ಸಮಾಜದ ದೃಷ್ಟಿಯಲ್ಲಿ ಪೊಲೀಸರೆಂದರೇ ಒಂಥರಾ ಭಯ ಮತ್ತು ಅಸಡ್ಡೆ. ಅವರು ನಮ್ಮ ನಡುವಿನ ಕಾವಲುಗಾರರು ಎಂಬುದು ತಿಳಿದಿದ್ದರೂ ಅವರು ಸರ್ಕಾರದ ಆಜ್ಞೆಗಳನ್ನು ಪಾಲಿಸುವ ಸೇವಕರು ಎಂದೇ ನೋಡುವುದು ವಾಡಿಕೆ.

ಆದರೆ ಪೊಲೀಸರು ಮನುಷ್ಯರು ಮಾನವೀಯ ನೆಲೆಯಲ್ಲಿ ಅವರನ್ನು ನೋಡಬಹುದು.. ಅವರಿಗೂ ಕಷ್ಟ ಕಾರ್ಪಣ್ಯಗಳು ತಪ್ಪಿದ್ದಲ್ಲ ಎಂಬುದಕ್ಕೆ ಪೊಲೀಸ್ ವ್ಯವಸ್ಥೆಯ ಕೈಗನ್ನಡಿಯಂತೆ ಮೂಡಿ ಬಂದಿರುವ ಕಿರುಚಿತ್ರವೇ ‘ಸೆಲ್ಯೂಟ್’.

ದಿನದ 24 ಗಂಟೆಯೂ ಸಮಾಜ ಕಾಯುವ ಪೊಲೀಸರಿಗೂ ವೈಯಕ್ತಿಕ ಬದುಕು ಎಂಬುದಿರುತ್ತದೆ. ಅದರಲ್ಲಿ ದುಃಖ ದುಮ್ಮಾನಗಳು ಹಾಸು ಹೊಕ್ಕಾಗಿರುತ್ತದೆ ಎಂಬುದನ್ನು ‘ಸೆಲ್ಯೂಟ್’ ನಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಪೊಲೀಸ್ ಕಾಲೋನಿ ಎಂದರೆ ಅದು ಐಷಾರಾಮಿ ಅಥವಾ ಎಲ್ಲಾ ಅನುಕೂಲಗಳನ್ನು ಹೊಂದಿರುವ ಸ್ಥಳ ವಲ್ಲ; ಕೆಲವೊಮ್ಮೆ ಅದು ನರಕ. ಅದು ಪೊಲೀಸರ ವೈಯಕ್ತಿಕ ಬದುಕಿನ ಅವಿಭಾಜ್ಯ. ಆದರೆ ಅಲ್ಲಿ ಬದುಕುವುದೂ ಅನಿವಾರ್ಯ.

ಹೀಗೆ ಅದೆಷ್ಟೋ ಸತ್ಯಗಳನ್ನು ಕಿರುಚಿತ್ರದಲ್ಲಿ ಹೇಳಲಾಗಿದೆ. ಕೊವಿಡ್ ಸಂದರ್ಭದಲ್ಲಿ ಪೊಲೀಸರು ಅನುಭವಿಸಿದ ನರಕದ ಕೆಲವು ಕ್ಷಣಗಳನ್ನು ತೆರೆದಿಡಲಾಗಿದೆ.
ಟಪ್ ಕಾಪ್ ಎಂದು ಗುರುತಿಸಿ ಕೊಂಡಿದ್ದವರ ಪೈಕಿ ಒಬ್ಬರಾಗಿರುವ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ. ಉಮೇಶ್ ಶನಿವಾರ ಈ ಕಿರುಚಿತ್ರ ಬಿಡುಗಡೆ ಮಾಡಿದರು.
ಕಿರುಚಿತ್ರ ನಿರ್ಮಿಸಿರುವ ದೀಪಕ್ ಗೌಡ ಹಾಗೂ ಅವರ ಸಹೋದರ (ಹೆಸರಾಂತ ನಿರ್ಮಾಪಕ ) ಉಮಾಪತಿ ಗೌಡ, ನಿರ್ದೇಶಕ ತ್ಯಾಗರಾಜ್, ಸಂಗೀತ ನಿರ್ದೇಶಕ ಪ್ರದ್ಯುತನ್ ಹಾಗೂ ಮುಖ್ಯ ಪಾತ್ರ ನಿರ್ವಹಿಸಿರುವ ಅಶ್ವಿನ್ ಹಾಸನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಚಿತ್ರ ನೈಜವಾಗಿದೆ. ನಾನು ಕೊರೊನಾ ಸಂದರ್ಭದಲ್ಲಿ ನಿವೃತ್ತಿ ಪಡೆದೆ. ಆ ದಿನ ಕಚೇರಿಯಲ್ಲೇ ಒಬ್ಬನೇ ಇದ್ದೆ. ಅದೆಲ್ಲಾ ಮರೆಯಲಾಗದ ಕ್ಷಣಗಳು ಎಂದು ಮೆಲುಕು ಹಾಕಿದರು ಎಸ್.ಕೆ.ಉಮೇಶ್.
ವಿಕಲಚೇತರಾಗಿರುವ ನಿರ್ದೇಶಕ ತ್ಯಾಗರಾಜ್ ನಿಜಕ್ಕೂ ಪಾದರಸದ ಸ್ಫೂರ್ತಿ ಇರುವ ವ್ಯಕ್ತಿ ಎಂದು ಬಣ್ಣಿಸಿದವರು ದೀಪಕ್ ಗೌಡ. ನಿರ್ಮಾಪಕ ಉಮಾಪತಿ ಗೌಡ ಸಹೋದರನ ಪ್ರಯತ್ನ ಹೊಗಳಿ, ಹಿಂದೆ ತಾವು ಬೆಳೆಯಲು ಹೇಗೆ ಸಹಕಾರಿಯಾಗಿದ್ದರು ಎಂಬುದನ್ನು ಮೆಲುಕು ಹಾಕಿದರು.
ನಿರ್ದೇಶಕ ತ್ಯಾಗರಾಜ್ ಇದು ನನ್ನ ಮೂರನೇ ಪ್ರಯತ್ನ; ಮುಂದೆ ಸಂಪೂರ್ಣ ಚಿತ್ರ ಮಾಡುವ ಭರವಸೆ ಇರುವುದಾಗಿ ಹೇಳಿಕೊಂಡರು.
ನಾನು ಒಬ್ಬ ಕಲಾವಿದ ಅಷ್ಟೇ; ಆದರೆ ಹೀರೋ ಅಲ್ಲ. ಅಕಸ್ಮಾತ್ ಮುಖ್ಯಪಾತ್ರ ಸಿಕ್ಕಿದರೂ ನಾನು ಕಲಾವಿದನಾಗಿಯೇ ಉಳಿಯಲು ಇಷ್ಟಪಡುವೆ ಎಂದರು ಅಶ್ವಿನ್ ಹಾಸನ್.

ಇಲ್ಲಿಯವರೆಗೆ ಸುಮಾರು 60 ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇಲ್ಲಿ ಮುಖ್ಯ ಸಿಕ್ಕಿರುವುದು ಅದೃಷ್ಟ ಎಂದು ಅನುಭವಗಳನ್ನು ಮೆಲುಕು ಹಾಕಿದರು ಅಶ್ವಿನ್.
