Snehapriya.com

June 8, 2025

admin

ಅದ್ಭುತ ಸಾಹಸಗಳ ಎವೆರೆಸ್ಟ್ ಬಿಡುಗಡೆಗೆ ಸಜ್ಜಾಗಿದೆ ಫಾರೆಸ್ಟ್

Social Share :

* ಜನವರಿ 24 ಚಿತ್ರ ಬಿಡುಗಡೆ *

* ಎನ್.ಎಂ.ಕಾತರಾಜ್ ನಿರ್ಮಾಣ *

* ಆನೆ ಸಾಹಸದ ಆಕರ್ಷಣೆ *

ಉದ್ಯಮಿ ಎನ್.ಎಂ.ಕಾತರಾಜ್ ನಿರ್ಮಾಣದ ಅಡ್ವೆಂಚರ್ ಕಾಮಿಡಿ ಜಾನರ್ ನ ಅದ್ದೂರಿ ಚಿತ್ರ ‘ಫಾರೆಸ್ಟ್’ ಈ ವಾರ ಬಿಡುಗಡೆ ಕಾಣುತ್ತಿದೆ.

ಕಾಮಿಡಿ ಸ್ಟಾರ್ ಚಿಕ್ಕಣ್ಣ, ರಂಗಾಯಣ ರಘು, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಅದ್ದೂರಿತನದಿಂದ
ಕೂಡಿದೆ.

ಈಚೆಗೆ ನಡೆದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡಿತ್ತು.

ನಿರ್ಮಾಪಕ ಎನ್.ಎಂ.ಕಾಂತರಾಜ್, ನಿರ್ದೇಶಕ ಚಂದ್ರಮೋಹನ್, ಸಂಭಾಷಣೆ ಬರೆದಿರುವ ಸತ್ಯ ಶೌರ್ಯ ಸಾಗರ್ ಹಾಗೂ ಸಂಗೀತ ನಿರ್ದೇಶಕ ಧರ್ಮವಿಶ್ ಪಾಲ್ಗೊಂಡು ವಿವರಗಳನ್ನು ನೀಡಿದರು.

ಚಿತ್ರ ಅತ್ಯುತ್ತಮ ಸಾಹಸಗಳ ಫಲವಾಗಿದೆ. ಸಾಕಷ್ಟು ಖರ್ಚಾಗಿದೆ. ಕನ್ನಡ ಚಿತ್ರರಸಿಕರು ಈ ಚಿತ್ರವನ್ನು ಆನಂದದಿಂದ ಸ್ಬೀಕರಿಸುವರು ಎಂಬ ಭರವಸೆಯೂ ನನಗಿದೆ ಎಂದರು ನಿರ್ಮಾಪಕ ಕಾಂತರಾಜ್.

ಚಿತ್ರವನ್ನು ಸುಮಾರು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರಗಳನ್ನೂ ನೀಡಿದರು.

ಅರಣ್ಯದಲ್ಲಿ ನಡೆಯುವ ಒಂದು ಹುಡುಕಾಟ; ಆ ಸಮಯದಲ್ಲಿ ಎದುರಾಗುವ ಸಮಸ್ಯೆಗಳು, ಹಾಗೆಯೇ ಅನೇಕ ತಮಾಷೆಯ ಝಲಕ್ ಗಳು ನೋಡುಗರಿಗೆ ಮಜಾ ನೀಡಿತ್ತವೆ ಎಂದರು ನಿರ್ದೇಶಕ ಚಂದ್ರ ಮೋಹನ್.

ಅಲ್ಲದೆ ಮೈ ಜುಂ ಎನಿಸುವ ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಕಾಡಿನೊಳಗಿನ ವಿಸ್ಮಯಗಳನ್ನು ತೆರೆದಿಡುವಲ್ಲಿ ಅಪ್ರತಿಮ ನಿಗೂಢ ಶೋಧಗಳಿವೆ ಎಂದರು.

ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಶರಣ್ಯ ಶೆಟ್ಟಿ ಸಹ ಚಿತ್ರದ ಭಾಗವಾಗಿದ್ದಾರೆ. ಮಡಿಕೇರಿಯ ಸಂಪಂಜೆ ಕಾಡಿನಲ್ಲಿ ಚಿತ್ರಕ್ಕೆ 25 ದಿನಗಳ ಚಿತ್ರೀಕರಣ ನಡೆಸಲಾಗಿದೆ.

ಅಲ್ಲದೆ ಮಲೆ ಮಹದೇಶ್ವರ ಬೆಟ್ಟ, ಬೆಂಗಳೂರಿನಲ್ಲೂ ಚಿತ್ರೀಕರಣ ನಡೆಸಲಾಗಿದೆ. ಸತ್ಯ ಶೌರ್ಯ ಸಾಗರ್ ಕಥೆ ಚಿತ್ರಕಥೆ ಬರೆಯಲು ನೆರವಾಗಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.

ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆಯಲ್ಲ; ಬದಲಿಗೆ ಕಾಡಿನಲ್ಲಿರುವುದನ್ನು ಹುಡುಕುವ ಕಥೆ. ನನ್ನದು ಇದರಲ್ಲಿ ಮಂತ್ರವಾದಿ ಪಾತ್ರ ಎಂದರು ರಂಗಾಯಣ ರಘು.

ಅಮಾಯಕರ ಕಥೆಯಲ್ಲಿ ನನ್ನದು ಒಂದು ಪಾತ್ರವಿದೆ ಎಂದು ಚಿಕ್ಕಣ್ಣ ಹೇಳಿದರೆ, ಚಿತ್ರದಲ್ಲಿ ಅಮಾಯಕರಲ್ಲಿ ಅಮಾಯಕನ ನನ್ನದು ಎಂದವರು ಗುರುನಂದನ್.

ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ಬೇರೆ ಜಾನರ್ ನ ಚಿತ್ರ ಮಾಡಿದ್ದರೆ, ಅರ್ಚನಾ ಕೊಟ್ಟಿಗೆ ಸಾಹಸ ದೃಶ್ಯಗಳನ್ನು ಮಾಡಿರುವುದು
ವಿಶೇಷ ಎಂಬ ಮಾಹಿತಿಗಳು ಬಂದವು.

ಶರಣ್ಯ ಶೆಟ್ಟಿ ಕೂಡ ಈ ಚಿತ್ರದ ಭಾಗವಾಗಿದ್ದಾರೆ ಎಂಬ ವಿವರಗಳು ಬಂದವು.

Social Share :

ವಿಷ್ಣು ಮಂಚ್ ಆಕ್ಷನ್ ಕಣ್ಣಪ್ಪ ಬಹು ತಾರಾಗಣದ ಅದ್ದೂರಿ

Social Share :


* ಡಾ.ರಾಜ್ ಕುಮಾರ್ ಸ್ಫೂರ್ತಿಯ ಚಿತ್ರ *

* ಕರ್ನಾಟಕದಲ್ಲಿ ಮೊದಲ ಪ್ರಚಾರ *

* ರಾಕ್ ಲೈನ್ ವಿತರಣೆ *

* ಮೋಹನ್ ಬಾಬು ನಿರ್ಮಾಪಕ *

ಇವನು ಭಕ್ತಿ ಭಾವದ ಮುಗ್ಧ ಕಣ್ಣಪ್ಪನಲ್ಲ! ಆದರೆ ಕಣ್ಣಪ್ಪ ಮೊದಲಿಗೆ ಏನು ಎಂಬುದನ್ನು ಸಾರುವ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರ.

ಹೌದು ತೆಲುಗಿನ ಸ್ಟಾರ್ ನಟ ಮೋಹನ್ ಬಾಬು ನಿರ್ಮಾಣದ ಹಾಗೂ ಅವರ ಪುತ್ರ ವಿಷ್ಣು ಮಂಚ್ ಮುಖ್ಯ ಪಾತ್ರದಲ್ಲಿರುವ ‘ಕಣ್ಣಪ್ಪ’ ಬಿಡುಗಡೆಗೆ ಸಜ್ಜಾಗಿದ್ದು, ಅದರ ಪ್ರಚಾರ ಕಾರ್ಯ ಕರ್ನಾಟಕದಿಂದಲೇ ಆರಂಭವಾಗಿದೆ.

ಧೀರ ರಾಕ್ ಲೈನ್ ವೆಂಕಟೇಶ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಕರ್ನಾಟಕದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಈಚೆಗೆ ಸ್ಟಾರ್ ಹೊಟೇಲ್ ನಲ್ಲಿ ವಿಷ್ಣು ಮಂಚ್ ಸೇರಿದಂತೆ ಗಣ್ಯರು ಈ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರದಲ್ಲಿ ನೃತ್ಯ ನಿರ್ದೇಶನ ಮಾಡಿರುವ ಪ್ರಭುದೇವ, ನಟಿಸಿರುವ ಶರತ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಚಿತ್ರದ ಬಗ್ಗೆ ಮಾಹಿತಿಗಳನ್ನು ನೀಡಿದರು.

ಈ ಕಣ್ಣಪ್ಪ ಸಾಮಾನ್ಯನಲ್ಲ; ಅಪ್ರತಿಮ ಹೋರಾಟಗಾರ ಮತ್ತು ಅದಮ್ಯ ಭಕ್ತಿ ಸಿಂಚನ ತುಂಬಿಕೊಂಡವನು. ಹಾಗಾಗಿ ಚಿತ್ರದ ಮಾದರಿಯೇ ಬೇರೆಯಾಗಿದೆ. ಒಂದು ಕಮರ್ಷಿಯಲ್ ಚಿತ್ರದ ಎಲ್ಲಾ ಗುಣಗಳಿವೆ ಎಂದರು ವಿಷ್ಣು ಮಂಚ್.

ನನಗೆ ವರನಟ ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರ ‘ಬೇಡರ ಕಣ್ಣಪ್ಪ ‘ ಸ್ಫೂರ್ತಿ. ಆನಂತರ ಶಿವರಾಜ್ ಕುಮಾರ್ ‘ಶಿವ ಮೆಚ್ಚಿದ ಕಣ್ಣಪ್ಪ’ ಮಾಡಿದ್ದರು. ಅದರಲ್ಲಿ ರಾಜ್ ಕುಮಾರ್ ಸರ್ ಶಿವನ ಪಾತ್ರದಲ್ಲಿ ನಟಿಸಿದ್ದರು. ಇವೆರಡೂ ಚಿತ್ರಗಳು ನಮಗೆ ಅನುಕರಣೆಯಾಗಿವೆ ಎಂದರು.

ಇದೇ ಕಾರಣದಿಂದಲೇ ನಾವು ನಮ್ಮ ಈ ಚಿತ್ರದ ಪ್ರಚಾರ ಕಾರ್ಯವನ್ನು ಇಲ್ಲಿಂದಲೇ (ಕರ್ನಾಟಕ) ಆರಂಭಿಸಿದ್ದೇವೆ. ಇದಕ್ಕೆ ರಾಕ್ ಲೈನ್ ವೆಂಕಟೇಶ್ ಅವರ ಸಹಕಾರ ದೊಡ್ಡದು ಎಂದರು ವಿಷ್ಷು ಮಂಚ್.

ಸಾಕಷ್ಟು ಅಧ್ಯಯನದ ಬಳಿಕ ಈ ಕಥೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಭಕ್ತಿ ಭಾವದಲ್ಲಿ ಮತ್ತು ಚಾರಿತ್ರಿಕ ಸಂಗತಿಗಳನ್ನು ಹುಡುಕುವುದರಲ್ಲಿ ಮೊದಲಿನಿಂದಲೂ ನನಗೆ ಹೆಚ್ಚು ಆಸಕ್ತಿ. ಆ ಶ್ರಮ ಇಲ್ಲಿ ಹಾಕಿದ್ದೇನೆ ಎಂದು ಹೇಳುತ್ತಾ ಹೋದರು.

ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಲಯಾಳಂ ನ ಮೋಹನ್ ಲಾಲ್ ಹಾಗೂ ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ಗಳಿದ್ದು, ಅವರ ಪಾತ್ರಗಳ ಬಗ್ಗೆ ಹೇಳಲು ಮುಂದಿನ ದಿನಗಳನ್ನು ಕಾದು ನೋಡಿ ಎಂದರು.

ಕನ್ನಡದವರೇ ಆದ ದೇವರಾಜ್, ಸಾಧು ಕೋಕಿಲ ಹಾಗೂ ಇತರರು ಕೂಡ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಡೇಟ್ ಸಿಗಲಿಲ್ಲ. ಅವರಿಗಾಗಿ ನಾವು ಪ್ರಯತ್ನ ಮಾಡಿದ್ದೆವು ಎಂದೂ ಹೇಳಿದರು.

ಅಂಬರೀಷ್ ಅಂಕಲ್ ನಮ್ಮ ಫ್ಯಾಮಿಲಿ ಸದಸ್ಯರಂತೆ ಅವರ ಮೇಲಿನ ಗೌರವ ನಮ್ಮ ಸಂಬಂಧವನ್ನು ಇಲ್ಲಿ ಗಟ್ಟಿ ಮಾಡಿದೆ. ಅಪ್ಪನ ಮೇಲಿನ ಪ್ರೀತಿಯಿಂದ ದೊಡ್ಡ ದೊಡ್ಡ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಹೇಳುತ್ತಲೇ ಹೋದರು ವಿಷ್ಣುಮಂಚ್.

ಮೋಹನ್ ಬಾಬು ಅವರು ಕರೆದು ಈ ಚಿತ್ರವನ್ನು ಡಬ್ಬಿಂಗ್ ಗೆ ಮುಂಚೆಯೇ ತೋರಿಸಿದರು. ನಿಜಕ್ಕೂ ಅದ್ಭುತ ಅನಿಸಿತು. ಹಾಗಾಗಿ ಕರ್ನಾಟಕದಲ್ಲಿ ವಿತರಣೆ ಮಾಡಲು ಮನಸ್ಸು ಮಾಡಿರುವುದಾಗಿ ವಿವರಿಸಿದರು ರಾಕ್ ಲೈನ್ ವೆಂಕಟೇಶ್.

ಎರಡನೇ ಬಾರಿಗೆ ದೊಡ್ಡ ಮಟ್ಟದಲ್ಲಿ ‘ಮಹಾ ಭಾರತ’ ಧಾರಾವಾಹಿ ನಿರ್ದೇಶನ ಮಾಡಿದ್ದ ಮುಕೇಶ್ ಕುಮಾರ್ ಸಿಂಗ್ ‘ಕಣ್ಣಪ್ಪ’ ನಿರ್ದೇಶನ ಮಾಡಿದ್ದಾರೆ.

ಆಂಜನೇಯ, ಶ್ರೀ ಕೃಷ್ಣದೇವರಾಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡಾ. ರಾಜ್ ಕುಮಾರ್ ಹುಟ್ಟಿದ ನಾಡಿಗೆ ಪ್ರಣಾಮಗಳು ಎಂದು‌ ಮಾತಿಗಾರಂಭಿಸಿದರು ಚಿತ್ರದ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್.

ಡಾ. ರಾಜಕುಮಾರ್ ಅವರು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ‘ಕಣ್ಣಪ್ಪ’ ಚಿತ್ರ ಮಾಡಲು ಅದು ದೊಡ್ಡ ಸ್ಫೂರ್ತಿ. ನಾನು ಆ ಚಿತ್ರವನ್ನು ನೋಡಿದ್ದೇನೆ. ಆ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅವರ ಅಭಿನಯ ಎಂತಹ ಕಲಾವಿದರಿಗೂ ದೊಡ್ಡ ಸವಾಲು. ಅದನ್ನು ಮರುಸೃಷ್ಟಿಸುವುದು ಸಹ ಸವಾಲು. ದೊಡ್ಡ ಕಲಾವಿದರ ಮತ್ತು ತಂತ್ರಜ್ಞರ ಬಳಗದ ಸಹಾಯದಿಂದ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗಿದೆ ಎಂದರು.

ಶಿವ ಭಕ್ತನ ಕುರಿತಾದ ಒಂದು ಚಿತ್ರ ಮಾಡುವುದರ ಜೊತೆಗೆ ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿದವರು ವಿಷ್ಣು ಮಂಚು ಮತ್ತು ಡಾ. ಮೋಹನ್‍ ಬಾಬು ಎಂದು ವಿವರಿಸಿದರು.

ನೃತ್ಯ ನಿರ್ದೇಶನ ಮಾಡಿರುವ ಪ್ರಭುದೇವ ಹಾಗೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶರತ್ ಕುಮಾರ್ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು. ಇದು ಭಾರತೀಯರು ಹೆಮ್ಮೆ ಪಡುವ ಅವಿಸ್ಮರಣೀಯ ಚಿತ್ರವಾಗಲಿದೆ ಎಂದರು ಶರತ್ ಕುಮಾರ್.

ಅಂದ ಹಾಗೆ ಚಿತ್ರವು ಏಪ್ರಿಲ್ 25ರಂದು ವಿಶ್ವವ್ಯಾಪಿ ಬಿಡುಗಡೆ ಕಾಣಲಿದೆ. ಏಪ್ರಿಲ್ 24 ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಆಶೀರ್ವಾದ ಕೂಡ ಇದೆ ಎಂಬುದು ವಿಷ್ಣುಮಂಚ್ ಅಭಿಪ್ರಾಯ.

 

 

Social Share :

ಶ್ರೇಯಸ್ ವಿಷ್ಣು ಪ್ರಿಯ ಪ್ರೇಮಿಗಳ ಅಮರ ಕಾವ್ಯ

Social Share :

ಇದು ಇನ್ನೂ ಹದಿಹರೆಯದ ಯುವ ಪ್ರೇಮಿಗಳ ಪ್ರೇಮ ಕಥಾನಕ. ಒಂದು ರೀತಿಯಲ್ಲಿ ಪ್ರಕೃತಿ ಮಡಿಲಿನಲ್ಲಿ ನವಿಯುವ ‘ಅಮರ ಕಾವ್ಯ’.

ಗಂಡುಗಲಿ ನಿರ್ಮಾಪಕ ಕೆ.ಮಂಜು ಬಿಂದ್ಯಾ ಮೂವೀಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅವರ ಪುತ್ರ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕಣ್ಸನ್ನೆ ಖ್ಯಾತಿಯ ಪ್ರಿಯಾ ವಾರಿಯರ್ ಇದ್ದಾರೆ.

ಈಚೆಗೆ ನಡೆದ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ವಿಶೇಷತೆಗಳ ಬಗ್ಗೆ ವಿವರ ನೀಡುವಾಗ ಸ್ಯಾಂಡಲ್ ವುಡ್ ನ ಸ್ಟಾರ್ ಹಾಗೂ ಗಣ್ಯರು ಭಾಗವಹಿಸಿದ್ದರು.

ನಟ ಶ್ರೀಮುರಳಿ, ನಿರ್ಮಾಪಕ ರಮೇಶ್ ರೆಡ್ಡಿ, ನಟಿ ಸಪ್ತಮಿಗೌಡ, ಗೀತ ಸಾಹಿತಿ ಕವಿರಾಜ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೊಂದು ನವಿರು ಪ್ರೇಮ ಕಥೆ. ಕರ್ನಾಟಕದ ಊಟಿ ಚಿಕ್ಕಮಗಳೂರಿನ ರಮಣೀಯ ದೃಶ್ಯಗಳು ಗಮನ ಸೆಳೆಯುತ್ತವೆ. ಪ್ರಕೃತಿ ಮತ್ತು ಪ್ರೇಮದ ಬೆಸುಗೆ ಈ ಅಮರ ಕಾವ್ಯ.

ಚಿತ್ರದ ‘ಏಳು ಗಿರಿಗಳ ಏಳು ಕಡಲಿನ..’ ಎಂಬ ಡಾ.ನಾಗೇಂದ್ರಪ್ರಸಾದ್ ಬರೆದಿರುವ ಗೀತೆಯ ಇಂಗ್ಲಿಷ್ ಅವತರಣಿಕೆಯ ಸಾಲುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯದಲ್ಲಿ ಶ್ರೀಮುರಳಿ, ರಮೇಶ್ ರೆಡ್ಡಿ, ಕವಿರಾಜ್, ಶ್ರೇಯಸ್ ಭಾಗವಹಿಸಿದ್ದು ವಿಶೇಷವಾಗಿತ್ತು.

ಜೊತೆಗೆ ಕೆ.ಮಂಜು, ಪ್ರಿಯಾ ವಾರಿಯರ್ ಹಾಗೂ ಚಿತ್ರತಂಡದವರು ಸಾಥ್ ನೀಡಿದರು. ಇದೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.

ಮುಂದಿನ ತಿಂಗಳು ಅಂದರೆ ಫೆಬ್ರವರಿ 21 ರಂದು ಚಿತ್ರವು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಚಿತ್ರದ ಪ್ರಚಾರ ಕಾರ್ಯ ವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ.

ಮಲಯಾಳಂ ಮೂಲದ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಾಹಕ.
ತೆಲುಗು ಮೂಲದ ಗೋಪಿ ಸುಂದರ್ ಸಂಗೀತ ನಿರ್ದೇಶಕ.

ವಿ.ಕೆ.ಪ್ರಕಾಶ್ ಅವರಿಗೆ ಕನ್ನಡದಲ್ಲಿ ಇದು ಎರಡನೇ ಚಿತ್ರ. ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದಾರೆ ಎಂಬ ವಿವರಗಳು ಬಂದವು.

ಅತ್ಯುತ್ತಮ ಕಥಾವಸ್ತು ಇರುವ ಚಿತ್ರಗಳು ಮೊದಲು ಆರಂಭವಾಗಿದ್ದೇ ಕನ್ನಡದಲ್ಲಿ. ಆನಂತರ ಮಲಯಾಳಂ ಹಾಗೂ ಇತರ ಭಾಷೆಗಳು ಆಯ್ಕೆ ಮಾಡಿಕೊಂಡವು. ಬಿ.ವಿ.ಕಾರಂತ್ ಹಾಗೂ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳು ನನಗೆ ಸ್ಫೂರ್ತಿ ಯಾಗಿದ್ದವು ಎಂಬುದನ್ನು ನಿರ್ದೇಶಕ ವಿ.ಕೆ.ಪ್ರಕಾಶ್ ಮೆಲುಕು ಹಾಕಿದರು.

ಇದೊಂದು ಅತ್ಯುತ್ತಮ ಪ್ರೇಮಕಥೆ. ಹಾಗಾಗಿ ಯುವ ಸಮುದಾಯವನ್ನು ಖಂಡಿತಾ ತಲುಪುತ್ತದೆ ಎಂಬ ವಿಶ್ವಾಸವನ್ನು ನಿರ್ಮಾಪಕ ಕೆ.ಮಂಜು ವ್ಯಕ್ತಪಡಿಸಿದರು.

ಚಿತ್ರದ ಬಿಡುಗಡೆ ತಡವಾಗಿರುವುದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡಂತೆ ಮಾತನಾಡಿದ ಶ್ರೇಯಸ್ ‌ಲೇಟ್ ಆದ್ರು ಲೇಟೆಸ್ಟ್ ಆಗಿ ಚಿತ್ರ ಬಿಡುಗಡೆ ಕಾಣುತ್ತಿದೆ ಎಂದರು.

ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಅವರಂತಹ ಹಿರಿಯ ಕಲಾವಿದರ ತಾರಾಗಣವಿರುವ ಈ ಚಿತ್ರಕ್ಕೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.

Social Share :

ರುದ್ರ ಗರುಡ ಪುರಾಣ ಟ್ರೈಲರ್ ಡಾಲಿ ಧನಂಜಯ ಸೂಪರ್..

Social Share :

* ಚಿತ್ರ ಜನವರಿ 24 ರಂದು ತೆರೆಗೆ *

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನಡುವೆಯೇ ‘ರುದ್ರ ಗರುಡ ಪುರಾಣ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ರಾಕ್ಷಸ ಡಾಲಿ ಧನಂಜಯ, ಟ್ರೈಲರ್ ಸೂಪರ್ ಎಂದರು.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಿಷಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರುದ್ರ ಗರುಡ ಪುರಾಣ’ ಚಿತ್ರವು ಇದೇ ತಿಂಗಳ 24 ರಂದು ಬಿಡುಗಡೆ ಕಾಣುತ್ತಿದೆ.

ವೀರೇಶ್ ಚಿತ್ರಮಂದಿರದಲ್ಲಿ ನಡೆದ ಟ್ರೈಲರ್ ಬಿಡುಗಡೆಗೆ ಗಂಡುಗಲಿ ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು.

ರಿಷಿ ಕಾಲೇಜು ಹಾಗೂ ರಂಗಭೂಮಿ ದಿನಗಳ ಗೆಳೆಯ. ನಿರ್ದೇಶಕರು ಕೂಡ ಪರಿಚಿತರು. ಈ ಚಿತ್ರ ಅದ್ಭುತ ಯಶಸ್ಸು ಕಾಣಲಿ ಎಂದು ನಟ ಡಾಲಿ ಧನಂಜಯ ಹಾರೈಸಿದರು.

ನಿಜ ಧನಂಜಯ ಅವರು ಕಾಲೇಜಿನಲ್ಲಿ ನನಗೆ ಸೀನಿಯರ್ ಎಂದು ಮಾತನಾಡಿದ ರಿಷಿ ಇಂಜನಿಯರಿಂಗ್ ಅಭ್ಯಾಸದ ದಿನಗಳನ್ನು ನೆನಪಿಸಿಕೊಂಡರು.

ಈಗಾಗಲೇ ಬಿಡುಗಡೆಯಾಗಿರುವ ಹಾಡು‌ಗಳು ಹಾಗೂ ಟೀಸರ್ ಮೂಲಕ ಚಿತ್ರವು ಜನರ ಮನ ತಲುಪಿದೆ. ಟ್ರೇಲರ್ ಸಹ ಉತ್ತಮ ಪ್ರತಿಕ್ರಿಯೆ ಪಡೆದಿದೆ. ನಿರ್ದೇಶಕರ ಶ್ರಮವೂ ಚಿತ್ರಕ್ಕೆ ಸಾಕಷ್ಟಿದೆ ಎಂದು ಹೇಳುತ್ತಾ ಹೋದರು ರಿಷಿ.

ರಿಷಿಗೆ ಎದುರು ನಟಿಸಿರುವ ಪ್ರಿಯಾಂಕ ಕುಮಾರ್, ನಿರ್ದೇಶಕ ನಂದೀಶ್ ಹಾಗೂ ನಿರ್ಮಾಪಕ ಲೋಹಿತ್ ಮಾತನಾಡಿದರು.

ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಭಾಷಣೆಕಾರ ರಘು ನಿಡವಳ್ಳಿ, ಹಾಡು ಬರೆದಿರುವ ಪ್ರಮೋದ್ ಮರವಂತೆ, ಮಂಜು ಮಾಂಡವ್ಯ ಹಾಗೂ ಚಿತ್ರದಲ್ಲಿ ನಟಿಸಿರುವ ಶಿವರಾಜ್ ಕೆ.ಆರ್ ಪೇಟೆ, ಅಶ್ವಿನಿ ಗೌಡ, ಪ್ರಭಾಕರ್, ರಾಮ್ ಪವನ್ ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಪಕಿ ಅಶ್ವಿನಿ ವಿಜಯ್ ಲೋಹಿತ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆ.ಪಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Social Share :

ಮಾಂಕ್ ದಿ ಯಂಗ್ ಮಾಯೆ ವಿಂಟೇಜ್ ಫ್ಯಾಂಟಸಿಯ ಸುತ್ತ

Social Share :

* ಚಿತ್ರ ಫೆಬ್ರವರಿಯಲ್ಲಿ ತೆರೆಗೆ *

ವಿಭಿನ್ನ ಕಥಾಹಂದರ ಹೊಂದಿರುವ ‘ಮಾಂಕ್ ದಿ ಯಂಗ್’ ಚಿತ್ರದಿಂದ ‘ಮಾಯೆ’ ಎಂಬ ಮನ ಸೆಳೆಯುವ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಶಿವಮೊಗ್ಗೆಯ ಹೊಸ ಪ್ರತಿಭೆ ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.

ಎನ್ ಜಿ ಓ ಮುಖ್ಯಸ್ಥೆಯಾಗಿರುವ ಉಷಾ ಚಿತ್ರದ ಕುರಿತು ಸದಾಶಯಗಳನ್ನು ವ್ಯಕ್ತಪಡಿಸಿದರು‌.
ಚಿತ್ರವು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂಬ ವಿವರ ಕೊಟ್ಟಿತು ಚಿತ್ರತಂಡ.

ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಪ್ಯಾನ್ ಇಂಡಿಯಾ ಮೂವೀ ಆಗಿದೆ. ಈ ಚಿತ್ರಕ್ಕೆ ಐದು ಜನ ನಿರ್ಮಾಪಕರು. ಈ ಐದೂ ಜನರು‌ ಬೇರೆ ಬೇರೆ ರಾಜ್ಯದವರು ಎಂಬ ವಿವರ ಕೊಟ್ಟರು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್.

ಅವರೊಟ್ಟಿಗೆ ಗೋಪಿಚಂದ್ ಹಾಗೂ ಲಾಲ್ ಚಂದ್ ಖತಾರ್ ಸಹ ಧ್ವನಿಗೂಡಿಸಿದರು. ಜೊತೆಗೆ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ ಹಾಗೂ ಸರೋವರ್ ಸಹ ನಿರ್ಮಾಣಕ್ಕೆ ಬೆಂಬಲ ನೀಡಿರುವ ವಿವರ ಕೊಟ್ಟರು.

‘ಮಾಂಕ್ ದಿ ಯಂಗ್’ ವಿಂಟೇಜ್ ಫ್ಯಾಂಟಸಿ ಜಾನರ್ ನ ಕಥಾಹಂದರ ಹೊಂದಿರುವ ಚಿತ್ರ. 1869 ನೇ ಇಸವಿಯಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಟ್ರೈಮ್ ಟ್ರಾವೆಲ್ ನ ಥ್ರಿಲ್ ಪ್ರೇಕ್ಷಕ ಆನಂದಿಸಬಹುದು
ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ.

ಈಗಾಗಲೇ ಟೀಸರ್ ಹಾಗೂ‌ ಹಾಡುಗಳ ಮೂಲಕ ಜನರ‌ ಮನಸ್ಸಿಗೆ ಹತ್ತಿರವಾಗಿರುವ ಚಿತ್ರದಲ್ಲಿ ನನ್ನ ಪಾತ್ರ ವಿಶೇಷವಾಗಿದೆ ಎಂದರು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಸರೋವರ್.

ಪ್ರಮುಖ ಪಾತ್ರದಲ್ಲಿರುವ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ‌ ಗಾಯಕಿ ಸಿರಿ ಕಟ್ಟೆ, ಗಾಯಕ‌ ರೋಹಿತ್,‌ ಗೀತರಚನೆಕಾರ ಪ್ರತಾಪ್ ಭಟ್, ಕಲಾವಿದರಾದ ಕೃತಿ, ರವಿ ಶಂಕರ್, ಸಾರಸ್ ಮಂಜುನಾಥ್, ರವಿ ಮಟ್ಟಿ, ಸುಮಂತ್, ಶಿವಪ್ಪ ಹಾಗೂ ಇತರರು ಚಿತ್ರದ ಕುರಿತು ಮಾತನಾಡಿದರು‌.

Social Share :

ಬಹು ನಿರೀಕ್ಷಿತ ಅದ್ದೂರಿ 45 ಆಗಸ್ಟ್ 15 ರಂದು ಬಿಡುಗಡೆ

Social Share :

* ಎಳ್ಳು ಬೆಲ್ಲ ಹಂಚಿದ ತಂಡ *

* ಹಾಲಿವುಡ್ ತಂತ್ರಜ್ಞರು *

* ಮೈ ನವಿರೇಳಿಸುವ ಸಾಹಸ *

ಕನ್ನಡದ ಅದ್ದೂರಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿರುವ ಬಹು ತಾರಾಗಣ ಹಾಗೂ ಬಹುಕೋಟಿ ವೆಚ್ಚದ ’45’ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಲಾಗಿದೆ.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ’45’ ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಿರುವುದು ವಿಶೇಷ.

ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಸಿಹಿ ಹಂಚುವ ಕಾರ್ಯಕ್ರಮದ ಜೊತೆಗೆ ಅರೈವಲ್ ಎಂಬ ವಿಡಿಯೋ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿತು.

ಬರುವ ಆಗಸ್ಟ್‌ 15 ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಚಿತ್ರ ತೆರೆ ಕಾಣಲಿದೆ. ಇನ್ನು ಏಳು ತಿಂಗಳು ಇರುವಾಗಲೇ ಬಿಡುಗಡೆಯ ಘೋಷಣೆ ಮಾಡಿದ್ದರ ಹಿಂದೆ ಚಿತ್ರದ ತಂತ್ರಜ್ಞಾನದ ಬಳಕೆಯ ಶ್ರಮದ ವಿಷಯಗಳು ಬಿಚ್ಚಿಕೊಂಡವು.

ಅಮೆರಿಕದಲ್ಲಿ ಚಿಕಿತ್ಸೆ ಪಡೆದಿರುವ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮೊದಲು ವಿಡಿಯೋ ಮೂಲಕ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಈ ಚಿತ್ರದಲ್ಲಿ ವಿಶೇಷವಾಗಿ ಹಾಲಿವುಡ್ ತಂತ್ರಜ್ಞರು ಭಾಗಿಯಾಗುವ ವಿಷಯ ವಿಡಿಯೋ ಮೂಲಕವೇ ಬಿಚ್ಚಿಟ್ಟಿತು ಚಿತ್ರತಂಡ.

ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ.ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.

ಇದಕ್ಕೂ ಮುಂಚೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆ.ವಿ.ಎನ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ನಾರಾಯಣ್, ಮಾಜಿ ಶಾಸಕ ರಾಮಚಂದ್ರಗೌಡ, ನಿರ್ಮಾಪಕ ಕೆ.ಮಂಜು, ಅವರ ಪುತ್ರ ಶ್ರೇಯಸ್ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡ ರಮೇಶ್ ರೆಡ್ಡಿ ಅವರ ಪುತ್ರ ಸೂರಜ್, ಬಿಡುಗಡೆ ದಿನಾಂಕ ಘೋಷಣೆಯ ವಿಡಿಯೋ ಬಿಡುಗಡೆ ಮಾಡಿದರು.

ಡಾ. ಸಂಜಯ್ ಗೌಡ, ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಛಾಬ್ರಿಯಾ, ಆನಂದ್ ಛಾಬ್ರಿಯಾ, ಇಂದ್ರಜಿತ್ ಲಂಕೇಶ್, ಕಿರಣ್ ಭರ್ತೂರ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಹಸ ನಿರ್ದೇಶಕರಾದ ಡಾ.ರವಿವರ್ಮ, ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ಸತ್ಯ ಹಗ್ಡೆ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಗಣ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೂ ವಿಶೇಷವಾಗಿತ್ತು.

ಚಿತ್ರ ಅದ್ದೂರಿಯಾಗಿದೆ. ಬಜೆಟ್ ಚಿತ್ರದಲ್ಲಿಯೇ ಕಾಣುತ್ತದೆ. ಚಿತ್ರ ಎಷ್ಟು ಗಳಿಕೆ ಮಾಡುತ್ತದೆ ಎಂಬುದನ್ನು ಈಗಲೇ ಚರ್ಚೆ ಮಾಡುವುದು ಬೇಡ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ಈ ಚಿತ್ರಕ್ಕಾಗಿ ಕೆನಡಾದ ತಂತ್ರಜ್ಞರು ಸಿಜಿ ಮತ್ತಿತರ ಕೆಲಸಗಳನ್ನು ಮಾಡುವ ಕುರಿತು ವಿವರಗಳನ್ನು ನಿರ್ದೇಶಕ ಅರ್ಜುನ್ ಜನ್ಯ ನೀಡಿದರು.

ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಕಾಂಬಿನೇಷನ್ ಅದ್ಭುತ. ಈ ಸಮಾರಂಭ ನೋಡಿದರೆ ಚಿತ್ರದ ದಿನಾಂಕ ಪ್ರಕಟಣೆ ಮಾಡುವ ಸಮಾರಂಭದಂತ್ತಿಲ್ಲ. ಬದಲಿಗೆ ಚಿತ್ರದ ಯಶಸ್ಸಿನ ಮಿಲನದಂತಿದೆ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಈ ಚಿತ್ರದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿರುವುದು ಪುಣ್ಯ. ಉಪೇಂದ್ರ ಅವರನ್ನು ನೋಡುತ್ತಾ ಬೆಳೆದ ನನಗೆ ಅವರ ಜೊತೆ ಕೆಲಸ ಮಾಡುವ ಅವಕಾಶ ಕೂಡ ಪುಣ್ಯದ್ದಾಗಿದೆ ಎಂದರು ರಾಜ್ ಬಿ.ಶೆಟ್ಟಿ.

Social Share :

ಸಂಜು ವೆಡ್ಸ್ ಗೀತಾ-2 ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಛಲವಾದಿ ಕುಮಾರ್

ನಿರ್ದೇಶನ : ನಾಗ್ ಶೇಖರ್

ಮನಮೋಹಕ ಚಿತ್ರಣದಲ್ಲಿ
ಕಾಣದ ಭಾವ ತೀವ್ರತೆ‌..

ಮನುಷ್ಯನಿಗೆ ಪ್ರೇಮಿಸುವಲ್ಲಿ ಇರುವಷ್ಟು ಮಜಾ ಮತ್ಯಾವುದರಲ್ಲಿಯೂ ಕಾಣುವುದು ಅಪರೂಪ. ಪ್ರೇಮ ಅಜರಾಮರ; ಪ್ರೇಮ ಮಧುರಾಕ್ಷರ. ಅದೂ ಗಟ್ಟಿ ಪ್ರೇಮವಾಗಿದ್ದಾಗ ಮಾತ್ರ.

ಕೆಲವೊಮ್ಮೆ ಪ್ರೇಮದಲ್ಲಿ ಕೃತಕತೆ ಇರುತ್ತದೆ. ಅಂತಹ ಪ್ರೇಮ ಕಿತ್ತು ಹೋಗುತ್ತದೆ. ಇನ್ನು ಕೆಲವೊಮ್ಮೆ ಪ್ರೇಮದ ಕಥೆ ಹೆಣೆಯುವಲ್ಲಿ ಕೃತಕತೆ ಕಾಣುತ್ತದೆ. ಅದು ಮನ ತಟ್ಟುವುದಿಲ್ಲ.

ಕೊನೆಯಲ್ಲಿ ಹೇಳಿರುವುದು ಈ ಚಿತ್ರಕ್ಕೆ ಅನ್ವಯ. ಪ್ರೇಮಕ್ಕೆ ಇರಬಹುದಾದ ಮೌನ ಸಂವೇದನೆ; ಭಾವನಾ ತೀವ್ರತೆ ಇರದೇ ಹೋದಾಗ ಆ ಕಥೆ ಆತ್ಮವಿಲ್ಲದ ದೇಹದಂತೆ..!

ಆದರೆ ಇಲ್ಲಿ ಕಣ್ತುಂಬಿ ಕೊಂಡಷ್ಟೂ ಅಪೂರ್ವ ದೃಶ್ಯಗಳ ಚಿತ್ರಣ.. ಕೇಳಿದಷ್ಟೂ ಇಂಪಾದ ಸಂಗೀತ.. ಎಲ್ಲವೂ ಇದ್ದರೂ ಭಾವಸ್ಪರ್ಶವಿಲ್ಲದ ಕಥೆ ಅದೇ ಕಾರಣಕ್ಕೆ ಸೊರಗುತ್ತದೆ..

ಸುಮಾರು 10 ವರ್ಷಗಳ ಹಿಂದೆ ತೆರೆ ಕಂಡಿದ್ದ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದ ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸಂಗೀತ ಮತ್ತು ಭಾವ ತೀವ್ರತೆಗಳಲ್ಲಿ ಮುಳುಗೇಳುವಂತೆ ಮಾಡಿದ್ದ ಚಿತ್ರ.

ಆದರೆ ಅದರ ಮುಂದುವರಿಕೆ ಅಥವಾ ಮಾದರಿಯ ಭಾಗ 2ರಲ್ಲಿ ಕಾಣುವುದು ಭಾವ ತೀವ್ರತೆಯ ತೀವ್ರ ಕೊರತೆ..!

ಮದುವೆಯಾದ ದಂಪತಿಗಳ ವಿವಾಹ ವಾರ್ಷಿಕೋತ್ಸವ ಕಾರಣದಿಂದ ಆರಂಭವಾಗುವ ಕಥೆ. ಚಿತ್ರದ ಉದ್ದಕ್ಕೂ ಅದನ್ನೇ ಎಳೆದೊಯ್ಯುತ್ತದೆ. ಆಗರ್ಭ ಶ್ರೀಮಂತನ ಮಗಳು ನೇಕಾರ ವೃತ್ತಿಯ ಸಾಧಾರಣ ವ್ಯಕ್ತಿಯನ್ನು ಪ್ರೇಮಿಸುವ ಧಾಟಿಯೇ ನೂರಾರು ಪ್ರಶ್ನೆಗಳನ್ನು ಒಡ್ಡುತ್ತದೆ‌.

ನೇಯ್ಗೆ ಮಾಡುವ ವ್ಯಕ್ತಿ ಹೃದಯಾಂತರಾಳದಲ್ಲಿ ಮಾನವೀಯ ಅನುಕಂಪ ವ್ಯಕ್ತಪಡಿಸುವುದರಿಂದ ಗೀತಾ ಸಂಜು ನಡುವೆ ಪ್ರೇಮಾಂಕುರವಾಗಿ ನಂತರ ಮದುವೆಯಾಗಿ ಇಬ್ಬರೂ ಅತ್ಯುತ್ತಮ ಬದುಕು ಕಟ್ಟಿಕೊಳ್ಳುವುದು ಸರಿಯೇ..

ಆದರೆ ಸಂಜು ಬೆಳವಣಿಗೆಯ ದಾರಿಯಲ್ಲಿ ಇರಬೇಕಾದ ನೈಜತೆ ಅಥವಾ ಅದ್ಭುತಗಳು ನಿರೂಪಣೆಯಲ್ಲಿ ಕಾಣುವುದಿಲ್ಲ. ಶಿಡ್ಲಘಟ್ಟದ ರೇಷ್ಮೆ ಬೆಳೆ ಜಗತ್ತನ್ನು ಬೆಳಗುವ ಪರಿ ಹೇಗೆ ಎಂಬುದರ ವಿವರಣೆಗೆ ಗಮನವೇ ಹರಿಸದಿರುವುದು ಎದ್ದು ಕಾಣುತ್ತದೆ.

ಸಂಜು ಮತ್ತು ಗೀತಾ ಇಬ್ಬರ ವಸ್ತ್ರ ವಿನ್ಯಾಸ, ಹಿನ್ನೆಲೆಯ ದೃಶ್ಯ, ಸಂಗೀತದ ಕಾರಣದಿಂದ ಶ್ರೀಮಂತಿಕೆಯ ವೈಭವೀಕರಣ ಎದ್ದು ಕಾಣುತ್ತದೆ. ಆದರೆ ಇಲ್ಲಿ ಬೇಕಾಗಿರುವುದು ನೈಜ ಪ್ರೇಮ. ಹೃದಯದ ಬೆಸುಗೆ. ಅದೇ ಕಾಣುವುದಿಲ್ಲ. ಹಾಗಾಗಿ ಪ್ರೇಮಾರಾಹಿತ್ಯ ಸ್ಥಿತಿಯಲ್ಲಿ ಪ್ರೇಕ್ಷಕ ನಿರ್ಭಾವುಕ.

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಇಬ್ಬರು ನುರಿತ ಕಲಾವಿದರು. ಅವರಿಬ್ಬರ ನಟನೆ ಸಹಜವಾಗಿದೆ. ಶಿಡ್ಲಘಟ್ಟ ಪ್ರಾಂತೀಯ ಭಾಷೆಯಲ್ಲಿ ಮಾತನಾಡುವ ತಬಲಾನಾಣಿ ಪಾತ್ರ ಗಮನ ಸೆಳೆಯುತ್ತದೆ. ಸಾಧು ಕೋಕಿಲ ಮತ್ತು ರಂಗಾಯಣ ರಘು ಅವರಿಗೆ ಸಂಭಾಷಣೆಯೇ ಕೊರತೆಯಾಗಿರುವುದು ಅಚ್ಚರಿ.

ಇಷ್ಟಾದರೂ ‘ಮಳೆಯಂತೆ ಬಾ..’, ‘ಸಂಜು ಮತ್ತು ಗೀತಾ ಜೊತೆಗೆ..’ ಹಾಗೂ ಇತರ ಹಾಡುಗಳ ಸೊಗಸು ಹಿಡಿದಿಡುತ್ತದೆ. ಚಿತ್ರ ಮುಗಿದ ಮೇಲೂ ಗುನುಗುವಂತೆ ಮಾಡುತ್ತದೆ.

ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಸತ್ಯ ಹೆಗಡೆ ಕ್ಯಾಮೆರಾ ಸೊಗಸು. ಅದರ ಹಿಂದೆ ಕಲಾ ನಿರ್ದೇಶಕರ (ಅರುಣ್ ಸಾಗರ್) ನೈಪುಣ್ಯ. ಹಾಗೆಯೇ ಮಲೆನಾಡಿನ ಕವಿ ಕವಿರಾಜ್ ಅವರ ಪದಗಳ ಇಂಪು, ಶ್ರೀಧರ್ ಸಂಭ್ರಮ್ ಸಂಗೀತದ ಸಂಭ್ರಮ.

ಲವ್ ಸೆಕ್ಸ್ ದೋಖ ಇರುವ ಕಾಲಘಟ್ಟದಲ್ಲಿ 80ರ ದಶಕದ ಪವಿತ್ರ ಪ್ರೇಮ ಅಥವಾ ಅದಮ್ಯ ತ್ಯಾಗದ ಕಥೆ ಹೇಳಲು ಹೊರಟ ನಿರ್ದೇಶಕರ ಧೈರ್ಯ ಮೆಚ್ಚಲೇ ಬೇಕು.

ನಿರ್ದೇಶಕರು ಕಥೆಯ ಮೇಲೆ ಹಿಡಿತ ಸಾಧಿಸಿದ್ದರೆ ಒಂದು ಭಾವನಾತ್ಮಕ ನಿರೂಪಣೆ ಕಾಣಬಹುದಿತ್ತು ಎಂಬ ಅನಿಸಿಕೆ ಚಿತ್ರ ನೋಡಿ ಮುಗಿಸಿದ ಮೇಲೆ ಅನಿಸಿದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ..

Social Share :

ಸಂಜು ವೆಡ್ಸ್ ಗೀತಾ-2 ಬಿಡುಗಡೆಗೆ ನ್ಯಾಯಾಲಯದ ಅನುಮತಿ..

Social Share :

* ಜನವರಿ 17ಕ್ಕೆ ಚಿತ್ರ ಬಿಡುಗಡೆ *

ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತ-2’ ಚಿತ್ರದ ಬಿಡುಗಡೆಗಿದ್ದ ತೊಡಕು ನಿವಾರಣೆಗೊಂಡಿದ್ದು, ಇದೇ ವಾರ ಅಂದರೆ ಜನವರಿ 17ರಂದು ಚಿತ್ರ ಬಿಡುಗಡೆ ಕಾಣುತ್ತಿದೆ.

ಕಳೆದ ವಾರ (ಜನವರಿ 10)ರಂದು ಬಿಡುಗಡೆ ಕಾಣಬೇಕಿದ್ದ ‘ಸಂಜು ವೆಡ್ಸ್ ಗೀತ-2’ ಚಿತ್ರದ ಮೇಲಿದ್ದ ತಡೆಯಾಜ್ಞೆ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರದ ಬಿಡುಗಡೆಗೆ ನ್ಯಾಯಾಲಯದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಈ ವಾರ (ಜನವರಿ 17) ಚಿತ್ರ ಬಿಡುಗಡೆ ಕಾಣುತ್ತಿದೆ.

‘ಸಂಜು ವೆಡ್ಸ್ ಗೀತ-2’ ನಿರ್ದೇಶಕ ನಾಗ್ ಶೇಖರ್ ಹಾಗೂ ತೆಲುಗು ನಿರ್ಮಾಪಕರ ನಡುವಿನ ಹಿಂದಿನ ಒಡಂಬಡಿಕೆ ಈ ತಡೆಯಾಜ್ಞೆಗೆ ಕಾರಣವಾಗಿತ್ತು ಎಂಬುದನ್ನು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ವಿವರ ನೀಡಿತು.

ನಾಗ್ ಶೇಖರ್ ಮೂವೀಸ್ ಎಂಬುದನ್ನು ಉಲ್ಲೇಖಿದಿದ್ದು, ಇಷ್ಟಕ್ಕೆಲ್ಲಾ ಕಾರವಾಯಿತು. ಬಳಿಕ ನಿರ್ಮಾಪಕ ಛಲವಾದಿ ಕುಮಾರ್ ಹೈದ್ರಾಬಾದ್ ಗೆ ತೆರಳಿ ನಾನೊಬ್ಬನೇ ನಿರ್ಮಾಪಕ ಎಂದು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದೂ ಅಲ್ಲದೆ ನಾಲ್ಕುವರೆ ಕೋಟಿ ರೂಪಾಯಿಗಳ ಜಾಮೀನಿಗೆ ಜಮೀನು ಪತ್ರಗಳನ್ನು ನೀಡಿ ಚಿತ್ರ ಬಿಡುಗಡೆಗೆ ಅನುಮತಿ ಪಡೆದುಕೊಂಡಿದ್ದಾರೆ ಎಂಬ ವಿವರಣೆ ಬಂತು ತಂಡದಿಂದ..

ನ್ಯಾಯಾಲಯದ ತಡೆಯಾಜ್ಞೆ ತೆರೆವಿಗೆ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ಜಾಮೀನು ಸಂಬಂಧಿತ ವಿಷಯಕ್ಕೆ ಜಮೀನು ಪತ್ರಗಳನ್ನು ನೀಡಿ ಚಿತ್ರದ ಬಿಡುಗಡೆಗೆ ಅನುಮತಿ ಪಡೆದುಕೊಂಡಿರುವುದಾಗಿ ವಿವರಗಳು ಬಂದವು.

ಛಲವಾದಿ ಕುಮಾರ್ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಚಿತ್ರ ನಿರ್ಮಿಸಿರುವುದಾಗಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಚಿತ್ರ ಬಿಡುಗಡೆ ಕಾಣುತ್ತಿದೆ ಎಂಬ ವಿವರ ನೀಡಿದರು ನಾಗ್ ಶೇಖರ್.

ನಿರ್ಮಾಪಕ ಛಲವಾದಿ‌ ಕುಮಾರ್, ನಿರ್ದೇಶಕ ನಾಗಶೇಖರ್, ಕಥೆಗಾರ ಚಂದ್ರಚೂಡ್, ನಾಯಕ ನಟ ಶ್ರೀನಗರ ಕಿಟ್ಟಿ ಜತೆಗೆ ಸಹ‌ ನಿರ್ಮಾಪಕ ಕಿಟ್ಟಿ ಮಂಡ್ಯ ಕೂಡ‌ ಹಾಜರಿದ್ದರು.

ಚಿತ್ರದ ಬಿಡುಗಡೆ ಮುಂದಕ್ಕೆ ಹೋದ ಬಳಿಕ ಅನೇಕರು ನಿರ್ಮಾಪಕರ ವಿರುದ್ಧ ಮನಸ್ಸೋ ಇಚ್ಚೆ ಬರೆಯುತ್ತಿದ್ದಾರೆ. ಆದರೆ ನಿಜವಾದ ಕಾರಣ ನಮಗೆ ತಡೆಯಾಜ್ಞೆಯ ವಿಷಯ ತಡವಾಗಿ ತಿಳಿದಿದ್ದೇ ಆಗಿದೆ ಎಂಬ ವಿವರ ಬಂತು ಚಿತ್ರತಂಡದಿಂದ..

ತಡೆಯಾಜ್ಞೆ ತೆರವುಗೊಳಿಸಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಜಾಮೀನು ಪತ್ರ ನೀಡಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ಪಡೆಯಲಾಗಿದೆ. ಇದೇ ಸತ್ಯಾಂಶವಾಗಿದೆ ಎಂಬುದಾಗಿ ವಿವರ ಕೊಟ್ಟರು ಛಲವಾದಿ ಕುಮಾರ್.

Social Share :

ಕೊರಗಜ್ಜನ ಆರಾಧನೆಗೆ ಕಾನನ ಕೋರ ಅದ್ದೂರಿ ತ್ರಿಭಾಷಾ ಟ್ರೈಲರ್

Social Share :

* ಫೆಬ್ರವರಿ 7 ರಂದು ತೆರೆಗೆ *

ಕಾಡಿನಲ್ಲಿ ನಡೆಯುವ ಮನ ಕಲಕುವ ಮತ್ತು ಮನ ಸೆಳೆಯುವ ಘಟನಾವಳಿಗಳು. ಕುತೂಹಲದ ಜೊತೆಗೆ ಮೈ ನವಿರೇಳಿಸುವ ಸಾಹಸಗಳು..

ಇವು ಸುನಾಮಿ ಕಿಟ್ಟಿ ಅಭಿನಯದ ಪಿ.ಮೂರ್ತಿ ನಿರ್ಮಾಣದ ಹಾಗೂ ಒರಟ ಶ್ರೀ ನಿರ್ದೇಶನದ ‘ಕೋರ’ ಚಿತ್ರದ ಟ್ರೈಲರ್ ನಲ್ಲಿ ಕಂಡು ಬಂದ ವಿಶೇಷಗಳು..

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಆವರಣ ಕಳೆದ ಮಂಗಳವಾರ ಕಿಕ್ಕಿರಿದ ಜನಸಂದಣಿಯಿಂದ ತುಂಬಿ ಹೋಗಿತ್ತು.

ಸಮಾರಂಭದಲ್ಲಿ ಆನಂದ ಗುರೂಜಿ ಹಾಗೂ ಪಾಲನಹಳ್ಳಿ ಗುರೂಜಿ ಕನ್ನಡ ಹಾಗೂ ತೆಲುಗು ಟ್ರೈಲರ್ ಬಿಡುಗಡೆ ಮಾಡಿದರೆ, ತಮಿಳು ಟ್ರೇಲರ್ ನ್ನು ನಿರ್ದೇಶಕರಾದ ಆರ್ ಚಂದ್ರು ಹಾಗೂ ಬಹದ್ದೂರ್ ಚೇತನ್ ಕುಮಾರ್ ಬಿಡುಗಡೆಗೊಳಿಸಿದರು‌.

ಫೆಬ್ರವರಿ 7 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆ ಕಾಣುತ್ತಿರುವ ಈ ಚಿತ್ರದ ಅದ್ದೂರಿಯ ಟ್ರೈಲರ್ ಬಿಡುಗಡೆಯಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್‌, ನಟ ಕಾಕ್ರೋಜ್ ಸುಧೀ, ಒರಟ ಪ್ರಶಾಂತ್, ನಿರ್ಮಾಪಕ ಸಂಜಯ್ ಗೌಡ ಹಾಗೂ ಇತರರು ಪಾಲ್ಗೊಂಡರು.

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿರುವ ಪಿ.ಮೂರ್ತಿ, ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಈ ಚಿತ್ರದಲ್ಲಿ ಸಾಹಸಗಳು ವಿಶೇಷವೆನಿಸುತ್ತವೆ. ಇದೊಂದು ನಮ್ಮ ನೆಲದ ಕಥೆ.‌ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯೂ ಹೌದು. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌ ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮೊದಲಾದ ಕಡೆ ಚಿತ್ರೀಕರಣವಾಗಿದೆ ಎಂಬ ವಿವರ ನೀಡಿದರು.

ನಿರ್ದೇಶಕ ಒರಟ ಶ್ರೀ ಒಂದೊಳ್ಳೆ ಕಥೆ ಮಾಡಿದ್ದಾರೆ. ಸುನಾಮಿ ಕಿಟ್ಟಿ ನಟನೆ ಹಾಗೂ ಸಾಹಸಗಳಲ್ಲಿ ಗಮನ ಸೆಳೆದಿದ್ದಾರೆ. ಕಠೋರ ಎಂಬ ಪಾತ್ರವೂ ನನ್ನದಾಗಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು ನಿರ್ಮಾಪಕರು.

ಇದು ನಲವತ್ತು ವರ್ಷಗಳ ಹಿಂದಿನ ಕಥೆ. ಆ ಕಾಲದಲ್ಲಿ ಪ್ರಕೃತಿಯನ್ನು ದೇವರ ತರಹ ಆರಾಧಿಸುತ್ತಿದ್ದರು.‌ ಈಗ ಒಂದು ಅಡಿ ಜಾಗಕ್ಕೂ ಹೊಡೆದಾಟ ಬಡಿದಾಟವಿದೆ ಎಂದರು ನಿರ್ದೇಶಕ ಒರಟ ಶ್ರೀ.

ಕನ್ನಡ ಚಿತ್ರ ನೋಡಿದ ಕೆಲವರು ಇದು ಎಲ್ಲಾ ಭಾಷೆಗಳಿಗೂ ಹೊಂದುವ ಕಥೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿ ಎಂದು ಹೇಳಿದರು. ಹಾಗಾಗಿ ಇದು ಪ್ಯಾನ್ ಇಂಡಿಯಾ ಚಿತ್ರವಾಗಿ ಪರಿವರ್ತನೆಯಾಯಿತು ಎಂದರು.

ಇದು ನನ್ನ ಅದೃಷ್ಟ ಪರೀಕ್ಷೆಯಾಗಿದೆ. ಸಾಹಸ ದೃಶ್ಯಗಳಲ್ಲಿ ಸಾಕಷ್ಟು ಪರಿಶ್ರಮ ಹಾಕಿರುವುದು ಫಲ ಕೊಟ್ಟಿದೆ ಎಂಬುದು ಸುನಾಮಿ ಕಿಟ್ಟಿ ವಿನಮ್ರ ಮಾತು.

ಸಹ ನಿರ್ಮಾಪಕ ಚೆಲುವರಾಜು, ನಟಿ ಚರಿಷ್ಮಾ, ಕಲಾವಿದರಾದ ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ನಟಿ ಸೌಜನ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತಮಿಳು ವಿತರಕ ಶಾನ್, ತೆಲುಗು ವಿತರಕ ಬಾಲಾಜಿ ಸಮಾರಂಭದಲ್ಲಿ ಮಾತನಾಡಿದರು.

Social Share :

ಅನ್ ಲಾಕ್ ರಾಘವನ ಲಾಕ್ ಲಾಕ್ ಮಿಲಿಂದ್ ಹೆಜ್ಜೆಗೆ ಸೋತವರು..

Social Share :


* ಶಿವಮೊಗ್ಗದ ಭಾರತ್ ಸಿನಿಮಾಸ್ ನಲ್ಲಿ ಹಾಡು ಬಿಡುಗಡೆ *

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಅನ್ ಲಾಕ್ ರಾಘವ’ ಚಿತ್ರವು ಪ್ರೇಮಿಗಳ ದಿನಕ್ಕೆ ಹತ್ತಿರವಾಗಿ ಫೆಬ್ರವರಿ 7ರಂದು ಬಿಡುಗಡೆ ಕಾಣಲಿದೆ.

ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ, ಅನೂಪ್ ಸೀಳಿನ್ ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ‘ಲಾಕ್ ಲಾಕ್..’ ಎಂಬ ಹಾಡು ಇತ್ತೀಚಿಗೆ ಶಿವಮೊಗ್ಗದ ಭಾರತ್ ಸಿನಿಮಾಸ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ.

ಈ ಕುರಿತು ಚಿತ್ರತಂಡ ಬೆಂಗಳೂರಿನಲ್ಲಿ ಖುಷಿ ಹಂಚಿಕೊಂಡಿತು. ಈ ಹಾಡಿನಲ್ಲಿ ಕಾಣುವ ಹೊಸತನ; ಅದ್ದೂರಿತನ ಇಡೀ ಚಿತ್ರದಲ್ಲಿ ಕಾಣಬಹುದು ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಈ ಹಾಡಿಗೆ ಹೆಜ್ಜೆ ಹಾಕಿರುವುದು ಅತ್ಯಂತ ಖುಷಿ ಕೊಟ್ಟಿದೆ ಎಂದರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಿಲಿಂದ್. ಚಿತ್ರದಲ್ಲಿರುವ ಮೂರು ಹಾಡುಗಳು ನನಗೆ ಹೆಚ್ಚಿನ ಘನತೆ ತಂದುಕೊಡುತ್ತವೆ ಎಂಬ ನಂಬಿಕೆ ನನ್ನದು ಎಂದರು.

ಶಿವಮೊಗ್ಗ ನಮ್ಮ ಊರು. ಹಾಗಾಗಿ ಅಲ್ಲಿ ಹಾಡು ಬಿಡುಗಡೆ ಕಂಡಿದ್ದು ಅತ್ಯಂತ ಖುಷಿ ಕೊಟ್ಟಿದೆ ಎಂದವರು ನಿರ್ಮಾಪಕ ಮಂಜುನಾಥ್ ದಾಸೇಗೌಡ.

ಮುಖ್ಯವಾಗಿ ಇದು ಮಗನ ಚಿತ್ರ. ಹಾಗು ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಗಿರೀಶ್ ಕುಮಾರ್ ನನ್ನ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ಮಾಪಕರು.

ಮಿಲಿಂದ್ ಜೋಡಿಯಾಗಿ ರೆಚೆಲ್ ಡೇವಿಡ್ ನಟಿಸಿದ್ದಾರೆ. ಡಿ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಲವಿತ್ ಛಾಯಾಗ್ರಹಣ, ಅಜಯ್ ಕುಮಾರ್ ಸಂಕಲನವಿದೆ.

ಇದು ಮಿಲಿಂದ್ ಅವರ ಮೊದಲ ಚಿತ್ರ. ಆದರೆ ಅವರ ನೃತ್ಯದಲ್ಲಿ ಪರಿಪೂರ್ಣತೆ ಇರುವುದು ಕಾಣುತ್ತದೆ ಎಂದವರು ನೃತ್ಯ ನಿರ್ದೇಶಕ ಮುರಳಿ.

ಪ್ರೇಮಿಗಳಿಂದ ಪ್ರೇಮಿಗಳಿಗಾಗಿ ರೂಪುಗೊಂಡಿರುವ ಚಿತ್ರ ‘ಅನ್ ಲಾಕ್ ರಾಘವ’ ಪ್ರೇಮಿಗಳಿಗೆ ಖುಷಿ ಕೊಡುವ ದಾರಿಯ ಸನಿಹದಲ್ಲಿದೆ..

Social Share :