Snehapriya.com

June 8, 2025

admin

ರುದ್ರ ಗರುಡ ಪುರಾಣ ಯಶಸ್ಸು ಜನರ ಒಲವು ಚಿತ್ರದ ಗೆಲುವು..

Social Share :

ರಿಷಿ ಮುಖ್ಯ ಪಾತ್ರದಲ್ಲಿರುವ ‘ರುದ್ರ ಗರುಡ ಪುರಾಣ’ ಚಿತ್ರವು ಯಶಸ್ಸು ಕಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕಳೆದವಾರ ರಾಜ್ಯಾದ್ಯಂತ ಬಿಡುಗಡೆ
ಕಂಡಿದ್ದ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಜನರು ತೋರುತ್ತಿರುವ ಒಲವು ನಮಗೆ ಗೆಲುವು ನಟ ರಿಷಿ ಖುಷಿ ಹಂಚಿಕೊಂಡಿದ್ದು ಚಿತ್ರದ ಪ್ರಚಾರ ಸಭೆಯಲ್ಲಿ..

ಮಾಧ್ಯಮಗಳ ವಿಮರ್ಶೆಯ ಕಾರಣದಿಂದ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಯಿತು. ಹಾಗಾಗಿ ಮೊದಲಿಗೆ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸುವುದು ಕರ್ತವ್ಯವಾಗಿದೆ ಎಂದರು ರಿಷಿ.

ಈ ಐದು ದಿನಗಳಲ್ಲಿ ಥಿಯೇಟರ್ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಿಗೆ ಆಗಿದೆ. ತೆಲುಗು ಡಬ್ಬಿಂಗ್ ರೈಟ್ಸ್ ಸಹ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಹಾಗಾಗಿ ಇನ್ನೂ ಹೆಚ್ಚಿನ ಪ್ರೇಕ್ಷಕ ವರ್ಗ ಸಹಕರಿಸಲಿ ಎಂದು ಮನವಿ ಮಾಡಿದರು.

ನಿರ್ಮಾಪಕ ಲೋಹಿತ್ ಹಾಗೂ ನಿರ್ದೇಶಕ ನಂದೀಶ್ ಸಹ ಚಿತ್ರತಂಡದ ಸದಸ್ಯರಿಗೆ, ಮಾಧ್ಯಮದವರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.

ಕಲಾವಿದರ ಬಳಗದ ಶಿವರಾಜ ಕೆ ಆರ್ ಪೇಟೆ, ಗಿರೀಶ್ ಶಿವಣ್ಣ, ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಕಲನಕಾರ ಮನು ಶೇಡ್ಗಾರ್, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಈ ಸಂದರ್ಭದಲ್ಲಿ ಖುಷಿ ಹಂಚಿಕೊಂಡರು.

Social Share :

ಬಲರಾಮನ ದಿನಗಳು ಚಿತ್ರೀಕರಣ ನಟ ಆಶಿಶ್ ವಿದ್ಯಾರ್ಥಿ ಸೇರ್ಪಡೆ..

Social Share :

ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದ್ದು, ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಚಿತ್ರ ತಂಡಕ್ಕೆ ಸೇರ್ಪಡೆಗೊಂಡಿರುವುದು ವಿಶೇಷ.

ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿರುವ ‘ಬಲರಾಮನ ದಿನಗಳು’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅಭಿನಯಿಸುತ್ತಿದ್ದಾರೆ.

ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಹನ್ನೊಂದು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ ಅವರು ತಮ್ಮ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿರುವುದೇ ವಿಶೇಷ.

ಸದ್ಯ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು ಆಶಿಶ್ ವಿದ್ಯಾರ್ಥಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ‌. ವಿಭಿನ್ನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಆಶಿಶ್ ವಿದ್ಯಾರ್ಥಿ ಅವರಿಗೆ ಸ್ವಾಗತ ಕೋರಿದೆ.

ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಆ ದಿನಗಳು’ ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶಿಸುತ್ತಿದ್ದಾರೆ.

ವಿನೋದ್ ಪ್ರಭಾಕರ್ ಜೋಡಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದು, ಈಗಾಗಲೇ ನಟ ಅತುಲ್ ಕುಲಕರ್ಣಿ ಚಿತ್ರದ ಭಾಗವಾಗಿರುವುದು ವಿಶೇಷ.

80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಇದು ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರವಾಗಿದೆ.

Social Share :

ಬೇಗೂರು ಕಾಲೋನಿ ಚಿತ್ರದ ಜೈ ಭೀಮ್ ಹಾಡು ಬಿಡುಗಡೆ

Social Share :

ಗಣ ರಾಜ್ಯೋತ್ಸವ ಸಂದರ್ಭದಲ್ಲಿ ‘ಜೈ ಭೀಮ್’ ಹಾಡು ಬಿಡುಗಡೆ ಕಂಡಿದ್ದು, ಖ್ಯಾತ ಗಾಯಕ ಶಂಕರ್ ಮಹಾದೇವನ್ ಹಾಡಿರುವುದು ವಿಶೇಷವಾಗಿದೆ.

ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ ರಾಜೀವ್ ಹನು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಈ ಹಾಡು ಈಗ ಗಮನ ಸೆಳೆದಿದೆ.

ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಹಾಗೂ ಕನ್ನಡದ ಹೆಸರಾಂತ ಗೀತರಚನಕಾರ ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆ ಕಂಡಿದೆ.

ಬೇಗೂರ್ ಕಾಲೋನಿ ಎಂಬುದು ಒಂದು ಹೋರಾಟದ ಕಥೆ. ಕಾಲೋನಿಲ್ಲಿರುವ ಮಧ್ಯಮ ವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯುವುದು ಆಟದ ಮೈದಾನಕ್ಕಾಗಿ. ಮೈದಾನಗಳೆಲ್ಲಾ ಮನೆಗಳಾಗುತ್ತಿದೆ. ಮಕ್ಕಳಿಗೆ ಆಡಲು ಜಾಗವಿಲ್ಲ ಎಂಬ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ ಎಂಬ ವಿವರ ನೀಡಿತು ಚಿತ್ರತಂಡ.

ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಸಮುದಾಯದ ಜನರು ವಾಸಿಸು‌ವ
ಈ ಕಾಲೋನಿ ಸಾಮರಸ್ಯದ ಸಂಕೇತವಾಗಿರುತ್ತದೆ. ಹಾಗಾಗಿ ಸಾಮರಸ್ಯ ಸಾರುವ ಹಾಡೊಂದನ್ನು ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂಬ ವಿವರ ಬಂತು.

ಚಿತ್ರವು ಇದೇ‌ ಜನವರಿ 31 ರಂದು ಬಿಡುಗಡೆಯಾಗಲಿದೆ.‌ ಮಕ್ಕಳಿಗೆ ಪಾಠದಷ್ಟೇ ಆಟ ಕೂಡ ಮುಖ್ಯ. ಆದರೆ ಮಕ್ಕಳು ಆಟವಾಡಲು ಈಗ ಮೈದಾನಗಳು ಹೆಚ್ಚು ಇಲ್ಲ. ಇರುವ ಮೈದಾನಗಳನ್ನಾದರೂ ಉಳಸಿಕೊಳ್ಳುವ ಪ್ರಯತ್ನ ಆಗಬೇಕು ಎಂಬುದು ಕಥೆಯ ತಿರುಳು ಎಂಬ ವಿವರ ನೀಡಿದರು ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು.

ರಾಘವ ಎಂಬ ಹೆಸರಿನ ಪಾತ್ರದಲ್ಲಿ ಮೈದಾನದ ಸಲುವಾಗಿ ಹೋರಾಟ ಮಾಡುವುದು ನಿಜ ಜೀವನದ ಪಾತ್ರದಂತೆಯೇ ಇದೆ ಎಂಬುದು ಮುಖ್ಯ ಪಾತ್ರದಲ್ಲಿ ನಟಿಸಿರುವ ರಾಜೀವ್ ಹನು ಮಾತು.

ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್, ಸಂಕಲಕಾರ ಪ್ರಮೋದ್ ತಲ್ವಾರ್, ಛಾಯಾಗ್ರಾಹಕ ಕಾರ್ತಿಕ್ ಎಸ್ ಹಾಗೂ ನಟಿಯರಾದ ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಹಾಡು ಬಿಡುಗಡೆ ಸಂದರ್ಭದಲ್ಲಿ ಹಾಜರಿದ್ದರು.

Social Share :

ಚಲನಚಿತ್ರ ಪ್ರಶಸ್ತಿ ಮುಂದುವರಿಕೆಗೆ ಸರ್ಕಾರದ ಅವಿರತ ಪ್ರಯತ್ನ..

Social Share :

* ಕೆ.ವಿ.ಪ್ರಭಾಕರ್ ಭರವಸೆ *

* ರಾಘವೇಂದ್ರ ಚಿತ್ರವಾಣಿ 24ನೇ ವರ್ಷದ ಪ್ರಶಸ್ತಿ ಪ್ರದಾನ *

ಕಳೆದ ನಾಲ್ಕೈದು ವರ್ಷಗಳಿಂದ ನಿಂತು ಹೋಗಿದ್ದ ಕನ್ನಡ ಚಲನ ಚಿತ್ರ ಪ್ರಶಸ್ತಿ ಹಾಗೂ ಗುಣಾತ್ಮಕ ಚಿತ್ರಗಳಿಗೆ ನೀಡುವ ಸಬ್ಸಿಡಿ ನೀಡಿಕೆ ಪರಂಪರೆ ಮುಂದುವರೆಸಿರುವುದು ಸಿದ್ದರಾಮಯ್ಯ ಸರ್ಕಾರದ ಹೆಮ್ಮೆಯ ವಿಷಯವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಕನ್ನಡ ಚಿತ್ರಗಳಿಗೆ ಪ್ರಶಸ್ತಿ ಹಾಗೂ ಸಬ್ಸಿಡಿ ನೀಡಿಕೆ ಸಂಬಂಧ ಈಗಾಗಲೇ ಸಮಿತಿಗಳನ್ನು ರಚಿಸಿ ಚಿತ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಎರಡು ವರ್ಷದ (2019 ಹಾಗೂ 2020) ಕೆಲಸಗಳು ಮುಗಿದಿದ್ದು, ಮತ್ತೆರಡು ವರ್ಷಗಳ ಪ್ರಕ್ರಿಯೆ ಸದ್ಯವೇ ಆರಂಭವಾಗಲಿದೆ ಎಂದು ಹೇಳಿದರು.

ಕನ್ನಡದ ಮುಂಚೂಣಿಯ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ‘ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

ಚಿತ್ರರಂಗದ ಅನೇಕ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಈಗಾಗಲೇ ಪರಿಶೀಲಿಸಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಚಿತ್ರರಂಗಕ್ಕೆ ಸರ್ಕಾರದ ಸಕಾರಾತ್ಮಕ ಸ್ಪಂದನೆ ನಿರಂತರವಾಗಿರುವುದು ಮುಖ್ಯಮಂತ್ರಿಗಳ ಆಸಕ್ತಿಯ ಫಲವಾಗಿದೆ ಎಂದರು.

ಸಿನಿಮಾ ಪ್ರಚಾರಕರ್ತರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿಯೂ ಭರವಸೆ ನೀಡಿದರು.

ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ
ಈಗ ನಡೆಯುತ್ತಿದ್ದು, ಮುಂದಿನ ವರ್ಷ 50 ವರ್ಷದ ಕಾರ್ಯಕ್ರಮಕ್ಕೆ ಸರ್ಕಾರ ಸ್ಪಂದಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಪತ್ರಕರ್ತೆ ವಿಜಯಮ್ಮ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸದಾಶಿವಶೆಣೈ, ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜಯ್ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.

ಹಿರಿಯ ಚಲನಚಿತ್ರ ನಿರ್ಮಾಪಕಿ ಮೀನಾಕ್ಷಿ ಕೆ.ವಿ. ಜಯರಾಂ ಹಾಗೂ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅನುರಾಧಾ ಭಟ್‍(ಗಾಯಕಿ) ಅತ್ತ್ಯುತ್ತಮ ಹಿನ್ನೆಲೆ ಗಾಯಕಿ ಡಾ.ರಾಜ್ ಕುಮಾರ್ ಪ್ರಶಸ್ತಿ, ಹಿರಿಯ ನಿರ್ದೇಶಕ ಓಂಪ್ರಕಾಶ್‍ ರಾವ್‍ ಅವರಿಗೆ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಹಿರಿಯ ನಟಿ ರೇಖಾರಾವ್ ಅವರಿಗೆ ನಟಿ ಡಾ.ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ, ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಅವರಿಗೆ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ.

ಶಿವಮ್ಮ ಚಿತ್ರದ ಉತ್ತಮ ಕಥಾಲೇಖನಕ್ಕಾಗಿ ಜೈಶಂಕರ್ ಆರ್ಯರ್ ಅವರಿಗೆ ಕೆ.ವಿ. ಜಯರಾಂ ಪ್ರಶಸ್ತಿ, ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ಚೊಚ್ಚಲ ನಿರ್ದೇಶನಕ್ಕಾಗಿ ಉತ್ಸವ್‍ ಗೋನ್ವಾರ್ ಅವರಿಗೆ ಬಿ. ಸುರೇಶ ಅವರು ನೀಡುವ ಪ್ರಶಸ್ತಿ, ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ.

ಅಲ್ಲದೆ ಗೌರಿ ಚಿತ್ರದಲ್ಲಿನ ಅಭಿನಯಕ್ಕಾಗಿ ಸಮರ್ಜಿತ್ ಲಂಕೇಶ್ ಅವರು ಶ್ರೀರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದರು.

ರಾಘವೇಂದ್ರ ಚಿತ್ರವಾಣಿಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್, ಸುನೀಲ್ ಸುಧೀಂದ್ರ, ವಾಸುದೇವ್, ಪವನ್ ಹಾಗೂ ಕುಟುಂಬ ವರ್ಗ ಸಮಾರಂಭದಲ್ಲಿ ಪಾಲ್ಗೊಂಡಿತ್ತು.

Social Share :

ನಟ ಶಿವರಾಜ್ ಕುಮಾರ್ ಮನೆಗೆ ಮುಖ್ಯಮಂತ್ರಿ ಹಾಗೂ ಗಣ್ಯರ ಭೇಟಿ

Social Share :


* ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ *

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ನಟ ಡಾ.ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ನಿವಾಸಕ್ಕೆ ಬೆಳಿಗ್ಗೆ 12 ಗಂಟೆ ಸುಮಾರಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಶಿವರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಂಡರು.

ಜೊತೆಗೆ ಮನೆಯ ಸದಸ್ಯರೊಂದಿಗೂ ಮಾತನಾಡಿದ ಅವರು, ಶಿವರಾಜ್ ಕುಮಾರ್ ಎಂದಿನ ಆರೋಗ್ಯ ಪಡೆಯಲಿ ಎಂದು ಹಾರೈಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಮುಗಿಸಿ ಅಮೆರಿಕದಿಂದ ಹಿಂತಿರುಗಿ ಬಂದಿದ್ದಾರೆ. ಹಾಗಾಗಿ ಅವರ ಆರೋಗ್ಯ ವಿಚಾರಿಸಲು ಭೇಟಿ ಮಾಡಲಾಯಿತು ಎಂದರು.

ಶಿವರಾಜ್ ಕುಮಾರ್ ಅವರ ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದಾಗ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂಬ ಮಾಹಿತಿಗಳನ್ನು ಪಡೆದುಕೊಂಡಿದ್ದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಶಿವರಾಜ್ ಕುಮಾರ್ ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ತಿಳಿಸಿದ್ದಾರೆ ಎಂದೂ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

ಸೋಮವಾರ ಡಾಲಿ ಧನಂಜಯ ಹಾಗೂ ಇತರ ಗಣ್ಯರು ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಮಂಗಳವಾರ ನಟಿ ಜಯಮಾಲ ಸೇರಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಪದಾಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ವಾಣಿಜ್ಯ ಮಂಡಳಿ ಹೊರತಂದಿರುವ 2025 ರ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

Social Share :

ರುದ್ರ ಗರುಡ ಪುರಾಣ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಅಶ್ವಿನಿ ವಿಜಯ್ ಲೋಹಿತ್

ನಿರ್ದೇಶನ : ನಂದೀಶ್

ಹಳೆ ತನಿಖೆ ಜಾಡು ಕಾಡುವ ಸೇಡು..

17ಎ ಕಾವೇರಿ ಎಕ್ಸ್‌ಪ್ರೆಸ್‌ ಎಂಬ ಬಸ್ ಅಪಘಾತಕ್ಕೀಡಾಗಿ ಎಳೆಯ ಕಂದಮ್ಮಗಳು ಸಾವಿಗೀಡಾದ ಮತ್ತು‌ ಅಮಾಯಕ ಡ್ರೈವರ್ ಕುತಂತ್ರಕ್ಕೆ ಬಲಿಯಾದ 20 ವರ್ಷಗಳ ಹಿಂದಿನ ಘಟನೆಯೇ ಸ್ಫೂರ್ತಿಯಾಗಿರುವ ಚಿತ್ರದಲ್ಲಿ ಕಾಣುವುದು ಚುರುಕಿನ ತನಿಖೆಯ ಜಾಡು..

ರುದ್ರ ಎಂಬ ಖಡಕ್ ಪೊಲೀಸ್ ಅಧಿಕಾರಿಯ ನಿಷ್ಠೆಯ ನಿಲುವು ಹಿರಿಯ ಅಧಿಕಾರಿಗಳಿಗೆ ಇರುಸು ಮುರುಸು. ಸರಿ; ರುದ್ರ ಕೆಲಸವಿಲ್ಲದ ಕುದುರೆ ಲಾಯಕ್ಕೆ ಎತಂಗಡಿ.

ಅಲ್ಲಿಯೂ ನಿಷ್ಠೆ ಮೆರೆಯುವವನ ಹೆಗಲಿಗೆ ಅಪಹರಣ ಪ್ರಕರಣವನ್ನು ಅನಧಿಕೃತ ಧಾಟಿಯಲ್ಲಿ ಭೇದಿಸುವ ಸವಾಲು. ಅಲ್ಲಿ ಆರಂಭವಾಗುತ್ತದೆ ನಿಜವಾದ ಆಟ.

ಅಪಹರಣದ ಬೆನ್ನು ಬಿದ್ದ ಪೊಲೀಸ್ ಅಧಿಕಾರಿ ರುದ್ರನಿಗೆ ಎದುರಾಗುವುದು ಬರೀ ಸವಾಲುಗಳೇ. ತನಿಖೆಯ ಹಾದಿಯಲ್ಲಿ ಒಂದು ಕಠಿಣ ಗಂಟು ಬಿಡಿಸುವಷ್ಟರಲ್ಲಿ ಮತ್ತೊಂದು ಕಗ್ಗಂಟು ಎದುರಾಗಿ ಪ್ರೇಕ್ಷಕ ಕುತೂಹಲಿ..

ಅಪಹರಣವಾಗಿರುವುದು ದೇವಿಶೆಟ್ಟಿ ಎಂಬ ಪ್ರಭಾವೀ ಶಾಸಕನ ಪುತ್ರ. ಆ ಅಪಹರಣ ಶೋಧಿಸಲು ಹೊರಟ ಅಧಿಕಾರಿ ಹಿಡಿಯುವ ಜಾಡು 20 ವರ್ಷಗಳ ಹಿಂದಿನ ಅಪಘಾತ ಪ್ರಕರಣ.

ಸರ್ಕಾರಿ ವ್ಯವಸ್ಥೆಯಲ್ಲಿ ದುಷ್ಟರು ಬೇರೆಯವರ ಜೀವಗಳನ್ನು ಲೆಕ್ಕಿಸದೇ ಹುನ್ನಾರಗಳನ್ನು ಮಾಡಿತ್ತಾರೆ. ಬಸ್ ಡಿಪೋನಲ್ಲಿ ನಡೆಯುವ ಹಣ ಹೊಡೆಯುವ ದಂಧೆಯಲ್ಲಿ ಮುಗ್ಧ ಮತ್ತು ಅಮಾಯಕ ಜೀವಗಳಿಗೆ ಬೆಲೆಯೇ ಇಲ್ಲ..

ಅಲ್ಲಿ ಮೈದಳೆದ ಕ್ರೂರ ವ್ಯಕ್ತಿ ಈಗ ಹೆಸರು ವೇಷ ಮರೆಸಿಕೊಂಡ ಪ್ರಭಾವಿ. ಆತನನ್ನು ನೇರವಾಗಿ ಎದುರಿಸದೇ ಕ್ಷಣ ಕ್ಷಣ ವಿಚಲಿತಗೊಳಿಸುವ ಆಟದ ಹೆಸರೇ ಗರುಡ ಪುರಾಣ.

ರಿಷಿ ಪಾತ್ರದಲ್ಲಿ ಜೀವಿಸಿದ್ದಾರೆ. ಎತ್ತರದ ಅವರ ನಿಲುವು ತನಿಖಾಕಾಧಿಕಾರಿಗೆ ಫಿಟ್ ಅಂಡ್ ಫೈನ್. ತನಿಖೆಯ ಹಾದಿ ಕುತೂಹಲ ಮತ್ತು ವೇಗದಿಂದ ಕೂಡಿರುವಂತೆ ಕಥೆಯ ನೇಯ್ಗೆ ಸೊಗಸು.

ಪ್ರಿಯಾಂಕ ಕುಮಾರ್ ಆಗಾಗ ಬಂದು ಹೋಗುವುದಷ್ಟೇ. ಗಿರೀಶ್ ಶಿವಣ್ಣ ಕಾಮಿಡಿ, ಶಿವರಾಜ್ ಕೆ.ಆರ್ ಪೇಟೆ ನಿಗೂಢತೆ ವಿನೋದ್ ಆಳ್ವ ಪ್ರಭಾವೀ ನಿಲುವು ಗಮನಾರ್ಹ.

ಪೊಲೀಸ್ ಅಧಿಕಾರಿಗಳಾಗಿ ಅವಿನಾಶ್ ಹಾಗೂ ಸಿದ್ಲಿಂಗು ಶ್ರೀಧರ್ ಗಮನ ಸೆಳೆಯುತ್ತಾರೆ. ಆದರೆ ಇಡೀ ಚಿತ್ರ ನೋಡಿದಾಗ ಪೊಲೀಸ್ ವ್ಯವಸ್ಥೆಯ ಶಿಷ್ಟಾಚಾರದ ವಿಷಯಗಳನ್ನು ಕಡೆಗಣಿಸಿರುವುದು ಎದ್ದು ಕಾಣುತ್ತದೆ. ಪೊಲೀಸ್ ವ್ಯವಸ್ಥೆಯ ಆಳ ಅರಿವು ಕೊರತೆಯೇ..

ರಘು ನಿಡವಳ್ಳಿ ಸಂಭಾಷಣೆ ಗಮನಾರ್ಹ. ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಕೆ.ಪಿ ಸಂಗೀತ ಚಿತ್ರಕ್ಕೆ ಪೂರಕ.

Social Share :

ಫಾರೆಸ್ಟ್ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ : ಎನ್.ಎಂ.ಕಾಂತರಾಜ್

ನಿರ್ದೇಶನ : ಚಂದ್ರಮೋಹನ್

ಕಾಡು ಹಾದಿಯ ತುಂಬೆಲ್ಲಾ
ನಗುವಿನ ಬುಗ್ಗೆ..

ನಾಲ್ವರು ಗಂಡಸರು ಒಬ್ಬಳೇ ಮಹಿಳೆ ಇರುವ ಗುಂಪು ಒಂದು ನಿಗೂಢ ಶೋಧಿಸುವ ಕಾರ್ಯಕ್ಕೆ ಮುಂದಾದಾಗ ನಡೆಯುವ ಘಟನಾವಳಿಗಳು ಚಿತ್ರವಾಗಿದೆ.

ಗೋಪಾಲಸ್ವಾಮಿ (ರಂಗಾಯಣ ರಘು), ಕುಮಾರ (ಚಿಕ್ಕಣ್ಣ), ಸುನೀಲ (ಅನೀಶ್ ತೇಜೇಶ್ವರ್), ಸತೀಶ (ಗುರುನಂದನ್) ಹಾಗೂ ಮೀನಾಕ್ಷಿ (ಅರ್ಚನಾ ಕೊಟ್ಟಿಗೆ) ನಿಧಿಯ ಶೋಧನೆಗಾಗಿ ಕಾಡಿನ ಜಾಡು ಹುಡುಕುತ್ತಾ ಹೊರಡುವರು.

ಅಲ್ಲಿ ಒಂದು ಕಿವಿ ಕೇಳದ ಕುಮಾರನಿಗೆ ಯಾವ ಕೆಲಸಕ್ಕೆ ಹೋಗುತ್ತಿದ್ದೇವೆ ಎಂಬುದರ ಪರಿಚಯವಿಲ್ಲ. ಹಾಗಾಗಿ ಆತನ ಮಿಸ್ ಅಂಡರ್ ಸ್ಟಾಂಡಿಂಗ್ ಮತ್ತು ಮಿಸ್ಸಾಗಿ ಬರುವ ಮಾತುಗಳು ನಗೆಯ ಬುಗ್ಗೆಯನ್ನೇ ಹರಿಸುತ್ತವೆ.

ಅಗಾಧ ಕಾಡಿನ ನಡುವೆ ಯಾವುದೇ ಅಪಾಯಕಾರಿ ಪ್ರಾಣಿಗಳು, ಪಕ್ಷಿ ಅಥವಾ ಜಲಚರ ಯಾವುದೂ ಈ ಐವರನ್ನು ವಿಚಲಿತಗೊಳಿಸುವುದಿಲ್ಲ. ಆದರೆ ಅವರ ಚೇಷ್ಟೇಗಳೇ ಹೇಗೆ ಗೊಂದಲಕ್ಕೆ ಸಿಕ್ಕಿಸುತ್ತವೆ ಎಂಬುದು ಪ್ರೇಕ್ಷಕನಲ್ಲಿ ಉಕ್ಕುವ ನಗೆಯ ಕಾರಣ.

ಹೀಗೆ ಮೊದಲರ್ಧ ಮುಗಿಯುವ ಹೊತ್ತಿಗೆ ಇವರ ಗುರಿ ಮುಟ್ಟುವಿಕೆ ಸಾಧ್ಯವಾಗುತ್ತದೆ. ಜೊತೆಗೆ ಒಂದಷ್ಟು ಕಾಲ ಕರ್ನಾಟಕವನ್ನು ಕಾಡಿದ ನರಹಂತಕನ ಭೂತ ಎದುರಾಗುತ್ತದೆ.

ಮುಂದೆ ಆ ಭೂತ ಚೇಷ್ಟೇಯದೇ ಮಾತು. ನಿಜ ಜೀವನದಲ್ಲಿ ಅತ್ಯಂತ ಕ್ರೌರ್ಯ ಮೆರೆದಿದ್ದ ಆ ಭೂತ ಅತಿಮಾನುಷ ಶಕ್ತಿಯನ್ನು ಹೊಂದಿದ್ದರೂ ಮೃದು ಧೋರಣೆ ತಳೆದಿರುತ್ತದೆ ಏಕೆ..

ಅಥವಾ ಭೂತದ ಭಯಾನಕತೆಯನ್ನು ನಿರ್ದೇಶಕರು ಅರಗಿಸಿಕೊಂಡಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ (ಕಥೆ ಸತ್ಯ ಶೌರ್ಯ ಸಾಗರ್). ಆದರೆ ಕಾಡುಗಳ್ಳನ ಆ ಭೂತದ ಕಾರಣ ನಡೆಯುವ ಘಟನಾವಳಿಗಳು ಥ್ರಿಲ್ ನ ಜೊತೆಗೆ ನಗೆಯನ್ನು ಮೊಗೆದು ಕೊಡುತ್ತವೆ.

ಅಮಾಯಕತ್ವ ತುಂಬಿಕೊಂಡ ಐವರಿಗೆ ಅಗಾಧ ಸಂಪತ್ತು ವಶವಾಗುವುದಿಲ್ಲ. ಬದಲಿಗೆ ಅವರು ಎಂತಹ ವಿಪತ್ತು ಎದುರು ಹಾಕಿಕೊಳ್ಳುತ್ತಾರೆ ಎಂಬುದೇ ಕ್ಲೈಮ್ಯಾಕ್ಸ್. ಜೊತೆಗೆ ಚಿತ್ರದ ಭಾಗ ಎರಡಕ್ಕೆ ಮುನ್ನುಡಿ.

ರಂಗಾಯಣ ರಘು ಹಾಗೂ ಚಿಕ್ಕಣ್ಣ ಎಂದಿನ ಕಾಮಿಡಿ ವರಸೆಯಲ್ಲಿ ಮಿಂದೇಳುವ ಸನ್ನಿವೇಶಗಳಲ್ಲಿ ಉಳಿದವರು ಕಣ್ಣುಗಳಲ್ಲೇ ನಟಿಸಿರುವುದು ವಿಶೇಷ. ಶರಣ್ಯ ಶೆಟ್ಟಿ ಕಾಣಿಸಿಕೊಂಡರೂ ಕಾಡಿನಲ್ಲಿ ಅವರ ಪಾತ್ರವಿಲ್ಲ. ಕಾಡಿನ ದೃಶ್ಯಗಳಿಗಿಂತ ಧರ್ಮವಿಶ್ ಅವರ ಹಿನ್ನೆಲೆ ಸಂಗೀತದ ಝಲಕ್ ಪ್ರೇಕ್ಷಕನನ್ನು ಹೆಚ್ಚಿನ ಥ್ರಿಲ್ ಗೆ ಒಳಪಡಿಸುತ್ತದೆ.

ಲಾಜಿಕ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ನೋಡಿ ನಕ್ಕು ಮೈ ಮನ ಹಗುರಾಗಿ ಬರಲು ‘ಫಾರೆಸ್ಟ್’ ನ ದಾರಿ ಹಿಡಿಯ ಬಹುದು. ಜೊತೆಗೆ ಹಳೆಯ ನೆನಪುಗಳನ್ನು ಎಳೆದುಕೊಳ್ಳಲು ಸಹಕಾರಿ.

Social Share :

ತಾಯವ್ವ ಜಾನಪದ ಹಾಡುಗಳು ಮತ್ತು ಭಾ.ಮ.ಹರೀಶ್ ಆಡಿಯೋ

Social Share :

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಆಡಿಯೋ ಕಂಪನಿ ಆರಂಭಿಸಿದ್ದು, ಕಿಚ್ಚ ಸುದೀಪ್ ಅದನ್ನು ಅನಾವರಣ ಗೊಳಿಸಿದ್ದಾರೆ.

ಈಚೆಗೆ ಜಿ.ಟಿ.ಮಾಲ್ ನ ಎಂ.ಎಂ.ಬಿ ಲೆಗಾಸಿಯಲ್ಲಿ ‘ತಾಯವ್ವ’ ಚಿತ್ರದ ಹಾಡುಗಳ ಬಿಡುಗಡೆ ವೇಳೆ ಆಡಿಯೋ ಕಂಪನಿ ಅಸ್ವಿತ್ವ ತಳೆದಿದ್ದು, ಅದೇ ಚಿತ್ರದ ಹಾಡುಗಳನ್ನು ಮೊದಲು ಹೊರ ತರಲಾಗಿದೆ.

ಹಿಂದೆ ತಾಯವ್ವ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್, ಈಗ ಅದೇ ಹೆಸರಿನ ಚಿತ್ರದ ಹಾಡುಗಳ ಬಿಡುಗಡೆ ಹಾಗೂ ಆಡಿಯೋ ಕಂಪನಿ ಬಿಡುಗಡೆಯಲ್ಲಿ ಭಾಗವಹಿಸಿದ್ದರು.

‘ಕೆಲವು ಸ್ನೇಹಗಳನ್ನು ದೂರವಿಟ್ಟಿದ್ದರೆ ಚೆನ್ನಾಗಿತ್ತು’ ಎಂದು ಭಾ.ಮ.ಹರೀಶ್ ಕಾಲೆಳೆಯುವಂತೆ ಸುದೀಪ್ ಮಾತನಾಡಿದ್ದರೂ ಅವರ ಈಚಿನ ಕೆಲವು ಸ್ನೇಹಗಳಿಗೆ ಹೇಳಿದ ವಿದಾಯದತಿತ್ತು ಆ ಭಾಷಣ.

ಆಡಿಯೋ ಯಾವ ರೀತಿ, ಎಲ್ಲಿಯೂ ಆಗದೆ ಉಳಿದಿದ್ದನ್ನು ನೀವು‌ಮಾಡುತ್ತೀರಾ ಎಂದು ಮತ್ತೆ ಮತ್ತೆ ಭಾ.ಮ.ಹರೀಶ್ ಕಾಳೆದರು ಸುದೀಪ್.

‘ತಾಯವ್ವ’ ಚಿತ್ರದಲ್ಲಿ ಅಭಿನಯಿಸಿರುವ ಗೀತಪ್ರಿಯ ಆ ಚಿತ್ರದ 11 ಕಿರು ಗೀತೆಗಳಿಗೂ ಧ್ವನಿಯಾಗಿರುವ ವಿಷಯಗಳನ್ನು ವಿವರಿಸಿದರು.

ಅನಂತ ಆರ್ಯನ್ ಸಂಗೀತದಲ್ಲಿ ಜಾನಪದದ ಹಿನ್ನೆಲೆಯ ಹಾಡುಗಳು ಗಮನ ಸೆಳೆದವು. ಮುಗ್ಧತೆ ಬೆರೆಸಿದ ಅದೇ ಹಳೆ ಶೈಲಿಯಿಂದ ಮನ ಗೆದ್ದವು.

ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಚಿತ್ರವನ್ನು ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

ಪದ್ಮಾವತಿ ಬಹಳ ವರ್ಷಗಳ ಗೆಳತಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರಮವಹಿಸಿ ಕಲಿತು ಹಾಡಿದ್ದೇನೆ ಎಂಬ ವಿವರಗಳನ್ನು ನೀಡಿದರು ಗೀತಪ್ರಿಯ.

Social Share :

ಅನ್ ಲಾಕ್ ರಾಘವ ಟ್ರೈಲರ್ ಮಿಲಿಂದ್-ರಚೆಲ್ ಹುಕ್ ಸ್ಟೆಪ್

Social Share :

* ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಂಸೆ *

ಮಿಲಿಂದ್ ಗೌತಮ್ ಹಾಗೂ ರಚೆಲ್ ಡೇವಿಡ್ ಅಭಿನಯದ ‘ಅನ್ ಲಾಕ್ ರಾಘವ’ ಚಿತ್ರದ ಟೀಸರ್ ನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿದರು.

ಇದೇ ವೇಳೆ ‘ರಾಘವ ರಾಘವ..’ ಎಂಬ ಹಾಡನ್ನು ಬಿಡುಗಡೆಗೊಳಿಸಿ ಆ ಹಾಡಿನಲ್ಲಿ ಬರುವ ಸಂಗೀತಕ್ಕೆ ಮಿಲಿಂದ್ ಹಾಗೂ ರಚೆಲ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಈಗಾಗಲೇ ಟೀಸರ್ ಹಾಗೂ
ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ‘ಅನ್ ಲಾಕ್ ರಾಘವ’ ಚಿತ್ರ ಬಿಡುಗಡೆಗೆ ಸನಿಹವಾಗಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಟ್ರೈಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್,‌ ವಾಣಿಜ್ಯ ಮಂಡಳಿ ಪದಾಧಿಕಾರಿ ಕುಶಾಲ್, ಭಾ.ಮ.ಗಿರೀಶ್, ನಟ ಪ್ರಥಮ್, ಜಿಮ್ ರವಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿತ್ರದ ಶೀರ್ಷಿಕೆಯನ್ನು ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಬಿಡುಗಡೆ ಮಾಡಿದ್ದರು. ಈಗ ಚಿತ್ರದ ಟ್ರೇಲರ್ ಅವರಿಂದಲೇ ಬಿಡುಗಡೆಯಾಗಿದ್ದು ಖುಷಿಯಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿತು.

ಕಥೆ, ಚಿತ್ರಕಥೆಯನ್ನು ‘ರಾಮ ರಾಮ ರೆ’ ಖ್ಯಾತಿಯ ಸತ್ಯಪ್ರಕಾಶ್ ಬರೆದಿದ್ದು, ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಚಿತ್ರ ಫೆಬ್ರವರಿ 7 ರಂದು ತೆರೆಗೆ ಬರಲಿದೆ ಎಂಬ ವಿವರ ನೀಡಿದ್ದು, ನಿರ್ದೇಶಕ ದೀಪಕ್ ಮಧುವನಹಳ್ಳಿ.

ಸಾಧುಕೋಕಿಲ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾಡಿರುವ ಪಾತ್ರ ಈವರೆಗೂ ಯಾವ ಚಿತ್ರದಲ್ಲೂ ಮಾಡಿಲ್ಲ ಎಂದವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಿಲಿಂದ್ ಗೌತಮ್.

ಈಚೆಗೆ ಚಿತ್ರವನ್ನು ನೋಡಿದಾಗ ಎಲ್ಲಾ ಕಷ್ಟಗಳು ಮರೆತು ಹೋದವು. ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂಬ ವಿವರ ನೀಡಿದರು ನಿರ್ಮಾಪಕರಾದ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್. ಗೀತರಚನೆಕಾರ ಹೃದಯಶಿವ ಹಾಡುಗಳ ಬಗ್ಗೆ ಮಾತನಾಡಿದರು.

Social Share :

2019ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಮೋಹನ ದಾಸ ಅತ್ಯುತ್ತಮ ಚಿತ್ರ..

Social Share :


* ಸುದೀಪ್‍-ಅನುಪಮಾ ಅತ್ಯುತ್ತಮ ನಟ-ನಟಿ *

2019ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಪಿ. ಶೇಷಾದ್ರಿ ನಿರ್ದೇಶನದ ‘ಮೋಹನ ದಾಸ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಪೈಲ್ವಾನ್‍’ ಚಿತ್ರದ ಅಭಿನಯಕ್ಕಾಗಿ ಸುದೀಪ್‍ ಅತ್ಯುತ್ತಮ ನಟ ಮತ್ತು ‘ತ್ರಯಂಬಕಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪಟ್ಟಿ ಈ ಕೆಳಕಂಡಂತೆ ಇದೆ:

ಅತ್ಯುತ್ತಮ ಚಿತ್ರ: ಮೋಹನ ದಾಸ

ದ್ವಿತೀಯ ಅತ್ಯುತ್ತಮ ಚಿತ್ರ: ಲವ್‍ ಮಾಕ್ಟೈಲ್‍

ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ ವರ್ಸಸ್‍ ಇಂಗ್ಲೆಂಡ್‍

ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲ ಗಾಂಧಿ (ನಾಗೇಶ್‍ ಎನ್‍)

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ತಲಾಕ್‍ ತಲಾಕ್‍ ತಲಾಕ್‍ (ಬ್ಯಾರಿ ಭಾಷೆ)

ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್‍ ಕಾರ್ಯಪ್ಪ)

ಅತ್ಯುತ್ತಮ ಪೋಷಕ ನಟಿ: ಕುಮಾರಿ ಅನೂಷಾ ಕೃಷ್ಣ (ಬ್ರಾಹ್ಮಿ)

ಅತ್ಯುತ್ತಮ ಕಥೆ: ಜಯಂತ್ ಕಾಯ್ಕಿಣಿ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)

ಅತ್ಯುತ್ತಮ ಚಿತ್ರಕಥೆ: ಡಾರ್ಲಿಂಗ್‍ ಕೃಷ್ಣ (ಲವ್‍ ಮಾಕ್ಟೇಲ್‍)

ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ)

ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್‍. ಭಾಸ್ಕರ್ (ಮೋಹನದಾಸ)

ಅತ್ಯುತ್ತಮ ಸಂಗೀತ ನಿರ್ದೇಶನ: ವಿ ಹರಿಕೃಷ್ಣ (ಯಜಮಾನ)

ಅತ್ಯುತ್ತಮ ಸಂಕಲನ: ಜಿ. ಬಸವರಾಜ್‍ ಅರಸ್‍ (ಝಾನ್ಸಿ IPS)

ಅತ್ಯುತ್ತಮ ಬಾಲನಟ: ಮಾಸ್ಟರ್ ಪ್ರೀತಂ (ಮಿಂಚುಹುಳು)

ಅತ್ಯುತ್ತಮ ಬಾಲನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)

ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನ ದಾಸ)

ಅತ್ಯುತ್ತಮ ಗೀತ ರಚನೆ: ರಝಾಕ್‍ ಪುತ್ತೂರು (ಪೆನ್ಸಿಲ್‍ ಬಾಕ್ಸ್)

ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್ (ಲವ್ ಮಾಕ್ಟೇಲ್)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಜಯದೇವಿ ಜಂಗಮ ಶೆಟ್ಟಿ (ರಾಗಭೈರವಿ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಅಮೃತಮತಿ ಮತ್ತು ತಮಟೆ ನಟಸಿಂಹಯ್ಯ..

ತೀರ್ಪುಗಾರರ ವಿಶೇಷ ಪ್ರಶಸ್ತಿ: ಉತ್ತಮ ನಿರ್ಮಾಣ ನಿರ್ವಹಣೆ ಮ್ಯಾನೇಜರ್ ಗೆ ಗಂಗಾಧರ್ ಆರ್ (ಮಕ್ಕಡ್ ಮನಸ್ ಕೊಡವ ಭಾಷೆ ಸಿನಿಮಾಗೆ)

ಕಳೆದ ವರ್ಷ 2019ನೇ ಸಾಲಿನ ರಾಜ್ಯ ಪ್ರಶಸ್ತಿ ಆಯ್ಕೆಗೆ ಸಮಿತಿಯನ್ನು ಸರ್ಕಾರ ರಚಿಸಿತ್ತು. ನಂಜುಂಡೇಗೌಡ ನೇತೃತ್ವದ ಈ ಸಮಿತಿಯಲ್ಲಿ ಮಳವಳ್ಳಿ ಸಾಯಿಕೃಷ್ಣ, ಹಾಗೂ ಇತರರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

Social Share :