Snehapriya.com

June 8, 2025

ವಿದ್ಯಮಾನ

ಅಪ್ಪು ದೇವರ ಮಗು ರಜನಿ ನಗುವಿನ ಒಡೆಯ ತಾರಕ್

Social Share :

 


* ಪುನೀತ್ ರಾಜ್‍ಕುಮಾರ್ ಈಗ ಕರ್ನಾಟಕ ರತ್ನ

* ವರುಣಾರ್ಭಟದ ನಡುವೆ ಪ್ರಶಸ್ತಿ ಪ್ರದಾನ

* ರಜನಿಕಾಂತ್, ತಾರಕ್ ಮಳೆಯಲ್ಲಿಯೇ ಭಾಷಣ

ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಂದು (01/11/2022) ರಾಜ್ಯದ ಹೆಮ್ಮೆಯ ಪ್ರತೀಕವಾದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಭವ್ಯವಾದ ಸಮಾರಂಭದಲ್ಲಿ ಇಡೀ ಜಗತ್ತೇ ಮೆಚ್ಚುವ ಅನುಪಮ ಕಲಾವಿದರ ಸಾಕ್ಷಿಯಾಗಿ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡದ ಜನಮಾನಸದ ನಡುವೆ ಸದಾ ಕಂಗೊಳಿಸುವ ಅಪ್ಪು ಅವರ ಸಾಧನೆಯ ಹಾದಿಯನ್ನು ನೆನೆಯುತ್ತಲೇ ಮರಣೋತ್ತರವಾಗಿ
ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯ ಕಿರೀಟಧಾರಣೆ ಮಾಡಲಾಯಿತು.

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಂದಮುರಿ ತಾರಕ ರಾಮ್ ರಾವ್ (ಜೂ. ಎನ್.ಟಿ.ಆರ್), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸುಧಾಮೂರ್ತಿ ಹಾಗೂ ಇತರ ಗಣ್ಯರ ನಡುವೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಈ ಪ್ರಶಸ್ತಿಯ ಗೌರವ ನೀಡಲಾಯಿತು.

ಅಷ್ಟೊತ್ತಿಗಾಗಲೇ ಮಳೆಯ ಆರ್ಭಟ ಜೋರಾಗಿತ್ತು. ಅತಿಥಿಗಳು ಮಾತನಾಡುವುದೋ ಬೇಡವೋ ಎಂಬ ಗೊಂದಲದಲ್ಲಿ ಮಾತನಾಡಿದರಾದರೂ ಆ ಒಂದೊಂದು ಮಾತುಗಳೂ ಮುತ್ತುಗಳಾಗಿ ಹೊಮ್ಮಿ ಕನ್ನಡಿಗರ ಹೃದಯವನ್ನು ಪುಳಕಗೊಳಿಸಿದವು.

ಅಪ್ಪು ದೇವರ ಮಗ; ಚಿಕ್ಕ ವಯಸ್ಸಿನಲ್ಲೇ ಎಲ್ಲಾ ಸಾಧನೆ ಮಾಡಿ ಹೊರಟು ಹೋದ.. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂದು ದಾನ ಮಾಡಿದ ಪುಣ್ಯಾತ್ಮ ಎಂದು ಕೊಂಡಾಡಿದರು ತಲೈವಾ ರಜನಿಕಾಂತ್.

ಪರಂಪರೆ; ಉಪನಾಮ ಮನೆತನದಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಸ್ವಂತ ನಡೆಯಿಂದ ಬರುತ್ತದೆ. ಹಾಗೆ ಅಪರೂಪದ ವ್ಯಕ್ತಿತ್ವ ಹೊಂದಿದವರು ನನ್ನ ಗೆಳೆಯ.. ಅವರು ನಗುವಿನ ಒಡೆಯ ಎಂದು ಅಪ್ಪು ಗುಣಗಾನ ಮಾಡಿದವರು ಜೂನಿಯರ್‌ ಎನ್.ಟಿ.ಆರ್.

ಅಪ್ಪಾಜಿ ನಂತರ ಅಪ್ಪು ಕೂಡ ಸಾಧನೆಯ ಶಿಖರದಲ್ಲಿ ಕಂಗೊಳಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನವಾಗಿರುವುದು ನೋವಿನಲ್ಲೂ ಖುಷಿ ಕೊಟ್ಟಿದೆ ಎಂದರು ಡಾ.ಶಿವರಾಜ್ ಕುಮಾರ್.

ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ಅಪ್ಪು ಸಾಧನೆಗಳನ್ನು ಹೊಗಳಿ ಮತ್ತೆ ಹುಟ್ಟಿ ಬಾ ಅಪ್ಪು ಎಂದರು.

Social Share :

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭದಲ್ಲಿ ರಜನಿಕಾಂತ್

Social Share :

 


ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಂದು ನಡೆಯುತ್ತಿದೆ.

ಮಂಗಳವಾರ ನಾಲ್ಕು ಗಂಟೆಗೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯುವ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಮೇರುನಟ ರಜನಿಕಾಂತ್, ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್.ಟಿ.ಆರ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಸಂಪುಟದ ಸಹೋದ್ಯೋಗಿಗಳಾದ ಆರ್.ಅಶೋಕ್, ಸುನೀಲ್ ಕುಮಾರ್, ಸುಧಾ ಮೂರ್ತಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲಾದವರ ಉಪಸ್ಥಿತಿಯಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ.

ಅಭಿಮಾನಿ ದೇವರುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಈ ಸಂದರ್ಭದಲ್ಲಿ ತಮ್ಮ ಆರಾಧ್ಯ ದೈವ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡುವ ಪ್ರಶಸ್ತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಈಚೆಗೆ ‘ಗಂಧದಗುಡಿ’ ಚಿತ್ರ ಹಾಗೂ ವಾರ್ಷಿಕ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅಪ್ಪು ಆದರ್ಶಗಳನ್ನು ನೆನೆದಿರುವ ಅಭಿಮಾನಿಗಳಿಗೆ ಇದೂ ವಿಶೇಷ ಸಂದರ್ಭವಾಗಲಿದೆ.

Social Share :

ವಿಶ್ವಸಂಸ್ಥೆಗೆ ನೇಮಕವಾದ ಏಷ್ಯಾದ ಪ್ರಪ್ರಥಮ ಮಹಿಳೆ ಡಾ.ಕೆ.ಪಿ.ಅಶ್ವಿನಿ

Social Share :

* ತಳ ಸಮುದಾಯದ ಹೆಮ್ಮೆ

* ಅಪ್ರತಿಮ ಗ್ರಾಮೀಣ ಪ್ರತಿಭೆ

* ಸರ್ಕಾರಿ ಅಧಿಕಾರಿಯ ಪುತ್ರಿ

ಇದು ತಳ ಸಮುದಾಯದಿಂದ ಬಂದ ಯುವತಿಯೊಬ್ಬರ ಅದ್ವಿತೀಯ ಸಾಧನೆ ಮತ್ತು ಯಶೋಗಾಥೆ..

ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ (ಯು.ಎನ್.ಎಚ್.ಆರ್.ಸಿ.)ಗೆ ನೇಮಕವಾಗುವ ಮೂಲಕ
ಕೋಲಾರದ ಪುಟ್ಟ ಹಳ್ಳಿಯೊಂದರಿಂದ ಬಂದ ಅಧಿಕಾರಿಯೊಬ್ಬರ ಪುತ್ರಿ
ಡಾ.ಕೆ.ಪಿ.ಅಶ್ವಿನಿ ತಳ ಸಮುದಾಯ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಈ ಪ್ರತಿಷ್ಠಿತ ಹುದ್ದೆಗೆ ನೇಮಕವಾದ ಏಷ್ಯಾದ ಪ್ರಪ್ರಥಮ ಮಹಿಳೆಯಾಗಿದ್ದಾರೆ ಎಂಬುದು ವಿಶೇಷ ಮತ್ತು ವಿರಳ ಸಂಗತಿಯಾಗಿದೆ.

ಕೋಲಾರ ತಾಲ್ಲೂಕಿನ ಕುರುಬರ ಹಳ್ಳಿ ಎಂಬ ಗ್ರಾಮದ ರಾಜ್ಯ ಸರ್ಕಾರಿ ಅಧಿಕಾರಿ ವಿ.ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿಗಳ ಪುತ್ರಿಯಾಗಿರುವ ಅಶ್ವಿನಿ ಚಿಕ್ಕ ವಯಸ್ಸಿನಿಂದಲೂ ಓದಿನಲ್ಲಿ ಮುಂದು.. ಅಪ್ರತಿಮ ಪ್ರತಿಭಾವಂತೆಯಾಗಿರುವ ಇವರಿಗೆ ವಿಶ್ವ ಸಂಸ್ಥೆ ಮನ್ನಣೆ ದೊರೆತಿರುವುದು ಅವರ ಪರಿಶ್ರಮಕ್ಕೆ ದೊರೆತ ಫಲವಾಗಿದೆ.

ಅಶ್ವಿನಿ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪದವಿ ಹಾಗೂ ಸೇಂಟ್ ಜೊಸೆಫ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನವದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯ (ಜೆಎನ್ ಯು)ದಲ್ಲಿ ಎಂ.ಪಿಲ್, ಪಿ.ಎಚ್.ಡಿ ಪಡೆದ ಸಾಧಕಿ ಇವರಾಗಿದ್ದಾರೆ.

ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕಿಯಾಗಿ, ಸೆಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅಶ್ವಿನಿ, ಡಾ.ಬಿ.ಆರ್.ಅಂಬೇಡ್ಕರ್ ಸಿದ್ಧಾಂತಗಳ ಪ್ರತಿಪಾದಕರಾಗಿ ದಲಿತ ಚಳುವಳಿ ಹಾಗೂ ಆದಿವಾಸಿಗಳ ಹಕ್ಕು ಪ್ರತಿಪಾದನೆಯ ದಿಕ್ಕಿನಲ್ಲಿ ಹೋರಾಟ ಮಾಡಿದ್ದಾರೆ.

ಜಿನೀವಾ ಮೂಲದ 47 ಮಂದಿ ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಡಾ.ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದ್ದು, ಅವರು ವರ್ಣಭೇದ ಹಾಗೂ ಅಸಹಿಷ್ಣುಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಬೇಕಾಗಿದೆ.

Social Share :

ಕಣ್ಮನ ಸೆಳೆವ ಆಭರಣ ಮೇಳ ಜ್ಯೂಯಲ್ಸ್ ಆಫ್ ಇಂಡಿಯಾ

Social Share :

ಜಗಮಗಿಸುವ ಬೆಳಕಿನಲ್ಲಿ ಕಣ್ಕುಕ್ಕುವ ಆಭರಣಗಳು.. ನೆರೆದ ಮಹಿಳೆಯರ ಮನದ ತುಂಬೆಲ್ಲಾ ಅದನ್ನು ಹೊರುವ ಆಶಯಗಳು.. ಕೈಗೆಟುಕವ ಬೆಲೆಯಲ್ಲಿ ಗಮನ ಸೆಳೆದ ಆಭರಣ ಮೇಳ..

ಇದು ಬೆಂಗಳೂರಿನ ಮಧ್ಯೆ ಭಾಗದಲ್ಲಿರುವ ಕಂಠೀರವ ಕ್ರೀಡಾಂಗಣ ಸಮೀಪದ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲು ಮೈದಾನದಲ್ಲಿ ಕಂಡು ಬಂದ ದೃಶ್ಯಗಳು..

ಪ್ರತಿ ವರ್ಷ ನಡೆಯುವ ಈ ಆಭರಣ ಮೇಳ ಮಹಿಳೆಯರ ಹಾಟ್ ಫೇವರಿಟ್. ಒಂದಕ್ಕಿಂತ ಒಂದು ವಿನೂತನ. ಜಗತ್ತಿನ ವಿವಿಧ ವಿನ್ಯಾಸಗಳ ಆಭರಣಗಳೇ ಪ್ರಮುಖ ಆಕರ್ಷಣೆಗಳು..

ಅಕ್ಟೋಬರ್ 13ರ ಗುರುವಾರ ಆರಂಭವಾದ ನಾಲ್ಕು ದಿನಗಳ (ಅಕ್ಟೋಬರ್ 13,14,15&16) ಈ ಮೇಳವನ್ನು ಕನ್ನಡದ ಹೆಸರಾಂತ ನಟಿ ಮೇಘನಾರಾಜ್ ಉದ್ಘಾಟಿಸಿದರು. ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ವಿಜಯ ಕಿರಗಂದೂರು, ಪರಿಣಿತಿ ಅಕಾಡೆಮಿಯ ನಿರ್ದೇಶಕಿ ಸಚ್ಚಿನಾ ಮೋಹನ್, ನಕ್ಷತ್ರ ನಾಡಿಯ ದಿನೇಶ್ ಗುರುಜಿ ಮೊದಲಾವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೇಘನಾ ರಾಜ್ ಅವರು ಜ್ಯೂವೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ಅಂಬಾಷಡರ್ ಕೂಡ. ಚಿಕ್ಕ ವಯಸ್ಸಿನಲ್ಲಿ ಆಭರಣ ಕೊಳ್ಳಲು ಸಾಮಾನ್ಯ ಹುಡುಗಿಯಾಗಿ ಬರುತ್ತಿದ್ದೆ. ಈಗ ಅದೇ ದೊಡ್ಡ ಸಂಸ್ಥೆಯ ಬ್ರಾಂಡ್ ಅಂಬಾಷಡರ್ ಆಗಿರುವುದು ಅತ್ಯಂತ ಖುಷಿ ಕೊಟ್ಟಿದೆ ಎಂದರು ಮೇಘನಾ ರಾಜ್.

ನಮ್ಮ ಸಂಸ್ಥೆ ಈಗ ಹೆಚ್ಚು ಹೆಚ್ಚು ಯಶಸ್ಸು ಕಾಣುತ್ತಿದೆ ಎಂದರೆ ಅದಕ್ಕೆ ಕ್ವಾಲಿಟಿ ಮತ್ತು ಶ್ರಮ ಎರಡೂ ಕಾರಣ ಎಂದವರು ಶೈಲಜಾ ವಿಜಯ್ ಕಿರಗಂದೂರು.

ಯಾವುದರ ಹಿಂದೆ ಹಿಂದೆ ಹೋದರು ಯಶಸ್ಸು ದಕ್ಕುತ್ತದೆ. ಸಂದೀಪ್ ಮತ್ತು ಮಂಗಳ ಇದನ್ನು ಏರ್ಪಾಡು ಮಾಡುತ್ತಿರುವುದು ಖುಷಿಯಾಗಿದೆ ಎಂದವರು ದಿನೇಶ್ ಗುರುಜಿ.

Social Share :

ಸಹಜ ನಟ ಅನಂತ್ ನಾಗ್ ಅವರಿಗೆ ಬೆಂ.ಉ.ವಿವಿ ಗೌರವ ಡಾಕ್ಟರೇಟ್

Social Share :

ಕನ್ನಡದ ಸಹಜ ನಟ ಎಂದೇ ಖ್ಯಾತರಾದ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ನಟ ಅನಂತ್ ನಾಗ್ ಅವರಿಗೆ ಈ ಗೌರವ ಡಾಕ್ಟರೇಟ್ ನೀಡಲಾಯಿತು.

ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ, ಕುಲಪತಿ ಡಾ.ನಿರಂಜನ್ ವಾನಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮೊದಲಾದವರು ಈ ಸಂದರ್ಭದಲ್ಲಿದ್ದರು.

ವಿದೇಶ ಪ್ರವಾಸದಲ್ಲಿದ್ದ ನನಗೆ ಏಕಾಏಕಿ ಡಾಕ್ಟರೇಟ್ ಪ್ರದಾನ ಮಾಡುವ ವಿಷಯ ಕುರಿತು ಸಂದೇಶ ಗಳನ್ನು ನೋಡಿದಾಗ ಏನು ಮಾಡುವುದೆಂದು ತೋಚಲಿಲ್ಲ; ಆದರೆ ಪತ್ನಿ ಹಾಗೂ ಮಗಳ ಒತ್ತಾಯಕ್ಕೆ ಮಣಿದು ಬಂದಿರುವೆ ಎಂದರು ಅನಂತ್ ನಾಗ್.

ಯಾವುದೇ ಸರ್ಕಾರವಿರಲಿ, ಪ್ರಶಸ್ತಿ ವಿಷಯಗಳಲ್ಲಿ ಲಾಬಿ ನಡೆಯುತ್ತದೆ. ಹಾಗಾಗಿ ನಾನು ಯಾವೋತ್ತು ಈ ಪ್ರಶಸ್ತಿ ಗೌರವಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದರು.

ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಅವರು ಮಾತನಾಡುವಾಗ, ಚಿತ್ರರಂಗಕ್ಕೆ ಅನಂತ್ ನಾಗ್ ಹಾಗೂ ಅವರ ತಮ್ಮ ದಿವಂಗತ ಶಂಕರ್ ನಾಗ್ ಅವರು ನೀಡಿದ ಕೊಡುಗೆಗಳನ್ನು ನೆನೆದರು.

Social Share :

ಪ್ರಧಾನಿ ಮೆಚ್ಚುಗೆ ಪಡೆದ ಜಗ್ಗೇಶ್ ವಂದೇ ಮಾತರಂ ಗೀತ ಗುಚ್ಛ

Social Share :

ಮುಂಚೂಣಿಯ ನಟರಿಲ್ಲ
ಜಾಲತಾಣದಲ್ಲಿ ಆಕ್ಷೇಪ

ರಾಜ್ಯಸಭಾ ಸದಸ್ಯ, ನವರಸ ನಾಯಕ ಜಗ್ಗೇಶ್ ನಿರ್ಮಾಣದ ಹಾಗೂ ಸಂತೋಷ್ ಆನಂದರಾಮ್ ನಿರ್ದೇಶನದ ‘ವಂದೇ ಮಾತರಂ’ ಗೀತೆಗೆ ಹಲವು ವಿರೋಧಗಳ ನಡುವೆಯೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಿರ್ಮಾಣವಾದ ‘ವಂದೇ ಮಾತರಂ’ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚಿ ಟ್ವೀಟ್ ಮಾಡಿರುವುದು ಈಗ ಸುದ್ದಿಯಾಗಿದೆ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದ ವಂದೇ ಮಾತರಂ, ವಿಡಿಯೋ ಹಾಡಿಗೆ ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ. ವಿಜಯಪ್ರಕಾಶ್ ಹಾಡಿದ್ದು, ಶ್ರೀಶ ಕುದಹಳ್ಳಿ ಛಾಯಾಗ್ರಹಣವಿದೆ.

ಕನ್ನಡದ ಮುಂಚೂಣಿಯ ತಾರೆಗಳಾದ ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಸುದೀಪ್, ರಮೇಶ್ ಅರವಿಂದ್, ಅನಂತನಾಗ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸಾಹಿತಿ ಎಸ್. ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಅಪ್ ಲೋಡ್ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ ಇದಾಗಿದೆ ಎಂದು ಕನ್ನಡದಲ್ಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ನವರಸ ನಾಯಕ ಜಗ್ಗೇಶ್, ಕೇವಲ ನಾಲ್ಕೂವರೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ ‘ವಂದೇ ಮಾತರಂ’ ಎಂದರೆ ಜಾತಿ ಮತ ಧರ್ಮ ಎಲ್ಲವನ್ನೂ ದಾಟಿ ನಾವೆಲ್ಲರೂ ಭಾರತಮಾತೆಯ ಮಕ್ಕಳುವ ಎನ್ನುವುದಾಗಿದೆ. ನನಗೆ ‘ಮಿಲೇ ಸುರ್ ಮೇರಾ ತುಮಾರ..’ ಬಹಳವೇ ಇಷ್ಟ. ಅದೇ ರೀತಿಯ ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮಾದಲ್ಲಿ ಮಾಡಬೇಕೆಂಬ ಆಸೆ ಇತ್ತು. ಅದು ಈ ಮೂಲಕ ಸಾಕಾರಗೊಂಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆದಾಗ್ಯೂ ಹಲವು ಮುಂಚೂಣಿ ನಾಯಕ ನಟರನ್ನು ವಿಶೇಷವಾಗಿ ಯಶ್, ದರ್ಶನ್, ಉಪೇಂದ್ರ ಅವರನ್ನು ಬಿಟ್ಟಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

Social Share :

ಬದುಕುವ ಆಸೆ ಹುಟ್ಟಿಸುತ್ತಿದ್ದ ಶಿವಮೊಗ್ಗ ಸುಬ್ಬಣ್ಣ ಹೊರಟು ಹೋದರು

Social Share :

ಶಿವಮೊಗ್ಗೆಯಲ್ಲಿ ಬಾಲ್ಯ ಕಳೆದು ಓದುವಾಗಲೇ ಬೆಂಗಳೂರಿಗೆ ಎಡ ತಾಕಿದ್ದ ನನಗೆ..
ಅದೊಂದು ದಿನ ಏಕೋ ಬದುಕಿನ ಗಾಳಿಪಟ ಹರಿದಂತಹ ಭಾವಗಳು..
ಇಲ್ಲ.. ಮುಗಿಯಿತು ಬದುಕು ಎಂಬಷ್ಟು ಅಸಹಾಯಕತೆ ಕಾಡಿತ್ತು..

ಸಂಜೆ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾನು ಆ ಸಂದರ್ಭದಲ್ಲಿ ವರದಿಗಾಗಿ ರಾಜಕೀಯ ಸಮಾರಂಭವೊಂದಕ್ಕೆ ಹೋಗಿದ್ದೆ.. ವೇದಿಕೆಯಲ್ಲಿದ್ದವರು..
‘ನೋಡಿ ಪ್ರತಿ ಮನುಷ್ಯನಿಗೂ ಅಸಹಾಯಕತೆ ಎಂಬುದು ಎದುರಾಗುತ್ತದೆ.. ಅಂತಹ ಸಂದರ್ಭದಲ್ಲಿ ಧೈರ್ಯ ಕೊಡುವ ಈ ಹಾಡನ್ನು ರಾಷ್ಟ್ರಕವಿ ಕುವೆಂಪು ಬರೆದಿದ್ದಾರೆ..’ ಎಂದು ಹೇಳಿ ಹಾಡಲು ತೊಡಗಿದ್ದರು..

‘ಆನಂದಮಯ.. ಈ ಜಗ ಹೃದಯ
ಏತಕೆ ಭಯ ಮಾಣೋ..
ಸೂರ್ಯೋದಯ, ಚಂದ್ರೋದಯ.. ದೇವರ ದಯೆ ಕಾಣೋ..’

ಅದೇನು ಪವಾಡ ಸಂಭವಿಸಿತೋ.. ಹಾಡು ಅಸಾಮಾನ್ಯ ಧೈರ್ಯ ಕೊಟ್ಟಿತು.. ಬದುಕು ಬೇರೋದು ತಿರುವು ಪಡೆಯಿತು..

ಅಲ್ಲಿ ಆ ವೇದಿಕೆಯಲ್ಲಿ ಹಾಡಿದವರು ನನಗೆ ಪರಿಚಿತರು. ಅವರೇ ಶಿವಮೊಗ್ಗ ಸುಬ್ಬಣ್ಣ..! ಚಿಕ್ಕ ವಯಸ್ಸಿನಲ್ಲಿ ಅವರ ‘ಕಾಡು ಕುದುರೆ.. ಓಡಿ ಬಂದಿತ್ತಾ..’ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವ ವಿಷಯ ತಿಳಿದಿತ್ತು.

ಏಕೆಂದರೆ ನಾನು ಮತ್ತು ಅವರ ಕಿರಿಯ ಸಹೋದರ ಶ್ಯಾಮ್ ಸುಂದರ್ ಸಹಪಾಠಿಗಳಾಗಿದ್ದೆವು. ಶ್ಯಾಮ್ ಶಾಲೆಯಲ್ಲಿ ಆ ಹಾಡನ್ನು ಯಾವಾಗಲೂ ಹಾಡುತ್ತಿದ್ದರು..

ಮೇಲೆ ಹೇಳಿದ ಘಟನೆಯ ಬಳಿಕ ಶಿವಮೊಗ್ಗ ಸುಬ್ಬಣ್ಣ ಅವರು ಯಾವುದೇ ಕಾರ್ಯಕ್ರಮ ಅಥವಾ ವೇದಿಕೆಯಲ್ಲಿ ಸಿಕ್ಕರೂ ‘ಆನಂದ ಮಯ.. ಹಾಡಿಸದೇ ಬಿಡುತ್ತಿರಲಿಲ್ಲ..’ ಅವರೂ ಸಹ ಎಂದಿಗೂ ಬೇಸರ ಪಟ್ಟುಕೊಂಡವರೂ ಅಲ್ಲ. ಆ ಮಟ್ಟಿಗೆ ಅವರು ಸಹೃದಯತೆ ಕಾಯ್ದು ಕೊಂಡಿದ್ದರು.

ಕೆಲವೊಮ್ಮೆ ಸಾರ್ ಕಾಡು ಕುದುರೆ ಹಾಡಿನಲ್ಲಿ ಎಂಥಾ ಅದ್ಭುತ ಸಾರ್ ‘ಸೊಂಟದ ಬುಗುರಿ ತಿರುಗುತ್ತಿತ್ತು..’ ಎಂಬುದು ಸೊಗಸಾಗಿ ಮೂಡಿ ಬಂದಿದೆ ಎಂದು ಒಮ್ಮೆ ಹಿರಿಯ ಗೆಳೆಯರೊಟ್ಟಿಗೆ ರೇಗಿಸಿದ್ದೂ ಉಂಟು..

ಆಗ ಅದನ್ನು ನೀವು ಕಂಬಾರರನ್ನು ಕೇಳಬೇಕು‌ ಎಂದು ಹೇಳಿ ನಕ್ಕಿದ್ದರು. ಸುಬ್ಬಣ್ಣ ಅವರು ಬಹಳಷ್ಟು ಭಾವಗೀತೆ ಹಾಗೂ ಚಿತ್ರಗೀತೆಗಳನ್ನು ಹಾಡಿದ್ದರೂ ಕೆಲವು ಹಾಡುಗಳು ಮಾತ್ರ ನನ್ನ ಹಾಟ್ ಫೇವರಿಟ್ ಆಗಿದ್ದವು.

ಅದರಲ್ಲಿ ಮುಖ್ಯವಾಗಿದ್ದು ‘ತ್ರಿಶೂಲ’ ಚಿತ್ರದಲ್ಲಿ ಕನ್ನಡದ ಹೆಸರಾಂತ ಕವಿ ಡಾ.ಸಿದ್ದಲಿಂಗಯ್ಯ ನವರ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಎಂಬ ಹಾಡನ್ನು ಕಲ್ಯಾಣ್ ವೆಂಕಟೇಶ್ ರಾಗ ಸಂಯೋಜನೆಯಲ್ಲಿ ಹಾಗೂ ಮತ್ತೊಬ್ಬ ಸುಪ್ರಸಿದ್ಧ ಗಾಯಕ ಸಿ.ಅಶ್ವಥ್ ಅವರ ಜೊತೆ ಸುಬ್ಬಣ್ಣ ಅವರು ಹಾಡಿದ್ದ ಹಾಡು.. ಅದರಲ್ಲಿ ಈ ಇಬ್ಬರು ದಿಗ್ಗಜರು ಜುಗಲ್ಭಂಧಿ ಎಂಬಂತೆ ಹಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

(ಅದೇ ಹಾಡು ಆನಂತರ ‘ಬಾ ನಲ್ಲೇ ಮಧು ಚಂದ್ರ’ಕ್ಕೆ ಚಿತ್ರದಲ್ಲಿ ಹಂಸಲೇಖ ಅವರು ಬೇರೆ ರೀತಿ ಸಂಯೋಜಿಸಿ ಆ ಹಾಡು ಸೂಪರ್ ಹಿಟ್ ಆಗಿದೆ.)

ಶಿವಮೊಗ್ಗ ಸುಬ್ಬಣ್ಣ ಹಾಡುತ್ತಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ; ಏಕೆಂದರೆ ಅವರದು ಕಂಚಿನ ಕಠ. ಎಂತಹವರೂ ಸಹ ರಾಗದ ಮೋಡಿಗೆ ಸಿಲುಕದೆ ಬೇರೆ ದಾರಿಯೇ ಇರುತ್ತಿಲಿಲ್ಲ.

ಆಗಸ್ಟ್ 12 ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ ಈ ಮಹಾನ್ ಗಾಯಕರ ಕುರಿತು ಇನ್ನು ಬರೆಯಲು ಬೇಕಾದಷ್ಟು ನೆನಪುಗಳಿವೆ..
ಕ್ಷಮಿಸಿ ಕೈ ನಡುಗುತ್ತಿದೆ. ಹೃದಯ ಬಿರಿಯುತ್ತಿದೆ.

🖋ಸ್ನೇಹಪ್ರಿಯ ನಾಗರಾಜ್

Social Share :

ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ರಾಜ್ ಪುನೀತ್ ವಿಶೇಷ ಉತ್ಸವ..

Social Share :

ಸ್ವಾತಂತ್ರೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆಯುವ ಚಾರಿತ್ರಿಕ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಪ್ರತಿಬಿಂಬಿಸುವ ವಿಶೇಷ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ.

ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಕನ್ನಡದ ಜನ ಮಾನಸದಲ್ಲಿ ದೇವರಂತೆ ಕಂಗೊಳಿಸುತ್ತಿರುವ ವರನಟ ಡಾ.ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನ ಜರುಗಲಿದೆ.

ತೋಟಗಾರಿಕಾ ಇಲಾಖೆ ಅಧಿಕಾರಿಗಳು ಈಗಾಗಲೇ ದೊಡ್ಮನೆ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಪ್ರದರ್ಶನದ ವಿವರ ನೀಡಿ, ಆಹ್ವಾನ ನೀಡಿದ್ದಾರೆ.

ಆಗಸ್ಟ್ 5ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಗೊಳ್ಳಲಿದ್ದು, ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಈ ಸಂದರ್ಭಕ್ಕೆ ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಾನ ಕಲಾಸಂಘದ ಉಪಾಧ್ಯಕ್ಷ ವಾಸುದೇವ್. ತೋಟಗಾರಿಕೆ ಜಂಟಿ ನಿರ್ದೇಶಕ ಡಾ. ಎಂ ಜಗದೀಶ್ ಹಾಗೂ ಲಾಲ್ ಬಾಗ್ ತೋಟಗಾರಿಕೆ ಉಪನಿರ್ದೇಶಕಿ ಜಿ ಕುಸುಮ ದೊಡ್ಮನೆ ಭೇಟಿ ಸಂದರ್ಭದಲ್ಲಿ ಹಾಜರಿದ್ದರು.

Social Share :

ಫೋಟೋ ನಿಷೇಧ ಆದೇಶ ರಾತ್ರೋ..ರಾತ್ರಿ..ವಾಪಸ್

Social Share :

ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೋ ಮಾಡದಂತೆ ಹೊರಡಿಸಿದ್ದ ಆದೇಶ ವಾಪಸ್ : ಸಿಎಂ ಬಸವರಾಜ ಬೊಮ್ಮಾಯಿ‌ ಅವರ ಸೂಚನೆ ಹಿನ್ನೆಲೆಯಲ್ಲಿ ಆದೇಶ ಹಿಂದಕ್ಕೆ..

ರಾಜ್ಯ ಸರ್ಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡಬಾರದು ಎಂಬ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ವಾಪಸ್ ಪಡೆಯಲಾಗಿದೆ.

ಕರ್ನಾಟಕ ರಾಜ್ಯ ನೌಕರರ ಸಂಘ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡದಂತೆ ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿತ್ತು.

ಈ ಆದೇಶವನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮಧ್ಯರಾತ್ರಿಯೇ ಆದೇಶವನ್ನು ಹಿಂಪಡೆಯಲಾಗಿದೆ.

ಸರ್ಕಾರಿ ಆದೇಶಕ್ಕೆ ಸಾಮಾಜಿಕ ತಾಣದಲ್ಲಿ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಇದಕ್ಕೆ ಸರ್ಕಾರವು ಮಣಿಯಬೇಕಾಯಿತು ಎಂದು ಸಹ ಹೇಳಲಾಗಿದೆ..

Social Share :

ಪ್ರೆಸ್ ಕ್ಲಬ್ ಗೆ ಬದಲಾವಣೆ ಗಾಳಿ ಶ್ರೀಧರ್, ಬಿ.ಪಿ.ಮಲ್ಲಪ್ಪ ಸಾರಥ್ಯ

Social Share :

ಕೊರೊನಾ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ಗೆ ಅಂತೂ ಇಂತೂ ಚುನಾವಣೆ ನಡೆದು ಈಗ ಬದಲಾವಣೆ ಗಾಳಿ ಬೀಸುತ್ತಿದೆ..

ಭಾನುವಾರ (ಜೂನ್ 12) ನಡೆದ 2022-2023ನೇ ಸಾಲಿನ ಚುನಾವಣೆಯಲ್ಲಿ ಶ್ರೀಧರ್ ಅಧ್ಯಕ್ಷರಾಗಿ ಮತ್ತು ಬಿ.ಪಿ.ಮಲ್ಲಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಭಾರೀ ಅಂತರದ ವಿಜಯ ಸಾಧಿಸಿದ್ದಾರೆ.

ಉಪಾಧ್ಯಕ್ಷರಾಗಿ ಆನಂದ ಬೈದನಮನೆ, ಕಾರ್ಯದರ್ಶಿಯಾಗಿ ದೊಡ್ಡ ಬೊಮ್ಮಯ್ಯ, ಜಂಟಿ ಕಾರ್ಯದರ್ಶಿಯಾಗಿ ಮಹಾಂತೇಶ್ ಎಸ್.ಹಿರೇಮಠ ಹಾಗೂ ಖಜಾಂಚಿಯಾಗಿ ಮೋಹನ್ ಕುಮಾರ್ ಬಿ.ಎನ್. ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೋಹಿಣಿ ಅಡಿಗ, ಜಿ.ಗಣೇಶ್, ಮುನಿರಾಮೇಗೌಡ (ರವಿ), ಆಲ್ಫ್ರೆಡ್ ಟೈನಿಸನ್, ಕೆ.ಎಸ್.ಸೋಮಶೇಖರ್, ಯಾಸಿರ್ ಮುಷ್ತಾಕ್ ಹಾಗೂ ಮಿನಿ ತೇಜಸ್ವಿನಿ ಆಯ್ಕೆಯಾಗಿದ್ದಾರೆ.

ಈ ಬಾರಿಯ ಚುನಾವಣಾ ಕಣ ಹಿಂದೆಂದಿಗಿಂತಲೂ ಹೆಚ್ಚು ರಂಗೇರಿತ್ತು. ಅಭ್ಯರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು ಮತ್ತು ಭಾಗವಹಿಸಿದ ಸದಸ್ಯರ ಪ್ರತಿಕ್ರಿಯೆ ಕೂಡ ಸಂಭ್ರಮಿಸಿದ ಭಾವದಲ್ಲಿತ್ತು.

ಭಾನುವಾರ ನಿಜಕ್ಕೂ ಪ್ರೆಸ್ ಕ್ಲಬ್ ಹಬ್ಬವಾಗಿಯೇ ಗೋಚರಿಸಿತು. ನಿಕಟಪೂರ್ವ ಅಧ್ಯಕ್ಷರಾದ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್ ಹಾಗೂ ಇತರರು ಸಂಭ್ರಮದಲ್ಲಿ ಓಡಾಡುತ್ತಿದ್ದರು.

ಈ ಬಾರಿ ವೈಶಿಷ್ಟ್ಯ ಎಂದರೆ ಮಹಿಳಾ ಪ್ರಾತಿನಿಧ್ಯದ ಸಲುವಾಗಿ ಮಹಿಳೆಯರೇ ಓಡಾಟ ನಡೆಸಿದ್ದು, ಆ ಮೂಲಕ ರೋಹಿಣಿ ಅಡಿಗ ಹಾಗೂ ಮಿನಿ ತೇಜಸ್ವಿನಿ ಅವರನ್ನು ಗೆಲ್ಲಿಸಿಕೊಂಡಿದ್ದು..

ವಿಜಯಮ್ಮ, ಶಾಂತಲಾ ಧರ್ಮರಾಜ್, ಕೆ.ಎಚ್.ಸಾವಿತ್ರಿ, ಪ್ರತಿಭಾ ನಂದಕುಮಾರ್, ಮೊದಲಾದವರು ಪ್ರಮುಖವಾಗಿ ಕಾಣಿಸಿಕೊಂಡರು.

Social Share :