Snehapriya.com

June 9, 2025

ಸಿನಿಮಾ-ಗಾಸಿಪ್

ಹೊಸಬರ ಬರ್ಗೆಟ್ ಬಸ್ಯಾ ಚಿತ್ರಕ್ಕೆ ಸೆನ್ಸಾರ್ ಪ್ರಶಂಸೆ..

Social Share :

ಹೊಸಬರು ನಿರ್ಮಾಣ ಮಾಡಿರುವ ‘ಬರ್ಗೆಟ್ ಬಸ್ಯಾ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ.

ಯರ್ರಂರೆಡ್ಡಿ ಪಿಕ್ಚರ‍್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ರಿಶ್‌ ಹಿರೇಮಠ್ ನಿರ್ದೇಶನ ಮಾಡಿದ್ದಾರೆ ಜೊತೆಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ರಿಶ್ ಹಿರೇಮಠ್ ನಿರ್ದೇಶನದ ಕಲಿಕೆಯ ನಂತರ ಮಾಡುತ್ತಿರುವ ಮೊದಲ ಚಿತ್ರ ಇದಾಗಿದ್ದು, ಅನೇಕ ಕಿರು ಚಿತ್ರಗನ್ನು ನಿರ್ದೇಶನ ಮಾಡಿದ ಅನುಭವ ಕೂಡ ಇದೆ.

ಸಿಕ್ಕ ಸಿಕ್ಕ ಹುಡುಗಿಯರನ್ನೆಲ್ಲಾ ಪ್ರೀತಿ ಮಾಡುತ್ತಾ ಅನುಭವಿಸುವ ಖುಷಿ ತಲ್ಲಣ ಹಾಗೂ ಯಾತನಾಮಯ ಸಂದರ್ಭಗಳನ್ನು ಹಾಸ್ಯದ ಮೂಲಕವೇ ಹೇಳಲಾಗಿದೆ.

ಸಂಗೀತ.ಎನ್.ಸ್ವಾಮಿ ಪ್ರಮುಖ ಪಾತ್ರದಲ್ಲಿದ್ದು, ಬಸ್ಯನ ಜೀವನದಲ್ಲಿ ನಲವತ್ತು ಹುಡುಗಿಯರು ಬಂದು ಹೋಗುವ ಹಾಸ್ಯ ಸನ್ನಿವೇಶಗಳಿವೆ.

ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ಹಾಗೂ ಬೆನಗನಹಳ್ಳಿಯ ಸುಂದರ ತಾಣಗಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ.

ಶಾಮ್‌ಸಾಲ್ವಿನ್ ಛಾಯಾಗ್ರಹಣ, ಸಿದ್ದು ದಳವಾಯಿ, ಸಂಕಲನವಿದೆ ಎಂಬ ಮಾಹಿತಿಗಳನ್ನು ಚಿತ್ರತಂಡ ನೀಡಿದೆ.

Social Share :

ರಾಜ್ ಮೊಮ್ಮಗ ಷಣ್ಮಖ ಚಿತ್ರ ನಿಂಬಿಯಾ ಬನಾದ ಮ್ಯಾಗ..

Social Share :

* ಭಾಗ-1 ತೆರೆಗೆ ಸಿದ್ಧ *

* ಅಶೋಕ್ ಕಡಬ ನಿರ್ದೇಶನ *

* ಮೇಘಮಾಲೆ ಸುನಾದ್ ರಾಜ್ *

ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಕನ್ನಡದ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.

ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಅವರ ಮಗ ಷಣ್ಮುಖ ಗೋವಿಂದ್ ರಾಜ್ ಈಗ ತೆರೆಯ ಮೇಲೆ ರಾರಾಜಿಸಲು ಸಂಪೂರ್ಣ ಸಜ್ಜುಗೊಂಡಿದ್ದಾರೆ.

ಏಕೆಂದರೆ ಷಣ್ಮುಖ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಶೀರ್ಷಿಕೆ ಇರುವ ಚಿತ್ರದ ಮೊದಲ ಭಾಗ ಈಗ ಬಿಡುಗಡೆಗೆ ಸಜ್ಜಾಗಿದೆ.

ಅಶೋಕ್ ಕಡಬ ಈ ಚಿತ್ರದ ನಿರ್ದೇಶಕರು ಮತ್ತು ವಿ.ಮಾದೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವಿಶೇಷ ಕಥಾವಸ್ತು ಹೊಂದಿರುವ ‘ಸತ್ಯಂ’ ಹಾಗೂ ಇತರ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅಶೋಕ್ ಕಡಬ ನಿರ್ದೇಶನದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಫ್ಯಾಮಿಲಿ ಡ್ರಾಮ ಎರಡು ಭಾಗಗಳಾಗಿ ಸಿನಿ ರಸಿಕರನ್ನು ರಂಜಸಲಿದ್ದು, ಮೊದಲ ಭಾಗ ಈಗ ಬಿಡುಗಡೆಯ ಹಾದಿಯಲ್ಲಿದೆ.

ಎಂಜೀಪಿ ಎಕ್ಸ್. ಎಂಟರ್ ಪ್ರೈಸೆಸ್ ನ ಬ್ಯಾನರ್ ನಡಿ ವಿ ಮಾದೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆಗೆ ಮುನ್ನವೇ ಚಿತ್ರವು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.

ರಾಜ್ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ‘ನಂಜುಂಡಿ ಕಲ್ಯಾಣ’ ಚಿತ್ರವು ಫ್ಯಾಮಿಲಿ ಡ್ರಾಮ ಕಥಾವಸ್ತು ಹೊಂದಿತ್ತು ಮಾತ್ರವಲ್ಲ ಹಲವು ದಾಖಲೆಗಳನ್ನು ನಿರ್ಮಿಸಿತ್ತು.

ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿರುವ ಈ ಚಿತ್ರದ ಬಗ್ಗೆ ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಹಾಗೂ ಕುಟುಂಬ ಅಪಾರ ಭರವಸೆಗಳನ್ನು ಹೊಂದಿದೆ.

ನಿಂಬಿಯಾ ಬನಾದ ಮ್ಯಾಗ.. ಎಂಬ ಶೀರ್ಷಿಕೆಗೆ ಜಾನಪದ ಗೀತೆಯ ಸೊಗಡಿದೆ. ಅದೇ ರೀತಿ ಈ ಚಿತ್ರದ ಕಥೆಯೂ ಮನುಷ್ಯ ಸಂಬಂಧಗಳ ನೆಲೆ ಬೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ.

ಹಾಗಾಗಿ ಕನ್ನಡದ ಪ್ರೇಕ್ಷಕರಿಗೆ ಮನರಂಜನಾತ್ಮಕ ಕೌಟುಂಬಿಕ ಚಿತ್ರವೊಂದು ಎರಡು ಭಾಗಗಳ ರೂಪದಲ್ಲಿ ಮೇಲಿಂದ ಮೇಲೆ ಸಿಗಲಿದೆ.

ಈ ಹಿನ್ನೆಲೆಯಲ್ಲಿ ಈಗ ತಾನೆ ಬೆಳ್ಳಿ ತೆರೆಯ ಮೇಲೆ ಅದೃಷ್ಟ ಪರೀಕ್ಷೆಗೆ ನಿಂತಿರುವ ಷಣ್ಮುಖ ಗೋವಿಂದ ರಾಜು ತಮ್ಮ ಪಾತ್ರದ ಬಗ್ಗೆ ಖುಷಿಯ ಭಾವಗಳನ್ನು ಹೊಂದಿದ್ದಾರೆ ಹಾಗೂ ಮೊದಲ ಭಾಗವೇ ತಮಗೆ ಅಪಾರ ಯಶಸ್ಸು ತಂದು ಕೊಡುತ್ತದೆ ಎಂದು ನಂಬಿದ್ದಾರೆ.

ಮುಖ್ಯವಾಗಿ ಈ ಚಿತ್ರದಲ್ಲಿ ರಾಜ್ ಸಂಬಂಧಿ ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರ್ 25 ವರ್ಷಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.

ನಿರ್ಮಾಪಕ ವಿ.ಮಾದೇಶ್ ಅವರಿಗೂ ಈ ಚಿತ್ರ ಹೆಮ್ಮೆಯ ಭಾವಗಳನ್ನು ಮೂಡಿಸಿದ್ದು, ರಾಜ್ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Social Share :

ಮದನ್ ಪಟೇಲ್ ತಮಟೆ ಈ ವಾರ ಚಿತ್ರ ಬಿಡುಗಡೆ..

Social Share :


* ನವೆಂಬರ್ 29 ರಂದು ಬಿಡುಗಡೆ *

* ಜಾನಪದ ಸಂವೇದನೆಯ ಚಿತ್ರ *

ಹಿರಿಯ ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಮದನ್ ಪಟೇಲ್ ಈಗ ಮಣ್ಣಿನ ಗುಣದ ಚಿತ್ರಗಳನ್ನು ಮೆರೆಸುವ ಚಿತ್ರಗಳತ್ತ ಗಮನ ಹರಿಸಿದ್ದು, ಜಾನಪದ ಸಂವೇದನೆಯ ಚಿತ್ರ ‘ತಮಟೆ’ ಬಿಡುಗಡೆಗೆ ಸಜ್ಜುಗೊಂಡಿದೆ.

ವಂದನ್ ಎಂ ನಿರ್ಮಾಣದ ಹಾಗೂ ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತಮಟೆ’ ಚಿತ್ರದ ಟೀಸರ್ ಹಾಗೂ ಹಾಡುಗಳು ಈಚೆಗೆ ಬಿಡುಗಡೆ ಕಂಡಿತು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಮೊದಲ ಕುಲಪತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ತಮಟೆ ನಮ್ಮ ಜಾನಪದ ವಾದ್ಯ. ಅದರ ಸುತ್ತಲೂ ಹೆಣೆಯಲಾಗಿರುವ ಕಥೆಯಲ್ಲಿ ಮಣ್ಣಿನ ಸೊಗಡಿನ ನಂಟಿದೆ ಹಾಗೂ ಉತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರವು ಇದಾಗಿದೆ ಎಂದರು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್.

ಇದೊಂದು ಗ್ರಾಮೀಣ ಭಾಗದ ಸೂಕ್ಷ್ಮ ಸಂವೇದನೆ ಇರುವ ಚಿತ್ರ. ತಮಟೆ ವಾದ್ಯಗಾರನೊಬ್ಬನ ಜೀವನಾಧಾರಿತ ಈ ಸಿನಿಮಾದಲ್ಲಿ ನಾನೇ ಮುಖ್ಯ ಪಾತ್ರದಲ್ಲಿ ನಟಿಸಿರುವೆ ಹಾಗೂ ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ ಎಂಬ ವಿವರ ನೀಡಿದರು ಮದನ್ ಪಟೇಲ್.

ಬಹಳ ಸಮಯದ ಬಳಿಕ ಸಂಗೀತದ ನಿರ್ದೇಶನ ಮಾಡಿರುವೆ ಮತ್ತು ಚಿತ್ರಕಥೆಯನ್ನು ನಾನೇ ಬರೆದಿರುವೆ ಎಂದರು ಮದನ್ ಪಟೇಲ್.

ತಮಟೆ ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆ ಪಡೆದಿದೆ. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯುವ ಹಂಬಲವೂ ಇದೆ ಎಂದರು.

ನಿರ್ದೇಶಕ ಹಾಗೂ ನಟ ಮಯೂರ್ ಪಟೇಲ್ ದುಬೈ ರಾಜ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿರುವ ಮಾಹಿತಿಗಳು ಬಂದವು.

ಕೆಲ ದಿನಗಳ ಹಿಂದೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಟೆ ಚಿತ್ರದ ಪ್ರಚಾರ ಸಭೆಗೆ ಆಗಮಿಸಿ ಶುಭ ಕೋರಿದ್ದರು.

ಟೀಸರ್ ಬಿಡುಗಡೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಡುವುದಿತ್ತು. ಅನಿವಾರ್ಯ ಕಾರಣಗಳಿಂದ ಅವರು ಆಗಮಿಸಿರಲಿಲ್ಲ.

ನಟಿ ತೇಜಸ್ವಿನಿ, ನಟ ಕಾವೇರಿ ಶ್ರೀಧರ್ , ಮುತ್ತುರಾಜ್ ಹಾಗೂ ದಿನಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಪ್ರಭುತ್ವ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ರವಿರಾಜ್ ಎಸ್.ಕುಮಾರ್

ಪ್ರಜೆಗಳು ಭ್ರಷ್ಟರಾದರೆ ಎಂತಹ ಪ್ರಭುತ್ವ..!?

ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವ ಪ್ರಜಾ ಪ್ರಭುತ್ವದ ಸ್ವರೂಪದಲ್ಲಿ ಅಡಗಿರುವ ನ್ಯೂನತೆಗಳನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿ ಮನರಂಜನೆಗಿಂತ ಬೋಧನೆಯ ಪಾಲು ಹೆಚ್ಚಿನದು..

ಒಂದು ಮನರಂಜನಾತ್ಮಕ ಸಿನಿಮಾಗೆ ಬೇಕಾಗಿರುವ ಅಪ್ರತಿಮ ಹೋರಾಟ; ಹೊಡೆದಾಟ ವಿಧ್ವಂಸಕ ರೂಪಕ ಎಲ್ಲವೂ ಇದ್ದರೂ ಏನಾಗುತ್ತಿದೆ ಎಂಬ ಪ್ರಶ್ನಾರ್ಥಕ ಚಿಹ್ನೆಗಳು ಗಾಢ ಚಿಂತನೆಗೂ ಹಚ್ಚಿ ಬಿಡುತ್ತವೆ.

ಮೆಕಾನಿಕ್ ವೃತ್ತಿ ಮಾಡುವ ಮನೋಹರ ಅಲಿಯಾಸ್ ಮನು ಆದರ್ಶದಿಂದ ರೂಪುಗೊಂಡಿರುವ ಯುವಕ. ಅದಕ್ಕೆ ಕಾರಣ ಆತನ ತಂದೆ ಆದರ್ಶ ಶಿಕ್ಷಕ ಕೃಷ್ಣಮೂರ್ತಿ ಕಾರಣ.

ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಮಡಿಯುವ ಕೃಷ್ಣಮೂರ್ತಿ ವ್ಯವಸ್ಥೆಯ ಬಲಿಪಶು. ಆತನ ಮಗ ಮುಂದೆ ತುಳಿಯುವ ಹಾದಿಯಲ್ಲಿ ಆತ ಕೂಡ ಸಾಂದರ್ಭಿಕ ಶಿಶು.

ಪ್ರಜಾ ಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ , ಭಗತ್ ಸಿಂಗ್ ಹೀಗೆ ಆದರ್ಶಗಳನ್ನು ಸಾರುವ ಮಹಾತ್ಮರ ಸಂದೇಶದ ಝಲಕ್ ಗಳು ಸಂಭಾಷಣೆಯ ರೂಪದಲ್ಲಿ ಉದ್ದಕ್ಕೂ ಹೊರಬೀಳುತ್ತವೆ.

ಅದು ಗ್ರಾಮದ ಯಜಮಾನ ಅಯ್ನೋರ ವ್ಯಕ್ತಿತ್ವದ ಪ್ರತಿಫಲ. ಒಂದು ಅತ್ಯಾಚಾರ ವಿರೋಧಿಸಿ ಎಸಿಪಿ ಸಾವಿಗೆ ಕಾರಣನಾಗುವ ಮನು, ಮಧ್ಯಾಂತರದ ಹೊತ್ತಿಗೆ ಪುಂಡರ ಸದೆ ಬಡಿದು ಎದುರಿಸುವ ಸಾಹಸದಲ್ಲಿ ಅಮ್ಮನನ್ನೂ ಕಳೆದುಕೊಳ್ಳುತ್ತಾನೆ.

ಮುಂದೆ ಆತ ಹುಟ್ಟೂರಿಗೆ ಬಂದು ನೆಲೆಸುವುದೂ ಅಲ್ಲಿ ಅಯ್ನೋರ ಬೆಂಬಲ ಚುನಾವಣೆ ಜೊತೆಗೆ ದುಷ್ಟರ ವಿಜೃಂಭಣೆಯ ಜೊತೆಗೆ ಅನೇಕ ಕೊಲೆಗಳ ಆರೋಪ ಹೊತ್ತು ನಿಲ್ಲುತ್ತಾನೆ.

ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳಿಗೆ ಮತ್ತು ಅವರ ಜೀವಗಳಿಗೆ ಬೆಲೆ ಇಲ್ಲ ಮತ್ತು ಹಣ ಪಡೆದು ಮತ ಚಲಾಯಿಸುವ ಪ್ರಜೆಗಳಿಗೆ ನೈತಿಕತೆಯೇ ಇಲ್ಲ ಎಂದು ಸಾರುವುದು ಮತ್ತು ಆ ಮೂಲಕ ಸಂದೇಶ ನೀಡುವುದು ಚಿತ್ರದ ತಿರುಳು.

ಇಡೀ ಚಿತ್ರವನ್ನು ಬೆನ್ನ ಮೇಲೆ ಹೊತ್ತಿರುವ ಚೇತನ್ ಚಂದ್ರ ನಟನೆ ಮತ್ತು ಹೊಡೆದಾಟದಲ್ಲಿ ಸೂಪರ್. ಅವಕಾಶಗಳು ಬಂದರೆ ಕನ್ನಡದ ಮುಂಚೂಣಿಯ ನಟರ ಸಾಲಿಗೆ ನಿಲ್ಲುವ ಸಾಮರ್ಥ್ಯವೂ ಅವರಿಗಿದೆ.

ಜೋಡಿಯಾಗಿರುವ ಪಾವನಾ, ತಂದೆಯಾಗಿರುವ ರಾಜೇಶ್ ನಟರಂಗ, ಅಯ್ನೋರ ಪಾತ್ರಧಾರಿ ನಾಜರ್, ತಿಮ್ಮಕ್ಕ ರೂಪಾದೇವಿ, ತಾಯಿ ಪಾತ್ರಧಾರಿ ವೀಣಾ ಸುಂದರ್, ಇನ್ಸ್ ಪೆಕ್ಟರ್ ಶಶಿಕುಮಾರ್, ಎಸಿಪಿ ಧರ್ಮ, ಸಬ್ ಇನ್ಸ್ ಪೆಕ್ಟರ್ ಯತಿರಾಜ್, ಎಸಿಪಿ ಮುನಿಯಾ, ಸಿಬಿಐ ಅಧಿಕಾರಿ ಪೂಜಾ ಲೋಕೇಶ್ ಪಾತ್ರವಲ್ಲದೆ ನ್ಯಾಯಾಧೀಶೆ ಪಾತ್ರದಲ್ಲಿ ಅಂಬಿಕಾ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಕೆಟ್ಟ ರಾಜಕಾರಣಿಗಳ ಪಾತ್ರದಲ್ಲಿರುವ ಶರತ್ ಲೋಹಿತಾಶ್ವ, ಖಳನ ಪಾತ್ರದಲ್ಲಿನ ಆದಿ ಲೋಕೇಶ್, ಮನು ಸ್ನೇಹಿತರಾಗಿರುವ ಗಿರೀಶ್ ಶಿವಣ್ಣ, ಡ್ಯಾನಿ, ವಿಜಯ್ ಚೆಂಡೂರ್, ಸಂದೀಪ್ ಹೀಗೆ ಅಸಂಖ್ಯಾ ತಾರಾಗಣ ನೋಡಲು ಹಬ್ಬ.

ಮೇಘಡಹಳ್ಳಿ ಡಾ.ಶಿವಕುಮಾರ್ ಕಥೆ ಬರೆದಿದ್ದಾರೆ. ವಿನಯ್ ಮೂರ್ತಿ ಛಾಯಾಗ್ರಹಣ ಹಾಗೂ ಎಮಿಲ್ ಸಂಗೀತ ಚಿತ್ರಕ್ಕೆ ಪೂರಕ.

ಮತದಾರ ಭ್ರಷ್ಟಾಚಾರಿಯಾದರೆ ‘ಪ್ರಭುತ್ವ’ ಹೇಗೆ ದಾರಿ ತಪ್ಪುತ್ತದೆ ಎಂಬ ವಾಸ್ತವ ನೆಲೆಯಲ್ಲಿ ಹೆಣೆಯಲಾಗಿರುವ ಚಿತ್ರಕಥೆ ಇಂದಿನ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಂತೆ ಕಾಣುತ್ತದೆ.

ಸಾಮಾಜಿಕ ನೆಲೆಯಲ್ಲಿ ಪರಿಣಾಮ ಬೀರುವ ಚಿತ್ರದಲ್ಲಿ ನ್ಯೂನತೆಗಳು ಇಲ್ಲವೆಂದಿಲ್ಲ; ಹಳೆಯ ದೃಶ್ಯಗಳ ಸವಕಲು ಮೆರವಣಿಗೆಯೂ ಇದೆ.
ಹಾಗೆಯೇ ವ್ಯವಸ್ಥೆಯ ಲೋಪಗಳನ್ನು ಅತಿಯಾಗಿ ವಿಜೃಂಭಿಸುವ ದೃಶ್ಯಗಳೂ ಮಾನ್ಯತೆ ಪಡೆಯುತ್ತವೆ. ಹಾಗಾಗಿ ಮನು ಹೋರಾಟ ನಿರರ್ಥಕ ಎನಿಸುತ್ತದೆ.

ನೋಟಿಗಾಗಿ ಓಟನ್ನು ಮಾರಿಕೊಳ್ಳುವ ಪ್ರಜೆಗಳು ನೋಡಲೇ ಬೇಕಾದ ಅಪರೂಪದ ಚಿತ್ರವಿದು.

Social Share :

ಗೋಲ್ಡನ್‌ ಸ್ಟಾರ್ ಶುಭ ದಿನ ಕೃಷ್ಣಂ ಪ್ರಣಯ ಸಖಿ ಶತದಿನ

Social Share :

ಗೋಲ್ಡನ್‌ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿರುವ ಚಿತ್ರ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಶತದಿನ ಆಚರಿಸುವ ಮೂಲಕ ಬರಗಾಲದಲ್ಲಿ ದಾಖಲೆ ನಿರ್ಮಿಸಿದೆ.

ತ್ರಿಶೂಲ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಸ್ಯಮಯ ಸಾಂಸಾರಿಕ ಚಿತ್ರ ಇದಾಗಿತ್ತು.

ಕರ್ನಾಟಕದ ನಾಲ್ಕು ಕಡೆ ಈ ಚಿತ್ರ ನೂರುದಿನಗಳ ಪ್ರದರ್ಶನ ಕಂಡಿದೆ‌ ಮಾತ್ರವಲ್ಲ; ಪ್ರದರ್ಶನದ ನಿರಂತರತೆಯನ್ನು ಕಾಯ್ದುಕೊಂಡಿದೆ.

ಹಾಗಾಗಿ ಚಿತ್ರತಂಡ ಖುಷಿಯ ಕ್ಷಣಗಳಲ್ಲಿ ಮಿಂದೆದ್ದಿದೆ. ಹಾಗೆಯೇ ಚಿತ್ರವನ್ನು ಯಶಸ್ವಿಗೊಳಿಸಿದ ಕನ್ನಡ ಕಲಾಭಿಮಾನಿಗಳಿಗೆ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಧನ್ಯವಾದ ಅರ್ಪಿಸಿದ್ದಾರೆ.

ಮುಖ್ಯವಾಗಿ ಈ ಚಿತ್ರದ ಹಾಡುಗಳು ಈಗಲೂ ಟ್ರೆಂಡಿಂಗ್ ನಲ್ಲಿವೆ. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಅವರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

Social Share :

ವೀರಗಾಸೆ ವಿಜಯ ರಾಘವೇಂದ್ರ ಚಿತ್ರದ ಹೆಸರು ರುದ್ರಾಭಿಷೇಕಂ..

Social Share :

ವೀರಗಾಸೆ ರುದ್ರ ರಮಣೀಯ ಪಾತ್ರದಲ್ಲಿ ಸೈಲೆಂಟ್ ಸ್ಟಾರ್ ವಿಜಯ ರಾಘವೇಂದ್ರ ವಿಜೃಂಭಿಸಲಿದ್ದಾರೆ.

ಚಿತ್ರದ ಹೆಸರು ರುದ್ರಾಭಿಷೇಕಂ..!

ಈಚೆಗೆ ದೇವನಹಳ್ಳಿ ಬಳಿಯ ವಿಜಯಪುರದ ಫಾರಂ ಹೌಸ್ ಒಂದರಲ್ಲಿ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿದೆ.

ನಾಡಿನ ಸಾಂಸ್ಕೃತಿಕ ಹಾಗೂ ಜಾನಪದ ಶೈಲಿಯ ಕಲೆಗಳ ಆಚರಣೆ ಹಾಗೂ ಮಹತ್ವ ಸಾರುವ ವಿಷಯಗನ್ನು ಒಳಗೊಂಡ ಈ ಚಿತ್ರದಲ್ಲಿ ವೀರಗಾಸೆ ಯುವಕನ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ವೀರಗಾಸೆ ಹಿನ್ನೆಲೆಯಲ್ಲಿ ದೈವತ್ವವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಆದರೂ ಇದರಲ್ಲಿ ಸಾಮಾಜಿಕ ನೆಲೆಯೂ ಇರಲಿದೆ ಎಂದರು ವಿಜಯ ರಾಘವೇಂದ್ರ.

ಚಿತ್ರಕ್ಕೆ ಬೇರೆಯದೇ ವಿನ್ಯಾಸವಿದೆ. ವೀರಗಾಸೆ ಸೇರಿದಂತೆ ಹಲವು ಗೆಟ್ ಅಪ್ ಗಳಿವೆ ಜೊತೆಗೆ ಸೊಗಸುಗಾರಿಕೆಯೂ ಇರಲಿದೆ ಎಂದರು.

ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಪಳಗಿರುವ ವಸಂತ್ ಕುಮಾರ್ ಈ ಚಿತ್ರದ ನಿರ್ದೇಶಕ. ನಾಡಿನ ಜಾನಪದ ಹಿನ್ನೆಲೆ ಇಟ್ಟುಕೊಂಡು ನೂರಾರು ವರ್ಷಗಳ ಇತಿಹಾಸವಿರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಪ್ರಸ್ತುತ ಪಡಿಸಲಾಗುತ್ತಿದೆ. ಕಥೆಯ ಮೂಲ ವೀರಭದ್ರ ದೇವರು ಎಂಬ ವಿವರ ಬಂತು ನಿರ್ದೇಶಕರಿಂದ.

ಮೊದಲ ಹಂತದಲ್ಲಿ ಫಾರಂ ಹೌಸ್ ನಲ್ಲಿಯೇ 15 ದಿನಗಳ ಚಿತ್ರೀಕರಣ ನಡೆಯಲಿದೆ. ನಂತರ ವೀರಭದ್ರ ಸ್ವಾಮಿ ಒಕ್ಕಲಿನ ಸಮುದಾಯ ಹೆಚ್ಚಿಗೆ ಇರುವ ಚಿಕ್ಕತದಮಂಗಲ ಎಂಬ ಊರಿನಲ್ಲಿ ನಡೆಯಲಿದೆ ಎಂಬ ವಿವರ ಬಂತು.

ನಿರ್ದೇಶಕರ ಸ್ನೇಹಿತರಾಗಿರುವ ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಸೇರಿ ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮೈಸೂರು ಮೂಲದ ರಂಗಭೂಮಿ ಕಲಾವಿದೆ ಪ್ರೇರಣಾ, ವಿಜಯ ರಾಘವೇಂದ್ರ ಜೊತೆ ನಟಿಸುತ್ತಿದ್ದಾರೆ. ಬಲ ರಾಜವಾಡಿ ಊರ ಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಹಾಗೂ ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

Social Share :

ಸೂರಿ ಲವ್ಸ್ ಸಂಧ್ಯಾ ಟೀಸರ್ ದುಬೈನಲ್ಲಿ ಕಂಡ ಪ್ರಿಮಿಯರ್

Social Share :

ಕನ್ನಡದಲ್ಲಿ ದಂತಕಥೆಯಾದ ನಿರ್ದೇಶಕರ ಸಾಲಿಗೆ‌ ಸೇರುವ ದಿವಂಗತ ಕಾಶೀನಾಥ್ ಅವರ ಪುತ್ರ ಅಭಿಮನ್ಯು ನಟಿಸಿರುವ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಜೊತೆಗೆ ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದು ದುಬೈನಲ್ಲಿ ಪ್ರಿಮಿಯರ್ ಶೋ ಕಂಡಿದೆ. ಅದೇ ‘ಸೂರಿ ಲವ್ಸ್ ಸಂಧ್ಯಾ’..

ಈಚೆಗೆ ನಡೆದ ಚಿತ್ರದ ಟೀಸರ್ ಬಿಡುಗಡೆಯಲ್ಲಿ ಚಿತ್ರತಂಡ ಉತ್ಸಾಹದಿಂದ ಪಾಲ್ಗೊಂಡಿತ್ತು. ಆದರೆ ಕಾರಣಾಂತರಗಳಿಂದ ನಿರ್ದೇಶಕರು ಬಂದಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೊದಲು ಮಾತಿಗೆ ನಿಂತ ಅಭಿಮನ್ಯು ಕಾಶೀನಾಥ್, ಚಿತ್ರತಂಡದ ಪರಿಶ್ರಮಗಳ ಕುರಿತು ಮಾಹಿತಿ ನೀಡಿದರು. ನಿರ್ದೇಶಕರು ಎಷ್ಟು ಬೇಕೋ ಅಷ್ಟನ್ನು ಮಾತ್ರ ದುಡಿಸಿಕೊಂಡಿದ್ದಾರೆ. ನಿರ್ಮಾಪಕರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದಾರೆ ಎಂದರು‌.

ಮೊದಲು ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ; ಆದರೆ ಸಾಹಸಗಳಿಗೆ ಹೆಚ್ಚು ಸಮಯ ತೆಗೆದುಕೊಂಡಾಗ ನಿಜವಾದ ಶ್ರಮ ಏನೆಂದು ಅರ್ಥವಾಗಿತ್ತು. ದುಬೈ ಪ್ರೀಮಿಯರ್ ಗೆ ನಾನು ಹೋಗಲಿಲ್ಲ. ಆದರೆ ಅದರ ಫಲಿತಾಂಶ ನಿಜಕ್ಕೂ ಅಚ್ಚರಿ ಉಂಟು ಮಾಡಿತು ಎಂದರು.

ಏಕೆಂದರೆ ಉಪೇಂದ್ರ ಅವರಂತಹ ದೊಡ್ಡ ನಟ, ನಿರ್ದೇಶಕರು ಚಿತ್ರ ಮತ್ತು ಕ್ಲೈಮ್ಯಾಕ್ಸ್ ನ ಹಂತದಲ್ಲಿ ಚಿತ್ರ ಎಷ್ಟು ಗಟ್ಟಿ ಮತ್ತು ಕುತೂಹಲಕರ ಎಂಬುದನ್ನು ಹೊಗಳಿದಾಗ ಅಚ್ಚರಿಯಾಯಿತು ಎಂದರು ಅಭಿಮನ್ಯು.

ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಿರ್ಮಾಪಕ ಸ್ನೇಹಿ ಸಂಜಯ್ ಗೌಡ ಚಿತ್ರತಂಡದ ಪರಿಶ್ರಮ ಹಾಗೂ ನಿರ್ಮಾಪಕರ ಔದಾರ್ಯವನ್ನು ಕೊಂಡಾಡಿದರು.

ನಿರ್ಮಾಪಕ ಕೆ.ಟಿ.ಮಂಜುನಾಥ್ ಅಕ್ಷರಶಃ ಥ್ರಿಲ್ಲಾಗಿದ್ದರು. ದುಬೈನಲ್ಲಿ ನಡೆದ ಪ್ರಿಮಿಯರ್ ಶೋನ ಘಟನಾವಳಿಗಳು ಅದಕ್ಕೆ ಕಾರಣವಾಗಿದ್ದವು.

ರಿಯಲ್ ಸ್ಟಾರ್ ಉಪೇಂದ್ರ ಅವರು ದ್ವಾರಕೀಶ್ ಅವರ ಜೊತೆ ಹೊಂದಾಣಿಕೆ ಮಾಡಿದಾಗ, ನಾನು ಕೂಡ ದ್ವಾರಕೀಶ್ ಅವರಂತೆ 56 ಚಿತ್ರಗಳನ್ನು ನಿರ್ಮಿಸಬೇಕೆಂಬ ಮನಸ್ಸಾಗಿದೆ ಪ್ರಯತ್ನ ನಡೆಸುವೆ ಎಂಬ ಉತ್ಸಾಹದ ಮಾತುಗಳನ್ನಾಡಿದರು.

ಅಲ್ಲದೆ ತಮ್ಮ ಬ್ಯಾನರ್ ಗೆ ಏಕೆ 7 Crore entertainments ಎಂಬ ಹೆಸರಿಡಲಾಗಿದೆ ಎಂಬುದಕ್ಕೆ ವಿವರ ಕೊಟ್ಟರು ನಿರ್ಮಾಪಕ ಮಂಜುನಾಥ್.

ನಟಿ ಅಪೂರ್ವ ಇದೊಂದು ಸಂಚಾರದ ಪ್ರೇಮ ಕಥೆಯಾಗಿತ್ತು ಹಾಗೂ ಕಾಶಿಯಲ್ಲಿ ಚಿತ್ರೀಕರಣ ನಡೆದಿದ್ದು ವಿಶೇಷವಾಗಿತ್ತು ಎಂಬ ವಿವರ ನೀಡಿದರು.

ಖಳ ನಾಯಕನ ಪಾತ್ರ ನಿರ್ವಹಿಸಿರುವ ಪ್ರತಾಪ್ ನಾರಾಯಣ್ ಚಿತ್ರದ ಆಶಯಗಳನ್ನು ಕೊಂಡಾಡಿದರು.

ಯಾದವ್ ರಾಜ್ ನಿರ್ದೇಶನದ ಚಿತ್ರಕ್ಕೆ ಅಲಕಾ ಶ್ರೀನಿವಾಸ್ ಛಾಯಾಗ್ರಹಣ ಹಾಗೂ
ಎಸ್.ಎನ್.ಅರುಣಗಿರಿ ಸಂಗೀತವಿದೆ.

Social Share :

ನಾಗ್ ಶೇಖರ್ ಸಂಜು ವೆಡ್ಸ್ ಗೀತಾ ಹಿಟ್ ಹಾಡುಗಳ ಸೊಗಸುಗಾರಿಕೆ..

Social Share :

ಹೀಗ್ಗೆ 10 ವರ್ಷಗಳ ಹಿಂದೆ ಅತ್ಯುತ್ತಮ ಪ್ರೇಮ್ ಕಹಾನಿ ಹಾಗೂ ಮನ ಸೆಳೆಯುವ ಹಾಡುಗಳ ಮೂಲಕ ಗಮನ ಸೆಳೆದಿದ್ದ ‘ಸಂಜು ವೆಡ್ಸ್ ಗೀತಾ’ ಮತ್ತೆ ಸದ್ದು ಮಾಡುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ ಪ್ರೇಮ್ ಕಹಾನಿ ಸಿನಿಮಾಗಳ ವಿಶೇಷ ನಿರೂಪಣೆ ಮಾಡುವಲ್ಲಿ ಹೆಸರಾಗಿರುವ ನಾಗ್ ಶೇಖರ್ ಈಗ ಸಂಜು ವೆಡ್ಸ್ ಗೀತಾ ಭಾಗ ಎರಡರ ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ.
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿರುವ ‘ಸಂಜು ವೆಡ್ಸ್ ಗೀತಾ-2’ ಈಗ ಬಿಡುಗಡೆಗೆ ಸಜ್ಜುಗೊಂಡಿದ್ದು, ಚಿತ್ರದ ಹಾಡಿನ ಬಿಡುಗಡೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಚಿತ್ರತಂಡದ ಮಾತು ಗಮನ ಸೆಳೆಯಿತು.

ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಗೀತಸಾಹಿತಿ ಕವಿರಾಜ್ ಬರೆದಿರುವ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ’ ಎಂಬ ಅದ್ಭುತ ಮೆಲೋಡಿ ಗೀತೆ ಬಿಡುಗಡೆಗೊಂಡಿತು.

ರಿಯಲ್ ಸ್ಟಾರ್ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಅಡಿಯಲ್ಲಿ
ಛಲವಾದಿ ಕುಮಾರ್ ನಿರ್ಮಾಣದ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದ್ದು, ಡಿಸೆಂಬರ್ 6ರಂದು ಚಿತ್ರವು ತೆರೆ ಕಾಣುತ್ತಿದೆ ಎಂಬ ಮಾಹಿತಿಯನ್ನು ನೀಡಿತು ಚಿತ್ರತಂಡ.

ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ ರಿಯಲ್ ಸ್ಟಾರ್ ಉಪೇಂದ್ರ, ಈ ಚಿತ್ರದ ಕ್ಲೈಮ್ಯಾಕ್ಸ್ ಏನೆಂಬುದು ನನಗೆ ತಿಳಿದಿದೆ. ಹಾಗಾಗಿ ಈ ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ಚಿತ್ರದಲ್ಲಿ ರೂಪಕದ‌ ಮಾದರಿಯಲ್ಲಿರುವ ಹಾಡು ಸ್ವಿಟ್ಜರ್ಲೆಂಡ್‌‌ ಸೈನಿಕನ ಕುರಿತ್ತದ್ದಾಗಿದೆ. ಈ ಹಾಡು ಹೃದಯಸ್ಪರ್ಶಿಯಾಗಿದೆ‌ ಎಂಬುದು ಚಿತ್ರ ನೋಡಿದವರಿಗೆ ಮನವರಿಕೆಯಾಗುತ್ತದೆ. ಈ ಪ್ರಸಂಗ ಮತ್ತು ಸಂಜು ಮತ್ತು ಗೀತಾ ಹಾಡುಗಳು ಚಿತ್ರದ ಹೈಲೈಟ್ ಆಗಲಿವೆ ಎಂದರು ನಿರ್ದೇಶಕ ನಾಗ್ ಶೇಖರ್.

ಮುಖ್ಯವಾಗಿ ರೇಷ್ಮೆ ಬೆಳೆಗಾರರ ಸಂಕಷ್ಟದ ಎಳೆ ಚಿತ್ರದಲ್ಲಿ ಅಳವಡಿಸಲಾಗಿದೆ. ವಿಶ್ವವ್ಯಾಪಿಯಾದ ಸಮಸ್ಯೆಯನ್ನು ಆ ಮೂಲಕ ನಿರೂಪಿಸಲಾಗಿದೆ ಎಂದರು.

ನಾಗ್ ಶೇಖರ್ ಟ್ಯೂನ್ ಗಳನ್ನು ಬೇಗ ಒಪ್ಪುವವರಲ್ಲ; ಆದರೆ ‘ಅವನು ಸಂಜು..’ ಗೀತೆಯ ಟ್ಯೂನ್ ತಕ್ಷಣಕ್ಕೆ ಒಪ್ಪಿದ್ದು ಅಚ್ಚರಿಯಾಯ್ತು ಎಂದವರು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್.

ನಾಗ್ ಶೇಖರ್ ಅವರಿಗೆ ಬರೆಯುವಾಗ ಸಾಹಿತ್ಯದ ಅತ್ಯುತ್ತಮ ಪದ ಬಳಕೆ ಅದಾಗೇ ಆಗುವುದು ನನಗೇ ಅಚ್ಚರಿ ಎಂದರು ಗೀತ ರಚನೆಕಾರ ಕವಿರಾಜ್.

ನಿರ್ಮಾಪಕ ಛಲವಾದಿ ಕುಮಾರ್ ಅವರಿಗೆ ಚಿತ್ರತಂಡದ ಮೇಲೆ ಸಂಪೂರ್ಣ ವಿಶ್ವಾಸ. ಈ ಚಿತ್ರ ಡಿಸೆಂಬರ್ 6ಕ್ಕೆ ಬಿಡುಗಡೆ ಕಾಣುತ್ತದೆ ಮತ್ತು ಸೂಪರ್ ಹಿಟ್ ಆಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರೇಷ್ಮೆ ಬೆಳೆಗಾರನ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದು, ಗೀತಾ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ರಾಗಿಣಿ ದ್ವಿವೇದಿ ಹಾಗೂ ಚೇತನ್ ಚಂದ್ರ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ಹೆಸರಾಂತ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿತರಕ ಗೋಕುಲರಾಜ್, ಛಾಯಾಗ್ರಾಹಕ ಸತ್ಯ ಹೆಗಡೆ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ನ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಡೆಸಲಾಗಿದೆ.

Social Share :

ಶುಭ ಫಿಲಂ ಫ್ಯಾಕ್ಟರಿ ತಂಡದ ಹೊಸ ಚಿತ್ರ ಗೌರಿಶಂಕರ..

Social Share :


ಈಚೆಗೆ ಹೊಸಬರ ಚಿತ್ರಗಳು ಆದ್ಯತೆ ಮೇರೆಗೆ ಸೆಟ್ಟೇರುತ್ತಿವೆ. ಈ ಸಾಲಿಗೆ ಸೇರುವ ‘ಗೌರಿ ಶಂಕರ’ ಚಿತ್ರವು ಈಚೆಗೆ ಮುಹೂರ್ತ ಆಚರಿಸಿಕೊಂಡಿದೆ.

ಬೆಂಗಳೂರಿನ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ ಚಿತ್ರದ ಅದ್ದೂರಿ ಮುಹೂರ್ತ ನೆರವೇರಿದ್ದು, ಹಿರಿಯ ನಿರ್ಮಾಪಕ ರಾಜಣ್ಣ ಕ್ಯಾಮೆರಾ ಆನ್ ಮಾಡಿದರೆ, ಶಿವಲಿಂಗ (ಗಾಜನೂರ್) ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.

ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಶ್ ಚಿನ್ಮಯಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಶುಭ ಫಿಲಂ ಫ್ಯಾಕ್ಟರಿ ತಂಡ ನಿರ್ಮಾಣ ಮಾಡುತ್ತಿದೆ.

ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತನಾಗಿ ಗೋಲ್ಡ್ ಮೆಡಲ್ ಪಡೆದ ಹುಡುಗನೊಬ್ಬ ಉದ್ಯೋಗ ಸಿಗದೆ ತಾತ್ಸಾರಕ್ಕೆ ಒಳಗಾದಾಗ ಹೇಗೆ ಸವಾಲುಗಳನ್ನು ಸ್ವೀಕರಿಸಿ ಜೀವನದಲ್ಲಿ ಏಳಿಗೆ ಕಾಣುತ್ತಾನೆ ಮತ್ತು ಆ ಮೂಲಕ ಇತರರಿಗೆ ಮಾದರಿಯಾಗುತ್ತಾನೆ ಎಂಬುದು ಚಿತ್ರದ ಕಥೆಯ ಸಾರಾಂಶ.

ಹೊಸ ಕಲಾವಿದರಾದ ಸುನಿಲ್‌ಭಂಗಿ, ಅಭಿಷೇಕ್, ಕುಸುಮ, ಪ್ರಿಯಾನಾಗಣ್ಣ ಅವರೊಂದಿಗೆ ಹಿರಿಯ ಕಲಾವಿದರಾದ ಬಿರಾದಾರ್, ಗುರುರಾಜ ಹೊಸಕೋಟೆ, ಕಿಲ್ಲರ್‌ ವೆಂಕಟೇಶ್, ಭವ್ಯಾ ನಟಿಸುತ್ತಿದ್ದಾರೆ.

ಜೊತೆಗೆ ಎನ್.ಎಸ್.ದೇವರಾಜ್ (ನಿಟ್ಟೂರು), ಮನೋಜ್, ಹರೀಶ್, ಸುಬ್ರಮಣಿ ಮಲ್ಲಸಂದ್ರ, ಪ್ರಕಾಶ್‌ ರಾಜ್‌ಕುಮಾರ್, ಚಂದ್ರಮೂರ್ತಿ, ಮಂಜುನಾಥ.ಬಿ, ಮೋಹನ್ ಚಿತ್ರದುರ್ಗ ಮೊದಲಾದ ಕಲಾವಿದರ ಸಂಗಮವಿದೆ.

ರವಿ ಟಿ.ಗೌಡ ಛಾಯಾಗ್ರಹಣ, ಮಹಾರಾಜ್ ಸಂಗೀತ, ರವಿತೇಜ್ ಸಿ.ಎಚ್ ಸಂಕಲನ, ಥ್ರಿಲ್ಲರ್ ಮಂಜು, ವಿನೋದ್ ಸಾಹಸ ಹಾಗೂ ಕರಿಯಾನಂದ ನೃತ್ಯ ನಿರ್ದೇಶನವಿದೆ.

ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಜೋಗ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Social Share :

ಕಡಲ ತಡಿಯ ಜಾನಪದ ಕಥೆ ಗುಂಮ್ಟಿ ಟ್ರೈಲರ್ ಬಿಡುಗಡೆ..

Social Share :

ಕಡಲ ತಡಿಯ ಜನ ಜೀವನ ಹಾಗೂ ಜಾನಪದ ಸೊಗಸುಗಾರಿಕೆಯನ್ನು ಅನಾವರಣಗೊಳಿಸುವ ವಿಭಿನ್ನ ಶೈಲಿಯ ಚಿತ್ರ ‘ಗುಮ್ಟಿ’ ತೆರೆಗೆ ಬರಲು ಸಜ್ಜಾಗಿದೆ.

ವಿಭಿನ್ನ ಶೀರ್ಷಿಕೆ ಹಾಗೂ ಕೌತುಕ ಹೊಂದಿರುವ ಕಥೆಯ ಹಿನ್ನೆಲೆಯಲ್ಲಿ ಈಗಾಗಲೇ ಕುತೂಹಲ ಹುಟ್ಟು ಹಾಕಿರುವ ಚಿತ್ರದ ಟ್ರೈಲರ್ ಈಚೆಗೆ ಬಿಡುಗಡೆ ಕಂಡಿತು.

ವಿಶೇಷವಾಗಿ ಕಡಲ ತಡಿಯಲ್ಲಿ ವಾಸ ಮಾಡುವ ಕುಡುಬಿ ಜನ ಜೀವನವನ್ನು ಅನಾವರಣ ಮಾಡುವ ಕಥೆಯಲ್ಲಿ ಜಾನಪದದ ವಿಶೇಷತೆಗಳು ಬೆಸೆದುಕೊಂಡಿವೆ.

ಈಗಾಗಲೇ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಂದೇಶ್ ಶೆಟ್ಟಿ ಆಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇದೊಂದು ಕಲಾತ್ಮಕ ಆಶಯವಿರುವ ಚಿತ್ರವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲಾಗುತ್ತಿದೆ. ಗುಂಮ್ಟಿ ಎಂಬುದು ಕುಡುಬಿ ಸಮುದಾಯದ ಕಲಾ ಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಚಿತ್ರದ ಶೀರ್ಷಿಕೆಯಾಗಿ ಇಡಲಾಗಿದೆ ಎಂದರು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ.

ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ಚಿತ್ರದಲ್ಲಿ ಅನಾವರಣವಾಗಲಿದೆ ಎಂದರು.

ಬಾಲ್ಯದಲ್ಲಿ ಕಂಡಿದ್ದ ಜಾನಪದದ ವಿಚಾರವನ್ನು ಸಿನಿಮಾದಲ್ಲಿ ಅಳವಡಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರ ನೈಜತೆಯಿಂದ ಕೂಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದವರು ನಿರ್ಮಾಪಕ ವಿಕಾಶ್ ಎಸ್.ಶೆಟ್ಟಿ.

ಈ ಚಿತ್ರವು ಬಿಡುಗಡೆಗೂ ಮುನ್ನವೇ ಜನರ ಮನಸ್ಸು ಗೆದ್ದಿದೆ. ಹಾಗಾಗಿ ಉಡುಪಿ ಜಿಲ್ಲೆಯ ಸುತ್ತಮುತ್ತ ಸುಮಾರು 24 ಕ್ಕೂ ಹೆಚ್ಚು ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್ ನೀಡಲಾಗಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಇದೇ ವೇಳೆ ಹಂಚಿಕೊಂಡಿತು.

ಸಂದೇಶ್ ಶೆಟ್ಟಿ ಅವರ ಜೋಡಿಯಾಗಿ
ವೈಷ್ಣವಿ ನಾಡಿಗ್ ಕಾಣಿಸಿಕೊಂಡಿದ್ದು,
ಇನ್ನುಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರಿನಡಿ ಜಂಟಿಯಾಗಿ ವಿಕಾಸ್ ಎಸ್. ಶೆಟ್ಟಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ಡೊಂಡಿ ಮೋಹನ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂಬ ವಿವರ ನೀಡಿತು ಚಿತ್ರತಂಡ.

Social Share :