Snehapriya.com

June 7, 2025

admin

ಎರಡು ಸಮಾನಾಂತರ ಕಥೆಗಳ ಸ್ವೇಚ್ಛಾ ಟ್ರೈಲರ್ ಬಿಡುಗಡೆ..

Social Share :

ಸಾಮಾಜಿಕ ನೆಲೆಯಲ್ಲಿ ಸ್ವೇಚ್ಛಾಚಾರ ಎಂಬುದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪ್ರೀತಿ ಪ್ರೇಮ ಹಾಗೂ ಬಾಂಧವ್ಯದ ವ್ಯತ್ಯಾಸಗಳು ಹೇಗೆಂದು ಸಾರುವ ಚಿತ್ರ ‘ಸ್ವೇಚ್ಛಾ’ ಸದ್ಯವೇ ಬಿಡುಗಡೆ ಕಾಣುತ್ತಿದೆ.

ಎರಡು ವಿಭಿನ್ನ ನೆಲೆಯ ಕಥೆಗಳು ಸಮಾನಾಂತರವಾಗಿ ಪ್ರೇಕ್ಷಕನನ್ನು ರಂಜಿಸುತ್ತವೆ. ಸ್ವೇಚ್ಛಾಚಾರ ಅತಿಯಾದರೆ ಏನು ಎಂಬ ಪರಿಣಾಮಗಳು ಗೋಚರವಾಗುತ್ತವೆ.

ಸುರೇಶ್ ರಾಜು ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ಅಡಿ ಸ್ಟಾರ್ ಮಸ್ತಾನ್ ಹಾಗೂ ಕೆ.ಆರ್. ಮುರಹರಿ ರೆಡ್ಡಿ ನಿರ್ಮಿಸಿದ್ದಾರೆ.

ಈಚೆಗೆ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರದ ವಿವರಗಳು ತೆರೆದುಕೊಂಡವು. ಅನ್ವೀಶ್ ಹಾಗೂ ಪವಿತ್ರಾ ನಾಯಕ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ 90ರ ದಶಕ ಹಾಗೂ ಪ್ರಸ್ತುತ ಸನ್ನಿವೇಶದ ಘಟನಾವಳಿಗಳು ಸ್ವೇಚ್ಛಾಚಾರದ ಅನ್ವೇಷಣೆ ಮಾಡುತ್ತವೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.

ಸ್ವೇಚ್ಛಾ ನವರಸಗಳನ್ನೂ ಒಳಗೊಂಡ ಪ್ರೇಮಕಥೆಯಾಗಿದ್ದು, 90ರ ದಶಕದ ಹಾಗೂ ಈಗಿನ ಕಾಲಘಟ್ಟದ ಕಥೆಗಳನ್ನು ಸಮಾನಾಂತರವಾಗಿ ಹೇಳುತ್ತಾ ಸಾಗುತ್ತದೆ. ಕೂಲಿ ಕೆಲಸ ಮಾಡುವ ಹುಡುಗನೊಬ್ಬನ ಪ್ರೀತಿ ಎಷ್ಟರಮಟ್ಟಿಗೆ ಗಾಢವಾಗಿರುತ್ತದೆ. ಮುಂದೆ ಅದು ಯಾವೆಲ್ಲ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂದು ಒಂದು ಕಥೆಯಲ್ಲಿ ಹೇಳಲು ಪ್ರಯತ್ನಿಸಿದರೆ, ಮತ್ತೊಂದರಲ್ಲಿ ತಾಯಿ ಮಗಳ ಬಾಂಧವ್ಯದ ಕಥೆಯನ್ನು ನಿರೂಪಿಸಲಾಗಿದೆ.

ಕಷ್ಟದಲ್ಲಿ ಆಸರೆಯಾದ ತಾಯಿಗೆ ಮಗಳ ಪ್ರೀತಿಯೇ ಸಿರಿತನವಾದರೆ, ಆ ಪುಟ್ಟ ಮಗಳು ಸ್ವೇಚ್ಛಾ, ತನ್ನ ತಾಯಿಗೋಸ್ಕರ ಏನೇಲ್ಲಾ ಮಾಡುತ್ತಾಳೆ ಎಂಬುದನ್ನು ಮನಕಲಕುವ ಕಥೆಯೊಂದಿಗೆ ಭಾವನಾತ್ಮಕವಾಗಿ ಕಟ್ಟಿ ಕೊಡಲಾಗಿದೆ ಎಂಬ ವಿವರಗಳು ಬಂದವು.

ಚಿತ್ರದ 5 ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಅನುರಾಮ್ ಹಾಗೂ ಚೇತನ್ ನಾಯಕ್ ಗಾಯಕರು.

ಕರ್ನಾಟಕದ ಗಡಿಯ ರಾಯಚೂರು, ಬೂರ್ದಿಪಾಡು, ಶ್ರೀರಂಗಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ನಿರ್ಮಾಪಕರಾದ ಮುರಹರಿ ರೆಡ್ಡಿ ಹಾಗೂ ಸ್ಟಾರ್ ಮಸ್ತಾನ್ ಚಿತ್ರದ ನಿರ್ಮಾಣದ ವಿವರಗಳನ್ನು ನೀಡಿದರು. ಸ್ವೇಚ್ಛಾಚಾರದ ಸಲುವಾಗಿ ಪ್ರತಿಯೊಬ್ಬರ ಹೋರಾಟ ಹೇಗಿರುತ್ತದೆ ಎಂಬುದನ್ನು ಹೇಳುವುದೇ ಕಥೆಯಾಗಿದೆ ಎಂದರು ನಿರ್ದೇಶಕ ಸುರೇಶ್ ರಾಜು.

ಅನ್ವಿಶ್ ಮತ್ತು ಪವಿತ್ರ ನಾಯಕ್ ಚಿತ್ರದ ಪ್ರೇಮ ಕಥೆಯ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಕೆ.ಆರ್. ಮುರಹರಿ ರೆಡ್ಡಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಂದು ಕಥೆಯಲ್ಲಿ ನಟಿ ಸ್ಪಂದನ ಮತ್ತು ಶ್ರೀಲಕ್ಷ್ಮಿ ತಾಯಿ, ಮಗಳಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಅನ್ವೀಶ್ ಅವರಿಗೆ ಇದು‌ ಮೂರನೇ ಚಿತ್ರ. ಈ ಮುಂಚೆ ಅವರು ಆಲ್ವಿನ್ ನಿರ್ದೇಶನದ ‘ಜಲ್ಲಿಕಟ್ಟು’ ಹಾಗೂ ಯತಾರ್ಥ ಚಿತ್ರದಲ್ಲಿ ಅಭಿನಯಿಸಿರುವ ವಿವರಗಳು ಬಂದವು.

Social Share :

ಕೆಡಿ ಶಿವ ಶಿವ ಹಾಡು ಅದ್ದೂರಿ ಪ್ರೇಮ್ ಸಿನಿಮಾ ಪ್ರೇಮದ ವೈಖರಿ

Social Share :

ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಾಡು ಅದ್ದೂರಿ ಎಂಬುದರಲ್ಲಿ ಸಂಶಯವೇ ಇಲ್ಲ; ಆದರೆ ಈ ಹಾಡು ಕನ್ನಡ ಚಿತ್ರರಂಗದ ಶ್ರೀಮಂತಿಕೆಯನ್ನು ಕೊಂಡಾಡುವಷ್ಟು ಶ್ರೀಮಂತವಾಗಿದೆ..

ಅದೇ ಶಿವ ಶಿವ (ಸಿವ ಸಿವ) ಹಾಡು..!

‘ಶಿವನೇ ನಿನ್ನಾಟ ಬಲ್ಲೋರ್ ಯಾರ್ಯಾರೋ..’ ಎಂಬ ಕೈಲಾಸ್ ಖೇರ್ ಮತ್ತು ಪ್ರೇಮ್ (ಕನ್ನಡದಲ್ಲಿ) ಅವರ ಕಂಠ ಸಿರಿಯಲ್ಲಿ ಮೈ ರೋಮಾಂಚನಗೊಳಿಸುವಷ್ಟು ಪರಿಣಾಮಕಾರಿ.

ತಮಿಳು, ತೆಲುಗಿನಲ್ಲಿ ಈ ಹಾಡನ್ನು ಕೈಲಾಸ್ ಖೇರ್ ಅವರ ಜೊತೆ ಕನ್ನಡಿಗ ವಿಜಯ್ ಪ್ರಕಾಶ್ ಹಾಡಿದ್ದು, ಹಿಂದಿ ಹಾಗೂ ಮಲಯಾಳಂ ನಲ್ಲಿ ಸ್ಥಳೀಯ ಗಾಯಕರು ಹಾಡಿದ್ದಾರೆ‌.

ಕೆಡಿ ಚಿತ್ರದ ಕಥೆ 70ರ ದಶಕದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಆ ಸಂದರ್ಭಗಳನ್ನೇ ಮರು ಸೃಷ್ಟಿಸಿರುವುದು ಹಾಡಿನ ಝಲಕ್ ನಲ್ಲೇ ಎದ್ದು ಕಾಣುತ್ತದೆ.

ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಅವರು ಟೌನ್ ಹಾಲ್ ಸೇರಿದಂತೆ ಬೆಂಗಳೂರಿನ ಸಿಟಿ ಮಾರುಕಟ್ಟೆ ಹಾಗೂ ಇತರ ಜಾಗಗಳನ್ನು ಮರುಸೃಷ್ಟಿ ಮಾಡಿ ಸೆಟ್ ಹಾಕಿದ್ದಾರೆ. ಇದರಲ್ಲಿ ಆ ಕಾಲದ ವರಸೆಯಲ್ಲಿ ಮುಖ್ಯ ಪಾತ್ರದಲ್ಲಿರುವ ಧ್ರುವ ಸರ್ಜಾ ಹಾಗೂ ನಟಿ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.

ಧ್ರುವ ಸರ್ಜಾ ಕಾರಿನ ಮೇಲೆ ಹತ್ತಿ ಕುಣಿಯುವ ದೃಶ್ಯಗಳ ವರಸೆ ವೈಭವಗಳ ಚಿತ್ರೀಕರಣ ವಿವರಗಳನ್ನು ಚಿತ್ರತಂಡ ಮಾಧ್ಯಮಗಳ ಮುಂದೆ ತೆರೆದಿಟ್ಟಿತು.

ನಿರ್ದೇಶಕ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ಕೆವಿಎನ್ ನಿರ್ಮಾಣ ಸಂಸ್ಥೆಯ ಸುಪ್ರೀತ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ,ಆನಂದ್ ಆಡಿಯೋ ಶ್ಯಾಮ್, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ, ನೃತ್ಯ ನಿರ್ದೇಶಕ ಮೋಹನ್, ಛಾಯಾಗ್ರಾಹಕ ಡೇವಿಡ್ ವಿಲಿಯಂ ಹೀಗೆ ‘ಶಿವ ಶಿವ’ ಹಾಡು ಬಿಡುಗಡೆಯಲ್ಲಿ ಪಾಲ್ಗೊಂಡ ಎಲ್ಲರೂ ಅದರ ವೈಭವಗಳನ್ನು ಬಣ್ಣಿಸಿದರು.

ಮೊದಲೇ ಹೇಳಿದಂತೆ ಕೆಡಿ ಅಂದರೆ ಕಾಳಿದಾಸ. ಮುಖ್ಯವಾಗಿ ಈ ಚಿತ್ರದ ಹಾಡುಗಳು ನಮ್ಮ ಕಲ್ಪನೆ ಮೀರಿ ಬರಬೇಕು ಎಂಬ ಆಶಯವಿತ್ತು. ಹಾಗಾಗಿ ಇಲ್ಲಿರುವ ಎಲ್ಲರ ಸಹಕಾರದಿಂದ ಅದು ಸಾಧ್ಯವಾಗಿದೆ ಎಂದರು ಪ್ರೇಮ್.

ಹಾಡು ಮತ್ತು ದೃಶ್ಯ ವೈಭವ ನನ್ನ ಕಲ್ಪನೆಯನ್ನು ಮೀರಿ ಬಂದಿರುವುದು ಖುಷಿ ತಂದಿದೆ. ಆನಂದ್ ಆಡಿಯೋ ನಮಗೆ ಹೆಚ್ಚು ಪ್ರೋತ್ಸಾಹ ನೀಡಿದೆ. ದಾಖಲೆ ಬೆಲೆ (17.70 ಕೋಟಿ)ಗೆ ಚಿತ್ರದ ಹಾಡುಗಳು ಮಾರಾಟವಾಗಿವೆ. ಅದಕ್ಕೆ ತಕ್ಕ ಹಾಗೆ ಈ ಚಿತ್ರದ ಸಂಗೀತ ವೈಭವ ಮೋಡಿ ಮಾಡಲಿದೆ ಎಂದರು.

ಈ ಚಿತ್ರದ ಹಾಡಿಗೆ ಖರ್ಚು ಮಾಡಿರುವಷ್ಟು ಹಣದಲ್ಲಿ ಒಂದು ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡಬಹುದಿತ್ತು ಎಂದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಸಂಗೀತದ ಪ್ರತಿಯೊಂದು ಮಜಲುಗಳನ್ನು ಪ್ರೇಮ್ ಅವರೇ ನಿರ್ವಹಿಸುತ್ತಾರೆ. ಇಲ್ಲಿ ನಾನು ನೆಪ ಮಾತ್ರ. ಈ ಚಿತ್ರದ ದೊಡ್ಡ ಬಂಡವಾಳ ಸಂಗೀತ. ಹಾಗಾಗಿ ಹೆಚ್ಚಿನ ಒತ್ತಡ ಜವಾಬ್ದಾರಿ ಇದೆ ಎಂದರು.

ಸಂಗೀತಗಾರರು ಹಾಗೂ ಗಾಯಕರನ್ನು ತಾಳ್ಮೆಯಿಂದ ಕಾಯ್ದು ಕರೆಯಲಾಗಿದೆ. ಜಾಕೀರ್ ಹುಸೇನ್ ಅವರ ಸಹೋದರ ತೌಪಿಕ್ ಖುರೇಶ್ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹೋದರು ಅರ್ಜುನ್ ಜನ್ಯ.

ಈ ಚಿತ್ರದಲ್ಲಿ ನಟಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಈ ಶಿವ ಶಿವ ಹಾಡಿನಲ್ಲಿ ಮಾಡಿರುವ ಸಾಹಸಗಳ ಕುರಿತ ದಾಖಲೆ ನಿಮ್ಮ ಮುಂದೆಯೇ ಇದೆ ಎಂದರು ಧ್ರುವ ಸರ್ಜಾ.

ಓಡುವ ಕಾರಿನ ಮೇಲೆ ನೃತ್ಯ ಮಾಡುವುದು ಕಠಿಣ ಸಾಹಸ. ಆ ಸಂದರ್ಭಗಳು ಥ್ರಿಲ್ಲಿಂಗ್ ಆಗಿದ್ದವು ಎಂದು ವಿವರಿಸಿದರು.

ಮೋಹನ್ ಬಿ.ಕೆರೆ ಚಿತ್ರದ ಸೆಟ್ ಹಾಕಿದ ಸಂದರ್ಭಗಳನ್ನು ವರ್ಣಿಸಿದರು. ನೃತ್ಯ ನಿರ್ದೇಶಕ ಮೋಹನ್, ಆನಂದ್ ಆಡಿಯೋ ಶ್ಯಾಮ್, ಹಾಡಿಗೆ ಸಾಹಿತ್ಯ ಬರೆದ ಮಂಜು, ರೀಷ್ಮಾ ನಾಣಯ್ಯ, ಛಾಯಾಗ್ರಾಹಕ ಡೇವಿಡ್ ವಿಲಿಯಂ, ಕೆವಿಎನ್ ಸಂಸ್ಥೆಯ ಸುಪ್ರೀತ್ ಮಾತನಾಡಿದರು.

Social Share :

ಯುಐ ಚಿತ್ರವಿಮರ್ಶೆ

Social Share :

ರೇಟಿಂಗ್ : 4.5/5

ನಿರ್ಮಾಣ : ಲಹರಿ ಫಿಲಮ್ಸ್, ವೀನಸ್ ಎಂಟರ್ ಪ್ರೈಸಸ್ ಮೂಲಕ ಜಿ.ಮನೋಹರ ನಾಯ್ಡು ಮತ್ತು ಕೆ.ಪಿ.ಶ್ರೀಕಾಂತ್

ನಿರ್ದೇಶನ : ಉಪೇಂದ್ರ

ಉಪ್ಪಿಗಿಂತ ರುಚಿ ಬೇರೆ ಇಲ್ಲ
ಒಪ್ಪಿಕೊಂಡೋರು ದಡ್ಡರಲ್ಲ..

ಜಗತ್ತಿನ ಕೆಲವೇ ಕೆಲವು ಚಿತ್ರ ನಿರ್ದೇಶಕರು ಮಾತ್ರ ತಾವು ಮಾಡುವ ಚಿತ್ರಗಳಿಗೆ ಬ್ರಾಂಡ್ ಆಗುತ್ತಾರೆ; ಎಲ್ಲವೂ ವಿಶೇಷತೆಯ ಅಚ್ಚೊತ್ತಿದ ಹಾಗೆ ಸೃಷ್ಟಿ ಕಾರ್ಯದಲ್ಲಿ ತೊಡಗುವುದು ಸಾಮಾನ್ಯ ವಿಷಯವೇ ಅಲ್ಲ.

ವ್ಯವಸ್ಥೆ ಮತ್ತು ಅಸಮಾನತೆ ವಿರುದ್ಧ ಸರಳ ಧಾಟಿ ಮತ್ತು ಮಿಥ್ ಗಳ ಮೂಲಕ ತಮ್ಮ ಚಿತ್ರಗಳಲ್ಲಿ ಹೇಳುತ್ತಾ ಬಂದ ರಿಯಲ್ ಸ್ಟಾರ್ ಉಪೇಂದ್ರ, ಈಗ ಒಂದು ಹೆಜ್ಜೆ ಮುಂದೆ ಹೋಗಿ ‘ಸತ್ ಪ್ರಜೆ’ಗಳ ವಿವೇಚನಾ ಶಕ್ತಿಯನ್ನೇ ಕೆಣಕಿದ್ದಾರೆ.

ಚಿತ್ರದೊಳಗೊಂದು ಚಿತ್ರ ಅಲ್ಲಿ ಬರುವ ತಿಕ್ಕಲು ನಿರ್ದೇಶಕ (ಜೀನಿಯಸ್). ಮೂಲೆಗೆ ಬಿದ್ದ ಸ್ಕ್ರಿಪ್ಟ್. ಅದು ರೂಪುಗೊಂಡು ಮಜಾ ನೀಡುವ ಪರಿ ಎಲ್ಲವೂ ಉಪ್ಪಿಯ ಮಾಮೂಲಿ ವರಸೆಗಳೇ.

ಆದರೆ ಆ ಕಥೆಯಲ್ಲಿನ ಪದರಗಳು. ಅವು ಬಿಚ್ಚಿಕೊಳ್ಳುವ ರೀತಿ ತಂತ್ರಜ್ಞಾನದ ಮೈ ಸಿರಿ ಎಲ್ಲವೂ ಹೊಸದೊಂದು ರಮ್ಯ ಲೋಕವನ್ನೇ ಅನಾವರಣಗೊಳಿಸುವುದು ನಿಜವಾದರೂ ಅದರೊಳಗಿನ ತತ್ವ ಮತ್ತು ಪ್ರಶ್ನಾರ್ಥಕ ಒಳನೋಟ ಮೆದುಳನ್ನು ವಿಚಲಿತಗೊಳಿಸದೇ ಬಿಡಲಾರದು..

ಹಾಗಾಗಿ ಮೆದುಳು ಇಲ್ಲಿ ಸಾಂಕೇತಿಕ ರೂಪ ಪಡೆದಿದೆ ಮಾತ್ರವಲ್ಲ; (ಈ ಚಿತ್ರವನ್ನು ಹೃದಯದಿಂದ ನೋಡಿದರೆ ಅರ್ಥವೇ ಆಗುವುದಿಲ್ಲ) ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಮೆದುಳು ಬಳಕೆ (ಬುದ್ಧಿಶಕ್ತಿ) ಅನಿವಾರ್ಯ..

ಹಾಗಾಗಿ ಸತ್ಯ ಪಾತ್ರಧಾರಿ ಉಪೇಂದ್ರ ಪದೇ ಪದೇ ಹೇಳುವ ‘ಕಾಂ ಡೌನ್; ಕೂಲ್; ಕಾನ್ಸನ್ ಟ್ರೇಟ್’ ಎಂಬುದನ್ನು ಮೊದಲು ಪ್ರೇಕ್ಷಕ ಅಳವಡಿಸಿಕೊಳ್ಳಬೇಕು. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ. ಆದರೆ ಎದುರಾದ ಸಂದರ್ಭ ಮತ್ತು ಅದರ ಕಾಠಿಣ್ಯತೆ ಅರಿಯುವ ತಾಳ್ಮೆ ಮತ್ತು ವಿವೇಚನೆ ಬಹಳ ಮುಖ್ಯ ಎಂಬ ‘ಸತ್ಯ’ನ ನಡೆಯೂ ಅರ್ಥವಾಗಬೇಕು.

ಸಾಮಾಜಿಕ ಬದುಕಿನಲ್ಲಿ ಬರೀ ವಿಷ ವರ್ತುಲಗಳೇ ತುಂಬಿವೆ. ಎಷ್ಟೋ ವಿಷಯಗಳು ನಮ್ಮನ್ನು ಕತ್ತಲೆನಲ್ಲಿಯೇ ಇಟ್ಟಿವೆ. ಅವುಗಳೆಡೆ ವ್ಯವಧಾನದಿಂದ ಜ್ಞಾನವೆಂಬ ಬೆಳಕನ್ನು ಅರಸಿ ನುಗ್ಗಬೇಕು. ಆಗ ಅತ್ಯಂತ ಕಠಿಣ ದಾರಿಯೂ ಸುಲಭವಾಗಿ ಗೋಚರಿಸುತ್ತದೆ ಎಂಬುದು ಸತ್ಯನ ಪ್ರತಿ ನಡೆಯ ಅರ್ಥ.

ಆದರೆ ಕಲ್ಕಿಯದು ಉಗ್ರಾವತಾರ. ವ್ಯವಸ್ಥೆ ಸಾಮಾನ್ಯರ ಬದುಕನ್ನು ನುಂಗಿದ ಪರಿಯನ್ನು ವಾಸ್ತವದ ನೆರಳಿನೊಂದಿಗೆ ಪರಿಚಯಿಸುವ ಅತ್ಯಾವಸರ. ಏಕೆಂದರೆ ಕಲ್ಕಿ ವಾಸ್ತವ ಪ್ರಜ್ಞೆಯ ಜೊತೆಗೆ ಭವಿಷ್ಯದ ಕೈಗನ್ನಡಿ ನೋಡುಗ.

ಪ್ರಕೃತಿ ಮಾತೆಯ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಆ ಮಾತೆ ಕಲ್ಕಿಯ ಅವ್ವ. ಆಕೆಯ ನಿಷ್ಕ್ರಿಯ ಮೆದುಳನ್ನು ಸರಿಪಡಿಸಲು ಆತ ಮಾಡುವ ಡಬ್ಬಾಳಿಕೆಗಳು ತಿಕ್ಕಲು ವರಸೆಗಳಂತೆ ಕಂಡರೂ ಅದು ಪ್ರಜೆಗಳನ್ನು ಎಚ್ಚರಿಸಲು ಮಾಡುವ ಶಾಕ್ ಟ್ರೀಟ್ ಮೆಂಟ್.

ಆಳುವವರು ವ್ಯವಸ್ಥೆಯನ್ನು ಹೇಗಿಟ್ಟಿದ್ದಾರೆ.. ಜಾತಿ; ಧರ್ಮಗಳನ್ನು ತಲೆಗೇರಿಸಿಕೊಂಡವರ ವಿವೇಚನೆ ಏನಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ‘ಸತ್ ಪ್ರಜೆ’ ಬಳಲುತ್ತಿರುವುದು ಹೇಗೆ..

ಹೌದು ದೇವರು, ಧರ್ಮಗಳ; ಜಾತಿ ಜಾತಿಗಳ ಹೊಡೆದಾಟ ಬಡಿದಾಟ ಸಾಮಾಜಿಕ ನೆಲೆಯಲ್ಲಿ ವಿವೇಚನೆ ಬಳಸಬೇಕಾದ ಸಂದರ್ಭದಲ್ಲಿ ಪ್ರಜೆಯ ಗಮನವೆಲ್ಲಾ ಮನರಂಜನೆಯ (ಸಂಪರ್ಕ ಸಾಧನಗಳ) ಮೇಲಿದೆ ಹಾಗಾಗಿ ಮೊಬೈಲ್ ಮತ್ತು ಟಿವಿಗಳು ಆಹಾರಕ್ಕಿಂತಲೂ ಪಾರುಪಥ್ಯ ಪಡೆದಿವೆ.

ಹೀಗೆ ರಂಜನೆ ಮತ್ತು ವಿಷಯ ಲೋಲುಪ್ತತೆಯಲ್ಲಿ ಮುಳುಗಿರುವ ಇಂತಹ ಜನರನ್ನು ಎಚ್ಚರಿಸಲು ಯಾರಿಂದ ಸಾಧ್ಯ..?

ಅಲ್ಲದೆ ‘ಅರ್ಥ’ವಾಗದ ವ್ಯವಸ್ಥೆಗೆ ಕೈಗನ್ನಡಿ ಹಿಡಿಯುವವರು ಯಾರು..!? ಈ ದೇಶದಲ್ಲಿ ಯಾರಾದರೂ ಸಾಲ ಮಾಡಿ ಕೊಳ್ಳೆ ಹೊಡೆದು ಪರಾರಿಯಾದರೂ ಆತನ ಸಾಲವನ್ನು ಪ್ರಜೆಗಳ ಮೇಲೆ ತೆರಿಗೆ ರೂಪದಲ್ಲಿ ಹಾಕಲಾಗುತ್ತದೆ. ಆದರೆ ಯಾರೂ ಪ್ರಶ್ನಿಸುವುದಿಲ್ಲ. ಏಕೆಂದರೆ ಯಾರಿಗೂ ಅರ್ಥ ವ್ಯವಸ್ಥೆಯ ಅರಿವಿರುವುದಿಲ್ಲ.

ಎಲ್ಲಿಯಾದರೂ ಪೋಲಾಗುತ್ತಿದ್ದರೆ; ರಾಜಕಾರಣಿ ಮಜಾ ಉಡಾಯಿಸುತ್ತಿದ್ದರೆ, ಅದು ನನ್ನದೇ ತೆರಿಗೆಯ ಹಣ ಎಂಬುದು ಪ್ರಜೆಗಳಿಗೆ ಅರ್ಥ ಮಾಡಿಸಲು ಕಟ್ಟಿದ ‘ಕೀಯ’ ವರಸೆ ಇಲ್ಲಿಯೂ ಕಾಣುತ್ತದೆ.

ತಪ್ಪು ವರಸೆಗಳನ್ನು ವಿರೋಧಿಸುವ ಧೋರಣೆಗಳಿಂದ ಉಪೇಂದ್ರ ಹೆಚ್ಚು ಆಪ್ತವಾಗುತ್ತಾರೆ. ಅವರ ಬುದ್ಧಿವಂತಿಕೆ, ಸವಾಲು ಎಲ್ಲದರಲ್ಲಿಯೂ ಪ್ರಜೆಗಳ ನಿರಾಸಕ್ತಿಯ ಮೆರವಣಿಗೆ ಕಾಣುತ್ತದೆ.

ಇದು ಕೇವಲ ಚಿತ್ರವಲ್ಲ; ಎರಡೂವರೆ ಸಾವಿರ ವರ್ಷಗಳ ಹಿಂದೆ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಬಣ್ಣಿಸಿದ ಬುದ್ಧನ ವಿಚಾರ; ಜನರಿಂದಲೇ ಕೊಲ್ಲಲ್ಪಟ್ಟ ಬಸವಣ್ಣ, ಏಸುಕ್ರಿಸ್ತನ ವಿಚಾರಗಳ ಸಮ್ಮಿಲನ. ಭೂತ, ಭವಿಷ್ಯ ಹಾಗೂ ವರ್ತಮಾನದ ಅಣಕ.

ಇಡೀ ಚಿತ್ರವನ್ನು ಸತ್ಯ ಮತ್ತು ಕಲ್ಕಿಯಾಗಿ ಉಪೇಂದ್ರ ಆವರಿಸಿಕೊಂಡಿದ್ದಾರೆ. ಹಾಗಾಗಿ ರವಿಶಂಕರ್ ಹೊರತು ಪಡಿಸಿ ಯಾವ ಪಾತ್ರಗಳು ಎದ್ದು ಕಾಣುವುದಿಲ್ಲ. ಸಾಧು ಕೋಕಿಲ, ರೀಷ್ಮಾ ನಾಣಯ್ಯ, ಅಚ್ಯುತ್ ಕುಮಾರ್, ವಿ.ಮನೋಹರ್ ಹಾಗೂ ದಿವಂಗತ ಗುರು ಪ್ರಸಾದ್ ಮಾತ್ರ ಅಲ್ಲಲ್ಲಿ ಕಾಣುತ್ತಾರೆ.

ಕನ್ನಡ ಚಿತ್ರವೊಂದರ ಶ್ರೀಮಂತ ತಾಂತ್ರಿಕ ಕೌಶಲ್ಯಗಳ ಮೆರವಣಿಗೆ ನೋಡುವ ಸಲುವಾಗಿಯಾಗಿಯಾದರೂ ಚಿತ್ರವನ್ನು ನೋಡಲೇ ಬೇಕು. ಎಚ್.ಸಿ.ವೇಣು ಕ್ಯಾಮೆರಾ ಮತ್ತು‌ ಸಿಜಿ ಮತ್ತು ವಿಎಫ್ ಎಕ್ಸ್ ನ ಸಮರ್ಪಕ ಬಳಕೆ. ಅಜನೀಶ್ ಲೋಕನಾಥ್ ಸಂಗೀತದ ವೈವಿಧ್ಯ ಮತ್ತು ವ್ಯವಧಾನ ಅದ್ದೂರಿತನವನ್ನು ಹೆಚ್ಚಿಸಿವೆ.

ತಮಿಳು ನಿರ್ದೇಶಕ ಎ.ಆರ್.ಮುರಗದಾಸ್ ‘ಏಳಂ ಅರಿವು’ ಮಾಡಿದಾಗ ಜನರಿಗೆ ‘ಅತೀಂದ್ರಿಯ’ ಶಕ್ತಿಯ ಅರಿವೆಯೇ ಆಗದೆ ಅದು ಹೆಚ್ಚು ತಲುಪಲಿಲ್ಲ. ಆದರೆ ‘ಯುಐ’ ನಲ್ಲಿ ಪದರಗಳು ಹೆಚ್ಚಾಗಿದ್ದರೂ ಮೆದುಳು ಸಾಣೆ ಹಿಡಿಯುವ ರೂಪಕಗಳ ಮೂಲಕ ಉಪ್ಪಿ ಗೆಲ್ಲುತ್ತಾರೆ..

ಏಕೆಂದರೆ ಉಪ್ಪಿಗಿಂತ ರುಚಿ ಬೇರೆ ಇಲ್ಲ; ಒಪ್ಪಿಕೊಂಡವರು ದಡ್ಡರೂ ಅಲ್ಲ..

Social Share :

ವಿಶ್ವಮಾನ್ಯ ಪಡೆದ ಉಪ್ಪಿ ಯುಐಗೆ ಪ್ರಪಂಚದಾದ್ಯಂತ 3 ಸಾವಿರ ಸ್ಕ್ರೀನ್

Social Share :

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ‘ಯುಐ’ ಚಿತ್ರ ಪ್ರಪಂಚದ ಮೂರು ಸಾವಿರ ಪರದೆಗಳಲ್ಲಿ ಬಿಡುಗಡೆ ಕಾಣುತ್ತಿದೆ.

ಈಗಾಗಲೇ ದೇಶ ವಿದೇಶಗಳಲ್ಲಿ ಮುಂಗಡ ಟಿಕೆಟ್ ಮಾರಾಟದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ಚಿತ್ರದ ಬಗ್ಗೆ ವಿಶೇಷ ಕುತೂಹಲ ಮೂಡಿ ಅದನ್ನು ನೋಡುವ ತವಕ ಅಭಿಮಾನಿಗಳಲ್ಲಿ ಮೇರೆ ಮೀರಿದೆ. ಹಾಗಾಗಿ ಚಿತ್ರತಂಡ ಖುಷಿಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

ತಾಯಿ ಭುವನೇಶ್ವರಿ, ರಾಜರಾಜೇಶ್ವರಿ ಹಾಗೂ ಚಾಮುಂಡೇಶ್ವರಿ ಆಶೀರ್ವಾದದಿಂದ ಎಲ್ಲವೂ ಚೆನ್ನಾಗಿ ಆಗುತ್ತಿದೆ. ಮೊದಲಿನಿಂದಲೂ ನಮ್ಮ ಮೇಲೆ ತಾಯಿಯ ಆಶೀರ್ವಾದ ಇರುವಂತೆ ಈಗಲೂ ಇರುತ್ತದೆ ಎಂದರು ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು.

ಜನರೇ ಚಿತ್ರವನ್ನು ಹೊತ್ತು ಮೆರೆಸುತ್ತಿದ್ದಾರೆ. ಹಾಗಾಗಿ ಅಭಿಮಾನಿ ದೇವರುಗಳು ಚಿತ್ರವನ್ನು ಗೆಲ್ಲಿಸುವುದರಲ್ಲಿ ಸಂಶಯವೇ ಇಲ್ಲ ಎಂದರು.

ಒಂಭತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಚಿತ್ರ ಡಿಸೆಂಬರ್ 20 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

Social Share :

ಪ್ರೇಮಿಗಳ ದಿನಕ್ಕೆ ನಲಿಯಲು ಅನ್ ಲಾಕ್ ರಾಘವ ಆಗಮನ

Social Share :

* ಫೆಬ್ರವರಿ 7 ಕ್ಕೆ ಬಿಡುಗಡೆ *

ನೈಜ ಪ್ರೇಮ ಕಥೆಗಳು ಯಾವಾಗಲೂ ಸೋಲುವುದಿಲ್ಲ; ಅದೇ ರೀತಿ ರೋಮ್ಯಾಂಟಿಕ್ ಕಥೆಗಳು ಸದಾ ರಮ್ಯಾ ಕಾಲವನ್ನೇ ಸೃಷ್ಟಿಸಿವೆ.

ಇಲ್ಲಿ ಒಂದು ಲವಲವಿಕೆಯ ಪ್ರೇಮ ಕಥೆ ಪ್ರೇಮಿಗಳ ದಿನಕ್ಕೆ ಹತ್ತಿರವಾಗಿ ಪ್ರೇಮಿಗಳನ್ನು ಮೋಡಿ ಮಾಡಲು ಬರುತ್ತಿದೆ.

ಅದೇ ಅನ್ ಲಾಕ್ ರಾಘವ..!

ನವನಟ ಮಿಲಿಂದ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಾಣ ಮಾಡಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಕ.

ಚಿತ್ರದ ಬಿಡುಗಡೆ ಘೋಷಣೆ ಸಲುವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಲ್ಲಿ ಭಾಗವಹಿಸಿತ್ತು.

‘ರಾಮ ರಾಮ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ ಬರೆದಿದ್ದು, ಪ್ರೇಕ್ಷಕನಿಗೆ ಕಚಗುಳಿ ಇಡುವ ನಗು, ಆಹ್ಲಾದ ಪ್ರೇಮೋನ್ಮಾದ ಉಂಟಾಗುವ ನಿರೂಪಣೆ ಇರುತ್ತದೆ ಎಂಬ ವಿವರ ಬಂತು ಚಿತ್ರತಂಡದಿಂದ.

ಚಿತ್ರೀಕರಣ ಆರಂಭವಾದಾಗಿನಿಂದ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ‘ಅನ್ ಲಾಕ್ ರಾಘವ’ 2025 ರ ಆರಂಭಿಕ ಗೆಲುವಿನ ಚಿತ್ರವಾಗುತ್ತದೆ ಎಂಬುದು ಚಿತ್ರತಂಡದ ನಂಬಿಕೆ.

ಅಲ್ಲದೆ ಪ್ರೇಮಿಗಳ ದಿನಕ್ಕೆ ಒಂದು ವಾರ ಮುಂಚೆ ಚಿತ್ರವು ಬಿಡುಗಡೆ ಕಾಣುವುದರಿಂದ ರೋಮಾಂಚನದ ರಸದೌತಣ ಪ್ರೇಮಿಗಳಿಗೆ ಸಿಗಲಿದೆ. ಏಕೆಂದರೆ ಚಿತ್ರಕಥೆಯ ಸಾರ ಆ ರೀತಿ ಇರುತ್ತದೆ ಎಂಬುದು ನಿರ್ದೇಶಕ ದೀಪಕ್ ಮಧುವನಹಳ್ಳಿ ವಿವರಣೆ.

ಮನರಂಜನೆಯ ರಸದೌತಣವಿರುತ್ತದೆ. ಗ್ಲಾಮರ್ ಗೆ ಒತ್ತು ನೀಡಲಾಗಿದೆ ಜೊತೆಗೆ ಈ ಯುವ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದರು.

ಚಿತ್ರದುರ್ಗದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಲವಿತ್ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಗಸು ಎದ್ದು ಕಾಣುತ್ತದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಈಗಾಗಲೇ ಹಾಡುಗಳು ಪ್ರೇಕ್ಷಕರ ಮನ ಗೆದ್ದಿವೆ ಎಂದು ಹೇಳುತ್ತಾ ಹೋದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಒಂದು ಪ್ರೇಮ ಮತ್ತು ಲವ ಲವಿಕೆಯ
ಕಥೆಯ ಭಾಗವಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು ಮುಖ್ಯ ಪಾತ್ರದಲ್ಲಿರುವ ಮಿಲಿಂದ್.

ಸಾಧುಕೋಕಿಲ ಹಾಗೂ ಶೋಭ್ ರಾಜ್, ಅವಿನಾಶ್, ಭೂಮಿ ಶೆಟ್ಟಿ ಮೊದಲಾದವರ ತಾರಾಗಣದ ಈ ಚಿತ್ರದಲ್ಲಿ ತಂತ್ರಜ್ಞರ ಕಾರ್ಯವೈಖರಿ ಅದ್ಭುತ ಎಂದರು.

ಸಂಶೋಧನಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಇದೊಂದು ಸುಂದರ ಕಥಾನಕ ಎಂಬುದು ರೆಚೆಲ್ ಡೇವಿಡ್ ವಿವರಣೆ.

ನಿರ್ಮಾಪಕ ಮಂಜುನಾಥ್ ದಾಸೇಗೌಡ ಅವರಿಗೆ ಇದು ನಾಲ್ಕನೇ ಚಿತ್ರ. ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಖ್ಯವಾಗಿ ತಂತ್ರಜ್ಞರ ಕೆಲಸ ಇಷ್ಟವಾಗಿದೆ ಮತ್ತು ಹೆಚ್ಚು ಭರವಸೆಗಳನ್ನು ಮೂಡಿಸಿದೆ ಎಂದರು ಮಂಜುನಾಥ್ ದಾಸೇಗೌಡ.

Social Share :

ಯುಐ ಟಿಕೆಟ್ ಮಾರಾಟ ದಾಖಲೆ ಉಪ್ಪಿ ಸೃಷ್ಟಿಸಿದ ಹೊಸ ಅಲೆ..

Social Share :

* ಯುಐಗೆ ವಿಶ್ವ ಸಿನಿಮಾ ಮನ್ನಣೆ *

* ಕ್ಷಣ ಕ್ಷಣವೂ ಹೆಚ್ಚಾದ ಕುತೂಹಲ *

* ಶಿವಣ್ಣ, ವಿಜಿ, ಧನಂಜಯ್ ಪ್ರಶಂಸೆ *

ಇದೇ 20 ರಂದು ಬಿಡುಗಡೆ ಕಾಣುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಬಿಡುಗಡೆಗೆ ಇಡೀ ವಿಶ್ವ ಎದುರು ನೋಡುತ್ತಿದೆ.

ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಯುಐ’ ನ ಹೆಸರು ರಾರಾಜಿಸುತ್ತಿದ್ದು, ಇದು ಕನ್ನಡ ಸಿನಿಮಾದ ಅತಿ ದೊಡ್ಡ ಸಾಧನೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ಹೇಗೆಂದರೆ ಐಎಂಡಿಬಿ ನಿರೀಕ್ಷೆಗಳ ಪಟ್ಟಿಯಲ್ಲಿ ‘ಯುಐ’ ಹೆಸರಿದೆ. ಹಾಗಾಗಿ ಚಿತ್ರದ ಬಗ್ಗೆ ವಿಶ್ವ ಮಟ್ಟದಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂಬುದು ಅದರ ವಿವರ.

ಈಚೆಗೆ ಚಿತ್ರದ ಬಿಡುಗಡೆ ಪೂರ್ವ ಇವೆಂಟ್ ನಲ್ಲಿ ಚಿತ್ರರಂಗದ ಗಣ್ಯರು ಉಪೇಂದ್ರ ನಿರ್ದೇಶನ ಮತ್ತು ಕಾರ್ಯ ವೈಖರಿಯನ್ನು ಹಾಡಿ ಹೊಗಳಿದರು.

ಬಿಡುಗಡೆಗೆ ಒಂದು ವಾರ ಮುಂಚೆಯೇ ತೆರೆದುಕೊಂಡ ಟಿಕೆಟ್ ಮಾರಾಟ ಆ ಕ್ಷಣದಿಂದಲೇ ಬುಕ್ ಆಗಿ ಹೊಸ ದಾಖಲೆಯೇ ನಿರ್ಮಾಣವಾಗಿದೆ ಎಂಬ ವಿವರಗಳು ಬಂದವು.

ಯುಐ ಚಿತ್ರ ನೋಡಲು ಬುಕ್ಕಿಂಗ್ ಅವಕಾಶ ತೆರೆದುಕೊಂಡ ತಕ್ಷಣವೇ ದಾಖಲೆ ಪ್ರಮಾಣದ ಟಿಕೆಟ್ ಮಾರಾಟವಾಗಿವೆ ಎಂದು ಕೆವಿಎನ್ ಸಂಸ್ಥೆಯ ಸುಪ್ರೀತ್, ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ವಿವರಗಳನ್ನು ನೀಡಿದರು.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಹೃದಯ ವೈಶಾಲ್ಯವನ್ನು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊಂಡಾಡಿದರು. ಜೊತೆಗೆ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ಯ ಅವರು ಶಿವಣ್ಣ ಹಾಗೂ ಉಪೇಂದ್ರ ಅವರ ಸ್ನೇಹತ್ವವನ್ನು ಹೊಗಳಿದರು.

ನಿರ್ಮಾಪರಾದ ಉದಯ್ ಮೆಹ್ತಾ
ರಮೇಶ್ ರೆಡ್ಡಿ, ಯೋಗಿ, ಕಾರ್ತಿಕ್ ಗೌಡ, ಜಗದೀಶ್, ನಿರ್ದೇಶಕರಾದ
ಡಾ.ಸೂರಿ, ಪವನ್ ಒಡೆಯರ್, ನಟಿಯರಾದ ಮೇದಿನಿ, ನೀತು, ನಿಧಿ ಸುಬ್ಬಯ್ಯ ಹಾಗೂ ನಟ
ಕಾರ್ಕೋಚ್ ಸುಧಿ, ರವಿಶಂಕರ್ ಚಿತ್ರ ಹಾಗೂ ಉಪ್ಪಿ ಶ್ರಮ ಕುರಿತು ಮಾತನಾಡಿದರು.

ಪ್ರಿಯಾಂಕ ಉಪೇಂದ್ರ ಹಾಗೂ
ರೀಶ್ಮಾ ನಾಣಯ್ಯ ಉಪೇಂದ್ರ ಅವರ ಕಾರ್ಯ ಕ್ಷಮತೆಯನ್ನು ಹೊಗಳಿದರು. ಚಿತ್ರವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಲಹರಿ ಸಂಸ್ಥೆ ಹಾಗೂ ವೀನಸ್ ಎಂಟರ್ ಪ್ರೈಸಸ್ ನ ಮನೋಹರ ನಾಯ್ಡು, ಲಹರಿ ವೇಲು ಹಾಗೂ ಕೆ.ಪಿ.ಶ್ರೀಕಾಂತ್ ಉಪ್ಪಿಯ ಶ್ರಮ ಮತ್ತು ಔದಾರ್ಯವನ್ನು ಕೊಂಡಾಡಿದರು.

ಈ ಅದ್ದೂರಿ ಪ್ರಚಾರ ಸಭೆಯಲ್ಲಿ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಸೇರಿದಂತೆ ಚಿತ್ರದಲ್ಲಿ ದುಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು ಉಪೇಂದ್ರ.

ಯುಐ ಎಂದರೆ ಅದು ಉಪ್ಪಿ ಹುಳ. ಚಿತ್ರ ನೋಡಿದ ನಂತರ ಅರ್ಥವಾಗಬಹುದು. ಅಲ್ಲಿಯವರೆಗೆ ಯೂಸ್ ಯುವರ್ ಇಂಟಲಿಜೆನ್ಸ್, ನಾನು ಮತ್ತು ನೀನು, ಯುನಿವರ್ಷಲ್ ಇಂಟಲಿಜೆನ್ಸ್ ಹೀಗೆ ಅನೇಕ ಕಲ್ಪನೆಗಳು ಸಭೆಯಲ್ಲಿಯೂ ಲಾಸ್ಯವಾಡಿದವು.

Social Share :

ಪ್ರೇಮ್ ಕೆಡಿ ಶಿವ ಶಿವ ಹಾಡು ಕನ್ನಡದ ದುಬಾರಿ ಆಲ್ಬಂ..

Social Share :


ಹೆಸರಾಂತ ನಿರ್ದೇಶಕ; ಕನ್ನಡದ ಶೋಮ್ಯಾನ್ ‌ಖ್ಯಾತಿಯ ಜೋಗಿ ಪ್ರೇಮ್ ಅವರು ಹಾಡುಗಳ ವಿಷಯದಲ್ಲಿ ಯಾವಾಗಲೂ ಹೆಚ್ಚುಗಾರಿಕೆ ಕಾಯ್ದುಕೊಳ್ಳುವುದು ರೂಢಿ.

ಪ್ರೇಮ್ ಅವರ ಬಹು ನಿರೀಕ್ಷೆಯ ‘ಕೆಡಿ’ ಚಿತ್ರದ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ (ಸುಮಾರು 17.70 ಕೋಟಿ) ಮಾರಾಟವಾಗಿರುವುದು ಸ್ಯಾಂಡಲ್ ವುಡ್ ಗೆ ದೊಡ್ಡ ಪ್ರಭಾವಳಿಯನ್ನು ತಂದು ಕೊಟ್ಟಿದೆ.

ಮತ್ತು ಈಗ ಮೊದಲ ಹಾಡು ‘ಶಿವ ಶಿವ’ ಬಿಡುಗಡೆಯ ಹಾದಿಯಲ್ಲಿ ಬಹು ದೊಡ್ಡ ನಿರೀಕ್ಷೆ ಹಾಗೂ ಕುತೂಹಲ ಏರ್ಪಟ್ಟಿದೆ.

ಆನಂದ್ ಆಡಿಯೋ ಮೂಲಕ ಕನ್ನಡದ ಸಿನಿಮಾವೊಂದರ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿರುವುದರಿಂದ ಈ ವಿಷಯದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಂಡಂತ್ತಾಗಿವೆ. ಹಾಗೆಯೇ ಈ ವಿಷಯದಲ್ಲಿ ಜೋಗಿ ಪ್ರೇಮ್ ಇಡೀ ಸ್ಯಾಂಡಲ್ ವುಡ್ ಬೆರಗಾಗುವಂತೆ ಅಚ್ಚರಿಗಳನ್ನು ಮೊಗೆದು ಕೊಟ್ಟಿದ್ದಾರೆ.

ಈಚೆಗೆ ನಿರ್ದೇಶಕ ಜೋಗಿ ಪ್ರೇಮ್, ನಾಯಕ ನಟ ಧ್ರುವ ಸರ್ಜಾ ಹಾಗೂ ಕಾರ್ಯಕಾರಿ ನಿರ್ಮಾಪಕ (ಕೆವಿಎನ್ ಸಂಸ್ಥೆಯ) ಸುಪ್ರೀತ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.

ಕರ್ನಾಟಕದಲ್ಲಿ ಕೊತ್ವಾಲ್ ರಾಮಚಂದ್ರ, ಜೈರಾಜ್, ಆಯಿಲ್ ಕುಮಾರ್ ಹೀಗೆ ರೌಡಿ ಸಾಮ್ರಾಜ್ಯ ಮೆರೆದಾಡುವುದಕ್ಕೂ ಮುಂಚೆ ಇದ್ದ ವಿಚಿತ್ರ ಮ್ಯಾನರಿಜಂನ ಕಾಳಿದಾಸ (ಚಿತ್ರದಲ್ಲಿ ಹೆಸರು) ಎಂಬ ರೌಡಿಸಂ ಹಿನ್ನೆಲೆಯ ವ್ಯಕ್ತಿಯ ಕಥೆ ಇದು.

70ರ ದಶಕದಲ್ಲಿ ನಡೆಯುವ ಈ ಕಥೆಗೆ ಅದೇ ಮಾದರಿಯ ವಸ್ತ್ರ ವಿನ್ಯಾಸವನ್ನು ಚಿತ್ರದಲ್ಲಿ ಕಾಯ್ದುಕೊಳ್ಳಲಾಗಿದೆ. ಬದಲಾದ ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡಿದರು ನಿರ್ದೇಶಕ ಜೋಗಿ ಪ್ರೇಮ್.

ಕಾಳಿದಾಸ ಪಾತ್ರದ ಹೆಸರು. ಆದರೆ ನಿಜವಾಗಿ ಅದು ಯಾರು ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ. ಏಕೆಂದರೆ ‘ಕರಿಯ’ ಚಿತ್ರ ಮಾಡಿದಾಗ ಹೆಸರಿನಿಂದ ಸಮಸ್ಯೆ ಎದುರು ಹಾಕಿಕೊಂಡಿದ್ದೆವು ಎಂಬ ವಿವರ ಕೊಟ್ಟರು.

ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ’ ಎರಡು ಹಾಡುಗಳ ಹೊರತುಪಡಿಸಿ ಚಿತ್ರೀಕರಣ ಮುಗಿಸಿದೆ. ಹಾಗೆಯೇ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋ ದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

ಈ ತಿಂಗಳು ಅಂದರೆ ಡಿಸೆಂಬರ್ 24 ರಂದು ‘ಶಿವ ಶಿವ’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ; ಈ ಹಾಡನ್ನು ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿದ್ದಾರೆ.
ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿದ್ದು ‘ಕೆಡಿ’ ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರ ಹೊಮ್ಮಲಿದೆ ಎಂಬುದು ಚಿತ್ರತಂಡದ ನಿರೀಕ್ಷೆ.

ಜಾನಪದ ಶೈಲಿ ಹಾಡು ಕೂಡ ಚಿತ್ರದಲ್ಲಿದೆ. ಮೊದಲ ಹಾಡು ಇಲ್ಲಿ ಬಿಡುಗಡೆ ಮಾಡಲಾಗುವುದು. ಮತ್ತೊಂದು ಹಾಡು ಮುಂಬೈನಲ್ಲಿ ಬಿಡುಗಡೆ ಕಾಣುತ್ತಿದೆ.

ಚಿತ್ರಕ್ಕೆ ಒಟ್ಟು 150 ದಿನಗಳ ಚಿತ್ರೀಕರಣ ನಡೆದಿದ್ದು, ಇನ್ನುಎರಡು ಹಾಡುಗಳು ಮಾತ್ರ ಬಾಕಿ ಇವೆ ಮತ್ತು ಸಿನಿಮಾದಲ್ಲಿ ಬ್ಲಡ್ ಶೇಡ್ ಇದ್ದರೂ ಕಥೆಗೆ ಅದನ್ನೆಲ್ಲಾ ನಿಭಾಯಿಸುವ ಶಕ್ತಿ ಇದೆ ಎಂದು ಹೇಳುತ್ತಾ ಹೋದರು ಪ್ರೇಮ್.

ಧ್ರುವ ಸರ್ಜಾ ಕೇವಲ 21 ದಿನದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡು ಈ ಚಿತ್ರದ ಸಲುವಾಗಿ ಬಹಳವೇ ಶ್ರಮ ಹಾಕಿದ್ದಾರೆ. ಅವರ ತ್ಯಾಗ ಮನೋಭಾವ ಬಹಳ ದೊಡ್ಡದು ಎಂದರು.

‘ನಾನು ನನ್ನ ಅಭಿಮಾನಿಗಳನ್ನು ರಂಜಿಸಲು ಎಂತಹ ತೊಂದರೆಯನ್ನು ಕೂಡ ಎದುರಿಸಲು ಸಿದ್ಧವಾಗಿರುವೆ’ ಎಂದು ಇದೇ ಸಂದರ್ಭದಲ್ಲಿ ಗಟ್ಟಿಯಾಗಿ ಹೇಳಿದರು ಧ್ರುವಸರ್ಜಾ.

ಈ ಸಿನಿಮಾದ ವ್ಯಾಪಾರಕ್ಕೆ ಇನ್ನು ತೆರೆದುಕೊಂಡಿಲ್ಲ; ಆದರೆ ಆಡಿಯೋ ಹಕ್ಕುಗಳು ದೊಡ್ಡ ಮಟ್ಟಕ್ಕೆ ಮಾರಾಟವಾಗಿದೆ. ನಿಮಗೆ ಬೇಕಾದರೆ ಒಪ್ಪಂದದ ದಾಖಲೆ ಮುಂದಿಡುವೆ ಎಂದರು ಕಾರ್ಯಕಾರಿ ನಿರ್ಮಾಪಕ ಸುಪ್ರೀತ್.

ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಯಲ್ಲಿ ಸಂಜಯ್‌ದತ್ ಧಕ್ ದೇವನಾಗಿ ಮಿಂಚಿದ್ದಾರೆ. ಅಲ್ಲದೆ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

70 ರ ದಶಕದಲ್ಲಿ ನಡೆಯುವ ಕಥೆಯ ಚಿತ್ರೀಕರಣದ ಸಲುವಾಗಿ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‌ನ್ನು ಹಾಕಿ ಚಿತ್ರೀಕರಿಸಲಾಗಿದೆ.

ಹಾಡುಗಳು ವರ್ಣರಂಜಿತ ಮತ್ತು ಅದ್ದೂರಿ ಎಂಬುದರಲ್ಲಿ ಸಂಶಯವೇ ಇಲ್ಲ. ಅರ್ಜುನ್ ಜನ್ಯ 200 ವಿಶೇಷ ಸಂಗೀತಗಾರರನ್ನು ಕಲೆ ಹಾಕಿ ಹಾಡುಗಳನ್ನು ಸಂಯೋಜನೆ ಮಾಡಿದ್ದು, ಆರ್ಕೇಸ್ಟ್ರಾ ವಿಶೇಷ ನೆಲೆಯಲ್ಲಿ ದಾಖಲೆ ಮಾಡಿದೆ.

ಹಾಡುಗಳ ಸಲುವಾಗಿ ಆರು ನೃತ್ಯ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯಾಗಿದ್ದು, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರವು ಮುಂದಿನ ವರ್ಷದ ಯುಗಾದಿ ಹೊತ್ತಿಗೆ ತೆರೆಕಾಣಲಿದೆ ಎಂಬ ವಿವರಗಳು ಬಂದವು.

Social Share :

ಆರ್.ಚಂದ್ರು ಸ್ಟುಡಿಯೋಸ್ ಚಿತ್ರ ಫಾದರ್ ಮೋಷನ್ ಪೋಸ್ಟರ್..

Social Share :

ಕನ್ನಡದ ಸಾಹಸಿ ನಿರ್ಮಾಪಕರ ಸಾಲಿಗೆ ಪ್ರವೇಶ ಪಡೆದಿರುವ ಆರ್.ಚಂದ್ರು ಈಗ ಮತ್ತಷ್ಟು ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದಾರೆ.

ಅವರು ಘೋಷಣೆ ಮಾಡಿದಂತೆ ಆರು ಚಿತ್ರಗಳ ನಿರ್ಮಾಣದ ಕಾರ್ಯಕ್ಕೆ ವೇಗವನ್ನು ನೀಡಿದ ಖುಷಿಯಲ್ಲಿ ಬೀಗುತ್ತಿದ್ದಾರೆ.

ಏಕೆಂದರೆ ಮೊದಲ ಚಿತ್ರ ‘ಫಾದರ್’ ಚಿತ್ರೀಕರಣದ ಕೆಲಸಗಳು ಮುಗಿದಿದ್ದು, ಚಿತ್ರದ ಬಗ್ಗೆ ಅಪಾರ ಭರವಸೆಯ ನೆಲೆಯಲ್ಲಿ ಉಳಿದ ಕೆಲಸಗಳು ನಡೆಯುತ್ತಿವೆ.

ಈ ಚಿತ್ರದ ಪ್ರಚಾರದ ಭಾಗವಾಗಿ ಈಚೆಗೆ ನಡೆದ ಅದ್ದೂರಿ ಕಾರ್ಯಕ್ರಮ ದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಂಡಿದ್ದು, ಅದೀಗ ತೀವ್ರ ಕುತೂಹಲದ ವಿಷಯವಾಗಿ ಮಾರ್ಪಟ್ಟಿದೆ.

ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ತಂದೆ ಪಾತ್ರದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ಅವರ ಸಹಜ ನಟನೆಯ ಸುತ್ತ ಆವರಿಸಿರುವ ಸಂಚಲನೆ ಇದಾಗಿದೆ.

ಆರ್.ಚಂದ್ರು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರದ ಆಶಯಗಳನ್ನು ಮತ್ತು ಆರ್.ಚಂದ್ರು ಅವರ ಕೆಚ್ಚೆದೆಯ ಸವಾಲುಗಳನ್ನು ಅವರು ಕೊಂಡಾಡಿದರು.

ಚಂದ್ರು ಅವರ ಹಿತೈಷಿಯಾಗಿರುವ ಹಿರಿಯ ರಾಜಕಾರಣಿ ಮತ್ತು ಸರ್ಕಾರದ ಗ್ಯಾರಟಿ ಸಮಿತಿ ಅಧ್ಯಕ್ಷರಾಗಿರುವ ಎಚ್.ಎಂ.ರೇವಣ್ಣ, ನಟ ಅನೂಪ್ ಹಾಗೂ ಆನಂದ್ ಆಡಿಯೋ ಶ್ಯಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷ ವಾಗಿತ್ತು.

ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಚಿತ್ರತಂಡ ಫಾದರ್ ಚಿತ್ರದ ಹೆಮ್ಮೆಯ ಆಶಯಗಳನ್ನು ವಿವರಿಸಿತು. ಆರ್.ಸಿ.ಸ್ಟುಡಿಯೋಸ್ ಚಿತ್ರಗಳ ನಿರ್ಮಾಣದ ವಿಷಯದಲ್ಲಿ ವೇಗ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ವಿವರಿಸಿದರು ಆರ್.ಚಂದ್ರು.

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ನೂರು ಕೋಟಿ ಸಿನಿಮಾ (ಕಬ್ಜ) ಮಾಡುವ ಮಟ್ಟಕ್ಕೆ ಬೆಳೆಯುವುದು ಹೇಗೆ ಸಾಧ್ಯವಾಯಿತು ಎಂಬುದು ನನಗೇ ಅಚ್ಚರಿಯಾಗಿದೆ. ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ 12 ಚಿತ್ರಗಳು ನಿರ್ಮಾಣವಾದವು. ನಂತರ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾಗಳನ್ನು ಮಾಡುವ ಅದಮ್ಯ ಇಚ್ಛೆಯಿಂದ ಆರ್.ಸಿ.ಸ್ಟುಡಿಯೋಸ್ ಹುಟ್ಟು ಹಾಕಲಾಗಿದೆ ಎಂದು ವಿವರಿಸಿದರು ಆರ್.ಚಂದ್ರು.

ಅಪ್ಪ ಮಗನ ಬಾಂಧವ್ಯದ ವಿಷಯದಲ್ಲಿ ಹೊಸತನವನ್ನು ಕಾಯ್ದುಕೊಳ್ಳಲಾಗಿದೆ. ಡಾರ್ಲಿಂಗ್ ಕೃಷ್ಣ ಇಲ್ಲಿ ಬೇರೆಯದೇ ಆದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ವಿವರಗಳು ಬಂದವು.

‘ಫಾದರ್’ ಚಿತ್ರ ಮಾಡುವಾಗಲೇ ಫಾದರ್ ಆಗುವ ಯೋಗ ಬಂದಿದ್ದು, ಆಕಸ್ಮಿಕ ಮತ್ತು ಪುಣ್ಯದಿಂದ ಇರಬಹುದು ಎಂದರು ಡಾರ್ಲಿಂಗ್ ಕೃಷ್ಣ. ಅಮೃತಾ ಅಯ್ಯಂಗಾರ್ ಕೂಡ ತಮ್ಮ ಪಾತ್ರದ ಚಿತ್ರತಂಡದ ಸಹಕಾರಗಳ ಕುರಿತು ಮಾತನಾಡಿದರು.

ಪ್ರಕಾಶ್ ರೈ ಅವರ ಪಾತ್ರಕ್ಕೆ ಬೇರೆಯದೇ ಆದ ನೆಲೆ ಇದೆ. ಇಲ್ಲಿಯವರೆಗಿನ ಅವರ ಪಾತ್ರಗಳ ಹೆಚ್ಚುಗಾರಿಕೆಯ ಸಮಕ್ಕೆ ಈ ಪಾತ್ರ ಬಂದು ನಿಲ್ಲಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ನಿರ್ದೇಶಕ ರಾಜ್ ಮೋಹನ್, ನಟ ನಾಗ್ ಭೂಷಣ್, ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಛಾಯಾಗ್ರಾಹಕ ಸುಜ್ಞಾನ್, ಸಾಹಿತಿ ಮಂಜುನಾಥ್ ಮಾಗೋದಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಮನೆ ಮಂದಿಗೆ ವಿಶೇಷ ಮನರಂಜನೆ ಪ್ರೊಲುಡೋ ಸ್ಟಾರ್ ಲೀಗ್ ಆಟ..

Social Share :

* ಜನವರಿಯಲ್ಲಿ ಸುದ್ದಿ‌ಮಾಧ್ಯಮದ ಚಾನೆಲ್ ನಲ್ಲಿ *

*ಹಿರಿತೆರೆ ಹಾಗೂ ಕಿರುತೆರೆ ಕಲಾವಿದರು ಭಾಗಿ*

ಕಲರ್ ಕಲರ್ ವಸ್ತ್ರ ವಿನ್ಯಾಸದಲ್ಲಿ ಸುಂದರ ರೂಪದರ್ಶಿಯರು ಪಾನ್ ಗಳಾಗಿ ಭಾಗವಹಿಸುವ ವಿಶಿಷ್ಟತೆ ಕಾಣುವ ಆಟವೇ ಪ್ರೋ ಲುಡೋ ಸ್ಟಾರ್ ಲೀಗ್ ಪಂದ್ಯಾವಳಿ.

ರಿಯಾಲಿಟಿ ಶೋಗಳು ಮತ್ತು ಕ್ರೀಡಾ ಲೀಗ್‌ಗಳ ಈ ಜಮಾನಾದಲ್ಲಿ ಇದೇ ಮೊದಲ ಬಾರಿಗೆ ‘ಪ್ರೊ ಲುಡೋ ಸ್ಟಾರ್ ಲೀಗ್’ ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ.

ಜನವರಿಯಲ್ಲಿ ಆರಂಭವಾಗಲಿರುವ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಆಯೋಜಕರು, ನಿರೂಪಕರು ಹಾಗೂ ಆಟಗಾರರು ಮಾತನಾಡಿದರು.

ಆಸ್ತ್ರ ಪ್ರೊಡಕ್ಷನ್ಸ್ ನ ಹಾಗೂ ಮಂಗಳೂರು ಮೂಲದ ಲಂಚು ಲಾಲ್ ಈ ಲೀಗ್ ನ ಆಯೋಜಕರಾಗಿದ್ದು, ಸುದೇಶ್ ಭಂಡಾರಿ ನಿರ್ದೇಶಕರು ಹಾಗೂ ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

ಇದೇ ಮೊದಲ ಬಾರಿಗೆ 40×40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ ಅಷ್ಟೇ ಆಕರ್ಷಕವಾಗಿರಲಿದೆ. ಈ ಲೀಗ್ ನಲ್ಲಿ ಒಟ್ಟು ಎಂಟು ತಂಡಗಳಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿದ 16 ತಾರೆಯರು ಈ ಎಂಟು ತಂಡಗಳಲ್ಲಿ
ಆಡಲಿದ್ದಾರೆ.

ಇವರಲ್ಲದೆ 16 ರೂಪದರ್ಶಿಯರು ಆಟದ ವಿಶೇಷ ಆಕರ್ಷಣೆಯಾಗಿ ಇರಲಿದ್ದಾರೆ. ಅರುಣ್ ಹರಿಹರನ್ ಮತ್ತು ಜಾಹ್ನವಿ ಈ ಲುಡೋ ಸ್ಟಾರ್‌ ಲೀಗ್‌ನ ಆಂಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿ ಪಂದ್ಯಕ್ಕೂ ಮೊದಲು ಮತ್ತು ನಂತರ ಆಟಗಾರರೊಂದಿಗೆ ಆಕರ್ಷಕವಾದ ಕಾಮೆಂಟರಿ, ಉತ್ಸಾಹಭರಿತ ಸಂವಾದಗಳೊಂದಿಗೆ ವೀಕ್ಷಕರನ್ನು ಈ ಜೋಡಿ ಆಕರ್ಷಿಸಲಿದೆ.

ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗಲಿದ್ದಾರೆ ಎಂಬುದೇ ಈ ಸ್ಪರ್ಧೆಯ ವಿಶೇಷ. ಮಾಮೂಲಿ ಲುಡೋ ಆಟದ ನಿಯಮಗಳಿಗಿಂತ ಇಲ್ಲಿ ಬೇರೆ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬ ವಿವರಗಳು ಬಂದವು.

ಹದಿನೈದು ದಿನಗಳ ಚಿತ್ರೀಕರಣ ನಡೆಯಲಿದೆ. ಎಂಟು ತಂಡಗಳ ವಿವರ ಹಾಗೂ ಅದರಲ್ಲಿ ಆಡುವ ಸ್ಟಾರ್ ಆಟಗಾರರ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ.

1) ಪ್ರೌಡ್‌ ತುಳುವರು – ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ
2) ಮಿಮಿಕ್ರಿ ಮ್ಯಾಜಿಕ್ – ಮಿಮಿಕ್ರಿ ಗೋಪಿ ಮತ್ತು ವಿನುತ
3) ಟ್ವಿನ್‌ ಸ್ಟಾರ್ಸ್‌- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ
4) ದಿ ಪವರ್ ಕಪಲ್ – ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್
5) ಲಾಫ್ಟರ್ ಲೆಜೆಂಡ್ಸ್ – ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್
6) ಮಲೆನಾಡು ಕ್ವೀನ್ಸ್ – ಚಂದನ ಗೌಡ ಮತ್ತು ಅಮೃತಾ
7) ಗೌಡ ವಾರಿಯರ್ಸ್ – ಕೆಂಪೇಗೌಡ ಮತ್ತು ಮಾನ್ಯ ಗೌಡ
8) ದಿ ಡ್ರೀಮರ್ಸ್ – ಸೀತಾರಾಮ್ ಮತ್ತು ಸಾಕ್ಷಿ ಮೇಘನ.

ಪ್ರೋ ಲುಡೋ ಸ್ಟಾರ್ ಲೀಗ್ ಬಗ್ಗೆ ನಿರ್ದೇಶಕ ಸುದೇಶ್ ಭಂಡಾರಿ ಮಾಹಿತಿ ನೀಡಿದರು. ನಿರ್ಮಾಪಕ ಲಂಚುಲಾಲ್, ಲೀಗ್ ನಲ್ಲಿ ಪಾಲ್ಗೊಳ್ಳುತ್ತಿರುವ ಕಲಾವಿದರಾದ ಕೆಂಪೇಗೌಡ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ಮಾನ್ಯ ಗೌಡ, ಸೀತರಾಮ, ಚಂದನ ಗೌಡ, ಸಾಕ್ಷಿ ಮೇಘನಾ ಉಪಸ್ಥಿತರಿದ್ದರು.

Social Share :

ಯುಐ ಗೆ ಹೆಚ್ಚಿದ ಕುತೂಹಲ ಭಾರತೀಯ ಚಿತ್ರರಂಗ ಬೆಂಬಲ

Social Share :

ಬುದ್ಧಿವಂತ ಉಪೇಂದ್ರ ದೂರದೃಷ್ಟಿ ಇಟ್ಟು ಮಾಡುವ ಚಿತ್ರಗಳು ಎಂದಿಗೂ ದಾಖಲೆ ನಿರ್ಮಿಸುತ್ತವೆ..

ಇದೀಗ ‘ಯು ಐ’ ಚಿತ್ರದ ‘ವಾರ್ನರ್’ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸ್ಟಾರ್ ಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ಅಮಿರ್ ಖಾನ್, ರಜನಿಕಾಂತ್ ಅವರಿಂದ ಪ್ರಶಂಸೆ ಪಡೆದಿರುವ ಚಿತ್ರದ ಕುರಿತು ಮತ್ತೊಬ್ಬ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ‘ಪುಷ್ಪ-2’ ಖ್ಯಾತಿಯ ಅಲ್ಲು ಅರ್ಜುನ್. ಇಂದು ಅಂದರೆ ಶನಿವಾರ ನಟ, ನಿರ್ದೇಶಕ ಉಪೇಂದ್ರ ಹಾಗೂ ಯುಐ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾಗಿರುವ ಲಹರಿ ವೇಲು ಅವರು ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದರು.

ಹೀಗೊಂದು ಸೌಹಾರ್ದದ ಭೇಟಿ ಎಂದು ಇದು ಬಣ್ಣಿಸಲ್ಪಟ್ಟಿತ್ತಾದರೂ ಅಲ್ಲು ಅರ್ಜುನ್ ಯುಐ ತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು.

ನಾಳಿನ ಜನ ಸಮೂಹ ಮತ್ತು ಸಮಸ್ಯೆಗಳ ಕುರಿತಾಗಿ ಇರುವ ಯುಐ ಚಿತ್ರದ ವಾರ್ನರ್ ಗೆ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ. ಈಚೆಗಷ್ಟೇ ಬಾಲಿವುಡ್ ನ ಪ್ರಖ್ಯಾತ ನಟ ಅಮಿರ್ ಖಾನ್ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

2040ರ ಸಂದರ್ಭದಲ್ಲಿ ಭಾರತದ ಜನರ ವರ್ತನೆ ಮತ್ತು ಸಂದರ್ಭ ಹೇಗಿರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿರುವ ಟ್ರೈಲರ್ ದೇಶದಾದ್ಯಂತ ಈಗ ಸದ್ದು ಮಾಡುತ್ತಿದೆ.

Social Share :