ಎರಡು ಸಮಾನಾಂತರ ಕಥೆಗಳ ಸ್ವೇಚ್ಛಾ ಟ್ರೈಲರ್ ಬಿಡುಗಡೆ..
ಸಾಮಾಜಿಕ ನೆಲೆಯಲ್ಲಿ ಸ್ವೇಚ್ಛಾಚಾರ ಎಂಬುದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪ್ರೀತಿ ಪ್ರೇಮ ಹಾಗೂ ಬಾಂಧವ್ಯದ ವ್ಯತ್ಯಾಸಗಳು ಹೇಗೆಂದು ಸಾರುವ ಚಿತ್ರ ‘ಸ್ವೇಚ್ಛಾ’ ಸದ್ಯವೇ ಬಿಡುಗಡೆ ಕಾಣುತ್ತಿದೆ.
ಎರಡು ವಿಭಿನ್ನ ನೆಲೆಯ ಕಥೆಗಳು ಸಮಾನಾಂತರವಾಗಿ ಪ್ರೇಕ್ಷಕನನ್ನು ರಂಜಿಸುತ್ತವೆ. ಸ್ವೇಚ್ಛಾಚಾರ ಅತಿಯಾದರೆ ಏನು ಎಂಬ ಪರಿಣಾಮಗಳು ಗೋಚರವಾಗುತ್ತವೆ.
ಸುರೇಶ್ ರಾಜು ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ಅಡಿ ಸ್ಟಾರ್ ಮಸ್ತಾನ್ ಹಾಗೂ ಕೆ.ಆರ್. ಮುರಹರಿ ರೆಡ್ಡಿ ನಿರ್ಮಿಸಿದ್ದಾರೆ.
ಈಚೆಗೆ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರದ ವಿವರಗಳು ತೆರೆದುಕೊಂಡವು. ಅನ್ವೀಶ್ ಹಾಗೂ ಪವಿತ್ರಾ ನಾಯಕ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ 90ರ ದಶಕ ಹಾಗೂ ಪ್ರಸ್ತುತ ಸನ್ನಿವೇಶದ ಘಟನಾವಳಿಗಳು ಸ್ವೇಚ್ಛಾಚಾರದ ಅನ್ವೇಷಣೆ ಮಾಡುತ್ತವೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.
ಸ್ವೇಚ್ಛಾ ನವರಸಗಳನ್ನೂ ಒಳಗೊಂಡ ಪ್ರೇಮಕಥೆಯಾಗಿದ್ದು, 90ರ ದಶಕದ ಹಾಗೂ ಈಗಿನ ಕಾಲಘಟ್ಟದ ಕಥೆಗಳನ್ನು ಸಮಾನಾಂತರವಾಗಿ ಹೇಳುತ್ತಾ ಸಾಗುತ್ತದೆ. ಕೂಲಿ ಕೆಲಸ ಮಾಡುವ ಹುಡುಗನೊಬ್ಬನ ಪ್ರೀತಿ ಎಷ್ಟರಮಟ್ಟಿಗೆ ಗಾಢವಾಗಿರುತ್ತದೆ. ಮುಂದೆ ಅದು ಯಾವೆಲ್ಲ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂದು ಒಂದು ಕಥೆಯಲ್ಲಿ ಹೇಳಲು ಪ್ರಯತ್ನಿಸಿದರೆ, ಮತ್ತೊಂದರಲ್ಲಿ ತಾಯಿ ಮಗಳ ಬಾಂಧವ್ಯದ ಕಥೆಯನ್ನು ನಿರೂಪಿಸಲಾಗಿದೆ.
ಕಷ್ಟದಲ್ಲಿ ಆಸರೆಯಾದ ತಾಯಿಗೆ ಮಗಳ ಪ್ರೀತಿಯೇ ಸಿರಿತನವಾದರೆ, ಆ ಪುಟ್ಟ ಮಗಳು ಸ್ವೇಚ್ಛಾ, ತನ್ನ ತಾಯಿಗೋಸ್ಕರ ಏನೇಲ್ಲಾ ಮಾಡುತ್ತಾಳೆ ಎಂಬುದನ್ನು ಮನಕಲಕುವ ಕಥೆಯೊಂದಿಗೆ ಭಾವನಾತ್ಮಕವಾಗಿ ಕಟ್ಟಿ ಕೊಡಲಾಗಿದೆ ಎಂಬ ವಿವರಗಳು ಬಂದವು.
ಚಿತ್ರದ 5 ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಅನುರಾಮ್ ಹಾಗೂ ಚೇತನ್ ನಾಯಕ್ ಗಾಯಕರು.
ಕರ್ನಾಟಕದ ಗಡಿಯ ರಾಯಚೂರು, ಬೂರ್ದಿಪಾಡು, ಶ್ರೀರಂಗಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ನಿರ್ಮಾಪಕರಾದ ಮುರಹರಿ ರೆಡ್ಡಿ ಹಾಗೂ ಸ್ಟಾರ್ ಮಸ್ತಾನ್ ಚಿತ್ರದ ನಿರ್ಮಾಣದ ವಿವರಗಳನ್ನು ನೀಡಿದರು. ಸ್ವೇಚ್ಛಾಚಾರದ ಸಲುವಾಗಿ ಪ್ರತಿಯೊಬ್ಬರ ಹೋರಾಟ ಹೇಗಿರುತ್ತದೆ ಎಂಬುದನ್ನು ಹೇಳುವುದೇ ಕಥೆಯಾಗಿದೆ ಎಂದರು ನಿರ್ದೇಶಕ ಸುರೇಶ್ ರಾಜು.
ಅನ್ವಿಶ್ ಮತ್ತು ಪವಿತ್ರ ನಾಯಕ್ ಚಿತ್ರದ ಪ್ರೇಮ ಕಥೆಯ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಕೆ.ಆರ್. ಮುರಹರಿ ರೆಡ್ಡಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಂದು ಕಥೆಯಲ್ಲಿ ನಟಿ ಸ್ಪಂದನ ಮತ್ತು ಶ್ರೀಲಕ್ಷ್ಮಿ ತಾಯಿ, ಮಗಳಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಅನ್ವೀಶ್ ಅವರಿಗೆ ಇದು ಮೂರನೇ ಚಿತ್ರ. ಈ ಮುಂಚೆ ಅವರು ಆಲ್ವಿನ್ ನಿರ್ದೇಶನದ ‘ಜಲ್ಲಿಕಟ್ಟು’ ಹಾಗೂ ಯತಾರ್ಥ ಚಿತ್ರದಲ್ಲಿ ಅಭಿನಯಿಸಿರುವ ವಿವರಗಳು ಬಂದವು.