Snehapriya.com

June 4, 2025

ಸಿನಿಮಾ-ಗಾಸಿಪ್

ಹೊಸ ಸಂಜು ವೆಡ್ಸ್ ಗೀತಾ -2 ಭಾವನಾತ್ಮಕ ಪಯಣ ಸೇರ್ಪಡೆ

Social Share :

* ಜೂನ್ 6ರಂದು ರಾಜ್ಯಾದ್ಯಂತ ಬಿಡುಗಡೆ *

* ಚಿತ್ರಕ್ಕೆ ಶಿವಣ್ಣ, ಎಸ್.ಮಹೇಂದರ್ ಬೆಂಬಲ *

‘ಎದೆಗಾರಿಕೆ ಇರುವ ನಿರ್ಮಾಪಕರು ಚಿತ್ರಕ್ಕೆ ಖರ್ಚು ಮಾಡುವುದರಲ್ಲಿ ಧಾರಾಳತನ ತೋರುತ್ತಾರೆ. ಅಂತಹ ಚಿತ್ರಗಳು ಖಂಡಿತವಾಗಿ ಗೆಲ್ಲಲೇ ಬೇಕಾಗಿದೆ..’

ಹೀಗೆಂದವರು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್. ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಮರು ಬಿಡುಗಡೆಗಾಗಿನ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡು ಇಡೀ ಚಿತ್ರತಂಡವನ್ನು ಹಾಡಿ ಹೊಗಳಿದರು.

ಇಲ್ಲಿ ಕಲಾವಿದರು, ತಂತ್ರಜ್ಞರು ಎಲ್ಲರೂ ಪ್ರತಿಭಾವಂತರು. ಜೊತೆಗೆ ಪ್ರತಿ ದೃಶ್ಯವೂ ಅದ್ಭುತ ನೆಲೆಯಲ್ಲಿ ಕೂಡಿರುವಂತೆ ವಿದೇಶದಲ್ಲಿ ಚಿತ್ರೀಕರಣ ಮಾಡಿರುವುದು ಕನ್ನಡದ ಮಟ್ಟಿಗೆ ಹೆಮ್ಮೆಯ ಸಂಗತಿ ಎಂದರು ಶಿವಣ್ಣ.

ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಮುಖ್ಯ ಭೂಮಿಕೆಯಲ್ಲಿರುವ ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಹೊಸ ಅವತರಣಿಕೆಯಲ್ಲಿ ಬಹಳ ವಿಶೇಷಗಳಿವೆ ಎಂಬುದು ಚಿತ್ರತಂಡದ ವಿವರ.

ನಿರ್ದೇಶಕ ನಾಗ್ ಶೇಖರ್ ನನ್ನ ಶಿಷ್ಯ ಅವರು ಯಾವಾಗಲೂ ಒಳ್ಳೆಯ ಸಿನಿಮಾಗಳನ್ನೇ ಮಾಡ್ತಾರೆ ಎಂದರು ಹಿರಿಯ ನಿರ್ದೇಶಕ ಎಸ್.ಮಹೇಂದರ್. ಕವಿರಾಜ್, ಸತ್ಯ ಹೆಗಡೆಯಂಥ ತಂತ್ರಜ್ಞರು ಜತೆಗಿದ್ದಾಗ ಆ ಚಿತ್ರಕ್ಕೆ ಇನ್ನೂ ಹೆಚ್ಚಿನ ಮೌಲ್ಯ ಬರುತ್ತದೆ. ನಿರ್ಮಾಪಕರು ಒಂದೊಂದು ಫ್ರೇಮ್ ಗೂ ಕೊಟ್ಯಾಂತರ ಹಣ ಖರ್ಚು ಮಾಡಿದ್ದಾರೆ. ನಾನು ಸ್ನೇಹಲೋಕ ಮಾಡಿದಾಗಲೂ ಇದೇ ಅನುಭವ ಆಗಿತ್ತು ಎಂದರು.

ಟೈಟಲ್ ಮೂಲಕವೇ ಚಿತ್ರದ ಬಗ್ಗೆ ಅಗಾಧ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ನಾಗಶೇಖರ್ ನಿರ್ದೇಶನದ ಈ ಚಿತ್ರ ಜೂನ್ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆ ಕಾಣುತ್ತಿದೆ‌.

ಮರು ಬಿಡುಗಡೆ ಕಾಣುತ್ತಿರುವ ಚಿತ್ರಕ್ಕೀಗ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಜೋಡಿಸಲಾಗಿದ್ದು, ಪ್ರೇಕ್ಷಕ ಭಾವ ಸ್ಪರ್ಶ ಪಡೆಯುವುದರಲ್ಲಿ ಅನುಮಾನವಿಲ್ಲ ಎಂಬುದು ನಿರ್ದೇಶಕ ನಾಗ್ ಶೇಖರ್ ನಂಬಿಕೆ.

ನಿರ್ಮಾಪಕ ಛಲವಾದಿ ಕುಮಾರ್, ನಟ ಶ್ರೀನಗರ ಕಿಟ್ಟಿ, ಕವಿರಾಜ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಹಲವಾರು ಪ್ರಮುಖರು ಪ್ರಚಾರ ಸಭೆಯಲ್ಲಿ ಹಾಜರಿದ್ದರು.

Social Share :

ಸುಧಾರಾಣಿ ಈಗ ಘೋಸ್ಟ್ ದೇವರು ದೆವ್ವದ ಹುಡುಕಾಟ

Social Share :

ಕನ್ನಡದ ಹೆಸರಾಂತ ನಟಿ ಸುಧಾರಾಣಿ ಭಯಾನಕ ಎನಿಸುವ ಕಥಾಹಂದರ ಹೊಂದಿರುವ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಜಗತ್ತಿನಲ್ಲಿ ಒಳ್ಳೆಯವರು ಇದ್ದಾರೆ; ಅದೇ ರೀತಿ ಕೆಟ್ಟವರೂ ಇದ್ದಾರೆ. ದೇವರು ಇದ್ದಾನೆ; ದೆವ್ವವೂ ಇದೆ ಎಂದು ಸಾರುವ ಈ ಕಿರು ಚಿತ್ರದ ಹೆಸರು ಘೋಸ್ಟ್..!

ಈಚೆಗೆ ಕಿರುಚಿತ್ರದ ಪ್ರದರ್ಶನ ಮಾಡಿ ಮಾಧ್ಯಮಗಳ ಜೊತೆ ಆಪ್ತವಾಗಿ ಮಾತನಾಡಿದರು ಸುಧಾರಾಣಿ. ಇದರ ಕಥೆ ಕೇಳಿದಾಗ ನಿರ್ಮಾಣ ಮಾಡಬೇಕು ಎಂಬುದು ಪ್ರೇರಣೆಯಾಯಿತು. ಹಾಗಾಗಿ ಕಿರು ಚಿತ್ರದ ಮೂಲಕ ನಿರ್ಮಾಣದ ಜಗತ್ತಿಗೆ ಕಾಲಿಟ್ಟಿರುವೆ ಎಂದು ಆತ್ಮೀಯವಾಗಿ ನಕ್ಕರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮೊದಲ ಚಿತ್ರ ಆನಂದ್ ಹಾಗೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ ಸುಧಾರಾಣಿ, ಆನಂತರದಲ್ಲಿ ಎಲ್ಲಾ ಸ್ಟಾರ್ ನಟರ ಫೇವರಿಟ್ ಹಿರೋಯಿನ್ ಎನಿಸಿಕೊಂಡರು‌. ವರನಟ ಡಾ.ರಾಜ್ ಕುಮಾರ್ ಅವರಿಗೆ ಮಗಳಾಗಿ ‘ದೇವತಾ ಮನುಷ್ಯ’ ಚಿತ್ರದಲ್ಲಿ ಅಭಿನಯಿಸಿ; ಅವರೊಂದಿಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು.

ಈಚೆಗೆ ಪೋಷಕ ನಟಿ ಪಾತ್ರಗಳ ಜೊತೆಗೆ ಕಿರುತೆರೆಯಲ್ಲಿಯೂ ಸೈ ಎನಿಸಿಕೊಂಡ ಸುಧಾರಾಣಿ ಅವರಿಗೆ ‘ಶ್ರೀರಸ್ತು ಸುಭಮಸ್ತು’ ಧಾರಾವಾಹಿ ಸಹ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಟ್ಟಿತು. ಇದೀಗ ಆ ಧಾರಾವಾಹಿಯ ನಿರ್ದೇಶಕರು ಹೇಳಿದ ಕಥಾ ಪರಿಕಲ್ಪನೆ ಇಷ್ಟವಾಗಿ ಈ ಕಿರುಚಿತ್ರ ನಿರ್ಮಿಸಿದ್ದಾಗಿ ಹೇಳಿದರು.

ಸಸ್ಪೆನ್ಸ್ ಥ್ರಿಲ್ಲರ್ ನ ಈ ಕಿರುಚಿತ್ರವನ್ನು ಸುದೇಶ್ ಕೆ.ರಾವ್ ನಿರ್ದೇಶನ ಮಾಡಿದ್ದು, ಸುಧಾರಾಣಿ ನಟಿಸಿದ್ದಾರೆ. ಕೇವಲ ಎರಡೇ ಪಾತ್ರಗಳು ಇಲ್ಲಿ ಗಮನ ಸೆಳೆಯುತ್ತವೆ.


ಕಿರು ಚಿತ್ರದಲ್ಲಿ ಸುಧಾರಾಣಿ ಯವರ ಜೊತೆಗೆ ನಟಿಸುವುದರ ಜೊತೆಗೆ ನಿರ್ದೇಶಕ ಸುದೇಶ್ ಕೆ ರಾವ್ ನಟಿಸಿದ್ದಾರೆ.

Social Share :

ವಿನೋದ್ ಪ್ರಭಾಕರ್ ಮಾದೇವ ಜೂನ್ 6 ಕ್ಕೆ ಬಿಡುಗಡೆ ಸಿದ್ಧತೆ..

Social Share :


* ಮಾದೇವ ಚಿತ್ರದ ‘ಎದೇಲಿ ತಂಗಾಳಿ’ ಚಿತ್ರದ ಹಾಡು ಬಿಡುಗಡೆ *

* ಬಹು ನಿರೀಕ್ಷಿತ ಈ ಚಿತ್ರ ಜೂನ್ 6 ರಂದು ಬಿಡುಗಡೆ *

ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ‘ಮಾದೇವ’ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದೆ‌. ರಾಬರ್ಟ್ ಚಿತ್ರದಲ್ಲಿ ವಿನೋದ್ ಜೋಡಿಯಾಗಿದ್ದ ಸೋನಾಲ್ ಮಂಥೇರೋ ಈ ಚಿತ್ರದಲ್ಲಿಯೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ(ದೇವಸಂದ್ರ) ನಿರ್ಮಿಸಿರುವ ಚಿತ್ರವನ್ನು ನವೀನ್ ರೆಡ್ಡಿ ಬಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಪ್ರಸನ್ನ ಕುಮಾರ್ ಬರೆದಿರುವ, ಪ್ರದ್ಯೋತನ್ ಸಂಗೀತ ನೀಡಿರುವ ‘ಎದೇಲಿ ತಂಗಾಳಿ’ ಎಂಬ ಹಾಡಿನ ಬಿಡುಗಡೆ ಹಾಗೂ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆ ಈಚೆಗೆ ಜರುಗಿತು.

ಶ್ರೀನಗರ ಕಿಟ್ಟಿ, ನಟಿ ಶೃತಿ ಹಾಗೂ ಇತರ ಕಲಾವಿದರು ಮತ್ತು ತಂತ್ರಜ್ಞರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರವು ತಮ್ಮ ವೃತ್ತಿ ಬದುಕಿನ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು ಮರಿ ಟೈಗರ್ ವಿನೋದ್ ಪ್ರಭಾಕರ್.

ನಿರ್ಮಾಪಕ ಆರ್ ಕೇಶವ್. ಸಂಗೀತ ನಿರ್ದೇಶಕ ಪ್ರದ್ಯೋತ್ತನ್‍ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Social Share :

ದರ್ಶನ್ ಡೆವಿಲ್ ಮಾತು ಮುಕ್ತಾಯ..

Social Share :

ದರ್ಶನ್ ಡೆವಿಲ್ ಮಾತು ಮುಕ್ತಾಯ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ರಾಜಸ್ಥಾನ ಹಾಗೂ ಇತರೆಡೆ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೇ ಮಾತಿನ ಜೋಡಣೆ(ಡಬ್ಬಿಂಗ್) ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿರುವ ‘ಡೆವಿಲ್’ ಚಿತ್ರದ ಮತ್ತೊಂದು ವಿಭಿನ್ನ ಪೋಸ್ಟರ್ ಸಹ ಇತ್ತೀಚೆಗೆ ಬಿಡುಗಡೆಯಾಗಿದೆ. ಅದು ರೆಬೆಲ್ ಸ್ಟಾರ್ ಅಂಬರೀಷ್ ಅವರ ಅಂತ ಚಿತ್ರದ ಪೋಸ್ಟರ್ ನೆನಪಿಸುತ್ತಿದೆ.

ಸುಧಾಕರ್.ಎಸ್.ರಾಜ್ ಛಾಯಾಗ್ರಹಣ, ಬಿ.ಅಜನೀಶ್ ಲೋಕನಾಥ್ ಸಂಗೀತ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ಚಿತ್ರಕ್ಕಿದೆ.

ದರ್ಶನ್ ಜೋಡಿಯಾಗಿ ರಚನ ರೈ ಅಭಿನಯಿಸುತ್ತಿದ್ದಾರೆ. ತುಳಸಿ,‌ ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು , ಶೋಭ್ ರಾಜ್ ಹಾಗೂ ಇತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Social Share :

ರೆಟ್ರೋ ಮಾದರಿ ಸುಂದರ ಸರಳ ಸುಬ್ಬರಾವ್ ಹಾಡು ಅತಿ ವಿರಳ..

Social Share :

ಚಿತ್ರದ ಬಗೆಗಿನ ವಿವರ ನೀಡುವಾಗ ಅದರ ಒಳಗಿನ ಶ್ರೀಮಂತಿಕೆಯ ವೈಭವೀಕರಣ ನಡೆದು ಹೋಯಿತು. ಅವು ಚಿತ್ರದ ತಂತ್ರಜ್ಞರ ಹೆಚ್ಚುಗಾರಿಕೆಯ ಕಸೂತಿಯ ವಿವರಗಳಾಗಿದ್ದವು..

ಚಿತ್ರದ ಹೆಸರು ಸರಳ ಸುಬ್ಬರಾವ್..!

ಕೃಷ್ಣ ಅಜಯ್ ರಾವ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಶ್ರಾವಣಿ ಸುಬ್ರಮಣಿ ಹಾಗೂ ಇತರ ಹಿಟ್ ಚಿತ್ರಗಳನ್ನು ಮಾಡಿದ ಮಂಜು ಸ್ವರಾಜ್ ನಿರ್ದೇಶನ ಮಾಡಿರುವುದು ವಿಶೇಷ..

70ರ ದಶಕದ ರೆಟ್ರೋ ಮಾದರಿಯ ಉಡುಗೆ ತೊಡುಗೆಯ ಜೊತೆಗೆ ನವ ನೂತನ ವಿನ್ಯಾಸದ ಜೊತೆಗೆ ಬಂದ ಹಾಡು ಬಾಲಿವುಡ್ ಚಿತ್ರಗಳನ್ನು ನೆನಪಿಸಿತು.

ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಾಣವಿರುವ ಚಿತ್ರದಲ್ಲಿ ಮುಂಬೈ ಬೆಡಗಿ ಮಿಷಾ ನಾರಂಗ್ ಹಾಗೂ ಇತರರ ತಾರಾಗಣವಿದೆ.

ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಕವಿರಾಜ್ ಗೀತರಚನೆ ಇದೆ. ಸಂಜಿತ್ ಹೆಗ್ಡೆ ಹಾಡಿದ್ದಾರೆ. ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಲಭ್ಯವಿದೆ‌ ಎಂಬ ಮಾಹಿತಿ ನೀಡಿತು ಚಿತ್ರತಂಡ.

ರೆಟ್ರೋ ಹಾಡು ಸುಂದರವಾಗಿ ಮೂಡಿ ಬರಲು ಕಾರಣಗಳೇನು; ತಂತ್ರಜ್ಞರ ವಿಶೇಷ ತಂಡ ಯಾವ ರೀತಿ ಶ್ರಮಪಟ್ಟಿದೆ ಎಂಬುದನ್ನು ನಿರ್ದೇಶಕ ರಿಂದ ಹಿಡಿದು ಪ್ರತಿಯೊಬ್ಬರು ವಿವರ ನೀಡಿದರು.

ನಿರ್ದೇಶಕ ಮಂಜು ಸ್ವರಾಜ್ ಪ್ರತಿಯೊಬ್ಬರ ಸಹಕಾರ ನೆನೆದರೆ, ನಿರ್ಮಾಪಕ ಲೋಹಿತ್ ನಂಜುಂಡಯ್ಯ ಇದೊಂದು ಪ್ರಯೋಗ ಮತ್ತು ಇಷ್ಟಪಟ್ಟು ಮಾಡಿರುವ ಸಿನಿಮಾ ಎಂಬುದನ್ನು ವಿವರಿಸಿದರು.

ರಂಗಾಯಣ ರಘು, ರಘು ರಾಮನ ಕೊಪ್ಪ, ವಿಜಯ್ ಚೆಂಡೂರ್ ಹೀಗಕಲಾ, ಚಿತ್ ಕಲಾ, ಶ್ರೀ,
ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಪ್ರದೀಪ್ ಪದ್ಮಕುಮಾರ್, ವಸ್ತ್ರ ವಿನ್ಯಾಸ ಮಾಡಿರುವ ರಂಜಿತ್, ಸಂಕಲನಕಾರ
ಬಸವರಾಜ್ ಅರಸ್, ಕಲಾ ನಿರ್ದೇಶಕ ಅಮರ್ ಚಿತ್ರದ ಬಗ್ಗೆ ಮಾತನಾಡಿದರು.

ನಿರ್ದೇಶಕ ಸಿಂಪಲ್ ಸುನಿ, ನೃತ್ಯ ನಿರ್ದೇಶಕಿ ಮದನ್ ಹರಿಣಿ ಚಿತ್ರಕ್ಕೆ ಶುಭ ಹಾರೈಸಿದರು.

ಈ ಚಿತ್ರದಲ್ಲಿ ನಟಿಸಿರುವುದು ನನ್ನ ಪುಣ್ಯ ಎಂದರು ಕೃಷ್ಣ ಅಜಯ್ ರಾವ್. ಯುದ್ಧಕಾಂಡ-2 ಚಿತ್ರದ ನಿರ್ಮಾಣ ಸಂದರ್ಭದಲ್ಲಿ ಸಿಕ್ಕಿದ ಚಿತ್ರವಿದು. ಇದರಲ್ಲಿ ನಾನು ಪಾತ್ರ ಮಾಡುವಾಗ ವರ ನಟ ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಅನೇಕರನ್ನು ಕಂಡುಕೊಂಡಿದ್ದೇನೆ ಎಂದರು.

Social Share :

ಶಿವನ ಹಾಡಿಗೆ ಗುರುಗಳ ಸಾಂಗತ್ಯ 45 ಚಿತ್ರದ ಶಿವಂ ಶಿವಂ ಸನಾತನಂ

Social Share :

* ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ *

* ಸಾಂಪ್ರದಾಯಿಕ ಉಡುಪಿನಲ್ಲಿ ಶಿವರಾಜ್ ಕುಮಾರ್ *

* ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರಿಂದ ಹಾಡು ಬಿಡುಗಡೆ *

ಬಹು ನಿರೀಕ್ಷಿತ ’45’ ಚಿತ್ರದ ಹೊಸ ಹಾಡು ಶಿವಂ ಶಿವಂ ಸನಾತನಂ ಬಿಡುಗಡೆಗೊಂಡಿದೆ.

ಕರುನಾಡ ‌ಚಕ್ರವರ್ತಿ ಡಾ.ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದ ಈ ಹಾಡಿನಲ್ಲಿ ಬಹಳಷ್ಟು ವಿಶೇಷಗಳಿವೆ.

ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅರ್ಜುನ್ ಜನ್ಯ ಸಂಗೀತ ನೀಡಿರುವ ‘ಶಿವಂ ಶಿವಂ ಸನಾತನಂ..’ ಹಾಡು ಈಚೆಗೆ ಬಿಡುಗಡೆಗೊಂಡಿದೆ.

ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ದೂರದ ದೆಹಲಿಯಿಂದ ಆಗಮಿಸಿ ಶಿವನ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡದವನ್ನು ಆಶೀರ್ವದಿಸಿದರು.

ಈ ಹಾಡಿಗೆ ಶಿವರಾಜಕುಮಾರ್ ಅವರು ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಶಿವನ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ‌ಮಾತನಾಡಿದರು.‌

ಒತ್ತಡದ ಕಾರ್ಯಗಳಿದ್ದರೂ ದೂರದ ಊರಿನಿಂದ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಪೂಜ್ಯರಿಗೆ ಅನಂತ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ಚಿತ್ರಕ್ಕೆ ಅರ್ಜುನ್ ಜನ್ಯ ಅವರಂತಹ ನಿರ್ದೇಶಕರು ಸಿಕ್ಕಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದ ಆರಂಭದಿಂದಲೂ ಅವರು ಈ ಚಿತ್ರಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಇಂದು ಬಿಡುಗಡೆಯಾಗಿರುವ ಶಿವನ ಕುರಿತಾದ ಹಾಡಂತೂ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಈ ಹಾಡು ಇಡೀ ದೇಶದೆಲ್ಲೆಡೆ ಸದ್ದು ಮಾಡಲಿದೆ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿಜಯ್ ಪ್ರಕಾಶ್ ಅವರ ಗಾಯನ ಮಧುರವಾಗಿದೆ. ಶಿವರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕರು.

ಈ ಹಾಡು ಹಾಗೂ ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕ ರಮೇಶ್ ರೆಡ್ಡಿ ಅವರ ಉದಾರ ಮನಸ್ಸು ಪ್ರಮುಖ ಕಾರಣ. ಡಾ.ಶಿವರಾಜ್ ಕುಮಾರ್ ಅವರ ಹೃದಯ ವೈಶಾಲ್ಯ ಮನೋಭಾವದಿಂದ ನಾನು ನಿರ್ದೇಶಕನ ಸ್ಥಾನ ಅಲಂಕರಿಸಿರುವೆ
ಎಂದರು ಅರ್ಜುನ್ ಜನ್ಯ.

ಕಳೆದ ವರ್ಷ ನಾನು ಈ ಚಿತ್ರದ (ಕನ್ನಡ) ಡಬ್ಬಿಂಗ್ ಮುಗಿಸಿದ್ದೆ. ಈಗ ತಮಿಳಿನಲ್ಲಿ ಡಬ್ ಮಾಡುತ್ತಿದ್ದೇನೆ. ಆದಷ್ಟು ಎಲ್ಲಾ ಭಾಷೆಗಳಲ್ಲೂ ನಾನೇ ಡಬ್ ಮಾಡುತ್ತೇನೆ‌. ನನ್ನ ಧ್ವನಿ ಎಲ್ಲಾ ಕಡೆ ತಲುಪಲಿ ಎಂಬುದು ನನ್ನ ಆಶಯವಾಗಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದರು. ‌

ಹಾಡಿನ ಬಗ್ಗೆ ಡಾ.ವಿ.ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಗಾಯಕ ವಿಜಯ್ ಪ್ರಕಾಶ್ ಸಹ ಹಾಡಿನ ಕುರಿತು ಅನುಭವವನ್ನು ಹಂಚಿಕೊಂಡರು.

Social Share :

ಮಾದಕ ದ್ರವ್ಯದ ಜಾಗೃತಿ ವರಸೆ ಈ ವಾರ ಟಕೀಲ ಹೊಸ ಭರವಸೆ

Social Share :

* ಮೇ 16ಕ್ಕೆ ಬಿಡುಗಡೆ *

ಡ್ರಗ್ ಮಾಫಿಯಾ ಹತ್ತಿಕ್ಕುವ ಹೊಸ ವರಸೆಗಳನ್ನು ಒಳಗೊಂಡಿರುವ ಜೊತೆಗೆ ಮಾದಕ ಒಳ ನೋಟಗಳನ್ನು ಬಿಂಬಿಸುವ ‘ಟಕೀಲ’ ಈ ವಾರ ಬಿಡುಗಡೆ ಕಾಣುತ್ತಿದೆ.

ಧರ್ಮ ಕೀರ್ತಿರಾಜ್ ಹಾಗೂ ನಿಖಿತಾ ಸ್ವಾಮಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಹಿರಿಯ ಸಿನಿ ಛಾಯಾಗ್ರಾಹಕ ಪ್ರವೀಣ್ ನಾಯಕ್ ನಿರ್ದೇಶಿಸಿದ್ದಾರೆ.

ಶ್ರೀಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ಅವರ ನಿರ್ಮಾಣದ ಈ ಚಿತ್ರದಲ್ಲಿ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಶ್ಮಿತಾ, ನಿರ್ದೇಶಕ ಪ್ರವೀಣ್‌ನಾಯಕ್ ಒಳಗೊಂಡ ತಾರಾಗಣವಿದೆ.

ಜೀವನದಲ್ಲಿ ಒಂದು ಬಾರಿ ಬರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು; ಮಾದಕ ವರಸೆಯಲ್ಲಿ ಕೈ ಜಾರುವ ಬದುಕು ಎಂತಹ ಸಂಕಷ್ಟಕ್ಕೆ ದೂಡಬಹುದು ಎಂಬ ಸಂದೇಶ ಚಿತ್ರದಲ್ಲಿದೆ.

ಈಚೆಗೆ ಬಿಡುಗಡೆ ಕಂಡ ಚಿತ್ರದ ಟ್ರೈಲರ್ ಜನಮನದ ಗಮನ ಸೆಳೆದಿದೆ. ಬಹಳವೇ ಕಷ್ಟದ ಸಂದರ್ಭಗಳನ್ನು ಎದುರಿಸಿ ಮರಡಿಹಳ್ಳಿ ನಾಗಚಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಬಹಳ ಸಮಯದ ಬಳಿಕ ಪ್ರವೀಣ್ ನಾಯಕ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ಮಾದಕತೆ ಹೆಚ್ಚಾಗಿ ಬರಲು ಅದರದೇ ಆದ ಕಾರಣಗಳಿವೆ ಎಂಬುದು ಅವರ ಸಮರ್ಥನೆ.

ಮನಶಾಸ್ತ್ರ ಹಾಗೂ ಆಧ್ಯಾತ್ಮಿಕತೆ ಚಿತ್ರದ ಭಾಗವಾಗಿರುತ್ತದೆ. ಮನಸ್ಥಿತಿಗಳನ್ನು ಅರಿಯುವ ಪ್ರಯತ್ನದ ಜೊತೆಗೆ ಮಾದಕ ವಸ್ತು ಜೀವನವನ್ನು ಹೇಗೆ ಹಾಳು ಮಾಡುತ್ತದೆ ಎಂಬುದರ ವಿವರ ಇಲ್ಲಿ ಸಿಗುತ್ತದೆ ಎಂಬ ವಿವರಣೆ ಅವರದು.

ಚಿತ್ರದ ಬಿಡುಗಡೆ ತಡವಾಗಿದೆ ಎಂಬುದು ನಿಜವಾದರೂ ಜಯಣ್ಣ ಫಿಲಮ್ಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಸುಮಾರು 150 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಕಾಣುತ್ತಿದೆ ಎಂಬ ವಿವರಣೆ ನಿರ್ಮಾಪಕ ನಾಗಚಂದ್ರ ಅವರದು.

ಧರ್ಮಾ ಕೀರ್ತಿರಾಜ್ ಶ್ರೀಮಂತ ವ್ಯಾಪಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಖಿತಾ ಸ್ವಾಮಿ ಗ್ಲಾಮರ್ ಬೊಂಬೆಯಾಗಿ ಮೆರೆದಿದ್ದಾರೆ.

ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ರೇಣುಕುಮಾರ್ ಸಂಗೀತ, ಗಿರೀಶ್ ಸಂಕಲನ, ಪ್ರಶಾಂತ್ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Social Share :

ದುನಿಯಾ ವಿಜಯ್ ಮಾರುತ ಆಡಿಯೋದಿಂದ ಭಾರಿ ಮೊತ್ತ

Social Share :

*ಝೇಂಕಾರ್ ಮ್ಯೂಸಿಕ್ ನಲ್ಲಿ ಮಾರುತ ಚಿತ್ರದ ಹಾಡುಗಳು..*

*ಭಾರಿ ಮೊತ್ತಕ್ಕೆ ಮಾರಾಟ *

* ಎಸ್ ನಾರಾಯಣ್ ನಿರ್ದೇಶನದಲ್ಲಿ‌ ದುನಿಯಾ ವಿಜಯ್ – ಶ್ರೇಯಸ್ ಮಂಜು ಆಭಿನಯ *

ಕನ್ನಡದ ಮುಂಚೂಣಿಯ ನಿರ್ದೇಶಕರಲ್ಲಿ ಪ್ರಮುಖರಾದ ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಬಹಳ ಸಮಯದ ಬಳಿಕ ಒಂದಾಗಿ ಮಾಡಿರುವ ಚಿತ್ರ ಮಾರುತ..

ಕೆ.ಮಂಜು ಪುತ್ರ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಕೆ.ಮಂಜು ಮತ್ತು ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ.

ಈ ಚಿತ್ರತಂಡ ಈಚೆಗೆ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ. ಅದೇನೆಂದರೆ, ಜೆಸ್ಸಿಗಿಫ್ಟ್ ಸಂಗೀತ ನೀಡಿರುವ ಆಡಿಯೋ ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ಝೇಂಕಾರ್ ಮ್ಯೂಜಿಕ್ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.

ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ನಿರ್ದೇಶನದ ‘ಸೂರ್ಯವಂಶ’ ‘ಜಮೀನ್ಧಾರು’, ‘ಸಿಂಹಾದ್ರಿಯ ಸಿಂಹ’, ‘ನನ್ನವಳು ನನ್ನವಳು’, ‘ಅಂಜಲಿ ಗೀತಾಂಜಲಿ’, ‘ತವರಿನ ತೊಟ್ಟಿಲು’ ಮೊದಲಾದ ಅನೇಕ ಸೂಪರ್ ಹಿಟ್ ಚಿತ್ರಗಳ ಆಡಿಯೋ ಹಕ್ಕನ್ನು ಸಹ ಝೇಂಕಾರ್ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿತ್ತು.

‘ಮಾರುತ’ ಚಿತ್ರದ ಐದು ಹಾಡುಗಳು ಚಿತ್ರರಸಿಕರ ಮನ ಗೆಲ್ಲುವಂತಿವೆ. ಹಾಗಾಗಿ ಈ ಜನಪ್ರಿಯವಾಗಲಿದೆ ಎಂಬುದು ಝೇಂಕಾರ್ ಮ್ಯೂಸಿಕ್ ನ ಭರತ್ ಜೈನ್ ವಿವರಣೆ.

ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬಂದಿರುವ ‘ಮಾರುತ’ ಚಿತ್ರಕ್ಕೆ ಎಸ್ ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನವಿದ್ದು, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.

ದುನಿಯಾ ವಿಜಯ್, ಶ್ರೇಯಸ್ ಮಂಜು‌, ಬೃಂದಾ, ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಹಾಗೂ ಇತರರ ತಾರಾಬಳಗವಿದೆ.

ಈ ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿರುವುದು ವಿಶೇಷವಾಗಿದೆ.

Social Share :

ವೀರ ಚಂದ್ರಹಾಸ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ : ಎನ್.ಎಸ್.ರಾಜ್ ಕುಮಾರ್

ನಿರ್ದೇಶನ : ರವಿ ಬಸ್ರೂರ್

ಕಣ್ತುಂಬ ಯಕ್ಷಗಾನ ವೈಭವ

ಮನಸ್ಸಿಗೆ ಅದ್ದೂರಿ ಅನುಭವ

ಅದೊಂದು ಕನಸಿನ ಲೋಕ..!
ಆ ಲೋಕದಲ್ಲಿ ಹಲವು ರಾಜ ಮನೆತನದ ಸಾಮ್ರಾಜ್ಯಗಳು ಸೃಷ್ಟಿಯಾಗಿದ್ದರೂ ಕನ್ನಡದ ಮಟ್ಟಿಗೆ ರೋಮಾಂಚನ ಹುಟ್ಟಿಸುವುದು ಸಿಂಗನಲ್ಲೂರು ಮಹಾ ಸಂಸ್ಥಾನ ಮತ್ತು ಅಲ್ಲಿ ಕಾಣುವ ರಾಜ ಶಿವ ಪುಟ್ಟಸ್ವಾಮಿ.

ಹೌದು ವರನಟ ಡಾ.ರಾಜ್ ಕುಮಾರ್ ಅವರ ತಂದೆ ಸಿಂಗನಲ್ಲೂರು ಪುಟ್ಟ ಸ್ವಾಮಯ್ಯ ಅವರ ಸ್ಮರಣೆ ಜೊತೆಗೆ ಶಿವರಾಜ್ ಕುಮಾರ್ ಅವರ ಮೂಲ ಹೆಸರು ನಾಗರಾಜ್ ಶಿವ ಪುಟ್ಟಸ್ವಾಮಿ ಎಂಬುದರಿಂದ ಶಿವ ಪುಟ್ಟಸ್ವಾಮಿ ಹೆಸರು ರಾರಾಜಿಸುತ್ತದೆ. ಜೊತೆಗೆ ಯಕ್ಷಗಾನಕ್ಕೂ ಸೈ ಎಂಬುದನ್ನು ಶಿವಣ್ಣ ಸಾಬೀತುಪಡಿಸಿದ್ದಾರೆ.

ಇದು ಪೌರಾಣಿಕ ಕಥೆಯೇ. ಆದರೆ ನಿರೂಪಣೆ ಹೊಸದು; ಅದ್ದೂರಿತನವೇ ಮೇಳೈಸಿ ಎದ್ದು ಕಾಣುವ ದೃಶ್ಯ ವೈಭವಕ್ಕಿಂತ ಕಿವಿಗೆ ಗಡಿಚಿಕ್ಕುವ ಶಬ್ಧದ ಝೇಂಕಾರ ಅದ್ಭುತ ಮತ್ತು ರೋಮಾಂಚಕ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಸಂಪೂರ್ಣ ಮಲೆನಾಡು ಭಾಗಗಳಲ್ಲಿ ಈಗಲೂ ಪ್ರಚಲಿತವಿರುವ ಯಕ್ಷಗಾನ ಕಲೆ ತೆರೆಯಲ್ಲಿ ಅರಳಿರುವ ಪರಿಗೆ ಪ್ರೇಕ್ಷಕ ಆನಂದದಿಂದ ತೇಲಾಡಬಹುದು..

ಕುಂತಳ ಎಂಬ ಸಾಮ್ರಾಜ್ಯದಲ್ಲಿ ದುಷ್ಟಬುದ್ಧಿ ಎಂಬ ಹೆಸರಿಗೆ ತಕ್ಕ ಮಂತ್ರಿಯ ಆಟಾಟೋಪಗಳಿಗೆ ಲೆಕ್ಕವೇ ಇಲ್ಲದ ಸಂದರ್ಭದಲ್ಲಿ ಅನಾಥ ಹುಡುಗನೊಬ್ಬ ದೈವ ಬಲದಲ್ಲಿ ರೂಪುಗೊಳ್ಳುತ್ತಾನೆ.

ಆತನೇ ವೀರ ಚಂದ್ರಹಾಸ..!

ಧೈರ್ಯ ಸ್ಥೈರ್ಯದ ಜೊತೆಗೆ ಅಸಾಧಾರಣ ಸೌಂದರ್ಯವಂತನಾದ ವೀರ ಚಂದ್ರಹಾಸ ಸಾಮಂತ ರಾಜನಾಗಿ ರೂಪುಗೊಳ್ಳುವುದೇ ರೋಚಕ ಸಂದರ್ಭಗಳ ಮೂಲಕ.

ಕುಂತಳ ಸಾಮ್ರಾಜ್ಯದ ಮಂತ್ರಿ ದುಷ್ಟಬುದ್ಧಿ ಹೂಡುವ ಆಟ ಆತನಿಗೇ ಹೇಗೆ ತಿರುವಾಗಿ ಬುದ್ಧಿ ಕಲಿಸುತ್ತದೆ ಎಂಬುದು ಕೊನೆಯ ಹಂತ. ಮುಂದೆ ಎರಡನೇ ಭಾಗಕ್ಕೆ ಮುನ್ನುಡಿಯೂ ಸಿಗುತ್ತದೆ.

ಯಕ್ಷಗಾನ ಕಲೆಯ ವೈಭವಗಳನ್ನು ಅರಿತವರಿಗೆ ಇಲ್ಲಿ ಕಣ್ಣಿಗೆ ಹಬ್ಬ. ಏಕೆಂದರೆ ಚಕ್ರವರ್ತಿಯ ಸಾಮ್ರಾಜ್ಯ ಮತ್ತು ಸಾಮಂತ ರಾಜರ ಅದ್ದೂರಿ ವೈಭವಗಳನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಿರುವುದು.

ಮೊದಲೇ ವೇಷ ಭೂಷಣ ಚೆಂದವನ್ನು ಕಟ್ಟಿಕೊಡುವ ಯಕ್ಷಗಾನ ಕಲೆಯ ವೈಭವವನ್ನು ಗ್ರಾಫಿಕ್ಸ್ ಮೊದಲಾದ ತಂತ್ರಜ್ಞಾನದ ಮೂಲಕ ಅದ್ದೂರಿತನವನ್ನು ತುಂಬಿಕೊಟ್ಟಿರುವ ಚಿತ್ರವನ್ನು ನೋಡುವುದೇ ಆನಂದ.

ಅದರಲ್ಲಿಯೂ ರವಿ ಬಸ್ರೂರ್ ಅವರ ಸಂಗೀತದ ಅಬ್ಬರಕ್ಕೆ ಪ್ರೇಕ್ಷಕ ಕಾಲ್ಗೆಜ್ಜೆ ಕಟ್ಟದೇ ಸೀಟಿನ ಅಂಚಿನಲ್ಲಿ ಕುಣಿಯುವ ಕನಸು ಕಾಣಬಹುದು.. ಸಂಗೀತದ ವಿಶೇಷ ಅನುಭವಕ್ಕೆ ತೆರೆದುಕೊಂಡವರು ಸಿನಿಮಾವನ್ನು ಮತ್ತೆ ಮತ್ತೆ ನೋಡುವ ಆಶಯ ವ್ಯಕ್ತಪಡಿಸಬಹುದು.

ಇದೊಂದು ವಿಭಿನ್ನ ಪ್ರಯತ್ನ ಎಂಬುದಕ್ಕಿಂತಲೂ ಯಾವ ದೊಡ್ಡ ಸಿನಿಮಾಗಳಿಗೂ ಕಡಿಮೆ ಇಲ್ಲ. ಕನ್ನಡದ ಮಟ್ಟಿಗೆ ವಿಶೇಷ ಪ್ರಯತ್ನ.

ಯಕ್ಷಗಾನ ಕಲೆಯ ವೈಭವ ಅಲ್ಲದೆ ಯಕ್ಷ ಲೋಕವನ್ನೇ ಸೃಷ್ಟಿಸಿಕೊಟ್ಟಿದೆ ರವಿಬಸ್ರೂರ್ ಮತ್ತು ತಂಡ. ಇಂತಹ ಚಿತ್ರಗಳಿಗೆ ಹಣ ಹೂಡುವ ಎದೆಗಾರಿಕೆಯೂ ದೊಡ್ಡದು. ಈ ನಿಟ್ಟಿನಲ್ಲಿ ರಾಜ್ ಕುಮಾರ್ ಕನ್ನಡಕ್ಕೊಂದು ‘ಮಾಸ್ಟರ್ ಪೀಸ್’ ಚಿತ್ರವನ್ನು ನಿರ್ಮಿಸಿರುವುದು ಪ್ರಶಂಸೆಗೆ ಒಳಪಡುತ್ತದೆ.

ಮನೆ ಮಂದಿಯೆಲ್ಲಾ ಕುಳಿತು ಮನರಂಜನೆ ಮತ್ತು ಬೇರೆ ಲೋಕದ ಅನುಭವ ಪಡೆಯಲು ‘ವೀರ ಚಂದ್ರಹಾಸ’ ಖಂಡಿತಾ ನೆರವಾಗುತ್ತದೆ.

Social Share :

ಗಮನ ಸೆಳೆದ 45 ಟೀಸರ್ ಪ್ಯಾನ್ ಇಂಡಿಯಾ ಪ್ರಚಾರ

Social Share :

* ಮುಂಬೈ, ಚೆನ್ನೈ, ಹೈದ್ರಾಬಾದ್ ಹಾಗೂ ಕೊಚ್ಚಿಯಲ್ಲಿ ಪ್ರಚಾರ *

ಅದ್ದೂರಿ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣ ಹಾಗೂ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನಿರ್ದೇಶನದ ’45’ ಚಿತ್ರದ ಪ್ಯಾನ್ ಇಂಡಿಯಾ ಪ್ರಚಾರ ಆರಂಭವಾಗುತ್ತಿದೆ.

ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವು ಹಾಲಿವುಡ್ ಮಾದರಿಯ ಅದ್ದೂರಿ ಮೇಕಿಂಗ್ ಹೊಂದಿರುವುದು ವಿಶೇಷವಾಗಿದೆ.

ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್’ ಬ್ಯಾನರ್ ನಲ್ಲಿ ಅಪಾರ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ಚಿತ್ರ ’45’ ಆರಂಭದಿಂದಲೂ ಸಾಕಷ್ಟು ಗಮನ ಸೆಳೆದಿದೆ.

ಯುಗಾದಿ ಹಬ್ಬದಂದು ಈ ಚಿತ್ರದ ಟೀಸರ್ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಈ ಅದ್ಭುತ ಟೀಸರ್ ಗೆ ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾಷೆಗಳ ಕಲಾಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಟೀಸರ್ ನಲ್ಲೇ ಮೋಡಿ ಮಾಡಿರುವ ಈ ಚಿತ್ರ ಆಗಸ್ಟ್ 15 ರಂದು ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ. ಆದರೆ ಅದಕ್ಕೆ ಮುಂಚೆ ಚಿತ್ರತಂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುವ ಸಿದ್ಧತೆ ಮಾಡಿಕೊಂಡಿದೆ.

ಹಾಗಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪ ರಮೇಶ್ ರೆಡ್ಡಿ ಅವರು ಏಪ್ರಿಲ್ 15 ಹಾಗೂ 16 ಪಕ್ಕದ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಮಾಧ್ಯಮ ಗೋಷ್ಠಿಗಳನ್ನು ನಡೆಸುವ ಮೂಲಕ ಎಲ್ಲಾ ರಾಜ್ಯಗಳ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ.

ಚಿತ್ರ ಆರಂಭದಿಂದಲೂ ಯಾವುದೇ ಕೊರತೆ ಬಾರದ ಹಾಗೆ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಖಾಸಗಿ ವಿಮಾನದಲ್ಲಿ ಚಿತ್ರತಂಡದವರ ಜೊತೆಗೆ ಹೊರಡಲಿದ್ದಾರೆ.

ಮೊದಲಿಗೆ ಏಪ್ರಿಲ್ 15 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂಬೈನ ಜುಹುನ ಪಿವಿಆರ್ ನಲ್ಲಿ ಮಾಧ್ಯಮ ಗೋಷ್ಠಿ ನಡೆಸುವ ಚಿತ್ರತಂಡ ಅಂದು ಸಂಜೆ 7 ಗಂಟೆಗೆ ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಅರ್ ಕೆ ಪಿವಿಆರ್ ನಲ್ಲಿ ಪ್ರಚಾರ ಸಭೆ ನಡೆಸಲಿದೆ.

ಮರುದಿನ ಏಪ್ರಿಲ್ 16ರ ಬುಧವಾರ ಬೆಳಿಗ್ಗೆ 11ಗಂಟೆಗೆ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಅಂದು ಸಂಜೆ 7 ಗಂಟೆಗೆ ಕೇರಳದ ಕೊಚ್ಚಿ ಪಿವಿಆರ್ ಪೋರಂ ನಲ್ಲಿ ’45’ಚಿತ್ರದ ಮಾಧ್ಯಮ ಗೋಷ್ಠಿ ನಡೆಸಲಿದೆ.

Social Share :