Snehapriya.com

June 9, 2025

admin

ಬಘೀರ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ : ವಿಜಯ್ ಕಿರಗಂದೂರು
ಹೊಂಬಾಳೆ ಫಿಲಮ್ಸ್

ನಿರ್ದೇಶನ : ಡಾ.ಸೂರಿ

ಸೂಪರ್ ಮಾಯಾ ಮನುಷ್ಯ..

ಸೂಪರ್ ಮ್ಯಾನ್ ಆಗುವುದು ಸುಲಭವಲ್ಲ; ಅದಕ್ಕೆ ಬೇಕಾಗಿರುವುದು ಅದಮ್ಯ ಸಂಕಲ್ಪ ಮತ್ತು ಧೈರ್ಯ ಎಂಬುದು ಅರಿವಾಗುವಷ್ಟರಲ್ಲಿ ಸೂಪರ್ ಮ್ಯಾನ್ ವೇಷಧಾರಿಯಾಗಿ ಕಟ್ಟಡದ ಮೇಲಿಂದ ಹಾರಿ ಗಾಯ ಮಾಡಿಕೊಂಡಿರುತ್ತಾನೆ ಬಾಲಕ ವೇದಾಂತ್.

ಅಮ್ಮನ ಆದರ್ಶದ ಮಾತುಗಳಿಗೆ ಕಿವಿಯಾಗಿ ಸೂಪರ್ ಮ್ಯಾನ್ ವರಸೆ ತೋರುವ ದಾರಿಯಲ್ಲಿ ಆತ ಹುಡುಕಿ ಕೊಳ್ಳುವುದು ಪೊಲೀಸ್ ಅಧಿಕಾರಿಯ ಹುದ್ದೆ. ಆದರೆ ಅದು ವ್ಯವಸ್ಥೆಯ ಕಟುಪಾಡುಗಳಿಗೆ ಹೊಂದಿಕೊಂಡಿರುತ್ತದೆ ಎಂಬುದು ನಂತರ ತಿಳಿಯುತ್ತದೆ.

ನಿಷ್ಠಾವಂತ ಪೊಲೀಸ್ ಅಧಿಕಾರಿ ಅತ್ಯಂತ ಕೆಟ್ಟ ವ್ಯವಸ್ಥೆ ಮತ್ತು ಅತಿ ಕ್ರೂರ ಮನುಷ್ಯರನ್ನು ಕಾನೂನಾತ್ಮಕವಾಗಿ ಮಣಿಸಲು ಸಾಧ್ಯವಾಗದಿದ್ದರೆ; ಅಂತಹವನ್ನು ಸದೆ ಬಡಿಯಲು ಬೇರೆ ಮಾರ್ಗ ಕಂಡುಕೊಳ್ಳುವುದೇ ‘ಮಾಯಾ ಮನುಷ್ಯ’ನ ಸರಿದಾರಿ.

ವೇದಾಂತ್ ಎಂಬ ಯುವಕ ಐಪಿಎಸ್ ಪಾಸಾಗಿ ಬಂದಾಗ ಆತನಿಗೆ ಅತ್ಯಂತ ಕಠಿಣ ಪ್ರದೇಶದ ಉಸ್ತುವಾರಿ ದೊರೆಯುತ್ತದೆ. ಎಸಿಪಿ ವೇದಾಂತ್ ದುಷ್ಟರನ್ನು ಹಣಿಯುವ ಮಾರ್ಗದಲ್ಲಿ ಬರೀ ಕಲ್ಲು ಮುಳ್ಳು ಕ್ರೂರಾತಿ ಕ್ರೂರ ಮನುಷ್ಯರಿಗೆ ವ್ಯವಸ್ಥೆಯ ಬೆಂಬಲ.

ಅಲ್ಲದೆ ದುಷ್ಟರ ಬೆಂಬಲಕ್ಕೆ ರಾಜಕಾರಣಿಗಳು ಆ ಮೂಲಕ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಕೃಪಾ ಕಟಾಕ್ಷ ಬೇರೆ.. ಇಂತಹ ವೇಳೆಯಲ್ಲಿ ಎದೆ ನಡುಗಿಸುವ ಘಟನೆಗಳು ನಡೆದು ಹೋಗುತ್ತವೆ.

ದುರುಳರಿಂದ ಅತ್ಯಾಚಾರಕ್ಕೆ ಒಳಗಾಗುವ ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದುಕೊಂಡು ಅಮಾನುಷವಾಗಿ ಸಾಯುವ ದೃಶ್ಯ ವೇದಾಂತ್ ಹೃದಯವನ್ನು ಅಲ್ಲೋಲ ಕಲ್ಲೋಲ ಮಾಡುತ್ತದೆ.

ಆಗ ಹುಟ್ಟುತ್ತಾನೆ ಬಘೀರ..!

ಕೆಚ್ಚದೆಯ ವೇದಾಂತ್ ಬಘೀರನ ವೇಷಧಾರಿಯಾಗಿ ಅತ್ಯಾಚಾರಿಗಳ ಗುಂಡಿಗೆ ಬಗೆಯುತ್ತಾನೆ. ಕೆಟ್ಟವರ ಎದೆ ಸೀಳುತ್ತಾನೆ. ಆ ಮೂಲಕ ಪ್ರಶ್ನೆಯಾಗುವ ಈ ‘ಮಾಯಾ ಮನುಷ್ಯ’ ಯಾರು ಎಂಬುದು ಪ್ರೇಕ್ಷಕನಿಗೆ ತಿಳಿದಿರುತ್ತದೆ.

ಆದರೆ ವ್ಯವಸ್ಥೆಗೆ ತಿಳಿಯುವುದಿಲ್ಲ. ಆದ್ದರಿಂದಲೇ ಕೇಂದ್ರದಿಂದ ಬಘೀರನ ಹುಡುಕಾಟಕ್ಕೆ ಉನ್ನತ ಅಧಿಕಾರಿಯೊಬ್ಬರನ್ನು ನೇಮಿಸಲಾಗುತ್ತದೆ. ಆ ಅಧಿಕಾರಿಯ ಬುಡದಲ್ಲಿಯೂ ಬಘೀರನ ವಿರುದ್ಧ ಸೇಡು ಮನೆ ಮಾಡಿರುತ್ತದೆ ಎಂಬುದು ಬೇರೆ ಕಾರಣಕ್ಕೆ..

ಪ್ರಶಾಂತ್ ನೀಲ್ ಬರೆದಿರುವ ಕಥೆಯ ವಿಷಯಕ್ಕೆ ಬಂದರೆ ಹಳೆ ಮದ್ಯವನ್ನು ಹೊಸ ಬಾಟಲ್ ಗೆ ತುಂಬಿಕೊಟ್ಟಂತೆ..
ಆದರೆ ಏಳು ಚಾಪ್ಟರ್ ಗಳಾಗಿ ಕಥೆಯನ್ನು ವಿಂಗಡಿಸಿ ಹೆಣೆದಿರುವ ರೀತಿ ಅದ್ಭುತ. ಹಿಂದಿಯಲ್ಲಿ ಬಂದಿದ್ದ ಶೆಹಿನ್ ಷಾ, ಮಿಸ್ಟರ್ ಇಂಡಿಯಾ ಕನ್ನಡದಲ್ಲಿಯೇ ಬಂದ ಅನೇಕ ಚಿತ್ರಗಳ ಮಾದರಿಗಳನ್ನು ಇದು ನೆನಪಿಸುತ್ತದೆ.

ಮೊದಲರ್ಧ ಶ್ರೀಮುರುಳಿ ಅವರ ಪೊಲೀಸ್ ಸಮವಸ್ತ್ರದಂತೆಯೇ ಫಿಟ್ ಅಂಡ್ ಫೈನ್. ಉತ್ತರಾರ್ಧದಲ್ಲಿ ಹಿಂಸೆ ನಾಟ್ಯವಾಡುತ್ತದೆ ಜೊತೆಗೆ ಕೆಡುಕು ಸ್ಥಳಗಳನ್ನು ಬಘೀರ ಹುಡುಕಿ ಧ್ವಂಸಗೊಳಿಸುವುದು ಮತ್ತು ಆತನ ಹಿಂದೆ ತನಿಖಾ ತಂಡ ಬೀಳುವುದು ನಡೆಯುತ್ತದೆ.

ಈ ದಾರಿಯಲ್ಲಿ ಬಘೀರನ ಸಾಹಸಗಳ ವರಸೆ ಮತ್ತು ದುಷ್ಕರ್ಮಿಗಳ ದುಷ್ಟತನದ ಮಾಯಾಜಾಲದ ಹುಡುಕಾಟದಲ್ಲಿ ಅದ್ಭುತ ದೃಶ್ಯ ಸಂಯೋಜನೆಯ ಝಲಕ್ ಗಳು ಕಣ್ತುಂಬುವುದರಿಂದ ಕ್ಷಣ ಕ್ಷಣ ಕುತೂಹಲ.

ಅಂಗಾಂಗ ಮಾರಾಟದ ಜಾಲವೂ ಪತ್ತೆ. ಅದನ್ನು ಮಾಡುವ ವಂಚಕರ ವಿವರವೂ ಪತ್ತೆ. ಆದರೆ ಅದನ್ನು ನಿಭಾಯಿಸುವ ಪರಿಯೇ ಪ್ರಶ್ನೆ. ವೇದಾಂತ್ ನೇ ಬಘೀರ ಎಂದು ಅರಿವಾಗುವಷ್ಟರಲ್ಲಿ ತನಿಖಾ ಅಧಿಕಾರಿಗೆ ನೈಜತೆಯ ಸಾಕ್ಷಾತ್ಕಾರವಾಗುತ್ತದೆ. ಆಗ ಅವರಿಂದ ಸಿಗುವುದು ಅಚ್ಚರಿಯ ತಿರುವು.

ಮುಂದೆ ಬಘೀರನಿಂದಲೇ ದುಷ್ಟ ಸಂಹಾರ. ಚಿಕ್ಕ ವಯಸ್ಸಿನಲ್ಲಿ ಸೂಪರ್ ಮ್ಯಾನ್ ಆಗಲು ಹೋಗಿ ಕಾಲು ಗಾಯ ಮಾಡಿಕೊಂಡಿದ್ದ ವೇದಾಂತ್ ಗೆ ಅಮ್ಮ ಸ್ಫೂರ್ತಿ. ಅಪ್ಪ ಕೂಡ ಲಂಚಬಾಕ ಎಂದು ತಿಳಿದಾಗ ಗುಟ್ಟಾಗಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ.

ಇಡೀ ಚಿತ್ರ ಆವರಿಸಿ ಕೊಂಡಿರುವ ಶ್ರೀಮುರುಳಿ ಪ್ರತಿ ಹಂತದಲ್ಲಿಯೂ ಫಿಟ್ ಅಂಡ್ ಫೈನ್. ಪೊಲೀಸ್ ಹೇಗಿರಬೇಕು ಎಂಬುದರಿಂದ ಹಿಡಿದು ಕಣ್ಣಲ್ಲೇ ಬೆಂಕಿಯುಗುಳುವ ಬಘೀರನವರೆಗೆ ಪಾತ್ರ ಪೋಷಣೆ ಅದ್ಭುತ.

ಎರಡನೇಯದಾಗಿ ಇಷ್ಟವಾಗುವುದು ಪ್ರಕಾಶ್ ರೈ. ತನಿಖಾ ತಂಡದ ಅಧಿಕಾರಿ ಮತ್ತು ನಿಷ್ಠೆಗೆ ಬೆಲೆ ಕೊಡುವ ಅವರ ಎರಡು ವರಸೆಗಳು ಅನನ್ಯ.

ರುಕ್ಮಿಣಿ ವಸಂತ, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ರಘು ರಾಮನಕೊಪ್ಪ, ಶ್ರೀಧರ್, ಅಶ್ವಿನ್ ಹಾಸನ್, ವಿಲನ್ ಗರುಡಾ ರಾಮ್ ಹೀಗೆ ಪ್ರತಿಯೊಬ್ಬರೂ ಪ್ರಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಎ.ಜೆ.ಶೆಟ್ಟಿ ಕ್ಯಾಮೆರಾ ಮತ್ತು ಅಜನೀಶ್ ಲೋಕನಾಥ್ ಸಂಗೀತ ಎರಡೂ ಚಿತ್ರವನ್ನು ಶ್ರೀಮಂತಗೊಳಿಸಿವೆ ಎಂದರೆ ತಪ್ಪಲ್ಲ..

Social Share :

ಚಿತ್ರರಂಗದ ಕಲರ್ ಫುಲ್ ವೇದಿಕೆ ಎಂಎಂಬಿ ಲೆಗಾಸಿಗೆ ಎರಡು ವರ್ಷ

Social Share :

ಪ್ರತಿ ದೀಪಾವಳಿಯೂ ಇಲ್ಲಿ ಸಂಭ್ರಮ; ಹಬ್ಬದ ಈ ಖುಷಿಗೆ ಕಾರಣವಾಗುವುದು ಸಂಸ್ಥೆಯ ವರ್ಷಾಚರಣೆ..!

ಹೌದು ಚಿತ್ರರಂಗದ ಅದ್ದೂರಿ ಮತ್ತು ವರ್ಣರಂಜಿತ ‘ವೇದಿಕೆ’ಯಾಗಿರುವ ನಿರ್ಮಾಪಕ ನವರಸನ್ ನೇತೃತ್ವದ ಎಂ.ಎಂ.ಬಿ ಲೆಗಾಸಿಗೆ ಈಗ ಎರಡು ವರ್ಷ..

ಕನ್ನಡ ಚಿತ್ರರಂಗದ ಅನೇಕ ಚಟುವಟಿಕೆಗಳಿಗೆ ವೇದಿಕೆಯಾಗಿರುವ ಮೈ ಮೂವಿ ಬಜಾರ್ (ಎಂಎಂಬಿ)ನ ಅಸ್ತಿತ್ವವೇ ಅಚ್ಚರಿ. ಎರಡನೇ ವರ್ಷಾಚರಣೆ ಸಂದರ್ಭದಲ್ಲಿ ಅದೆಲ್ಲಾ ಬಹಿರಂಗಗೊಂಡಿತು.

ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಸಮೀಪವಿರುವ ಪ್ರಸನ್ನ ಚಿತ್ರಮಂದಿರದ ಪಕ್ಕದಲ್ಲಿ ಜಿ.ಟಿ.ವರ್ಡ್ ಮಾಲ್ ಸಿಗುತ್ತದೆ. ಅದರ ನಾಲ್ಕನೇ ಮಹಡಿಯಲ್ಲಿರುವುದೇ ಎಂ ಎಂ ಬಿ ಲೆಗಾಸಿ..

ದಮಯಂತಿ, ಸೂತ್ರಧಾರಿ ಮೊದಲಾದ ಚಿತ್ರಗಳನ್ನು ನಿರ್ಮಾಣ ಮಾಡಿದ ನವರಸನ್ ಇದರ ರೂವಾರಿ. ದೊಡ್ಡ ದೊಡ್ಡ ಹಿಟ್ ಚಿತ್ರಗಳಿಗೆ ಎಂ.ಎಂ.ಬಿ ವೇದಿಕೆಯಾಗಿದೆ ಎಂಬುದು ಹೆಗ್ಗಳಿಕೆ.

ದೊಡ್ಡ ದೊಡ್ಡ ಬಜೆಟ್ ನ ಚಿತ್ರಗಳಿಗೆ ಪ್ರಚಾರ ಮಾಡಲು ದೊಡ್ಡ ದೊಡ್ಡ ಸ್ಟಾರ್ ಹೊಟೇಲ್ ಗಳನ್ನು ಅವಲಂಭಿಸಬೇಕಾಗಿತ್ತು. ಆಗ ನಿರ್ಮಾಪಕರ ಮೇಲೆ ಹೊರೆ ಹೆಚ್ಚಾಗುತ್ತಿತ್ತು.

ಆದರೆ ಸ್ಟಾರ್ ಹೊಟೇಲ್ ನ ಸವಲತ್ತು ಕೊಡುವ ಎಂ.ಎಂ.ಬಿಯಲ್ಲಿ ಸಾಮಾನ್ಯ ನಿರ್ಮಾಪಕರೂ ಸ್ಟಾರ್ ಪ್ರಚಾರ ಮಾಡಬಹುದು. ಇದೇ ಈ ವೇದಿಕೆಯ ಹೆಗ್ಗಳಿಕೆ ಎಂಬುದು ಮುಂಚೂಣಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರ ಸಮರ್ಥನೆ.

ಹಿರಿಯ ಪ್ರಚಾರಕರ್ತ ನಾಗೇಂದ್ರ ಅವರೂ ಎಂ.ಎಂ.ಬಿ ವೇದಿಕೆಯ ಮಹತ್ವಗಳನ್ನು ಬಣ್ಣಿಸಿದರು. ಎಲ್ಲಾ ಅನುಕೂಲಗಳಿವ ಅದ್ದೂರಿ ಪ್ರಚಾರ ವೇದಿಕೆಯಾಗಿದೆ ಎಂದರು. ಪ್ರಚಾರಕರ್ತರಾದ ವಿಜಯಕುಮಾರ್ ಹಾಗೂ ಕಲ್ಲೇಶ್ ಮತ್ತು ಕಾರ್ತಿಕ್ ಅವರ ಹಾಜರಾತಿ ಇತ್ತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್, ನಿರ್ಮಾಪಕರಾದ ಕೃಷ್ಣ ಸಾರ್ಥಕ್,
ಚೇತನ್ ಗೌಡ, ಮಹೇಶ್ ಅಯೋಗ್ಯ,
ರಾಜೇಶ್, ನಟ ಹಾಗೂ ಗಾಯಕ ಚೆಂದನ್ ಶೆಟ್ಟಿ, ನಟ ಶ್ರೇಯಸ್ ಮಂಜು ಮೊದಲಾದವರು ನವರಸನ್ ಹಾಗೂ ವೇದಿಕೆಯ ಗುಣಗಾನ ಮಾಡಿದರು.

ಇನ್ನು ನವರಸನ್ ಅವರಿಗೆ ಸಹವರ್ತಿಗಳಾಗಿರುವ ಜಾಲಿವುಡ್ ನ ಬಷಿರ್ ಅಹಮದ್ ಹಾಗೂ ಇತರರು ಶುಭ ಹಾರೈಸಿದರು.

ಸಮಾರಂಭದಲ್ಲಿ ಪ್ರಸಾರವಾದ ಎವಿಯಲ್ಲಿ ಬಹುಭಾಷಾ ನಟ ವಿಶಾಲ್, ನವರಸ ನಾಯಕ ಜಗ್ಗೇಶ್, ವಿನೋದ್ ಪ್ರಭಾಕರ್, ಧ್ರುವಸರ್ಜಾ ಮೊದಲಾದ ಗಣ್ಯರು ಎಂಎಂಬಿ ಲೆಗಾಸಿಯ ಮಹತ್ವ ಕೊಂಡಾಡಿದರು.

ನಿರ್ಮಾಪಕನಾಗಿದ್ದ ನಾನು ನಿರ್ಮಾಪಕರಿಗೆ ಅನುಕೂಲವಾಗುವ ದಿಶೆಯಲ್ಲಿ ಏನಾದರೂ ಮಾಡಬೇಕು ಎಂದುಕೊಂಡಾಗ ಹೊಳೆದ ಪರಿಕಲ್ಪನೆ ಇದು. ಜಿ.ಟಿ.ಮಾಲ್ ನ ಮಾಲೀಕರಾದ ಆನಂದಣ್ಣ ಜಾಗ ಕೊಟ್ಟಿದ್ದರಿಂದ ಇದು ಸಾಧ್ಯವಾಗಿದೆ ಎಂದರು ನವರಸನ್.

ಅನೇಕ ನಿರ್ಮಾಪಕರು ಹಣದ ಕೊರತೆಯ ಅಸಹಾಯತೆ ವ್ಯಕ್ತಪಡಿಸಿದಾಗ, ಅವರಿಗೆ ಈ ವೇದಿಕೆಗೆ ಆಹ್ವಾನಿಸಿ ಸಹಕಾರ ನೀಡಲಾಗಿದೆ ಎಂದರು.

Social Share :

ಯಲಾಕುನ್ನಿ ಚಿತ್ರವಿಮರ್ಶೆ

Social Share :

ರೇಟಿಂಗ್ 3.5/5

ನಿರ್ಮಾಣ : ಅನುಸೂಯ ಕೋಮಲ್ ಕುಮಾರ್, ಸಹನಾಮೂರ್ತಿ

ನಿರ್ದೇಶನ : ಎನ್.ಆರ್.ಪ್ರದೀಪ್

ಸತ್ಯ ಹೇಳದ ಪುಣ್ಯ ಕೋಟಿ ಕಥೆ

ಚಿತ್ರದ ಮಧ್ಯಾಂತರದ ವೇಳೆಗೆ ದೇವರು ಪ್ರತ್ಯಕ್ಷವಾಗುವ ಅಥವಾ ಪುನರ್ ಸ್ಥಾಪನೆಯಾಗುವ ಒಂದು ದೃಶ್ಯದಲ್ಲಿ ಪ್ರಜ್ವಲಿಸುವ ಬೆಳಕು ಮತ್ತು ‘ಅಳಗಿರಿ ನಂದಿನಿ..’ ಎಂಬ ಚಾಮುಂಡಾಂಬೆ ಕುರಿತ ಹಾಡು ಪ್ರೇಕ್ಷಕನ ಮೈ ರೋಮಾಂಚನಗೊಳಿಸಿ ಬಿಡುತ್ತದೆ.

ಮುಂದೆ ಅದು ಕೃತಕ ಸೃಷ್ಟಿ ಎಂದು ನಾಯಕ ವಿವರಿಸುವಾಗ ವಾಸ್ತವದ ನೆಲೆಯಲ್ಲಿ ಮನುಷ್ಯನನ್ನು ಭ್ರಮೆಗೊಳಿಪಡಿಸುವ ಅದ್ಭುತ ವಿಚಾರಗಳ ಸಾಕಾರವಾಗುತ್ತದೆ..

ಅದು ದೇವರಿದ್ದಾನೆಯೇ ಇಲ್ಲವೇ ಎಂಬುದರ ಹೊಸ ತರ್ಕದ ಮೇಲೆ. ದೇವರ ನೆಲೆ ಬೆಲೆ ಮತ್ತು ಮನುಷ್ಯನ ಸೋಗಲಾಡಿತನಗಳ ಸುತ್ತ ಆವರಿಸುವ ಅದೇ ಬೆಚ್ಚಿ ಬೀಳುವ ವಾಸ್ತವದ ನೆರಳು ಚಿತ್ರಕ್ಕೊಂದು ಮೆರುಗು ನೀಡಿದೆ.

ಸತ್ಯ ಹೇಳದ ಪುಣ್ಯಕೋಟಿ ಸತ್ಯ ಹರಿಶ್ಚಂದ್ರ ಸತ್ಯವನ್ನು ನುಡಿಯುವಂತಾಗುವುದು ನಾಟಕೀಯ ಅವಾಂತರಗಳ ಸೊಗಸಿನಿಂದ.

ಧರಣಿ ಮಂಡಳ ಗ್ರಾಮ ಎಂಬುದು ನಮ್ಮ ಗ್ರಾಮೀಣ ಭಾಗಗಳ ಪಡಿಯಚ್ಚು. ಅಲ್ಲಿ ನಡೆಯುವ ವಿದ್ಯಮಾನಗಳೂ ಅಷ್ಟೇ. ಹಳ್ಳಿಯಲ್ಲಿ ನಡೆಯುವ ಎಲ್ಲಾ ವರಸೆಗಳು ನಗೆಯ ಬುಗ್ಗೆಯಾಗುವುದು ಸತ್ಯನ ಪಂಚ್ ಡೈಲಾಗ್ ನ ಕಾರಣದಿಂದ.

ಆರಂಭದಲ್ಲಿ ಕೃಷ್ಣನ ವೇಷ ಹಾಕಿ ಭಗವದ್ಗೀತೆ ಸಾರಾಂಶ ಹೇಳುವ ಸತ್ಯ(ಕೋಮಲ್) ಆನಂತರ ಅಸತ್ಯದ ವಾರಸುದಾರನಾಗಿ ವಿಜೃಂಭಿಸುವ ಪರಿ ಅನನ್ಯ.

ಏಕೆಂದರೆ ಗ್ರಾಮವಿರಲಿ ಪಟ್ಟಣವಿರಲಿ ರಾಜಕಾರಣಿ ಮತ್ತು ಅವರ ಹಿಂಬಾಲಕರ ನಡೆ ಡಂಬಾಚಾರದಿಂದಲೇ ಕೂಡಿರುತ್ತದೆ. ಸುಳ್ಳು ವಿಜೃಂಭಿಸುತ್ತದೆ. ಸತ್ಯ ಸಮಯವನ್ನು ಎನ್ ಕ್ಯಾಷ್ ಮಾಡಿಕೊಳ್ಳುವುರಿಂದ ಆತನ ಜೇಬು ತುಂಬುತ್ತದೆ.

ಆದರೆ ಸತ್ಯನ ಅಸತ್ಯದಿಂದ ಆಪ್ತರು ಸಾಯುತ್ತಾರೆ. ಗ್ರಾಮದಲ್ಲಿ ಅಲ್ಲೋಲ ಕಲ್ಲೋಲ ಘಟನೆಗಳು ನಡೆಯುತ್ತವೆ.
ಹೀಗಿರುವಾಗ ಸತ್ಯ ಸಂಪೂರ್ಣ ಸತ್ಯವಂತನಾಗೇ ಪರಿವರ್ತನೆ ಹೊಂದಿದಾಗ ಆಗುವ ವೈಪರೀತ್ಯಗಳು ಏನು ಎಂಬುದು ಪ್ರಶ್ನೆಯಾದರೂ ಅದರಿಂದ ಎದುರಾಗುವ ತರ್ಕದಿಂದ ವಾಸ್ತವತೆ ಎದ್ದು ನಿಲ್ಲುತ್ತದೆ.

ಒಂದು ಹಂತದಲ್ಲಿ ಸತ್ಯ ಏಕಾಂಗಿಯಾದಾಗ, ಆತನ ಅನಾಥ ಪ್ರಜ್ಞೆಯೂ ಬಚ್ಚಿಕೊಳ್ಳುತ್ತದೆ. ಆಗ ಅಪ್ಪನ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಅದು ಕೆ.ಡಿ.ನಾಗಪ್ಪ ಅರ್ಥಾತ್‌ ವಜ್ರಮುನಿ.

ಕೋಮಲ್ ಕುಮಾರ್ ಅನಾಮಾತಾಗಿ ವಿಲನ್ ವಜ್ರಮುನಿ ಅವರನ್ನೇ ಆಹ್ವಾನಿಸಿ ಕೊಳ್ಳುತ್ತಾರೆ. ಜೊತೆಗೆ ಕಲೆಕ್ಷನ್ ಕಾಳಪ್ಪ ಬೇರೆ ಅಂದ ಮೇಲೆ ನಡೆಯಬಾರದ್ದೆಲ್ಲಾ ನಡೆಯುತ್ತದೆ. ಕೆಡುಕುತನಕ್ಕೆ ಬೇಕಾದ ಬೆಲೆಯೂ ದೊರೆಯುತ್ತದೆ‌.

‘ಎಲ್ಲರೂ ಗುಳೆ ಹೋದರೇ.. ಹಳ್ಳಿಗಳು ಅನಾಥರ ಆಶ್ರಮವೇ..’ ಎಂದು ಪ್ರಶ್ನಿಸುವ ಸತ್ಯನ ವರಸೆ ಸಾಮಾಜಿಕ ನೆಲೆಯಲ್ಲಿ ಇಂದಿನ ಗ್ರಾಮಗಳ ನೈಜ ಸ್ಥಿತಿಯನ್ನು ಬಿಂಬಿಸುವ ಕೈಗನ್ನಡಿಯಂತೆ ಕಾಣುತ್ತದೆ.

‘2900 ವಿಡಿಯೋ ಗಳು ಪ್ರಜ್ವಲಿಸುತ್ತವೆ..’ ಎಂದಾಗ ಕಣ್ಣಿಗೆ ಕಟ್ಟುವ ರಾಜಕೀಯ ಪರಿಸ್ಥಿತಿ ಹೀಗೆ ಚಿತ್ರದಲ್ಲಿ ಬರುವ ಪ್ರತಿ ಮಾತುಗಳು ಪ್ರತಿಮೆಯನ್ನು ಕಣ್ತುಂಬಿಕೊಡುತ್ತವೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಆ ಡೈಲಾಗ್ ಸುತ್ತ ಕೋಮಲ್ ಶ್ರಮ ಇರುತ್ತದೆ ಎಂಬುದನ್ನು ಬಲ್ಲವರು ಮಾತ್ರ ಬಲ್ಲರು.

ಸತ್ಯ ಹರಿಶ್ಚಂದ್ರ ಇಂದಿನ ವಾಸ್ತವ ಪ್ರಪಂಚದ ಕೈಗನ್ನಡಿ ಎಂದುಕೊಂಡರೆ, ಆತನ ಸುತ್ತಲೂ ಇರುವ ಗಡವ ಗುರು, ಮಾರಕ, ಬನಾನ ಜಯರಾಮ್, ಸುಗಂಧರಾಜು, ಸಣ್ಣಕ್ಕಿ, ಪೊಲೀಸ್ ಸಿಡಿಮಿಡಿ ಸಿಂಗ್ ಮತ್ತು ಇತರ ಪಾತ್ರಗಳು ನಮ್ಮ ಸುತ್ತ‌ಮತ್ತ ಇರುವವರೇ..

ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಕಂದಾಚಾರಗಳನ್ನು ವಿರೋಧಿಸುವ ಸತ್ಯ ಅಪ್ಪಟ ವಿಚಾರವಾದಿ ಮತ್ತು ವಾಸ್ತವವಾದಿ. ಆತ ನಮ್ಮ ನಡುವಿನ ವಾಸ್ತವದ ನೆಲೆ.

ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಕೋಮಲ್ ಕುಮಾರ್ ಅದನ್ನು ಹೆಗಲ ಮೇಲೆ ಹೊತ್ತಿದ್ದಾರೆ ಎಂದರೆ ತಪ್ಪಲ್ಲ. ಹಾಸ್ಯದ ಮ್ಯಾನರಿಸಂ ಜೊತೆಗೆ ಖಡಕ್ ವಿಲನ್ ಆಗಿಯೂ ಅಬ್ಬರ ಮಾಡಿರುವ ಅವರು ಅಪ್ರತಿಮ ನಟ ಎಂಬುದರಲ್ಲಿ ಸಂಶಯವೇ ಇಲ್ಲ.

ಅಕ್ಷರಾ ಪಾತ್ರಕ್ಕೆ ಮತ್ತಷ್ಟು ಅವಕಾಶಗಳು ಬೇಕಿತ್ತು. ನಿಸರ್ಗಾ ಅಪ್ಪಣ್ಣ, ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್, ಮಾನಸಿ ಸುಧೀರ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಕಲೆಕ್ಷನ್ ಕಾಳಪ್ಪ ಜಯಸಿಂಹ ಮುಸುರಿ, ಮಾರಕ ಪಾತ್ರಧಾರಿ ಮಯೂರ್ ಪಟೇಲ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಷ್ ವಿಶೇಷವಾಗಿ ಗಮನ ಸೆಳೆಯುತ್ತಾರೆ.

ರಘು ರಾಮನಕೊಪ್ಪ ,ಮಹಾಂತೇಶ್, ಬೌಬೌ ಜಯರಾಮ್ , ನಿರ್ಮಾಪಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ , ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್ ಪಾತ್ರಗಳು ಗಮನಾರ್ಹ.

ಹಾಲೇಶ್ ಭದ್ರಾವತಿ ಛಾಯಾಗ್ರಹಣ ಹಾಗೂ ಧರ್ಮವಿಶ್ ಸಂಗೀತ ಚಿತ್ರಕ್ಕೆ ಪೂರಕ.

ಸಂಪೂರ್ಣ ‌ಮನರಂಜನೆ ನೀಡುವ ಯಲಾಕುನ್ನಿ ಆಯಾ ಕಾಲಘಟ್ಟಗಳ ನೆಲೆಯಲ್ಲಿ ನಿಂತು ಚಿಂತನೆಗೆ ದೂಡುವ ಚಿತ್ರವಾಗಿಯೂ ನಿಲ್ಲುತ್ತದೆ.

Social Share :

ಮೂಕ ಜೀವ ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ಸ್ವಾರ್ಥ ಮನುಷ್ಯರ ವಿಕೃತ ಜಗತ್ತು

ಮನುಷ್ಯನ ಸ್ವಾರ್ಥಪರತೆ ಆಸೆಬುರುಕುತನ ವಂಚನೆ ಇವುಗಳಿಗೆ ಕೊನೆಯೇ ಇರುವುದಿಲ್ಲ. ನಾಗರಿಕತೆ ಹೆಚ್ಚು ಬೆಳೆದಂತೆ ಆತ ಕರುಣೆಯನ್ನೇ ಮರೆತ್ತಿದ್ದಾನೆ.

ಇಲ್ಲಿನ ಹುಡುಗ ಶ್ರೀಕಂಠ ಕಿವಿ ಕೇಳಿಸದ ಮಾತು ಬಾರದ ಚೈತನ್ಯ. ಆತನ ಪ್ರೀತಿ ಭಾವುಕತೆ ಪ್ರಾಣಿಗಳ ಜೊತೆ. ಮನುಷ್ಯ ಇಲ್ಲಿ ಕಠೋರ.

ಜನರು ತಮ್ಮ ಅನೈತಿಕ ವ್ಯವಹಾರಗಳನ್ನು ಗುಟ್ಟಾಗಿ ಇಡುವುದು ಸಾಮಾನ್ಯ. ಸಮಯ ಬಂದರೆ ಅದನ್ನು ಅಮಾಯಕರ ಹೇರುವ ದುಷ್ಟ ಮನಸ್ಸು ಅವರಿಗಿರುತ್ತದೆ.

ಕಚ್ಚೆ ಹರುಕ ಪೂಜಾರಿ ತನ್ನ ತಪ್ಪನ್ನೆಲ್ಲಾ ಚೈತನ್ಯ ಶ್ರೀಕಂಠನ ಮೇಲೆ ಹೇರುವುದರಿಂದ ಆ ಹುಡುಗ ಕಷ್ಟದ ಕಾಠಿಣ್ಯಕ್ಕೆ ಸಿಲುಕುತ್ತಾನೆ. ಆಸರೆಯಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಅಮ್ಮನ ಸಾವು; ಆತ ಊರು ಬಿಡಬೇಕಾದ ಸಂದರ್ಭ ಎಲ್ಲವೂ ಮನ ಮಿಡಿಯುತ್ತದೆ.

ಪಟ್ಟಣಕ್ಕೆ ಬಂದ ನಂತರ ಜನರ ವರ್ತನೆ ಮತ್ತು ಅಮಾಯಕತೆಯಿಂದ ಆತ ಅನಾಥ ಭಾವ ಅನುಭವಿಸುವುದು ಸ್ವಂತ ಭಾವನೇ ಆತನನ್ನು ದೂರ ಮಾಡುವ ಸಂಚು ಹೂಡುವುದು. ಕೊನೆಗೆ ಹೃದಯವಂತ ಇನ್ಸ್ ಪೆಕ್ಟರ್ ಕಾರಣದಿಂದ ಒಂದು ಗುರಿಯನ್ನು ಮುಟ್ಟುವುದು ಅಚ್ಚರಿ.

ಜೆ.ಎಂ.ಪ್ಲಹಾದ್ ಅವರ ಕಥೆಯನ್ನು ಚಿತ್ರವಾಗಿಸಲು ನಟ ಶ್ರೀನಾಥ್ ವಸಿಷ್ಠ
ಅವರ ಮಿತಿಯಲ್ಲಿ ಪ್ರಯತ್ನ ಪಟ್ಟಿದ್ದಾರೆ. ಮನೋಜ್ಞ ಕಥೆಗೆ ಹಳೆಯ ನಿರೂಪಣಾ ವಿಧಾನವನ್ನೇ ಬಳಸಿದ್ದಾರೆ.

ಹೊಸತನಕ್ಕೆ ತೆರೆದುಕೊಂಡು ಮತ್ತಷ್ಟು ಚೆನ್ನಾಗಿ ಕಥೆ ಹೇಳಬಹುದಿತ್ತು ಎಂಬ ಅಭಿಪ್ರಾಯ ಪ್ರೇಕ್ಷಕನಲ್ಲಿ ಮೂಡಿ ಬಂದರೆ ಅದು ಅವರ ತಪ್ಪಲ್ಲ.

ಮುಖ್ಯ ಪಾತ್ರದಲ್ಲಿರುವ ಶ್ರೀಹರ್ಷ, ಕಾರ್ತಿಕ್ ಮಹೇಶ್, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಜನರ ಕೆಡುಕು ನಡೆಯ ಮೇಲೆ ಬೆಳಕು ಚೆಲ್ಲುತ್ತಲೇ ಮಾನವೀಯ ನೆಲೆಯಲ್ಲಿ ಚಿಂತನೆ ಅಗತ್ಯ ಎಂಬುದನ್ನು ಚಿತ್ರವು ಪ್ರತಿಪಾದಿಸುತ್ತದೆ.

ವಿಕಲ ಚೇತನರು ಮನಸ್ಸು ಮಾಡಿದರೆ ಮತ್ತು ಅವರಿಗೆ ಅಗತ್ಯ ಪ್ರೋತ್ಸಾಹ ದೊರೆತರೆ ಎಂತಹ ದೊಡ್ಡ ಸಾಧನೆಯನ್ನು ಕೂಡ ಮಾಡಬಲ್ಲರು ಎಂಬ ಸಂದೇಶ ಸಾರುವ ಚಿತ್ರವಾಗಿ ಇದು ನಿಲ್ಲುತ್ತದೆ.

Social Share :

ಚೈತನ್ಯ ಹುಡುಗನ ಕಥೆ ಮೂಕ ಜೀವ ಈ ವಾರ ತೆರೆಗೆ

Social Share :


ಕಿವಿ ಕೇಳದ ಮಾತು ಬಾರದ ಹುಡುಗನೊಬ್ಬನ ಯಾತನಾಮಯ ಕ್ಷಣಗಳನ್ನು ವಿವರಿಸುವ ‘ಮೂಕ ಜೀವ’ ಈ ವಾರ ತೆರೆ ಕಾಣುತ್ತಿದೆ.

ಜೆ.ಎಂ.ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ‘ಮೂಕ ಜೀವ’ ಚಿತ್ರವನ್ನು ಕಿರುತೆರೆ ನಟ ಶ್ರೀನಾಥ್ ವಸಿಷ್ಠ ನಿರ್ದೇಶಿಸಿದ್ದಾರೆ.

ಬಡ ಕುಟುಂಬದ ಅಮಾಯಕ ಹುಡುಗ ಹಳ್ಳಿಯಲ್ಲಿ ನಲುಗುತ್ತಾನೆ ಮತ್ತು ಪಟ್ಟಣದಲ್ಲಿ ಸೊರಗುತ್ತಾನೆ. ಈ ವ್ಯವಸ್ಥೆ ಮತ್ತು ಬೇಜವಾಬ್ದಾರಿ ಜನರ ನಡುವೆ ಹೇಗೆ ನಜ್ಜು ಗುಜ್ಜಾಗುತ್ತಾನೆ ಮತ್ತು ಹಾಗೆಯೇ ಪುಟಿದೇಳುತ್ತಾನೆ ಎಂಬುದು ಕಥೆ.

ಎಂ.ವೆಂಕಟೇಶ ಮತ್ತು ಮಂಜುಳಾ ಈ ಚಿತ್ರದ ನಿರ್ಮಾಪಕರು. ಎ.ವಿ.ಎಮ್ ಎಂಟರ್ ಟೈನರ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದಾರೆ.

ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Social Share :

ಕೋಮಲ್ ಮೊಗದಲ್ಲಿ ವಜ್ರಮುನಿ ಯಲಾಕುನ್ನಿ ಈ ವಾರ ತೆರೆಗೆ..

Social Share :


* ಅಕ್ಟೋಬರ್ 25ಕ್ಕೆ ಬಿಡುಗಡೆ *

* ವಜ್ರಮುನಿ ಗೆಟಪ್ ನಲ್ಲಿ ಕೋಮಲ್ *

ಪ್ರತಿ ಚಿತ್ರದಲ್ಲಿಯೂ ವಿಶೇಷತೆ ಕಾಯ್ದುಕೊಳ್ಳುವ ನಟ ಕೋಮಲ್ ಕುಮಾರ್ ಈಗ ಹೊಸ ಪರಕಾಯ ಪ್ರವೇಶ ಮಾಡಿದ್ದಾರೆ.

ಕನ್ನಡದ ಖ್ಯಾತ ಖಳನಟ ದಿವಂಗತ ವಜ್ರಮುನಿ ಅವರ ವರಸೆಗಳನ್ನು ಮುಖ ಚಹರೆ ಹಾಗೂ ದೇಹಭಾಷೆಗಳಲ್ಲಿ ಅಳವಡಿಸಿಕೊಂಡ ರೂಪಾಂತರದಲ್ಲಿ ಕೋಮಲ್ ಥೇಟ್ ವಜ್ರಮುನಿ ಅವರೇ..

ಹಾಗಾಗಿ ‘ಯಲಾಕುನ್ನಿ’ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಹಾಗೆಯೇ ಕೋಮಲ್ ಅವರ ಈ ಹೊಸ ಅವತಾರಕ್ಕೆ ಸ್ಯಾಂಡಲ್ ವುಡ್ ಬೆಚ್ಚಿ ಬಿದ್ದಿದೆ.

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್ ಹಾಗೂ ಸಹನ ಮೂರ್ತಿ ನಿರ್ಮಿಸಿರುವ ಚಿತ್ರವನ್ನು ಎನ್.ಆರ್.ಪ್ರದೀಪ್ ನಿರ್ದೇಶನ ಮಾಡಿದ್ದಾರೆ.

ವಜ್ರಮುನಿ ಅವರ ಗೆಟಪ್ ಹಾಕಿ ಕನ್ನಡಿ ಮುಂದೆ ನಿಂತಾಗ ನಾನೇ ಬೆಚ್ಚಿ ಬಿದ್ದೆ. ಅವರ ಕಾಮಿಡಿ ವರಸೆಗಳು ಬಿದ್ದು ಬಿದ್ದು ನಗಿಸುತ್ತವೆ. ಕೋಮಲ್ ಜೊತೆಗೆ ಮುಸೂರಿ ಕೃಷ್ಣಮೂರ್ತಿ ಅವರ ಪುತ್ರ ಜಯಸಿಂಹ ಮುಸೂರಿ ಕಲೆಕ್ಷನ್ ಕಾಳಪ್ಪ ವೇಷ ಹಾಕಿರುವುದರಿಂದ ಪ್ರೇಕ್ಷಕ ನಗೆಯಲ್ಲಿ ತೇಲಬಹುದು..

ಕೋಮಲ್ ಕುಮಾರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ‌. ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರ ಪಡೆ ಇದೆ.

ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್, ಮಾನಸಿ ಸುಧೀರ್(ಕಾಂತಾರ) ಹಾಗೂ ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ , ರಘು ರಾಮನಕೊಪ್ಪ ,ಮಹಾಂತೇಶ್, ಬೌಬೌ ಜಯರಾಮ್ , ನಿರ್ಮಾಪಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ , ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ತಾರಾಬಳಗವಿದೆ.

ಕೋಮಲ್ ಜೋಡಿಯಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ.

ವಿಶೇಷವಾಗಿ ವಜ್ರಮುನಿಯವರ ಮೊಮ್ಮೊಗ ಆಕರ್ಷ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಮಯೂರ್ ಪಟೇಲ್ ಖಳ ನಾಯಕನಾಗಿ ನಟಿಸಿದ್ದಾರೆ.

ಸಂಪೂರ್ಣ ಗ್ರಾಮೀಣ ಸೊಗಡಿನಲ್ಲಿ ಮೂಡಿಬಂದಿರುವ ‘ಯಲಾಕುನ್ನಿ’ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ದೀಪು ಎಸ್ ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಛಾಯಾಗ್ರಹಣ, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ.

Social Share :

ಸಂಪೂರ್ಣ ಅಭಿನಯ ಕಲೆಗೆ ಕಲಾತ್ಮಕ ಫಿಲಂ‌ ಅಕಾಡೆಮಿ..

Social Share :

ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಯಾವುದೇ ವೇದಿಕೆಯಲ್ಲಿ ಅಭಿನಯ ಕಲೆಯ ಪರಿಪೂರ್ಣತೆ ಸಾಧಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಬೆಂಗಳೂರಿನಲ್ಲಿ ‘ಕಲಾತ್ಮಕ ಫಿಲಂ ಅಕಾಡೆಮಿ’ ಅಸ್ತಿತ್ವ ಪಡೆದಿದೆ.

ರಿಲೈಫ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನೆರವಿನ ಕಲಾತ್ಮಕ ಫಿಲಂ- ಸ್ಟೇಜ್ ಅಕಾಡೆಮಿಯು ಈಚೆಗೆ (ಅಕ್ಟೋಬರ್ 5 ಹಾಗೂ 6ರಂದು‌) ಎರಡು ದಿನಗಳ ಅಲ್ಪಾವಧಿಯ ಅಭಿನಯ ಕಾರ್ಯಗಾರವನ್ನು ಹಮ್ಮಿಕೊಂಡು ಆಸಕ್ತರಿಗೆ ತರಬೇತಿ ನೀಡಿದೆ.

ಬೆಂಗಳೂರಿನ ಕೆಂಗೇರಿಯ ಕೊಮ್ಮಘಟ್ಟ ಚತುರ್ಥಿ ಫಾರ್ಮ್ಸ್ ನಲ್ಲಿ ನಡೆದ ಕಾರ್ಯಗಾರದಲ್ಲಿ ರಂಗಭೂಮಿ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯ ಹಾಗೂ ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡುವ ಕುರಿತು ಈ ಕಾರ್ಯಾಗಾರ ಬೆಳಕು ಚೆಲ್ಲಿತು.

ಹಿರಿಯ ನಟ ಕ.ಸುಚೇಂದ್ರ ಪ್ರಸಾದ್ ಅವರು ಕಲಾತ್ಮಕ ಫಿಲಂ-ಸ್ಟೇಜ್ ಅಕಾಡೆಮಿಯ ದಿಗ್ದರ್ಶಕರಾಗಿದ್ದು, ನಟನೆ ಕಲಿಸಲಾಗದ ವಿದ್ಯೆ ಎಂಬುದರ ಅರಿವು ಮೂಡಿಸುವುದರ ಜೊತೆಗೆ ಅಭಿನಯದಲ್ಲಿ ಶಾಸ್ತ್ರೀಯ ಕಲಿಕೆ ಬಗ್ಗೆ ಎರಡು ದಿನದ ಕಾರ್ಯಗಾರವನ್ನು ನಡೆಸಿಕೊಟ್ಟರು.

ಎರಡು ದಿನದ ಈ ಅಭಿನಯ ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಚಿತ್ರರಂಗದ ಹಿರಿಯ ನಿರ್ಮಾಪಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡರು ಹಾಗೂ ಹಿರಿಯ ಕಲಾವಿದ ಶರತ್ ಲೋಹಿತಾಶ್ವ ಭಾಗವಹಿಸಿದ್ದರು.

ಅಲ್ಲದೆ ನಿರ್ದೇಶಕ‌ ಯೋಗರಾಜ ಭಟ್, ಪಿ.ಶೇಷಾದ್ರಿ, ಚೇತನ್ ಕುಮಾರ್, ಉಮೇಶಣ್ಣ, ಗಿರಿಜಾ ಲೋಕೇಶ್, ಹಿರಿಯ ಕಲಾವಿದ ದತ್ತಣ್ಣ ಮೊದಲಾದವರು ಸಂಸ್ಥೆಗೆ ಶುಭ ಕೋರಿದ್ದಾರೆ.

ಅಕಾಡೆಮಿಯ ಕಾರ್ಯಕಾರಿ ಅಭಿಯೋಜಕರಾದ ನಂದೀಶ್ ಹಾಗೂ ಸಂಸ್ಥಾಪಕ ಮಂಡಳಿಯ ಗಿರೀಶ್ ಪ್ರಾಣೇಶ್ ಕಲಾತ್ಮಕ ಫಿಲಂ- ಸ್ಟೇಜ್ ಅಕಾಡೆಮಿಯ ಮೂಲ ಆಶಯಗಳ ಹಾಗೂ ಕಾರ್ಯಗಾರದ ಕುರಿತು ಮಾತನಾಡಿದರು.

ಸಿನಿಮಾ ಹಾಗೂ ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಕಲಿಯುವ ಆಸಕ್ತಿಯುಳ್ಳವರು ಸಂಸ್ಥೆಯನ್ನು ಸಂಪರ್ಕಿಸಬಹುದು. ಆಸಕ್ತಿಯುಳ್ಳವರು ವಾರಾಂತ್ಯ, ವಾರದ ತರಗತಿಗಳಿಗೆ ನೋಂದಣಿ ಮಾಡಿಸಿ, ಹಾಜರಾಗಬಹುದು. ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕವೂ ಭೇಟಿ ಮಾಡಬಹುದು ಅಥವಾ ಈ ಮೊಬೈಲ್ ಸಂಖ್ಯೆ
9342975757 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Social Share :

ರೌಡಿಸಂ ಕರಾಳ ದಂಧೆಯ ಅನಾವರಣ ಮೆಜೆಸ್ಟಿಕ್-2

Social Share :


*126 ದಿನಗಳ ಚಿತ್ರೀಕರಣ *

* ಮಾಲಾಶ್ರೀ ನೃತ್ಯಾಭಿನಯ *

* ಡಿಸೆಂಬರ್ 26ಕ್ಕೆ ಬಿಡುಗಡೆ *

ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಸುತ್ತ ಮುತ್ತ ನಡೆಯುವ ಅನೈತಿಕ ಹಾಗೂ ಅಕ್ರಮ ದಂಧೆಗಳು ಮತ್ತು ರೌಡಿಸಂ ಕರಾಳ ಮುಖ ಅನಾವರಣಗೊಳಿಸುವ ‘ಮೆಜೆಸ್ಟಿಕ್-2’ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ.

90ರ ದಶಕದಲ್ಲಿ ರೌಡಿಸಂ ಹೇಗಿತ್ತು ಎಂಬುದನ್ನು ದರ್ಶನ್ ಪರಿಚಯಾತ್ಮಕ ಚಿತ್ರ ‘ಮೆಜೆಸ್ಟಿಕ್’ ನಲ್ಲಿ ತೋರಿಸಲಾಗಿತ್ತು. ಈಗಿನ ಮೆಜೆಸ್ಟಿಕ್ ಪ್ರದೇಶ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು ಹಾಗೆಯೇ ರೌಡಿಸಂ ಹೇಗೆ ನಡೆಯುತ್ತದೆ ಎಂಬುದರ ಮೇಲೆ ‘ಮೆಜೆಸ್ಟಿಕ್- 2’ ರೂಪುಗೊಂಡಿದೆ ಎಂಬುದನ್ನು ವಿವರಿಸಿತು ಚಿತ್ರತಂಡ.

ಮೋಷನ್ ಪೋಸ್ಟರ್ ಬಿಡುಗಡೆಯ ಹೊತ್ತಿಗೆ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ನಿರ್ಮಾಣದ ಈ ಚಿತ್ರಕ್ಕೆ ರಾಮು ನಿರ್ದೇಶಕ.

ಹೆಸರಾಂತ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಮುಖ್ಯ ಪಾತ್ರದಲ್ಲಿರುವ ಚಿತ್ರವು ಮೆಜೆಸ್ಟಿಕ್ ಎಂಬ ನಿಗೂಢ ಜಗತ್ತಿನಲ್ಲಿ ನಡೆಯುವ ಅನೇಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಲಿದೆ.

ಏಕೆಂದರೆ ಇದು ಅಲ್ಲಿಯೇ ಹುಟ್ಟಿ ಬೆಳೆದ ಆದರ್ಶ ಯುವಕನೊಬ್ಬನ ಕಥೆ. ಹಾಗಾಗಿ ಬೆಂಗಳೂರಿನಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ ಎಂಬ ವಿವರ ನೀಡಿತು ಚಿತ್ರತಂಡ.

ಅಲ್ಲದೆ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಆಕ್ಷನ್ ಕ್ವೀನ್ ಮಾಲಾಶ್ರೀ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭರತ್ ಅವರನ್ನು ಪರಿಚಯಿಸುವ ಹಾಡಿನಲ್ಲಿ ಮಾಲಾಶ್ರೀ ಪಾಲ್ಗೊಂಡಿದ್ದು ವಿಶೇಷ ಎಂದು ಚಿತ್ರತಂಡ ಸಂಭ್ರಮಿಸಿತು. ಜೊತೆಗೆ ತ್ರಿಭುವನ್ ನೃತ್ಯ ನಿರ್ದೇಶನದಲ್ಲಿ ನೂರಾರು ನೃತ್ಯ ಕಲಾವಿದರು ಈ ಹಾಡಿನಲ್ಲಿ ಭಾಗವಹಿಸಿರುವುದು ವಿಶೇಷ.

ಕಳೆದ ಮಾರ್ಚ್ 31ಕ್ಕೆ ಚಿತ್ರೀಕರಣ
ಆರಂಭಿಸಿ 121 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ
ಹಾಗೂ ಮರುಘಾ ಮಠದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರ ಕೊಟ್ಟರು ನಿರ್ಮಾಪಕ ಎಚ್.ಆನಂದಪ್ಪ.

ಭರತ್ ಅವರೊಂದಿಗೆ ಸಂಹಿತಾ ವಿನ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು
ಡಿಸೆಂಬರ್ 26ರಂದು ಬಿಡುಗಡೆ ಮಾಡುವ ಯೋಜನೆ ಇದೆ ಎಂಬ ವಿವರ ನೀಡಿತು ಚಿತ್ರತಂಡ.

ಛಾಯಾಗ್ರಾಹಕ ವೀನಸ್ ಮೂರ್ತಿ, ಸಹ ನಿರ್ದೇಶಕ ವಿಜಯಕುಮಾರ್ ಹಾಜರಿದ್ದರು. ಹಿರಿಯ ನಟಿ ಶೃತಿ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ವಿನು ಮನಸು ಸಂಗೀತ ಚಿತ್ರಕ್ಕಿದೆ.

ದರ್ಶನ್ ಅಭಿನಯದ ಮೆಜೆಸ್ಟಿಕ್ ನಲ್ಲಿ 90 ರ ದಶಕದ ರೌಡಿಸಂ ಕಥೆ ಇದ್ದರೆ, ಮೆಜೆಸ್ಟಿಕ್-2 ಈಗಿನ ಸಂದರ್ಭದ ಕರಾಳ ದಂಧೆಗಳು ಏನು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ ಎಂಬುದು ಚಿತ್ರತಂಡ ನೀಡುವ ವಿವರ.

ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂಬುದು ಹೆಚ್ಚಿನ ವಿವರ.

Social Share :

ಕೋಮಲ್ ಮತ್ತೆ ನಗೆಯ ಕಮಾಲ್ ಯಲಾಕುನ್ನಿ ಅ.25ರಂದು ತೆರೆಗೆ..

Social Share :


* ಕನ್ನಡಿ ನೋಡಿ ಬೆಚ್ಚಿ ಬಿದ್ದರು *

* ಜಗ್ಗೇಶ್ ಸ್ಟುಡಿಯೋದಲ್ಲಿ ಡಿಐ *

* ವಜ್ರಮುನಿ ಮೊಮ್ಮಗ ನಟನೆ *

ಸ್ಯಾಂಡಲ್ ವುಡ್ ನಗೆ ಸ್ಟಾರ್ ಕೋಮಲ್ ಕುಮಾರ್ ಮತ್ತೆ ಪುಟಿದೆದ್ದಿದ್ದಾರೆ. ಮೇಲಿಂದ ಮೇಲೆ ಅವರ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ಇದೇ ವಾರ ಅವರ ‘ಯಲಾ ಕುನ್ನಿ’ ತೆರೆಗೆ ಬರುತ್ತಿದೆ.

ತೆರೆಯ ಮೇಲೆ ನಟ ಭಯಂಕರ ವಜ್ರಮುನಿ ಅವರ ಗೆಟಪ್ ನಲ್ಲಿ ಕೋಮಲ್ ಕುಮಾರ್ ಕಾಣಿಸಿಕೊಂಡಿದ್ದು, ಅವರ ವೇಷದ ಸಾಮ್ಯತೆಗೆ ಸ್ಯಾಂಡಲ್ ವುಡ್ ಕೂಡ ಬೆಚ್ಚಿ ಬಿದ್ದಿದೆ.

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್ ಹಾಗೂ ಸಹನ ಮೂರ್ತಿ ನಿರ್ಮಿಸಿರುವ ಚಿತ್ರವನ್ನು ಎನ್.ಆರ್.ಪ್ರದೀಪ್ ನಿರ್ದೇಶಿಸಿದ್ದಾರೆ.

ಈಚೆಗೆ ನಡೆದ ಚಿತ್ರದ ಪ್ರಚಾರ ಸಭೆಯಲ್ಲಿ ಇಡೀ ಚಿತ್ರತಂಡ ಪಾಲ್ಗೊಂಡು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿತು.

ನಿರ್ದೇಶಕ ಪ್ರದೀಪ್ ಅವರು ಕಥೆ ಹೇಳಿದಾಗ; ವಜ್ರಮುನಿ ಅವರ ಪಾತ್ರ ಮಾಡುವುದು ಕಷ್ಟವೆನಿಸಿತು. ಆದರೆ ವೇಷ ಹಾಕಿ ಕನ್ನಡಿಯ ಮುಂದೆ ನಿಂತಾಗ ನಾನು ಕಾಣಲೇ ಇಲ್ಲ. ಬದಲಿಗೆ ಅಲ್ಲಿ ಕಂಡಿದ್ದು ‘ನಟ ಭಯಂಕರ ವಜ್ರಮುನಿ’ ಎಂದರು ಕೋಮಲ್ ಕುಮಾರ್.

ವಜ್ರಮುನಿ ಅವರ ಮ್ಯಾನರಿಜಂ ನಿರ್ವಹಿಸುವುದು ಸುಲಭವೇ ಅಲ್ಲ. ಇದು ನನಗೆ ನಾನೇ ತೆಗೆದುಕೊಂಡಿರುವ ಕಠಿಣ ಸವಾಲು ಎಂದರು.

ಕೋಮಲ್ ಜೋಡಿಯಾಗಿ ನಿಸರ್ಗ ಅಪ್ಪಣ್ಣ ನಟಿಸಿದ್ದು, ಜಗ್ಗೇಶ್ ಅವರ ಪುತ್ರ ಯತಿರಾಜ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣ, ಮಿತ್ರ, ತಬಲ ನಾಣಿ, ಶಿವರಾಜ್ ಕೆ.ಆರ್ ಪೇಟೆ, ಮಾನಸಿ ಸುಧೀರ್, ಸುಮನ್ ನಗರಕರ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಧರ್ಮವಿಶ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದೆ.

ಅನುಸೂಯಾ ಕೋಮಲ್ ಕುಮಾರ್ ಹಾಗೂ ಸಹನಾ‌ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಸಹನಾ ಮೂರ್ತಿ ಕೂಡ ಗಮನಾರ್ಹ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ.

ಜಗ್ಗೇಶ್ ಅವರ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್, ಡಿಐ ಹಾಗೂ ಇತರ ಕಾರ್ಯಗಳು ನಡೆದಿವೆ. ಪ್ರತಿಯೊಬ್ಬರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ಹೇಳುತ್ತಾ ಹೋದರು ಕೋಮಲ್ ಕುಮಾರ್.

Social Share :

ಸಿಂಹ ರೂಪಿಣಿ ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ನಿರ್ಮಾಣ : ಕೆ.ಎಂ.ನಂಜುಂಡೇಶ್ವರ

ನಿರ್ದೇಶನ : ಕಿನ್ನಾಳ್ ರಾಜ್

ದುರಾಸೆ ಸದೆ ಬಡಿಯುವ ದೈವ

ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲ; ದೈವದ ಸನ್ನಿಧಿಯಲ್ಲಿಯೂ ವಂಚನೆಯ ಚಮತ್ಕಾರಗಳನ್ನು ನಡೆಸುವವನು ಮನುಷ್ಯ. ಅಂತಹ ದುಷ್ಟರನ್ನು ಸದೆ ಬಡಿಯಲು ಪಾರ್ವತಿ ದೇವಿಯು ಎತ್ತುವ ಅವತಾರದ ಕಥೆ ಇದು..

ಮಹಾಲಕ್ಷ್ಮಿ ರೂಪದ ಪಾರ್ವತಿ ದೇವಿಯು ಮಾರಮ್ಮನ ಅವತಾರ ಎತ್ತುವುದು ಏಕೆ ಎಂಬುದರ ವಿವರಣೆಯಲ್ಲಿ ಕಾಣುವ ಭಕ್ತಿ ಪ್ರಾಧಾನ್ಯ ನಿಲುವು ಪ್ರೇಕ್ಷಕನಲ್ಲಿ ಅತೀವ ಭಕ್ತಿ ಮೂಡುವಂತಾದರೆ ಅದು ನಿರೂಪಣೆಯ ಜಾಣ್ಮೆ.

ಕೋಣದ ಕಥೆಯಲ್ಲಿ ಸಿಂಹರೂಪಿಣಿ ಆರ್ಭಟ ಹೇಗೆಲ್ಲಾ ವಿಸ್ತಾರ ರೂಪ ಪಡೆಯುತ್ತಾ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟು ಹಾಕುತ್ತದೆ ಎಂಬುದು ಅಚ್ಚರಿ.

ದೈವದ ಸನ್ನಿಧಿಯಲ್ಲಿಯೂ ವಂಚನೆ ರೂಢಿಸಿಕೊಂಡ ಪೂಜಾರಿ ಮಹಾಬಲ; ಒಳ್ಳೆಯತನದ ಪ್ರತೀಕವಾದ ಸೂರ್ಯ ಮತ್ತು ಆತ ಪ್ರೇಮಿಸುವ ಸಿಂಧು ಮತ್ತು ದೇವಿ ವಲಸೆ ಬರುವ ಯರಪ್ಪನಹಳ್ಳಿ ಎಂಬ ಗ್ರಾಮ ಮನುಷ್ಯರ ರಾಜಕೀಯ ನೆಲೆಯಾಗುವ ಪರಿ ಇಂದಿನ ವಾಸ್ತವ ನೆಲೆಯ ಚಿತ್ರಣಗಳು.

ಗ್ರಾಮದಲ್ಲಿ ಸಾಂಪ್ರದಾಯಿಕ ಅಂಶಗಳು ವೈಭವದ ರೂಪದಲ್ಲಿ ಕಾಣುವುದರಿಂದ ಅದು ಕಣ್ಣಿಗೆ ಹಬ್ಬ. ದುಷ್ಟರ ನಡುವೆ ಉತ್ತಮರು ಇದ್ದಾರೆ ಎಂಬುದಕ್ಕೆ ಒಳ್ಳೆಯ ಪೂಜಾರಿ ಉದಾಹರಣೆ.

ಕೋಣವನ್ನು ಮಾರಮ್ಮನಿಗೆ ಬಲಿ ಕೊಡುವ ಕಾರಣವನ್ನು ಸಕಾರಾತ್ಮಕ ರೀತಿಯಲ್ಲಿ ವಿವರಿಸಲಾಗುತ್ತದೆ. ಕೊನೆಗೆ ದೇವಿಯೇ ದುಷ್ಟರನ್ನು ಸದೆ ಬಡಿದು ಶಿಷ್ಯರನ್ನು ರಕ್ಷಿಸುವ ಮಾಮೂಲಿ ವರಸೆಯೂ ಪ್ರಾಧಾನ್ಯತೆ ಪಡೆಯುತ್ತದೆ.

ಕೆ.ಜಿ.ಎಫ್ ಚಿತ್ರದಲ್ಲಿ ತಾಯಿಯ ಭಾವನಾತ್ಮಕ ಹಾಡು ಬರೆದು ಹೆಸರಾದ ಕಿನ್ನಾಳ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಕೆ.ಜಿ.ಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೆಲವು ಸನ್ನಿವೇಶದಲ್ಲಿ ಕಾಣಿಸಿಕೊಂಡರೆ, ಅವರ ಮಗಳು ಖುಷಿ ಬಸ್ರೀರ್ ಬಾಲ ದೇವಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಸಾಗರ್ ಬಿ.ಆರ್ ಹಾಗೂ ನಿರೂಪಕಿ ಅಂಕಿತಾ ಗೌಡ ಕಾಣಿಸಿಕೊಂಡಿದ್ದು, ಮಾರಮ್ಮನಾಗಿ ಯಶಸ್ವಿನಿ ಸುಬ್ಬೇಗೌಡ ಗಮನ ಸೆಳೆಯುತ್ತಾರೆ. ನಟ ಸುಮನ್ ವಿಲನ್ ಮಾದರಿಯಲ್ಲಿ ಬಂದು ಹೋಗುತ್ತಾರೆ. ಒಳ್ಳೆಯ ಪೂಜಾರಿಯಾಗಿ ಹರೀಶ್ ರಾಯ್ ಇನ್ನುಳಿದಂತೆ ದಿನೇಶ್ ಮಂಗಳೂರು, ದಿವ್ಯ ಆಲೂರು, ತಬಲನಾಣಿ, ವಿಜಯ್ ಚೆಂಡೂರ್, ಯಶ್ ಶೆಟ್ಟಿ, ನಿನಾಸಂ ಅಶ್ವಥ್, ಆರವ್ ಲೋಹಿತ್ ಮೊದಲಾದವರ ನಟನೆ ಚಿತ್ರಕ್ಕೆ ಮೆರುಗು.

ಕಿರಣ್ ಕುಮಾರ್ ಛಾಯಾಗ್ರಹಣ ಹಾಗೂ ಆಕಾಶ್ ಪರ್ವ ಸಂಗೀತ ಚಿತ್ರದ ಸೊಗಸುಗಾರಿಕೆ ಹೆಚ್ಚಿಸಿದೆ ಎಂದರೆ ತಪ್ಪಲ್ಲ..

Social Share :