Snehapriya.com

June 7, 2025

admin

ಬೆನಕ ಗೋಲ್ಡ್‌ ಗೆ ರೀಷ್ಮಾ ಬ್ರಾಂಡ್ ಅಂಬಾಸಿಡರ್..

Social Share :

ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ‘ಬೆನಕ ಗೋಲ್ಡ್ ಪ್ರೈ.ಲಿ.’ ಕಂಪನಿಗೆ ಚಂದನವನದ ಚೆಂದದ ನಟಿ ರೀಷ್ಮಾ ನಾಣಯ್ಯ ಈಗ ನೂತನ ಬ್ರಾಂಡ್ ಅಂಬಾಸಿಡರ್..

ಬೆನಕ ಗೋಲ್ಡ್ ನ ಸಿಇಓ  ನಾಗರಾಜನ್.ಎಂ.ಕೆ ಈ ವಿಷಯ ಪ್ರಕಟಿಸಿದ್ದಾರೆ.

ಬೆನಕ ಗೋಲ್ಡ್ ಕಂಪನಿಯು ಈಗಾಗಲೇ ನಾಲ್ಕು ಯೋಜನೆಗಳನ್ನು ಪರಿಚಯಿಸಿದ್ದು, ಸ್ಟೋನ್ ವ್ಯಾಲ್ಯೂ ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡುವುದು ಸೇರಿದಂತೆ ರೆಂಟ್ ಫಾರ್ ಗೋಲ್ಡ್ ಯೋಜನೆ ಮೂಲಕ ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಬದಲಿಗೆ ಅದನ್ನು ಬೆನಕ ಗೋಲ್ಡ್‌ಗೆ ನೀಡಿದರೆ ಮಾಸಿಕ ಲಾಭಾಂಶವನ್ನು ಗಳಿಸಬಹುದು ಎಂಬುದು ಗ್ರಾಹಕರಿಗೆ ಲಾಭದಾಯಕ ವಿಷಯವಾಗಿದೆ.

ಮೂರನೇ ಯೋಜನೆ ರೆಫರ್ ಅಂಡ್ ಅರ್ನ್ ಮೂಲಕ ಚಿನ್ನ ಬಿಡುಗಡೆ ಮಾಡಲು ಹುಡುಕುತ್ತಿರುವವರು ಪರಿಚಯ ವ್ಯಕ್ತಿಗಳನ್ನು ರೆಫರ್ ಮಾಡುವ ಮೂಲಕ ಆಕರ್ಷಕ  ಬಹುಮಾನ ಪಡೆಯಬಹುದು.

ನಾಲ್ಕನೇ ಯೋಜನೆಯಾದ ಡೋರ್ ಸ್ಟೆಪ್ ಸರ್ವಿಸ್ ಮೂಲಕ ಗ್ರಾಹಕರ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಅವರ ಮನೆಯ ಬಾಗಿಲಿಗೆ ಹೋಗಿ ಸೇವೆ ನೀಡುವುದು ಕಂಪನಿಯ ಪ್ರಮುಖ ಆದ್ಯತೆಯಾಗಿದೆ.

ಇದರ ಜತೆಗೆ ಹೊಸದಾಗಿ ರೂಪಿಸಕಾಗಿರುವ ಸೆಲ್ ಅಂಡ್ ಸೇವ್ ಮೂಲಕ ಚಿನ್ನ ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ಯೋಜನೆಯಾಗಿದೆ ಎಂಬುದು ಕಂಪನಿ ನೀಡಿರುವ ವಿವರವಾಗಿದೆ.

ಈ ಸಂಬಂಧ ಹೆಚ್ಚಿನ ವಿವರಗಳಿಗಾಗಿ www.benakagoldcompany.com  ಅಥವಾ ಮೊ. 63 66 111 999 ಗೆ ಸಂಪರ್ಕಿಸಲು ಕೋರಲಾಗಿದೆ.

Social Share :

ವೀರ ಚಂದ್ರಹಾಸ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ : ಎನ್.ಎಸ್.ರಾಜ್ ಕುಮಾರ್

ನಿರ್ದೇಶನ : ರವಿ ಬಸ್ರೂರ್

ಕಣ್ತುಂಬ ಯಕ್ಷಗಾನ ವೈಭವ

ಮನಸ್ಸಿಗೆ ಅದ್ದೂರಿ ಅನುಭವ

ಅದೊಂದು ಕನಸಿನ ಲೋಕ..!
ಆ ಲೋಕದಲ್ಲಿ ಹಲವು ರಾಜ ಮನೆತನದ ಸಾಮ್ರಾಜ್ಯಗಳು ಸೃಷ್ಟಿಯಾಗಿದ್ದರೂ ಕನ್ನಡದ ಮಟ್ಟಿಗೆ ರೋಮಾಂಚನ ಹುಟ್ಟಿಸುವುದು ಸಿಂಗನಲ್ಲೂರು ಮಹಾ ಸಂಸ್ಥಾನ ಮತ್ತು ಅಲ್ಲಿ ಕಾಣುವ ರಾಜ ಶಿವ ಪುಟ್ಟಸ್ವಾಮಿ.

ಹೌದು ವರನಟ ಡಾ.ರಾಜ್ ಕುಮಾರ್ ಅವರ ತಂದೆ ಸಿಂಗನಲ್ಲೂರು ಪುಟ್ಟ ಸ್ವಾಮಯ್ಯ ಅವರ ಸ್ಮರಣೆ ಜೊತೆಗೆ ಶಿವರಾಜ್ ಕುಮಾರ್ ಅವರ ಮೂಲ ಹೆಸರು ನಾಗರಾಜ್ ಶಿವ ಪುಟ್ಟಸ್ವಾಮಿ ಎಂಬುದರಿಂದ ಶಿವ ಪುಟ್ಟಸ್ವಾಮಿ ಹೆಸರು ರಾರಾಜಿಸುತ್ತದೆ. ಜೊತೆಗೆ ಯಕ್ಷಗಾನಕ್ಕೂ ಸೈ ಎಂಬುದನ್ನು ಶಿವಣ್ಣ ಸಾಬೀತುಪಡಿಸಿದ್ದಾರೆ.

ಇದು ಪೌರಾಣಿಕ ಕಥೆಯೇ. ಆದರೆ ನಿರೂಪಣೆ ಹೊಸದು; ಅದ್ದೂರಿತನವೇ ಮೇಳೈಸಿ ಎದ್ದು ಕಾಣುವ ದೃಶ್ಯ ವೈಭವಕ್ಕಿಂತ ಕಿವಿಗೆ ಗಡಿಚಿಕ್ಕುವ ಶಬ್ಧದ ಝೇಂಕಾರ ಅದ್ಭುತ ಮತ್ತು ರೋಮಾಂಚಕ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಸಂಪೂರ್ಣ ಮಲೆನಾಡು ಭಾಗಗಳಲ್ಲಿ ಈಗಲೂ ಪ್ರಚಲಿತವಿರುವ ಯಕ್ಷಗಾನ ಕಲೆ ತೆರೆಯಲ್ಲಿ ಅರಳಿರುವ ಪರಿಗೆ ಪ್ರೇಕ್ಷಕ ಆನಂದದಿಂದ ತೇಲಾಡಬಹುದು..

ಕುಂತಳ ಎಂಬ ಸಾಮ್ರಾಜ್ಯದಲ್ಲಿ ದುಷ್ಟಬುದ್ಧಿ ಎಂಬ ಹೆಸರಿಗೆ ತಕ್ಕ ಮಂತ್ರಿಯ ಆಟಾಟೋಪಗಳಿಗೆ ಲೆಕ್ಕವೇ ಇಲ್ಲದ ಸಂದರ್ಭದಲ್ಲಿ ಅನಾಥ ಹುಡುಗನೊಬ್ಬ ದೈವ ಬಲದಲ್ಲಿ ರೂಪುಗೊಳ್ಳುತ್ತಾನೆ.

ಆತನೇ ವೀರ ಚಂದ್ರಹಾಸ..!

ಧೈರ್ಯ ಸ್ಥೈರ್ಯದ ಜೊತೆಗೆ ಅಸಾಧಾರಣ ಸೌಂದರ್ಯವಂತನಾದ ವೀರ ಚಂದ್ರಹಾಸ ಸಾಮಂತ ರಾಜನಾಗಿ ರೂಪುಗೊಳ್ಳುವುದೇ ರೋಚಕ ಸಂದರ್ಭಗಳ ಮೂಲಕ.

ಕುಂತಳ ಸಾಮ್ರಾಜ್ಯದ ಮಂತ್ರಿ ದುಷ್ಟಬುದ್ಧಿ ಹೂಡುವ ಆಟ ಆತನಿಗೇ ಹೇಗೆ ತಿರುವಾಗಿ ಬುದ್ಧಿ ಕಲಿಸುತ್ತದೆ ಎಂಬುದು ಕೊನೆಯ ಹಂತ. ಮುಂದೆ ಎರಡನೇ ಭಾಗಕ್ಕೆ ಮುನ್ನುಡಿಯೂ ಸಿಗುತ್ತದೆ.

ಯಕ್ಷಗಾನ ಕಲೆಯ ವೈಭವಗಳನ್ನು ಅರಿತವರಿಗೆ ಇಲ್ಲಿ ಕಣ್ಣಿಗೆ ಹಬ್ಬ. ಏಕೆಂದರೆ ಚಕ್ರವರ್ತಿಯ ಸಾಮ್ರಾಜ್ಯ ಮತ್ತು ಸಾಮಂತ ರಾಜರ ಅದ್ದೂರಿ ವೈಭವಗಳನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಿರುವುದು.

ಮೊದಲೇ ವೇಷ ಭೂಷಣ ಚೆಂದವನ್ನು ಕಟ್ಟಿಕೊಡುವ ಯಕ್ಷಗಾನ ಕಲೆಯ ವೈಭವವನ್ನು ಗ್ರಾಫಿಕ್ಸ್ ಮೊದಲಾದ ತಂತ್ರಜ್ಞಾನದ ಮೂಲಕ ಅದ್ದೂರಿತನವನ್ನು ತುಂಬಿಕೊಟ್ಟಿರುವ ಚಿತ್ರವನ್ನು ನೋಡುವುದೇ ಆನಂದ.

ಅದರಲ್ಲಿಯೂ ರವಿ ಬಸ್ರೂರ್ ಅವರ ಸಂಗೀತದ ಅಬ್ಬರಕ್ಕೆ ಪ್ರೇಕ್ಷಕ ಕಾಲ್ಗೆಜ್ಜೆ ಕಟ್ಟದೇ ಸೀಟಿನ ಅಂಚಿನಲ್ಲಿ ಕುಣಿಯುವ ಕನಸು ಕಾಣಬಹುದು.. ಸಂಗೀತದ ವಿಶೇಷ ಅನುಭವಕ್ಕೆ ತೆರೆದುಕೊಂಡವರು ಸಿನಿಮಾವನ್ನು ಮತ್ತೆ ಮತ್ತೆ ನೋಡುವ ಆಶಯ ವ್ಯಕ್ತಪಡಿಸಬಹುದು.

ಇದೊಂದು ವಿಭಿನ್ನ ಪ್ರಯತ್ನ ಎಂಬುದಕ್ಕಿಂತಲೂ ಯಾವ ದೊಡ್ಡ ಸಿನಿಮಾಗಳಿಗೂ ಕಡಿಮೆ ಇಲ್ಲ. ಕನ್ನಡದ ಮಟ್ಟಿಗೆ ವಿಶೇಷ ಪ್ರಯತ್ನ.

ಯಕ್ಷಗಾನ ಕಲೆಯ ವೈಭವ ಅಲ್ಲದೆ ಯಕ್ಷ ಲೋಕವನ್ನೇ ಸೃಷ್ಟಿಸಿಕೊಟ್ಟಿದೆ ರವಿಬಸ್ರೂರ್ ಮತ್ತು ತಂಡ. ಇಂತಹ ಚಿತ್ರಗಳಿಗೆ ಹಣ ಹೂಡುವ ಎದೆಗಾರಿಕೆಯೂ ದೊಡ್ಡದು. ಈ ನಿಟ್ಟಿನಲ್ಲಿ ರಾಜ್ ಕುಮಾರ್ ಕನ್ನಡಕ್ಕೊಂದು ‘ಮಾಸ್ಟರ್ ಪೀಸ್’ ಚಿತ್ರವನ್ನು ನಿರ್ಮಿಸಿರುವುದು ಪ್ರಶಂಸೆಗೆ ಒಳಪಡುತ್ತದೆ.

ಮನೆ ಮಂದಿಯೆಲ್ಲಾ ಕುಳಿತು ಮನರಂಜನೆ ಮತ್ತು ಬೇರೆ ಲೋಕದ ಅನುಭವ ಪಡೆಯಲು ‘ವೀರ ಚಂದ್ರಹಾಸ’ ಖಂಡಿತಾ ನೆರವಾಗುತ್ತದೆ.

Social Share :

ಗಮನ ಸೆಳೆದ 45 ಟೀಸರ್ ಪ್ಯಾನ್ ಇಂಡಿಯಾ ಪ್ರಚಾರ

Social Share :

* ಮುಂಬೈ, ಚೆನ್ನೈ, ಹೈದ್ರಾಬಾದ್ ಹಾಗೂ ಕೊಚ್ಚಿಯಲ್ಲಿ ಪ್ರಚಾರ *

ಅದ್ದೂರಿ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣ ಹಾಗೂ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನಿರ್ದೇಶನದ ’45’ ಚಿತ್ರದ ಪ್ಯಾನ್ ಇಂಡಿಯಾ ಪ್ರಚಾರ ಆರಂಭವಾಗುತ್ತಿದೆ.

ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವು ಹಾಲಿವುಡ್ ಮಾದರಿಯ ಅದ್ದೂರಿ ಮೇಕಿಂಗ್ ಹೊಂದಿರುವುದು ವಿಶೇಷವಾಗಿದೆ.

ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್’ ಬ್ಯಾನರ್ ನಲ್ಲಿ ಅಪಾರ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ಚಿತ್ರ ’45’ ಆರಂಭದಿಂದಲೂ ಸಾಕಷ್ಟು ಗಮನ ಸೆಳೆದಿದೆ.

ಯುಗಾದಿ ಹಬ್ಬದಂದು ಈ ಚಿತ್ರದ ಟೀಸರ್ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಈ ಅದ್ಭುತ ಟೀಸರ್ ಗೆ ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾಷೆಗಳ ಕಲಾಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಟೀಸರ್ ನಲ್ಲೇ ಮೋಡಿ ಮಾಡಿರುವ ಈ ಚಿತ್ರ ಆಗಸ್ಟ್ 15 ರಂದು ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ. ಆದರೆ ಅದಕ್ಕೆ ಮುಂಚೆ ಚಿತ್ರತಂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುವ ಸಿದ್ಧತೆ ಮಾಡಿಕೊಂಡಿದೆ.

ಹಾಗಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪ ರಮೇಶ್ ರೆಡ್ಡಿ ಅವರು ಏಪ್ರಿಲ್ 15 ಹಾಗೂ 16 ಪಕ್ಕದ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಮಾಧ್ಯಮ ಗೋಷ್ಠಿಗಳನ್ನು ನಡೆಸುವ ಮೂಲಕ ಎಲ್ಲಾ ರಾಜ್ಯಗಳ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ.

ಚಿತ್ರ ಆರಂಭದಿಂದಲೂ ಯಾವುದೇ ಕೊರತೆ ಬಾರದ ಹಾಗೆ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಖಾಸಗಿ ವಿಮಾನದಲ್ಲಿ ಚಿತ್ರತಂಡದವರ ಜೊತೆಗೆ ಹೊರಡಲಿದ್ದಾರೆ.

ಮೊದಲಿಗೆ ಏಪ್ರಿಲ್ 15 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂಬೈನ ಜುಹುನ ಪಿವಿಆರ್ ನಲ್ಲಿ ಮಾಧ್ಯಮ ಗೋಷ್ಠಿ ನಡೆಸುವ ಚಿತ್ರತಂಡ ಅಂದು ಸಂಜೆ 7 ಗಂಟೆಗೆ ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಅರ್ ಕೆ ಪಿವಿಆರ್ ನಲ್ಲಿ ಪ್ರಚಾರ ಸಭೆ ನಡೆಸಲಿದೆ.

ಮರುದಿನ ಏಪ್ರಿಲ್ 16ರ ಬುಧವಾರ ಬೆಳಿಗ್ಗೆ 11ಗಂಟೆಗೆ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಅಂದು ಸಂಜೆ 7 ಗಂಟೆಗೆ ಕೇರಳದ ಕೊಚ್ಚಿ ಪಿವಿಆರ್ ಪೋರಂ ನಲ್ಲಿ ’45’ಚಿತ್ರದ ಮಾಧ್ಯಮ ಗೋಷ್ಠಿ ನಡೆಸಲಿದೆ.

Social Share :

ರಾಜ್ ಮೊಮ್ಮಗನ ಚಿತ್ರ ತೆರೆಗೆ ಅಶೋಕ್ ಕಡಬ ನಿರ್ದೇಶನ..

Social Share :

* ಷಣ್ಮುಖ ಗೋವಿಂದ್ ರಾಜ್ ಚಿತ್ರ ಏಪ್ರಿಲ್ 4ರಂದು ಬಿಡುಗಡೆ *

ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಕನ್ನಡದ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.

ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಅವರ ಮಗ ಷಣ್ಮುಖ ಗೋವಿಂದ್ ರಾಜ್ ಈಗ ತೆರೆಯ ಮೇಲೆ ರಾರಾಜಿಸಲು ಸಂಪೂರ್ಣ ಸಜ್ಜುಗೊಂಡಿದ್ದಾರೆ.

ಏಕೆಂದರೆ ಷಣ್ಮುಖ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಶೀರ್ಷಿಕೆ ಇರುವ ಚಿತ್ರ ಇದೇ ವಾರ ಅಂದರೆ ಏಪ್ರಿಲ್ 4 ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ.

ಚಿತ್ರದ ಪುಟ 1 ಬಿಡುಗಡೆಗೆ ಸಜ್ಜಾಗಿದ್ದು, ಈಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ರಾಜ್ ಕುಟುಂಬದ ಸದಸ್ಯರು ಭಾಗವಹಿಸಿ ಸಂಭ್ರಮ ಹಂಚಿಕೊಂಡರು.

ಷಣ್ಮುಖ ಅವರ ತಂದೆ ಎಸ್.ಎ.ಗೋವಿಂದರಾಜು, ತಾಯಿ ಲಕ್ಷ್ಮಿ ಗೋವಿಂದರಾಜು, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ರಾಜ್ ಪುತ್ರಿ ಪೂರ್ಣಿಮಾ ರಾಜ್ ಕುಮಾರ್ ಹೀಗೆ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು.

ಚಿತ್ರದ ನಿರ್ದೇಶಕ ಅಶೋಕ್ ಕಡಬ ಮತ್ತು ಚಿತ್ರವನ್ನು ನಿರ್ಮಾಣ ಮಾಡಿರುವ ವಿ.ಮಾದೇಶ್ ಹಾಗೂ ಇತರ ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು.

‘ನಿಂಬಿಯಾ ಬನಾದ ಮ್ಯಾಗ’ ಎಂಬ ಫ್ಯಾಮಿಲಿ ಡ್ರಾಮ ಎರಡು ಭಾಗಗಳಾಗಿ ಸಿನಿ ರಸಿಕರನ್ನು ರಂಜಸಲಿದ್ದು, ಮೊದಲ ಭಾಗ ಈಗ ಬಿಡುಗಡೆಯ ಹಾದಿಯಲ್ಲಿದೆ.

ಎಂಜೀಪಿ ಎಕ್ಸ್. ಎಂಟರ್ ಪ್ರೈಸೆಸ್ ನ ಬ್ಯಾನರ್ ನಡಿ ವಿ ಮಾದೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆಗೆ ಮುನ್ನವೇ ಚಿತ್ರವು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.

ರಾಜ್ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ‘ನಂಜುಂಡಿ ಕಲ್ಯಾಣ’ ಚಿತ್ರವು ಫ್ಯಾಮಿಲಿ ಡ್ರಾಮ ಕಥಾವಸ್ತು ಹೊಂದಿತ್ತು ಮಾತ್ರವಲ್ಲ ಹಲವು ದಾಖಲೆಗಳನ್ನು ನಿರ್ಮಿಸಿತ್ತು.

ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿರುವ ಈ ಚಿತ್ರದ ಬಗ್ಗೆ ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಹಾಗೂ ಕುಟುಂಬ ಅಪಾರ ಭರವಸೆಗಳನ್ನು ಹೊಂದಿದೆ.

ನಿಂಬಿಯಾ ಬನಾದ ಮ್ಯಾಗ.. ಎಂಬ ಶೀರ್ಷಿಕೆಗೆ ಜಾನಪದ ಗೀತೆಯ ಸೊಗಡಿದೆ. ಅದೇ ರೀತಿ ಈ ಚಿತ್ರದ ಕಥೆಯೂ ಮನುಷ್ಯ ಸಂಬಂಧಗಳ ನೆಲೆ ಬೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬ ವಿವರ ನೀಡಿದರು ನಿರ್ದೇಶಕ ಅಶೋಕ್ ಕಡಬ.

ಮುಖ್ಯವಾಗಿ ಈ ಚಿತ್ರದಲ್ಲಿ ರಾಜ್ ಸಂಬಂಧಿ ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರ್ 25 ವರ್ಷಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.

ನಿರ್ಮಾಪಕ ವಿ.ಮಾದೇಶ್ ಅವರಿಗೂ ಈ ಚಿತ್ರ ಹೆಮ್ಮೆಯ ಭಾವಗಳನ್ನು ಮೂಡಿಸಿದ್ದು, ರಾಜ್ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.

ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು (ಅಚ್ಚಣ್ಣ) ಕಾಣೆಯಾಗಿದೆ. ಮಗುವಿನ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ. ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು ‘ನಿಂಬಿಯಾ ಬನಾದ ಮ್ಯಾಗ – ಪೇಜ್ – 1’ ಚಿತ್ರದ ಕಥಾ ಸಾರಾಂಶ.

ಭಾಗ 2. ಸಹ ಬರಲಿದೆ. ಷಣ್ಮುಖ ಜೋಡಿಯಾಗಿ ತನುಶ್ರೀ ನಟಿಸಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Social Share :

ಪ್ರೇಮ್ ಧ್ರುವ ಸರ್ಜಾ ಕೆಡಿ ಎರಡನೇ ಹಾಡು ಬಿಡುಗಡೆ

Social Share :

*ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..*

ಹಾಡುಗಳನ್ನು ಸೂಪರ್ ಡೂಪರ್ ಹಿಟ್ ಮಾಡುವ ಜೋಗಿ ಪ್ರೇಮ್, ತಮ್ಮ ಎಂದಿನ ವರಸೆಯನ್ನು ಮುಂದುವರೆಸಿರುವ ಪರಿಣಾಮ ‘ಕೆಡಿ’ ಚಿತ್ರದ ಮತ್ತೊಂದು ಹಾಡು ಈಗ ಗಮನ ಸೆಳೆಯುತ್ತಿದೆ.

‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..’ ಎಂಬ ಹಾಡು ಈಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಸಂಭ್ರಮಿಸಿದ್ದು ಗಮನ ಸೆಳೆಯಿತು.

ಈ ವರ್ಷದ ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಕೆಡಿ’ ಕೂಡ ಒಂದು. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರಕ್ಕೆ ಪ್ರೇಮ್ ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ಅತಿ ದೊಡ್ಡ ಬಂಡವಾಳದಲ್ಲಿ ನಿರ್ಮಾಣ ಮಾಡುತ್ತಿದೆ.

ಕೆಡಿ ಚಿತ್ರದ ವಿಶೇಷವೆಂದರೆ ಚಿತ್ರದ ಆಡಿಯೋ ಹಕ್ಕುಗಳು ಆನಂದ್ ಆಡಿಯೋ ಸಂಸ್ಥೆಗೆ ದಾಖಲೆ ಬೆಲೆಗೆ (ಸುಮಾರು 18 ಕೋಟಿ) ಮಾರಾಟವಾಗಿರುವುದು.

ಈಗಾಗಲೇ ಈ ಚಿತ್ರದ ಮೊದಲ ಹಾಡು, ‘ಶಿವ ಶಿವ..’ ಹಾಡು ಅತಿ ದೊಡ್ಡ ಹಿಟ್ ಆಗಿರುವುದಲ್ಲದೆ ವಿಶೇಷ ಟ್ರೆಂಡ್ ಸೃಷ್ಟಿ ಮಾಡಿರುವುದು ಗಮನಾರ್ಹ.

ಮತ್ತೊಂದು ಹಾಡು ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ..’ ದೊಡ್ಡ ದಾಖಲೆ ಬರೆಯುವ ದಾರಿಯಲ್ಲಿದೆ. ನಿರ್ದೇಶಕ ಪ್ರೇಮ್ ಅವರೇ ರಚಿಸಿರುವ ಈ ಹಾಡಿಗೆ ಬಾಲಿವುಡ್ ಹೆಸರಾಂತ ಗಾಯಕ‌ ಮಿಖಾ ಸಿಂಗ್ ದನಿಯಾಗಿದ್ದಾರೆ.

ವಿಶೇಷವೆಂದರೆ ಈ ಹಾಡಿನ ಚಿತ್ರೀಕರಣ ಇನ್ನೂ ನಡೆದಿಲ್ಲ; ಹಾಡಿಗೆ ಹುಕ್ ಸ್ಟೆಪ್ ಕಲ್ಪನೆಯನ್ನು ಪ್ರೇಕ್ಷಕರಿಗೇ ಬಿಡಲಾಗಿದೆ. ಸಾಮಾಜಿಕ ಜಾಲದಲ್ಲಿ ಜನಪ್ರಿಯವಾಗುವ ಹುಕ್ ಸ್ಟೆಪ್ ನ್ನು ಚಿತ್ರತಂಡ ಬಳಸಿಕೊಳ್ಳಲಿದೆ. ಹಾಗೆಯೇ ಆಯ್ಕೆಯಾದ ಸ್ಟೆಪ್ ಗೆ ಬಹುಮಾನ ನೀಡಲಿದೆ ಎಂಬ ವಿವರ ನೀಡಿದರು ನಿರ್ದೇಶಕ ಪ್ರೇಮ್.

ಈ ಚಿತ್ರಕ್ಕೆ ತಪ್ಪಸ್ಸಿನಂತೆ ಕೆಲಸ ಮಾಡಲಾಗಿದೆ. ಹಾಗಾಗಿ ಈ ಹಾಡು ಕೂಡ ನಮಗೆ ವರವಾಗಿದೆ ಎಂದವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಮಿಕಾ ಸಿಂಗ್ ದುಬಾರಿ ಗಾಯಕ. ಅವರಿಂದ ಹಾಡು ಹಾಡಿಸಿರುವುದು ಹೆಮ್ಮೆಯ ವಿಷಯ. ಅವರು ಕನ್ನಡ ಮತ್ತು ಹಿಂದಿ ಭಾಷೆಗೆ ಹಾಡಿದ್ದಾರೆ. ಉಳಿದ ಭಾಷೆಗಳಿಗೆ ಅಲ್ಲಿನ ಸ್ಥಳೀಯ ಗಾಯಕರು ಹಾಡಿದ್ದಾರೆ ಎಂಬ ವಿವರ ಕೊಟ್ಟರು.

ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿ ವೇದಿಕೆ ಮೇಲೆ ಹಾಡಿ ಕುಣಿದಿದ್ದು ವಿಶೇಷ. ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್, ಚಿತ್ರಕ್ಕಾಗಿ ಪ್ರತಿಯೊಬ್ಬರೂ ತುಂಬಾ ಶ್ರಮ ಹಾಕಿದ್ದಾರೆ, ಚಿತ್ರವು ಆಗಸ್ಟ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿವರ ಕೊಟ್ಟರು.


ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್, ಛಾಯಾಗ್ರಾಹಕ ವಿಲಿಯಂ ಡೇವಿಡ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

70ರ ದಶಕದಲ್ಲಿ ನಡೆಯುವ ಕಾಲ್ಪನಿಕ ಕಥೆಯಲ್ಲಿ ಕಾಳಿದಾಸ ಎಂಬ ಭೂಗತ ಜಗತ್ತಿನ ವ್ಯಕ್ತಿಯ ಸುತ್ತ ಹೆಣೆಲಾಗಿರುವ ಕಥೆ ಮತ್ತು ಅದೇ ಕಾಲ ಘಟ್ಟದಲ್ಲಿ ಚಿತ್ರೀಕರಣಗೊಳಿಸುವ ಸಾಹಸ ಕಾರಣದಿಂದ ಚಿತ್ರವು ಹೊಸತನದ ಹೆಜ್ಜೆಗಳನ್ನು ಬಿಟ್ಟು ಕೊಡಲಿದೆ.

ಸಂಜಯ್ ದತ್, ಶಿಲ್ಪಾ ಶೆಟ್ಟಿ ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಮೊದಲಾದ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ‘ಕೆಡಿ’ ಚಿತ್ರವು ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ.

Social Share :

ಯುಗಾದಿ ಹಬ್ಬದ ದಿನ 45 ಟೀಸರ್ ಶಿವಣ್ಣ ಉಪ್ಪಿ ರಾಜ್ ಸೂಪರ್‌..

Social Share :

* ರಮೇಶ್ ರೆಡ್ಡಿ ಬಂಡವಾಳ; ಅರ್ಜುನ್ ಜನ್ಯ ಕ್ರಿಯಾಶೀಲತೆ *

* ಹಾಲಿವುಡ್ ತಂತ್ರಜ್ಞರ ಕೆಲಸ *

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ದುಬಾರಿ ಬಜೆಟ್ ನ ಚಿತ್ರ ’45’ ಟೀಸರ್ ಯುಗಾದಿ ಹಬ್ಬದ ದಿನ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಿರ್ಮಾಪಕ ರಮೇಶ್ ರೆಡ್ಡಿ ಅದ್ದೂರಿ ನಿರ್ಮಾಣದ ಈ ಚಿತ್ರದಲ್ಲಿ ಕನ್ನಡದ ಮುಂಚೂಣಿಯ ಸ್ಟಾರ್ ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರದ ಟೀಸರ್ ನ್ನು ಹಬ್ಬದ ದಿನದಂದು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಬಿಡುಗಡೆ ಮಾಡಿದರು.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಅರ್ಜುನ್ ಜನ್ಯ ಅವರಲ್ಲಿನ ವಿಶೇಷ ಪ್ರತಿಭೆ ಈ ಚಿತ್ರದ ಮೂಲಕ ಹೊರಬರಲಿದೆ. ಅವರ ಕಲ್ಪನೆಗೆ ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿರುವುದು ಹೆಚ್ಚುಗಾರಿಕೆ ವಿಷಯವಾಗಿದೆ ಎಂದರು ಶಿವಣ್ಣ.

ಶಿವಣ್ಣ ಅವರ ಜೊತೆ ನಟಿಸುತ್ತಿರುವ ಸಂಗತಿಯೇ ಹೆಮ್ಮೆಯ ವಿಷಯವಾಗಲಿದೆ. ಓಂ ಚಿತ್ರದ ಕ್ಷಣಗಳು ಮರುಕಳಿಸಲಿವೆ ಎಂದರು ಉಪೇಂದ್ರ.

ಇಬ್ಬರು ದಿಗ್ಗಜರ ಜೊತೆ ನಾನು ನಟಿಸುತ್ತಿರುವುದೇ ಪುಣ್ಯದ ವಿಷಯ ಎಂದವರು ರಾಜ್.ಬಿ ಶೆಟ್ಟಿ. ಟೀಸರ್ ನಲ್ಲೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು ನಿರ್ದೇಶಕ ಅರ್ಜುನ್ ಜನ್ಯ.

ಕೆನಡಾದ ಪರಿಣಿತರಿಂದ ಗ್ರಾಫಿಕ್ಸ್ ಕೆಲಸ ನಡೆಯುತ್ತಿರುವುದು ಕನ್ನಡದ ಮಟ್ಟಿಗೆ ವಿಶೇಷವಾಗಿದೆ. ಆಗಸ್ಟ್ 15 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ ಎಂದರು.

ಇಡೀ ಭಾರತೀಯ ಚಿತ್ರರಂಗವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುವ ಚಿತ್ರವಾಗಲಿದ್ದು, ಇದು ನಮ್ಮ ಚಿತ್ರ ಎಂಬುದು ಹೆಮ್ಮೆಯ ವಿಷಯವಾಗಲಿದೆ ಎಂದವರು ನಿರ್ಮಾಪಕ ರಮೇಶ್ ರೆಡ್ಡಿ.

ಛಾಯಾಗ್ರಾಹಕ ಸತ್ಯ ಹೆಗಡೆ, ನಿರ್ಮಾಪಕ ಕೆ.ಮಂಜು, ಸಂಜಯ್ ಗೌಡ, ಇಂದ್ರಜಿತ್ ಲಂಕೇಶ್, ಕೆ.ವಿ.ಎನ್ ಸುಪ್ರೀತ್, ಆನಂದ್ ಆಡಿಯೋ ಶ್ಯಾಮ್ , ಶ್ರೇಯಸ್ ಮಂಜು ಹಾಗೂ ಇತರರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Social Share :

ಮೇ 9ರಂದು ಬಿಡುಗಡೆಗೆ ಸಜ್ಜಾಗಿದೆ ನವರಸನ್ ನಿರ್ಮಾಣದ ಸೂತ್ರಧಾರಿ

Social Share :

* ಚಂದನ್ ಶೆಟ್ಟಿ ಪಾತ್ರಧಾರಿ *

ಈಗಲ್ ಮೀಡಿಯಾ ಕ್ರಿಯೇಷನ್ಸ್ ನ ಮುಖ್ಯಸ್ಥ ನವರಸನ್ ನಿರ್ಮಾಣ‌ದ ‘ಸೂತ್ರಧಾರಿ’ ಬಿಡುಗಡೆಗೆ ಸಜ್ಜುಗೊಂಡಿದ್ದು, ಮೇ 9ರಂದು ಪ್ರೇಕ್ಷಕರ ಮುಂದೆ ಬರಲಿದೆ.

ಕಿರಣ್ ಕುಮಾರ್ ನಿರ್ದೇಶನದ ಹಾಗೂ ರಾಕ್ ಸ್ಟಾರ್ ಚಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಚಿತ್ರವು ಬಿಡುಗಡೆಯ ಹೊತ್ತಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಈಚೆಗೆ ನಡೆದ ಸಮಾರಂಭದಲ್ಲಿ ನಿರ್ಮಾಪಕರಾದ ಚೇತನ್ ಗೌಡ, ಮುನೇಗೌಡ ಹಾಗೂ ರಾಜೇಶ್ ‘ಸೂತ್ರಧಾರಿ’ ಚಿತ್ರದ ಬಿಡುಗಡೆ ದಿನಾಂಕ ಅನಾವರಣ ಮಾಡಿದರು.

ಮೈ ಮೂವಿ ಬಜಾರ್ ಮೂಲಕ ಚಿತ್ರರಂಗದ ಬೆಸುಗೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ನವರಸನ್ ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕರಾಗಿಯೂ ಗಮನ ಸೆಳೆದವರು‌.

ಈಗ ‘ಸೂತ್ರಧಾರಿ’ ಅವರ ಮಹತ್ವಾಕಾಂಕ್ಷೆಯ ಚಿತ್ರ. ಅದು ಅತ್ಯುತ್ತಮ ವಾಗಿ ಮೂಡಿ ಬಂದಿದೆ ಎಂಬುದು ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹೋದರು ನವರಸನ್.

ಚಿತ್ರದ ಹಾಡುಗಳು ಟ್ರೆಂಡಿಂಗ್ ನಲ್ಲಿವೆ. ಹಾಗಾಗಿ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ ಎಂಬುದು ನಟ ಕಮ್ ಗಾಯಕ ಚಂದನ್ ಶೆಟ್ಟಿ ಅವರ ಮಾತು.

ಚಂದನ್ ಶೆಟ್ಟಿ ಜೊತೆಗೆ ಸಂಜನಾ ಆನಂದ್ ಹಾಗೂ ಅಪೂರ್ವ ನಟಿಸಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.

ಗಣೇಶ್ ನಾರಾಯಣ್, ಪ್ರಶಾಂತ್ ನಟನ, ಮೀರಾಶ್ರೀ, ಸುಶ್ಮಿತಾ, ಪಲ್ಲವಿ ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಮನದ ಕಡಲು ಟ್ರೈಲರ್ ಯಶ್ ರಾಕಿಂಗ್ ರಾಕಿಂಗ್..

Social Share :

ರಾಜಾಜಿನಗರದ ಲುಲ್ಲು ಮಾಲ್ ಆವರಣ ಭಾನುವಾರ ವರ್ಣರಂಜಿತ ವಾತಾವರಣದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ಉಪಸ್ಥಿತಿಯಲ್ಲಿ ನಲಿದಾಡಿತು..

ಅದು ‘ಮನದ ಕಡಲು’ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡ ಸಂದರ್ಭ.

‘ಮುಂಗಾರು ಮಳೆ’ ನಿರ್ಮಾಪಕ ಈ ಕೃಷ್ಣಪ್ಪ ಬಹಳ ಸಮಯದ ಬಳಿಕ ಮತ್ತೆ ನಿರ್ಮಾಣ ಮಾಡುತ್ತಿರುವ ಚಿತ್ರ ಮನದ ಕಡಲು. ಯೋಗರಾಜ್ ಭಟ್ ಅದರ ನಿರ್ದೇಶಕರು.

ಯಶ್ ಅದೆಷ್ಟೋ ವರ್ಷಗಳ ಬಳಿಕ ಬಹಿರಂಗ ಸಭೆಯ ರೀತಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಅದಕ್ಕೆ ಇ.ಕೃಷ್ಣಪ್ಪ ಅವರ ಜೊತೆಗಿನ ಒಡನಾಟ ಕಾರಣ‌ ಎಂಬುದು ಪ್ರಚಾರ ಸಭೆಯಲ್ಲೇ ಬಹಿರಂಗವಾದ ವಿಷಯ.

ಇ.ಕೃಷ್ಣಪ್ಪ ನಿರ್ಮಾಣದ ‘ಮೊಗ್ಗಿನ ಮನಸ್ಸು’ ಯಶ್ ಅವರ ಮೊದಲ ಚಿತ್ರ. ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು ರಾಕಿಂಗ್ ಸ್ಟಾರ್.

ಬೆಳವಣಿಗೆಯ ಹಾದಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಹ ನಿರ್ಮಾಪಕ ಗಂಗಾಧರ್ ಹೀಗೆ ಸಾಕಷ್ಟು ಜನರ ಶ್ರಮವನ್ನು ಮರೆಯಲಾರೆ ಎಂದರು.

ಇದೇ ಮಾರ್ಚ್ 28 ರಂದು ತೆರೆಗೆ ಬರಲು ಸಂಪೂರ್ಣ ಸಜ್ಜಾಗಿರುವ ಚಿತ್ರದ ಬಗ್ಗೆ ಇಡೀ ಚಿತ್ರತಂಡ ಮಾಹಿತಿ ನೀಡಿತು.

‘ಮನದ ಕಡಲು’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ಸುಮುಖ, ನಟಿಯರಾದ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್‌,‌ ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Share :

ನಾಯಕ ನಾನೇ ನನ್ನ ಕಥೆಗೆ ಮೆಜೆಸ್ಟಿಕ್-2 ಹೊಸ ಹಾಡು

Social Share :

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ‘ಮೆಜೆಸ್ಟಿಕ್-2’ ಚಿತ್ರದ ಹೊಸ ಹಾಡು ಬಿಡುಗಡೆಗೊಂಡಿದೆ.

‘ನಾಯಕ ನಾನೇ..’ ಎಂಬ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಈಚೆಗೆ ಬಿಡುಗಡೆ ಮಾಡಿದರು.

ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ನಿರ್ಮಿಸಿರುವ ‘ಮೆಜೆಸ್ಟಿಕ್-2’ ಚಿತ್ರವನ್ನು ರಾಮು ನಿರ್ದೇಶನ ಮಾಡಿದ್ದಾರೆ.

ಯುವನಟ ಭರತ್ ಕುಮಾರ್, ಸಂಹಿತಾ ವಿನ್ಯಾ ಮುಖ್ಯ ಪಾತ್ರದಲ್ಲಿರುವ ಚಿತ್ರವೀಗ ಬಿಡುಗಡೆಗೆ ಸಜ್ಜುಗೊಂಡಿದೆ.

ಚಿತ್ರವನ್ನು ಯಾವುದಕ್ಕೂ ಕೊರತೆಯಾಗದಂತೆ ದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು, ಚಿತ್ರದುರ್ಗದ ಮರುಘಾ ಮಠ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅತ್ಯುತ್ತಮ ಮೂಡಿ ಬಂದಿದೆ ಎಂಬ ವಿವರ ಕೊಟ್ಟರು ನಿರ್ಮಾಪಕ ಹೆಚ್. ಆನಂದಪ್ಪ.

ಆನಂದಪ್ಪ ಅವರ ಧೈರ್ಯ ಮತ್ತು ಸಾಹಸಗಳ ಫಲವಾಗಿ ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂದವರು ನಿರ್ಮಾಪಕ ಶಿಲ್ಪ ಶ್ರೀನಿವಾಸ್.

ವಿನು ಮನಸು ಸಂಗೀತ ನೀಡಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ ಎಂಬ ಮಾಹಿತಿಗಳು ಬಂದವು. ನಟಿ ಶೃತಿ ತಾಯಿ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರದ ಬಗ್ಗೆ ಪ್ರಶಂಸೆಗಳು ಬಂದವು.

ನಿರ್ದೇಶಕ ರಾಮು ಮತ್ತು ನಟ ಭರತ್ ಕುಮಾರ್ ಚಿತ್ರದ ಒಳಗಿನ ಮತ್ತು ಹೊರಗಿನ ಸಾಹಸಗಳ ಬಗ್ಗೆ ಹೇಳಿಕೊಂಡರು.

ಮೆಜೆಸ್ಟಿಕ್ ಪ್ರದೇಶದೊಳಗೆ ಏನೆಲ್ಲಾ ನಡೆಯುತ್ತವೆ ಎಂಬುದರ ವಿವರಣೆ ಜೊತೆಗೆ ಕುತೂಹಲ ಹುಟ್ಟಿಸುವ ಕಥೆ ಚಿತ್ರದ ಮುಖ್ಯಾಂಶವಾಗಲಿದೆ ಎಂದರು ನಿರ್ದೇಶಕ ರಾಮು.

ನನ್ನದು ಮಧ್ಯಮ ವರ್ಗದ ಹುಡುಗಿಯ ಪಾತ್ರ ಎಂಬುದು ನಟಿ ಸಂಹಿತ ವಿನ್ಯಾ ನೀಡಿದ ವಿವರಣೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯಕುಮಾರ್ ಸಹಾಯಕ ನಿರ್ದೇಶನ, ಚಿನ್ನಯ್ಯ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಮೆಜೆಸ್ಟಿಕ್ ಅಲ್ಲದೆ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ವಿಶೇಷವಾಗಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹಾಗೂ ಭರತ್ ಕುಮಾರ್ ಪರಿಚಯದ ಹಾಡನ್ನು ಆರ್.ಎಸ್. ಗೌಡ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ ಎಂಬ ವಿವರಣೆ ನೀಡಿತು ಚಿತ್ರತಂಡ.

Social Share :

ಪಿಂಕಿ ಎಲ್ಲಿ ? ಅತ್ಯುತ್ತಮ ಚಿತ್ರ ಪ್ರಜ್ವಲ್‍, ಅಕ್ಷತಾ ಅತ್ಯುತ್ತಮ ನಟ, ನಟಿ

Social Share :

* 2020ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತರು *

ಸಪ್ತಗಿರಿ ಕ್ರಿಯೆಷನ್ಸ್ ಬ್ಯಾನರ್ ನಡಿ ಕೃಷ್ಣೇಗೌಡ ನಿರ್ಮಿಸಿರುವ ಹಾಗೂ ಪೃಥ್ವಿ ಕೋಣನೂರು ನಿರ್ದೇಶನದ ‘ಪಿಂಕಿ ಎಲ್ಲಿ..?’ 2020ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಹೊಮ್ಮಿದೆ.

‘ಜಂಟಲ್‍ಮ್ಯಾನ್‍’ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್‍ ದೇವರಾಜ್‍ ಅತ್ಯುತ್ತಮ ನಟ ಹಾಗೂ ‘ಪಿಂಕಿ ಎಲ್ಲಿ..?’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇನ್ನುಳಿದಂತೆ ಪ್ರಶಸ್ತಿ ಪಟ್ಟಿ ಈ ಕೆಳಕಂಡಂತೆ ಇದೆ:

ದ್ವಿತೀಯ ಅತ್ಯುತ್ತಮ ಚಿತ್ರ: ವರ್ಣಪಟಲ (ನಿರ್ದೇಶನ : ಚೇತನ್ ಮುಂಡಾಡಿ)

ಮೂರನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್‍ ವಾಲ್ಸ್

ಅತ್ಯುತ್ತಮ ಮಕ್ಕಳ ಚಿತ್ರ: ಪದಕ

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ (ಗಣೇಶ್‍ ಹೆಗ್ಡೆ)

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಜೀಟಿಗೆ (ತುಳು ಭಾಷೆ)

ಅತ್ಯುತ್ತಮ ಪೋಷಕ ನಟ: ರಮೇಶ್‍ ಪಂಡಿತ್‍ (ತಲೆದಂಡ)

ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತಪುರಾಣ)

ಅತ್ಯುತ್ತಮ ಕಥೆ: ಶಶಿಕಾಂತ್‍ ಗಟ್ಟಿ (ರಾಂಚಿ)

ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್‍ (ಚಾಂದಿನಿ ಬಾರ್‍)

ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)

ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್‍ (ತಲೆದಂಡ)

ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್‍ ಬಡೇರಿಯಾ (ಮಾಲ್ಗುಡಿ ಡೇಸ್‍)

ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. ಉಜ್‍ಜರಿ (ಆ್ಯಕ್ಟ್ 1978)

ಅತ್ಯುತ್ತಮ ಬಾಲನಟ: ಅಹಿಲ್‍ ಅನ್ಸಾರಿ (ದಂತ ಪುರಾಣ)

ಅತ್ಯುತ್ತಮ ಬಾಲನಟಿ: ಬೇಬಿ ಹಿತೈಷಿ ಪೂಜಾರ್‍ (ಪಾರು)

ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್‍ (ಬಿಚ್ಚುಗತ್ತಿ)

ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (‘ಪರ್ಜನ್ಯ’ ಚಿತ್ರದ ‘ಮೌನವು ಮಾತಾಗಿದೆ’) ಮತ್ತು ಸಚಿನ್‍ ಶೆಟ್ಟಿ ಕುಂಬ್ಳೆ (‘ಈ ಮಣ್ಣು’ ಚಿತ್ರದ ‘ದಾರಿಯೊಂದು ಹುಡುಕುತ್ತಿದೆ’)

ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್‍ (ನಟನೆಗಾಗಿ – ಮರಣೋತ್ತರವಾಗಿ), ಶ್ರೀ ವಲ್ಲಿ (ವಸ್ತ್ರ ವಿನ್ಯಾಸ – ‘ಸಾರವಜ್ರ’), ರಮೇಶ್‍ ಬಾಬು (ಪ್ರಸಾಧನ – ‘ತಲೆದಂಡ’) ಮತ್ತು ವಿ.ಜಿ. ರಾಜನ್ (ಶಬ್ಧಗ್ರಹಣ – ಅಮೃತ್‍ ಅಪಾರ್ಟ್‍ಮೆಂಟ್ಸ್)

ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ): ವಿಶ್ವಾಸ್‍ ಕೆ.ಎಸ್ (ವಿಶೇಷಚೇತನ ನಟ – ಅರಬ್ಬೀ)

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕಧಾಮ ಬಾಬು (ಕನ್ನಡಿಗ)

Social Share :