Rating 4/5
ಜಾಲತಾಣ ಮಹಾಜಾಣ ಕಾಂಚಾಣ ಅನಾವರಣ
* ಕುಟುಂಬ ನೋಡಲೇ ಬೇಕು
* ಆಧುನಿಕ ಸವಾಲುಗಳ ಪರಿಣಾಮ
* ಜಾಲತಾಣ ಸೃಷ್ಟಿಸುವ ವೈಪರೀತ್ಯ
* ಸಮರ್ಥನೆ ಮತ್ತು ಅಭಿವ್ಯಕ್ತಿಗೆ
ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಅಸಹಾಯಕತೆಯನ್ನೂ ಸರಿಯಾಗಿ ವ್ಯಕ್ತಪಡಿಸಲಾಗದ ಅನೇಕ ಸಂಗತಿಗಳಿವೆ. ‘ಗುಟ್ಟು ರಟ್ಟಾದರೆ ಜೀವಕ್ಕೆ ಆಪತ್ತು’ ಎಂಬುದು ಸಾಮಾನ್ಯ ಸಂಗತಿಯೇ ಅಲ್ಲ.. ಅದೊಂದು ಕಠೋರ ವಾಸ್ತವ..
ಆಧುನಿಕ ಬೆಳವಣಿಗೆಯಿಂದ ಕೈಗೆ ದಕ್ಕಿರುವ ಮೊಬೈಲ್ ಫೋನ್ ವರವಾಗುವುದಕ್ಕೆ ಬದಲಾಗಿ ಶಾಪವಾದರೆ ಏನಾಗುತ್ತದೆ. ಪಿಸು ಮಾತುಗಳು ಗುಟ್ಟಾಗಿ ಉಳಿಯದೆ ಡಂಗುರವಾದರೆ ಏನು ಮಾಡುವುದು..
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕಾದರೂ ‘100’ನ್ನು ಒಮ್ಮೆ ನೋಡಲೇಬೇಕು. ತುಂಬು ಕುಟುಂಬ ಹೊಂದಿರುವ ಆದರ್ಶ ವ್ಯಕ್ತಿತ್ವದ ಪೊಲೀಸ್ ಅಧಿಕಾರಿಯ ತಣ್ಣಗಿನ ಹೋರಾಟ ಇಲ್ಲಿದೆ. ಜೊತೆಗೆ ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದ ಅನೇಕ ಮಜಲುಗಳ ಅಭಿವ್ಯಕ್ತಿಯೂ ಇದೆ.

ಅದಮ್ಯ ಕುಟುಂಬ ಪ್ರೇಮ ಹೊಂದಿರುವ ವಿಷ್ಣು ಎಂಬ ಒಳ್ಳೆ ಮನಸ್ಸಿನ ಪೊಲೀಸ್ ಅಧಿಕಾರಿಗೆ ಕರ್ತವ್ಯ ನಿರ್ವಹಣೆಯ ಸವಾಲಿನಲ್ಲೇ ‘ಕಳ್ಳ ಕಿವಿ’ಯಾಗುವ ಅನಿವಾರ್ಯತೆ ಎದುರಾಗುತ್ತದೆ.. ಅದು ಒಳ್ಳೆಯದಕ್ಕೂ ಮತ್ತು ಕೆಟ್ಟದೆಂಬ ಒಳ್ಳೆಯದಕ್ಕೂ ಸಹಾಯ ಮಾಡುತ್ತಿರುವಾಗಲೇ.. ಆ ಅಧಿಕಾರಿ ಕುಟುಂಬದ ಸದಸ್ಯರೇ ಸಾಮಾಜಿಕ ಜಾಲತಾಣದ ವ್ಯಸನಕ್ಕೆ ಬಿದ್ದು ವಿಷ ವರ್ತುಲಕ್ಕೆ ಸಿಲುಕಿದ ವಿಷಯ ತಿಳಿಯುತ್ತದೆ..
ವ್ಯವಸ್ಥೆ ಮತ್ತು ಕುಟುಂಬ ಎರಡನ್ನೂ ಉಳಿಸುವ ಸವಾಲಿನಲ್ಲಿ ವಿಷ್ಣು ತಳೆಯುವ ನಿರ್ಧಾರ ಮತ್ತು ಜಾಣ್ಮೆ ಚಿತ್ರದ ಥ್ರಿಲ್ಲಿಂಗ್ ವಿಷಯಗಳು. ಆರಂಭಿಕ ಪರಿಚಯದ ಹಾಡು ಹೊರತು ಪಡಿಸಿ ಹಾಡುಗಳೇ ಇಲ್ಲದ ಸಿನಿಮಾ ನೋಡುತ್ತಾ ನೋಡುತ್ತಲೇ ಕುತೂಹಲ ಇಮ್ಮಡಿಯಾಗುತ್ತದೆ. ಈ ಗುಣದಿಂದ ಚಿತ್ರ ಆರಂಭವಾಗುವುದು ಮತ್ತು ಮುಗಿಯುವುದು ಗೊತ್ತೇ ಆಗುವುದಿಲ್ಲ.. ಪೊಲೀಸ್ ವ್ಯವಸ್ಥೆಯಲ್ಲಿ ಅನೇಕ ತಮಾಷೆಯ ವಿಷಯಗಳೂ ಇವೆ ಎಂಬುದನ್ನು ಎತ್ತಿ ತೋರಿಸಿರುವುದು ವಿರಳ ಸಂಗತಿಯಾಗಿದೆ.
ಸಾಮಾಜಿಕ ಜಾಲತಾಣದ ವೈಪರಿತ್ಯದ ಪರಿಣಾಮ ಸಮರ್ಥವಾಗಿ ಅಭಿವ್ಯಕ್ತಗೊಂಡಿದೆ. ಹಾಗಾಗಿ ಇದು ಕುಟುಂಬ ನೋಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದರೆ ತಪ್ಪಲ್ಲ.
ಪೋಲಿಸ್ ಅಧಿಕಾರಿ ಮತ್ತು ನಿರ್ದೇಶಕರಾಗಿ ರಮೇಶ್ ಅರವಿಂದ್ ಇಷ್ಟವಾಗುತ್ತಾರೆ. ಇನ್ನು ಉಳಿದ ಪಾತ್ರಗಳು ಅದಕ್ಕೆ ಪೂರಕವಾಗಿ ನಿಲ್ಲುತ್ತವೆ. ರಚಿತಾರಾಮ್, ಪೂರ್ಣಾ, ಪ್ರಕಾಶ್ ಬೆಳವಾಡಿ, ಶೋಭರಾಜ್ ನಟನೆಯಲ್ಲಿ ನೈಜತೆಯೇ ಎದ್ದು ಕಾಣುತ್ತದೆ.
ಸತ್ಯ ಹೆಗಡೆ ಅವರ ಛಾಯಾಗ್ರಹಣದಲ್ಲಿ ತಂತ್ರಜ್ಞಾನದ ಸೊಗಸು ಎದ್ದು ಕಾಣುತ್ತದೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ ಕೌತುಕ ಹೆಚ್ಚಿಸುತ್ತಾ ಹೋಗುವಷ್ಟು ಪರಿಣಾಮಕಾರಿ. ಇನ್ನು ಕೂಲ್ ಫೈಟಿಂಗ್ ಸೃಷ್ಟಿಸಿರುವ ಜಾಲಿಬಾಸ್ಟಿನ್ ಕೂಡ ಗಮನ ಸೆಳೆಯುವುದು ಕೂಡ ವಿಶೇಷ.
-ಸ್ನೇಹಪ್ರಿಯ ನಾಗರಾಜ್