Snehapriya.com

June 9, 2025

ಸಿನಿಮಾ-ಗಾಸಿಪ್

100 ಸಿನಿಮಾಗೆ ಸುಧಾಮೂರ್ತಿ ಪ್ರಶಂಸೆ

Social Share :

‘ಇದು ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ; ಏಕೆಂದರೆ ಈ ಕಾಲದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಗೆ ವ್ಯಸನವಾಗಿಸಿಕೊಂಡವರ ಮೇಲೆ ಅವು ಯಾವ ರೀತಿ ಕೆಟ್ಟ ಪರಿಣಾಮವನ್ನೂ ಬೀರಬಲ್ಲವು ಎಂಬುದನ್ನು ಸಮರ್ಥವಾಗಿ ತೋರಿಸಲಾಗಿದೆ..’

ಹೀಗೆ ‘100’ ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದವರು ಇನ್ಫೋಸಿಸ್ ನ ಮಾತೃ ಎಂದೇ ಕರೆಸಿಕೊಳ್ಳುವ ಸುಧಾ ಮೂರ್ತಿ ಅವರು. ಸಹೃದಯ ಕೆಲಸಗಳನ್ನು ಸದಾ ಹೊಗಳುವ ಸುಧಾ ಮೂರ್ತಿ ಅವರು ಚಿತ್ರದ ನಿರ್ದೇಶಕ ರಮೇಶ್ ಅರವಿಂದ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರ ಕಾರ್ಯಗಳನ್ನು ಕೊಂಡಾಡಿದರು.

ಈ ಚಿತ್ರವು ಪ್ರತಿಯೊಬ್ಬ ನಾಗರಿಕರನ್ನು ಎಚ್ಚರಿಸುತ್ತದೆ. ಮುಖ್ಯವಾಗಿ ಮಹಿಳೆಯರು ಅಪರಿಚಿತರ ಬಗ್ಗೆ ಎಷ್ಟು ಎಚ್ಚರದಲ್ಲಿ ಇರಬೇಕು ಎಂಬುದನ್ನು ತೋರುತ್ತದೆ. ಈ ರೀತಿ ಸಂದೇಶ ನೀಡುವ ಚಿತ್ರ ಇತ್ತೀಚಿನ ದಿನಗಳಲ್ಲಿ ವಿರಳ ಎಂದು ಸುಧಾಮೂರ್ತಿ ಕೊಂಡಾಡಿದ್ದಾರೆ.

ರಮೇಶ್ ಅರವಿಂದ್ ಅವರು ನಟಿಸಿ, ನಿರ್ದೇಶನ ಮಾಡಿರುವ ‘100’ ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Social Share :

ಜೀವನವೇ ನಾಟಕವೆಂದು ಸಾರಲು ಹೊಸ ತಂಡದ ಮೆಲೋಡಿ ಡ್ರಾಮ

Social Share :

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಮಧುರಾಕ್ಷರ. ಆದರೆ ಅದನ್ನು ನಿರ್ವಹಣೆ ಮಾಡುವ ರೀತಿ ವಿಭಿನ್ನತೆ ಇರುತ್ತದೆ. ಹಲವು ಬಾರಿ ಅದು ಕಷ್ಟಕ್ಕೆ ಸಹ ದೂಡಬಹುದು. ಮದುವೆಯ ಸಂದರ್ಭದಲ್ಲಿ ನೆಂಟರು ಮತ್ತು ಸ್ನೇಹಿತರು ಯಾವ ಪಾತ್ರವಹಿಸಬಲ್ಲರು ಅವರ ಅವಶ್ಯಕತೆ ಎಷ್ಟು ಎಂಬುದು ತಿಳಿಯಬೇಕಾದರೆ ‘ಮೆಲೋಡಿ ಡ್ರಾಮ’ ನೋಡಲೇಬೇಕು..

ಇದು ಹೊಸ ತಂಡದ ಕಥೆ. ಭರವಸೆ ಮತ್ತು ಪ್ರೀತಿ ಎಷ್ಟು ಗಟ್ಟಿ ಎಂಬುದನ್ನು ಚಿತ್ರವು ಬಿಂಬಿಸುತ್ತದೆ. ‘ ನಿನ್ನ ಜೊತೆ ನನ್ನ ಕಥೆ’ ಎಂಬ ಟ್ಯಾಗ್ ಲೈನ್ ಹೊಂದಿರುವ ಚಿತ್ರದಲ್ಲಿ ಆವರಿಸಿರುವುದು ತುಂಬು ಪ್ರೀತಿ.

ಮಂಜುಕಾರ್ತಿಕ್.ಜಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರಿಗೆ ಎರಡನೇ ಅನುಭವ. ರಿಯಲ್ ಎಸ್ಟೇಟ್ ಉದ್ಯಮಿ ನಂಜುಂಡ ರೆಡ್ಡಿ ಪ್ರೇಮ್ ಸ್ಟುಡಿಯೋ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದು ಹೊಸ ಪ್ರಯತ್ನ. ಬದುಕಿನಲ್ಲಿ ಸ್ನೇಹ ಹಾಗೂ ನಂಬಿಕೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಈ ರೀತಿ ಮಾಡದಿದ್ದರೆ ಏನಾಗುತ್ತೇ? ಎಂಬ ಅಂಶ ಸಿನಿಮಾದಲ್ಲಿ ಕಾಡುತ್ತದೆ. ಇಲ್ಲಿ ಎರಡು ಪಾತ್ರಗಳು ಪರಿಚಯಗೊಳ್ಳುತ್ತವೆ. ಒಂದು ಹಂತದಲ್ಲಿ ಇವರಿಬ್ಬರಿಗೂ ಸಂಬಂಧವಿದೆ ಎಂಬುದು ಗೊತ್ತಾಗುತ್ತದೆ. ಆದರೆ ಅದು ಏನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು ಎಂದರು ನಿರ್ದೇಶಕ ಮಂಜು ಕಾರ್ತಿಕ್.

ಸತ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಇವರ ಎದುರು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಸುಪ್ರೀತಾ ಸತ್ಯನಾರಾಯಣ್ ನಟಿಸುತ್ತಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ರಂಗಾಯಣ ರಘು, ಅನು ಪ್ರಭಾಕರ್, ಕಿಶೋರ್,‌ ಪ್ರಶಾಂತ್‌ ಸಿದ್ದಿ ನಟನೆ ಇದೆ.

ಐದು ಹಾಡುಗಳಿಗೆ ಜಯಂತ್‌ ಕಾಯ್ಕಿಣಿ, ಯೋಗರಾಜ ಭಟ್, ಹೃದಯ ಅವರ ಸಾಹಿತ್ಯವಿದೆ. ಸಂಗೀತ ಕಿರಣ್‌ ರವೀಂದ್ರನಾಥ್ ಅವರದಾಗಿದೆ. ಮೈಸೂರು, ಮಡಿಕೇರಿ, ಕಾರವಾರ, ಹುಬ್ಬಳ್ಳಿ, ಬಿಜಾಪುರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ. ಜೀವ ಪ್ರಸನ್ನ ಛಾಯಾಗ್ರಹಣ, ಆರ್ ಮಂಜು ಸಂಕಲನ, ರಾಮ್ ದೇವ್ ಸಾಹಸ, ಮನು ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಅಂದ ಹಾಗೆ ಜನವರಿಯೊಳಗೆ ಶೂಟಿಂಗ್ ಮುಗಿಸಿ, ಯುಗಾದಿಗೆ ಚಿತ್ರವನ್ನು ಬಿಡುಗಡೆ ಮಾಡುವ ಆಶಯ ತಂಡಕ್ಕಿದೆ. ಪ್ರಚಾರದ ಸಲುವಾಗಿ ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು.

Social Share :

100 ಚಿತ್ರ ವಿಮರ್ಶೆ : ಜಾಲತಾಣ ಮಹಾಜಾಣ ಕಾಂಚಾಣ ಅನಾವರಣ

Social Share :

Rating 4/5

ಜಾಲತಾಣ ಮಹಾಜಾಣ ಕಾಂಚಾಣ ಅನಾವರಣ

* ಕುಟುಂಬ ನೋಡಲೇ ಬೇಕು

* ಆಧುನಿಕ ಸವಾಲುಗಳ ಪರಿಣಾಮ

* ಜಾಲತಾಣ ಸೃಷ್ಟಿಸುವ ವೈಪರೀತ್ಯ

* ಸಮರ್ಥನೆ ಮತ್ತು ಅಭಿವ್ಯಕ್ತಿಗೆ

ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಅಸಹಾಯಕತೆಯನ್ನೂ ಸರಿಯಾಗಿ ವ್ಯಕ್ತಪಡಿಸಲಾಗದ ಅನೇಕ ಸಂಗತಿಗಳಿವೆ. ‘ಗುಟ್ಟು ರಟ್ಟಾದರೆ ಜೀವಕ್ಕೆ ಆಪತ್ತು’ ಎಂಬುದು ಸಾಮಾನ್ಯ ಸಂಗತಿಯೇ ಅಲ್ಲ.. ಅದೊಂದು ಕಠೋರ ವಾಸ್ತವ..

ಆಧುನಿಕ ಬೆಳವಣಿಗೆಯಿಂದ ಕೈಗೆ ದಕ್ಕಿರುವ ಮೊಬೈಲ್ ಫೋನ್ ವರವಾಗುವುದಕ್ಕೆ ಬದಲಾಗಿ ಶಾಪವಾದರೆ ಏನಾಗುತ್ತದೆ. ಪಿಸು ಮಾತುಗಳು ಗುಟ್ಟಾಗಿ ಉಳಿಯದೆ ಡಂಗುರವಾದರೆ ಏನು ಮಾಡುವುದು..

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕಾದರೂ ‘100’ನ್ನು ಒಮ್ಮೆ ನೋಡಲೇಬೇಕು. ತುಂಬು ಕುಟುಂಬ ಹೊಂದಿರುವ ಆದರ್ಶ ವ್ಯಕ್ತಿತ್ವದ ಪೊಲೀಸ್ ಅಧಿಕಾರಿಯ ತಣ್ಣಗಿನ ಹೋರಾಟ ಇಲ್ಲಿದೆ. ಜೊತೆಗೆ ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದ ಅನೇಕ ಮಜಲುಗಳ ಅಭಿವ್ಯಕ್ತಿಯೂ ಇದೆ.

ಅದಮ್ಯ ಕುಟುಂಬ ಪ್ರೇಮ ಹೊಂದಿರುವ ವಿಷ್ಣು ಎಂಬ ಒಳ್ಳೆ ಮನಸ್ಸಿನ ಪೊಲೀಸ್ ಅಧಿಕಾರಿಗೆ ಕರ್ತವ್ಯ ನಿರ್ವಹಣೆಯ ಸವಾಲಿನಲ್ಲೇ ‘ಕಳ್ಳ ಕಿವಿ’ಯಾಗುವ ಅನಿವಾರ್ಯತೆ ಎದುರಾಗುತ್ತದೆ.. ಅದು ಒಳ್ಳೆಯದಕ್ಕೂ ಮತ್ತು ಕೆಟ್ಟದೆಂಬ ಒಳ್ಳೆಯದಕ್ಕೂ ಸಹಾಯ ಮಾಡುತ್ತಿರುವಾಗಲೇ.. ಆ ಅಧಿಕಾರಿ ಕುಟುಂಬದ ಸದಸ್ಯರೇ ಸಾಮಾಜಿಕ ಜಾಲತಾಣದ ವ್ಯಸನಕ್ಕೆ ಬಿದ್ದು ವಿಷ ವರ್ತುಲಕ್ಕೆ ಸಿಲುಕಿದ ವಿಷಯ ತಿಳಿಯುತ್ತದೆ..

ವ್ಯವಸ್ಥೆ ಮತ್ತು ಕುಟುಂಬ ಎರಡನ್ನೂ ಉಳಿಸುವ ಸವಾಲಿನಲ್ಲಿ ವಿಷ್ಣು ತಳೆಯುವ ನಿರ್ಧಾರ ಮತ್ತು ಜಾಣ್ಮೆ ಚಿತ್ರದ ಥ್ರಿಲ್ಲಿಂಗ್ ವಿಷಯಗಳು. ಆರಂಭಿಕ ಪರಿಚಯದ ಹಾಡು ಹೊರತು ಪಡಿಸಿ ಹಾಡುಗಳೇ ಇಲ್ಲದ ಸಿನಿಮಾ ನೋಡುತ್ತಾ ನೋಡುತ್ತಲೇ ಕುತೂಹಲ ಇಮ್ಮಡಿಯಾಗುತ್ತದೆ. ಈ ಗುಣದಿಂದ ಚಿತ್ರ ಆರಂಭವಾಗುವುದು ಮತ್ತು ಮುಗಿಯುವುದು ಗೊತ್ತೇ ಆಗುವುದಿಲ್ಲ.. ಪೊಲೀಸ್ ವ್ಯವಸ್ಥೆಯಲ್ಲಿ ಅನೇಕ ತಮಾಷೆಯ ವಿಷಯಗಳೂ ಇವೆ ಎಂಬುದನ್ನು ಎತ್ತಿ ತೋರಿಸಿರುವುದು ವಿರಳ ಸಂಗತಿಯಾಗಿದೆ.

ಸಾಮಾಜಿಕ ಜಾಲತಾಣದ ವೈಪರಿತ್ಯದ ಪರಿಣಾಮ ಸಮರ್ಥವಾಗಿ ಅಭಿವ್ಯಕ್ತಗೊಂಡಿದೆ. ಹಾಗಾಗಿ ಇದು ಕುಟುಂಬ ನೋಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದರೆ ತಪ್ಪಲ್ಲ.

ಪೋಲಿಸ್ ಅಧಿಕಾರಿ ಮತ್ತು ನಿರ್ದೇಶಕರಾಗಿ ರಮೇಶ್ ಅರವಿಂದ್ ಇಷ್ಟವಾಗುತ್ತಾರೆ. ಇನ್ನು ಉಳಿದ ಪಾತ್ರಗಳು ಅದಕ್ಕೆ ಪೂರಕವಾಗಿ ನಿಲ್ಲುತ್ತವೆ. ರಚಿತಾರಾಮ್, ಪೂರ್ಣಾ, ಪ್ರಕಾಶ್ ಬೆಳವಾಡಿ, ಶೋಭರಾಜ್ ನಟನೆಯಲ್ಲಿ ನೈಜತೆಯೇ ಎದ್ದು ಕಾಣುತ್ತದೆ.

ಸತ್ಯ ಹೆಗಡೆ ಅವರ ಛಾಯಾಗ್ರಹಣದಲ್ಲಿ ತಂತ್ರಜ್ಞಾನದ ಸೊಗಸು ಎದ್ದು ಕಾಣುತ್ತದೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ ಕೌತುಕ ಹೆಚ್ಚಿಸುತ್ತಾ ಹೋಗುವಷ್ಟು ಪರಿಣಾಮಕಾರಿ. ಇನ್ನು ಕೂಲ್ ಫೈಟಿಂಗ್ ಸೃಷ್ಟಿಸಿರುವ ಜಾಲಿಬಾಸ್ಟಿನ್ ಕೂಡ ಗಮನ ಸೆಳೆಯುವುದು ಕೂಡ ವಿಶೇಷ.

-ಸ್ನೇಹಪ್ರಿಯ ನಾಗರಾಜ್

Social Share :

ಭರಪೂರ ಮನರಂಜನೆ ಜೊತೆಗೆ ಎಚ್ಚರಿಕೆ ಗಂಟೆ ಹೊಡೆಯುವ 100

Social Share :

ಸದಾ ಕಾಲವೂ ಒಂದಿಲ್ಲೊಂದು ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮ ನ್ನು ತೊಡಗಿಸಿಕೊಳ್ಳುವ ಕನ್ನಡದ ಸೌಮ್ಯ ನಟ ರಮೇಶ್ ಅರವಿಂದ್ ಅವರು ಸದಾಶಯದ ನಿರ್ಮಾಪಕ ರಮೇಶ್ ರೆಡ್ಡಿ ಅವರ ಜೊತೆ ಸೇರಿ ಈ ಬಾರಿ ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ಮಾಡಿ ತೆರೆಯ ಮೇಲೆ ತಂದಿದ್ದಾರೆ.

ಅದೇ 100 ಅಂದರೆ ನಾವು ಕೆಲವೊಂದು ಸಮಸ್ಯೆಗೆ ಪೊಲೀಸರ ಮೊರೆ ಹೋಗ ಬೇಕಾಗುತ್ತದೆ. ಅದನ್ನು ಚಿತ್ರದ ಶೀರ್ಷಿಕೆ ಸಾಂಕೇತಿಸುತ್ತದೆ. ಹಾಗೆಯೇ ಚಿತ್ರದ ಆಶಯಗಳೂ ಜನರ ರಕ್ಷಣೆ ಯ ಕುರಿತ್ತದ್ದೇ ಆಗಿರುತ್ತದೆ. ಹಾಗಾಗಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಚಿತ್ರವನ್ನು ಈಗಾಗಲೇ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರ ಬಿಡುಗಡೆಗೆ ಪೂರ್ವ ಭಾವಿಯಾಗಿ ನಡೆದ ಪ್ರಚಾರದ ಸಭೆಯಲ್ಲಿ ಚಿತ್ರ ತಂಡವು ‘100’ರ ಮಹತ್ವ ಮತ್ತಿತರ ವಿಷಯಗಳನ್ನು ಹೆಮ್ಮೆಯಿಂದಲೇ ಹೇಳಿಕೊಂಡಿತು. ಚಿತ್ರದ ನಿರ್ದೇಶನದ ಹೊಣೆ ಹೊತ್ತು ಮುಖ್ಯ ಪಾತ್ರದಲ್ಲಿ ನಟಿಸಿರುವ ರಮೇಶ್ ಅರವಿಂದ್ ಅವರು ಪ್ರತಿ ಸಿನಿಮಾ ನಮಗೆ ಪರೀಕ್ಷೆಯಾಗಿರುತ್ತದೆ.. ನೀವು ಎಷ್ಟು ಅಂಕಗಳನ್ನು ಕೊಡಬಹುದು ‌ಎಂಬ ಕುತೂಹಲ ಇದ್ದೇ ಇರುತ್ತದೆ. ಒಂದು ಮನರಂಜನೆಯ ಜೊತೆಗೆ ಸಂದೇಶ ಹೇಳುವ ಪ್ರಯತ್ನ ಇಲ್ಲಿದೆ ಎಂದರು.

ಇದು ಪಕ್ಕಾ ಕಮರ್ಷಿಯಲ್ ಚಿತ್ರ. ಹೊಸದಾದ ಪ್ರಯತ್ನ. ಈ ಪ್ರಯತ್ನಕ್ಕೆ ಗಟ್ಟಿಯಾಗಿ ಕೈ ಜೋಡಿಸಿದವರು ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು. ಸೂರಜ್ ಪ್ರೊಡಕ್ಷನ್ ಮೂಲಕ ಮೂಡಿ ಬಂದಿರುವ ಚಿತ್ರವನ್ನು ಪ್ರತಿಯೊಬ್ಬರು ನೋಡಲೇ ಬೇಕು. ಏಕೆಂದರೆ ಈಗ ಕೈಯಲ್ಲಿ ಮೊಬೈಲ್ ನಮ್ಮನ್ನು ಆಳುತ್ತದೆ. ಅದು ಮಾಡುವ ಅವಾಂತರ, ಆಘಾತ, ತೊಂದರೆ ಎಲ್ಲವನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ ಎಂದು ಹೇಳುತ್ತಾ ಹೋದರು ರಮೇಶ್ ಅರವಿಂದ್.

ನಮಗೆ ಮನೆ ಮಗಳ ರೀತಿಯ ಹುಡುಗಿ ಬೇಕಾಗಿತ್ತು ಹಾಗಾಗಿ ಪೂರ್ಣ ಆಯ್ಕೆಯಾದರು. ಚಿತ್ರದಲ್ಲಿ ನಟನೆಗೆ ಅತ್ಯುತ್ತಮ ಸಾಮರ್ಥ್ಯ ಹಾಕಿದ್ದಾರೆ ಎಂದು ಮುಖ್ಯ ಪಾತ್ರದಲ್ಲಿರುವ ಕೇರಳ ಮೂಲದ ನಟಿ ಪೂರ್ಣಾ ಅವರನ್ನು ಪರಿಚಯಿಸಿದರು. ಹಾಗೆಯೇ ರಚಿತಾ ರಾಮ್ ಮಗಳ ಪಾತ್ರ ಮಾಡಿದ್ದಾರೆ. ಆಕೆಯಂತೂ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿತ್ವ ಎಂದರು.

ನನಗೆ ಕಥೆ ಕೇಳಿದ ತಕ್ಷಣವೇ ಇಷ್ಟವಾಯ್ತು ಎಂದರು ನಿರ್ಮಾಪಕ ರಮೇಶ್ ರೆಡ್ಡಿ. ಮೊಬೈಲ್ ನಿಂದ ಆಗುವ ಅನಾಹುತದ ಬಗ್ಗೆ ಚಿತ್ರ ಜನರಿಗೆ ಎಚ್ಚರಿಕೆ ನೀಡುತ್ತದೆ. ಹಾಗಾಗಿ ಅತ್ಯುತ್ತಮ ಸಂದೇಶ ಇರುವ ಚಿತ್ರವನ್ನು ಮಾಡಿದ ಖುಷಿ ನನ್ನದು ಎಂದರು.

ನನಗೆ ಕನ್ನಡ ಕಷ್ಟವಿತ್ತು. ರಮೇಶ್ ಸರ್ ಹೇಳಿಕೊಟ್ಟರು. ಅದು ಖುಷಿಯ ವಿಚಾರ. ಒಂದು ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ನನ್ನದು ಎಂದು ಹೇಳುತ್ತಾ ಹೋದರು ನಟಿ ಪೂರ್ಣ.

19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ‘100’ ಪ್ರೇಕ್ಷಕರಲ್ಲಿ ಈಗಾಗಲೇ ಅತೀವ ಕುತೂಹಲ ತುಂಬಿದೆ ಎಂಬುದು ಸುಳ್ಳಲ್ಲ.

Social Share :

ಪ್ರೇಮಂ ಪೂಜ್ಯಂ ಡಾಕ್ಟರ್ ಸಿನಿ ಪಯಣದ ಯಶೋಗಾಥೆ

Social Share :

‘ಓ ದೇವರೇ ಪ್ರಯತ್ನದ ಬೆಲೆಯನ್ನು ತೆತ್ತಾಗ ನೀನು ಪ್ರತಿಯೊಂದನ್ನೂ ಅನುಗ್ರಹಿಸುತ್ತೀ..’

ಯಾವುದೇ ಪ್ರಯತ್ನ ಯಶಸ್ವಿಯಾದಾಗ ದಾರ್ಶನಿಕ ಲಿಯೋನಾರ್ಡ್ ಡಾ.ವಿಂಚಿ ಅವರ ಈ ಮಾತು ನೆನಪಾಗುತ್ತದೆ.. ಇಲ್ಲಿ ಎರಡು ಯಶೋಗಾಥೆಗಳಿವೆ. ಒಂದು ವೈದ್ಯಲೋಕದ ಸಾಧನೆ ಮತ್ತೊಂದು ಕ್ರಿಯಾಶೀಲ ನಡೆಯ ಅಚ್ಚರಿ. ಇವೆರಡರ ನಾಯಕ ಒಬ್ಬರೇ..

ಅವರು ಡಾ.ರಾಘವೇಂದ್ರ. ಮಂಗಳೂರಿನಲ್ಲಿ ಹೆಸರಾಂತ ನರರೋಗ ತಜ್ಞರಾಗಿರುವ ರಾಘವೇಂದ್ರ ಅವರಿಗೆ ಸಿನಿಮಾ ಕ್ರೇಜ್ ಹೇಗೆ ಹುಟ್ಟಿಕೊಂಡಿತೋ ಏನೋ ಈಗ ಅವರು ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕರ ಸಾಲಿಗೆ ಸೇರುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ಅವರ ಅನುಪಮ ಸೃಷ್ಟಿಯ ಚಿತ್ರ ‘ಪ್ರೇಮಂ ಪೂಜ್ಯಂ’.

ಪ್ರೇಮದ ನೆಲೆ ಮತ್ತು ಸೆಲೆ ಯಾವಾಗಲೂ ವಿಭಿನ್ನ. ಅದು ಹೀಗೆ ಎಂದು ತರ್ಕಕ್ಕೆ ನಿಲುಕುವುದೇ ಇಲ್ಲ. ಪ್ರೇಮವನ್ನು ಎಷ್ಟು ಬೇಕಾದರೂ ಹೇಗೆ ಬೇಕಾದರೂ ನಿರೂಪಿಸಬಹುದು. ಆದರೆ ಪ್ರೇಮವೇ ಮಹಾಕಾವ್ಯ ಎಂದು ನಿರೂಪಿಸಲು ತಪ್ಪಸ್ಸು ಬೇಕಾಗುತ್ತದೆ.

ಪ್ರೇಮಂ ಪೂಜ್ಯಂ ಒಂದು ಅಪರೂಪದ ಕಲಾಕೃತಿ. ಏಕೆಂದರೆ ಇಲ್ಲಿ ಪ್ರೇಮದ ಆರಾಧನೆಯೇ ಮಹೋನ್ನತ ಉದ್ದೇಶಗಳನ್ನು ಸಾಧಿಸಿದಂತೆ ಕಾಣುತ್ತದೆ. ಪ್ರೇಮದ ತೀವ್ರತೆಯನ್ನು ಎಲ್ಲಿಯೂ ಕಾಣಿಸದೆ ಅದುಮಿಟ್ಟ ಪ್ರೇಮದ ವೈಪರೀತ್ಯಗಳನ್ನು ದಾಖಲಿಸಿರುವುದು ಚಿತ್ರದ ಹೆಗ್ಗಳಿಕೆ.

ದೈಹಿಕ ಆಕರ್ಷಣೆಯ ಹೊರತಾದ ಪವಿತ್ರ ಪ್ರೇಮವೂ ಇರುತ್ತದೆ ಎಂಬುದು ಅತ್ಯಂತ ವೇಗದ ಯುಗದಲ್ಲಿ ಕಾಣಿಸುವುದು ಸಾಮಾನ್ಯವಲ್ಲ; ಪ್ರೇಮದ ಆರಾಧನೆ ಕೇವಲ ಪ್ರೇಮವಲ್ಲ; ಅದು ಕಾಯಕದ ಜೊತೆಯೂ ಇರುತ್ತದೆ. ಪ್ರೇಮದ ಧ್ಯಾನ ಕೇವಲ ಭಗ್ನತೆ ಮತ್ತು ವ್ಯಸನಗಳೂ ಅಲ್ಲ; ಅದನ್ನು ಸಾಧನೆಯ ಮೂಲಕವೂ ಸಾಕ್ಷಾತ್ಕರಿಸಬಹುದು ಎಂಬುದನ್ನು ಅಚ್ಚುಕಟ್ಟಾಗಿ ಬಿಂಬಿಸಿರುವುದೇ ಇಲ್ಲಿ ಮುಖ್ಯಾಂಶವಾಗುತ್ತದೆ.

ಸ್ಪರ್ಶದ ಲವಲೇಶವೂ ಇಲ್ಲದೆ; ಮಾತುಗಳ ಅಬ್ಬರವೂ ಇಲ್ಲದೆ; ಮೋಹಕ ನಡೆ ಮತ್ತು ಕುತೂಹಲ ಎರಡರಿಂದಲೇ ಅನಂತ ಸಾಧ್ಯತೆಗಳನ್ನು ಕಾಣಿಸಿರುವುದು ಸಾಮಾನ್ಯ ವಿಷಯವೇ..?

ವೈದ್ಯ ವೃತ್ತಿ ದೊಡ್ಡ ಸಹನೆ ಮತ್ತು ತ್ಯಾಗವನ್ನು ಕಲಿಸುತ್ತದೆ. ಅವೆರಡೂ ಇಲ್ಲಿ ತಳುಕು ಹಾಕಿಕೊಂಡಿರುವುದು ಆಕಸ್ಮಿಕವೇನಲ್ಲ. ಏಕೆಂದರೆ ಕೋವಿಡ್ ಮಹಾಮಾರಿ ಅಬ್ಬರಿಸಿದ ದಿನಗಳಲ್ಲಿ ಪತ್ನಿ ಗಭೀಣಿಯಾದರೂ ದೂರವಿದ್ದು, ಮಗ ಹುಟ್ಟಿದ ಬಳಿಕ ಆ ಮಗುವನ್ನು ವರ್ಷಗಟ್ಟಲೆ ಮುಟ್ಟದೇ ದೂರವಿದ್ದು ತ್ಯಾಗ ಮೆರೆದವರು ಡಾ. ರಾಘವೇಂದ್ರ. ಆಗ ಕೋವಿಡ್ ಸೇನಾನಿಗಳು ಮನೆ ಮಠ ಬಿಟ್ಟು ಕಾರ್ಯ ನಿರ್ವಹಿಸಿದ್ದು ಇತಿಹಾಸದ ಪುಟಗಳಲ್ಲಿದೆ. ಆ ಸಾಲಿನಲ್ಲಿ ಪ್ರೇಮಂ ಪೂಜ್ಯಂ ನ ಸೃಷ್ಟಿಕರ್ತರಾದ ಡಾ.ರಾಘವೇಂದ್ರ ಸಹ ಇದ್ದರು ಎಂಬುದು ಹೆಗ್ಗಳಿಕೆ ಮತ್ತು ಅವರ ಸಹನಶೀಲತೆಗೆ ಒಂದು ಉದಾಹರಣೆ.

ಮಧುರವಾದ ಪ್ರೇಮವನ್ನು ಪವಿತ್ರವೆಂದೂ ನಿರೂಪಿಸಲು ಒಂದು ಗುಂಡಿಗೆ ಬೇಕು. ಅದನ್ನು ಅನುಭವಿಸಲು ಸಹ ಅದೇ ಪರಿಪಾಲನೆ ಮಾಡಬೇಕು. ಪ್ರೇಮಿಯೊಬ್ಬ ಉತ್ಕಟ ಭಾವನೆಗಳಿಲ್ಲದೆ.. ಎಲ್ಲಿಯೂ ಪೊಸೆಸಿವ್ ಗೆ ಒಳಗಾಗದೆ ಪ್ರೇಮಿಸಲು ಸಾಧ್ಯವೇ..
ಉದಾತ್ತ ಗುಣಗಳಿದ್ದಾಗ ಮಾತ್ರ ಅದು ಸಾಧ್ಯವಾಗಬಹುದು..

ಪ್ರೇಮಂ ಪೂಜ್ಯಂ ವರ್ಣನೆಗೆ ನಿಲುಕದೇ ಹೋಗುವುದು ಇದೇ ಕಾರಣದಿಂದ. ಅದಕ್ಕೆ ಈ ಕಾಲದ ವೇಗವೂ ಸೇರುತ್ತದೆ. ಪಾವಿತ್ರ್ಯವೆಂದರೆ ಏನು ಎಂಬುದರ ಪ್ರಶ್ನಾರ್ಹವಾಗಿ ಹೋಗಿರುವ ಸಂಗತಿ ಪದೇ ಪದೇ ಕಾಡುತ್ತದೆ..

-ಸ್ನೇಹಪ್ರಿಯ ನಾಗರಾಜ್

Social Share :

ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾಗೆ ಮೆಘಾಸ್ಟಾರ್ ಹಾರೈಕೆ

Social Share :

ತೆಲುಗಿನ ಹೆಸರಾಂತ ಸಂಗೀತ ನಿರ್ದೇಶಕ ಕೋಟಿ ಅವರ ಪುತ್ರ ಈಗ ಸಿನಿಮಾ ಹೀರೋ.. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಲಿರುವ ಚಿತ್ರದ ಹೆಸರೂ ಸಹ ವಿಶೇಚವಾಗಿದೆ. ಅದು 11:11

ಸಂಖ್ಯೆ ಸೂಚಕವಾಗಿರುವ ಹನ್ನೊಂದು ಡಾಟ್ ಹನ್ನೊಂದು ಚಿತ್ರದ ವಿಶೇಷತೆಗಳಿಗೆ ಲೆಕ್ಕವೇ ಇಲ್ಲ. ಕೋಟಿ ಚಿರಂಜೀವಿ ಅವರ ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದರು. ಅದೇ‌ ಆತ್ಮೀಯತೆಯ ಹಿನ್ನೆಲೆಯಲ್ಲಿ ಮೆಘಾಸ್ಟಾರ್ ಚಿರಂಜೀವಿ ಅವರು ಈಚೆಗೆ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು.

ಅಂದ ಹಾಗೆ ಕೋಟಿ ಅವರ ಪುತ್ರ ರಾಜೀವ್ ಸಲೂರಿ ಈ ಚಿತ್ರದ ನಾಯಕ ನಟ. ಟೈಗರ್ ಹಿಲ್ಸ್ ಹಾಗೂ ಸ್ವಸ್ತಿಕ್ ಫಿಲ್ಸ್ಂನ ಬ್ಯಾನರ್ ಅಡಿಯಲ್ಲಿ ಚಿತ್ರವು ನಿರ್ಮಾಣವಾಗುತ್ತಿದೆ. ಬಳ್ಳಾರಿ ಮೂಲದ ಗಜುಲ ವೀರೇಶ್ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಗಾಲಿ ಸಂದೀಪ್ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರಕಥೆ ಬರೆದಿರುವ ಕಿಟ್ಟು-ನಲ್ಲೂರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದು ಪ್ಯಾನ್ ಇಂಡಿಯಾ ಮಾದರಿ ಚಿತ್ರ ಎಂಬುದು ನಿರ್ದೇಶಕರ ಮಾಹಿತಿ. ಪವನ್.ಕೆ.ಅಚಲ ಸಂಭಾಷಣೆ ಬರೆದಿದ್ದಾರೆ. ವಿಷ್ಣು ಸೂರ್ಯಗುಂಟ ಕಾರ್ಯಕಾರಿ ನಿರ್ಮಾಪಕ. ಸಾಯಿ ಸತೀಶ್, ಪಾರ್ವತನೇನಿ ಹಾಗೂ ರಾಮ್ ಬಾಬು ಪ್ರಚಾರದ ಹೊಣೆಯ ಸಾಲಿನಲ್ಲಿ ಇದ್ದಾರೆ.

ನಾಯಕ ನಟ ಸ್ಟೈಲೀಶ್ ಆಗಿ ಶೂಟ್ ಕೇಸ್ ಹಿಡಿದು ಫಸ್ಟ್ ಲುಕ್ ನ್ನು ಸಹ ಮೇಘಾಸ್ಟಾರ್ ಅನಾವರಣಗೊಳಿಸಿದ್ದಾರೆ. ಫಸ್ಟ್ ನೋಡಿ ಖುಷಿಯಾಗಿರುವ ಚಿರಂಜೀವಿ ಈ ಚಿತ್ರ ಅತ್ಯುತ್ತಮವಾಗಿ ಮೂಡಿ ಬರಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ರಾಜೀವ್ ಸಲೂರಿ ಹಾಗೂ ವರ್ಷ ಮುಖ್ಯ ಪಾತ್ರದಲ್ಲಿರುವ ಚಿತ್ರದ ಇತರ ಪಾತ್ರ ವರ್ಗದಲ್ಲಿ ಕೋಟಿ ಸಲೂರಿ, ಸದನ್, ಲಾವಣ್ಯ, ರಾಜರವೀಂದ್ರ, ರಾಜಶ್ರೀ ಇದ್ದಾರೆ. ಮೆಲೋಡಿ ಕಿಂಗ್
ಮಣಿಕಂಠ ಶರ್ಮ ಸಂಗೀತ, ಈಶ್ವರ್ ಛಾಯಾಗ್ರಹಣವಿದೆ. ಚಿತ್ರೀಕರಣದ ಸಿದ್ಧತೆ ಮಾಡಿಕೊಂಡಿರುವ ತಂಡ ಬಿಡುಗಡೆಯ ದಿನಾಂಕವನ್ನೂ ಸದ್ಯದಲ್ಲಿಯೇ ಘೋಷಿಸಲಿದೆ.

Social Share :

ಸಾಮಾಜಿಕ ಜವಾಬ್ದಾರಿಯ ಲಕ್ಷ್ಯ

Social Share :

ಪತ್ರಕರ್ತರಾಗಿದ್ದ ರವಿ ಸಾಸನೂರು ಈಗ ಚಿತ್ರ ನಿರ್ದೇಶಕ. ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಮೂಡಿ ಬಂದ ಅವರ ಚಿಂತನೆ ಸಿನಿಮಾವಾಗಿದೆ.

ಹೌದು ರವಿ ಸಾಸನೂರು ಆಸಕ್ತಿಯಿಂದ ತಳೆದ ಲಕ್ಷ್ಯವೇ ಚಿತ್ರವಾಗಿದೆ. ಅದೇ ‘ಲಕ್ಷ್ಯ’. ಚಿತ್ರ ಇದೇ ವಾರ ಬಿಡುಗಡೆಗೆ ಸಜ್ಜಾಗಿದೆ. ಅಚ್ಚರಿ ಎಂದರೆ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಭಾಷೆ ಸೇರಿದಂತೆ ಥ್ರಿಲ್ಲಿಂಗ್ ವಿಷಯಗಳನ್ನು ಸವಿಯಬಹುದು.. ಅಷ್ಟಕ್ಕೂ ಇದು ಮನರಂಜನಾತ್ಮಕ ಚಿತ್ರ. ಭರಪೂರ ಮನರಂಜನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ವಿಷಯ ಕೂಡ ವ್ಯಕ್ತವಾಗುತ್ತದೆ. ನನ್ನ ಜೊತೆಗೆ ತಾಂತ್ರಿಕತೆಯಲ್ಲಿ ಬಲವಾಗಿರುವ ಶಿವಕುಮಾರ್ ಸಹಕಾರ ಮರೆಯುವಂತಿಲ್ಲ ಎಂಬ ವಿವರ ನೀಡಿದರು ರವಿ ಸಾಸನೂರು.

ಬೆಳಗಾವಿಯಲ್ಲಿ ಚಿತ್ರೀಕರಣ ನಡೆದ ವಿಷಯಗಳನ್ನು ಮರೆಯುವಂತಿಲ್ಲ; ಕುಂದಾ ನಗರಿಯ ವಿಶೇಷತೆ ಜೊತೆಗೆ ಗೋಕಾಕ್ ಫಾಲ್ಸ್ ವಿಭಿನ್ನವಾಗಿ ತೋರಿಸಲಾಗಿದೆ. ಭ್ರಷ್ಟಾಚಾರದ ವಿಷಯವೂ ಕಥೆಯಲ್ಲಿ ತಳುಕು ಹಾಕಿಕೊಂಡಿದೆ ಎಂದು ಹೇಳುತ್ತಾ ಹೋದರು.

ಮೂಡಲಮನೆ ಖ್ಯಾತಿಯ ಸಂತೋಷ್ ರಾಜ್ ಇಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮೂಡಲ ಮನೆ ಬಳಿಕ ಕಿರುಚಿತ್ರಗಳನ್ನು ಮಾಡಿದ್ದೆ. ರವಿ ಹಾಗೂ ಶಿವು ಇಲ್ಲಿ ಉತ್ತಮ ರೀತಿಯ ಪಾತ್ರವೊಂದನ್ನು ನೀಡಿದ್ದಾರೆ. ನಾನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ ತೃಪ್ತಿ ಇದೆ ಎಂದರು ಸಂತೋಷ್ ರಾಜ್.

ನಾನು ಕಳೆದ 15 ವರ್ಷಗಳಿಂದ ಸಂಕಲನಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಈಗ ರವಿ ಸಾಸನೂರು ಅವರ ಜೊತೆ ಸಹ ನಿರ್ದೇಶಕ ಆಗಿದ್ದು ಬಹಳವೇ ಖುಷಿ ಕೊಟ್ಟಿದೆ ಎಂದರು ಶಿವಕುಮಾರ್.

ಲಕ್ಷ್ಯ ನನ್ನ ಮೊದಲ ಸಿನಿಮಾ ಸಾವಿರಾರು ರೂ ಕೆಲಸ ಬಿಟ್ಟು ಸಮಾಜದಲ್ಲಿ ಜವಾಬ್ದಾರಿ ಮರೆತವರಿಗೆ ಬುದ್ಧಿ ಕಲಿಸುವ ತರಲೆ ಹುಡುಗನ ಪಾತ್ರ ನನ್ನದು ಎಂಬ ವಿವರ ಕೊಟ್ಟಿದ್ದು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟ ನಿತಿನ್ ಆದ್ವಿ.

ಹಿರಿಯ ನಟಿ ಮಾಲತಿಶ್ರೀ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ರವಿ ಮತ್ತು ಶಿವು ಸಿನಿಮಾ ಎಂಬ ಕನಸು ಕಟ್ಟಿ ಕೊಂಡ ಪ್ರತಿಭಾವಂತರು. ಅವರು ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ
ಗೋಕಾಕ್ ನಲ್ಲಿ ಕಷ್ಟ ಪಟ್ಟು ಸಿನಿಮಾ ಮಾಡಿದ್ರು.. ಕೊರೊನಾ ಕಷ್ಟ ಕೊಡ್ತು ನನ್ನದು ಒಳ್ಳೆ ಪಾತ್ರ. ಉತ್ತರ ಕರ್ನಾಟಕದ ಭಾಷೆಯೇ ಇದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.

ಅಕ್ಷರಾ ಫಿಲ್ಸಂನ ರಮೇಶ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ನವೆಂಬರ್ 18ರ ಗುರುವಾರ ರಾಯರ ಆಶೀರ್ವಾದದ ಜೊತೆ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದ ಭಾಗಗಳಿಗೆ ಚಿತ್ರಮಂದಿರ ಸಿಕ್ಕಿದೆ ಎಂಬ ವಿವರ ಕೊಟ್ಟರು.

ಜುವೆನ್ ಸಿಂಗ್ ಸಂಗೀತ ಚಿತ್ರಕ್ಕಿದೆ. ಆನಂದ್ ಶಿವಯೋಗಪ್ಪ ಬೆಂಬಲವೂ ಚಿತ್ರಕ್ಕಿದೆ. ಮುಖ್ಯವಾಗಿ ಈ ಚಿತ್ರವನ್ನು ಅತ್ಯಾಸಕ್ತಿಯಿಂದ ಕೈ ಹಿಡಿದು ಮೇಲಕ್ಕೆ ಎತ್ತಿದವರು ಸುಧೀರ್ ದೇವೇಂದ್ರ. ನಮ್ಮ ಉತ್ತರ ಕರ್ನಾಟಕದ ಮಂದಿಗೆ ಸಿನಿಮಾ‌ ಎಂದರೆ ಗೌರವ. ಇಲ್ಲಿ ನನ್ನ ದೊಡ್ಡ ಕಾರು ಬದಲಿಗೆ ಚಿಕ್ಕದಾದ ಗ್ರೀನ್ ಕಾರು ಬಳಕೆಯಾಗಿದೆ ಎಂದು ಚಿತ್ರದ ಆಶಯಗಳನ್ನು ಹೇಳುತ್ತಾ ಹೋದರು ಸುಧೀರ್ ದೇವೇಂದ್ರ.

ಚಿತ್ರದ ಟೀಸರ್ ಬಿಡುಗಡೆಗೆ ಬಂದಿದ್ದ ಹೆಸರಾಂತ ನಿರ್ದೇಶಕ ಪವನ್ ಒಡೆಯರ್ ಈಚೆಗೆ ಇಹಲೋಕ ತ್ಯಜಿಸಿದ ಮಹಾನ್ ಕನಸುಗಾರ ಪುನೀತ್ ರಾಜ್‍ಕುಮಾರ್ ಅವರ ಕನಸುಗಳನ್ನು ಮೆಲುಕು ಹಾಕಿದರು. ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು.

Social Share :

ಚಿತ್ರ ವಿಮರ್ಶೆ – ಪಾವಿತ್ರ್ಯ ಪ್ರೇಮದ ಸೊಬಗು ಹೃದಯವೇದಕ ಸಂಯೋಜನೆ

Social Share :

Rating :

ಪ್ರೇಮದ ಅನಂತ ಸಾಧ್ಯತೆಯ ನಡುವೆ ಪಾವಿತ್ರ್ಯತೆ ಲಾಸ್ಯವಾಡುತ್ತದೆ. ತ್ಯಾಗಮಹಿಯ ವಿನಮ್ರ ಪ್ರೇಮದ ಆಹ್ಲಾದಕರ ಪರಿಸ್ಥಿತಿಯ ನಡುವೆ ಪ್ರೇಮದ ಸಮ್ಮೋಹಿನಿಯ ಸಾಕ್ಷಾತ್ಕಾರವಾಗುತ್ತದೆ..

ಅದುವೆ ಪೂಜಿಸಲ್ಪಡುವ ಪ್ರೇಮ. ಇದನ್ನು ಪ್ರೇಮದ ಅತಿರಂಜಿತ ವೈಭವೀಕರಣ ಎನ್ನಲು ಬರುವುದಿಲ್ಲ; ಆದರೆ ಇದು ಪೂಜ್ಯ ಭಾವನೆಯ ಅತಿ ತ್ಯಾಗದ ಪ್ರತೀಕ ಎಂದು ಬೇಕಾದರೆ ಅನ್ನ ಬಹುದು..

ಹೆಸರೇ ಹೇಳುವಂತೆ ‘ಪ್ರೇಮಂ ಪೂಜ್ಯಂ’ ಎಂಬುದು ಉದ್ದಗಲಕ್ಕೂ ಗೋಚರವಾಗುತ್ತಾ ಹೋದರೂ ಅತಿಯಾದ ತ್ಯಾಗ ಮತ್ತು ಪ್ರೇಮದ ಬಗೆಗಿನ ನಿಷ್ಠೆ ಕೆಲವೊಮ್ಮೆ ಮನಮೋಹಕ ಮತ್ತು ಕೆಲವೊಮ್ಮೆ ಅತಿರಂಜಕವಾಗಿ ಕಾಣುತ್ತದೆ. ಪ್ರೇಮದ ತೀವ್ರತೆಯಲ್ಲಿಯೂ ಅದರ ನಿರರ್ಥಕತೆಯೂ ಎದ್ದು ಕಾಣುತ್ತದೆ.

ಶ್ರೀಹರಿ ಎಂಬ ಅಪರೂಪದ ವ್ಯಕ್ತಿತ್ವಕ್ಕೆ ಶ್ರದ್ಧಾಪೂರ್ವಕ ನಿರ್ವಹಣೆಯ ಅತಿ ಮಾನುಷ ಶಕ್ತಿಯೂ ಇರುತ್ತದೆ. ಇದರಿಂದ ಸ್ನೇಹಬಳಗ ಉದ್ಧಾರವಾಗಿ ಹೋಗುತ್ತದೆ. ಆದರೆ ಹೃದಯ ಆವರಿಸುವ ಶೆರ್ಲಿನ್ ಫರ್ನಾಂಡೀಸ್ ಎಂಬ ಏಂಜಲ್ ಹೆಚ್ಚು ಪ್ರಯಾಸ ಪಡದೆಯೂ ಕಳೆದು ಹೋಗುತ್ತಾಳೆ.

ಇಲ್ಲಿ ನಿರಾಪೇಕ್ಷೆಯಿಂದ ಆವರಿಸುವ ಧರ್ಮ ಯಾವ ಕೋನದಿಂದಲೂ ಸಹಕರಿಸುವುದಿಲ್ಲ; ಆದರೆ ಧರ್ಮದ ಅತ್ಯಾಸಕ್ತಿಯಿಂದಲೇ ಪ್ರೇಮದ ಸೊಬಗು ಎದ್ದು ಕಾಣುತ್ತದೆ.

ಒಬ್ಬ ಹೀರೋಗೆ ಬಿಲ್ಡಪ್ ಬರುವುದು ಹೇಗೆ ಎಂಬುದಕ್ಕೆ ಉತ್ತರಾರ್ಧದಲ್ಲಿ ಉತ್ತರ ಸಿಗುತ್ತದೆ. ವೈದ್ಯೋ ನಾರಾಯಣ ಹರಿ ಎಂಬ ಸೇವಾಕಾಂಕ್ಷೆ ಹೊಂದಿರುವ ಶ್ರೀಹರಿ ಎತ್ತರಕ್ಕೆ ಏರುವುದು ಸೇವೆಯ ಅದ್ವಿತೀಯ ಗುಣಗಳಿಂದ.

ನಿರ್ದೇಶಕ ರಾಘವೇಂದ್ರ ಸ್ವತಃ ವೈದ್ಯರಾಗಿರುವುದರಿಂದ ವೈದ್ಯಕೀಯ ಲೋಕದ ತಾಂತ್ರಿಕ ವಿಷಯಗಳು ಅಚ್ಚುಕಟ್ಟಾಗಿ ವಿವರಿಸಲ್ಪಡುತ್ತವೆ. ಯಾರಿಗೂ ಹೇಳದೆ ಗುಟ್ಟಾಗಿ ಬಚ್ಚಿಟ್ಟುಕೊಂಡ ಸಂವೇದನೆ ಹೃದಯದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರಬಲ್ಲದು ಎಂಬ ವಾಸ್ತವವನ್ನು ಪರಿಣಾಮಕಾರಿಯಾಗಿ ಬಿಂಬಿಸಿರುವುದು ವಿಶೇಷ.

ಇದು ಒಡೆದ ಹೃದಯದ ಮನಮೋಹಕ ಪ್ರೀತಿ. ಕೊನೆಯಲ್ಲಿ ‘ಬಂಧನ’ ನೆನಪಾಗುತ್ತದೆ. ಇಡೀ ಚಿತ್ರವನ್ನು ಮುಗ್ಧ ಸ್ನಿಗ್ಧವಾಗಿ ಆವರಿಸಿಕೊಂಡಿರುವ ಲವ್ಲಿಸ್ಟಾರ್ ಪ್ರೇಮ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಏಂಜಲ್ ಆಗಿ ಬೃಂದಾ ಆಚಾರ್ಯ ಅವರದು ಮನೋಜ್ಞ ಅಭಿನಯ. ಆಕೆಯ ಪ್ರತಿ ನಿಲುವಿನಲ್ಲೂ ಏಂಜಲ್ ಕಾಣಿಸುವುದು ನಿರ್ದೇಶಕರ ಕಲಾತ್ಮಕ ದೃಷ್ಟಿಕೋನಕ್ಕೆ ಹಿಡಿದ ಕೈಗನ್ನಡಿ. ಇನ್ನು ಗೆಳೆಯ ಬಳಗದಲ್ಲಿ ಸಾಧು ಕೋಕಿಲ ಮತ್ತು ಮಾಸ್ಟರ್ ಆನಂದ್ ಅವರ ತಮಾಷೆ ಗಂಭೀರ ಸನ್ನಿವೇಶಗಳಲ್ಲಿ ಯೂ ಹೃದಯ ತಿಳಿಗೊಳಿಸುವಂತೆ ನಗೆ ಆವರಿಸುತ್ತದೆ. ‘ಸ್ನೇಹಂ ಪೂಜ್ಯಂ’ ಎಂಬುದರ ಸಾರ್ಥಕತೆಯೂ ಕಾಣುತ್ತದೆ. ಸಂಗೀತ ಮತ್ತು ಹಾಡುಗಳು ಪಾತ್ರ ಸನ್ನಿವೇಶಕ್ಕೆ ಹೇಳಿ ಮಾಡಿಸಿದಂತೆ..

ಅಪರೂಪಕ್ಕೆ ಪ್ರೇಮದ ಹೊಸ ವ್ಯಾಖ್ಯಾನದೊಂದಿಗೆ ಮೂಡಿಬಂದಿರುವ ಚಿತ್ರದ ಪ್ರತಿ ಪ್ರೇಮ್ ನಲ್ಲಿ ಪ್ರೇಮ ನಿರ್ಮಲ, ಪ್ರೇಮ ಕೋಮಲ. ಆದರೆ ಪ್ರೇಮದ ಮುಖ್ಯ ಭಾಗವಾಗುವ ಚಂಚಲತೆ ಮನಸ್ಸಿನಲ್ಲಿ ಹುದುಗಿ ಹೃದಯ ಸ್ಫೋಟವಾಗುತ್ತದೆ.

ಆಧುನಿಕ ಸಂವೇದನೆಯ ನಡುವೆ ಚಿತ್ರಕ್ಕೊಂದು ವೇಗ ಬೇಕಿತ್ತು ಎಂದು ಅನಿಸುವುದನ್ನು ಬಿಟ್ಟರೆ ‘ಪ್ರೇಮಂ ಪೂಜ್ಯಂ’ ಅತ್ಯುತ್ತಮ ಕಲಾಕೃತಿ.

-ಸ್ನೇಹಪ್ರಿಯ ನಾಗರಾಜ್

Social Share :

ವೈದ್ಯಲೋಕದ ನಿರ್ಮಲ ಕೋಮಲ ಅಪೂರ್ವ ಸೃಷ್ಟಿ ಪ್ರೇಮಂ ಪೂಜ್ಯಂ

Social Share :

ಅದು ಭಾವನೆಗಳ ಆಗರ.. ಒಮ್ಮೆ ನಿರ್ಮಲ ಒಮ್ಮೆ ಕೋಮಲ ಮತ್ತೊಮ್ಮೆ ಚಂಚಲ.. ಎಲ್ಲದಕ್ಕಿಂತ ಹೆಚ್ಚಾಗಿ ಪರಸ್ಪರ ಗೌರವದ ಪ್ರತೀಕ. ಆದ್ದರಿಂದ ಅದು ಪೂಜಿಸಲ್ಪಡುತ್ತದೆ..
ಹಾಗಾಗಿ ‘ಪ್ರೇಮಂ ಪೂಜ್ಯಂ’.

ಯುಗ ಯುಗ ಕಳೆದರೂ ಹೃದಯ ಹೃದಯಗಳ ನಡುವೆ ಪ್ರವಹಿಸುವ ಪ್ರೇಮ ಮಾತ್ರ ಅದೇ ಅದೇ ತಾಜಾತನಗಳನ್ನು ಉಳಿಸಿಕೊಂಡಿದೆ. ಪ್ರೇಮ ಮಧುರಾಕ್ಷರ, ಪ್ರೇಮ ಅಜರಾಮರಾ ಜೊತೆಗೆ ಈಗ ಪ್ರೇಮಂ ಪೂಜ್ಯಂ.

ಹೌದು ಪ್ರೇಮದ ಹೊಸ ವ್ಯಾಖ್ಯಾನ ಆರಂಭವಾಗಿದೆ. ಪ್ರೇಮದ ಪಾವಿತ್ರ್ಯದ ಸಂಗತಿಗಳನ್ನು ಎತ್ತಿ ಹಿಡಿಯಲು ತಂಡ ಸಜ್ಜಾಗಿದೆ. ಇನ್ನೇನು ಬಿಡುಗಡೆ ಕಾಣುತ್ತಿರುವ ಚಿತ್ರದ ಬಗ್ಗೆ ನಾಡಿನಾದ್ಯಂತ ಅದರಲ್ಲಿಯೂ ಯುವ ಸಮೂಹ ಅತ್ಯಂತ ಕುತೂಹಲ ಕಾಯ್ದುಕೊಂಡ ವಿಷಯಗಳನ್ನು ಬಹಿರಂಗಪಡಿಸಿದರು ಡಾ.ರಾಘವೇಂದ್ರ.

ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಕಥೆ ಹೇಳಿದಾಗ. ಅದ್ಭುತವಾಗಿದೆ ಮಾಡಿ ಎಂದು ಹೇಳಿದ್ದರು. ಇದು ಪ್ರೇಮ್ ಅವರಿಗೆ 25ನೇ ಚಿತ್ರವಾಗಿರುವುದು ನಮಗೆ ವರವಾಗಿದೆ. ಎಲ್ಲಾ ಕೋನಗಳಿಂದ ಇದು ಪವಿತ್ರ ಪ್ರೇಮ. ಲವ್ಲಿ ಸ್ಟಾರ್ ಪ್ರೇಮ್ ಏಳು ಶೆಡ್ ಗಳಲ್ಲಿ ಕಾಣಿಸಿಕೊಂಡಿರುವ ವಿರಳ ಸಂಗತಿ ಸಿನಿಮಾದಲ್ಲಿದೆ ಎಂದು ಹೇಳುತ್ತಾ ಹೋದರು ಡಾ.ರಾಘವೇಂದ್ರ.

ಅಚ್ಚರಿಯ ವಿಷಯವೆಂದರೆ ನರವೈದ್ಯರಾಗಿರುವ ಡಾ.ರಾಘವೇಂದ್ರ ನರನಾಡಿಗಳ ವಿಷಯಗಳನ್ನು ಬಲ್ಲವರು. ಸಂಗೀತ ಕೂಡ ಅವರೇ ನೀಡಿ ಇಡೀ ಪ್ರೇಮ ಲೋಕವನ್ನೇ ಆವರಿಸಿಕೊಂಡಿದ್ದಾರೆ. ಚಿತ್ರದಲ್ಲಿ 12 ಹಾಡುಗಳು ಕಥೆಗೆ ಪೂರಕವಾಗಿ ಸಾಗುತ್ತವೆ.. ನವೀನ್ ಅವರ ಕ್ಯಾಮೆರಾ ಕೈ ಚಳಕದಲ್ಲಿ ಪ್ರತಿ ಪ್ರೇಮ್ ಪೇಂಟಿಂಗ್ ನ ಅನುಭವ ನೀಡುತ್ತದೆ..

ಹಾಗೆ ನೋಡಿದರೆ ಪ್ರೇಮವನ್ನು ಆರಾಧಿಸುವ ನಟ ಲವ್ಲಿಸ್ಟಾರ್ ಪ್ರೇಮ್. ‘ಪ್ರೇಮಪೂಜ್ಯಂ’ ಅವರ 25ನೇ ಚಿತ್ರ ಎಂಬುದು ಹೆಗ್ಗಳಿಕೆ. ಚಿತ್ರೀಕರಣ ಎರಡು ವರ್ಷ ನಡೆದಾಗ.. ಅದರಲ್ಲಿ ಪರಿಶ್ರಮ ಕೂಡ ಹೆಚ್ಚಾಗಿದೆ ಎಂದರು.

ಮಾಸ್ಟರ್ ಆನಂದ್ ಎಂದೇ ಖ್ಯಾತರಾದ ನಟ ಹಾಗೂ ಹೆಸರಾಂತ ನಿರೂಪಕ ಆನಂದ್ ಸ್ನೇಹದ ಮಹತ್ವ ಸಾರುವಂತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಗಿಸುವುದರ ಜೊತೆಗೆ ಸ್ನೇಹಂ ಪೂಜ್ಯಂ ಎಂಬುದನ್ನು ನನ್ನ ಪಾತ್ರ ಅರ್ಥ ಮಾಡಿಸುತ್ತದೆ ಎಂದರು ಆನಂದ್.

ನಾಯಕ ನಟಿ ಬೃಂದಾ ಆಚಾರ್ಯ ಸುದ್ದಿಗೋಷ್ಠಿಗೆ ಬಂದಿರಲಿಲ್ಲ. ಸಹ ನಿರ್ಮಾಪಕ ಹಾಗೂ ಚಿತ್ರಕ್ಕೆ ಎಲ್ಲಾ ರೀತಿಯಲ್ಲಿಯೂ ನೆರವು ನೀಡಿದ
ಡಾ.ಅಂಜನ್ ಕುಮಾರ್ ಹಾಜರಿದ್ದರು.

Social Share :

ಊರಿನ ಹೆಸರಿಟ್ಟು ಚಿತ್ರ ಕುತೂಹಲದ ಜಾಡಘಟ್ಟ

Social Share :

ಸಂಪೂರ್ಣ ಹೊಸಬರಿಂದ ಕೂಡಿದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಹೆಸರು ‘ಜಾಡಘಟ್ಟ’. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗ್ರಾಮ. ಅದರ ಹೆಸರಿಟ್ಟು ಚಿತ್ರ ಮಾಡುತ್ತಿರುವ ತಂಡಕ್ಕೆ ಊರಿನಲ್ಲಿ ನಡೆದಿರುವ ಸತ್ಯ ಘಟನೆಗಳೇ ಸ್ಫೂರ್ತಿ..

ಹಾಗೆಂದು ಹೇಳಿಕೊಂಡಿತು ಚಿತ್ರತಂಡ. ಅದು ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಈ ಸಂದರ್ಭದಲ್ಲಿ ಚಿತ್ರದ ಸಲುವಾಗಿ ದುಡಿದ ಪ್ರತಿಯೊಬ್ಬರನ್ನು ನೆನಪು ಮಾಡಿಕೊಂಡಿದ್ದು ವಿಶೇಷ.

ಈ ಹಿಂದೆ ಕೆಲವು ಚಿತ್ರಗಳಿಗೆ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ಎಸ್.ರಘು ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿರುವುದೂ ಅಲ್ಲದೆ ಸಂಕಲನ ಮತ್ತಿತರ ಇತರ ತಾಂತ್ರಿಕ ವಿಷಯಗಳ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದಾರೆ. ರಘು ಅವರಿಗೆ ಸಹೋದರಿ ಶಶಿಮಣಿ ಚಿತ್ರ ನಿರ್ಮಾಣದ ಹೊಣೆ ಹೊತ್ತು ಸಹಕಾರ ನೀಡಿದ್ದಾರೆ.

ನಾವು ಒಂದು ತಂಡ ಕಟ್ಟಿಕೊಂಡು ಈ ಸಿನಿಮಾ ಮಾಡಿ ಮುಗಿಸಿದ್ದೇವೆ. ರಘು ನನ್ನ ತಮ್ಮ ಅವನಿಗೆ ಸಹಕಾರ ನೀಡುವ ಆಶಯ ಮುಖ್ಯವಾಗಿತ್ತು. ತಂಡದ ಎಲ್ಲಾ ಸದಸ್ಯರು ನಿರ್ಮಾಣ ಕಾರ್ಯದಲ್ಲಿ ಅತ್ಯುತ್ತಮ ಸಹಕಾರ ನೀಡಿದ್ದಾರೆ ಎಂಬ ವಿವರ ಕೊಟ್ಟರು ನಿರ್ಮಾಪಕಿ ಶಶಿಮಣಿ.

ಅಭಿಷೇಕ್ ಜಿ.ರಾಯ್ ಸಂಗೀತ ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆ ಹಾಡುಗಳಿಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ ಎಂಬ ವಿವರ ಕೊಟ್ಟರು. ಗಾಯಕ ಶಶಾಂಕ್ ಶೇಷಗಿರಿ ಹಾಜರಿದ್ದರು.

ಜಾಡುಘಟ್ಟ ಎಂಬ ಅದೇ ಊರಿನಲ್ಲಿ ಕುಳಿತು ಕಥೆ ಬರೆಯುವಾಗ ಲಾಕ್ ಡೌನ್ ಆಯ್ತು. ಅದು ಹೆಚ್ಚಿನ ಸಮಯ ಒದಗಿಸಿಕೊಟ್ಟಿತು. ಲವ್ ಸೆಂಟಿಮೆಂಟ್ ಫೈಟ್ ನಿಜ ಘಟನೆಗಳು ಚಿತ್ರದಲ್ಲಿವೆ. ಅಕ್ಕ ಕೀಡ ಪಾತ್ರ ಮಾಡಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕ ರಘು ಎಸ್.

ಎಸ್.ಕೆ.ಗ್ರೂಪ್ ಶಿಕ್ಷಣ ಸಂಸ್ಥೆಯ ಶಶಿ ಗೆಳೆಯರಾಗಿ ಅಭಿನಂದಿಸಿದರು. ಛಾಯಾಗ್ರಾಹಕ ಪ್ರದೀಪ್ ಜೈನ್, ವಿಲನ್ ಪಾತ್ರ ಮಾಡಿರುವ ಚಂದ್ರು ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Social Share :