Snehapriya.com

June 8, 2025

admin

ಅಡ್ವೆಂಚರ್ಸ್ ಕಾಮಿಡಿ ಫಾರೆಸ್ಟ್ ಜನವರಿ 24ಕ್ಕೆ ಚಿತ್ರ ಬಿಡುಗಡೆ..

Social Share :

* ಜನವರಿ10ರಂದು ಟ್ರೈಲರ್ ಬಿಡುಗಡೆ *

* ಪೈಸಾ ಪೈಸಾ ಪೈಸಾ ಹಾಡು ಸೂಪರ್ ಹಿಟ್ *

ಅದ್ದೂರಿ ತಾರಾಗಣ ಹೊಂದಿರುವ ‘ಫಾರೆಸ್ಟ್’ ಚಿತ್ರ ಇದೇ ಜನವರಿ 24 ರಂದು ತೆರೆ ಕಾಣುತ್ತಿದ್ದು, ಚಿತ್ರದ ಟ್ರೈಲರ್ ಜನವರಿ 10 ರಂದು ಅನಾವರಣಗೊಳ್ಳಲಿದೆ.

ಕನ್ನಡದ ಎದೆಗಾರಿಕೆಯ ನಿರ್ಮಾಪಕರ ಸಾಲಿಗೆ ಸೇರಲು ಹೊರಟಿರುವ ಉದ್ಯಮಿ ಎನ್.ಎಮ್.ಕಾಂತರಾಜ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದೆ.

ಆರಂಭದಿಂದಲೂ ಕುತೂಹಲ ಮೂಡಿಸಿರುವ, ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ ‘ಫಾರೆಸ್ಟ್’ ಚಿತ್ರದ ‘ಪೈಸಾ ಪೈಸಾ ಪೈಸಾ..’ ಎಂಬ ಹಾಡು ಈಚೆಗೆ ಬಿಡುಗಡೆ ಕಂಡು ಐದು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿರುವುದು ವಿಶೇಷ.

ಬಹದ್ದೂರ್ ಚೇತನ್ ಕುಮಾರ್ ಗೀತ ರಚನೆ ಇರುವ ಹಾಗೂ ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬಂದಿರುವ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿಯಾಗಿದೆ.

ಧರ್ಮವಿಶ್ ಸಂಗೀತ ನೀಡಿರುವ ಈ ಹಾಡಿಗೆ ಅಜಯ್ ಶಿವಶಂಕರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಶರಣ್ಯ ಶೆಟ್ಟಿ ಹಾಗೂ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ.

ಶೀರ್ಷಿಕೆಯಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ‘ಫಾರೆಸ್ಟ್’ ಜನವರಿ 24 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಜನವರಿ 10ರಂದು ಟ್ರೇಲರ್ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮುನ್ನ ಚಿತ್ರದ ಪ್ರಚಾರವೇ ಗಮನ ಸೆಳೆದಿದೆ. ಚಿತ್ರದ ಈ ಪ್ರಚಾರಕ್ಕೆ ಪಿ.ವಿ.ಆರ್ ಸಂಸ್ಥೆ ಕೈಜೋಡಿಸಿದೆ. ಜನವರಿ ಹತ್ತರಿಂದ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಟ್ರೇಲರ್ ಪ್ರದರ್ಶನವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ‘ಮ್ಯಾಕ್ಸ್’ ಚಿತ್ರದ ಪ್ರದರ್ಶನದ ವೇಳೆ ಚಿತ್ರದ ಟ್ರೈಲರ್ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನವಾಗಿದೆ ಎಂದು ನಿರ್ಮಾಪಕ ಎನ್.ಎಂ.ಕಾಂತರಾಜ್ ತಿಳಿಸಿದ್ದಾರೆ.

ಅರಣ್ಯದಲ್ಲೇ ಹೆಚ್ಚು ಭಾಗದ ಚಿತ್ರೀಕರಣ ನಡೆದಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಸಂಭಾಷಣೆಯನ್ನೂ ಬರೆದಿದ್ದು, ಧರ್ಮವಿಶ್ ಸಂಗೀತ ನಿರ್ದೇಶನ ಹಾಗೂ ಆನಂದ್‌ ರಾಜಾ ವಿಕ್ರಮ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಸಾಹಸ ನಿರ್ದೇಶನವಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.

ಇನ್ನುಳಿದಂತೆ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮೊದಲಾವರ ತಾರಾ ಬಳಗವಿದೆ.

Social Share :

ಶಿವಣ್ಣ ಸಂಪೂರ್ಣ ಆರೋಗ್ಯ ಮೊದಲಿಗಿಂತ ಲವಲವಿಕೆ..

Social Share :

ಅಮೆರಿಕಾದಲ್ಲಿ ಮೂತ್ರಕೋಶದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ.

ಅವರೀಗ ತವರಿಗೆ ಮರಳುವ ಉತ್ಸಾಹದಲ್ಲಿದ್ದು, ಆರೋಗ್ಯದ ನಿಯಮಗಳ ಪಾಲನೆಯಲ್ಲಿ ತೊಡಗಿದ್ದಾರೆ. ಜೊತೆಗೆ ತಮ್ಮ ಆರೋಗ್ಯ ಚೇತರಿಕೆಗೆ ಸಹಕರಿಸಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.

ಪತಿಯ ಆರೋಗ್ಯದ ವಿಚಾರದಲ್ಲಿ ತೀರಾ ಭಾವುಕರಾಗಿದ್ದ ಗೀತಾ ಶಿವರಾಜ್ ಕುಮಾರ್, ಅಭಿಮಾನಿಗಳ, ಹಿತೈಷಿಗಳ ಹಾರೈಕೆ ಫಲಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಈಗ ಮೊದಲಿಗಿಂತಲೂ ಹೆಚ್ಚಿನ ರೀತಿಯಲ್ಲಿ ಉತ್ಸಾಹ, ಉಲ್ಲಾಸದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಕಳೆಯಲಿದ್ದಾರೆ. ಜೊತೆಗೆ ಹಾಡು ಸಾಹಸ ದೃಶ್ಯಗಳಲ್ಲಿ ಭಾಗವಹಿಸಲು ದೇಹ ಫಿಟ್ ಆಗಿರುತ್ತದೆ ಎಂಬುದು ಅವರ ಹಿತೈಷಿಗಳ ನಂಬಿಕೆ.

ಶಿವಣ್ಣ ಮಾತನಾಡಿರುವ ವೀಡಿಯೋ ದಲ್ಲಿ ದೇವರ ದಯೆ ಸಂಪೂರ್ಣ ಆರೋಗ್ಯ ಚೇತರಿಕೆ ಕಂಡಿದೆ. ಚಿತ್ರಗಳಲ್ಲಿ ಅಭಿನಯಿಸುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.

ಮಾನವೀಯ ಅನುಕಂಪ; ಸರಳ ಸಜ್ಜನಿಕೆ ಹೊಂದಿರುವ ಕನ್ನಡದ ಈ ಸುಪುತ್ರ ಇನ್ನೂ ಹೆಚ್ಚಿನ ಸಂಖ್ಯೆಯ ಚಿತ್ರಗಳಲ್ಲಿ ಅಭಿನಯಿಸಲಿ ಎಂಬುದು ಅಭಿಮಾನಿಗಳ ಕೋರಿಕೆ.

ಇದೇ 25 ರಂದು ತವರಿಗೆ ಮರಳುವ ಶಿವಣ್ಣ ಹೊಸ ಉತ್ಸಾಹದಲ್ಲಿ ಮಿಂದೇಳಲಿದ್ದಾರೆ ಎಂದು ಅವರ‌ ಆಪ್ತ ಬಳಗ ಸಂತಸ ವ್ಯಕ್ತಪಡಿಸಿದೆ.

Social Share :

ನೆನಪಾಗಿ ಹರಿದ ವಿಷ್ಣು ಜೀವನಗಾಥೆ ಸಾಹಸಸಿಂಹನ ತ್ಯಾಗರಾಜ ಇತಿಹಾಸ

Social Share :

* ಸಿಂಹದ ಹಾದಿ ಚಿತ್ರದ ಟ್ರೈಲರ್ *

* ಗೆಳೆಯರ ಹಳೆಯ ದಿನದ ಮೆಲುಕು *

ಸಾಹಸಸಿಂಹ ವಿಷ್ಣುವರ್ಧನ್ ನಿರ್ದೇಶಕರ ನಟರಾಗಿದ್ದರು ಮಾತ್ರವಲ್ಲ; ಅವರೊಬ್ಬ ಮಾನವೀಯ ಅನುಕಂಪವಿರುವ ಸರಳ ಜೀವಿಯಾಗಿದ್ದರು.

ಆದರೆ ಅವರನ್ನು ಸರಿಯಾಗಿ ಅರ್ಥೈಸದ ಕಾರಣ ಆಕ್ಷನ್ ಕಿಂಗ್ ಆಗಬೇಕಿದ್ದವರು ತ್ಯಾಗರಾಜರಾದರು..

ಹೀಗೆ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಬಣ್ಣಿಸಿದವರು ಅವರ ಬಾಲ್ಯದ ಒಡನಾಡಿ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.

ವಿಷ್ಣು, ಅಂಬರೀಷ್ ಮತ್ತು ನಾನು ಮೈಸೂರಿನಲ್ಲಿ ಕಳೆದ ದಿನಗಳು ಅದ್ಭುತವಾಗಿದ್ದವು. ವಿಷ್ಣು ಆಗ ಬೆಂಗಳೂರಿನಲ್ಲಿ ನೆಲೆಸಿದ್ದರೂ ನಮ್ಮನ್ನು ನೋಡಲು ಹಗಲು ರಾತ್ರಿ ಎಂದು ನೋಡದೆ ಓಡೋಡಿ ಬಂದು ಬಿಡುತ್ತಿದ್ದರು.

‘ಬಂಧನ’ ಚಿತ್ರದ ಬಳಿಕ ಅವರ ಪಾತ್ರಗಳ ಶೈಲಿಯೇ ಬದಲಾಯಿತು. ಅತ್ಯುತ್ತಮ ಸಾಹಸಮಯ ಚಿತ್ರಗಳನ್ನು ಮಾಡುವ ಬದಲಾಗಿ ತ್ಯಾಗ ಮಾಡುವ ಪಾತ್ರಗಳನ್ನು ಮಾಡಬೇಕಾಯಿತು ಎಂದು ಹೇಳುತ್ತಾ ಹೋದರು ಬಾಬು.

ಡಿಸೆಂಬರ್ 30 ವಿಷ್ಣು ಸಂಸ್ಮರಣಾ ದಿನ. ಹಾಗಾಗಿ ಅವರ ನೆನಪು ಈ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತದೆ. ಮುಖ್ಯ ಅವರ ಮಾನವೀಯ ಕಳಕಳಿ ಹೆಚ್ಚು ಪ್ರಚಾರವಾಗದೇ ಹೋಯಿತು ಎಂದರು ರಾಜೇಂದ್ರಸಿಂಗ್ ಬಾಬು.

ವಿಷ್ಣುವರ್ಧನ್ ಅವರಿಗೆ ನನ್ನ ಚಿತ್ರದ ಮೂಲಕ ‘ಸಾಹಸ ಸಿಂಹ’ ಎಂಬ ಬಿರುದು ದಕ್ಕಿತು ಎಂಬುದು ಹೆಮ್ಮೆಯ ವಿಷಯ. ಆದರೆ ಅವರೊಳಗಿದ್ದ ಕಳಕಳಿ, ಕನ್ನಡದ ಬಗೆಗಿನ ಕಾಳಜಿ ಇನ್ನು ಹೆಚ್ಚು ಹೆಚ್ಚು ಜನರ ಗಮನ ಸೆಳೆಯುವುದು ಬೇಕಿತ್ತು ಎಂದವರು ಸಾಹಸಸಿಂಹ ಚಿತ್ರವನ್ನು ನಿರ್ದೇಶನ ಮಾಡಿದ್ದ ಜೋಸೈಮನ್.

ವಿಷ್ಣು ಅವರಿಲ್ಲದೆ 15 ವರ್ಷ ಕಳೆದು ಹೋಯಿತು. ಆದರೆ ಅಭಿಮಾನಿಗಳು ಅವರನ್ನು ಇನ್ನೂ ಜೀವಂತವಾಗಿರಿಸಿದ್ದಾರೆ ಎಂಬ ಹೊಗಳಿಕೆ ಕೇಳಿ ಬಂದಿದ್ದು ‘ಸಿಂಹದ ಹಾದಿ’ ಟೆಲಿ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ..

ಜಿ. ಕೆ. ಸಿನಿ ಫೈಲ್ಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಜಿ. ಕೆ. ಶಶಿರಾಜ್‌ ದೊರೈ ‘ಸಿಂಹದ ಹಾದಿʼ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.

ಬಾಲ್ಯದಿಂದಲೂ ವಿಷ್ಣುವರ್ಧನ್‌ ಅಭಿಮಾನಿಯಾಗಿರುವ, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಶಶಿರಾಜ್‌ ದೊರೆ, ವಿಷ್ಣುವರ್ಧನ್‌ ಅವರ ಮೇಲಿನ ಅಭಿಮಾನದಿಂದ ಈ ಟೆಲಿಚಿತ್ರವನ್ನು ನಿರ್ಮಿಸಿ, ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ.

ವಿಷ್ಣುವರ್ಧನ್‌ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕರಾದ ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು, ಜೋ ಸೈಮನ್‌, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಹಿರಿಯ ನಟಿ ಲಕ್ಷ್ಮೀದೇವಮ್ಮ, ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಯ್ಯ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದು, ಟೆಲಿ ಚಿತ್ರದ ಟ್ರೇಲರ್‌ ಅನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.

ವಿಷ್ಣುವರ್ಧನ್‌ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ, ಈ ಟೆಲಿ ಚಿತ್ರವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್‌ ಅವರ ಚಿತ್ರಗಳು, ಅವರು ನಿರ್ವಹಿಸಿರುವ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿದ ಕಥೆ ಇದು ಎಂದರು ನಿರ್ದೇಶಕ ಶಶಿ ದೊರೆರಾಜ್.

ವಿಷ್ಣುವರ್ಧನ್‌ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಷ್ಣುವರ್ಧನ್‌ ಅವರ ಜೀವನ-ಸಾಧನೆಯನ್ನು ಮುಂದಿನ ತಲೆಮಾರಿಗೆ ತೋರಿಸುವ ಸಣ್ಣ ಕೆಲಸ ಈ ಟೆಲಿಫಿಲಂನಿಂದ ಆಗುತ್ತದೆ ಎಂಬ ನಂಬಿಕೆ ನಮ್ಮದು ಎಂದರು.

ಈ ಸಿಂಹದ ಹಾದಿಯಲ್ಲಿ ಶಶಿರಾಜ್‌ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್‌, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್‌, ಮಂಜು, ಮಹೇಶ್‌ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಷ್ಣು ಸಾಧನೆಗಳನ್ನು ಬಣ್ಣಿಸುವ ಈ ಟೆಲಿ ಚಿತ್ರ ಅನೇಕ ಚಿತ್ರೋತ್ಸವಗಳಲ್ಲಿ ನಾಮ ನಿರ್ದೇಶನಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂಬ ವಿವರಗಳೂ ಬಂದವು.

Social Share :

ನಟ ವಿಶಾಲ್ ಸಾಹಸ ಯಾತ್ರೆ ಮೈ ಪೂರಾ ಗಾಯದ್ದೇ ಸಮಸ್ಯೆ..!?

Social Share :

* ಬೆಂಗಳೂರಿನಲ್ಲಿ ವಿಶಾಲ್ ಹೇಳಿದ್ದು *

ಮಾನವೀಯ ಅನುಕಂಪ ಹೊಂದಿರುವ ವಿರಳ ಸ್ಟಾರ್ ಗಳ ಸಾಲಿಗೆ ಸೇರುವ ನಟ ವಿಶಾಲ್ ಅವರ ಆರೋಗ್ಯ ಸ್ಥಿತಿಯನ್ನು ಕಂಡು ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ.

ವಿಶಾಲ್ ಅವರ ಈ ಸ್ಥಿತಿಗೆ ಅವರ ಸಾಹಸ ಪ್ರವೃತ್ತಿಯೇ ಕಾರಣ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಗೊತ್ತು. ಸಿನಿಮಾ ರಂಗದಲ್ಲಿ ಅವರು ಅಪ್ರತಿಮ ಸಾಹಸಿ ಎಂದೇ ಗುರುತಿಸಿಕೊಂಡಿದ್ದಾರೆ.

ವಿಶಾಲ್ ಅವರ ಸದ್ಯದ ಸ್ಥಿತಿ ಕಂಡು ಬೆಚ್ಚಿ ಬೀಳುವಂತಾಗಿದೆ. ಅಷ್ಟು ಗಟ್ಟಿತನದ ನಟನಿಗೆ ಏನಾಯ್ತು ಎಂಬುದು ಪ್ರಶ್ನೆಯಾಗಿದೆ.

ಆದರೆ ತಮ್ಮ ‘ಲಾಠಿ’ ಚಿತ್ರದ ಪ್ರಚಾರದ ಸಲುವಾಗಿ ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದ ಅವರು, ನನಗೆ ಮೈ ಪೂರಾ ಗಾಯವಾಗಿದೆ. ಚಿಕಿತ್ಸೆ ಪಡೆಯುತ್ತಲೇ ಇದ್ದೇನೆ ಎಂದು ಹೇಳಿದ್ದರು.

ಇಷ್ಟೊಂದು ರಿಸ್ಕ್ ಎದುರು ಹಾಕಿ ಕೊಳ್ಳುವುದು ಸರಿಯೇ ಎಂಬ ಪ್ರಶ್ನೆಗೆ ರಿಸ್ಕ್ ಇಲ್ಲದೆ ಬದುಕಿನಲ್ಲಿ ಏನೂ ಸಾಧ್ಯವಾಗುವುದಿಲ್ಲ; ಆದರೆ ನಾನು ಸ್ವಲ್ಪ ಹೆಚ್ಚಿನ ತೊಂದರೆಗೆ ಒಡ್ಡಿಕೊಂಡಿರುವೆ ಎಂದು ಹೇಳಿದ್ದರು.

‘ಲಾಠಿ ಚಾರ್ಜ್’ ಚಿತ್ರದ ನೈಜ ಸಾಹಸಗಳ ಬಗ್ಗೆ ಮಾತನಾಡುತ್ತಾ ಆಗ ಉಂಟಾದ ಗಾಯಗಳ ಬಗ್ಗೆ ಹೇಳಿದ್ದರು ವಿಶಾಲ್. ಆದರೆ ಅದನ್ನು ಮೀರಿ ‘ಅವನ್ ಇವನ್’ ಚಿತ್ರಕ್ಕಾಗಿ ಕಣ್ಣುಗಳ ಆಪರೇಷನ್ ಮಾಡಿಸಿಕೊಂಡಿದ್ದ ವಿಶಾಲ್ ಈಗ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ಮೂಲಗಳ ಮಾಹಿತಿ.

ತನ್ನ ದೇಹದ ಮೇಲೆಯೇ ಪ್ರಯೋಗ ಮಾಡುತ್ತಾ ನಟನೆಗೆ ಒಡ್ಡಿಕೊಳ್ಳುವುದು ಸಾಮಾನ್ಯರಿಂದ ಸಾಧ್ಯವೇ ಆಗದು. ವಿಶಾಲ್ ಒಂದು ನೆಲೆಯಲ್ಲಿ ದೈವಿಕ ಅಂಶ ಪಡೆದವರು. ಅವರಿಗೆ ಈ ರೀತಿ ಆಗಿರುವುದು ನೋಡಲಾಗುತ್ತಿಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ.

ಆದರೆ ವಿಶಾಲ ಹೃದಯವಂತ ವಿಶಾಲ್ ಖಂಡಿತಾ ಬೇಗನೆ ಗುಣಮುಖರಾಗುತ್ತಾರೆ ಮತ್ತು ಮೊದಲಿನಂತೆ ಆಗುತ್ತಾರೆ ಎಂಬುದು ಅವರ ಆಪ್ತರು ಮತ್ತು ಅಭಿಮಾನಿಗಳ ನಂಬಿಕೆ.

ವಿಶಾಲ್ ಅವರ ತಂದೆ ಕನ್ನಡಿಗ, ಅವರಿಗೆ ಕರ್ನಾಟಕದ ಮೇಲೆ ಪ್ರೀತಿ ಹೆಚ್ಚು. ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಐದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ ಪಡೆದಿದ್ದಾರೆ.

ಮೈಸೂರಿನಲ್ಲಿ ಪುನೀತ್ ರಾಜ್ ಕುಮಾರ್ ಪೋಷಣೆಯಲ್ಲಿದ್ದ ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಶಿವರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದ ವಿಶಾಲ್, ತಾವೊಬ್ಬ ಅಸಾಮಾನ್ಯ ಮಾನವೀಯ ಅನುಕಂಪದ ವ್ಯಕ್ತಿ ಎಂಬುದನ್ನು ಸಾಬೀತು ಪಡಿಸಿದ್ದು ಇಲ್ಲಿ ಉಲ್ಲೇಖಾರ್ಹ.

Social Share :

ಗನ್ಸ್ ಅಂಡ್ ರೋಸಸ್ ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ನಿರ್ಮಾಣ : ಎಚ್.ಆರ್.ನಟರಾಜ್

ನಿರ್ದೇಶನ : ಶ್ರೀನಿವಾಸ್ ಕುಮಾರ್

ರೌಡಿಸಂ ಡ್ರಗ್ ಮಾಫಿಯಾ ಸುತ್ತ..

ಬೆಂಗಳೂರೆಂಬ ಮಹಾನಗರ ಒಡಲೊಳಗೆ ಸಾಕಷ್ಟು ನಿಗೂಢಗಳನ್ನು ಒಳಗೊಂಡಿದೆ. ಕೆಲವೊಮ್ಮೆ ಸುದ್ದಿ ಮಾಧ್ಯಮಗಳು ಕೆಲವು ನಿಗೂಢಗಳನ್ನು ಭೇದಿಸುತ್ತವೆ..

ಮಹಾನಗರದಲ್ಲಿ ಮಾದಕದ್ರವ್ಯ ಕಳ್ಳ ಸಾಗಣೆ ಮತ್ತು ಅದರ ವಿಶಾಲ ವ್ಯಾಪ್ತಿ ಹೇಗಿರಬಹುದೆಂಬುದರ ಮೇಲೆ ಹೊಸೆಯಲಾಗಿರುವ ಕಾಲ್ಪನಿಕ ಕಥೆಯಲ್ಲಿ ರೌಡಿ ಪಡೆಯ ಎರಡು ಪಾತಕ ತಂಡಗಳು ವಿಜೃಂಭಿಸುತ್ತವೆ.

ಆ ತಂಡಗಳಲ್ಲಿ ಕಾಣಿಸುವ ಶೌರ್ಯವಂತ ಹುಡುಗ ಸೂರ್ಯ (ಅರ್ಜುನ್) ಚಿತ್ರದ ಕಥಾ ನಾಯಕ. ಆಕಸ್ಮಿಕ ಕೊಲೆಯೊಂದರ ಕಾರಣ ಜೈಲು ಸೇರುವ ಸೂರ್ಯ ಅಲ್ಲಿಂದ ಪ್ರವೇಶ ಪಡೆಯುವುದು ಭೂಗತ ಜಗತ್ತಿಗೆ..

ಮಾದಕ ದ್ರವ್ಯ ಕಳ್ಳ ಸಾಗಣೆ ಸುಲಭವಾಗಿರುವ ಮಹಾನಗರದಲ್ಲಿ ವಿಶೇಷ ಜೀಪ್ ನಲ್ಲಿ ಓಡಾಡಿಕೊಂಡಿರುವ ಸೂರ್ಯನ ಸೆಳೆತಕ್ಕೆ ರಮ್ಯಾ‌ ಎಂಬ ಹುಡುಗಿ ಸಿಲುಕುವುದು. ಆ ಹುಡುಗಿಯ ತಂದೆ ಮತ್ತು ಅಣ್ಣ ವಿಷಮ ಜಗತ್ತಿನ ಲೀಡರ್ ಆಗಿರುವುದು ಎಲ್ಲವೂ ವಿಸ್ಮಯ.

ರೌಡಿ ಸಾಮ್ರಾಜ್ಯ ಎಷ್ಟೇ ಮೆರೆದರೂ ವ್ಯವಸ್ಥೆ ಅತ್ಯಂತ ಕಠಿಣ. ಕೆಲವೊಮ್ಮೆ ನಿರ್ದಯಿಯಂತೆ ನಡೆದುಕೊಳ್ಳುವುದೂ ಉಂಟು. ಇಲ್ಲಿನ ಕಥಾ ನಾಯಕ ಸೂರ್ಯ ಅಮಾಯಕತೆ ವರ್ತುಲದೊಳಗೆ ಸಿಲುಕಿ ಬಲಿಯಾಗುತ್ತಾನೆ.

ಕಥನಗಳಿಗೆ ಅವಕಾಶ ನೀಡದೆ ನೇರವಾಗಿ ಕಥೆ ಹೇಳಿರುವ ನಿರ್ದೇಶಕರು ಹೊಸತನಕ್ಕೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳನ್ನು ಸಂಪೂರ್ಣ ಕೈ ಚೆಲ್ಲಿದ್ದಾರೆ. ಅದರಿಂದಾಗಿಯೇ ರೌಡಿಸಂನ ಕಥೆಗಳ ಆಳಕ್ಕೆ ಇಳಿಯುವುದು ಅವರಿಂದ ಸಾಧ್ಯವಾಗಿಲ್ಲ.

ರಾಜೇಂದ್ರ ಮತ್ತು ನಾಯಕ್ ಪರಸ್ಪರ ಪ್ರತಿಸ್ಪರ್ಧೆ ಒಡ್ಡುವ ಎರಡು ರೌಡಿ ಸಾಮ್ರಾಜ್ಯದ ಕಥೆಯಲ್ಲಿ ಪ್ರೀತಿಗೂ ಒಂದಷ್ಟು ಜಾಗವಿದ್ದರೂ ಅದರ ನಿರ್ವಹಣೆ ಕಾಲಮಿತಿಯನ್ನು ಮೀರಿದ್ದಾಗಿದೆ.

ಸೂರ್ಯನ ಪಾತ್ರದಲ್ಲಿ ಅರ್ಜುನ್ ಅಜಯ್ ಕುಮಾರ್ ಗಮನ ಸೆಳೆದಿದ್ದಾರೆ. ಫೈಟ್ ಮತ್ತು ಚೇಸಿಂಗ್ ದೃಶ್ಯಗಳಲ್ಲಿ ಗಮನ ಸೆಳೆದಿರುವ ಅರ್ಜುನ್ ಗೆ ಒಳ್ಳೆಯ ಅವಕಾಶ ಸಿಕ್ಕರೆ ಉತ್ತಮ ನಟನಾಗಿ ಬೆಳೆಯುವ ಸೂಚನೆಗಳನ್ನು ನೀಡಿದ್ದಾರೆ.

ಕೊನೆಯಲ್ಲಿ ಬರುವ ಕಿಶೋರ್ ಚಿತ್ರಕ್ಕೆ ಕೊಂಚ ವೇಗ ನೀಡುತ್ತಾರೆ. ಶೋಭರಾಜ್, ಸುಚ್ಚೇಂದ್ರ ಪ್ರಸಾದ್ ನಟನೆಯಲ್ಲಿ ಎಂದಿನ ಲವಲವಿಕೆ ಇದ್ದರೆ; ನಟಿ ಯಶ್ಚಿಕ ನಿಷ್ಕಲ ರೌಡಿ ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಡ್ರಗ್ ಮಾಫಿಯಾ ಕಥೆಗಳು ಸಾಮಾಜಿಕ ನೆಲೆಯಲ್ಲಿ ಸಂದೇಶ ನೀಡುವ ಚಿತ್ರಗಳಾಗಿರುವುದು ವಿಶೇಷ. ಈ ಕಥೆಯಲ್ಲಿ ಮುಖ್ಯ ಪಾತ್ರದ ಅವಸಾನ ರೌಡಿ ಸಾಮ್ರಾಜ್ಯದ ನಿರ್ದಯಿತನವನ್ನು ಸಾಬೀತುಪಡಿಸುತ್ತದೆ.

Social Share :

ಯುಐ ಪ್ರಚಂಡ ಯಶಸ್ಸು ಉಪ್ಪಿ ಖುಷಿಯ ಲಹರಿ..

Social Share :


ರಿಯಲ್ ಸ್ಟಾರ್ ಉಪೇಂದ್ರ ಖುಷಿಯ ಲಹರಿಯಲ್ಲಿದ್ದರು; ಎಂತಹ ಖಡಕ್ ಪ್ರಶ್ನೆಗೂ ಸಮರ್ಥನೆಯ ಉತ್ತರ ನೀಡುತ್ತಿದ್ದರು..

ಅದು ‘ಯುಐ’ ಚಿತ್ರದ ಯಶಸ್ಸು ಮತ್ತು ಖುಷಿಯನ್ನು ಹಂಚಿಕೊಳ್ಳುವ ಸಲುವಾದ ಪ್ರಚಾರ ಸಭೆ. ಲಹರಿ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾದ ಮನೋಹರ ನಾಯ್ಡು, ಲಹರಿ ವೇಲು ಮತ್ತೊಬ್ಬ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಚಿತ್ರತಂಡ ಮಾತಿಗೆ ಕುಳಿತ್ತಿತ್ತು.

ಸನ್ನಿ ಲಿಯೋನ್ ಚಿತ್ರದಲ್ಲಿ ಇರುವುದು ನಿಜವೇ ಎಂಬ ಪ್ರಶ್ನೆಯಿಂದ ಹಿಡಿದು.. ‘ನೀವು ಬುದ್ಧಿವಂತರಾಗಿದ್ದರೆ ಎದ್ದೋಗಿ..’ ಎಂಬುದು ಸರಿಯೇ ಅಲ್ಲಿಯವರೆಗಿನ ಕಠಿಣ ಪ್ರಶ್ನೆಗೂ ಉಪೇಂದ್ರ ಲವಲವಿಕೆಯ ಉತ್ತರಗಳನ್ನೇ ನೀಡಿದರು.

ಸಿನಿಮಾ ಗೆದ್ದಿದೆ. ನಿರ್ಮಾಪಕರು‌ ಖುಷಿಯಾಗಿದ್ದಾರೆ. ಅದಕ್ಕಿಂತಲೂ ಇನ್ನೇನು ಬೇಕು. ಇದೊಂದು ಬೇರೆ ಬಗೆಯ ಪ್ರಯತ್ನ ಮತ್ತು ಪ್ರಯೋಗ. ಅದು ಗೆದ್ದಿರುವುದಕ್ಕೆ ಖುಷಿಯಾಗಿದೆ ಎಂದರು ಉಪೇಂದ್ರ.

ಚಿತ್ರದ ಗಳಿಕೆ ವಿಷಯದಲ್ಲಿ ನಿರ್ಮಾಪಕರಿಗೆ ಸಂತೃಪ್ತಿ ಇದೆ ಎಂದರು ಲಹರಿ ವೇಲು. ಸಿನಿಮಾ ಗೆದ್ದಿದೆ; ನಾವು ಖುಷಿಯಿಂದ ಇದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಆದರೆ ಗಳಿಕೆಯ ಪೂರ್ಣ ವಿವರವನ್ನು ಇನ್ನೂ ಬಿಟ್ಟುಕೊಡಲಾಗದು. ಏಕೆಂದರೆ ಚಿತ್ರ ಈಗಲೂ ಹೌಸ್ ಫುಲ್ ಆಗಿ ಹೋಗುತ್ತಿದೆ. ಸ್ವಲ್ಪ ಸಮಯ ಕೊಡಿ, ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದರು ಲಹರಿ ವೇಲು.

ಇದು ಬೇರೆ ಮಾದರಿಯ ಚಿತ್ರ. ಬುದ್ಧಿಗೆ ಕೆಲಸ ಕೊಡುವ; ತರ್ಕಕ್ಕೆ ಗಮನ ಕೊಡುವ; ತತ್ವಕ್ಕೆ ತಲೆ ಕೊಡುವ ಮತ್ತು ಮನರಂಜನೆಗೆ ಮನಸ್ಸು ಕೊಡುವ ಹೀಗೆ ವಿಭಿನ್ನ ನೆಲೆಯಲ್ಲಿ ಚಿಂತನೆಗೆ ಹಚ್ಚುವ ಚಿತ್ರ.

ಇದೇ ನಿಟ್ಟಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರಶ್ನೆಗಳು ಎದುರಾದವು. ಜಿ.ಮನೋಹರ ನಾಯ್ಡು, ಕೆ.ಪಿ.ಶ್ರೀಕಾಂತ್, ನವೀನ್ ಮನೋಹರ್, ನಟಿ ರೀಷ್ಮಾ ನಾಣಯ್ಯ, ನಟ ಕಾಕ್ರೋಚ್ ಸುಧಿ ಹಾಗೂ ಚಿತ್ರತಂಡದ ಉಪಸ್ಥಿತಿ ಇತ್ತು.

Social Share :

ಅಂದು ಮೊದಲ ಮಳೆಯಂತೆ ಇಂದು ಮಳೆಯಂತೇ.. ಬಾ..

Social Share :

*ಸಂಜು ವೆಡ್ಸ್ ಗೀತಾ-2 ಹಾಡು*

* ಹಾಡುಗಳೇ ಆಹ್ವಾನ ಪತ್ರಿಕೆ *

* ಜನವರಿ 10ಕ್ಕೆ ಚಿತ್ರ ಬಿಡುಗಡೆ *

ಕಣ್ಣೀರು ಬರಿಸುವ ಪ್ರೇಮಕಥೆ ಹಾಗೂ ಸುಮಧುರ ಹಾಡುಗಳಿಗೆ ಹೆಸರಾದ ನಿರ್ದೇಶಕ ನಾಗ್ ಶೇಖರ್ ಅವರ ಹೊಸ ಚಿತ್ರ ‘ಸಂಜು ವೆಡ್ಸ್ ಗೀತಾ-2’ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದ ಹೊಸ ಹಾಡು ‘ಮಳೆಯಂತೇ ಬಾ..’ ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತಿದೆ.

‘ಮೈನಾ’ ಚಿತ್ರದಲ್ಲಿ ‘ಮೊದಲ ಮಳೆಯಂತೆ.. ‘ ಎಂಬ ಸುಮಧುರ ಹಾಗೂ ಸಾರ್ವಕಾಲಿಕ ಹಾಡು ನೀಡಿದ ನಾಗ್ ಶೇಖರ್ ತಂಡ ಈ ಬಾರಿ ‘ಮಳೆಯಂತೆ ಬಾ..’ ಎಂಬ ಹಾಡಿನ ಆಹ್ವಾನ ಕೊಟ್ಟಿದೆ.

ಆದರೆ ನಾಗ್ ಶೇಖರ್ ಅವರ ತಂಡದಲ್ಲಿ ಈ ಬಾರಿ ಸಂಗೀತ ನಿರ್ದೇಶಕರಾಗಿ ಜೆಸ್ಸಿ ಗಿಫ್ಟ್ ಇಲ್ಲ; ಬದಲಿಗೆ ಶ್ರೀಧರ್ ಸಂಭ್ರಮ್ ಇದ್ದಾರೆ. ಎಂದಿನಂತೆ ಮಲೆನಾಡಿನ ಕವಿ ಕವಿರಾಜ್ ಸಾಹಿತ್ಯವಿದೆ.

ಮುದ್ದು ಮುದ್ದಾಗಿ ಕಾಣುವ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸ್ಟೈಲೀಸ್ ಆಗಿ ಕಾಣುವ ಶ್ರೀನಗರ ಕಿಟ್ಟಿ ಈ ಹಾಡಿನ ವೈಶಿಷ್ಟ್ಯ. ಅದ್ದೂರಿ ಶೆಟ್ ಮತ್ತು ಸುಂದರ ತಾಣಗಳು ಹಾಡಿನ ವೈಭವ ಹೆಚ್ಚಿಸಿವೆ.

ಈ ಸುಮಧುರ ಹಾಡನ್ನು ಶ್ರೀಧರ್ ವಿ.ಸಂಭ್ರಮ್ ಸಂಯೋಜಸಿದ್ದು, ನಾಗ್ ಶೇಖರ್ ಅವರ ಛಾಯೆ ಎದ್ದು ಕಾಣುವಂತೆ ವೈವಿಧ್ಯಮಯ ಒಳನೋಟಗಳನ್ನು ಹಾಡು ಒಳಗೊಂಡಿದೆ.

ಈಚೆಗೆ ನಿರ್ಮಾಪಕ ಛಲವಾದಿ ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲಾಯಿತು.

ನಾಗ್ ಶೇಖರ್, ಶ್ರೀ ನಗರ ಕಿಟ್ಟಿ, ಛಲವಾದಿ ಕುಮಾರ್, ಶ್ರೀಧರ್ ಸಂಭ್ರಮ್ ಈ ಸಂದರ್ಭದಲ್ಲಿ ಹಾಜರಿದ್ದು, ಹಾಡು ಹುಟ್ಟಿದ ಕ್ಷಣಗಳನ್ನು ಮೆಲುಕು ಹಾಕಲಾಯಿತು.

ಶಿಡ್ಲಘಟ್ಟ ದಿಂದ ಸ್ವಿಟ್ಜರ್ಲೆಂಡ್‌‌ ವರೆಗೆ ಇರುವ ಈ ಚಿತ್ರದಲ್ಲಿ ರೈತನ ಸಾಹಸ; ಪ್ರೇಮಿಯ ತ್ಯಾಗ ಎದ್ದು ಕಾಣುತ್ತದೆ. ಇದೊಂದು ಅಪೂರ್ವ ಪ್ರೇಮಕಥೆಯಾಗಿದೆ ಎಂಬುದು ನಾಗ್ ಶೇಖರ್ ವಿವರಣೆ.

ಚಿತ್ರದ ಟೀಸರ್ ಅಥವಾ ಟ್ರೈಲರ್ ಹೊರಬರುವುದಿಲ್ಲ; ನಮ್ಮ ಈ ಚಿತ್ರಕ್ಕೆ ಹಾಡುಗಳೇ ಆಹ್ವಾನ ಪತ್ರಿಕೆ ಇದಂತೆ ಎಂಬ ಉತ್ತರ ಕೊಟ್ಟರು ನಿರ್ದೇಶಕರು.

ಈ ಹಾಡು ಹಿಂದಿನ ‘ಗಗನವೇ ಬಾಗಿ.
‘ ಹಾಡಿನಂತೆ ಇರಬೇಕೆಂಬ ಬಯಕೆ ನಮ್ಮದಾಗಿತ್ತು. ಅದಕ್ಕಾಗಿ ಶ್ರೇಯ ಘೋಶಾಲ್ ಅವರ ಕಡೆಯಿಂದ ಹಾಡಿಸುವ ಪ್ರಯತ್ನವಾಯಿತು. ಆದರೆ ಅವರ ಲಭ್ಯತೆ ಇರದ ಕಾರಣ ಸಂಗೀತಾ ರವೀಂದ್ರನಾಥ್ ಎಂಬ ಹೊಸ ಗಾಯಕಿ ಅತ್ಯುತ್ತಮವಾಗಿ ಈ ಹಾಡನ್ನು ಹಾಡಿದಾಗ, ಅವರಿಂದಲೇ ಮತ್ತೆರಡು ಹಾಡು ಹಾಗೂ ವಂದಿತಾ ಅವರಿಂದ ಒಂದು ಹಾಡು ಹಾಡಿಸಲಾಗಿದೆ ಎಂಬ ವಿವರ ಬಂತು.

ಆನಂದ್ ಆಡಿಯೋ ಮೂಲಕ ಹೊರ ಬಂದಿರುವ ಹಾಡನ್ನು ಕಿಚ್ಚಾ ಸುದೀಪ್ ಬಿಡುಗಡೆ ಮಾಡಿದ್ದಾರೆ ಎಂಬ ವಿವರ ನೀಡಿತು ಚಿತ್ರತಂಡ. ಇದೇ ಜನವರಿ 10 ರಂದು ಚಿತ್ರವು ತೆರೆ ಕಾಣುತ್ತಿದ್ದು, ಪ್ರಚಾರದ ಸಿದ್ಧತೆ ತಂಡ ಮಾಡಿಕೊಂಡಿದೆ ಎಂಬ ವಿವರ ಕೂಡ ಬಂತು..

ಶ್ರೀನಗರ ಕಿಟ್ಟಿ ಹಾಗೂ ಶ್ರೀಧರ್ ಸಂಭ್ರಮ್ ಇಬ್ಬರಿಗೂ ಈ ಚಿತ್ರ ಮತ್ತೆ‌ ಭರವಸೆ ಮತ್ತು ವಿಶೇಷ. ‘ಮಳೆಯಂತೆ ಬಾ..’ ಹಾಡಿನ ಸಂಭ್ರಮದಲ್ಲಿ ಮಿಂದೆದ್ದ ಅವರು ಅತ್ಯಂತ ಭರವಸೆಯಲ್ಲಿ ಮಾತನಾಡಿದರು.

ಹಿರಿಯ ಪ್ರಚಾರಕರ್ತ ನಾಗೇಂದ್ರ‌ ಅವರು ಹಿಂದೆ ಸಂಜು ವೆಡ್ಸ್ ಗೀತಾ ಬಂದಾಗಿನ ಕ್ಷಣಗಳನ್ನು ಮೆಲುಕು ಹಾಕಿ ಈ ಚಿತ್ರ ಕೂಡ ಸೂಪರ್ ಹಿಟ್ ಆಗುತ್ತದೆ ಎಂದು ಹಾರೈಸಿದರು.

Social Share :

ಅಲೋಕ್ ಕನಸಿನ ಸಿನಿಮಾ ಹೆಸರು ಕುಡ್ಲ ‌ನಮ್ದು ಊರು

Social Share :

ಕ್ರಿಯಾಶೀಲ ಕೆಲಸಗಳಲ್ಲಿ ಆಸಕ್ತಿ ಉಳ್ಳವರನ್ನು ಸಿನಿಮಾ ಕ್ಷೇತ್ರ ಕೈ ಬೀಸಿ ಕರೆಯುತ್ತದೆ; ಆ ಮೂಲಕ ಹೊಸ ಹೊಸ ಪ್ರಯತ್ನಗಳಿಗೆ ನಾಂದಿ ಹಾಡುತ್ತದೆ..

ಕರಾವಳಿ ಭಾಗದಲ್ಲಿ ನೆಲೆಸಿದವರೂ ಸಿನಿಮಾಸಕ್ತಿಯಲ್ಲಿ ಮಿಂದು ಸ್ಯಾಂಡಲ್ ವುಡ್ ನಲ್ಲಿ ಮಾಡಿರುವ ಮೋಡಿ ಕಣ್ಣ ಮುಂದಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಪ್ರಸಾದ್ (ಅಲೋಕ್) ಎಂಬುವರು ಮಾಡಿರುವ ಪ್ರಯತ್ನವೀಗ ಗಮನ ಸೆಳೆದಿದೆ.

ಚಿತ್ರದ ಹೆಸರು ‘ಕುಡ್ಲ ನಮ್ದು ಊರು’. ದುರ್ಗಾ ಪ್ರಸಾದ್ ಅವರೇ ನಿರ್ಮಾಣ ಮತ್ತು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನಿರ್ಮಾಣ ಆಸಕ್ತಿ ಬೆಳಸಿಕೊಂಡ ದುರ್ಗಾ ಪ್ರಸಾದ್, ಚಿತ್ರವನ್ನು ಮಾಡಿಯೇ ತೀರುವ ಅದಮ್ಯ ಇಚ್ಛೆಯಿಂದ ಮಾಡಿರುವ ಚಿತ್ರಕ್ಕೆ ತಮ್ಮ ಊರಿನ ಹೆಸರನ್ನೇ ಇಟ್ಟಿರುವುದು ವಿಶೇಷ.

ಸ್ಟಾರ್ ನಟರೊಬ್ಬರ ಅಭಿಮಾನ ಕಾರಣದಿಂದ ಮನೆ ಬಿಟ್ಟು ಬೆಂಗಳೂರಿಗೆ ಬಂದು ಇಲ್ಲಿ ಆದ ಎಲ್ಲಾ ರೀತಿಯ ಅನುಭವಗಳ ಜೊತೆ ಮತ್ತೆ ಊರಿಗೆ ವಾಪಸ್ ಬಂದ ದುರ್ಗಾ ಪ್ರಸಾದ್ ಮುಂದೆ ಮಾಡಿದ್ದು ಸಿನಿಮಾ ತಂತ್ರಜ್ಞಾನ ಕಲಿಕೆ.

ಹೊಟ್ಟೆ ಪಾಡಿಗಾಗಿ ಇಂಟಿರಿಯರ್ ಡಿಸೈನಿಂಗ್ ಕೆಲಸ ಮಾಡುತ್ತಾ ಸಿನಿಮಾ ಬಗ್ಗೆ ತಿಳಿದುಕೊಳ್ಳುತ್ತಾ ಮಾಡಿದ ಸಿನಿಮಾ ‘ನಮ್ದು ಊರು ಕುಡ್ಲ’.

ಇದೀಗ ಚಿತ್ರವು ಬಿಡುಗಡೆಯ ಹಂತಕ್ಕೆ ಬಂದಿದ್ದು ಸದ್ಯವೇ ಚಿತ್ರವನ್ನು ಬಿಡುಗಡೆ ಮಾಡುವ ಆಶಯವನ್ನು ಹೊರ ಹಾಕಿತು ಚಿತ್ರತಂಡ. ಅದುವೇ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭದಲ್ಲಿ..

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ.ವಿಶ್ವನಾಥ್ ಈ ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಕೃತಾರ್ಥ ಪ್ರೊಡಕ್ಷನ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ದುರ್ಗಾಪ್ರಸಾದ್‌ (ಅಲೋಕ್‌) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

ಮುಖ್ಯ ಪಾತ್ರದಲ್ಲಿ ದುರ್ಗಾಪ್ರಸಾದ್‌ ನಟಿಸಿದ್ದು, ಇನ್ನುಳಿದಂತೆ ರಮೇಶ್‌, ಪ್ರಕಾಶ್‌ ತುಮ್ಮಿನಾಡು, ಸ್ವರಾಜ್‌ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್‌, ನಿರೀಕ್ಷಾ ಶೆಟ್ಟಿ, ದಿಲೀಪ್‌ ಕಾರ್ಕಳ, ಪ್ರಜ್ವಲ್‌ ಹಾಗೂ ಇತರರು ನಟಿಸಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಈ ಹಾಡುಗಳಿಗೆ ನಿತಿನ್‌ ಶಿವರಾಮ್‌ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್‌ ಆರ್‌. ಶೆಟ್ಟಿ ಛಾಯಾಗ್ರಹಣ, ನಿಶಿತ್‌ ಪೂಜಾರಿ ಸಂಕಲನ, ರಕ್ಷಿತ್‌ ಎಸ್‌. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

Social Share :

20 ನಿರ್ಮಾಪಕರ ಕ್ಯಾಪಿಟಲ್ ಸಿಟಿ ಟ್ರೈಲರ್ ಬಿಡುಗಡೆಗೆ ವೇದಿಕೆ ಕ್ರೌಡ್

Social Share :


ಬೆಂಗಳೂರಿನ ಭೂಗತ ಜಗತ್ತಿನ ಸಂಘರ್ಷದ ಕಥೆಯನ್ನು ಹೊಂದಿರುವ ಈ ಚಿತ್ರ ನಿರ್ಮಾಣವಾಗಿರುವುದು ಕ್ರೌಡ್ ಫಂಡ್ (ಗುಂಪಿನ ಹಣ) ಮೂಲಕ.

ಅದೇ ಕ್ಯಾಪಿಟಲ್ ಸಿಟಿ..!

ನಟನೆ ಹಾಗೂ ಸಿನಿಮಾಸಕ್ತಿಯಲ್ಲಿ ಮಿಂದೆದ್ದ ಜನರು ಆಸಕ್ತಿ ವಹಿಸಿ ‘ತಮ್ಮಿಂದ ಇಷ್ಟು ಹಣ’ ಎಂದು ಹೂಡಿಕೆ ಮಾಡಿದವರ ಸಂಖ್ಯೆ ಸುಮಾರು ಇಪ್ಪತ್ತು.

ಈಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕ್ಕಿಕ್ಕಿರಿದ ಜನಸಂದಣಿ.

ವೇದಿಕೆಯ ಮೇಲೆಯೂ ಅದು ಪ್ರದರ್ಶನವಾಗಿದ್ದು ವಿಶೇಷ. ಸ್ವಾಮೀಜಿಗಳು, ಚಿತ್ರರಂಗದ ಗಣ್ಯರು ನಿರ್ಮಾಪಕರು ಹಾಗೂ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದ ಆ ಕ್ಷಣಗಳು ಅತ್ಯಂತ ಸಂಭ್ರಮದಿಂದ ಕೂಡಿತ್ತು.

ಆರ್ ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ರಾಜೀವ್ ರೆಡ್ಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇನಿಫಿನಿಟಿ ಕ್ರಿಯೇಷನ್ಸ್ ಸಂಸ್ಥೆಯ ಬ್ಯಾನರ್ ನಡಿ ಸುಮಾರು 20 ಮಂದಿ ಈ ಚಿತ್ರದ ನಿರ್ಮಾಪಕರು.

ಅಪ್ಪು ಪಪ್ಪು, ಮಸ್ತ್ ಮಜಾ ಮಾಡಿ ಮೊದಲಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ ಹಿನ್ನೆಲೆ ಆರ್.ಅನಂತರಾಜು ಅವರಿಗಿದೆ.

ರಾಜೀವ್ ರೆಡ್ಡಿ ಈ ಮುಂಚೆ ‘ರಂಭಾ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳನ್ನು ಜಯನಗರ ಎಂಎಲ್ ಎ ಸಿ.ಕೆ.ರಾಮಮೂರ್ತಿ, ಮಾಜಿ ಸಚಿವ ರೇಣುಕಾಚಾರ್ಯ ಅನಾವರಣ ಮಾಡಿದರು. ಶಿವಗಂಗೆಯ ಶ್ರೀಮಲಯ ಶಾಂತಮುನಿ ಸ್ವಾಮಿಗಳು ಹಾಗೂ ಶ್ರೀ ಆದಿತ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಡಿ.ಕೆ.ರಾಮಕೃಷ್ಣ, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ‌

ರಾಜೀವ್ ರೆಡ್ಡಿ ಎದುರು ಪ್ರೇರಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್ ಮೊದಲಾದ ಹಿರಿಯ ಕಲಾವಿದರು ಹಾಗೂ ಚಿತ್ರ‌ದ ಕೆಲವು ನಿರ್ಮಾಪಕರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, 2025 ರ ಜನವರಿ ಅಂತ್ಯಕ್ಕೆ ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ದೇಶಕ ಅನಂತರಾಜು ತಿಳಿಸಿದರು.

ಇದೊಂದು ಪ್ರತೀಕಾರದ ಕಥೆ. ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುವಿರಿ ಎಂಬುದನ್ನು ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂಬುದು ರಾಜೀವ್ ರೆಡ್ಡಿ ವಿವರಣೆ.

ನಟಿ ಪ್ರೇರಣ, ನಿರ್ಮಾಪಕರಾದ ಮಂಜುನಾಥ್,‌ ಕರ್ನಲ್ ರಾಜೇಂದ್ರ, ಶಿವಪ್ಪ ಕುಡ್ಲೂರು, ಆಂಟೋನಿ ರಾಜ್, ಕೃಷ್ಣಮೂರ್ತಿ ಹಾಗೂ ಸಂಗೀತ ನಿರ್ದೇಶಕ ನಾಗ್ ಚಿತ್ರದ ಕುರಿತು ಮಾಹಿತಿ ನೀಡಿದರು.

Social Share :

ಮಲೆನಾಡಿನ ವೈವಿಧ್ಯ ಸಾರುವ ಪಾಠಶಾಲಾ ಟೀಸರ್ ಬಿಡುಗಡೆ

Social Share :

ಈ ಚಿತ್ರ ಮಲೆನಾಡಿನ ಪರಿಸರ ಸೇರಿದಂತೆ ಅಲ್ಲಿನ ಭಾಷಾ ವೈವಿಧ್ಯ; ಜನರ ಮನೋಭಾವ ಸೇರಿದಂತೆ ಅನೇಕ ವಿಷಯಗಳನ್ನು ಕಟ್ಟಿಕೊಡುತ್ತದೆ..

ಹೆಸರು ಪಾಠಶಾಲಾ..!

ಈ ಹಿಂದೆ ‘ಗ್ಯಾಪಲ್ಲೊಂದು ಸಿನಿಮಾ’ ಹಾಗೂ ‘ಓಮಿನಿ’ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಹೆದ್ದೂರ್ ಮಂಜುನಾಥ್ ಶೆಟ್ಟಿ ಇದರ ನಿರ್ದೇಶಕ.

ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಧಾಕರ ಬನ್ನಂಜೆ ಅವರ ಶಿಷ್ಯ ಹಾಗೂ ಸಿಹಿಕಹಿ ಚಂದ್ರು‌ ಅವರ ಗರಡಿಯಲ್ಲಿ ಪಳಗಿರುವ ಮಂಜುನಾಥ್ ಶೆಟ್ಟಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ ಅನುಭವ ಬೆನ್ನಿಗಿದೆ.

‘ಪಾಠಶಾಲಾ’ ಕೇವಲ ಮಕ್ಕಳ ಕಥೆಯಲ್ಲ; ಮಲೆನಾಡು ಪರಿಸರದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ನಡೆಗಳ ಮತ್ತು ವಿದ್ಯಮಾನಗಳ ಸುತ್ತ ನಡೆಯುವ ಕಥೆಯಾಗಿದೆ ಎಂಬ ವಿವರ ಬಂತು ನಿರ್ದೇಶಕರಿಂದ.

ಹಿರಿಯ ನಿರ್ದೇಶಕ ಸುಧಾಕರ ಬನ್ನಂಜೆ ಈ ಚಿತ್ರದಲ್ಲಿ ಶಾಲಾ ಮಾಸ್ತರರ ಪಾತ್ರವನ್ನು ನಿರ್ವಹಿಸಿದ್ದಾರೆ. ಟೀಸರ್ ಬಿಡುಗಡೆಯ ಈ ಸಮಾರಂಭದಲ್ಲಿ ಗುರುವಿಗೆ ಗೌರವ ಸಮರ್ಪಣೆ ಮಾಡಿದರು ಮಂಜುನಾಥ್ ಶೆಟ್ಟಿ.

ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ದಂಪತಿಗಳು ಟೀಸರ್ ಬಿಡುಗಡೆ ಮಾಡಿದ ಸಮಾರಂಭದಲ್ಲಿ
ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಹೆಚ್.ಎಸ್.ರಾಘವೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ,‌ ವಿಜಯ್ ಶೆಟ್ಟಿ, ಕೆರಬೇಟೆ ಖ್ಯಾತಿಯ ಗೌರಿ ಶಂಕರ್, ರವೀಂದ್ರ ಸಿಂಗ್ ಮೊಲಾದವರು ಉಪಸ್ಥಿತರಿದ್ದರು.

ಎಂ.ಎಸ್.ಸ್ಕ್ವೇರ್ ಮೂವೀಸ್ ಬ್ಯಾನರ್ ನಡಿ ಹೆದ್ದೂರು ಮಂಜುನಾಥ್ ಶೆಟ್ಟಿ ಹಾಗೂ ಅವರ ಪತ್ನಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸ್ನೇಹಿತರ ಸಹ ನಿರ್ಮಾಣ ಹಾಗೂ ಬೆಂಬಲ ಚಿತ್ರಕ್ಕಿದೆ.

ತೀರ್ಥಹಳ್ಳಿ ತಾಲ್ಲೂಕಿನ. ಕಮ್ಮರಡಿ ಹಾಗೂ ಸುತ್ತ ಮುತ್ತಲಿನ ಸ್ಥಳಗಳಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಲಾಯಿತು ಎಂಬ ವಿವರ ಕೊಟ್ಟರು ನಿರ್ದೇಶಕರು.

ಹಿರಿಯರಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಹಾಗೂ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

80 ಹಾಗೂ 90 ರ ದಶಕದ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತಲ್ಲಿನ ಕಥಾಹಂದರ ಹೊಂದಿರುವ ಚಿತ್ರ ಮಾರ್ಚ್ ವೇಳೆಗೆ ಬಿಡುಗಡೆ ಕಾಣಲಿದೆ ಎಂಬ ಮಾಹಿತಿ ನೀಡಿದರು ನಿರ್ದೇಶಕರು.

Social Share :