ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿಂದ ಹೊರ ಬೀಳುವುದು ಹೊಸದೇನು ಅಲ್ಲ; ಅದರಲ್ಲಿಯೂ ತಬ್ಬಲಿತನ ಜೊತೆಗೆ ಕಟ್ಟಿಕೊಂಡ ನನ್ನಂಥವರಿಗೆ ತೀರಾ ಸಾಮಾನ್ಯವಾದ ವಿಷಯ. ಅದರಲ್ಲಿಯೂ ಮುಖ್ಯ ವಾಹಿನಿ ಪತ್ರಿಕೋದ್ಯಮ ಬಿಟ್ಟು ಆಚೆ ಇರುವುದೆಂದರೆ ಅದು ನೀರಿನಿಂದ ಮೀನನ್ನು ಎತ್ತಿ ಹೊರ ಹಾಕಿದಂತೆ.
ಆದರೆ ಈ ಬಾರಿ ಎಲ್ಲವೂ ಗಂಭೀರದ ವಿಷಯವಾಗಿತ್ತು. ಪತ್ರಿಕೆಗಳಿಂದ ಹೊರಬಿದ್ದವರ ಸಂಖ್ಯೆಯೂ ಹೆಚ್ಚಾಗಿ ನನ್ಬೊಬ್ಬನಿಗೇ ಈ ರೀತಿ ಆಗಿಲ್ಲವಲ್ಲ ಎಂಬ ತಾತ್ಕಾಲಿಕ ಸಮಾಧಾನವೂ ಇತ್ತು.
ಇದೇ ವೇಳೆ ಗೆಳೆಯರೊಬ್ಬರು ಈಗ ಮುಖ್ಯ ವಾಹಿನಿಯೇ ಸಾಮಾಜಿಕ ಜಾಲ ತಾಣ ಎಂಬ ಅಪರೂಪದ ವಾದವನ್ನು ಮುಂದಿಟ್ಟರು. ತಕ್ಷಣಕ್ಕೆ ಎಲ್ಲಿಗೆ ಬೇಕಾದರೂ ತಲುಪಬಹುದಾದ ಸಾಮರ್ಥ್ಯವೇ ಅದರ ಹೆಗ್ಗಳಿಕೆ. ಅದರ ಪರಿಣಾಮವೇ ವೆಬ್ ಸೈಟ್, ವೆವ್ ಪೋರ್ಟಲ್ ಗಳ ಸೃಷ್ಟಿ. (ಈಗಂತೂ ಯು ಟ್ಯೂಬ್ ಚಾನೆಲ್ ಗಳದ್ದೇ ಪಾರುಪತ್ಯ).
ಸರಿ; ಜೀವನಕ್ಕೆ ಒಂದು ವೆಬ್ ಸೈಟ್ ಕೂಡ ನೆರವಾಗಬಹುದು ಎಂಬ ಕಲ್ಪನೆ ಹುಟ್ಟಿಕೊಂಡಿತು. ಇದರ ಹೊರತು ಬೇರೆ ಆಯ್ಕೆ ಮುಂದೆ ಇರಲಿಲ್ಲ.. ಈ ದಾರಿಯಲ್ಲಿ ಚಿಂತನೆಯೇನೋ ನಡೆದಿತ್ತು. ಆದರೆ ಹೇಗೆ ಹಣ ಕಾಸು ಎಲ್ಲಾ ಹೇಗೆ ಎಂಬುದು ಮಾತ್ರ ಪ್ರಶ್ನೆಯಾಗೇ ಉಳಿದಿತ್ತು.

ಇದರ ಮಧ್ಯೆ ಕಳೆದ ವರ್ಷವೇ ವೆಬ್ ಸೈಟ್ ಮಾಡಲು ಡ್ರಾಫ್ಟ್ ಮಾಡಿದ ಅನುಭವವನ್ನು ಜೊತೆಗೆ ಇಟ್ಟುಕೊಂಡಿದ್ದೆ. ಸಿನಿಮಾದ ಸಲುವಾಗಿಯೇ ‘ಸ್ನೇಹಚಿತ್ರ ಡಾಟ್ ಕಾಮ್’ ಎಂಬ ವೆಬ್ ಸೈಟ್ ರೆಡಿ ಮಾಡಿ ಅರ್ಧಕ್ಕೆ ಬಿಟ್ಟಿದ್ದೆ. ಹೆಸರು ಚೆನ್ನಾಗಿದೆ ಎಂದರು ಗೆಳೆಯರು.. ಲೋಗೋಗೆ ಗೆಳೆಯ ಚಂದ್ರು ಅಂದವಾದ ಡಿಸೈನ್ ಕೂಡ ಮಾಡಿಕೊಟ್ಟಿದ್ದರು. ಆದರೆ ಪತ್ರಿಕೆ ಕೆಲಸಗಳಲ್ಲಿ ಬಿಡುವಿರದ ಕಾರಣ ಅದನ್ನು ಮುಂದುವರೆಸಲು ಸಾಧ್ಯವಾಗದೇ ಸುಮ್ಮನಿದ್ದೆ.
ಈಗ ಕಾಲ ಈ ರೀತಿ ಬಂದಿದೆ ಏನು ಮಾಡುವುದು; ಬೇರೆ ದಾರಿ ಇಲ್ಲ..
ಬದುಕು ದೊಡ್ಡದು.. ಸಂಬಂಧಗಳು ಅದಕ್ಕಿಂತ ಮುಖ್ಯ. ಇವೆಲ್ಲಾ ನಿಭಾಯಿಸುವುದಕ್ಕೆ ಹಣವೇ ಥೈಲಿ..ಆದರೆ ಜೇಬು ಖಾಲಿ ಖಾಲಿ..
ಏನು ಮಾಡುವುದು..
ಆಗ ರೂಪುಗೊಂಡಿದ್ದೇ ‘ಸ್ನೇಹಪ್ರಿಯ ಡಾಟ್ ಕಾಮ್’…!
ಕಷ್ಟದಲ್ಲಿ ದೇವರು ಕೈ ಹಿಡಿಯುತ್ತಾನೆ ಎಂಬುದು ನಿಜ. ನನ್ನ ಕಷ್ಟಕ್ಕೆ ನೆರವಾದವನೂ ‘ಶ್ರೀಕೃಷ್ಣ’. ಅದೇ ಹೆಸರಿನ ಗೆಳೆಯ. ವೆಬ್ ಸೈಟ್ ಸಿದ್ಧವಾಯಿತು. ಚಟುವಟಿಕೆಗಳು ಆರಂಭವಾದವು. ಆದರೆ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ.. ಹೊಸದಾಗಿ ಆರಂಭವಾಗುವ ಚಾನೆಲ್ ಒಂದಕ್ಕೆ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ.. ಅದರಲ್ಲಿ ಹೊರಗಿನಿಂದಲೇ ಎಲ್ಲವನ್ನೂ ನಿಭಾಯಿಸುವ ಆಫರ್ ನಿರಾಕರಿಸುವ ಪ್ರಶ್ನೆಯೇ ಇಲ್ಲ.
ಮತ್ತೆ ಮೈ ಮರೆತೆ ಚಾನೆಲ್ (ವೆಬ್ ಚಾನೆಲ್..!!) ಕೆಲಸ ಹೆಚ್ಚು ಶ್ರದ್ಧೆಯಿಂದಲೇ ಕಾಯಕ ಮುಂದುವರಿಯಿತು. ಚಾನೆಲ್ ಮುಖ್ಯಸ್ಥರು ಮುಖ್ಯವಾಗಿ ಅದರ ಸಿಇಓ ಚೆನ್ನಾಗೇ ನೋಡಿಕೊಂಡರು. ಇದೇ ವೇಳೆ ಕೆಲವು ಅಪರೂಪದ ಕ್ಷಣಗಳು ಎದುರಾದವು. ಇನ್ನೇನು ಖುಷಿಗೆ ಪಾರವೇ ಇಲ್ಲ ಎನ್ನುವಾಗ ಮತ್ತೆ ನೀರಿನಿಂದ ಹೊರಬಿದ್ದ ಅನುಭವ. ಕೋವಿಡ್ ಎರಡನೇ ಅಲೆಯ ಪ್ರಭಾವ ಮತ್ತೆ ಬದುಕನ್ನು ನಿರಾಶಾ ಭಾವಗಳತ್ತ ತಳ್ಳಿತು.
ಮತ್ತೆ ದೇವರನ್ನು ಹುಡುಕುವ ಕಾರ್ಯ. ಹೇಗಾದರೂ ಕಾಪಾಡು ಎಂದು ಮೊರೆ ಹೋಗಿದ್ದೇ ಹೋಗಿದ್ದು.. ಅವನಿಗೇ.. ಈಗ ಸ್ಥಳವಿಲ್ಲ; ದೇವಾಲಯ ಬಾಗಿಲು ಹಾಕಿಕೊಂಡಿದೆ. ಇತ್ತ ಕಾಯಕದ ಬಾಗಿಲು ಹಾಕಿದೆ..
ಬದುಕು ಹೈರಾಣು.. ಓ ದೇವರೇ ಎಂದು ಪ್ರಾರ್ಥಿಸುವುದರ ಹೊರತು ಬೇರೆ ದಾರಿಗಳಿಲ್ಲ.. ಈ ಮನೆ ಬಾಡಿಗೆ, ಇಎಂಐನಂತಹ ಬಾಧೆಗಳು ಇಲ್ಲದಿದ್ದರೆ ಬದುಕು ಹೇಗೋ ನಡೆದೀತು. ಆದರೆ ಎಲ್ಲವೂ ಸರಿ ಇದ್ದಾಗ ಅಥವಾ ಭ್ರಮಾಧೀನ ಕ್ಷಣಗಳು ಸಾಲ ಮಾಡಿಸುತ್ತವೆ.. ಇನ್ನಷ್ಟು ಮತ್ತಷ್ಟು ಸುಧಾರಿಸಿದೆ ಜೀವನ ಎನ್ನಲು ಬೇಕಾಗಿರುವುದು ಹಣ. ಆದರೆ ಸ್ವಲ್ಪ ಹಾಸಿಗೆ ಬಿಟ್ಟು ಕಾಲು ಹೊರ ಚಾಚಿದರೆ..
ಹೌದು ಸಾಲವೆಂಬ ಶೂಲ..!
ಅದೃಷ್ಟಕ್ಕೆ ವೆಬ್ ಸೈಟ್ ಮಾಡಿಕೊಟ್ಟ ಗೆಳೆಯ ತಕ್ಷಣಕ್ಕೆ ಹಣ ಕೇಳಲಿಲ್ಲ.. ಹೇಗೋ ಕುಂಟುತ್ತಾ ಅದೂ ಒಂದು ವರ್ಷ ಸಾಗಿಸಿಬಿಟ್ಟಿದೆ. ಅಚ್ಚರಿ ಎಂದರೆ ವೆಬ್ ಸೈಟ್ ಓದುಗ ಬಳಗ ಹೆಚ್ಚಾಗಿದೆ. ವೇಗವಲ್ಲದ ಬೆಳವಣಿಗೆ ಯಲ್ಲಿಯೂ ಅದು ಓದುಗರನ್ನು ಮುಟ್ಟುವ ಪರಿ ಅಚ್ಚರಿ ತಂದಿದೆ. ಮತ್ತು ಉತ್ಸಾಹ ಇಮ್ಮಡಿಗೊಳಿಸಿದೆ. ಸಿನಿಮಾವನ್ನೇ ಹೆಚ್ಚು ಆವರಿಸಿಕೊಂಡಿದ್ದು ಈಗ ಎಲ್ಲದರ ಕಡೆ ಗಮನ ಹರಿಸಿದೆ. ಹಾಗಾಗಿ ಇನ್ನೊಂದು ವರ್ಷ ಪೂರೈಸುದರೊಳಗೆ ‘ಸ್ನೇಹಪ್ರಿಯ’ ಮನೆ ಮಾತಾಗಬಹುದು. ಅದು ನನ್ನ ದೊಡ್ಡ ಆಶಯ. ಅದಕ್ಕಾಗಿ ಶ್ರಮಪಡಲು ನಿಶ್ಚಯಿಸಿ ಆಗಿದೆ. ಕಾರ್ಯ ಮತ್ತು ಫಲ ಎರಡೂ ದೇವರಿಗೆ..
ಇದೇ ವೇಳೆ ‘ಓ ದೇವರೇ ಪ್ರಯತ್ನದ ಬೆಲೆ ತೆತ್ತಾಗ..
ನೀನು ಪ್ರತಿಯೊಂದನ್ನು ಅನುಗ್ರಹಿಸುತ್ತೀ..’ ಎಂಬ ಲಿಯೋನಾರ್ಡ್ ಡಾ.ವಿಂಚಿ ಮಾತು ನಿಜವಾಗಲಿ ಎಂಬುದು ಕನಸು..
🖋 ಸ್ನೇಹಪ್ರಿಯ ನಾಗರಾಜ್