ಮಾಮೂಲಿ ಜ್ವರದಲ್ಲಿ ಕೋವಿಡ್ ಸುಳಿ

Social Share :

ತಂಗಾಳಿ ಇಡೀ ಮೈಯನ್ನು ಆವರಿಸಿದ ಆ ಕ್ಷಣಕ್ಕೆ ಮೈ ಮನದ ತುಂಬೆಲ್ಲಾ ಏನೋ ನೋವಿನ ಯಾತನೆ.. ಮಳೆಯಲ್ಲಿ ನೆನೆದು ಅನುಭವಿಸಿದ ಆ ಸ್ಥಿತಿಯಲ್ಲಿ ಏನೋ ನಡುಕ.. ಯಾರೋ ಹೇಳಿದರು ಗಂಟಲಿಗೆ ಕೊಂಚ ವಿಕ್ಸ್ ತಿಕ್ಕಿ..
ಅದೇ ಜೀವನದ ಮಹಾತಪ್ಪು ನಿರ್ಧಾರ ಎಂಬಂತೆ ಕೆಮ್ಮುವುದು ಜೊತೆಯಾಯಿತು.. ಅಲರ್ಜಿಕ್ ಕೆಮ್ಮು ಅದು ಎಂಬುದು ನನಗೆ ಗೊತ್ತು.. ಆದರೆ ಸುತ್ತಲಿನ ಸಮಾಜ ಕೇಳಬೇಕಲ್ಲ..‌ ಏಕೋ ವಾತಾವರಣ ಸರಿ ಇಲ್ಲ ಒಮ್ಮೆ ಪರೀಕ್ಷೆ ಮಾಡಿಸಿ ಎಂಬ ಸಲಹೆ ಬಂತು.. ಸರಿ ಎಲ್ಲಿ ಹೋದರೂ ಆಸ್ಪತ್ರೆಗಳ ಮುಂದೆ ಜನವೋ ಜನ. ಇದು ಜ್ವರವೋ ಕೆಮ್ಮೋ ಏನೋ ಎಂಬುದನ್ನು ಪರೀಕ್ಷೆ ಮಾಡಲು ಯಾರೂ ಸಿಗಲಿಲ್ಲ.. ಫಿವರ್ ಕೇಂದ್ರಗಳಿಗೆ ಹೋಗಲು ಸಲಹೆ ಬಂತು.. ಆದರೆ ನೆಗಡಿ ಉಸಿರಾಟದ ತೊಂದರೆ ಯಾವುದೂ ಇರಲಿಲ್ಲ.. ಹಾಗಾಗಿ ಅದು ಅನಗತ್ಯ ರಿಸ್ಕ್ ಎನಿಸಿತು.

ಅಷ್ಟರಲ್ಲಿ ಕುಟುಂಬ ಸ್ನೇಹಿತ ನರ್ಸ್ ಒಬ್ಬರು ಕೋವಿಡ್ ಆಸ್ಪತ್ರೆ ಯಲ್ಲಿ ಕೆಲಸ ನಿರ್ವಹಿಸಿದ್ದರು.. ಈಗ ಯಾವುದೇ ಕೆಮ್ಮು ಇದ್ದರೂ ಅದು ಪಾಸಿಟಿವ್ ಇರುತ್ತೆ ಎಂಬ ಹೆದರಿಕೆಯ ಬಾಣ ಬಿಟ್ಟರು. ಆದರೆ ನಾನು ಹೆದರಲಿಲ್ಲ.. ಪರಿಚಿತ ವೈದ್ಯರೊಬ್ಬರಿಗೆ ಕರೆ ಮಾಡಿದೆ. ಅವರು ಬಹಳ ದೂರದಲ್ಲಿದ್ದರು.. ವಿಕ್ಸ್ ಆಗಲ್ಲ ಅಂದ ಮೇಲೆ ಏಕೆ ತಿಕ್ಕಿಕೊಂಡಿರಿ.. ಏನಾದರಾಗಲಿ ಈ ಆಂಟಿ ಬಯೋಟಿಕ್ಸ್ ಐದು ದಿನ ತೆಗೆದುಕೊಳ್ಳಿ.. ಅಕಸ್ಮಾತ್ ಏನಿದ್ದರೂ ಅದಕ್ಕೆ ಔಷಧವಾಗುತ್ತದೆ ಎಂದರು. ಕೊನೆಗೆ ಫ್ಯಾಮಿಲಿ ಫ್ರೆಂಡ್ ಆಗಿರುವ ನರ್ಸ್ ಮಾತ್ರೆ ಸಿರಪ್ ಗಳನ್ನು ಒದಗಿಸಿದರು. ಐದು ದಿನ ಅದನ್ನು ಪ್ರಯೋಗ ಮಾಡುವಷ್ಟರಲ್ಲಿ ಆಂಟಿ ಬಯೋಟಿಕ್ಸ್ ಹಣ್ಣುಗಾಯಿ ನೀರುಗಾಯಿ ಮಾಡಿತು.. ಸಿರಪ್ ನಿಂದ ಕೆಮ್ಮು ಹೆಚ್ಚಾಯಿತು.. ಅದನ್ನೆಲ್ಲಾ ಎತ್ತಿ ಮೂಲೆಗೆಸೆದು ಎರಡು ದಿನ ಕಷಾಯ ದ ಪ್ರಯೋಗ ಮಾಡಿದೆ. ಕೆಮ್ಮು ತಹಬದಿಗೆ ಬಂದರೂ ಊಟ ಸೇರದಾಯ್ತು. ಅತಿಯಾದ ಮೆಣಸು, ಶುಂಠಿ, ಲಿಂಬೆ ದೇಹ ಸೇರಿತ್ತು. ನನ್ನ ಸೇವೆಯನ್ನು ಮಾಡುತ್ತಿದ್ದ ನನ್ನಾಕೆ ಇದು ಕೊವಿಡ್ ಎಂದೇ ನಂಬಿ ಜೋರಾಗಿ ಅಳತೊಡಗಿದಳು.. ನಾನು ಧೈರ್ಯ ಕಳೆದುಕೊಳ್ಳಲೇ ಇಲ್ಲ.

ನೋಡು ಮುಖ್ಯವಾಗಿ ನೆಗಡಿ ಇರುತ್ತದೆ ಗಂಟಲು ನೋವು ಬರುತ್ತದೆ.. ಕೊನೆಗೆ ಉಸಿರಾಟದ ತೊಂದರೆ ಬರುತ್ತದೆ. ಆಗ ಮಾತ್ರ ಅದು ಕೊವಿಡ್ ಇರಬಹುದು ಎಂದು ಸಮಾಧಾನ ಮಾಡಿದೆ. ಕಷಾಯವನ್ನು ಬಿಟ್ಟ ಬಳಿಕ ಕೊಂಚ ಊಟ ಸೇರತೊಡಗಿತು.. ಎರಡು ದಿನಗಳಲ್ಲಿ ನಾನು ಮಾಮೂಲಿನಂತಾದೆ. ಈಗ ಎಂದಿನಂತೆ ಓಡಾಡುತ್ತಿರುವೆ.. ಆದರೆ ಅನುಭವಿಸಿದ ಯಮ ಯಾತನೆ ಮನಸ್ಸಿನಿಂದ ಹೋಗಿಲ್ಲ.. ಇಷ್ಟೆಲ್ಲಾ ಆದ ಮೇಲೆ ಡಾ ಬಿ.ಎಂ.ಹೆಗಡೆ ಅವರ ಒಂದು ವಿಡಿಯೋ ನೋಡಿದೆ. ಅದರಲ್ಲಿ ಆಂಟಿ ಬಯೋಟಿಕ್ಸ್ ನುಂಗಿದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಹೇಳುತ್ತಿದ್ದರು.. ಈ ವಿಡಿಯೋ ಮೊದಲೇ ನೋಡಿದ್ದರೆ ನಾನು ಆಂಟಿ ಬಯೋಟಿಕ್ಸ್ ನಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬಹುದಿತ್ತು ಎನಿಸಿತು.

ಇನ್ನೊಂದು ಭಯ ಏನೆಂದರೆ ಪರಿಸ್ಥಿತಿ ಬಿಗಡಾಯಿಸಿದರೆ ಆಸ್ಪತ್ರೆಗೆ ಖರ್ಚು ಮಾಡಲು ಹಣ ಇರಲಿಲ್ಲ.. ಹೆಚ್ಚು ಕಡಿಮೆ ನಿರುದ್ಯೋಗದ ಪರಿಸ್ಥಿತಿಯಲ್ಲಿ ಇದೇನು ಶಿವ ಈ ಪರೀಕ್ಷೆ ಎಂದು ದೇವರ ಮೊರೆ ಹೋದೆ.. ನನ್ನಾಕೆಯಂತೂ ಭಯದಿಂದ ತತ್ತರಿಸಿ ಹೋಗಿದ್ದಳು.. ತಾಯಿಯಂತೆ ಸೇವೆ ಮಾಡಿದಳು. ಅವಳ ಆರೈಕೆ ಒಂದು ಮಾಮೂಲಿ ಜ್ವರ ಬಂದು ಹೊರಟು ಹೋಯ್ತು.. ಅಷ್ಟೇ..
ಈಗ ನಾನು ಸಂಪೂರ್ಣ ಆರೋಗ್ಯದಿಂದ ಇರುವೆ..

Social Share :