ಅಮರ್ ಚಿತ್ರದ ಬಳಿಕ ಅಭಿಷೇಕ್ ಅಂಬರೀಷ್ ಯಾವ ಯಾವ ಚಿತ್ರ ಮಾಡುತ್ತಿದ್ದಾರೆ ಎಂಬುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ..
ಹೌದು ಈ ಮರಿ ರೆಬೆಲ್ ಸ್ಟಾರ್ ಈಗ ಐತಿಹಾಸಿಕ ಅದ್ದೂರಿ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ‘ಅಯೋಗ್ಯ’, ‘ಮದಗಜ’ದಂತಹ ಚಿತ್ರ ಮಾಡಿದ ಮಹೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಧೀರಾ ರಾಕ್ ಲೈನ್ ವೆಂಕಟೇಶ್ ಅದ್ದೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಅಂದ ಹಾಗೆ ಜನಪ್ರಿಯ ನಟಿ, ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬದ ದಿನವಾದ ಆಗಸ್ಟ್ 27ರ ಶನಿವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದ ರೆಬೆಲ್ ಸ್ಟಾರ್ ಅಂಬರೀಷ್ ಸಮಾಧಿ ಸ್ಥಳದಲ್ಲಿ ಅಭಿಷೇಕ್ ಅಂಬರೀಷ್ ಅವರ ಹೊಸ ಚಿತ್ರದ ಮುಹೂರ್ತ ನಡೆದಿದೆ.
ಇದೊಂದು ಐತಿಹಾಸಿಕ ಚಿತ್ರ. ಯಾರೂ ಕಂಡರಿಯದ ಅದ್ದೂರಿತನ ಇರುತ್ತದೆ. ನಿಜವಾಗಿ ರೆಬೆಲ್ ಅಂದ್ರೆ ಏನು ಎಂಬುದಕ್ಕೆ ಉತ್ತರ ಸಿಗುತ್ತದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿಕೊಂಡಿದ್ದಾರೆ.
ಈಗಾಗಲೇ ಸರಣಿ ಮಾದರಿಯಲ್ಲಿ ಚಿತ್ರಗಳನ್ನು ಘೋಷಣೆ ಮಾಡಿರುವ ರಾಕ್ ಲೈನ್ ವೆಂಕಟೇಶ್ ಅವರ ಆ ಸರಣಿಯ ಮೂರನೇ ಚಿತ್ರ ಇದು. ಯೋಗರಾಜ್ ಭಟ್, ಶಿವಣ್ಣ, ಪ್ರಭುದೇವ ಅವರ ಹೊಸ ಚಿತ್ರ, ದರ್ಶನ್ ಅವರ ಹೊಸ ಚಿತ್ರ ಸೇರಿದಂತೆ ಈ ಚಿತ್ರ ಏಕಕಾಲಕ್ಕೆ ಚಿತ್ರೀಕರಣ ನಡೆಯುವ ಮೂರನೇ ಚಿತ್ರವಾಗಿದ್ದು, ಇದಕ್ಕೆ ಇನ್ನೂ ಹೆಸರಿಡಲಾಗಿಲ್ಲ.
ಇದು ನೋಡುವುದಕ್ಕೆ (ಪೋಸ್ಟರ್) ಅಲೆಕ್ಸಾಂಡರ್ ಮಾದರಿಯ ಕಥೆ ಎಂಬುದು ಎದ್ದು ಕಾಣುತ್ತದೆ. ಆದರೆ ಯಾವ ರೀತಿಯ ಚಿತ್ರ ಅಥವಾ ಕಥೆ ಎಂಬುದರ ಗುಟ್ಟು ಬಿಡಲಾಗಿಲ್ಲ..
ಒಂದು ಐತಿಹಾಸಿಕ ಕಥೆ ನಾವು ಮಾಡುತ್ತಿದ್ದೇವೆ ಎಂಬ ಉತ್ತರ ರಾಕ್ ಲೈನ್ ವೆಂಕಟೇಶ್ ಹಾಗೂ ಮಹೇಶ್ ಕುಮಾರ್ ಇಬ್ಬರಿಂದಲೂ ಬಂತು..
ಕಂಠೀರವ ಸ್ಟುಡಿಯೋ ಆವರಣದಲ್ಲಿ ಕೇಕ್ ಕತ್ತರಿಸಿ ಸುಮಲತಾ ಅಂಬರೀಷ್ ಅವರು ಹುಟ್ಟುಹಬ್ಬ ಆಚರಿಸಿ ಕೊಂಡರು. ಚಿತ್ರರಂಗದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.