಪುನೀತ್ ರಾಜ್‍ಕುಮಾರ್ ಅವರ ಸೇವಾಕಾರ್ಯಗಳ ವಿವರ ದೊರೆತ ಬಳಿಕ ಅವರ ಬಗೆಗಿನ ಗೌರವ ಅತಿ ಹೆಚ್ಚಾಗಿದೆ. ನಿಜವಾಗಿ ನಾವು ‘ದೇವತಾ ಮನುಷ್ಯ’ನನ್ನು ಕಳೆದುಕೊಂಡಿದ್ದೇವೆ ಎಂದು ಜನರು ರೋಧಿಸುತ್ತಿದ್ದಾರೆ.

ಅಭಿಮಾನಿ ದೇವರುಗಳ ರೋಧನೆ ನಿಂತೇ ಇಲ್ಲ; ಸಮಾಧಿ ಬಳಿಯೋ ಅಥವಾ ಮನೆ ಬಳಿ ಬಂದು ಕಣ್ಣೀರು ಹಾಕಿ ಹೋಗುತ್ತಿದ್ದಾರೆ. ಕನ್ನಡದ ವಾಹಿನಿಗಳಲ್ಲಿ ಅಪ್ಪು ನೆನಪಿನ ಕಾರ್ಯಕ್ರಮಗಳಲ್ಲಿ ಕಣ್ಣೀರ ಕೋಡಿಯೇ ಹರಿಯುತ್ತಿದೆ.

ಅಪ್ಪು ಸ್ಟಾರ್ ನಟ; ಆದರೆ ಅವರು ಸದಾ ಜನ ಸಾಮಾನ್ಯರ ಜೊತೆ ಬೆರೆಯುತ್ತಿದ್ದರು. ಅದಕ್ಕೆ ಕನ್ನಡದ ಕೋಟ್ಯಾಧಿಪತಿಯಂತಹ ಶೋ ವರವಾಗಿತ್ತು. ಜನ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಿದ್ದ ಅಪ್ಪು ಅವರ ಹೃದಯದಲ್ಲಿ ಮಾತ್ರವಲ್ಲ; ಆ ಕಾರ್ಯಕ್ರಮಗಳನ್ನು ನೋಡುವವರ ಹೃದಯದಲ್ಲಿ ಗಟ್ಟಿಯಾದ ಸ್ಥಾನ ಗಿಟ್ಟಿಸಿಬಿಟ್ಟಿದ್ದರು. ಹಾಗಾಗಿ ಅಪ್ಪು ಎಂದರೆ ಜನ ಸಾಮಾನ್ಯರ ನಟ. ಜನರು ಅವರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದರು. ಮಕ್ಕಳಲ್ಲಿ ಮಗುವಾಗಿ ಬೆರೆಯುತ್ತಿದ್ದ ಅಪ್ಪು ಅಂದರೆ ಮಕ್ಕಳಿಗೆ ಪ್ರಾಣ. ಸದ್ಯ ಅವರು ಇನ್ನು ವಾಪಸ್ ಬರಲಾರರು ಎಂಬುದರ ಅರಿವಿರದ ಮಕ್ಕಳು ಸಮಾಧಿಯ ಬಳಿ ‘ಬೊಂಬೆ ಹೇಳುತೈತೆ..’ ಎಂದು ಮುಗ್ಧವಾಗಿ ಹಾಡುವುದು ಎಂತಹ ಕಲ್ಲೆದೆಯವರ ಹೃದಯವನ್ನು ಕೆದಕುತ್ತಿದೆ.

ಬಾಲ ನಟನಾಗಿ ಹೃದಯ ಗೆದ್ದ ಅಪ್ಪು ಹೇಗೆ ಎಂಬುದು ಈಗ ವ್ಯಕ್ತವಾಗುತ್ತಿದೆ. ಅದು ಮುಗ್ಧವಾಗಿ ಪ್ರತಿಯೊಬ್ಬರನ್ನೂ ಕಾಡುತ್ತಿದೆ..
ಏನು ಮಾಡುವುದು.. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..
ಮತ್ತೆ ಹುಟ್ಟಿ ಬರಲಿ..

-ಸ್ನೇಹಪ್ರಿಯ ನಾಗರಾಜ್

Social Share :

ಉಗ್ರಂ ರೆಡ್ಡಿ ಕನಸು ಮನೆಗೊಬ್ಬ ಮಂಜುನಾಥ

Social Share :

ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ಉಗ್ರಂ ರೆಡ್ಡಿ ಎಂದೇ ಖ್ಯಾತರಾಗಿರುವ ಆರ್.ನಾರಾಯಣ ಮೂರ್ತಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದು, ಅವರಿಗೆ ಸಹೋದರ ಆರ್.ಕೇಶವಮೂರ್ತಿ ಸಹಕಾರ ನೀಡಿದ್ದಾರೆ.

‘ಮನೆಗೊಬ್ಬ ಮಂಜುನಾಥ’ ಎಂಬ ಚಿತ್ರವನ್ನು ನಿರ್ಮಿಸಿರುವ ಉಗ್ರಂ ರೆಡ್ಡಿ, ಅದರ ಪ್ರಚಾರ ಸಮಯದಲ್ಲಿ ಅತ್ಯಂತ ಭಾವುಕರಾಗಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿದ್ದಾರೆ. ಅವರು ನನಗೆ ನೀಡಿದ ಸಹಕಾರ ಮರೆಯುವಂತೆಯೇ ಇಲ್ಲ ಎಂದು ಕಣ್ಣೀರು ಹಾಕಿದರು. ಸುಮಾರು ಹತ್ತು ವರ್ಷಗಳಲ್ಲಿ ಅವರ ಸಾಕಷ್ಟು ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೆ. ಯಾವಾಗಲೂ ಹತ್ತಿರ ಕರೆದು ‘ನಿಮ್ಮ ಮನೆಯವರು ನಿಮ್ಮನ್ನು ನೋಡಿದ್ರೆ ಹೆದರಿಕೊಳಲ್ವಾ’ ಎಂದು ತಮಾಷೆ ಮಾಡುತ್ತಿದ್ದರು ಎಂದು ಗದ್ಗದಿತರಾಗಿಯೇ ಮೆಲುಕು ಹಾಕಿದರು ಉಗ್ರಂ ರೆಡ್ಡಿ.

ಈ ಸಿನಿಮಾ ಸರಳವಾಗಿದೆ. ಯುವಕರ ಸೋಮಾರಿ ಗುಂಪು ಬೇಗನೆ ಹಣ ಮಾಡಬೇಕೆಂದು ಕನಸು ಕಾಣುತ್ತಾ ಅಡ್ಡ ದಾರಿಯಲ್ಲಿ ಪ್ರಯತ್ನ ಮಾಡುತ್ತದೆ. ಅವರು ಕೆಟ್ಟವರೂ ಅಲ್ಲ.. ಎಲ್ಲರನ್ನು ನಂಬಿಸಿಕೊಂಡು ಹೇಗೋ ಬದುಕುತ್ತಿರುತ್ತಾರೆ ಅಂಥವರ ಕಥೆ ಇದು. ನಾನು ನಿರ್ಮಾಣ ಮಾಡಿರಬಹುದು. ಆದರೆ ತಮ್ಮನ ಸಹಕಾರವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರ ಸಹೋದರ ಕೇಶವಮೂರ್ತಿ, ನಾವು ವರ್ಷಕ್ಕೆ ಒಂದು ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಹಾಡುಗಳ ಬಿಡುಗಡೆಯ ಆ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ಅತಿಥಿಯಾಗಿದ್ದರು. ಇದು ವಸ್ತುನಿಷ್ಠ ಘಟನೆಯ ಸುತ್ತ ನಡೆಯುವ ಕಥೆ ಎಂದರು ನಿರ್ದೇಶಕ ರವಿರಾಮ್. ಅಂದ ಹಾಗೆ ರವಿರಾಮ್ ಮಠ ಗುರುಪ್ರಸಾದ್ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಪಡೆದುಕೊಂಡಿದ್ದಾರೆ ಎಂಬ ವಿವರಗಳು ಬಂದವು. ಆ ಮೂಲಕ ಮನೆಗೊಬ್ಬ ಮಂಜುನಾಥ ಶೀರ್ಷಿಕೆ ಹೇಗೆ ಬಂದ ಇತರ ಎಂಬುದಕ್ಕೆ ಉತ್ತರ ಸಿಕ್ಕಿತು. ಛಾಯಾಗ್ರಾಹಕ ಬಿ.ಎಲ್.ಬಾಬು, ನಟ ಕೋಬ್ರಾ ನಾಗರಾಜ್ ಹಾಗೂ ಇತರರು ಹಾಜರಿದ್ದರು.

Social Share :

ಟಾಮ್ ಅಂಡ್ ಜೆರ್ರಿ ಹೊಸತನ ಹಾಡು ಕೈಬಿಟ್ಟ ಟ್ರೈಲರ್

Social Share :

‘ಹಾಯಾಗಿದೆ.. ಎದೆಯೊಳಗೆ..’ ಎಂಬ ಹಾಡಿನ ಮೂಲಕವೇ ಯುವಜನರ ಎದೆಯೊಳಗೆ ನಾಟಿರುವ ‘ಟಾಮ್ ಅಂಡ್ ಜೆರ್ರಿ’ ಚಿತ್ರವು ಬಿಡುಗಡೆ ಹತ್ತಿರವಾಗುತ್ತಿರುವಂತೆಯೇ ಹಾಡು ಮತ್ತು ಅದರ ಸಂಗೀತ ನಿರ್ದೇಶಕ ಇಬ್ಬರನ್ನೂ ಬಿಟ್ಟು ಮಾಧ್ಯಮಗಳ ಮುಂದೆ ಬಂದಿತ್ತು..

ಅದೂ ಟ್ರೈಲರ್ ನ ಜೊತೆಯಾಗಿ. ಆದರೆ ಟ್ರೈಲರ್ ನಲ್ಲಿಯೂ ಹಾಡಿನ ಸದ್ದೇ ಇಲ್ಲ.. ಏನಿದು ನಿಮ್ಮ ಟ್ರಂಪ್ ಕಾರ್ಡ್ ಬಿಟ್ಟು ಬಂದಿರುವಂತಿದೆ ಎಂಬುದಕ್ಕೆ ನಿರ್ದೇಶಕ ರಾಘವ್ ವಿನಯ್ ಕೊಟ್ಟ ಉತ್ತರವೇ ಬೇರೆಯಾಗಿತ್ತು. ಆ ಹಾಡೇ ಹಿಡೀ ಸಿನಿಮಾ ಎಂದುಕೊಂಡು ಬಿಡುತ್ತಾರೆ. ಹಾಡನ್ನು ಮೀರಿದ ಹೊಸತನ ಸಾಕಷ್ಟಿದೆ. ಹಾಗಾಗಿ ಟ್ರೈಲರ್ ನಲ್ಲಿ ತರಲಿಲ್ಲ ಎಂದರು.

ಹಾಯಾಗಿದೆ ಖ್ಯಾತಿಯ ಸಂಗೀತ ನಿರ್ದೇಶಕ ಮ್ಯಾಥ್ಯು ಮನು ಸಹ ಹಾಜರಿರಲಿಲ್ಲ. ಚಿತ್ರತಂಡ ಬೇರೇನೋ ಚಿಂತನೆಯಲ್ಲಿದೆ ಎಂಬಂತೆ ಉತ್ತರ ಕೊಡುತ್ತಾ ಹೋದರು ನಿರ್ದೇಶಕರು. ಅಂದ ಹಾಗೆ ಇದೇ 12ರಂದು ಚಿತ್ರವು ಪ್ರೇಕ್ಷಕರ ಮುಂದೆ ಬರಲಿದೆ.

ರಾಜ್ ಶೇರಿಗಾರ್ ಚಿತ್ರದ ನಿರ್ಮಾಪಕ. ಈ ಚಿತ್ರ ಯುವ ಜನರಿಗೊಂದು ಸಂದೇಶ ನೀಡುತ್ತದೆ. ಹಾಗಾಗಿ ಬಜೆಟ್ ಎಷ್ಟು ಮತ್ತು ಅದು ವಾಪಸ್ ಬರುವುದೇ ಎಂಬ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು.

ನಿರ್ಮಾಪಕರ ಸ್ನೇಹಿತರಾದ ವೆಂಕಟೇಶಗೌಡ ಅವರು ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿಕೊಟ್ಟರು. ಆ ಟ್ರೈಲರ್ ಗೆ ಸಂಗೀತ ಕೂಡ ವಿಠಲ್ ಎಂಬುವರಿಂದ ಮಾಡಿಸಲಾಗಿತ್ತು.

ಚಿತ್ರದಲ್ಲಿ ಎರಡು ಪಾತ್ರಗಳದೇ ಪಾರುಪತ್ಯ.‌ ಅವು ನಿಜ ಜೀವನವನ್ನು ಸಾಂಕೇತಿಸುತ್ತವೆ ಕೂಡ. ಹಾಗಾಗಿ ಆ ಪಾತ್ರಗಳ ವರ್ತನೆಯು ಪ್ರಧಾನ ಅಂಶವಾಗಿ ಮೂಡಿ ಬರುತ್ತದೆ ಎಂಬ ವಿವರ ಕೊಟ್ಟರು ನಿರ್ದೇಶಕರು.

ಚಿತ್ರದಲ್ಲಿ ಮೈತ್ರೇಯ ಸಂಪತ್ ವಿಶಿಷ್ಟವಾಗಿ ಕಾಣಿಸಿಕೊಂಡು ಮಾಯವಾಗುತ್ತಾರೆ. ಆದರೆ ಇಡೀ ಚಿತ್ರ ಅವರ ಮೇಲೆ ಕ್ಯಾರಿ ಆಗುತ್ತದೆ ಎಂದರು.

ಮುಖ್ಯ ಪಾತ್ರದಲ್ಲಿರುವ ನಿಶ್ಚಿತ್ ಹಾಗೂ ಚೈತ್ರಾ ಪಾತ್ರ ಮಾಡುವಾಗ ಎದುರಾದ ಸವಾಲುಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಸಂಕೇತ್ ಹಾಗೂ ಇತರರು ಹಾಜರಿದ್ದರು.

Social Share :

ಭೂಗತ ಲೋಕದ ಹೊಸಬರ ಕಥೆ ಹಿಟ್ಲರ್ ಬಿಡುಗಡೆಗೆ

Social Share :

ಚಿತ್ರ ಸಾಹಿತಿ ಅಥವಾ ಗೀತರಚನಕಾರರಾಗಿ ಹೆಸರಾಗಿರುವ ಕಿನ್ನಾಳ್ ರಾಜ್ ಈಗ ನಿರ್ದೇಶಕರಾಗಿದ್ದಾರೆ ಮಾತ್ರವಲ್ಲ; ಅವರು ನಿರ್ದೇಶನ ಮಾಡಿರುವ ಚಿತ್ರ ಇದೇ 12ರಂದು ಬಿಡುಗಡೆ ಕಾಣುತ್ತಿದೆ.

ಇದು ಭೂಗತ ಲೋಕದ ಕಥೆ. ಆದರೆ ಹೆಚ್ಚು ರಕ್ತಪಾತ ನಡೆಯುವುದಿಲ್ಲ, ಮುಖ್ಯವಾಗಿ ಸಮಾಜಕ್ಕೆ ಒಂದು ಗಟ್ಟಿಯಾದ ಸಂದೇಶ ಹೋಗುತ್ತದೆ ಎಂದು ಹೇಳಿಕೊಂಡರು ನಿರ್ದೇಶಕ ಕಿನ್ನಾಳ್ ರಾಜ್.

ಕೆ.ಜಿ.ಎಫ್.ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಹಾಡು ಬರೆದು ಹೆಸರಾಗಿರುವ ಕಿನ್ನಾಳ್ ರಾಜ್ ಈಚೆಗೆ ಬಿಡುಗಡೆ ಕಂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಅಣ್ಣಾತ್ತೆ’ ಚಿತ್ರದ ಕನ್ನಡ ಅವತರಣಿಕೆಗೆ ಆರು ಹಾಡುಗಳನ್ನು ಬರೆದಿರುವ ಹೆಗ್ಗಳಿಕೆ ಹೊಂದಿದ್ದಾರೆ.

ಅಂದ ಹಾಗೆ ಚಿತ್ರದ ಹೆಸರು ‘ಹಿಟ್ಲರ್’. ಡಿಕ್ಟೇಟರ್ ಆಫ್ ಡಾರ್ಕ್ ವಲ್ಡ್’ ಎಂಬ ಟ್ಯಾಗ್ ಲೈನ್ ಸಹ ಇದೆ. ನಾಯಕ ನಟ ಹೊಸ ಪರಿಚಯ; ಲೋಹಿತ್ ಎಂಬುದು ಅವರ ಹೆಸರು. ಲೋಹಿತ್ ಮುಖ್ಯ ಪಾತ್ರಧಾರಿ. ಜೊತೆಗೆ ಅವರ ಪತ್ನಿ ಮಮತಾ ಲೋಹಿತ್ ನಿರ್ಮಾಪಕಿ.

ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ನಟಿಯ ಹೆಸರು ಸಸ್ಯಾ. ಜನಪ್ರಿಯ ಹಾಸ್ಯನಟ ವಿಜಯ್ ಚೆಂಡೂರ್ ಹಾಗೂ ಕಿರುತೆರೆಯ ಜನಪ್ರಿಯ ನಟ ಗಣೇಶ್ ರಾವ್ ಚಿತ್ರದ ಇತರ ಭೂಮಿಕೆಯಲ್ಲಿ ಇದ್ದಾರೆ.

ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದ ನಿರ್ದೇಶಕ ಮಹೇಶ್ ಬಾಬು ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಿದರು. ಈ ಮುಂಚೆ ಕಿನ್ನಾಳ್ ರಾಜ್ ಅವರಿಂದ ಹಾಡು ಬರೆಸಿದ್ದೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು ಮಹೇಶ್ ಬಾಬು.

ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಹಾಡುಗಳು ಉತ್ತಮ ರೀತಿಯಲ್ಲಿ ಮೂಡಿ ಬಂದಿವೆ ಎಂಬ ವಿವರಗಳು ಬಂದವು. ಚಿತ್ರವನ್ನು ಆಟೋರಾಜ ಚಿತ್ರಮಂದಿರಗಳಿಗೆ ಬಿಡುಗಡೆ ಮಾಡುತ್ತಿದ್ದು, ಪೈಪೋಟಿಯ ನಡುವೆಯೂ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರ ಕೊಟ್ಟರು.

ಭೂಗತ ಲೋಕದ ಕಥೆ ಎನಿಸಿದರು ಅದರಲ್ಲಿ ಒಂದು ತಣ್ಣನೆಯ ಪ್ರೀತಿ ಕಾಣುತ್ತದೆ ಎಂಬುದಕ್ಕೆ ಚಿತ್ರನೋಡಿ ಎಂದರು ಮುಖ್ಯ ಪಾತ್ರದಲ್ಲಿರುವ ಲೋಹಿತ್. ನನ್ನದು ಗಾರ್ಮೆಂಟ್ ಹುಡುಗಿಯ ಪಾತ್ರ ಎಂಬುದು ನಟಿ ಸಸ್ಯಾ ವಿವರಣೆಯಾಗಿತ್ತು.

ಖಳನಟ ವೈಭವ್ ನಾಗರಾಜ್ ಹಾಗೂ ಇತರರು ತಮ್ಮ ಪಾತ್ರಗಳ ಕುರಿತು ವಿವರಗಳನ್ನು ನೀಡಿದರು.

Social Share :

ಮಕ್ಕಳಿಂದ ಮಕ್ಕಳಿಗಾಗಿ ನನ್ನ ಹೆಸರು ಕಿಶೋರ

Social Share :

ಸಮಾಜದಲ್ಲಿ ಮಕ್ಕಳನ್ನು ಅಮಾನುಷ ರೀತಿಯಲ್ಲಿ ಅಪಹರಿಸಿ ಬಿಕ್ಷಾಟನೆ ಹಾಗೂ ಇತರ ಘೋರ ರೀತಿಯಲ್ಲಿ ಬಳಸಲಾಗುತ್ತದೆ. ಮಕ್ಕಳ ರಕ್ಷಣೆ ಮಾಡುವುದು ಪೋಷಕರ ಆದ್ಯ ಕರ್ತವ್ಯ ‌..

ಮಕ್ಕಳನ್ನು ಪೋಷಕರು ಯಾವ ರೀತಿ ನೋಡಿಕೊಳ್ಳಬೇಕು ರಕ್ಷಣೆ ಮಾಡಬೇಕು ಎಂಬುದರ ಕುರಿತು ಸಂದೇಶ ನೀಡುವ ಚಿತ್ರವಾಗಿ ಮೂಡಿ ಬಂದಿರುವುದು ‘ನನ್ನ ಹೆಸರು ಕಿಶೋರ ಏಳ್ ಪಾಸ್ ಎಂಟು’.

ಎಂ.ಪಿ.ಭಾರತಿ ಶಂಕರ್ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವೇಳೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಹಾಗೂ ಈ ಹಿಂದೆ ‘ಸಿಂಹ ಹಾಕಿದ ಹೆಜ್ಜೆ’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಎಂ.ಡಿ.ಪಾರ್ಥಸಾರಥಿ ನಿರ್ಮಿಸಿದ್ದಾರೆ.

ಇದು ಗುಲ್ಬರ್ಗದಲ್ಲಿ ನಡೆದ ಸತ್ಯ ಘಟನೆ. ಮಕ್ಕಳನ್ನು ಅಪಹರಿಸಿ ಕ್ರೂರವಾಗಿ ಬಳಸಿದ ಘಟನೆ. ಇದು ಮನಕಲಕಿತು. ಸಮಾಜಕ್ಕೆ ಒಂದು ಸಂದೇಶ ನೀಡುವ ಆಶಯದಲ್ಲಿ ಕಥೆ ಮಾಡಿ ಸಿನಿಮಾ ಮಾಡಲಾಗಿದೆ ಎಂಬ ವಿವರ ಬಿಚ್ಚಿಟ್ಟರು ನಿರ್ದೇಶಕ ಭಾರತಿ ಶಂಕರ್.

ಚಿತ್ರದಲ್ಲಿ ತಬಲನಾಣಿ ಹುಡುಗನ ಅಪ್ಪನ ಪಾತ್ರ ನಿರ್ವಹಿಸಿದ್ದಾರೆ ಎಂದರು ನಿರ್ದೇಶಕರು. ತಬಲನಾಣಿ ಅವರು ಸುದ್ದಿಗೋಷ್ಠಿ ನಿರ್ವಹಣೆಯ ಹೊಣೆ ಹೊತ್ತಿದ್ದರು. ಮೊದಲಿಗೆ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿತು ಚಿತ್ರತಂಡ.

ನಾನು ಮೂರು ಬಾರಿ ಕಥೆ ಕೇಳಿದೆ. ಇದು ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲದು ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ ನಿರ್ಮಾಣ ಮಾಡಲೇ ಬೇಕು ಎಂಬ ಗಟ್ಟಿ ನಿರ್ಧಾರ ಮಾಡಿದ್ದೆ ಎಂದರು ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ

ಪ್ರಚಾರದ ಹೊಣೆ ಹೊತ್ತು ವಿಶೇಷ ವಾಹನದ ಜೊತೆ ಸಾಕಷ್ಟು ಊರುಗಳನ್ನು ಸುತ್ತಾಡಿದ ಅಪ್ಪಟ ಕನ್ನಡಾಭಿಮಾನಿ ರಂಗಸ್ವಾಮಿ ಸಹ ಚಿತ್ರದ ಬಗ್ಗೆ ಮಾತನಾಡಿದರು.

ಅಂದ ಹಾಗೆ ಡ್ರಾಮ ಜ್ಯೂನಿಯರ್ ನ ಪ್ರತಿಭಾವಂತ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದು, ಮಹೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಜೊತೆಗೆ ಅಮಿತ್, ಶಶಿ, ಮಂಜುನಾಥ್, ಸಾಯಿ ಕಾಸರಗೋಡು, ಮಿತಾಲಿ ಮೊದಲಾದವರಿದ್ದಾರೆ ಎಂಬ ಮಾಹಿತಿ ಬಂತು.

ಇದೇ 19ರಂದು ಬಿಡುಗಡೆ ಕಾಣುತ್ತಿರುವ ಚಿತ್ರಕ್ಕೆ ಮಂಜು ಕವಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ 28 ದಿನ ಚಿತ್ರೀಕರಣ ನಡೆದಿದೆ ಎಂಬ ವಿವರಗಳು ಬಂದವು..

Social Share :

ರಮೇಶ್ ಅರವಿಂದ್ 100 ಸೈಬರ್ ಕ್ರೈಮ್ ಥ್ರಿಲ್ಲರ್

Social Share :

ಬಹುಮುಖ ಪ್ರತಿಭೆಯ ಕನ್ನಡದ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ತಮ್ಮ ಚಿತ್ರಗಳ ಮೂಲಕ ಆಗಾಗ ಪ್ರೇಕ್ಷಕರಿಗೆ ಕಚಗುಳಿ ಇಡುವುದೂ ಉಂಟು..

ಕುಟುಂಬ ಸಮೇತರಾಗಿ ಪ್ರೇಕ್ಷಕರು ರಮೇಶ್ ಅವರ ಚಿತ್ರಗಳನ್ನು ನೋಡಲು ಅತ್ಯಂತ ಕುತೂಹಲಭರಿತರಾಗುವುದೂ ನಿಜವಾದ ಸಂಗತಿ.

ಹಾಗಾಗಿ ಅವರ ಚಿತ್ರಗಳನ್ನು ಪ್ರೇಕ್ಷಕ ಮುಲಾಜಿಲ್ಲದೆ ಉಸಿರು ಬಿಗಿ ಹಿಡಿದು ಕಾಯುತ್ತಾನೆ. ನವಿರು ಹಾಸ್ಯ ಮತ್ತು ಒಂದು ಉತ್ತಮ ಸಂದೇಶ ನೀಡುವುದು ಅವರ ಚಿತ್ರಗಳ ಹೆಗ್ಗಳಿಕೆ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಇದೇ ನವೆಂಬರ್ 19 ರಂದು ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ 100 ಎಂಬ ಚಿತ್ರವು ಎಲ್ಲರ ಗಮನ ಸೆಳೆಯುವುದರಲ್ಲಿದೆ. ಅದು ರಮೇಶ್ ಅರವಿಂದ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿರುವ ಚಿತ್ರ. ಮುಖ್ಯವಾಗಿ ಈ ಚಿತ್ರವನ್ನು ಉದ್ಯಮಿ ರಮೇಶ್ ರೆಡ್ಡಿ ಅವರು ನಿರ್ಮಿಸಿದ್ದಾರೆ.

ಚಿತ್ರವು ಬಿಡುಗಡೆಯ ಹಾದಿಯಲ್ಲಿ ಇರುವಾಗಲೇ ಅದರ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಇದು ಒಂದು ಫ್ಯಾ ಮಿಲಿ ಥ್ರಿಲ್ಲರ್ ಚಿತ್ರವೆಂದರೆ ತಪ್ಪಾಗಲಾರದು. ಸೈಬರ್ ಕ್ರೈಮ್ ಸುತ್ತಲೂ ಆವರಿಸಿರುವ ಕಥೆಯಲ್ಲಿ ನಮ್ಮ ಮನೆ ಮನಗಳ ವ್ಯಥೆ ಇದೆ.

ಅವರು ಮೊಬೈಲ್ ಮೂಲಕ ಒಳಗೆ ಬರ್ತಾರೆ. ನಮಗೆ ಅರಿವಿಲ್ಲದಂತೆ ಇಲ್ಲಿ ಏನೇನೋ ನಡೆಯುತ್ತದೆ.
ಆನ್ ಲೈನ್ ಮೂಲಕ ಒಂದು ದೊಡ್ಡ ಮೋಸ ನಡೆದು ಹೋಗುತ್ತದೆ. ಅದು ನಮಗೆ ತಿಳಿದಾಗ ಕಾಲವೂ ಮಿಂಚಿ ಹೋಗಿರುತ್ತದೆ. ಆದರೆ ಅದರಿಂದ ಉಂಟಾದ ಆಘಾತ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಜನರನ್ನು ಎಚ್ಚರಿಸುವ ಕೆಲಸವಾಗಿ ಈ ಚಿತ್ರ ಎಲ್ಲರ ಮನ ಗೆಲ್ಲಬಹುದು ಎಂಬ ಆಶಾ ಭಾವನೆಯನ್ನೇ ಹೊರ ಹಾಕಿದರು ರಮೇಶ್ ಅರವಿಂದ್.

ರವಿ ಬಸ್ರೂರ್ ಹಿನ್ನೆಲೆಯಲ್ಲಿ ಸಂಗೀತವೂ ಗಮನ ಸೆಳೆಯುತ್ತದೆ. ಸತ್ಯ ಹೆಗಡೆ ಅವರ ಕ್ಯಾಮೆರಾ ಕೈ ಚಳಕವೂ ಅದ್ಭುತ ಎಂಬ ವಿವರಣೆಯನ್ನು ಕೊಟ್ಟರು.

ರಮೇಶ್ ಸರ್ ಜೊತೆ ಕೆಲಸ ಮಾಡುವುದಕ್ಕೆ ಯಾವಾಗಲೂ ಖುಷಿಯಾಗುತ್ತದೆ. ತಂತ್ರಜ್ಞರಿಗೆ ಅವರು ಉತ್ತಮ ಮಾರ್ಗಗಳನ್ನು ತೋರಬಲ್ಲರು ಎಂಬುದು ಅತಿಶಯೋಕ್ತಿ ಅಲ್ಲ ಎಂದರು ಸತ್ಯ ಹೆಗಡೆ.

ನಿರ್ಮಾಪಕ ರಮೇಶ್ ರೆಡ್ಡಿ ಅವರು ಹೆಚ್ಚು ಮಾತನಾಡದೆ ಎಲ್ಲವನ್ನು ರಮೇಶ್ ಅರವಿಂದ್ ಅವರ ಉಸ್ತುವಾರಿಗೆ ಬಿಟ್ಟಿರುವುದಾಗಿ ಮಾಹಿತಿ ನೀಡಿದರು. ನಾನು ಎರಡು ಮೂರು ಬಾರಿ ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿರಬಹುದು ಅಷ್ಟೇ.. ರಮೇಶ್ ಸರ್ ಎಲ್ಲವನ್ನು ಮಾಡುತ್ತಾರೆ‌ ಎಂಬುದು ನನ್ನ ನಂಬಿಕೆ. ಮುಖ್ಯವಾಗಿ ನನಗೆ ಅಷ್ಟು ಬಿಡುವು ಕೂಡ ಇರುವುದಿಲ್ಲ ಎಂದು ಹೇಳುತ್ತಾ ಹೋದರು ನಿರ್ಮಾಪಕರು.

ಇದೇ 19ರಂದು ಬಿಡುಗಡೆ ಕಾಣುತ್ತಿರುವ ಚಿತ್ರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ ಎಂಬುದು ಚಿತ್ರತಂಡದ ನಂಬಿಕೆ

Social Share :

ಸರಳತೆಯ ಸಾಕಾರ ಮೂರ್ತಿ ಅಪ್ಪು ದಿ ಲೆಜೆಂಡ್

Social Share :

ವಾರದಲ್ಲಿ ಐದು ದಿನ ಅಪ್ಪಾಜಿ ಸ್ಮರಣೆಯ ಪುಣ್ಯ ಭೂಮಿ ಇರುವ ಕಂಠೀರವ ಸ್ಟುಡಿಯೋ ಗೆ ಭೇಟಿ ನೀಡುತ್ತಿದ್ದ ಅಪ್ಪು ಈಗ ಅಲ್ಲೇ ಮಲಗಲು ಹೊರಟಿರುವುದು ವಿಧಿ ವಿಪರೀತ..!!

ಮೊನ್ನೆ ಬುಧವಾರ ಪುನೀತ್ ರಾಜ್ ಕುಮಾರ್ ಮಲ್ಲೇಶ್ವರದ ಎಸ್ ಆರ್ ವಿ ಪ್ರಿವ್ಯೂ ಚಿತ್ರಮಂದಿರಕ್ಕೆ ಬಂದಿದ್ದರು. ಅದೂ ನಟ ಸಾಧುಕೋಕಿಲ ಅವರ ಆಹ್ವಾನದ ಮೇರೆಗೆ.

ಸಾಧು ಕೋಕಿಲ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಜನಪ್ರಿಯವಿರುವ ಸಿದ್ಧಾರೂಢ ಮಠದ ಬಗ್ಗೆ ದಾಕುಮೆಂಟರಿ ಸಿನಿಮಾ ನಿರ್ಮಿಸಿದ್ದಾರೆ. ಸುಮಾರು 90 ನಿಮಿಷದ ಈ ದಾಕುಮೆಂಟರಿ ದಾಕುಮೆಂಟರಿ ಅಲ್ಲ. ಬದಲಾಗಿ ಥ್ರಿಲ್ ನೀಡುವ ಸಿನಿಮಾ..

ಈ ಬಗ್ಗೆ ವಿವರ ನೀಡುವ ಕಾರ್ಯಕ್ರಮಕ್ಕೆ ಸಿದ್ಧಾರೂಢ ಮಠದ ಸ್ವಾಮಿಗಳು ಬಂದಿದ್ದರು. ಅಪ್ಪು ಭಾಗವಹಿಸಿ ಗುರುಗಳ ಆಶೀರ್ವಾದ ಪಡೆದರು. ಸನ್ಮಾನ ಮಾಡಿಸಿಕೊಂಡರು. ಅದು ಅವರಿಗೆ ಸಿಕ್ಕಿದ ಕೊನೆಯ ಸನ್ಮಾನ. ಮುಖ್ಯವಾಗಿ ಗುರುಗಳ ಆಶೀರ್ವಾದ ಸಿಕ್ಕಿತ್ತು.

ಅಪ್ಪು ಸರಳತೆ ಬಗ್ಗೆ ಹೇಳುವ ಅಗತ್ಯವಿಲ್ಲ. ನನಗೆ ಪುನೀತ್ ರಾಜ್ ಕುಮಾರ್ ಅಲ್ಲಿ ಸಿಗುವರೆಂಬುದು ತೀರಾ ಅನಿರೀಕ್ಷಿತವಾಗಿತ್ತು. ಏಕೆಂದರೆ ಮಂಗಳವಾರ ರಾತ್ರಿಯಷ್ಟೇ ಚಾಮರಾಜನಗರದಲ್ಲಿ ನಡೆಯಬಹುದಾಗಿದ್ದ ‘ಡ್ಯಾನ್ಸ್ ವಿತ್ ಅಪ್ಪು’ ಕಾರ್ಯಕ್ರಮದ ರೂಪುರೇಷೆ ಗಳ ಕುರಿತು ಕನ್ನಡ ಅನುವಾದ ಮಾಡಿದ್ದೆ.

ಜಿ ಕನ್ನಡ ವಾಹಿನಿಯಲ್ಲಿ ದೊಡ್ಡ ದೊಡ್ಡ ಈವೆಂಟ್ ಗಳ ರಾಜನಂತೆ ಕೆಲಸ ಮಾಡಿದ ಶ್ರೀರಾಮ್ ಈಗ ವಾಹಿನಿ ತ್ಯಜಿಸಿ ‘ಎನ್ ರೂಟ್’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಆ ಸಂಸ್ಥೆ ಚಾಮರಾಜನಗರದಲ್ಲಿ ನವೆಂಬರ್ ತಿಂಗಳ ಕೊನೆಯಲ್ಲಿ ಒಂದು ಬೃಹತ್ ಕಾರ್ಯಕ್ರಮ ಆಯೋಜಿಸುವ ಆಶಯ ಹೊಂದಿದೆ. ‘ಚೆಲುವ ಚಾಮರಾಜನಗರ’ ಎಂಬ ಕಾರ್ಯಕ್ರಮದಲ್ಲಿ ‘ನಟ ಸಾರ್ವಭೌಮನಿಗೆ ನಮನ’ ಹಾಗೂ ‘ಡ್ಯಾನ್ಸ್ ವಿತ್ ಅಪ್ಪು’ ಎಂಬುದು ಪ್ರಮುಖ ಕಾರ್ಯಕ್ರಮವಾಗಿತ್ತು. ಏಕೆಂದರೆ ಅಣ್ಣಾವ್ರ ಹುಟ್ಟೂರು ಚಾಮರಾಜನಗರ ಜಿಲ್ಲೆ, ಮುಖ್ಯವಾಗಿ ಅಪ್ಪು ಆ ಜಿಲ್ಲೆಯ ಬ್ರಾಂಡ್ ಅಂಬಾಷಡರ್.

ಸರಿ ರಾತ್ರಿ ಅಪ್ಪು ಕಾರ್ಯಕ್ರಮದ ಮೂಡ್ ನಲ್ಲಿ ಇರುವಾಗಲೇ ಸಿಕ್ಕಿದ್ದರು ಅಪ್ಪು‌. ಸಿದ್ಧಾರೂಢರ ಕಾರ್ಯಕ್ರಮದ ನಡುವೆ ಹೊರಟ ಅಪ್ಪುಗೆ ನಾನು ಬೆನ್ನತ್ತಿ ಮಾತನಾಡಿಸಿದೆ. ಕಾರ್ಯಕ್ರಮದ ಬಗ್ಗೆ ವಿವರಿಸಿದೆ. ಎಲ್ಲವನ್ನು ತನ್ಮಯತೆಯಿಂದ ಕೇಳಿಕೊಂಡ ಅಪ್ಪು ‘ಅಯ್ಯೋ ಆ ಟೈಮ್ ನಲ್ಲಿ ನಾನ್ ಇರಲ್ವಲಾ..’ ಎಂದರು.. ಆಗ ನಿಜಕ್ಕೂ ಶಾಕ್ ಆಯ್ತು ಆ ಮಾತಿನ ಅರ್ಥ ನಿಗೂಢವಾಗಿತ್ತು.

ನಾನು ಫ್ಯಾಮಿಲಿ ಜೊತೆ ವಿದೇಶಕ್ಕೆ ಹೋಗ್ತಿನಿ ಬರುವುದಕ್ಕೆ ತಡವಾಗಬಹುದು.. ‘ನೀವು ಶಿವಣ್ಣ ಅಥವಾ ರಾಘಣ್ಣ ಅವರನ್ನು ಕೇಳಿ’ ಎಂದು ಬಿಟ್ಟರು. ಅದು ಆತ್ಮದಿಂದ ಬಂದ ಮಾತು ಎಂಬಂತೆ ಅದೀಗ ನಿಜವಾಗಿದೆ. ಆದರೆ ಅಪ್ಪು ಹೊರಡುವಾಗ ಎಲ್ಲಿಲ್ಲದ ‘ಅಪ್ಪು’ಗೆ ನೀಡಿದರು. ಅದು ಮಾತ್ರ ಮರೆಯಲು ಸಾಧ್ಯವಾಗದ ಕ್ಷಣ..

ನಾನು ಹೀಗೆ ವೈಯಕ್ತಿಕವಾಗಿ ಬರೆದುಕೊಳ್ಳುವುದು ಕಡಿಮೆ. ಅದು ನನ್ನ ಮನೋಭಾವಕ್ಕೆ ವೈರುಧ್ಯದ ಸಂಗತಿಯೂ ಹೌದು. ನಾನು ಸುಮಾರು 2010ರಿಂದ ಪೂರ್ಣ ಪ್ರಮಾಣದಲ್ಲಿ ಸಿನಿಮಾ ವರದಿಗಾರನಾದ ಬಳಿಕ ಅಂದಿನಿಂದ ಸ್ನೇಹ ಉಳಿಸಿಕೊಂಡಿದ್ದು ಅಪ್ಪು ಮಾತ್ರ. ‘ಸಂಯುಕ್ತ ಕರ್ನಾಟಕ’ದಲ್ಲಿ ಇರುವಾಗ ಅವರ ‘ದೊಡ್ಮನೆ ಹುಡುಗ’ ಚಿತ್ರಕ್ಕೆ ‘ದೊಡ್ಮನೆ ಸುಮ್ ಸುಮ್ನೆ’ ಎಂಬ ವಿಮರ್ಶೆ ಬರೆದಾಗ.. ‘ಏನ್ ಸಾರ್ ನಾವು ಎಷ್ಟು ಕಷ್ಟ ಪಡ್ತೀವಿ.
ನೀವು ಹೀಗೆ ಬರೆದು ಬಿಡ್ತಿರಿ ಸರಿನಾ..’ ಎಂದು ಮುಂದೆ ಮಾತಾಡದೇ ಸರಸರನೆ ಹೊರಟು ಹೋಗಿದ್ದರು.

ಅದೇ ಬೇಸರದಲ್ಲಿ ಎರಡು ವರ್ಷ ಮಾತಾಡದೇ ಇದ್ದರು. ಮುಂದೆ ‘ನಟ ಸಾರ್ವಭೌಮ’ ಸಂದರ್ಭದಲ್ಲಿ ಮತ್ತೆ ನಮ್ಮಿಬ್ಬರ ಎಂದಿನ ಮಾತುಕತೆ ಮುಂದುವರೆದಿತ್ತು. ಡಾರ್ಲಿಂಗ್ ಕೃಷ್ಣ ಅವರ ಚಿತ್ರಕ್ಕೆ ಪ್ರಭುದೇವ ಜೊತೆ ಅವರು ಡ್ಯಾನ್ಸ್ ಮಾಡಿದ ವಿವರಗಳನ್ನು ಫೋನ್ ನಲ್ಲಿ ಕೊಟ್ಟರು. ಅದು ಕೊನೆಯ ಸಂದರ್ಶನ.

ಹಿಂದೆ ಅಪ್ಪಾಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸಂಯುಕ್ತ ಕರ್ನಾಟಕ’ ವಿಶೇಷ ಸಂದರ್ಶನ ಮಾಡಿದ್ದೆ. ಅದರಲ್ಲಿ ಹೃದಯ ಬಿಚ್ಚಿ ಮಾತನಾಡಿದ್ದರು ಅಪ್ಪು. ‘ಅಪ್ಪಾಜಿ ನನ್ನನ್ನು ಶಾಲೆಗೆ ಕಳುಹಿಸದೇ ಜೊತೆಯಾಗಿ ಇಟ್ಟುಕೊಂಡಿದ್ದರು. ನಾನು ಚಿಕ್ಕ ಹುಡುಗ ಎಲ್ಲವನ್ನು ಅಪ್ಪಾಜಿಯಿಂದ ಕಲಿತೆ ಎಂದರೆ ತಪ್ಪಾಗುತ್ತದೆ. ಆದರೆ ಅದೇಗೋ ಗೊತ್ತಿಲ್ಲದೆ ಅವರ ಸಂಸ್ಕಾರ ನನ್ನೊಳಗೆ ರೂಢಿಯಾಯಿತು. ಮುಂದೆ ರಾಜ್ ಎಂಬುದು ಈ ನಾಡಿನ ಶಕ್ತಿ. ಹಾಗಾಗಿ ಅದು ನನಗೆ ಜವಾಬ್ದಾರಿಯಾಯಿತು.

ನಾನು ಭಾರತದ ಯಾವ ಮೂಲೆಗೆ ಹೋದರು ‘ರಾಜ್ ಕುಮಾರ್ ಮಗ’ ಎಂಬ ಐಡೆಂಟಿಟಿ ಸಿಗುತ್ತದೆ. ಅದು ಸಾಕು ನನಗೆ ಎಂದು ಹೆಮ್ಮೆಯಿಂದಲೇ ಹೇಳಿದ್ದರು.

ಪುನೀತ್ ಸರಳ ಸಜ್ಜನಿಕೆ ವ್ಯಕ್ತಿತ್ವದ ಮಗು. ಅವರು ಇಷ್ಟು ಬೇಗ ಇಹಲೋಕ ತ್ಯಜಿವರು ಎಂಬುದು ಯಾರೂ ಊಹಿಸದ ಸಂಗತಿ. ಆದರೆ ಅವರು ತಮ್ಮ ಚಿತ್ರಗಳಿಂದ.. ಮತ್ತು ಮುಗ್ಧ ಸ್ನಿಗ್ಧ ನಗುವಿನ ರಿಯಾಲಿಟಿ ಶೋಗಳಿಂದ ಜನ ಮಾನಸದಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ. ಹೃದಯವಂತ ಅಪ್ಪು ಇಷ್ಟು ಬೇಗ ಮರೆಯಾದರಾ.. ನಿಜಕ್ಕೂ ನಂಬಲಾರದ ಹೃದಯ ವೇದಕ ಸಂಗತಿ.

-ಸ್ನೇಹಪ್ರಿಯ ನಾಗರಾಜ್

Social Share :

ಮರೆಯಾಯಿತು ರಾಜರತ್ನ ಅಭಿಮಾನಿಗಳ ಕಣ್ಣೀರ ಕಡಲು

Social Share :

ಕನ್ನಡ ಜನಮಾನಸದ ನಟ, ಅಪ್ಪನಂತೆ ಅಪರಂಜಿಯಾಗಿ ಚಿತ್ರರಂಗದಲ್ಲಿ ನೆಲೆ ನಿಂತಿದ್ದ, ಕನ್ನಡಿಗರ ಹೃದಯವನ್ನು ಗಟ್ಟಿಯಾಗಿ ಆವರಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ..
ಕನ್ನಡದ ನಕ್ಷತ್ರಲೋಕದ ‘ಪವರ್’ ನಕ್ಷತ್ರ ಕೊಂಡಿ ಕಳಚಿ ಬಿದ್ದಿದ್ದು.. ಇದರಿಂದ ಆಘಾತಕ್ಕೊಳಗಾಗಿರುವ ಸ್ಯಾಂಡಲ್ ವುಡ್ ಕಣ್ಣೀರಿನಲ್ಲಿ ಮುಳುಗಿದೆ. ಶುಕ್ರವಾರ ಬೆಳಿಗ್ಗೆ ಜಿಮ್ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿ ಅಪ್ಪು ಇಹಲೋಕ ತ್ಯಜಿಸಿದ್ದಾರೆ..

ಕನ್ನಡ ಜನಮಾನಸದಲ್ಲಿ ಧೃವತಾರೆಯಾಗಿ ಮಿನುಗಿ ಕೇವಲ 46 ವರ್ಷಕ್ಕೆ ಬದುಕಿಗೆ ವಿದಾಯ ಹೇಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಡೀ ಭಾರತೀಯ ಚಿತ್ರರಂಗ ಆರಾಧಿಸಿದ ನಟ. ಅಪಾರ ಅಭಿಮಾನಿ ಬಳಗ ಹೊಂದಿರುವ ಪುನೀತ್ ಅವರೆಲ್ಲರ ಒಡಲಲ್ಲಿ ಹೆಚ್ಚು ದುಃಖವನ್ನು ತುಂಬಿ ಮರೆಯಾಗಿ ಹೋಗಿದ್ದಾರೆ.

ವರನಟ ಡಾ.ರಾಜ್ ಕುಮಾರ್ ಅವರ ಕೊನೆಯ ಪುತ್ರರಾಗಿದ್ದ ಪುನೀತ್ ಕೇವಲ ಮೂರು ವರ್ಷಕ್ಕೆ ನಟನೆ ಆರಂಭಿಸಿದರು. ಅವರ ಮೊದಲ ಹೆಸರು ಲೋಹಿತ್. ಮೊದಲು ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಅಪ್ಪನ ಜೊತೆ ಬಾಲನಟನಾಗಿ ಅಭಿನಯಿಸಿದರು. ಬಳಿಕ ‘ವಸಂತಗೀತ’ ಚಿತ್ರದಲ್ಲಿ ಅಪ್ಪ ಹಾಗೂ ನಾಡು ಅಚ್ಚರಿಪಡುವಂತೆ ನಟಿಸಿದರು. ಮುಂದೆ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ‘ಕಾಣದಂತೆ ಮಾಯವಾದನು’ ಎಂಬ ಹಾಡು ಹಾಡಿ ನಟಿಸಿದ ಬಳಿಕ ಕನ್ನಡಿಗರ ಮನೆ ಮನಗಳಲ್ಲಿ ಮಾತಾದರು. ‘ಭಾಗ್ಯವಂತ’, ‘ಎರಡು ನಕ್ಷತ್ರಗಳು’, ‘ಯಾರಿವನು..’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಅಪ್ಪು ಕೊನೆಯ ಪ್ರೆಸ್ ಮೀಟ್ ಸಿದ್ದಾರೂಢ ಮಠದ ಕುರಿತಾಗಿತ್ತು

ಅಪ್ಪುಗೆ ಕೊನೆಯ ಸನ್ಮಾನ ಬುಧವಾರ  (27/10/2021)ನಡೆದ ಕಾರ್ಯಕ್ರಮ

ಮುಂದೆ ‘ಬೆಟ್ಟದ ಹೂವು’ ಚಿತ್ರದಲ್ಲಿ ಅಮೋಘ ಅಭಿನಯ ನೀಡಿ ರಾಷ್ಟ್ರ ಪ್ರಶಸ್ತಿಗೂ ಭಾಜನರಾಗಿದ್ದರು. ಆನಂತರ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಅಪ್ಪನ ಜೊತೆ ಸರಿ ಸಮಾನವಾಗಿ ನಟಿಸಿ ಎಲ್ಲರ ಹೃದಯ ಗೆದ್ದಿದ್ದರು.
ಬಳಿಕ ನಾಯಕ ನಟರಾಗಿ ಮೊದಲ ಚಿತ್ರ ‘ಅಪ್ಪು’ವಿನಿಂದ ಹಿಡಿದು ಬಿಡುಗಡೆ ಕಂಡ ‘ ಯುವರತ್ನ’ವರೆಗೆ ಧಣಿವರಿಯದೆ ದುಡಿದರು. ಪಿಆರ್ ಕೆ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಅನಾಥಶ್ರಗಳಿಗೆ ರಾಜನಂತೆ ದೇಣಿಗೆ ನೀಡಿದರು. ಅವರ ‘ರಾಜಕುಮಾರ’ ಚಿತ್ರ ಅವರ ಹೃದಯದ ಸಂವೇದನೆ ಭಾಗವೇ ಆಗಿತ್ತು.

ಕನ್ನಡ ಚಿತ್ರರಂಗದ ಅತ್ಯಂತ ವಿನಯಶೀಲ ನಟರಾಗಿದ್ದರು. ಪುನೀತ್ ರಾಜ್ ಕುಮಾರ್. ಅದು ಅಪ್ಪನಿಂದ ಬಂದ ಬಳುವಳಿ. ಎಲ್ಲರನ್ನು ಪ್ರೀತಿಯಿಂದ ಕಾಣುವ ಹೃದಯವಂತಿಕೆ ಅವರಲ್ಲಿತ್ತು. ಈ ಕಾರಣದಿಂದಾಗಿಯೇ ‘ಕನ್ನಡದ ಕೋಟ್ಯಾಧಿಪತಿ ಅತ್ಯಂತ ಜನಪ್ರಿಯವಾಗಿತ್ತು. ಜನರ ಹೃದಯದಲ್ಲಿ ಅವರೊಂದು ಆಹ್ಲಾದವಾಗಿದ್ದರು. ಏಕೆಂದರೆ ಅವರು ಸೃಷ್ಟಿಸಿಕೊಡುತ್ತಿದ್ದ ಪಾತ್ರವೇ ಇರಲಿ.. ಕಿರುತೆರೆಯ ಹಸನ್ಮುಖಿ ಮುಖಾರವಿಂದವಾಗಲಿ ತಮ್ಮ ಬೆಚ್ಚನೆಯ ಹೃದಯದಲ್ಲಿ ಇಟ್ಟುಕೊಳ್ಳಲು ಜನರು ಹಾತೊರೆದರು. ಪುನೀತ್ ಒಂದು ಶಕ್ತಿ. ಏಕೆಂದರೆ ಪ್ರತಿಯೊಬ್ಬರನ್ನೂ ಆಕರ್ಷಿಸುವ ಅಪರೂಪದ ವ್ಯಕ್ತಿತ್ವ ಅವರದು.

ಪ್ರಸ್ತುತ ಸಂದರ್ಭದಲ್ಲಿ ಪುನೀತ್ ಚಿತ್ರಗಳನ್ನು ಮಾತ್ರ ಇಡೀ ಕುಟುಂಬ ಕುಳಿತು ನೋಡಲು ಇಚ್ಚಿಸುತ್ತದೆ ಎಂದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ.
ಇಂತಹ ಜನಮಾನಸದ ನಟ ಇನ್ನಿಲ್ಲ ಎನ್ನುವಾಗ ಹೃದಯ ಭಾರವಾಗಿದೆ. ಪುನೀತ್ ರಾಜ್ ಕುಮಾರ್ ಮತ್ತೆ ಹುಟ್ಟಿಬರಲಿ.

Social Share :

ಪುನೀತ್ ರಾಜ್‌ಕುಮಾರ್‌ಗೆ ಲಘು ಹೃದಯಾಘಾತ

Social Share :

ನಟ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಪುನೀತ್ ರಾಜ್‌ಕುಮಾರ್ ಕುಸಿದು ಬಿದ್ದಿದ್ದಾರೆ. ಈ ವೇಳೆ ರಮಣಶ್ರೀ ಆಸ್ಪತ್ರೆಯಲ್ಲಿ ಮೊದಲು ಪ್ರಥಮ ಚಿಕ್ಸಿ ಕೊಡಿಸಲಾಗಿದೆ. ನಂತರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈಗಾಗಲೇ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ. ಹೃದ್ರೋರೋಗ ತಜ್ಞರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಪುನೀತ್ ಆರೋಗ್ಯದ ಬಗ್ಗೆ ಹಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Social Share :

ಎಲ್ಲವೂ ಹೊಸ ಬಗೆ ಲವ್ ಕ್ಲಾಸಿಕ್ ಪ್ರೇಮಂ ಪೂಜ್ಯಂ

Social Share :

ಪ್ರೇಮದಲ್ಲಿ ಪಾವಿತ್ರ್ಯ ತ್ಯಾಗಗಳು ಅಪರೂಪಕ್ಕೆ ಸಿಗುತ್ತವೆ. ಪ್ರೇಮದ ಹೊಸ ವ್ಯಾಖ್ಯಾನವೂ ಸಿಗುತ್ತದೆ..

ಅದು ಪ್ರೇಮಂ ಪೂಜ್ಯಂ..!
ಚಿತ್ರದಲ್ಲಿ ಎರಡು ವಿಶೇಷತೆಗಳು ಒಂದು ಲವ್ಲಿಸ್ಟಾರ್ ಪ್ರೇಮ್ ಲವ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಈ ಚಿತ್ರದ ನಿರ್ದೇಶಕ. ಮನುಷ್ಯನ ನರನಾಡಿಗಳ ವಿಷಯದ ಆಳವಾದ ಅಧ್ಯಯನ ಮಾಡಿರುವ ವೈದ್ಯ ಡಾ.ರಾಘವೇಂದ್ರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಪ್ರತಿ ‘ಪ್ರೇಮ್’ನಲ್ಲಿಯೂ ಹೊಸತನ ತುಂಬಿ ತುಳುಕುತ್ತದೆ. ಚಿತ್ರವೂ ಕೂಡ ಕ್ಲಾಸಿಕ್ ಅನುಭವವನ್ನೇ ನೀಡುತ್ತದೆ ಎಂಬುದಕ್ಕೆ ಚಿತ್ರದ ಟ್ರೈಲರ್ ಸಾಕ್ಷಿಯಾಯಿತು..

ನಿರ್ದೇಶಕ ಡಾ.ರಾಘವೇಂದ್ರ ಬಹಳವೇ ಆತ್ಮವಿಶ್ವಾಸದಿಂದ ಮಾತನಾಡಿದರು. ಏನೋ ಹೀಗೊಂದು ಹೊಸ ಪ್ರಯತ್ನ ಮಾಡಬೇಕೆನಿಸಿತು. ಪ್ರತಿಯೊಂದರ ಹಿಂದೆ ಒಂದು ಅಧ್ಯಯನ ಮತ್ತು ಪರಿಶ್ರಮವಿದೆ. ಹಾಗಾಗಿ ಈ ನಮ್ಮ ಪ್ರಯತ್ನವನ್ನು ಚಿತ್ರಮಂದಿರದಲ್ಲೇ ತೋರಿಸಬೇಕು ಎಂಬ ಆಸೆ ಮೊಳೆಯಿತು. ಹಾಗೂ ಎಷ್ಟೇ ಓಟಿಟಿ ಫ್ಲಾಟ್ ಫಾರಂಗಳಲ್ಲಿ ಅವಕಾಶಗಳಿದ್ದರೂ ಹೋಗಲಿಲ್ಲ ಎಂದರು.

ಪ್ರೇಮ ಅಜರಾಮರಾ.. ಪ್ರೇಮ ಮಧುರಾಕ್ಷರಾ.. ಎಂಬುದು ಎಷ್ಟೇ ಇದ್ದರೂ ಅದರ ತಾಜಾತನ ಹೊಳಪು ಪ್ರತಿ ಕ್ಷಣವೂ ಬೇರೆ ಬೇರೆ ಇರುತ್ತದೆ. ಪ್ರೇಮಸಂಗಮ, ಸಂಭ್ರಮ ಸಾಹಿತ್ಯ ಎಲ್ಲದರ ಬಗ್ಗೆ ಒಳ್ಳೆ ಪ್ರಯತ್ನವನಂತೂ ಮಾಡಲಾಗಿದೆ ಎಂದು ಆತ್ಮವಿಶ್ವಾಸ ದಿಂದಲೇ ಉತ್ತರ ಕೊಟ್ಟರು ನಿರ್ದೇಶಕರು.

ಲವ್ಲಿಸ್ಟಾರ್ ಪ್ರೇಮ್ ಅವರಿಗೆ ಇದು 25ನೇ ಚಿತ್ರ. ಇದು ಪ್ರೇಮದ ಇನ್ನೊಂದು ತೀರ.. ಇಲ್ಲಿ ಹೀರೋಯಿನ್ ಸ್ಪರ್ಶ ಕೂಡ ಮಾಡುವುದಿಲ್ಲ.. ಪ್ರೇಮದ ತೀವ್ರತೆ ಇದ್ದರೂ ಮನಸ್ಸು ಪ್ರಶಾಂತ ಅಂತಹ ಒಂದು ಪಾತ್ರವನ್ನು ಸೃಷ್ಟಿ ಮಾಡಿಕೊಟ್ಟಿದ್ದಾರೆ ಎಂದರು ನಾಯಕ ನಟ ಪ್ರೇಮ್.

ಇದು ನನ್ನ 25 ನೇ ಸಿನಿಮಾ..
ಟ್ರೈಲರ್ ಸೌಂಡ್ ಮಾಡಿದೆ..
ಕೆಲವರ ಕೋರಿಕೆ ಮೇರೆಗೆ ನಾವು 29ಕ್ಕೆ ಬರಲಿಲ್ಲ.. ನವೆಂಬರ್ 12ಕ್ಕೆ ಚಿತ್ರವು ಬಿಡುಗಡೆ ಕಾಣುತ್ತಿದೆ. ಮುಖ್ಯವಾಗಿ ಈ ಚಿತ್ರಕ್ಕೆ ಬೇರೆ ಬೇರೆ ಭಾಷೆಗಳಿಂದ ಆಫರ್ ಬರುತ್ತಿದೆ ಎಂಬುದು ಹೆಮ್ಮೆಯ ವಿಚಾರ ಎಂದರು ಲವ್ಲಿಸ್ಟಾರ್.

ನಟಿ ಬೃಂದಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ವಿತರಕ ಹೇಮಂತ್ ಮತ್ತು ಪ್ರದರ್ಶಕರಾಗಿರುವ ಜಗದೀಶ್ ಚಿತ್ರಮಂದಿರಗಳ ಸ್ಥಿತಿ ವಿವರಗಳನ್ನು ನೀಡಿದರು.

Social Share :